ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಸ್ವಾತ್ಮಗತ

ರೈತ ದಿನಾಚರಣೆ ಕೆ.ಶಿವು ಲಕ್ಕಣ್ಣವರ್ ಬೆವರು ಕಂಬನಿ ರಕುತವ ಸುರಿಸಿ, ನೆಲವನು ತಣಿಸಿ, ಕೆಸರಿನಿಂದ ಅಮೃತಕಲಶನೆತ್ತಿ ಕೊಡುತಿರುವ ರೈತನ ದಿನಾಚರಣೆ ಇಂದು..! ಇಂದು ಡಿಸೆಂಬರ್ 23. ಅಂದರೆ ರೈತ ದಿನಾಚರಣೆ. ಈ ದಿನಾಚರಣೆ ನಮ್ಮೆಲ್ಲರ ಊಟವನ್ನು ಮಾಡಿಸುತ್ತಿರುವ ರೈತನ ನೆನೆ, ನೆನೆದು ಉಣ್ಣುವ ದಿನ… ಆ ನಿಮಿತ್ಯ ರೈತನನ್ನು ನೆನೆವ ಲೇಖನವಿದು… ಗದ್ದೆ ಕೆಸರನು ಕುಡಿದು ಕಾಡು ಮುಳ್ಳನು ಕಡಿದು, ಮುಂಜಾನೆಯಿಂದ ಸಂಜೆಯವರೆಗೆ ದುಡಿದುಡಿದು ಚಳಿಯೋ ಮಳೆಯೋ ಬಿಸಿಲೋ ಬೇಗೆಯಲ್ಲವ ಸಹಿಸಿ, ಬೆವರು ಕಂಬನಿ ರಕುತವ ಸುರಿಸಿ, ನೆಲವನು ತಣಿಸಿ, ಕೆಸರಿನಿಂದ ಅಮೃತಕಲಶವನೆತ್ತಿ ಕೊಡುತ್ತಿರುವವ ರೈತ… ಹಸಿದು ಉನ್ನುವುದು ಪ್ರಕೃತಿ, ಹಸಿಯದೇ ಉನ್ನುವುದು ವಿಕೃತಿ ತಾನು ಹಸಿದರೂ ಇತರರಿಗೆ ಉಣಬಡಿಸುವವನು ರೈತ. ಇಂತಹ ಶ್ರಮಜೀವಿ ಈ ನಾಡಿನ ಸ್ವಾಭಿಮಾನಿ. ಇಂತಹ ರೈತನ ದಿನಾಚರಣೆ ಎಷ್ಟೋ ಜನರಿಗೆ ಇನ್ನೂ ಗೊತ್ತೇ ಇಲ್ಲ. ಇದು ತುಂಬಾ ವಿಪರ್ಯಾಸ… ಅಂದರೆ, ಅನ್ನ ಕೊಡುವ ರೈತನನ್ನೇ ಮರೆತು ಜೀವನ ಸಾಗಿಸಿದರೆ ಇನ್ನೇಲ್ಲಿದೆ ರೈತನಿಗೆ ಗೌರವ. ರೈತ ದಿನಾಚರಣೆ ಇತಿಹಾಸ ಮತ್ತು ಹಿನ್ನೇಲೆ ತಿಳಿದು ಆತನ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ವಂದಿಸಬೇಕಿದೆ. “ನೀನು ಇವತ್ತು ಊಟ ಮಾಡಿದ್ದರೆ ರೈತನನ್ನು ನೆನೆ” ಎಂಬ ನಾಣ್ಣುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೇ ನಿಶ್ಚಿತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದರ ಹಿಂದೆ ರೈತನ ಶ್ರಮ ಮತ್ತು ಬೆವರೇ ಮುಖ್ಯ ಕಾರಣ… ಇಂತಹ ರೈತನಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕೆಂಬುದು ಮೇಲಿನ ಸಾಲಿನ ಅರ್ಥ. ನಮಗೆಲ್ಲರಿಗೂ ಡಾಕ್ಟರ್‍ಗಳು, ಲಾಯರ್‍ಗಳು, ಇಂಜನಿಯರ್‍ಗಳೂ ಮಾತ್ರ ಬೇಕಾಗುತ್ತಾರೆ. ಆದರೆ, ದಿನ ಒಂದಕ್ಕೆ ಮೂರು ಹೊತ್ತು ತುತ್ತು ಅನ್ನವನ್ನು ನೀಡಿದ ರೈತನ ನೆನಪು ಮಾತ್ರ ಬರುವುದಿಲ್ಲ. ಇಂತಹ ರೈತನನ್ನೇ ನಾವಿಂದು ಕಡೆಗಣಿಸಿದ್ದೇವೆ… ಭಾರತದ ಮೊದಲ ಪ್ರಧಾನ ಮಂತ್ರಿ ಆಗಿದ್ದ ಜವಾಹರಲಾಲ ನೆಹರೂರವರು ಹೇಳಿದಂತೆ “ಪ್ರಕೃತಿಯು ಕೃಷಿಯೊಂದಿಗೆ ಜೂಜಾಟ ಆಡುತ್ತಿದೆ”. ಹಲವಾರು ಪ್ರದೇಶಗಳಲ್ಲಿ ಅತಿವೃಷ್ಠಿ ಅಥವಾ ಅನಾವೃಷ್ಠಿ, ಇಲ್ಲವೇ ರೋಗ-ಕೀಟಗಳ ಬಾಧೆ, ಹೀಗೆ ಅನೇಕ ಕಾರಣಗಳಿಂದ ರೈತರು ನಿರಂತರವಾಗಿ ನಷ್ಟಗಳನ್ನು ಅನುಭವಿಸುತ್ತಾ ಸಾಲಗಾರರಾಗಿದ್ದಾರೆ. ಇಷ್ಟೆಲ್ಲ ಸವಾಲುಗಳ ನಡುವೆಯೂ ಒಂದೊಮ್ಮೆ ಒಳ್ಳೆಯ ಫಸಲು ಬಂದಾಗಲೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ನಷ್ಟವಾಗಿ ಬೆಳೆಗಳನ್ನು ಬೆಳೆಯಲು ಸುರಿದ ಬಂಡವಾಳವು ಮರಳಿ ಬಾರದಂತಾಗಿದೆ. ಕೆಲವರಂತೂ ಸಾಲದ ಬಾಧೆ ತಾಳದೇ ನೇಣಿಗೇ ಕೊರಳೊಡ್ಡುತ್ತಿದ್ದಾರೆ. ಇದು ಅತ್ಯಂತ ಚಿಂತಾದಾಯಕ ಸ್ಥಿತಿ. ಹಲವಾರು ಸಂಕಷ್ಟಗಳ ನಡುವೆಯೂ ನಮ್ಮ ದೇಶದಲ್ಲಿ ಹಸಿವೆಯಿಂದ ಬಳಲುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಈ ನೆಲದ ಮಣ್ಣಿನ ಮಗ… ರೈತನ ಶ್ರಮ, ಆತನ ಬೆವರ ಹನಿ, ಮಳೆ ಇರಲಿ-ಬಿಡಲಿ-ಹೆಚ್ಚಾಗಲಿ-ಕಡಿಮೆಯಾಗಲಿ ಒಂದು ಒಳ್ಳೆಯ ಬೆಳೆಯನ್ನು ಪಡೆಯುವ ಆಸೆಯ ನಿರೀಕ್ಷೆಯಿಂದ ಹೊಲವ ಬಿತ್ತುತ್ತಾನೆ. ಸಾಕಷ್ಟು ಪ್ರಯತ್ನ ಪಟ್ಟು ಮಳೆ ಚಳಿ ಬಿಸಿಲುಗಳೆನ್ನದೇ, ಹಗಲು-ರಾತ್ರಿ ಪರಿವೇ ಇಲ್ಲದೇ, ಶ್ರಮ ವಹಿಸಿ ವ್ಯವಸಾಯ ಮಾಡುತ್ತಾನೆ. ಈ ವ್ಯವಸಾಯವೇ ನಮ್ಮ ಅನ್ನದ ಬಟ್ಟಲನ್ನು ತುಂಬಿಸುತ್ತದೆ… ಇಂತಹ ರೈತರ ಶ್ರಮಕ್ಕೆ ನಾವಿಂದು ಬೆಲೆ ಕೊಡಬೇಕಾಗಿದೆ, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಕೃಷಿಗೆ ಹೆಚ್ಚು ಒತ್ತು ಸಿಗಬೇಕಾದ ವ್ಯವಸ್ಥಿತವಾದ ಕೃಷಿ ಮಾಹಿತಿ ವಿನಿಮಯ ವ್ಯವಸ್ಥೆ, ವ್ಯವಸ್ಥಿತ ಮಾರುಕಟ್ಟೆಗಳ ಲಭ್ಯತೆ ಮತ್ತು ಸ್ಥಿರವಾದ ಬೆಲೆಯನ್ನು ದೊರಕಿಸಿಕೊಡುವ ಪ್ರಮಾಣಿಕ ಪ್ರಯತ್ನ ಸರ್ಕಾರ ಮತ್ತು ಉನ್ನತ ಮಟ್ಟದ ಆಡಳಿತ ವರ್ಗದಿಂದ ಆಗಬೇಕಾಗಿದೆ… ಒಕ್ಕಲನು ನಲುಗಿಸದೇ ಲೆಕ್ಕವನು ಸಿಕ್ಕಿಸದೇ, ಕಕ್ಕುಲತೆಯಿಂದ ನಡೆಸುವ ಅರಸು ತಾ ಚೆಕ್ಕಂದವಿರುವ – ಸರ್ವಜ್ಞ ರೈತ ಸಂಕಷ್ಟದಲ್ಲಿದ್ದಾಗ ಆತನಿಗೆ ಸಹಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾದಾಗ ಮಾತ್ರ ರೈತ ಸಧೃಡವಾಗಿ ಬದುಕಲು ಸಾಧ್ಯ. ಇಲ್ಲದೇ ಹೊದಲ್ಲಿ ಆ ನಾಡಿನ ಆರ್ಥಿಕ ಬೆಳವಣಿಗೆ ಆರೋಗ್ಯಕರವಾಗಿರುವುದಿಲ್ಲ. ರೈತ ಸಮಸ್ಯೆಗಳ ಸುಳಿಗೆ ಸಿಕ್ಕು ಹಳ್ಳಿಗಳಿಗೆ ಬೆನ್ನು ಮಾಡಿ ಪಟ್ಟಣಗಳತ್ತ ಮುಖ ಮಾಡಿದರೆ, ಪ್ರತಿಯೊಬ್ಬರು ಅನ್ನದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ದೇಶ ಹಳ್ಳಿಗಳ ದೇಶ. ರೈತ ಉದ್ಧಾರವಾದರೆ, ಹಳ್ಳಿಗಳು ಉದ್ಧಾರವಾದಂತೆ. ಹಳ್ಳಿಗಳು ಉದ್ಧಾರವಾದರೆ, ಇಡೀ ದೇಶವೇ ಉದ್ಧಾರವಾದಂತೆ ಎಂಬುದನ್ನು ಎಲ್ಲರೂ ಮನಗಾಣಬೇಕಾಗಿದೆ… ನಮ್ಮ ಶ್ರಮಜೀವಿ ರೈತರ ಪಾತ್ರದ ಗೌರವಾರ್ಥ ಭಾರತದ ಮಾಜಿ ಪ್ರಧಾನಿ ಅಪಾರ ರೈತಪರ ಕಳಕಳಿಯನ್ನು ಹೊಂದಿದ ಗೌರವಾನ್ವಿತ ಶ್ರೀ ಚೌದರಿ ಚರಣ್ ಸಿಂಗ್‍ರ ಜನ್ಮದಿನವಾದ ಡಿಸೆಂಬರ, 23 ನೇ ತಾರೀಖಿನಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ… ಶ್ರೀ ಚೌದರಿ ಚರಣ್ ಸಿಂಗ್‍ರವರು ರೈತ ಕುಟುಂಬದಿಂದ ಬಂದವರಾಗಿದ್ದು, ಅತ್ಯಂತ ಸರಳ ಜೀವಿಗಳು, ಸೂಕ್ಷ್ಮ ಸಂವೇದಿಗಳು. ರೈತರ ಮತ್ತು ಕೂಲಿ ಕಾರ್ಮಿಕರ ಮೇಲೆ ತೀವ್ರತರ ಕಳಕಳಿಯನ್ನು ಹೊಂದಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ, ಭಾರತದ ಪ್ರಧಾನಿ ಹಾಗೂ ಉಪ ಪ್ರಧಾನಿಯಾದಾಗ ಬಜೆಟ್‍ಗಳನ್ನು ಕೃಷಿಕರ ಪರವಾಗಿರುವಂತೆ ನೋಡಿಕೊಂಡರು. ರೈತರ ಪರವಾಗಿ ಹಲವಾರು ನೀತಿಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು… ಇವರು ಜುಲೈ 28, 1979 ರಿಂದ ಜನೇವರಿ 14, 1980 ರವರೆಗೆ ಅಲ್ಪಾವಧಿಗೆ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. 1979 ನೇ ಸಾಲಿನ ಬಜೇಟ್‍ನ್ನು ಮಂಡಿಸಿದ ಇವರು ರೈತರ ಅಗತ್ಯತೆಗಳನ್ನು ಪೂರೈಸಲು ಬೇಕಾದ ಎಲ್ಲ ಅಂಶಗಳನ್ನು ಬಜೆಟ್‍ನಲ್ಲಿ ಸೇರಿಸಿದ್ದರು. ಇದರಲ್ಲಿ ರೈತ ಪರವಾದ ಹಲವಾರು ನೀತಿಗಳನ್ನು ಪ್ರಕಟಿಸಿದ್ದರು. ಇವರ ಪ್ರಯತ್ನಗಳಿಂದಾಗಿ ಎಲ್ಲ ಸಣ್ಣ ಮತ್ತು ಬಡ ರೈತರುಗಳನ್ನು ದೊಡ್ಡ ಭೂ ಮಾಲಿಕರು ಮತ್ತು ಹಣದಾಳದಾರರ ವಿರುದ್ಧ ಒಗ್ಗೂಡಿಸಲು ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದರು… ಇವರು ಲೋಕಸಭೆಯಲ್ಲಿ ಪರಿಚಯಿಸಿದ್ದ ಕೃಷಿ ಉತ್ಪಾದನೆ ಮಸೂದೆಯು ಅತ್ಯಂತ ಪ್ರಸಿದ್ಧ ಮಾರುಕಟ್ಟೆ ಮಸೂದೆಯಾಗಿತ್ತು. ಈ ಮಸೂದೆಯನ್ನು ಹಣವುಳ್ಳ ವಿತರಕರು ಮತ್ತು ಭೂ ಮಾಲಿಕರು ರೈತರನ್ನು ಶೋಷಣೆ ಮಾಡುವುದರಿಂದ ತಡೆಯುವ ಉದ್ದೇಶದಿಂದ ಹೊರತರಲಾಗಿತ್ತು. ಇವರು ಜಮೀನ್ದಾರಿ ನಿರ್ಮೂಲನಾ ನೀತಿ ಹೊರತರುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದರು. ಇದರಿಂದ ರೈತರ ಮೇಲಿನ ತಮ್ಮ ಕಳಕಳಿ ಅತ್ಯಂತ ಕಾಳಜಿಯುತವಾದದ್ದೆಂದು ತೋರಿಸಿಕೊಟ್ಟಿದ್ದರು… ಇವರು ಉತ್ತಮ ವಾಗ್ಮಿಗಳಲ್ಲದೆ, ಒಳ್ಳೆಯ ಬರಹಗಾರರೂ ಆಗಿದ್ದರು. ಬರಹಗಾರರಾಗಿ ರೈತರ, ಬಡವರ ಸಮಸ್ಯೆಗಳ ಕುರಿತ ಆಲೋಚನೆಗಳನ್ನು ಚಿತ್ರಿಸುವ ಲೇಖನಗಳನ್ನು ಮತ್ತು ಪುಸ್ತಕಗಳನ್ನು ರಚಿಸಿದ್ದಲ್ಲದೆ, ಎಲ್ಲ ಸಮಸ್ಯೆಗಳಿಗೆ ಸಾಧ್ಯವಿರುವಂತಹ ವಿವಿಧ ಪರಿಹಾರಗಳನ್ನು ಸಹ ಕೊಡುತ್ತಿದ್ದರು… ಇವರು ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿಯವರ ಘೋಷಣೆಯಾದ “ಜೈ ಜವಾನ್ ಜೈ ಕಿಸಾನ್” ರೈತರ ಕ್ಷೇಮಕ್ಕಾಗಿ ಸದಾ ಶ್ರಮಿಸುತ್ತಿದ್ದರು. ಹಳ್ಳಿಯ ರೈತಾಪಿ ಕುಟುಂಬದಲ್ಲಿ ಜನಿಸಿದ್ದರಿಂದ ಅಲ್ಲಿನ ಜನರ ಪರಿಸ್ಥಿತಿ ಮತ್ತು ಸಮಸ್ಯೆಗಳ ಆಳವಾದ ಅರಿವನ್ನು ಹೊಂದಿದ್ದರಿಂದ ಹಳ್ಳಿಗರು, ಹಿಂದುಳಿದವರ ಮತ್ತು ರೈತರ ಅಭಿವೃದ್ಧಿಗಾಗಿ ಸದಾ ಕಾರ್ಯಪ್ರವೃತ್ತರಾಗಿರುತ್ತಿದ್ದರು. ಶೇ. 70 ಕ್ಕಿಂತ ಹೆಚ್ಚು ಜನ ಹಳ್ಳಿಯವರಿದ್ದು, ಅವರ ಕಸುಬು ವ್ಯವಸಾಯವಾಗಿರುತ್ತದೆ. ರೈತರು ನಮ್ಮ ದೇಶದ ಬೆನ್ನೆಲುಬು ಹಾಗೂ ಹಳ್ಳಿಗಳ ಅಭಿವೃದ್ಧಿಯಿಂದಲೇ ದೇಶದ ಏಳಿಗೆ ಸಾಧ್ಯವೆಂದು ದೃಢವಾಗಿ ನಂಬಿದ್ದರು. ಹೀಗಾಗಿ ಇವರನ್ನು ರೈತ ಸಮುದಾಯಕ್ಕೆ ಸೇರಿದ ಮಣ್ಣಿನ ಮಗನನ್ನಾಗಿ ಗುರುತಿಸಲ್ಪಡಲಾಗುತ್ತಿದೆ. ಮೇ 29, 1987 ನೇ ದಿವಸದಂದು ಕೊನೆಯುಸಿರೆಳೆದರು. ಇವರ ಸಮಾಧಿ ಸ್ಥಳವನ್ನು “ಕಿಸಾನ್ ಘಾಟ್” ಎಂದು ನಾಮಕರಣ ಮಾಡಿ ರೈತ ಪರ ಕಾಳಜಿ ಹೊಂದಿದ ಇವರಿಗೆ ಗೌರವ ಸಲ್ಲಿಸಲಾಗಿದೆ… ಶ್ರಮಜೀವಿ ರೈತರ ಗೌರವಾರ್ಥ ಮತ್ತು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ರೈತರ ಪಾತ್ರದ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ 23 ರಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ… ಉತ್ತರ ಪ್ರದೇಶದಲ್ಲಿ ಈ ದಿನದಂದು ಸಾರ್ವಜನಿಕ ರಜೆ ಇರುತ್ತದೆ. ಈ ದಿನದಂದು ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿಯೂ ಕೃಷಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಸಂಶೋಧನಾ ಕೇಂದ್ರಗಳಲ್ಲೆಡೆಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ… ಇಂದು ರೈತಪರ ಹೋರಾಟಗಳಲ್ಲಿ ಮುಂದಾಳತ್ವ ವಹಿಸಿದ ರೈತರ ಯಶೋಭಿವೃದ್ಧಿಗೆ ಶ್ರಮಿಸಿದ ನಾಯಕರಿಗೆ ಗೌರವ ಸಲ್ಲಿಸಲಾಗುತ್ತದೆ. ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಚರ್ಚಾಕೂಟ, ವಸ್ತು ಪ್ರದರ್ಶನಗಳನ್ನು, ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾರೆ. ರೈತರ ಮತ್ತು ಕೃಷಿಯಲ್ಲಿ ಸ್ವಾತಂತ್ರ್ಯದ ನಂತರದಿಂದ ಇಲ್ಲಿಯವರಿಗೆ ನಡೆದು ಬಂದ ಹಾದಿ, ಮುಂದೆ ಸಾಗಬೇಕಾದ ದಾರಿಯ ರೂಪರೇಷೆಗಳು, ರೈತರ ಸಮಸ್ಯೆಗಳ ಪರಿಹಾರೋಪಾಯಗಳು ಮುಂತಾದ ವಿಚಾರಗಳ ಚರ್ಚೆಯನ್ನು ವಿಜ್ಞಾನಿಗಳು, ವಿಸ್ತರಣಾಧಿಕಾರಿಗಳು ಮತ್ತು ರೈತ ನಾಯಕರುಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ… ಕೃಷಿ ಮತ್ತು ರೈತ ಎರಡೂ ಅತ್ಯಂತ ಪ್ರಮುಖವಾಗಿದ್ದರೂ ಅಭಿವೃದ್ಧಿ ಪಥದಲ್ಲಿ ಇವೆರಡೂ ಹೆಚ್ಚು ನಿರ್ಲಕ್ಷಕ್ಕೆ ಒಳಗಾಗಿವೆ ಎಂದು ಹೇಳಬಹುದು. ಕೃಷಿಯ ಬೆಳೆವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ನೀತಿಗಳನ್ನು ರೂಪಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಇವು ಇತರೆ ಕ್ಷೇತ್ರಗಳಿಗೆ ಹೋಲಿಸಿದಲ್ಲಿ ತೀವ್ರ ಕಡಿಮೆ ಎನ್ನಬಹುದು ಅಥವಾ ನಮ್ಮ ವ್ಯವಸ್ಥೆಯಲ್ಲಿನ ದೋಷಗಳಿಂದ ಅವು ರೈತರಿಗೆ ತಲುಪದೆ ಅಭಿವೃದ್ಧಿ ಪಥದಲ್ಲಿ ಕೃಷಿ ಇನ್ನೂ ಎಗುತ್ತಲೇ ಸಾಗಿದೆ ಎನ್ನಬಹುದು. ಇದಕ್ಕೆ ಇನ್ನೂ ಹಲವಾರು ಕಾರಣಗಳನ್ನು ಹೆಸರಿಸಬಹುದು… “ಹಸಿರು ಕ್ರಾಂತಿ” ಯಿಂದಾಗಿ ದೇಶದ ಆಹಾರೋತ್ಪಾದನೆ ಹೆಚ್ಚಾಗಿದ್ದಂತು ನಿಜ. ಆದರೆ, ಹಸಿರು ಕ್ರಾಂತಿಯ ಜೊತೆ ಜೊತೆಗೆ ಬಂದ ರಾಸಾಯನಿಕ ಗೊಬ್ಬರಗಳು ಮತ್ತು ಪೀಡೆನಾಶಕಗಳು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗಳಿಗೆ ಕಾರಣಗಳಾಗುತ್ತವೆ ಎಂಬುದನ್ನು ಸರಕಾರಗಳು ಮತ್ತು ಇಲಾಖೆಗಳು ಮುಂದಾಲೋಚಿಸಿರಲಿಲ್ಲ. ಹಸಿರು ಕ್ರಾಂತಿಯ ಪರಿಣಾಮದಿಂದ ಭೂಮಿಯ ಒಡಲು ವಿಷದಿಂದ ತುಂಬಿದೆ. ಭೂಮಿಯಲ್ಲಿ ಸಾವಯವದ ಅಂಶ ತೀವ್ರ ಕಡಿಮೆಯಾಗಿ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ. ವಾಸ್ತವವಾಗಿ ಭೂಮಿಯು ನಿರ್ಜೀವವಾಗುತ್ತಿದೆ. ಮಣ್ಣಿನ ತೇವಾಂಶವನ್ನು ಹಿಡಿದಿಡುವ ಶಕ್ತಿ ಕಡಿಮೆಯಾಗಿ ಬೆಳೆಗಳಿಗೆ ನೀರಿನ ಅಭಾವವುಂಟಾಗಿ ನಿರೀಕ್ಷಿತ ಇಳುವರಿಯನ್ನು ಪಡೆಯಲಾಗುತ್ತಿಲ್ಲ… ಎಷ್ಟೋ ಬಾರಿ ಖುರ್ಚು ಮಾಡಿದ ಬಂಡವಾಳವೂ ಸಹಿತ ಮರಳದಂತಾಗಿದೆ. ಇದರಿಂದಾಗಿ ನಮ್ಮ ರೈತರು ತೀವ್ರ ಸಂಕಷ್ಟಗಳಿಗೆ ಈಡಾಗುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಗಳು, ಕೈಗಾರಿಕೆಗಳು, ಶಹರಗಳು, ವಿಮಾನ ನಿಲ್ದಾಣಗಳು ಮುಂತಾದವುಗಳ ನಿರ್ಮಾಣಕ್ಕಾಗಿ ಕೃಷಿ ಭೂಮಿಯನ್ನು ಉಪಯೋಗಿಸಿಕೊಳ್ಳುವುದರಿಂದ ದಿನೇ ದಿನೇ ಕೃಷಿ ಭೂಮಿ ಕ್ಷೀಣಿಸುತ್ತಿದೆ. ಅಭಿವೃದ್ಧಿಯ ಈ ನಾಗಾಲೋಟದ ಕಾರಣ, ಕಾಡುಗಳು ಸಹ ನಾಶವಾಗುತ್ತಿದ್ದು, ಪರಿಸರದಲ್ಲಿ ಅತಿ ಹೆಚ್ಚಿನ ಅಸಮತೋಲನ ಕಂಡು ಬರುತ್ತಿದೆ. ಇದರಿಂದ ಬರ, ಅಕಾಲಿಕ ಮಳೆ ಕೆಲವೆಡೆ ಪ್ರವಾಹದಂತಹ ಪರಿಸ್ಥಿತಿಗಳು ಎದುರಾಗುತ್ತ್ತಿವೆ. ಇನ್ನು ತಾಪಮಾನವು ಸಹ ಹೆಚ್ಚುತ್ತಿದ್ದು, ತೇವಾಂಶದ ಕೊರತೆಯ ಜೊತೆಗೆ ಹೆಚ್ಚಿದ ಉಷ್ಣಾಂಶದಿಂದ ಕೆಲವೊಂದು ಬೆಳೆಗಳನ್ನು ಬೆಳೆಯಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ಜಾಗತಿಕ ತಾಪಮಾನದ ಪರಿಣಾಮ ಎನ್ನಬಹುದು… ಒಟ್ಟಾರೆ ಕೃಷಿ ಮತ್ತು ರೈತ ಎಲ್ಲ ಕಡೆಯಿಂದಲೂ ಪರೀಕ್ಷೆಗೆ ಒಳಪಡಲಾಗುತ್ತಿದ್ದು, ಒಂದು ಬೆಳೆಯನ್ನು ಬೆಳೆಯಲು ಹಲವಾರು ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಒಟ್ಟಾರೆ ಭಾರತದ ಕೃಷಿ ಸ್ಥಿತಿಯು ಗೊಂದಲಮಯ ಸ್ಥಿತಿಯಲ್ಲಿದೆ. ಇಲ್ಲಿಂದ ಮುಂದಕ್ಕೆ ಇಡಬೇಕಾದ ಹೆಜ್ಜೆಯನ್ನು ನಾವಿನ್ನು ಮುಂದಾಲೋಚನೆಯಿಂದ, ವಿವೇಕತನದಿಂದ ಮತ್ತು ಅತ್ಯಂತ ಜಾಗರೂಕತೆಯಿಂದ ಇಡಬೇಕಾಗಿದೆ. ನಮ್ಮ ದೇಶದ ಮಟ್ಟಿಗೆ ಕೃಷಿಯು ಕೇವಲ ಆಹಾರೋತ್ಪಾದನೆಯ ಕಾರ್ಖಾನೆಯಾಗಿರದೆ, ಅದೊಂದು ಬದುಕಿನ ಭಾಗ ಮತ್ತು ಜೀವ ವಿಧಾನವಾಗಬೇಕಿದೆ. ಸ್ವಾವಲಂಬಿ ಬದುಕಿನ ಮಾರ್ಗವಾಗಬೇಕಾಗಿದೆ. ಆದರೆ, ಆಧುನಿಕ ದಿನಗಳಲ್ಲಿ ಕೃಷಿಯು ಅಸ್ಥಿರವಾಗಿದೆ ಮತ್ತು ಎಲ್ಲದಕ್ಕೂ ಇತರರನ್ನು ಅವಲಂಬಿಸಿರುವ ಕೃಷಿಯಾಗಿದೆ… ನಾವಿನ್ನು ಬದಲಾಗಬೇಕಿದೆ. ರೈತರು ವೈಜ್ಞಾನಿಕ ತಿಳುವಳಿಕೆಯಿಂದ ಹೊಸ ತಂತ್ರಜ್ಞಾನಗಳ ಜೊತೆಗೆ ಸುಸ್ಥಿರ ಮತ್ತು ಸ್ವಾವಲಂಬಿ ಕೃಷಿ ವಿಧಾನಗಳಾದ ಸಾವಯವ ಕೃಷಿಯನ್ನು ಸಾಧ್ಯವಾದಷ್ಟು ಒಳಸುರಿಗಳನ್ನು [ರಸಾಯನಿಕ ಗೊಬ್ಬರ ಮತ್ತು ಪೀಡೆ ನಾಶಕ] ಗಳನ್ನು ನಮ್ಮಲ್ಲಿಯೇ ಉತ್ಪಾದಿಸಿ ಬಳಸುವತ್ತ ಚಿತ್ತ ಹರಿಸಬೇಕಿದೆ… ಜೊತೆಗೆ

ಸ್ವಾತ್ಮಗತ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಚಿಂದೋಡಿ ಲೀಲಾ ನಾಟಕರಂಗದ ಒಂದು ಸಾಹಸ ಪಯಣ ಕೆ.ಶಿವು ಲಕ್ಕಣ್ಣವರ್ ಸುಮಾರು ಎಂಟು ದಶಕಗಳ ಇತಿಹಾಸವುಳ್ಳ ಕನ್ನಡ ವೃತ್ತಿ ನಾಟಕ ಮಂಡಲಿಯ ಒಡತಿ. ಶತಮಾನೋತ್ಸವ, ಸಹಸ್ರಮಾನೋತ್ಸವಗಳನ್ನಾಚರಿಸಿದ ನಾಟಕಗಳ ಪ್ರಧಾನ ಅಭಿನೇತ್ರಿ ಚಿಂದೋಡಿ ಲೀಲಾ ಅವರು… ಕನ್ನಡ ವೃತ್ತಿರಂಗ ಭೂಮಿಯಲ್ಲಿ ಇನ್ನೂ ಸರಿಗಟ್ಟಲಾಗದ ದಾಖಲೆಗಳನ್ನು ಸ್ಥಾಪಿಸಿದ ಸಾಹಸಿ. ಜನ್ಮ ದಾವಣಗೆರೆಯಲ್ಲಿ 1941ರಲ್ಲಿ… ತಂದೆ ಚಿಂದೋಡಿ ವೀರಪ್ಪನವರು. ಪ್ರಖ್ಯಾತ ಗಾಯಕರು, ನಟರೂ ಆಗಿದ್ದವರು. ತಾಯಿ ಶಾಂತಮ್ಮ ಗೃಹಿಣಿಯಾಗಿದ್ದರು… ಚಿಂದೋಡಿ ವೀರಪ್ಪ ದಾವಣಗೆರೆಯಲ್ಲಿ ಸ್ಥಾಪಿಸಿದ್ದ ‘ಶ್ರೀಗುರು ಕರಿಬಸವ ರಾಜೇಂದ್ರ ನಾಟಕ’ ಮಂಡಳಿ (ಕೆ.ಬಿ.ಆರ್.ಡ್ರಾಮಾ ಕಂಪನಿ) ಅಭಿನಯಸುತ್ತಿದ್ದ ಗುಲೇಬ ಕಾವಲಿ, ಕಾಳಿದಾಸ, ಸಂಪೂರ್ಣ ರಾಮಾಯಣ, ಗುಣಸಾಗರಿ ಅತ್ಯಂತ ಜನಪ್ರಿಯ ನಾಟಕಗಳಾಗಿದ್ದವು… ಮೈಸೂರಿನ ಅರಸರಾದ ಕೃಷ್ಣರಾಜ ಒಡೆಯರು ವೀರಪ್ಪನವರ ಅಭಿನಯ ಗಾಯನವನ್ನು ಮೆಚ್ಚಿ ಗಾಯನ ಗಂಧರ್ವ’ ಎಂಬ ಬಿರುದುಕೊಟ್ಟುಕೊಟ್ಟು ಚಿನ್ನದ ತೋಡಾ ನೀಡಿ ಗೌರವಿಸಿದ್ದರು.ಚಿನ್ನದ ತೋಡಾ ತೊಟ್ಟ ವೀರಪ್ಪ, ಚಿಂದೋಡಿ ವೀರಪ್ಪನಾಗಿ ಪ್ರಸಿದ್ಧರು. `ಚಿಂದೋಡಿ ಮನೆತನದ ಹೆಸರಾಗಿ ಬಳಕೆಗೆ ಬಂತು ಆಗ… ಚಿಂದೋಡಿ ವೀರಪ್ಪನವರ ಐದು ಮಂದಿ ಗಂಡು, ನಾಲ್ಕು ಹೆಣ್ಣುಮಕ್ಕಳಲ್ಲಿ ಲೀಲಮ್ಮ ಕೊನೆಯವರು; ಗಂಡು ಮಕ್ಕಳೆಲ್ಲಾ ಕಂಪನಿಯ ನಟರು. ಇವರದು ಸಂಪ್ರದಾಯಸ್ಥ ವೀರಶೈವ ಕುಟುಂಬ. ಹೆಣ್ಣುಮಕ್ಕಳು ನಾಟಕ ರಂಗಪ್ರವೇಶ ಮಾಡುವುದು ನಿಷಿದ್ಧವಾಗಿತ್ತು. ಚಿಂದೋಡಿ ವೀರಪ್ಪನವರ ಕಂಪನಿಯಲ್ಲಿ ಸ್ತ್ರೀ ಪಾತ್ರಗಳನ್ನು ಅವರ ಮಕ್ಕಳೇ ಮಾಡುತ್ತಿದ್ದರು. ಈ ಸಂಪ್ರದಾಯಕ್ಕೆ ವಿರುದ್ಧವಾಗಿ ಚಿಂದೋಡಿ ಲೀಲಾ ತಮ್ಮ 5ನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದರು. ಶಿವಯೋಗಿ ಸಿದ್ಧರಾಮ ನಾಟಕದಲ್ಲಿ ಬಾಲ ಸಿದ್ಧರಾಮನ ಪಾತ್ರ ಮಾಡಿದರು. ಬಾಲ ನಟಿಯ ಅಭಿನಯ ಜನಕ್ಕೆ ಮೆಚ್ಚುಗೆಯಾಯಿತು. ಪುರುಷರೇ ಸ್ತ್ರೀಪಾತ್ರ ನಿರ್ವಹಿಸುತ್ತಿದ್ದ ಕಾಲವದು. ಬದಲಾವಣೆ ಮಾಡಬಾರದೇಕೆ? ಎಂಬ ಕಲ್ಪನೆ ಬಂದದ್ದೇ ತಡ. ಲೀಲಮ್ಮ ತಮ್ಮ 14ನೇ ವಯಸ್ಸಿನಲ್ಲಿಹಳ್ಳಿಹುಡುಗಿ’ ನಾಟಕದಲ್ಲಿ ಪ್ರಧಾನ ಸ್ತ್ರೀ ಪಾತ್ರ ನಿರ್ವಹಿಸಿದವರು. ಚೂಟಿಯಾದ ಚೆಲುವಿನ ಕಿಶೋರಿಯ ಅಭಿನಯಕ್ಕೆ ಸರ್ವತ್ರ ಮೆಚ್ಚುಗೆ ಪ್ರಶಂಸೆ ಬಂತು ನಾಟಕ ಪ್ರೀಯರಿಂದ. ಆ ನಂತರ ಚಿಂದೋಡಿ ಲೀಲಾ ಹಿಂತಿರುಗಿ ನೋಡಲಿಲ್ಲ. ರಂಗಕ್ಕೆ ಪ್ರವೇಶ ಮಾಡಿ 50 ವರ್ಷಗಳಾದರೂ ನಿರ್ಗಮನ ಕಾಣಲಿಲ್ಲ… ಚಿಂದೋಡಿ ವೀರಪ್ಪನವರ ಐದು ಮಂದಿ ಗಂಡು, ನಾಲ್ಕು ಹೆಣ್ಣುಮಕ್ಕಳಲ್ಲಿ ಲೀಲಮ್ಮ ಕೊನೆಯವರು; ಗಂಡು ಮಕ್ಕಳೆಲ್ಲಾ ಕಂಪನಿಯ ನಟರು. ಇವರದು ಸಂಪ್ರದಾಯಸ್ಥ ವೀರಶೈವ ಕುಟುಂಬ. ಹೆಣ್ಣುಮಕ್ಕಳು ನಾಟಕ ರಂಗಪ್ರವೇಶ ಮಾಡುವುದು ನಿಷಿದ್ಧವಾಗಿತ್ತು. ಚಿಂದೋಡಿ ವೀರಪ್ಪನವರ ಕಂಪನಿಯಲ್ಲಿ ಸ್ತ್ರೀ ಪಾತ್ರಗಳನ್ನು ಅವರ ಮಕ್ಕಳೇ ಮಾಡುತ್ತಿದ್ದರು. ಈ ಸಂಪ್ರದಾಯಕ್ಕೆ ವಿರುದ್ಧವಾಗಿ ಚಿಂದೋಡಿ ಲೀಲಾ ತಮ್ಮ 5ನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದರು. ಶಿವಯೋಗಿ ಸಿದ್ಧರಾಮ ನಾಟಕದಲ್ಲಿ ಬಾಲ ಸಿದ್ಧರಾಮನ ಪಾತ್ರ ಮಾಡಿದರು. ಬಾಲ ನಟಿಯ ಅಭಿನಯ ಜನಕ್ಕೆ ಮೆಚ್ಚುಗೆಯಾಯಿತು. ಪುರುಷರೇ ಸ್ತ್ರೀಪಾತ್ರ ನಿರ್ವಹಿಸುತ್ತಿದ್ದ ಕಾಲವದು. ಬದಲಾವಣೆ ಮಾಡಬಾರದೇಕೆ? ಎಂಬ ಕಲ್ಪನೆ ಬಂದದ್ದೇ ತಡ. ಲೀಲಮ್ಮ ತಮ್ಮ 14ನೇ ವಯಸ್ಸಿನಲ್ಲಿಹಳ್ಳಿಹುಡುಗಿ’ ನಾಟಕದಲ್ಲಿ ಪ್ರಧಾನ ಸ್ತ್ರೀ ಪಾತ್ರ ನಿರ್ವಹಿಸಿದವರು. ಚೂಟಿಯಾದ ಚೆಲುವಿನ ಕಿಶೋರಿಯ ಅಭಿನಯಕ್ಕೆ ಸರ್ವತ್ರ ಮೆಚ್ಚುಗೆ ಪ್ರಶಂಸೆ ಬಂತು ನಾಟಕ ಪ್ರೀಯರಿಂದ. ಆ ನಂತರ ಚಿಂದೋಡಿ ಲೀಲಾ ಹಿಂತಿರುಗಿ ನೋಡಲಿಲ್ಲ. ರಂಗಕ್ಕೆ ಪ್ರವೇಶ ಮಾಡಿ 50 ವರ್ಷಗಳಾದರೂ ನಿರ್ಗಮನ ಕಾಣಲಿಲ್ಲ… 1960-1975ರವರೆಗಿನ ಅವಧಿಯಲ್ಲಿ ಕೆ.ಬಿ.ಆರ್. ಡ್ರಾಮಾ ಕಂಪನಿ ಗುಣಸಾಗರಿ, ಲಂಕಾದಹನ, ಚಿತ್ರಾಂಗದ, ಶಾಕುಂತಲ, ಹಳ್ಳಿಹುಡುಗಿ ಮೊದಲಾದ ನಾಟಕಗಳನ್ನು ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಸಹಸ್ರಾರು ಪ್ರದರ್ಶನಗಳನ್ನು ನೀಡಿತ್ತು. ಆದರೆ ಇವುಗಳಲ್ಲಿ ಅತ್ಯಂತ ಜನಪ್ರಿಯವಾದುದು, ಚಿಂದೋಡಿ ಲೀಲಾ ಪಾತ್ರ – ಹಳ್ಳಿ ಹುಡುಗಿ’ ಪಾತ್ರ ಕರ್ನಾಟಕದಲ್ಲಿ ಆ ಪಾತ್ರ ಮನೆ ಮಾತಾಯಿತು. ಲೀಲಾ ಅವರನ್ನುಹಳ್ಳಿ ಹುಡುಗಿ’ ಎಂದೇ ಅಭಿಮಾನಿ ಪ್ರೇಕ್ಷಕರು ಗುರುತಿಸುತ್ತಿದ್ದರು… ಗಡಿ ನಾಡಿನಲ್ಲಿ ಕನ್ನಡದ ಜಯಭೇರಿ ಬಾರಿಸುವ ಬಯಕೆ, ಬೆಳಗಾವಿಯಲ್ಲಿ ಕ್ಯಾಂಪ್. ಅಭಿನಯಿಸಿದ ನಾಟಕಗಳೆಲ್ಲಾ ಶತದಿನೋತ್ಸವ ಆಚರಿಸಿದವು. ಗಡಿ ಭಾಗದಲ್ಲಿ 2000 ಕನ್ನಡ ನಾಟಕಗಳ ಪ್ರದರ್ಶನ ನೀಡಿದ್ದಕ್ಕಾಗಿ ಕರ್ನಾಟಕ ರಾಜ್ಯಪಾಲ ಎ.ಎನ್ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ವಿಶೇಷ ಉತ್ಸವವೇ ನಡೆಯಿತು. ಗಡಿನಾಡಿನಲ್ಲಿ ನಡೆಸಿದ ಕಲಾ ಸೇವೆ ಮೆಚ್ಚಿ ಸರ್ಕಾರ ತಾತ್ಕಾಲಿಕ ರಂಗಮಂದಿರ ನಿರ್ಮಿಸಿದ್ದ ಜಮೀನನ್ನೇ 30 ವರ್ಷಗಳ ಗುತ್ತಿಗೆಗೆ ನೀಡಿತು. ಅಲ್ಲಿ ಈಗ `ಚಿಂದೋಡಿ ಲೀಲಾ ರಂಗಮಂದಿರ’ ನಿರ್ಮಾಣವಾಗಿದೆ. ಬೆಳಗಾವಿಯ ಉತ್ತರ ಭಾಗದ ಜನರಿಗೆ ಅನುಕೂಲವಾಗಲೆಂದು, ಸದಾಶಿವ ನಗರದಲ್ಲಿ ಕೆ.ಬಿ.ಆರ್. ಕನ್ನಡ ಸಂಸ್ಕೃತಿ ಕೇಂದ್ರ ರಂಗಮಂದಿರ ನಿರ್ಮಿಸಿದ್ದಾರೆ… 1950-60ರ ದಶಕದ ನಂತರ ಹಿರಣ್ಣಯ್ಯ ಮಿತ್ರ ಮಂಡಲಿಯಂತಹ ಸಂಸ್ಥೆಗಳನ್ನು ಬಿಟ್ಟರೆ, ವೃತ್ತಿಪರ ನಾಟಕ ಸಂಸ್ಥೆಗಳ ಚಟುವಟಿಕೆ ಬೆಂಗಳೂರಿನಲ್ಲಿ ಕಂಡು ಬರುತ್ತಿರಲಿಲ್ಲ. ಚಿಂದೋಡಿ ಲೀಲಾ ಬೆಂಗಳೂರಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲೆಂದು 1995ರ ಅಕ್ಟೋಬರ್‍ನಲ್ಲಿ ಬಂದರು. ಬೆಂಗಳೂರಿನ ಹೃದಯ ಭಾಗದಲ್ಲಿರುವ ಗುಬ್ಬಿ ವೀರಣ್ಣ ಚಿತ್ರಮಂದಿರದಲ್ಲಿ ಆರಂಭವಾದ `ಪೊಲೀಸನ ಮಗಳು’ ನಾಟಕ, ಸತತ ಮೂರು ವರ್ಷಗಳು ನಡೆಯಿತು. ದಿನಕ್ಕೆರಡು ಪ್ರದರ್ಶನ. ಒಂದೇ ನಾಟಕ, ಒಂದೇ ತಂಡದಿಂದ. ದಿನಕ್ಕೆ ಎರಡು ಮೂರು ಪ್ರದರ್ಶನದಂತೆ ನಿರಂತರವಾಗಿ 1135 ಪ್ರದರ್ಶನಗಳನ್ನು ಕಂಡಿತು. ಈ ಯಶಸ್ಸಿನ ಕೇಂದ್ರ ಬಿಂದು ಪ್ರಧಾನ ಪಾತ್ರಧಾರಿ ಚಿಂದೋಡಿ ಲೀಲಾರವರೇ ಎಂದು ಹೇಳಿದರೆ ತಪ್ಪಾಗಲಾರದು… ಬೆಂಗಳೂರಿನಲ್ಲಿ ಅಪೂರ್ವ ಯಶಸ್ಸು ಸಾಧಿಸಿದ ಪೊಲೀಸನ ಮಗಳು’ ಕರ್ನಾಟಕದ ಎಲ್ಲೆಡೆ ಪ್ರದರ್ಶಿತವಾಗಿದೆ. ಒಟ್ಟು 3340 ಪ್ರದರ್ಶನ ಕಂಡ ನಾಟಕ, ಗಿನ್ನೆಸ್ ದಾಖಲೆಗೆ ಸೇರಲಿರುವ ವೃತ್ತಿ ನಾಟಕ ಸಂಸ್ಥೆಯ ನಾಟಕವದು. ಚಿಂದೋಡಿ ಲೀಲಾ ಪ್ರಧಾನ ಭೂಮಿಕೆಯಲ್ಲಿರುವ ಇನ್ನೊಂದು ನಾಟಕಧರ್ಮದ ದೌರ್ಜನ್ಯ’ ಅನೇಕ ಊರುಗಳಲ್ಲಿ ಶತದಿನೋತ್ಸವ ಪ್ರದರ್ಶನಗೊಂಡ ನಾಟಕವಾಯಿತು. ಈ ನಾಟಕದಲ್ಲಿ ಚಿಂದೋಡಿ ಲೀಲಾ ಪೊಲೀಸ್ ಸೂಪರಿಂಟೆಂಡ್ `ಜ್ಯೋತಿ’ ಯಾಗಿ ಅಭಿನಯಿಸಿದ್ದಾರೆ. ಹಳ್ಳಿ ಹುಡುಗಿಯಂತೆಯೇ ಪ್ರಸಿದ್ಧವಾದ ಪಾತ್ರ. ಶಾಕುಂತಲ, ಚಿತ್ರಾಂಗದ, ಲಂಕಾ ದಹನ, ಮಹರಾವಣ, ಸಿಂಡಿಕೇಟ್-ಇಂಡಿಕೇಟ್, ಬ್ರಹ್ಮಚಾರಿಯ ಮಗ-ಇವು ಚಿಂದೋಡಿ ಲೀಲಾ ಅಭಿನಯದ ಪ್ರಮುಖ ನಾಟಕಗಳು ಮತ್ತು ಜನಪ್ರಿಯ ನಾಟಕಗಳು… ಚಿಂದೋಡಿ ವೀರಪ್ಪ 1928ರಲ್ಲಿ ಸ್ಥಾಪಿಸಿದ ಕೆ.ಬಿ.ಆರ್. ಡ್ರಾಮಾ ಕಂಪನಿ, ಇಂದಿಗೂ ಜೀವಂತ. ಕುಟುಂಬದ ಮೊದಲ ಬಂಗಾರ ತೋಡಾಧಾರಿಯಾದ ವೀರಪ್ಪ ನಿಧನಾನಂತರ, ಅವರ ಹಿರಿಯ ಮಗ ಚಿಂದೋಡಿ ವೀರಪ್ಪ ನೇತೃತ್ವದಲ್ಲಿ ಕಂಪನಿ ಮುಂದುವರೆಯಿತು. ಎರಡನೇ ವೀರಪ್ಪನವರ ನಿಧನಾನಂತರ, 1978ರಲ್ಲಿ ಕಂಪನಿ ಕುಟುಂಬದಲ್ಲಿ ಮೂರು ಕವಲಾಗಿ ಹಂಚಿ ಹೋಯಿತು. ಕೆಲ ಕಾಲಾನಂತರ ಆ ಮೂರು ಸಂಸ್ಥೆಗಳು ಚಿಂದೋಡಿ ಲೀಲಾ ನೇತೃತ್ವದಲ್ಲಿ ಮುನ್ನಡೆದವು. ಈಗ ಅವು ಮೂರು ಮತ್ತೆ ಒಂದಾಗಿವೆ; ಲೀಲಾ ಸಾರಥ್ಯದಲ್ಲಿ ಮುಂದುವರೆದವು. ಸಂಸ್ಥೆಯ ಕೇಂದ್ರ ಸ್ಥಾನವಾದ ದಾವಣಗೆರೆಯಲ್ಲಿ `ಚಿಂದೋಡಿ ಲೀಲಾ ಕಲಾಕ್ಷೇತ್ರ ನಿರ್ಮಾಣ ಕಾರ್ಯ ಮುಗಿದಿದೆ ಈಗ. ಆಧುನಿಕ ಉಪಕರಣಗಳಿಂದ ಕೂಡಿದ ಅತ್ಯಾಧುನಿಕ ರಂಗಮಂದಿರ ಸಿದ್ಧವಾಗಿದೆ… ಕನ್ನಡ ವೃತ್ತಿಪರ ನಾಟಕ ಸಂಸ್ಕೃತಿ ಪರಿಚಯ ಕಾರ್ಯಕ್ರಮದ ಅಂಗವಾಗಿ ಕಾಸರಗೋಡಿನಿಂದ ಕಾಶಿಯವರೆಗೆ ರಂಗಯಾತ್ರೆ ನಡೆಸಿದ್ದಾರೆ. ಈ ರಂಗಯಾತ್ರೆ ಕಾಲದಲ್ಲಿ ಅನೇಕ ನಗರಗಳಲ್ಲಿ ವಿಚಾರ ಸಂಕೀರ್ಣ ನಡೆಸಿ, ನಾಟಕಗಳನ್ನು ಪ್ರದರ್ಶಿಸಲಾಯಿತು. ಕರ್ನಾಟಕ ಸರಕಾರದ ನೆರವಿನಿಂದ ಬ್ರಿಟನ್ ಮತ್ತಿತರ ದೇಶಗಳಿಗೆ ಹೋಗಿ ಅಲ್ಲಿಕಿತ್ತೂರು ಚೆನ್ನಮ್ಮ ಟಿಪ್ಪೂ ಸುಲ್ತಾನ್,ಜಗಜ್ಯೋತಿ ಬಸವೇಶ್ವರ ನಾಟಕಗಳನ್ನೂ ಪ್ರದರ್ಶಿಸಿದ್ದಾರೆ… ಚಿಂದೋಡಿ ಲೀಲಾ ಅವರಿಗೆ ಸರ್ಕಾರವಲ್ಲದೆ ಖಾಸಗಿ ಸಂಘ ಸಂಸ್ಥೆಗಳು, ಗುರು ಮಠಗಳೂ ಸನ್ಮಾನಿಸಿವೆ. ಅನೇಕ ಪ್ರಶಸ್ತಿಗಳನ್ನು ನೀಡಿವೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1985), ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1994), ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ (2003)-ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳಿಂದ ಸನ್ಮಾನಿತರಾಗಿರುವ ಈ ಕಲಾವಿದೆಗೆ ಕೇಂದ್ರ ಸರ್ಕಾರ `ಪದ್ಮಶ್ರೀ ಪ್ರಶಸ್ತಿ (1988) ನೀಡಿ ಗೌರವಿಸಿದೆ… ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ (1987) ಅನಂತರ ಅಧ್ಯಕ್ಷೆಯಾಗಿ(1991) ರಂಗಭೂಮಿಗೆ ಗಣನೀಯ ಸೇವೆ ಸಲ್ಲಿಸಿದ್ದಾರೆ ಚಿಂದೋಡಿ ಲೀಲಾ… ಕನ್ನಡದ ಕೆಲವು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ನಿರೀಕ್ಷಿಸಿದ ಪ್ರೋತ್ಸಾಹ ದೊರೆಯದ ಕಾರಣ, ನಾಟಕ ರಂಗದಲ್ಲೇ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡರು. ಸೋದರಳಿಯ ಬಂಗಾರೇಶ್ (ಅಣ್ಣ ಚಿಂದೋಡಿ ವೀರಪ್ಪನ ಮಗ) ನಿರ್ದೇಶನದ ಚಿಂದೋಡಿ ಲೀಲಾ ನಿರ್ಮಿಸಿದ `ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರಕ್ಕೆ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ದೊರಕಿರುವುದು ತೃಪ್ತಿ ತಂದಿದೆ. ಕರ್ನಾಟಕ ಸರಕಾರ ಗಾನಯೋಗಿ ಚಿತ್ರಕ್ಕೆ 1995-96ರ ಅತ್ಯುತ್ತಮ ಚಿತ್ರ ಪ್ರಶಸ್ತಿ (ನಿರ್ದೇಶಕ: ಚಿಂದೋಡಿ ಬಂಗಾರೇಶ್), ಅತ್ಯುತ್ತಮ ಪೋಷಕ ನಟ ಪ್ರಶಸ್ತಿ (ಗಿರೀಶ್ ಕಾರ್ನಾಡ್), ಅತ್ಯುತ್ತಮ ಸಂಗೀತ ನಿರ್ದೇಶಕ (ಹಂಸಲೇಖ) ನೀಡಿ ಗೌರವಿಸಿದೆ… ಹೀಗೆ ಸಾಗಿತ್ತು ಚಿಂದೋಡಿ ಲೀಲಾ ನಾಟಕ ಮತ್ತು ಅಭಿನಯದ ಪಯಣ. ಚಿಂದೋಡಿ ಲೀಲಾ ಮರೆಯಾದರೂ ಇನ್ನೂ ಈ ನಾಟಕ ಕಂಪನಿಯ ಪ್ರಯತ್ನವಿನ್ನೂ ಮುಂದುವರಿದೇ. ಯಾವುದಕ್ಕೂ ನಾವು ಇಂತಹ ವೃತ್ತಿ ರಂಗದ ನಾಟಕ ಕಂಪನಿ ಉಳಿಸಿ ಬೆಳೆಸಬೇಕಾಗಿದೆ…

ಸ್ವಾತ್ಮಗತ Read Post »

ಅಂಕಣ ಸಂಗಾತಿ

ಹೊತ್ತಾರೆ

ಅಮ್ಮನೂರಿನ ನೆನಪುಗಳು. ಅಮೇರಿಕಾದಿಂದ ಅಶ್ವಥ್ ಅಶ್ವಥ್ ಮೊದಲೇ ಹೇಳಿದಂತೆ, ರಂಗ ತಿಮ್ಮರ ಸಂತೆ ಪ್ರಯಾಣ ನಿಯಮಿತವಾಗಿರುತ್ತಿತ್ತು. ಮೂಟೆಯಲ್ಲಿ ಇರುವ ಪದಾರ್ಥದ ಆಧಾರದ ಮೇಲೆ ನಾಲ್ಕೈದು  ಮಂಡಿಗಳಿಗೆ ಗಾಡಿ ಸಾಗಬೇಕಾಗಿತ್ತು. ಅವುಗಳಲ್ಲಿ ಭತ್ತ, ರಾಗಿ, ತೆಂಗುಗಳದ್ದು ಒಂದೇ ಮಂಡಿ. ಅದು ರಂಗ ತಿಮ್ಮರ ಮೊದಲ ನಿಲ್ದಾಣ, ಆಮೇಲೆ ಬೆಲ್ಲದ ಮಂಡಿ, ನಂತರ ಅಪರೂಪಕ್ಕೊಮ್ಮೆ ಅಡಿಕೆ ಮಂಡಿ. ಇವಿಷ್ಟೂ ರೌಂಡ್ಸ್ ಆದ ಮೇಲೆ ಮನೆಯಿಂದ ತಂದಿರುತ್ತಿದ್ದ ಹುಲ್ಲು ತಿನ್ನುವುದು.  ಗಾಡಿಯ ಕೆಳಭಾಗದಲ್ಲಿ ನೇತುಹಾಕಿರುತ್ತಿದ್ದ ಬಕೆಟ್  ತೆಗೆದು ಸಂತೇಮಾಳದ ಕೈಪಂಪಿನಿಂದ ಹಿಡಿದ (ಕಡೆಗೆ ನಲ್ಲಿಯೂ ಬಂದಿತ್ತೋ ಏನೋ) ನೀರು.  ಇನ್ನು ಮನೆಕಡೆ ಹೊರಡುವುದಕ್ಕಿಂತ ಮೊದಲು ದಿನಸಿ ಅಂಗಡಿಯಲ್ಲಿ ಒಂದು ನಿಲುಗಡೆ, ಕಡಲೇಪುರಿ, ಖರ್ಜೂರ ಸಿಹಿತಿಂಡಿಗಳ ಅಂಗಡಿಯ ಬಳಿ ಮತ್ತೊಂದು ನಿಲುಗಡೆ. ಈ ನಿಲುಗಡೆಗಳೆಲ್ಲ ಕಡ್ಡಾಯವಾಗಿರುವಂತಹವು, ಒಮ್ಮೊಮ್ಮೆ ನಿಲ್ಲಿಸಬೇಕಾದ ಅಗತ್ಯವಿಲ್ಲದಿದ್ದರೂ, ರಂಗ ತಿಮ್ಮರ ಅಭ್ಯಾಸಬಲ ಎಷ್ಟಿತ್ತು ಅಂದರೆ, ಗೌಡಜ್ಜಿಯ ಗಾಡಿ ಅಂಗಡಿ ಮುಂದೆ ನಿಲ್ಲದೇ ಹೋಗುವುದಿಲ್ಲ ಎಂದು ದಿನಸಿ ಅಂಗಡಿಯ ಶೆಟ್ಟರು ಖಡಾಖಂಡಿತವಾಗಿ ಹೇಳುವಷ್ಟು. ಪೇಟೆಯೊಳಗೆ ಮತ್ತು ಸಂತೆಮಾಳದಲ್ಲಿ ಬಸ್ಸು, ಕಾರು ಲಾರಿಗಳ ಮಧ್ಯೆ ಸಂತೆಯ ಜನಜಂಗುಳಿಯಲ್ಲೂ ಸಹ ಯಾರ ಮೇಲ್ವಿಚಾರಣೆಯೂ ಇಲ್ಲದೆ, ಯಾರಿಗೂ ಅಡ್ಡಿಯಾಗದಂತೆ ತಮ್ಮ ಜಾಡನ್ನೇ ಹಿಡಿದು ಸಾಗುವುದು ಅದೆಷ್ಟೋ ಜನರ ಕಣ್ಣಿಗೆ ಆಶ್ಚರ್ಯವೇ ಸರಿ. ಸಂತೆಮಾಳ ಬಿಟ್ಟ ತಕ್ಷಣ, ಮಾವಂದಿರು ಗಾಡಿಯಿಂದ ಇಳಿದು, ರಂಗ ತಿಮ್ಮರನ್ನು ತಮ್ಮ ಪಾಡಿಗೆ ಬಿಟ್ಟು ಊರಿನ ಜನರ ಜೊತೆ ಮಾತನಾಡುತ್ತಾ ಬೇರೆ ಗಾಡಿಗಳಲ್ಲಿ ಬರುತ್ತಿದ್ದರು. ದಿನವೂ ನಾಲ್ಕೂವರೆಗಂಟೆಗೆ ಶಾಲೆ ಮುಗಿದರೂ, ಕತ್ತಲಾಗುವ ತನಕ ಗೆಳೆಯರೊಂದಿಗೆ ಆಡಿಕೊಂಡು ಮನೆ ಸೇರುತ್ತಿದ್ದ ನಾನು, ಮಂಗಳವಾರ ಸಂಜೆ ಆಟದ ನೆನಪೂ ಮಾಡಿಕೊಳ್ಳದೆ ನಮ್ಮನೆಯ ಜಗುಲಿಯ ಮೇಲೆ ಹಾಜರಿರುತ್ತಿದ್ದೆ. ನನ್ನ ಈ ಹಾಜರಿಗೆ ಕಡಲೆಪುರಿ, ಖರ್ಜೂರ, ಸಕ್ಕರೆಅಚ್ಚು, ಬೆಣ್ಣೆಬಿಸ್ಕತ್ತುಗಳು, ಬಾಳೆಹಣ್ಣು ಇರುವ ಚೀಲ ಮುಖ್ಯ ಕಾರಣವಾಗಿದ್ದರೂ, ರಂಗ ತಿಮ್ಮರು ಹದಿನೈದು ಕಿಲೋಮೀಟರು ದೂರದ ಪೇಟೆಯ ಸಂತೆಗೆ ಮಸುಕಿನಲ್ಲಿ ಗಾಡಿಯ ಹೊರೆ ಎಳೆದು ಹೋಗಿ ಮತ್ತೆ ಗೋಧೂಳಿಯ ಹೊತ್ತಿಗೆ ಗಾಡಿಯನ್ನು ಮನೆ ಬಾಗಿಲು ಮುಂದೆ ತಂದು ನಿಲ್ಲಿಸಿ ಬಾಲ ಅಲ್ಲಾಡಿಸುವ ಅವುಗಳ ಹುರುಪು ನೋಡುವುದೇ ಒಂದು ಖುಷಿ. ಸಂತೆಗೆ ಗಾಡಿ ಹೋಗದಿದ್ದ ವಾರವೂ ಸಹ ನಾನು ರಂಗ ತಿಮ್ಮರ ಬರುವಿಕೆಗಾಗಿ ಕಾದಿದ್ದಿದೆ… ರಂಗತಿಮ್ಮರು ಪೇಟೆಯ ರಸ್ತೆಯಿಂದ ಬರದೇ, ಹಿತ್ತಿಲಿನಿಂದ ತಾತ ಹಿಡಿದುಕೊಂಡು ಬರುತ್ತಿದ್ದರೆ, ಗಾಡಿ ನಿಲ್ಲಿಸುತ್ತಿದ್ದ ಮಾಡಿನ ಹತ್ತಿರ ಹೋಗಿ ನೋಡುತ್ತಿದ್ದೆ. ಓಹ್! ಇವತ್ತು ಸಂತೆಗೆ ರಜಾ ಅಂತ ಬೇಸರವಾಗುತ್ತಿತ್ತು. ರಂಗ ತಿಮ್ಮ ಇಬ್ಬರೂ ನಮ್ಮ ಮನೆಯವರ, ಅದರಲ್ಲೂ ತಾತನ ಧ್ವನಿಯನ್ನು ಸಂತೆಯ ಗದ್ದಲದ ಒಳಗೂ ಗುರುತಿಸುತ್ತಿದ್ದವು.  ಇನ್ನು ನಾನು ಹುಟ್ಟಿಬೆಳೆದ ಮನೆಯನ್ನು ನಾನು ಹುಟ್ಟುವುದಕ್ಕಿಂತ ಒಂದೆರಡು ವರ್ಷಗಳ ಮೊದಲು ಕಟ್ಟಿದ್ದು.  ಆ ಮನೆಕಟ್ಟಲು ಮಣ್ಣು ಹೊತ್ತಿದ್ದು, ನೀರು ಹೇರಿ ತಂದಿದ್ದು,  ಮರಮಟ್ಟು ಸಾಗಿಸಿದ್ದು, ಪೇಟೆಯಿಂದ ಹೆಂಚು ಸಾಗಿಸಿದ್ದು ಈ ರಂಗ ತಿಮ್ಮರೇ. ಮಂಗಳೂರು ಹೆಂಚಿನ ನನ್ನ ತಾತನ ಹೊಸಮನೆಯ ಗೋಡೆ ಹೆಂಚುಗಳಿಗೆ ರಂಗ ತಿಮ್ಮರ ದುಡಿಮೆ ಸದಾ ಅಂಟಿಕೊಂಡಿದೆ. ನಾನು ರಂಗ ತಿಮ್ಮರನ್ನು ನೋಡಿದ ಅಷ್ಟೂ ದಿನಗಳಲ್ಲಿ ಕೆಲಸ ಮಾಡಿ ಅವುಗಳು ಬಳಲಿರುವ ದಿನಗಳೇ ಇರಲಿಲ್ಲ. ದುಡಿಮೆ ಅಂದರೆ ಅವುಗಳಿಗೆ ಉಸಿರಾಡುವಷ್ಟು, ಮೇವುತಿನ್ನುವಷ್ಟು ಸಲೀಸು. ಮುಂಗಾರಿನ ಬಿರುಸಾದ ಅಡ್ಡಮಳೆಯಿಂದ ಹಿಡಿದು ಭಾದ್ರಪದದ ಸೋನೆಮಳೆಯೂ ರಂಗ ತಿಮ್ಮರನ್ನು ನೆನೆಯಿಸುತ್ತಿರಲಿಲ್ಲ. ಬೇಸಿಗೆಯ ಜಳಜಳ ಬಿಸಿಲು ಅವುಗಳನ್ನು ಎಂದೂ ಒಣಗಿಸಿರಲಿಲ್ಲ. ಹತ್ತಾರು ಎಕರೆ ಹೊಲ, ಗದ್ದೆ ತೋಟಗಳನ್ನು ಉಳುಮೆ ಮಾಡಿ ಹದಗೊಳಿಸಿದವು ಅವು. ಅವುಗಳ ಹುರುಪಿನ ದುಡಿಮೆಗೆ ತಕ್ಕಂತೆ ಬಂದ ಫಸಲನ್ನು ಅಷ್ಟೇ ಶ್ರಮದಿಂದ ಕಣಕ್ಕೆ ಸಾಗಿಸುತ್ತಿದ್ದವು. ಅದೇ ಪಸಲನ್ನು ವಾರಕ್ಕೊಮ್ಮೆ ಸರದಿಯಲ್ಲಿ ಪೇಟೆಗೆ ಹೊತ್ತು, ಸಂತೆಯನ್ನೂ ಸುತ್ತಿ ಮನೆಗೆ ಉಪ್ಪು, ಎಣ್ಣೆಯಾದಿಯಾಗಿ ದಿನಸಿಯನ್ನು ಸಾಗಿಸುತ್ತಿದ್ದವು. ನನ್ನ ಇಡೀ ಬಾಲ್ಯ ಅವುಗಳ ಮುಂದೆ ಕಳೆಯಿತು… ಅವುಗಳು ಬೆಳೆಯುತ್ತಿದ್ದ ಕರುಗಳಾಗಿದ್ದಾಗಿನ ದಿನಗಳ ತುಂಟಾಟದ ಸಂದರ್ಭಗಳನ್ನೂ ತಾತ, ಅಕ್ಕಪಕ್ಕದ ಮನೆಯವರು, ಮತ್ತು ಊರಿನವರೂ ಹೇಳುತ್ತಿರುತ್ತಿದ್ದರು. ರಂಗ ಹುಟ್ಟಿದಾಗಿನಿಂದ ಕಡೆಯವರೆಗೂ ಮನೆಯವನಂತೆಯೇ ಆಗಿತ್ತು. ತಿಮ್ಮ ಬೇರೆಮನೆಯಲ್ಲಿ ಹುಟ್ಟಿ ನಂತರ ರಂಗನ ಜೊತೆಯಾದರೂ ರಂಗನಷ್ಟೇ ಮನೆಯ ಸ್ವಂತದವನಂತೆ ಇತ್ತು. ಅವುಗಳ ಆಯಸ್ಸೇ ಕಡಿಮೆ… ಇಪ್ಪತ್ತು ವರ್ಷ. ಅವು ಇದ್ದ ಅಷ್ಟೂ ದಿನಗಳಲ್ಲಿ ಅವುಗಳಿಗೆ ಬದುಕಲು ಬೇಕಾಗಿದ್ದು, ಮುಂಗಾರಿನಲ್ಲಿ ಹೊಲದ ಬದುವಿನ ಹಸಿರು ಹುಲ್ಲು, ಬೇಸಿಗೆಯಲ್ಲಿ ಬಣವೆಯಲ್ಲಿನ ಒಣಹುಲ್ಲು ಜೊತೆಗೆ ದಿನದ ಮೂರು ಹೊತ್ತು ಕೆರೆಯ ನೀರು ಅಥವಾ ಕಲಗಚ್ಚು. ಗದ್ದೆನಾಟಿಯ ಸಮಯದಲ್ಲಿ ಕಡಲೆಹಿಂಡಿ, ಬೇಯಿಸಿದ ಹುರುಳಿ. ಅದೇ ಅವುಗಳಿಗೆ ಮೃಷ್ಟಾನ್ನ. ನಾನು ಬೆಳೆಯುತ್ತಿರುವಂತೇ ರಂಗ ತಿಮ್ಮರಿಗೆ ಮುದಿತನ ಆವರಿಸುತ್ತಿತ್ತು. ಇನ್ನು ಇವುಗಳಿಂದ ಕೆಲಸ ಆಗುವುದಿಲ್ಲ ಮಾರಿಬಿಡುವುದು ಒಳ್ಳೆಯದು ಎಂದು ಕೆಲವರ ಅಭಿಪ್ರಾಯ… ಅಷ್ಟು ಸಾಲದು ಅಂತ ತಿಮ್ಮ ಮನೆಯಲ್ಲೇ ಒಬ್ಬರ ಕೆಂಗಣ್ಣಿಗೆ ಗುರಿಯಾದ. ಅದೇನು ಕೇಳಿಸಿತೋ, ಯಾವುದಕ್ಕೆ ಗಾಬರಿಯೋ, ಬದುವಿನಲ್ಲಿ ಮೇಯುವಾಗ, ಇದ್ದಕ್ಕಿದ್ದಂತೆ ಹರಿಹಾಯ್ದಿತೆನ್ನುವ ಒಂದು ಕಾರಣ. ತಿಮ್ಮನಿಗೆ ವಯಸ್ಸಾಗುತ್ತಿದ್ದರೂ ತನ್ನ ಸ್ವಭಾವ ಬದಲಾಗಿರಲಿಲ್ಲ.  ಆದರೂ ಮಾರಲು ಒಂದೋ ಅಥವಾ ಎರಡೋ ಪ್ರಯತ್ನ ನಡೆಸಿದ ತಾತ ಮಾರಲು ಮನಸ್ಸು ಮಾಡದೇ ಸೋತು ಸುಮ್ಮನಿದ್ದರು. ಅವತ್ತೊಂದು ದಿನ, ಅದು ಯಾವ ದಿನ ಎನ್ನುವುದು ನೆನಪಿಲ್ಲ.  ರಂಗನಿಗೆ ಒಂದೆರಡು ದಿನದಿಂದ ಹುಷಾರಿರಲಿಲ್ಲ.  ವಯಸ್ಸಾಗಿದೆಯಲ್ಲ, ಅದಕ್ಕೇ ಹಾಗಾಗಿದೆ,  ಸರಿಹೋಗುತ್ತೆ ಅಂತಲೋ ಏನೋ, ಮದ್ದು ಏನೂ ಕೊಟ್ಟಿರಲಿಲ್ಲ. ಎಂದಿನಂತೆ ಕೊಟ್ಟಿಗೆಯಿಂದ ಮನೆ ಮುಂಭಾಗಕ್ಕೆ ತಂದು ಬಳಪದ ಕಲ್ಲಿಗೆ ಕಟ್ಟಿದ್ದರು. ನಾನು ಶಾಲೆಗೆ ಹೊರಡುವಾಗ ರಂಗ ಮಲಗಿದ್ದಂತೆ ನೆನಪು. ಮಧ್ಯಾಹ್ನ ಊಟಕ್ಕೆ ಮನೆಗೆ ಬರಬೇಕಾಗಿದ್ದರೂ, ನಾನು ಅಪರೂಪಕ್ಕೆ ಮನೆಗೆ ಮಧ್ಯಾಹ್ನದ ಊಟಕ್ಕೆ ಬರುತ್ತಿದ್ದುದು. ಮಿಕ್ಕಂತೆಲ್ಲಾ ಬೆಳಿಗ್ಗೆ ರೊಟ್ಟಿ ತಿನ್ನುವಾಗಲೇ ಒಂದಿಷ್ಟು ಮಿಕ್ಕಿಸಿ ಪುಸ್ತಕದ ಮಧ್ಯೆ ಇಟ್ಟು ಓಡುತ್ತಿದ್ದೆ. ಊಟದ ಬಿಡುವಿನಲ್ಲಿ ಕಳ್ಳಾ-ಪೊಲೀಸು, ಲಗೋರಿ, ಗದ್ದೆಕೊಯ್ಲಿನ ಸಮಯವಾದರೆ ಶಾಲೆಯ ಪಕ್ಕದ ಕಣಗಳಲ್ಲಿ ಇರುತ್ತಿದ್ದ ಬಣವೆಗಳ ನಡುವೆ ಕಣ್ಣಾಮುಚ್ಚಾಲೆ ಹೀಗೆ ತರಹೇವಾರಿ ಆಟಗಳು. ಮಧ್ಯಾಹ್ನದ ಶಾಲೆ ಮುಗಿದು ನಾಲ್ಕೂವರೆ ನಂತರದಿಂದ ಕತ್ತಲಾಗುವ ತನಕ ಮತ್ತೆ ಆಟ. ಅವತ್ತೂ ಹಾಗೇ ಮಾಡಿದ್ದೆ. ಶಾಲೆ ಬಿಟ್ಟ ನಂತರ ಮಾಮೂಲಿನಂತೆ ನನ್ನ ಆಟ…  ಆಮೇಲೆ ಮನೆಗೆ ಬಂದೆ. ಕತ್ತಲಾಗಿತ್ತು. ಮನೆಯವರೆಲ್ಲರೂ ಒಂದು ರೀತಿ ಮೌನವಾಗಿದ್ದರು… ಎಂದಿನ ಲವಲವಿಕೆಯಿಲ್ಲ. ಅಮ್ಮ (ಅಜ್ಜಿ) ಊಟ ಮಾಡಲು ಕೂರದೇ ಏನೋ ಗೊಣಗುತ್ತಿದ್ದರಿಂದ, ಈ ಬಣಗುಡುವ ರಾತ್ರಿಗೆ ಕಾರಣವೇನಿರಬಹುದು ಅಂತ ಅಮ್ಮನನ್ನೇ ದಿಟ್ಟಿಸಿದೆ. “ಅಷ್ಟೊರ್ಷ  ಕಲ್ಲುಬಂಡೆಯಂಗಿದ್ದ ಎತ್ತಿಗೆ ಮೂರೇ ದಿನಕ್ಕೆ ಹಿಂಗಾಯ್ತಲ್ಲ. ಏನೋ, ಅತ್ಲಾಗಿ ಕೊರಗದಂತೆ ಜೀವ ಹೋಯ್ತು” ಅಂದರು.  ಆಗ ಅಡುಗೆಮನೆಯಿಂದ ಕೊಟ್ಟಿಗೆಗೆ ಒಂದು ಸಣ್ಣ ಕಿಟಕಿಯಿತ್ತು.  ನಾನಿನ್ನೂ ಅದನ್ನು ಇಣುಕುವಷ್ಟು ಎತ್ತರ ಬೆಳೆದಿರಲಿಲ್ಲ. ಅಲ್ಲೇ ಇದ್ದ ಸ್ಟೂಲ್ ಎಳೆದು ಅಂತೂ ಇಣುಕಿಯೇಬಿಟ್ಟೆ.  ತಿಮ್ಮ ಒಂದೇ ನಿಂತಿತ್ತು.  ಅದುವರೆಗೆ ಹುಷಾರಿಲ್ಲದಿದ್ದರೂ ಸಹ ಕೊಟ್ಟಿಗೆಯಲ್ಲೇ ಪಕ್ಕದಲ್ಲಿರುತ್ತಿದ್ದ ರಂಗ ಇರಲಿಲ್ಲ. ಜಾಗ ಅಗಲವಾಗಿದ್ದರಿಂದ ತಿಮ್ಮ ಹಿಂದಿನ ಕಾಲನ್ನು ಅತ್ತಿಂದಿತ್ತ ಅಡ್ಡ ಎಸೆಯುತ್ತಾ, ತೆರವು ಮಾಡಿದ್ದ ರಂಗನ ಜಾಗವನ್ನು ಕಾಯ್ದಿರಿಸುವವನಂತೆ ಕಾಣುತ್ತಿತ್ತು. ಮನೆಯವರ ಮೌನದೊಳಗೆ ನಾನೂ ಮುಳುಗಿಹೋದೆ. ನೆಪಕ್ಕೆ ಅನ್ನುವಂತೆ ಊಟಮಾಡಿ ದೀಪ ಆರಿಸಿದೆವು. ಬೆಳಗಾಗುತ್ತಲೇ ಹೊರಗೆ ಹೋಗಿ ಗಮನಿಸಿದೆ.  ಹಿಂದಿನ ದಿನ ರಂಗನನ್ನು ಕಟ್ಟಿದ್ದ ಬಳಪದಕಲ್ಲಿನ ಪಕ್ಕ ಒಂದಿಷ್ಟು ಕುಂಕುಮ, ಕೆಲವು ಅಗರಬತ್ತಿ ತುಂಡುಗಳು, ಹಿತ್ತಲಿನ ಹೂವಿನ ಗಿಡದ ಒಂದಿಷ್ಟು ಬಾಡಿದ ಹೂವುಗಳು. ಇದಾದ ಒಂದು ವಾರದಷ್ಟು ಸಮಯದಲ್ಲಿ ತಿಮ್ಮನ ಒಂಟಿತನ ತಾತನ ಗಮನಕ್ಕೆ ಬಂತು. ನೋಡಕಾಗಲ್ಲ ಮಾರಿಬಿಡು ಅತ್ಲಾಗಿ ಅಂತ ಬೇಸರದಿಂದಲೇ ಹೇಳಿ ಸಂತೆಗೆ ಒಂಟಿತಿಮ್ಮನನ್ನು ಹೊರೆಯನ್ನೇನೂ ಹೊರಿಸದೇ ಕರೆದೊಯ್ದಿದ್ದರು. ಈಗ ಅವುಗಳು ಇಲ್ಲವಾಗಿ ಇಪ್ಪತ್ತು ವರ್ಷಗಳೇ ಕಳೆದಿವೆ. ಇದರ ನಡುವೆ ಜೀವನಚಕ್ರ ಎಷ್ಟೋ ದೂರ ಉರುಳಿದೆ. ತಾತನ ಮನೆಯಲ್ಲಿ ನಾನೇ ಮೊದಲ ಮೊಮ್ಮಗ.  ಅದು ಅಕ್ಕನ(ತಾಯಿ) ತವರಾಗಿದ್ದರೂ, ನಾನು ಅಪ್ಪನ ಮನೆಯನ್ನು ಅಪ್ಪನ ಮನೆ ಎಂದಷ್ಟೇ ನೆನಪಿಸಿಕೊಳ್ಳುವೆನೇ ವಿನಃ, ಬಾಲ್ಯದ ನನ್ನ ಮನೆ ಅಂದರೆ ಈ ರಂಗ ತಿಮ್ಮರ  ಹೆಜ್ಜೆಯ, ಕೊರಳಿನ ಗೆಜ್ಜೆಯ ಸದ್ದು ಇದ್ದ ಮನೆಯೇ. ಅಲ್ಲಿ ಇದ್ದಷ್ಟೂ ದಿನ ಜೀವನದ ಬಿಸಿಲೇ ತಾಕಿರಲಿಲ್ಲ. ರಂಗ ತಿಮ್ಮರಿರುವ ಅಷ್ಟೂ ದಿನ ಮನೆಯಲ್ಲಿ ಸಮೃದ್ಧಿಯಿತ್ತು. ಹೊಸ ಮನೆಯೂ ಆಗಿತ್ತು. ಸುತ್ತಲವರು ಮೆಚ್ಚುವಷ್ಟು ಬೆಳೆಯೂ ಬರುತ್ತಿತ್ತು. ಮನೆಗೆ ಹೋಗಿಬರುವವರು, ನೆಂಟರಿಷ್ಟರು ಅದೆಷ್ಟೋ. ಹಬ್ಬದ ದಿನಗಳು ನಿಜವಾಗಿಯೂ ವಿಶೇಷವಾಗಿರುತ್ತಿದ್ದವು. ಇದೆಲ್ಲದರ ಹಿಂದೆ ಮನೆಯ ಸದಸ್ಯರ ಶ್ರಮ ಇದ್ದರೂ, ಅದಕ್ಕೆ ರಂಗ ತಿಮ್ಮನ ಪಾತ್ರವನ್ನು ಅಳೆಯುವುದಕ್ಕೆ ಸೇರು ಬಳ್ಳಗಳಿಂದಾಗಲಿ, ಮಾರು ಮೊಳಗಳಿಂದಾಗಲಿ, ಮೀಟರು ಕಡ್ಡಿಗಳಿಂದಾಗಲೀ ಸಾಧ್ಯವಿರಲಿಲ್ಲ.  ರಂಗ ತಿಮ್ಮರ ಕತೆ ಹದಿನೈದು-ಹದಿನೆಂಟು ವರ್ಷಗಳಲ್ಲಿ ನಡೆದ ಒಂದು ಮಿನಿ ಮಹಾಭಾರತವೇ ಹೌದು! ರಂಗ ತಿಮ್ಮರಿದ್ದ ಆ ನನ್ನ ಮನೆ ಸಣ್ಣದೊಂದು ನಂದನವನದಂತೆ ಇತ್ತು. ಡಿವಿಜಿ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದಾರಲ್ಲ, ‘ಬೆಳಕೀವ ಸೂರ್ಯಚಂದ್ರರದೊಂದೂ ಸದ್ದಿಲ್ಲ’ ಎನ್ನುವಂತೆ  ರಂಗ ತಿಮ್ಮ ಇಬ್ಬರೂ ತಮ್ಮ ಸ್ನಾಯುಶಕ್ತಿಯ ಶ್ರಮದಿಂದಲೇ ಮನೆಗೆ ಬೆಳಕನಿತ್ತು, ಸದ್ದಿಲ್ಲದೇ ಸರಿದುಹೋದರು. ಈಗ ಇವುಗಳ ನೆನಪು ಬಾಯಾರಿದ ಗಂಟಲಿಗೆ ಸಿಹಿನೀರಿದ್ದಂತೆ! ನಾನು ಕಲಾವಿದನಾಗಿದ್ದರೆ, ಮೊನ್ನೆಯ ಕನಸಿನಲ್ಲಿ ದುರುಗುಟ್ಟು ನೋಡುತ್ತಿದ್ದ ತಿಮ್ಮನ ಆ ಕಣ್ಣುಗಳನ್ನು ಅಚ್ಚುಒತ್ತಿದ ಹಾಗೆ ಬಿಡಿಸಿರುತ್ತಿದ್ದೆ! ******

ಹೊತ್ತಾರೆ Read Post »

ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು ಡಾ.ಸಣ್ಣರಾಮ ಹಿಂದಿನ ಸಂಚಿಕೆಯಿಂದ——— ಇಂದಿನ ಆಧುನಿಕ ಮಹಿಳಾವಾದಿಗಳು ಹೆಣ್ಣು ತನ್ನ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿದರೆ ಪುರುಷ ದೌರ್ಜನ್ಯದಿಂದ ಪೂರ್ಣ ವಿಮುಕ್ತಿ ಪಡೆಯಬಹುದು ಎಂದು ಹೇಳುತ್ತಾರೆ. ಈ ತತ್ವವನ್ನು 12ನೇ ಶತಮಾನದಷ್ಟು ಹಿಂದೆ ಅಕ್ಕ ಹೇಳಿದ್ದಾಳೆ ಎಂಬುವುದನ್ನು ಮಹಿಳಾವಾದಿಗಳು ಗಮನಿಸಬೇಕು. ಅಕ್ಕನ ಬದುಕೆ ಇಂದಿನ ಮಹಿಳಾವಾದಕ್ಕೆ ಮೂಲ ಪ್ರೇರಣೆಯಾಗಬಲ್ಲದು. ಕದಳಿ ಎಂಬುದು ವಿಷಂಗಳು ಕದಳಿ ಎಂಬುದು ಭವ ಘೋರಾರಣ್ಯ ಈ ಕದಳಿ ಎಂಬುದು ಗೆದ್ದು ತಾವೆ ಬದುಕಿ ಬಂದು ಕದಳಿ ಬನದಲ್ಲಿ ಭವಹರನ ಕಂಡೆನು ಭವಗೆದ್ದು ಬಂದ ಮಗಳೆ ಎಂದು ಕರುಣದಿ ತೆಗೆದು ಬಿಗಿದಪ್ಪಿದಡೆ ಚನ್ನಮಲ್ಲಿಕಾರ್ಜುನನ ಹೃದಯ ಕಮಲದಲ್ಲಿ ಅಡಗಿದೆನು- ಈ ವಚನ ಅಕ್ಕನ ಪ್ರೌಢಮೆಗೆ, ಪ್ರಬುದ್ಧ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ. ಕೆದಕಿದಷ್ಟು ಅರ್ಥವನ್ನು ಹಿಡಿ ಹಿಡಿಯಾಗಿ ಸಹೃದಯರಿಗೆ ಉಣಬಡಿಸುತ್ತದೆ. “ಕದಳಿ” ಎಂಬ ಪದವನ್ನು ಎಷ್ಟು ಅರ್ಥದಲ್ಲಿ ಬಳಸಿದ್ದಾಳೆಂಬುದು ಗ್ರಹಿಕೆಗೆ ಸಿಕ್ಕರೆ ಭಾಷಾ ಪಂಡಿತರು ಬೆಕ್ಕಸ ಬೆರಗಾಗುತ್ತಾರೆ. ತನು, ಮನ, ಸಂಸಾರ, ಲೌಕಿಕ ಬದುಕು ಮೃದುಭಾವ ಮೊದಲಾದ ಅರ್ಥದಲ್ಲಿ ಕದಳಿ ಎಂಬ ಪದ ಬಳಕೆಯಾಗಿದೆ. ಈ ಸಂಸಾರವೆಂಬ ಘೋರ ಅರಣ್ಯವನ್ನು ಜಯಿಸಲು “ಕದಳಿ” ತನುಬೇಕು. ತನುವಿಲ್ಲದೆ ಪೂರ್ಣ ತತ್ವ ಲಭಿಸುವುದಿಲ್ಲ. ಕದಳಿ ತನುವಿನಿಂದ ಪೂರ್ಣ ತತ್ವವನ್ನು ಇಹದಲ್ಲಿ ಸಾಧಿಸಿದವರು ಪರದಲ್ಲಿ ಪೂರ್ಣವನ್ನು ಪಡೆಯುತ್ತಾರೆ. ಪೂರ್ಣದಲ್ಲಿ ಪೂರ್ಣವು ಸೇರಿದರೆ ಉಳಿಯುವುದು ಬಯಲು. ಈ ಬಗೆಯ ಅದ್ಭುತ ತತ್ವವನ್ನು ಸರಳ ಪದಗಳಲ್ಲಿ ನಿರ್ವಚಿಸಿರುವ ರೀತಿ ಅಪೂರ್ವವಾದುದು. ಪ್ರಾಚೀನ ಕಾಲದಲ್ಲಿಯೂ ಭಾರತದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನ ಮಾನ್ಯತೆಯನ್ನು ಪಡೆದಿದ್ದರೆಂಬುದಕ್ಕೆ ನಿಕತ್ತಾ, ಸಾಸ್ವತಿ, ಮೈತ್ರೇಯಿ, ಗಾರ್ಗಿ, ಅಪಲಾ, ಯಯಾಂತ ಇವರು ನಿದರ್ಶನರಾಗಿದ್ದಾರೆ. ಶರಣೆ ಅಕ್ಕಮಹಾದೇವಿ ಕನ್ನಡದ ಮೊದಲ ಮಹಿಳಾವಾದಿಯಂತೆ ಮೊದಲ ಕವಿಯಿತ್ರಿಯೂ ಹೌದು. ಹತ್ತನೆ ಶತಮಾನದಲ್ಲಿ ಕೆಲವು ಸಾಲುಗಳ ಬರವಣಿಗೆ ಇದೆ ಎಂದು ಹೇಳಲಾಗುತ್ತಿರುವ “ಕಂತಿ” ಎಂಬುವಳನ್ನು ಹೊರತು ಪಡಿಸಿದರೆ 354 ವಚನಗಳನ್ನು “ಯೋಗಾಂಗ ತ್ರಿವಿಧಿ”, “ಸೃಷ್ಟಿಯ ವಚನ”, “ಮಂತ್ರ ಗೋಪ್ಯ” ಎಂಬ ಕೃತಿಗಳನ್ನು ರಚಿಸಿದ ಮಹಾದೇವಿ ಅಕ್ಕ ಬರೆದಿದ್ದಾಳೆ. ಅಕ್ಕನ ವಚನಗಳಲ್ಲಿ ತತ್ವವಿದೆ, ಸತ್ವವಿದೆ, ವೇದನೆಯಿದೆ. ಕನ್ನಡ ಸಾರಸ್ವತ ಲೋಕಕ್ಕೆ ಅಕ್ಕನ ಕೊಡುಗೆ ಶ್ಲಾಘನೀಯ. ಅಕ್ಕಮಹಾದೇವಿಯ ವಚನದ ಮಹೋನ್ನತಿಯನ್ನು ಕುರಿತಂತೆ ಚನ್ನಬಸವಣ್ಣನವರು ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ ಅಜಗಣ್ಣನ ಐದು ವಚನಕ್ಕೆ ಕೂಡಲ ಚನ್ನಸಂಗಮದೇವಾ ಮಹದೇವಿಯಕ್ಕನ ಒಂದು ವಚನ ನಿರ್ವಚನ-ಎಂದಿದ್ದಾನೆ. ಅಕ್ಕಮಹಾದೇವಿಯ ವಚನ, ಅನುಭವ ಸಂಪತ್ತು ಅಷ್ಟು ಘನವಾಗಿತ್ತು. ಎಲ್ಲಾ ಆದ್ಯರ, ಹಿರಿಯರ ವಚನಗಳ ಸತ್ವವನ್ನು ಮೀರಿ ನಿಲ್ಲಬಲ್ಲವಾಗಿದ್ದಾವೆ ಎಂದು ಸಾಕ್ಷಿಕರಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಸತ್ಯಕ್ಕ: ಶರಣರ ಕ್ರಾಂತಿಗೆ ಶಕ್ತಿ ತುಂಬಿದ, ಅಲ್ಲಮ ಪ್ರಭುದೇವ ಮತ್ತು ಅಕ್ಕಮಹಾದೇವಿಯು ಶಿವಮೊಗ್ಗ ಜಿಲ್ಲೆಯವರೇ ಆಗಿದ್ದಾರೆ. ಜಿಲ್ಲೆಯ ಕೀರ್ತಿಯ ಕಿಡಿಯನ್ನು ಇಲ್ಲಿಂದಲೇ ಗುರುತಿಸಬಹುದಾಗಿದೆ. ಇವರೊಂದಿಗೆ ಶರಣೆ ಸತ್ಯಕ್ಕ ಸಹ ಶಿವಮೊಗ್ಗ ಜಿಲ್ಲೆಯ ಶರಣ ಚಳುವಳಿಯ ಕ್ರಾಂತಿಯ ಕಿಡಿ. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಸಮೀಪದ ಹಿರೇಜಂಬೂರು ಸತ್ಯಕ್ಕಳ ಜನ್ಮಸ್ಥಳ. ಸತ್ಯಕ್ಕ ಜನಪದ ಸಾಹಿತ್ಯದಲ್ಲಿ ಪ್ರವೀಣೆಯಾಗಿ ವಚನಗಾರ್ತಿಯು ಆಗಿದ್ದಳು. ಇವಳ ಕಾಯಕ, ನಿಷ್ಠೆ, ಭಕ್ತಿಯ ಪರಕಾಷ್ಠೆ ಆ ಕಾಲದಲ್ಲಿ ಮನೆಮಾತಾಗಿತ್ತು. ಶಿವಭಕ್ತರ ಮನೆಯ ಅಂಗಳ ಗುಡಿಸುವ ಕಾಯಕ ಇವಳದಾಗಿತ್ತು. ಈ ಕಾಯಕದಲ್ಲಿಯೇ ದೇವರನ್ನು ಕಂಡವಳು ಶಿವ ಶರಣೆ ಸತ್ಯಕ್ಕ. ಶಿವನ್ನಲ್ಲದೆ ಅನ್ಯ ದೈವವನ್ನು ಪೂಜಿಸುವುದಿಲ್ಲ. ಶಿವನ್ನಲ್ಲದೇ ಅನ್ಯ ದೈವದ ಶಬ್ಧವನ್ನು ಕೇಳುವುದಿಲ್ಲವೆಂದು ಪ್ರತಿಜ್ಞೆ ಮಾಡಿದ ಕಟ್ಟಾ ಶಿವಭಕ್ತೆ. ಅಂತೆಯೇ ತನ್ನ ಪ್ರತಿಜ್ಞೆಯನ್ನು ಪಾಲಿಸುತ್ತಾ ಬಂದವಳು. ಒಮ್ಮೆ ಶಿವನು ವೃದ್ಧ ಭಿಕ್ಷುಕನ ರೂಪದಲ್ಲಿ ಸತ್ಯಕ್ಕನ ಶಿವನಿಷ್ಠೆಯನ್ನು ಪರೀಕ್ಷಿಸಲು ಬರುತ್ತಾನಂತೆ. ಸತ್ಯಕ್ಕ ಬಿಕ್ಷೆ ಹಾಕಿದಾಗ ಹರಿದ ಜೋಳಿಗೆಯಿಂದ ಹಾಕಿದ ಬಿಕ್ಷೆಯು ನೆಲದಲ್ಲಿ ಚೆಲ್ಲುತ್ತದೆ. ಬಿಕ್ಷುಕ ರೂಪದ ಶಿವನು “ಅಯ್ಯೋ ಹರಿದ ಹರಿಯಿಂದ ಕಾಳು ಹರಿದು ಹೋಯ್ತು” ಎಂದು ಉದ್ಗರಿಸುತ್ತಾರೆೆ. ಹರಿ ಎಂಬ ಶಬ್ಧ ಕಿವಿಗೆ ಬೀಳುತ್ತಲೇ ಸಿಟ್ಟಾದ ಸತ್ಯಕ್ಕ ಸಿಟ್ಟಾಗಿ ಕೈಯಲ್ಲಿದ್ದ ಸಟ್ಟುಗದಿಂದ ಶಿವನನ್ನೇ ಹೊಡೆದಳೆಂದು ಐತಿಹ್ಯವಿದೆ. ಅಷ್ಟರ ಮಟ್ಟಿಗೆ ಶಿವಭಕ್ತೆಯಾಗಿದ್ದಳು. ಸತ್ಯಕ್ಕನ ಒಟ್ಟು 29 ವಚನಗಳು ದೊರೆತಿವೆ. ಶಂಬುಜಕೇಶ್ವರ ಎಂಬುದು ಅವಳ ಅಂಕಿತನಾಮ. ಜಂಬೂರಿನಲ್ಲಿ ಶಂಬುಕೇಶ್ವರ ಎಂಬ ದೇವರಿದ್ದಾರೆ. ಈ ಶಂಬುಕೇಶ್ವರ ದೇವರ ನಾಮವನ್ನೆ ಸತ್ಯಕ್ಕನ ತನ್ನ ಅಂಕಿತದಲ್ಲಿಟ್ಟುಕೊಂಡಿರಬೇಕು. ಅದು ವ್ಯತ್ಯಾಸವಾಗಿ ಶಂಬುಜಕೇಶ್ವರ ಆಗಿರಬೇಕೆಂಬುದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ತಳ ಸಮುದಾಯದ ಸತ್ಯಕ್ಕನ ವಚನಗಳಲ್ಲಿ ಅಪರೂಪದ ತತ್ವಗಳು ತುಂಬಿವೆ. ಸತಿ-ಪತಿಭಾವ, ಸಮರ್ಪಣಭಾವ, ಶಿವನಿಷ್ಠೆಗಳು ಸರಳವಾದ ಭಾಷೆಯಲ್ಲಿ ಮೈದುಂಬಿ ನಿಂತಿವೆ. ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಾಮಾಣಿಸಲಿಲ್ಲ ಕಾಸೆ ಮಿಸೆ ಕಠಾರವಿದ್ದುದೆ ಗಂಡೆAದು ಪ್ರಮಾಣಿಸಲಿಲ್ಲ ಅದು ಜಗದ ಹಾಹೆ: ಬಲ್ಲವರ ನೀತಿಯಲ್ಲ ಏತರ ಹೆಣ್ಣಾದಡೂ ಮಧುರವೆ ಕಾರಣ ಅಂದವಿಲ್ಲದ ಕುಸುಮಕ್ಕೆ ವಾಸನೆ ಕಾರಣ ಇದರಂದವ ನೀನೇ ಬಲ್ಲೆ ಶಂಭಜಕ್ಕೇಶ್ವರಾ ಸತ್ಯಕ್ಕ ಹಲವಾರು ವಚನಗಳಲ್ಲಿ ಪುರುಷ ಪ್ರಾಧ್ಯಾನತೆಯನ್ನು ದಿಕ್ಕರಿಸಿದ್ದಾಳೆ. ಅನುಭಾವಕ್ಕೆ ಲಿಂಗ ಭೇದವಿಲ್ಲ ಎಂದು ಸಾರಿದ್ದಾಳೆ. ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದಿದ್ದಾಳೆ. ಶಿವಶರಣರ ಕ್ರಾಂತಿಯಲ್ಲಿ ಪಾಲ್ಗೊಂಡು ಅದರ ದನಿಯಲ್ಲಿ ಗಟ್ಟಿದನಿಯನ್ನು ಹೊರಡಿಸಿದ ಶಿವಮೊಗ್ಗದ ಶರಣರು ತಮ್ಮದೇ ಅನನ್ಯತೆಯನ್ನು ಮೆರೆದಿದ್ದಾರೆ. ಶಿವಮೊಗ್ಗ ಕ್ರಾಂತಿಯ ನಾಡೆಂಬುದನ್ನು ಆ ಕಾಲಕ್ಕೆ ತೋರಿದ ಕೀರ್ತಿ ಈ ಶಿವಶರಣ-ಶರಣೆಯರಿಗೆ ಸಲ್ಲುತ್ತದೆ. ಮುಂದುವರೆಯುತ್ತದೆ…

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಏಕತೆ ಸಾರುವ ಹುಸೇನ್-ಷಾವಲಿ ತಾತಯ್ಯ…! ಕೆ.ಶಿವು.ಲಕ್ಕಣ್ಣವರ `ಸರ್ವಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ’ ಎಂಬುದು ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯಲ್ಲಿನ ಒಂದು ಸಾಲು. ಇಂತಹ ಸೌಹಾರ್ದ ಪರಂಪರೆಗೆ ಸಾಕ್ಷಿ ಎಂಬಂತೆ ಬಾಗೇಪಲ್ಲಿಯಲ್ಲಿ ದರ್ಗಾ-ಕರಗ, ಮಂದಿರ, ಮಸೀದಿ, ಗುಡಿ, ಚರ್ಚ್ ಎಲ್ಲವೂ ಇಲ್ಲೇ ಇವೆ. ಈ ನೆಲದಲ್ಲಿ ಸೌಹಾರ್ದ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಹಜರತ್ ಸೈಯ್ಯದನಾ ಶೇಕ್ ಹುಸೇನ್ ಷಾ ಖಾದ್ರಿ ಅವರ ಕೊಡುಗೆ ಸಾಕಷ್ಟಿದೆ… ಹಿಂದು-ಮುಸ್ಲಿಂರು ತಮ್ಮ ಗುರು ಮತ್ತು ಮಾರ್ಗದರ್ಶಕರೆಂದೇ ಅವರನ್ನು ಕಾಣುತ್ತಾರೆ. ಅದೇ ಕಾರಣಕ್ಕೆ ಮುಸ್ಲಿಂರ ಪಾಲಿಗೆ ಅವರು ಹುಸೇನ್ ಶಾವಲಿಯಾದರೆ, ಹಿಂದುಗಳಿಗೆ ಅವರು ಪ್ರೀತಿಯ ತಾತಯ್ಯ. ದಾಸರಿಂದ ಹುಸೇನ್ ದಾಸ ಎಂದೂ ಅವರು ಕರೆಸಿಕೊಂಡಿದ್ದಾರೆ. ಸೌಹಾರ್ದ ಮತ್ತು ಸಹಬಾಳ್ವೆಗೆ ಸಾಕ್ಷಿಯಾಗಿದ್ದಾರೆ ಅವರು… 1963ರ ದಿನಗಳಲ್ಲಿ ಜವಳಿ ಉದ್ಯಮಿಯಾಗಿದ್ದ ಹಜರತ್ ಸೈಯ್ಯದನಾ ಶೇಕ್ ಹುಸೇನ್ ಷಾ ಖಾದ್ರಿ ಅವರು ಸಂತರಾದದ್ದು ಆಕಸ್ಮಿಕ ಪವಾಡವೇನಲ್ಲ. ಅವರು ಜನರಿಗೆ ಏನನ್ನೂ ಬೋಧನೆ ಮಾಡಲಿಲ್ಲ. ತತ್ವ ಪದಗಳನ್ನು ಹೇಳಲಿಲ್ಲ. ಆದರೆ ಅವರ ಇಡೀ ಬದುಕೇ ಲೌಕಿಕ ಸತ್ಯಗಳನ್ನು ಹೇಳುವ ವಿಶ್ವವಿದ್ಯಾಲಯವಾಯಿತು… ಶ್ರೀಮಂತರಾಗಿದ್ದ ಅವರು ಪ್ರತಿ ದಿನ ಹೊಸ ಬಟ್ಟೆ ಧರಿಸುತ್ತಿದ್ದರು. ಯಾವುದೇ ಕೊರತೆ ಅವರಿಗೆ ಇರಲಿಲ್ಲ. ಆದರೆ ಧರ್ಮಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿ, ಕೊನೆಯುಸಿರೆಳೆದಾಗ ಅವರಲ್ಲಿ ವೈರಾಗ್ಯ ಮೂಡಿತು. ಅತ್ತ ಹಾಲು ಕುಡಿಯುವ ಮಗು ಮತ್ತು ಇತ್ತ ವ್ಯಾಪಾರ- ವಹಿವಾಟು ತ್ಯಜಿಸಿ ದೈವ ಸಾಕ್ಷಾತ್ಕಾರದ ಮಾರ್ಗದಲ್ಲಿ ಬೆಳೆದು ನಿಂತವರು ಸಂತ ಹುಸೇನ್ ಷಾವಲಿ ತಾತಯ್ಯ..! ಹೆಗಲ ಮೇಲೆ ಕಂಬಳಿ ಹಾಕಿಕೊಂಡು, ಸೊಂಟಕ್ಕೆ ತುಂಡು ಬಟ್ಟೆ ಧರಿಸಿಕೊಂಡು, ಕಾಡು-ಮೇಡು ಅಲೆಯಲು ಆರಂಭಿಸಿದರು. ಪ್ರತಿ ನಿತ್ಯ ಸ್ವಾದಿಷ್ಟ ತಿನಿಸುಗಳನ್ನು ತಿನ್ನುತ್ತಿದ್ದವರು ಭಿಕ್ಷಾಪಾತ್ರೆಯನ್ನು ಹಿಡಿದು ಮನೆಗಳ ಮುಂದೆ ಭಿಕ್ಷೆ ಕೇಳತೊಡಗಿದರು. ಅಲ್ಲಿಗೆ ಅವರು ಸಂಪೂರ್ಣವಾಗಿ ಬದಲಾದರು. ಮೊದ ಮೊದಲು ಅವರನ್ನು ಹುಚ್ಚ, ಧರ್ಮ ವಿರೋಧಿ ಎಂದು ಮಸೀದಿಯಿಂದ ಜನರೇ ಹೊರ ನೂಕಿದರು. ಆದರೆ ನಂತರದ ದಿನಗಳಲ್ಲಿ ಅವರ ತತ್ವ, ಆದರ್ಶಗಳ ಪ್ರಭಾವಕ್ಕೆ ಒಳಗಾಗಿ ಅದೇ ಜನರು ಸಾವಿರಾರು ಸಂಖ್ಯೆಯಲ್ಲಿ ಅನುಯಾಯಿಗಳಾದರು… `ಗುಡಿ-ಮಸೀದಿಗಳಲ್ಲಿ ಭಗವಂತನನ್ನು ನೋಡದೇ ಪ್ರಾಣಿ-ಪಕ್ಷಿ ಸೇರಿದಂತೆ ಸಕಲ ಜೀವರಾಶಿಗಳಲ್ಲಿಯೂ ಧರ್ಮಾತ್ಮನನ್ನು ಕಾಣಿರಿ. ಹಿಂದು-ಮುಸ್ಲಿಂ ಎನ್ನುವಂತಹದ್ದು ಮನುಷ್ಯ ಸ್ಥಾಪಿಸಿಕೊಂಡಿರುವುದು. ದೈವನಿರ್ಣಯವಲ್ಲ. ಜಾತಿ, ಧರ್ಮಗಳು ಬೇರೆ ಬೇರೆಯಾದರೂ ನಡೆದು-ಕುಣಿದಾಡುವ ಆತ್ಮ ಒಂದೇ. ನಾನು ನನ್ನ ಹೊಟ್ಟೆ ತುಂಬಿಸಿಕೊಳ್ಳಲು ನಿಮ್ಮಿಂದ ಭಿಕ್ಷೆ ಬೇಡುತ್ತಿಲ್ಲ. ನಿಮ್ಮ ಪಾಪ-ಕರ್ಮಗಳನ್ನು ಬೇಡುತ್ತಿದ್ದೇನೆ. ನಂತರ ಕರುಳನ್ನು ಹರಿಯುವ ನದಿಯಲ್ಲಿ ತೊಳೆಯುತ್ತಿದ್ದೇನೆ’ ಎಂದು ಅವರು ತಮ್ಮ ಶಿಷ್ಯಂದಿರಿಗೆ ಹೇಳುತ್ತಿದ್ದರು…! ಅವರು ಗತಿಸಿ ಇಂದಿಗೆ 50 ವರ್ಷಗಳ ಮೇಲಾಗಿವೆ. ರಂಜಾನ್ ಹಬ್ಬದ ಮಾರನೆಯ ದಿನದಿಂದ 11ನೇ ದಿನಕ್ಕೆ ಅವರು ಇಹಲೋಕವನ್ನು ತ್ಯಜಿಸಿದರು. ಇಸ್ಲಾಂ ಧರ್ಮದ ಪ್ರಕಾರ, ಈ ದಿನವನ್ನು ಸೌಹಾಲ್ 11ನೇ ತಾರೀಖು ಎನ್ನುತ್ತಾರೆ. ಪ್ರಾಣ ತ್ಯಾಗ ಮಾಡಿದ ದಿನದಂದು ಜಾತಿ- ಧರ್ಮಗಳು ಮೀರಿ ತಮ್ಮ ಗುರುವಿನ ಆಜ್ಞೆಯಂತೆ ಎಲ್ಲರೂ ಒಂದಾಗಿ ಅವರನ್ನು ಸಮಾಧಿ ಮಾಡಿದ ಅಂದಿನಿಂದ ಇಂದಿನವರಿಗೂ ಜಾತ್ಯತೀತವಾಗಿ ಪ್ರತಿದಿನ ದರ್ಗಾಗೆ ಪ್ರವೇಶಿಸಿ ತಮ್ಮ ಸಂಕಷ್ಟಗಳನ್ನು ಬಗೆಹರಿಸುವಂತೆ ಪ್ರಾರ್ಥಿಸುವುದು ರೂಢಿಯಾಗಿದೆ…! `ಈ ಸಂತನಿಗೆ ನಡೆದುಕೊಳ್ಳುವ ಜನರು ಹೃದಯವಂತಾಗಿರಬೇಕು. ಮನುಷ್ಯತ್ವ ಇರುವಂತಾಗಿರಬೇಕು. ಸಕಲ ಜೀವಿಗಳಲ್ಲಿ ಪರಮಾತ್ಮನನ್ನು ಕಾಣುವ ಹೃದಯವಂತರಾಗಿರಬೇಕು. ಅಷ್ಟೇ ಹೊರತು ಜಾತಿವಂತರಲ್ಲ…! ಎಲ್ಲಾ ಜಾತಿ, ವರ್ಗದವರು, ಜಾತ್ಯತೀತತೆ, ಏಕತೆ, ಸಹೋದರ ಭಾವ ಹೊಂದಿದವರೆಲ್ಲ ದರ್ಗಾಗೆ ಬರುತ್ತಾರೆ. ತಾತಯ್ಯ ಕಣ್ಮರೆಯಾದರೂ ಅವರ ಶಿಷ್ಯಂದಿರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ’ ಎನ್ನುತ್ತಾರೆ ದರ್ಗಾದವರು… ಈದ್-ಉಲ್-ಫಿತರ್ ಹಬ್ಬದ ಮಾರನೆ ದಿನದಿಂದ 11ನೇ ದಿನಕ್ಕೆ ಸಂತ ಹಜರತ್ ಶೇಖ್ ಹುಸೇನ್-ಷಾವಲಿ ತಾತಯ್ಯ ಇಹಲೋಕ ತ್ಯಜಿಸಿದರು. ಆ ದಿನವನ್ನು ಸೌಹಾಲ್ ಎಂದು ಕರೆಯಲಾಗುತ್ತದೆ…! ಹಿಂದು ಮತ್ತು ಮುಸ್ಲಿಂ ಸಮುದಾಯದವರು ಸೋಮವಾರ ರಾತ್ರಿ 8ರ ಸುಮಾರಿಗೆ `ಸಂದಲ್-ಎ-ಶರೀಫ್’ (ಗಂಧದ ಅಭಿಷೇಕ), ಅನ್ನದಾನ ಮತ್ತು ಆರಾಧನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ಯಾರೆ…! ಹೀಗಿದೆ ಸಂತ ಹಜತತ್ ಶೇಖ್ ಹುಸೇನ್-ಷಾವಲಿ ತಾತಯ್ಯನ ಪುರಾಣ..!! ———– ‌‌‌‌

ಸ್ವಾತ್ಮಗತ Read Post »

ಅಂಕಣ ಸಂಗಾತಿ

‘ಸ್ವಾತ್ಮಗತ’

ಕೆ.ಶಿವು.ಲಕ್ಕಣ್ಣವರ ಅಜರಾಮರವಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ಮಹತ್ ಸಾಧನೆ..! ಒಬ್ಬ ಭಾರತೀಯ ಆಧ್ಯಾತ್ಮಿಕ ನಾಯಕ, ಮಾನವೀಯ ಮತ್ತು ಶಿಕ್ಷಣತಜ್ಞ.ಅವರು ಹಿಂದೂ ಲಿಂಗಾಯತ ಧಾರ್ಮಿಕ ವ್ಯಕ್ತಿಯಾಗಿದ್ದರು ಮತ್ತು ಕರ್ನಾಟಕದ ಸಿದ್ದಗಂಗಾ ಮಠದ  ಮಠಾಧಿಪತಿಗಳಾಗಿದ್ದರು. ಅವರು ಶ್ರೀ ಸಿದ್ದಗಂಗ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. ಹಿಂದೂ ಧರ್ಮದ ಲಿಂಗಾಯತ ಸಂಪ್ರದಾಯದ ಅತ್ಯಂತ ಗೌರವಾನ್ವಿತ ಅನುಯಾಯಿಯಾಗಿದ್ದರು. ಅವರನ್ನು ರಾಜ್ಯದಲ್ಲಿ ನಡೆದಾಡುವ  ದೇವರು ಎಂದು ಕೂಡ ಜನರು ಕರೆಯುತ್ತಿದ್ದರು. ‌ಭಾರತದಲ್ಲಿ ವಾಸಿಸುತ್ತಿದ್ದ ಅತಿ ಪುರಾತನ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಅವರು. ಅವರಿಗೆ ಭಾರತ ಸರ್ಕಾರವು ೨೦೧೫ ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದೆ… ಇವರು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ. ೧೨ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ “ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಗಳು. ಮಾರ್ಚ್ ೩, ೧೯೩೦ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೇ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದರು ಅವರು… ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿದ್ದ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿದ್ದರು. ಇವರು ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದರು. ತಮ್ಮ ಮಠದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು, ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದರು… ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮನವರಿಗೆ ಎಪ್ರಿಲ್ ೧, ೧೯೦೮ರಲ್ಲಿ ೧೩ನೇ ಮಗನಾಗಿ ಶಿವಣ್ಣ ಜನಿಸಿದರು. ಎಲ್ಲರಿಗಿಂತಲೂ ಕಿರಿಯರಾದ ಶಿವಣ್ಣನವರೆಂದರೆ ತಂದೆ ತಾಯಿಗಳಿಗೆ ಅಪಾರ ಪ್ರೀತಿ. ವೀರಾಪುರದಲ್ಲಿಯೇ ಇದ್ದ ಕೂಲಿಮಠದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಯಿತು. ಅನಂತರ ಪ್ರಾಥಮಿಕ ಶಾಲೆಗಾಗಿ ಪಕ್ಕದ ಉರಾದ ಪಾಲನಹಳ್ಳಿಯ ಶಾಲೆಗೆ ದಾಖಲಾದರು. ತಮ್ಮ ಪ್ರಾಥಮಿಕಾ ಶಾಲಾ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡ ಶಿವಣ್ಣ ಅನಂತರ ಅಕ್ಕನ ಆಸರೆಯಲ್ಲಿ ಬೆಳೆದರು. ತುಮಕೂರು ಬಳಿ ಇರುವ ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣದ ನಂತರ ೧೯೨೨ರಿಂದ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ೧೯೨೬ರಲ್ಲಿ ಮೆಟ್ರಿಕ್ಯುಲೇಷನ್ ಗಳಿಸಿದರು. ೧೯೨೭ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಉದ್ದಾನ ಶಿವಯೋಗಿಗಳವರೊಡನಾಟ ಆಯಿತು. ಇದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಬೆಂಗಳೂರಿನಲ್ಲಿ ರಾವ್ ಬಹದ್ದೂರ್ ಧರ್ಮಪ್ರವರ್ತ ಶ್ರೀ ಗುಬ್ಬಿ ತೋಟದಪ್ಪ ಧರ್ಮ ಛತ್ರದಲ್ಲಿ ಉಳಿದುಕೊಂಡು, ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾಭ್ಯಾಸದೊಂದಿಗೆ ಸಿದ್ದಗಂಗಾ ಮಠದ ಒಡನಾಟದಲ್ಲಿದ್ದರು. ಹಿರಿಯ ಗುರುಗಳಾದ ಉದ್ಧಾನ ಸ್ವಾಮಿಜಿಗಳ ಹಾಗೂ ಆಗ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗ ಶಿವಣ್ಣನವರಿಗೆ ಒಂದು ಹಿತಾನುಭೂತಿ ನೀಡುತ್ತಿತು. ಶಿವಣ್ಣನವರು ಎಲ್ಲ ಸಮಯಗಳಲ್ಲೂ ಮಠದ ಹಿತವನ್ನು ಬಯಸುತ್ತ ಮಠಕ್ಕೆ ಭೇಟಿಕೊಡುತಿದ್ದರು. ತುಮಕೂರು ಜಿಲ್ಲೆಯಲ್ಲಿ ಭೀಕರ ಪ್ಲೇಗ್ ರೋಗ ಇದ್ದರೂ ಶಿವಣ್ಣನವರ ಹಾಗೂ ಮಠದ ಒಡನಾಟ ಎಂದಿನತೆಯೇ ಇತ್ತು… ಶ್ರೀ ರಕ್ಷೆಯಿಂದ ಉತ್ತಮವಾಗಿ ನಡೆಯುತ್ತಿದ್ದ ಸಿದ್ದಗಂಗಾ ಮಠಕ್ಕೆ ೧೯೩೦ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದರು. ಆಗ ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನರನ್ನು ಉದ್ಧಾನ ಸ್ವಾಮಿಜಿಗಳು ಎಲ್ಲರ ಸಮ್ಮುಖದಲ್ಲಿ ಮಠದ ಉತ್ತರಾಧಿಕಾರಿ ಎಂದು ಘೋಷಿಸಿದರು. ನಂತರ ಕಾವಿ, ರುದ್ರಾಕ್ಷಿಗಳನ್ನು ಧರಿಸಿದ ಸನ್ಯಾಸಿಯಾಗಿ ,ಸನ್ಯಾಸತ್ವ ಸ್ವೀಕಾರದ ನಂತರವೂ ವಿದ್ಯಾಭ್ಯಾಸ ಮುಂದುವರಿಸಿದ ಶಿವಣ್ಣನವರು ಬೆಂಗಳೂರಿಗೆ ಬಂದು ಸನ್ಯಾಸತ್ವದ ರೀತಿ ರಿವಾಜು ಪಾಲಿಸುತ್ತಾ ವಿದ್ಯಾಭ್ಯಾಸ ಮುಗಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸಿದ್ದಗಂಗಾ ಮಠಕ್ಕೆ ಹಿಂದಿರುಗಿದರು, ನಂತರ ತಮ್ಮ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಡುತ್ತಾರೆ. ನಂತರ ಶ್ರೀ ಉದ್ಧಾನ ಶಿವಯೋಗಿಗಳು ಶಿವೈಕ್ಯರಾದಾಗ ಮಠದ ಸಕಲ ಆಡಳಿತ , ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗ ಕ್ಷೇಮದ ಜವಾಬ್ದಾರಿಯೂ ಶ್ರೀಗಳವರಿಗೆ ಹಸ್ತಾಂತರವಾಗುತ್ತದೆ… ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂಧರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದು ವಿಧ್ಯಾರ್ಥಿಗಳ ಸನಿವಾಸ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದಾಯಕವಾಗಿತ್ತು. ಮಠದ ಭೂಮಿಯೆಲ್ಲ ಮಳೆಯಾಧಾರಿತವಾದದ್ದು ಮತ್ತೂ ತೊಡಕಾಗಿ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತ ಶ್ರೀಗಳು ಭಕ್ತರ ಮನೆಗೆ ಭಿನ್ನಹವೇ ಮೊದಲಾದ ಆದ್ಯತೆಗಳ ಮೇರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಧವಸ ಧಾನ್ಯಗಳನ್ನು ತಂದಿದ್ದೂ ಉಂಟು. ಬರಿಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಷ್ಟೇ ಅಲ್ಲದೆ ದಿನ ನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರ ಹಾಗೂ ಗಣ್ಯರ ಭೇಟಿ, ಮಠದ ಅರ್ಥಿಕ ನಿರ್ವಹಣೆಗಳೂ ಸೇರಿ ಶ್ರೀಗಳಿಗೆ ಬಿಡುವಿಲ್ಲದ ಕಾರ್ಯ ಪಟ್ಟಿಯೇ ಇರುತ್ತಿತ್ತು. ಆರಂಭದ ದಿನಗಳಲ್ಲಿ ‘ಶ್ರೀಗಳು ಇವನ್ನೆಲ್ಲ ನಿಭಾಯಿಸಲು ಸಾಧ್ಯವಿಲ್ಲ’ ಎಂಬ ಆಡು ನುಡಿಗಳೂ ಕೇಳಿ ಬಂದಿದ್ದವು. ಇದ್ಯಾವುದಕ್ಕೂ ಧೃತಿಗೆಡದ ಶ್ರೀಗಳು ಪೂಜ್ಯ ಲಿ. ಶ್ರೀ ಅಟವೀ ಸ್ವಾಮಿಗಳ ಹಾಗೂ ಲಿ. ಶ್ರೀ ಉದ್ಧಾನ ಸ್ವಾಮಿಗಳ ಆಶಯದಂತೆ ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು, ಪ್ರಸಾದ ನಿಲಯಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ… ಪ್ರತಿದಿನವೂ ಶ್ರೀಗಳು ಬೆಳಗಿನ ನಾಲ್ಕುಗಂಟೆಗೆ ಎದ್ದು ಸ್ನಾನಮಾಡಿ, ಪೂಜಾ ಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ. ದೂರದಿಂದ ಸ್ವಾಮಿಗಳ ದರ್ಶನಕಾಗಿ ಬರುವ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಿದ್ದರು. ನಂತರ ಆಹಾರ ಸೇವನೆ, ಮುಂಜಾನೆ ಐದೂವರೆ ಗಂಟೆಗೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರುಬೇಳೆ-ತೊವ್ವೆ, ‘ಸಿಹಿ’ ಹಾಗೂ ‘ಖಾರ ಚಟ್ನಿ’ ಸೇವನೆ. ಎರಡು ತುಂಡು ಸೇಬು. ಇದರ ಬಳಿಕ, ‘ಬೇವಿನ-ಚಕ್ಕೆ ಕಷಾಯ’ ಸೇವನೆ ಮಾಡುತ್ತಿದ್ದರು… ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಮಕ್ಕಳಿಂದ ನಡೆಯುವ ಪ್ರಾರ್ಥನೆಯಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಿದ್ದರು. ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪದವಿ ಅಭ್ಯಾಸದಲ್ಲಿರುವ ತರುಣರ ವರೆಗೂ ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದನ್ನು ನೋಡಲು ಕಣ್ಣುಗಳು ಪುಣ್ಯ ಮಾಡಿರಬೇಕು ಅನ್ನುವಂತ ವಾತಾವರಣ ಮಠದ್ದು. ಮಠದ ಆವರಣದಲ್ಲಿರುವ ವಿಧ್ಯಾರ್ಥಿ ನಿಲಯದ ಮುಂದಿರುವ ವಿಶಾಲವಾದ ಬಯಲಿನಲ್ಲಿ ಸಾವಿರಾರು ಜನ ಒಟ್ಟಿಗೆ ಪ್ರಾರ್ಥನೆ ಮಾಡುವುದನ್ನು ನೋಡುವುದೂ ಸಿದ್ಧಗಂಗೆಯ ಒಂದು ಪ್ರಮುಖ ಆಕರ್ಷಣೆ. ಪ್ರಾರ್ಥನೆಯ ನಂತರ ಕಛೇರಿಗೆ ಧಾವಿಸುವ ಶ್ರೀಗಳು ದಿನ ಪತ್ರಿಕೆಗಳನ್ನು ಓದುತ್ತಿದ್ದರು. ಅಲ್ಲಿಗೆ ಬಂದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡುತ್ತಿದ್ದರು. ಮಳೆ-ಬೆಳೆ, ಕುಶಲೋಪರಿ ವಿಚಾರ,ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ,ಪತ್ರವ್ಯವಹಾರಗಳೇ ಮುಂತಾಗಿ ಹಲವಾರು ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರಲ್ಲದೇ ಆ  ಇಳಿವಯಸ್ಸಿನಲ್ಲೂ ಧಣಿವರಿಯದೇ ಕಾರ್ಯನಿರತರಾಗಿ “ಕಾಯಕವೇ ಕೈಲಾಸ” ಎಂದು ನುಡಿಯಲ್ಲಿ ಮಾತ್ರ ಹೇಳದೇ ಹಾಗೆಯೇ ನಡೆಯಲ್ಲೂ ತೋರಿಸಿಕೊಟ್ಟವರಾದ್ದರು… ಅವರುಮಠದ ಪ್ರಸಾದ ನಿಲಯದ ಮುಂಭಾಗದ ಮಂಚದ ಮೇಲೆ ಆಸೀನರಾಗುತ್ತಿದ್ದರು. ಭಕ್ತರ ಕಷ್ಟ-ಸುಖಕ್ಕೆ ಸ್ಪಂದನ, ಮಧ್ಯಾನ್ಹ ಮೂರು ಗಂಟೆಯ ವರೆವಿಗೆ ನಿರಂತರವಾಗಿ ಸಾಗುತ್ತಿತ್ತು. ಮಠಕ್ಕೆ ಭೇಟಿ ಕೊಡುವ ಬಹುತೇಕ ಭಕ್ತರು ರೈತಾಪಿ ವರ್ಗದವರಾದ್ದರಿಂದ ಶ್ರೀಗಳು ಬೇರೆ ಬೇರೆ ಪ್ರದೇಶದಿಂದ ಬಂದ ರೈತರಲ್ಲಿ ಮಳೆ ಬೆಳೆಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ಇದರ ಬಳಿಕ ಶ್ರೀಗಳು, ನೇರವಾಗಿ ಮಠಕ್ಕೆ ಸಾಗಿ, ಸ್ನಾನ ಪೂಜೆಗಳಲ್ಲಿ ಮಗ್ನರಾಗುತ್ತಿದ್ದರು. ಇದರ ಬಳಿಕ, ಒಂದು ಎಳ್ಳಿಕಾಯಿ ಗಾತ್ರದ ಮುದ್ದೆ, ಸ್ವಲ್ಪವೇ ಅನ್ನ, ಮತ್ತು ತೊಗರಿಬೇಳೆ ಸಾಂಬಾರ್ ಊಟಮಾಡುತ್ತಿದ್ದರು. ಸಂಜೆ ೪ ಗಂಟೆಯ ನಂತರ ಪುನಃ ಭಕ್ತಗಣದ ಭೇಟಿ. ಮಠದಲ್ಲಿ ಉಳಿದುಕೊಂಡು ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪರಿ, ದಾಸೋಹದ ಮಾಹಿತಿ ಸುಮಾರು ರಾತ್ರಿ ೯ ಗಂಟೆಯವರೆವಿಗೂ ನಡೆಯುತ್ತಿತ್ತು… ರಾತ್ರಿ ಹತ್ತೂವರೆಗೆ ಸ್ವಾಮೀಜಿ ಮಲಗುವ ವೇಳೆ ಪುಸ್ತಕ ಓದಿ ಮಲಗುವ ಹವ್ಯಾಸವಿಟ್ಟುಕೊಂಡಿದ್ದರು. ಇದು ಕನಿಷ್ಠ ಅರ್ಧ ತಾಸಾದರೂ ನಡೆಯುತ್ತಿತ್ತು. ಹನ್ನೊಂದು ಗಂಟೆಗೆ ಮಲಗುತ್ತಿದ್ದರು. ಓದಿನೊಂದಿಗೆ ಆರಂಭವಾಗುವ ಶ್ರೀಗಳ ದಿನಚರಿ, ಓದಿನೊಂದಿಗೆ ಮುಕ್ತಾಯವಾಗುತ್ತಿತ್ತು. ಹಲವು ದಿನಗಳಲ್ಲಿ, ಕೆಲವಾರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿ ನೀಡುತ್ತಿದ್ದರು. ದೂರದ ಊರುಗಳಿಗೂ ಓಡಾಡುತ್ತಿದ್ದರು. ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಮಾತ್ರ ಬಿಸಿನೀರು ಸೇವಿಸುತ್ತಿದ್ದರು. ಬಾಕಿ ಸಂದರ್ಭದಲ್ಲಿ ಏನನ್ನೂ ಸೇವಿಸುತ್ತಿರಲಿಲ್ಲ. ಕಳೆದ ೮ ದಶಕಗಳ ಜೀವನ ಇದೇ ರೀತಿ ಸಾಗಿತು. ಶ್ರೀಗಳ ಆರೋಗ್ಯವೂ ಚೆನ್ನಾಗಿಯೇ ಇತ್ತು. ಅದೇ ಸಮಯದಲ್ಲಿ ಶ್ರೀಗಳವರ ಮೇಲೆ ಒಂದು ಸಾಕ್ಷ್ಯಚಿತ್ರ ತಯಾರಿಸಿದ್ದಾರೆ… ಅವರು ಶಿಕ್ಷಣ ಮತ್ತು ತರಬೇತಿಗಾಗಿ ಒಟ್ಟು 132 ಸಂಸ್ಥೆಗಳನ್ನು ಸ್ಥಾಪಿಸಿದರು, ನರ್ಸರಿಯಿಂದ ಎಂಜಿನಿಯರಿಂಗ್, ವಿಜ್ಞಾನ, ಕಲೆ ಮತ್ತು ನಿರ್ವಹಣೆ ಜೊತೆಗೆ ವೃತ್ತಿಪರ ತರಬೇತಿಯೂ ಸಹ ಇದೆ. ಅವರು ಸಂಸ್ಕೃತದ ಸಾಂಪ್ರದಾಯಿಕ ಕಲಿಕೆಯಲ್ಲಿ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದರು.ಅವರ ಪರೋಪಕಾರಿ ಕೆಲಸಕ್ಕಾಗಿ ಅವರು ಎಲ್ಲಾ ಸಮುದಾಯಗಳಿಂದ ವ್ಯಾಪಕವಾಗಿ ಗೌರವಿಸಲ್ಪಟ್ಟರು. ಸ್ವಾಮಿ ಅವರ ಮಠದಲ್ಲಿ ೧೦೦೦೦ ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದೆ. ೫ ವಯಸ್ಸಿನಿಂದ ೧೬ ವರ್ಷ ವಯಸ್ಸಿನ ಯಾವುದೇ ಹಂತದಲ್ಲಿ ಮತ್ತು ಉಚಿತ ಆಹಾರ, ಶಿಕ್ಷಣ ಮತ್ತು ಆಶ್ರಯ (ತ್ರಿವಿಧ ದಾಸೋಹ) ಅನ್ನು ಒದಗಿಸುವ ಎಲ್ಲ ಧರ್ಮ, ಜಾತಿ ನೋಡದೇ ಎಲ್ಲಾ ಮಕ್ಕಳಿಗೆ ತೆರೆದಿರುತ್ತದೆ. ಮಠದ ಯಾತ್ರಾರ್ಥಿಗಳು ಮತ್ತು ಸಂದರ್ಶಕರು ಕೂಡಾ ಉಚಿತ ಊಟದ ವ್ಯವಸ್ಥೆ ಇದೆ. ಮಠಾಧೀಶ ಮಾರ್ಗದರ್ಶನದಲ್ಲಿ, ವಾರ್ಷಿಕ ಕೃಷಿ ಜಾತ್ರೆಯನ್ನು ಸ್ಥಳೀಯ ಜನಸಂಖ್ಯೆಯ ಅನುಕೂಲಕ್ಕಾಗಿ ನಡೆಸಲಾಗುತ್ತದೆ. ಕರ್ನಾಟಕ ಸರಕಾರವು 2007 ರಿಂದ ಶಿವಕುಮಾರ ಸ್ವಾಮೀಜಿ ಪ್ರಶಸ್ತಿಯನ್ನು ಸ್ವಾಮೀಜಿಯ ಶತಮಾನೋತ್ಸವದ ವಾರ್ಷಿಕೋತ್ಸವವನ್ನು ಘೋಷಿಸಿತು. ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತುಮಕೂರಿಗೆ ಭೇಟಿ ನೀಡಿದರು ಮತ್ತು ಶಿಕ್ಷಣ ಮತ್ತು ಮಾನವೀಯ ಕೆಲಸದಲ್ಲಿ ಸ್ವಾಮಿಯ ಉಪಕ್ರಮಗಳನ್ನು ಶ್ಲಾಘಿಸಿದರು… ಸ್ವಾಮೀಜಿಯವರ ಜಾತ್ಯಾತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ ೧೯೬೫ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.ಪೂಜ್ಯ ಸ್ವಾಮೀಜಿಯವರ ೧೦೦ ನೆ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ.2015ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.2017 ರಲ್ಲಿ, ಕರ್ನಾಟಕ ಸರಕಾರ ಮತ್ತು ಅವರ ಭಕ್ತರು ಸ್ವಾಮೀಜಿಯವರ ಸಾಮಾಜಿಕ ಸೇವೆಗಾಗಿ ಅವರಿಗೆ ಭಾರತ ರತ್ನ ನೀಡಲು ಮನವಿ ಮಾಡುತ್ತಾರೆ. ಕರ್ನಾಟಕದ ಆಗಿನ ಸಂದರ್ಭದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸ್ವಾಮಿಜಿಯವರ ಮಾನವೀಯ ಕೆಲಸದ ಗುರುತಿಸುವಿಕೆಗಾಗಿ ‘ಭಾರತ ರತ್ನ’ವನ್ನು ನೀಡಲು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು… ಸ್ವಾಮೀಜಿಯವರ ಬಗ್ಗೆ ಜಿ.ಎಸ್.ಶಿವರುದ್ರಪ್ಪನವರುಸದ್ದು ಗದ್ದಲವಿರದ ಸಾಧನೆಯಿಲ್ಲಿ ಗದ್ದುಗೆಯೇರಿದೆ ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ ಎಂದೆಲ್ಲಾ ಕಾವ್ಯ ರಚಿಸಿದ್ದರು… ವಯೋಸಂಬಂಧಿ ಅನಾರೋಗ್ಯದಿಂದ ಬಳಲಿದ ಸ್ವಾಮೀಜಿಯವರನ್ನು ಹೃದಯಕ್ಕೆ ಸ್ಟಂಟ್ ಅಳವಡಿಸುವುದಕ್ಕೋಸ್ಕರ ೨೦೧೮ರ ಡಿಸೆಂಬರ್ ನಲ್ಲಿ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸ್ವಾಮೀಜಿ ಮಠಕ್ಕೆ ಹಿಂದಿರುಗಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಶ್ವಾಸಕೋಶ ಸೋಂಕಿನಿಂದ ಬಳಲಿದ ಶ್ರೀಗಳನ್ನು ಮತ್ತೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅರೋಗ್ಯ ಸುಧಾರಿಸಿದ

‘ಸ್ವಾತ್ಮಗತ’ Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ನನಗೊಂದು ಹವ್ಯಾಸ. ಪ್ರತಿವರ್ಷ ಮೊದಲನೆಯ ದಿನವೇ ಮಕ್ಕಳಲ್ಲಿ ನನ್ನ ಬಗ್ಗೆ ನನಗಿಷ್ಟ ಬರುವ ರೀತಿಯಲ್ಲಿ ಚಾಪು ಮೂಡಿಸುವುದು.ಈ ಬಾರಿ ನಾನು ತುಂಬ ಜೋರು ಎಂಬ ಭಯ ಹುಟ್ಟಿಸೋದು ನನ್ನ ಗುರಿಯಾಗಿತ್ತು. ಕ್ಲಾಸಿನೊಳಗೆ ಬೆಂಕಿಯಂತೆ ನುಗ್ಗಿದೆ. Quiiiiiiiiete! Which category of animals do you belong ? Shameless fellows…what are you looking at? Atleast have the courtesy of wishing! What? should I teach you that  too!!!ಫುಲ್ಲು ಸಿಟ್ಟು ತೋರಿಸುತ್ತಾ ಇಡೀ ಕ್ಲಾಸ್ ತಬ್ಬಿಬ್ಬಾಗಿ ನನ್ನ ನೋಡುವುದನ್ನು ಕಂಡು ಒಳಗೊಳಗೆ ನಗು ನಂಗೆ. ಎಲ್ಲರಂತೆ ಇವಳು ಹೆದರಿದ್ದಳು ಬೇಕಂತಲೇ ಅವಳನ್ನು ನೋಡುತ್ತಾ ಇದು ಸ್ಕೂಲಲ್ಲ ಕಾಲೇಜ್! ಅಂದೆ..      ಬಲೂನ್ ಒಳಗಿನ ಗಾಳಿ ಹೊರಗೆ ಹೋದರೆ ನೆಪ್ಪೆಯಾಗುವಂತೆ ಆದರು. ಸಹಜವಾಗಿ ಇಂಥ ಸಮಯದಲ್ಲಿ ಯಾರೂ ಧೈರ್ಯವಾಗಿ ಮಾತಾಡಲ್ಲ, ಇವಳು “ನೀವು ಕ್ಲಾಸ್ ಟೀಚರ್ರಾ” ಅಂತ ಕೇಳೇ ಬಿಟ್ಲು! ನಾನು “ನಿಮಗ್ಯಾಕೆ ?ಯಾರಾದ್ರೇನು ಬಿಹೇವಿಯರ್ ಇಸ್ ಇಂಪಾರ್ಟೆಂಟ್” ಅಂದೆ. ಮನಸಲ್ಲಿ ಖುಷಿಯಾಯಿತು…. ಇಂದಿನ ಯುಗದ ದೈರ್ಯಶಾಲಿ ನಾರಿಯಾಗುವಳು ಅನ್ಕೊಂಡೆ.  ಇದೊಂದು ಹೊಸ ಹುರುಪಿನವಳು ನನ್ನ ಕ್ಲಾಸಿಗೆ ಆ ವರ್ಷ…ನಿಂತಲ್ಲಿ ನಿಂತರೆ ಕೂತಲ್ಲಿ ಕೂತರೆ ಅಂದು ಸೂರ್ಯ ಪಶ್ಚಿಮದಲ್ಲಿ ಹುಟ್ಟಿಬಿಡುತ್ತಾನೆ. ಚಿಟಿ ಪಿಟಿಪಿಟಿಪಿಟಿ ಮಾತು, ಪ್ರಶ್ನೆಗಳ ಒಂದು ಸಣ್ಣ ಪಿಟಾರಿ,ಬಹುಶಃ ಒಬ್ಬಳೇ ಮಗಳಿರ್ಬೆಕು ಬಹಳ ಮುದ್ದಿನಲ್ಲಿ ಸಾಕಿರಬಹುದು ಅನ್ಕೊಂಡೆ. ಓದುವುದಷ್ಟೇ ಅಲ್ಲ ಹಾಡು, ನೃತ್ಯ, ಬೇರೆ ಕಲೆಗಳು, ಆಟ, ಎಲ್ಲಾದ್ರಲ್ಲೂ ಭಾಗವಹಿಸುವಳು.. ಅಷ್ಟೇ ಅಲ್ಲ ಸರಿ-ತಪ್ಪುಗಳು ಸಂಬಂಧಗಳ ವಿಶ್ಲೇಷಣೆಗಳು ಜೀವನ ಇತ್ಯಾದಿ, ಇತ್ಯಾದಿ, ಪ್ರಶ್ನೆಗಳು… ಕ್ಲಾಸ್ ಲೀಡರ್ ಆದ್ಮೇಲಂತೂ ನನಗೆ ಏನನ್ನೂ ನೆನಪಿಟ್ಕೊಳ್ಳೋ ಗೋಜೇ ಇರ್ಲಿಲ್ಲ. ಅವಳೇ ಒಂದು ಸಣ್ಣ ಲ್ಯಾಪ್ಟಾಪ್. ಲವ್ಲವಿಕೆ ಕುತೂಹಲ ಚುರುಕುತನ ಎಲ್ಲಾ ನೋಡಿ ಅವಳಿಗೆ ಒಂದು ಪೆಟ್ನೆಮ್ ಇಟ್ಬಿಟ್ಟೆ. ನಾನು ಮಾತ್ರ ಹಾಗೆ ಕರಿತ್ತಿದ್ದೆ.. ಆ ಒಂದು ದಿನ ಲ್ಯಾಬ್ ಒಳಗೆ ಕಲ್ಲು ಬಂಡೆಯಂತೆ ಮುಖ ಗಂಟು ಹಾಕಿಕೊಂಡು ಒಳಗೆ ಬಂದ್ಲು…ಮನಸಲ್ಲಿ ಅನ್ಕೊಂಡೆ ಈಗ ಒಂದು ವಾಲ್ಕೆನೊ ಇರಪ್ಟ್ ಆಗಬಹುದು ಅಂತ…ಏನಾಯ್ತೇ…ಕೂಗಾಡ್ತಾಳೆ, ಬೈತಾಳೆ, ಅನ್ಕೊಂಡ್ರೆ, ರಾಣಿ ಉಲ್ಟಾ! ಜೋರು ಅಳು ಬರ್ತಿದೆ, ಅದನ್ನ ಮುಚ್ಚಿಟ್ಕೊಳ್ಳೋ ಹಠ ಬೇರೆ. ಮುದ್ದು ಬಂದ್ಬಿಡ್ತು ಆ ಮಗು ಮೇಲೆ…ನನ್ನದೇ ಒಂದು ರೂಪ ಅವಳಲ್ಲಿ ನೋಡ್ದಂಗಾಯ್ತು…   ಸುಮ್ನೆ ಹೇಳ್ದೆ “ನನಗೆ ಅಹಂಕಾರ ಜಾಸ್ತಿ, ನಾನು ಯಾರ ಎದುರು ಅಳಲ್ಲಾ, ನನ್ನ ನೋವು ಹೇಳಿಕೊಳ್ಳಲ್ಲಾ.. ಯಾಕೆ ಹೇಳಬೇಕು ಅಲ್ವಾ…?” , “ನಾನು ಅಷ್ಟೇ ಮಿಸ್? ನಾನು ಯಾರಿಗೂ ಹೇಳಲ್ಲ” ಅಂದ್ಲು…ಅವಳ ಕಣ್ಣಂಚಲ್ಲಿ ದೊಡ್ಡ ಹೊಳೆ ಕಾಣ್ತಿದೆ. “Good ಅಲ್ಲೆಲ್ಲಾರು ಕೂತ್ಕೋ ಅಳು ಬಂದರೆ ಅಳು. ನಾನು ನೋಡಲ್ಲ, ಆಮೇಲೆ ಬರ್ತೀನಿ” ಅಂದೆ. ಪರ್ವಾಗಿಲ್ಲ ಮಿಸ್ ನಿಮ್ಮತ್ರ ಏನು, ಅಂತ ಹೇಳಿಕೊಂಡು ಅವಳು, ‘ಅವಳ ಸ್ನೇಹಿತ ಇನ್ನಿಲ್ಲ’ ಎಂಬ ವಿಷ್ಯ ಹೇಳಿದ್ಲು, ಜೊತೆಗೆ ಅವನ ಬಗ್ಗೆ ಅಸಂಬಧ ಮಾತಾಡ್ತಿರೋರ ಮೇಲೆಲ್ಲಾ ಸಿಟ್ಟು ಕೂಡ ತೋರ್ಸಿದ್ಲು… ನಾನು ಬಿಟ್ಟೆ ಮನಸಲ್ಲಿರೋ ನೋವೆಲ್ಲ ಹೊರಗೆ ಬಂದು ಬಿಡ್ಲಿ, ಮನಸ್ಸು ಹಗುರ ಆಗುತ್ತೆ ಅಂತ…ಅದ್ರ ಜೊತೆ ಒಂದು ಬಾಂಬ್ ಬಿತ್ತು…, “ನಾನು ಇಷ್ಟಪಡೋರೆಲ್ಲಾ  ನನ್ನಿಂದ ದೂರ ಹೋಗ್ತಾರೆ,ನನಗೆ ಇಷ್ಟ ಪಡೋಕೆ ಭಯ, ನಾ ಇನ್ಮಲೆ ಯಾರನ್ನೂ ಇಷ್ಟಪಡೊದಿಲ್ಲ, ನಾನೊಬ್ಬಳೇ ಇದ್ಬಿಡ್ತೀನಿ”… ವಾಹಾ! ಗಾಂಪೆ, ಅಂತ ಮನಸಲ್ಲಿ ಹೇಳಿಕೊಂಡು ಪರಿಸ್ಥಿತಿ ಅರ್ಥ ಮಾಡಿಕೊಂಡೆ.. ಸ್ವಲ್ಪ ಹೊತ್ತು ಬಿಟ್ಟು…. ಆಯ್ತಾ ಅತ್ತಿದ್ದೆಲ್ಲಾ…ಯಾರ್ನೆಲ್ಲ ಪ್ರೀತಿಸ್ತಿದ್ಯೆ ರಾಣೀsssss? ಯಾರೆಲ್ಲ ಬಿಟ್ಟು ಹೋದ್ರೆ ನಿನ್ನಾ? ಅಂತ ಕೇಳ್ದೆ. ಒಂದೊಂದೇ ಹೆಸರು, ಅದರ ಹಿಂದಿನ ಕಥೆಗಳು, ಎಲ್ಲಾ ಬಂತು.. ಸರಿ ಅವರೆಲ್ಲಾ ನಿನಗೆ ಯಾಕೆ ಇಷ್ಟ ಆದ್ರು ಒಂದೊಂದೇ ಹೇಳು ನೋಡೋಣ..……..ಒಳ್ಳೆ ಮಾತಾಡ್ತಿದ್ರು, ………ಪಟಪಟ ಅಂತ,……. ತುಂಬಾ ಸಹಾಯ ಮಾಡೋರು…. ಎಲ್ಲರನ್ನು ಸಂತೋಷವಾಗಿಡ್ತಿದ್ರು ……ಸಂಬಂಧಗಳಿಗೆ ಬೆಲೆ ಕೊಡ್ತಿದ್ರು,…… ಸಣ್ಣಸಣ್ಣ ಕೆಲಸದಲ್ಲಿ ಸಂತೋಷ ಹಂಚಬಹುದು ಅಂತ ಗೊತ್ತಿತ್ತು…. ಹಾಡು, ನೃತ್ಯ ನಾಟಕ, ಇತ್ಯಾದಿತ್ಯಾದಿ..  ಅಯ್ಯೋ ಬಂಗಾರಿsssss, ಇದೆಲ್ಲ ನಿನ್ನಲ್ಲೇ ಇದ್ಯಲ್ಲೇ.. ಅದಕ್ಕೆ ನಾನು ನಿನ್ನ “…..” ಅಂತ ಕರೆಯೋದು. ಯಾರೂ ನಿನ್ನ ಬಿಟ್ಟು ಹೋಗಿಲ್ಲ, ನಿನ್ನೊಳಗೇ ಇದ್ದಾರೆ! ಅವಳಿಗೇನೋ ಸಮಾಧಾನ ಆಯ್ತು ನನ್ನ ಮಾತು ಕೇಳಿ.ಅಂದು ಮೊಳಕೆಯಾಗಿ ನೋಡಿದ ಅವಳನ್ನು ಈಗ ಮರವಾಗಿ ನೋಡಿದರೆ ಹೆಮ್ಮೆಯಾಗುತ್ತೆ!!  “ಜೀವನದಲ್ಲಿ ಯಾರು ಎಷ್ಟೇ ಮಾನಸಿಕವಾಗಿ, ದೈಹಿಕವಾಗಿ ,ಸಾಮಾಜಿಕವಾಗಿ ಬಲಿಷ್ಠರಾಗಿದ್ದರೂ, ಅವರ ಕುಗ್ಗಿದ ಸಮಯದಲ್ಲಿ ಪ್ರಿಯರ ಒಡನಾಟ, ಪ್ರೀತಿ, ಸಹಾಯ, ಅತಿಮುಖ್ಯ…ಅಂತಹ ವಿಶೇಷ ಚೇತನಗಳಿಗೆ ಸುಮ್ನೆ ಕೈ ಹಿಡಿದರೆ ಸಾಕು ಹಾರುವ ಸಾಮರ್ಥ್ಯ ಅವರೊಳಗೆ ಇರುತ್ತದೆ ”. ——————————————————-

ಅವ್ಯಕ್ತಳ ಅಂಗಳದಿಂದ Read Post »

ಅಂಕಣ ಸಂಗಾತಿ

ಹೊತ್ತಾರೆ

ಅಮ್ಮನೂರಿನ ನೆನಪುಗಳು ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ರಂಗ ತಿಮ್ಮರಿಗೆ ನಿಯಂತ್ರಣದ ಅಥವಾ ಮೇಲ್ವಿಚಾರಣೆಯ ಅವಶ್ಯಕತೆಯೂ ಇರಲಿಲ್ಲ. ಗುಡ್ಡದಂತಿದ್ದ ನಮ್ಮ ಊರಿನಲ್ಲಿ ನೀರಿನ ವ್ಯವಸ್ಥೆಗೆ ಇದ್ದದ್ದು ಎರಡು ಕೈಪಂಪು (ಬೋರ್ ವೆಲ್) ಮತ್ತೊಂದು ಸೇದುವಬಾವಿ.  ನಮ್ಮ ಮನೆ ಗುಡ್ಡದ ತುದಿಯಲ್ಲಿದ್ದ ಮತ್ತು ಊರಿನ ಹಿಂಭಾಗದಲ್ಲಿದ್ದ ಕಡೇ ಮನೆ.  ಬಾವಿ ಮತ್ತು ಬೋರ್ ವೆಲ್ ಗಳು ಊರಿನ ಮುಂದಿನ ಭಾಗದಲ್ಲಿದ್ದವು. ನೀರು ಹೊರುವುದು ಒಂದು ಫಜೀತಿ. ಹಾಗಾಗಿ  ಗಾಡಿಯ ಮೇಲೆ ಬ್ಯಾರೆಲ್ ಇರಿಸಿ ನೀರು ತರುವುದು ನಮ್ಮ ಮನೆಯ ರೂಢಿ. ತಿಮ್ಮ ರಂಗರ ಬಗ್ಗೆ ಮನೆಯಲ್ಲಿ ದೊಡ್ಡವರಿಗೆ ಇದ್ದ ನಂಬಿಕೆಯೆಷ್ಟೆಂದರೆ, ನೀರು ತರಲು ಗಾಡಿ ಕಟ್ಟಬೇಕೆಂದರೆ, ಮೂಕಿ ಎತ್ತಿ ರಂಗ ತಿಮ್ಮರ ಕೊರಳಿಗೆ ನೊಗ ಏರಿಸುವವರೆಗೆ ಮಾತ್ರ ದೊಡ್ಡವರು ಬೇಕಾಗಿತ್ತು. ಎಷ್ಟೋ ಬಾರಿ ನಾನು ನನ್ನ ಜೊತೆಯ ಗೆಳೆಯರೇ ಗಾಡಿ ಏರಿ ನಾವೇ ನೀರು ತರುತ್ತೇವೆಂದು ಮನೆಯವರನ್ನು ಪೀಡಿಸುತ್ತಿದ್ದೆವು. ಗಾಡಿ ಮೇಲೆ ದೊಡ್ಡವರಿಲ್ಲದೇ ನಾನೇ ಗಾಡಿ ಹೊಡೆಯುವುದು ಒಂದು ಹೆಮ್ಮೆ. ಆಗಿನ ಮನಸ್ಥಿತಿಗೆ ಅದೊಂಥರಾ ಸೂಪರ್ ಬೈಕ್ ರೈಡ್ ಅಥವಾ ಫೆರ್ರಾರಿ ಓಡಿಸಿದಷ್ಟು ಖುಷಿ. ರಂಗ ತಿಮ್ಮರ ಮೇಲಿನ ನಂಬುಗೆಯಿಂದ ಮನೆಯವರು ಅದಕ್ಕೆ ಅಡ್ಡಿಮಾಡುತ್ತಲೂ ಇರಲಿಲ್ಲ. ಗಾಡಿಯ ಮೇಲೆ ಯಾರಿಲ್ಲದಿದ್ದರೂ, ಹೋಗಬೇಕಾದ ಜಾಗ ಕಿವಿಗೆ ಬೀಳುವಂತೆ ಹೇಳಿದರೆ ಸಾಕಾಗಿತ್ತು ರಂಗ ತಿಮ್ಮರಿಗೆ.  ಅದರಲ್ಲೂ ಊರಿನ ಒಳಗೆ, ಊರು ಸುತ್ತಮುತ್ತ ಅಂದರೆ, ಈ ಜೋಡಿಗೆ ನಡುಮನೆಯಿಂದ ಅಂಗಳಕ್ಕೆ ಬಂದಷ್ಟೇ ಸಲೀಸು. ಆದರೆ ಯಾವಾಗಲೂ ಒಂದು ಪರ್ಮನೆಂಟ್ ವಾರ್ನಿಂಗ್ ಇರುತ್ತಿತ್ತು. ಕಲ್ಹಳ್ಳಿ ಎತ್ತನ್ನ ಕೆಣಕೋ ಹಾಗಿಲ್ಲ,  ಅಂದರೆ  ತಿಮ್ಮನನ್ನು ಮುಟ್ಟುವ ಹಾಗೂ ಇಲ್ಲ. ಕಟ್ಟೆಅರಸಮ್ಮನ ಗುಡಿ ಯಾವಾಗಲೋ ಅಪರೂಪಕ್ಕೆ ಹೋಗುವಂತಹ ಜಾಗ. ಆವತ್ತು ಹೊರಟಿದ್ದವರಲ್ಲಿ ತಾತನಿಗಷ್ಟೇ ಗೊತ್ತಿದ್ದು. ತಾತ ಗಾಡಿ ಮುಂದೆ ಕುಳಿತು ಹುಂ ನಡಿರಿ ಎಂದಿದ್ದೇ. ರಂಗ ತಿಮ್ಮರ ಕೊರಳಿನ ಗೆಜ್ಜೆ ಮತ್ತು ಗೊರಸಿಗೆ ಕಟ್ಟಿದ ಹಲ್ಲೆಯ ಟುಕ್ಕು ಬುಕ್ಕು ಸದ್ದು ಶುರುವಾಯ್ತು. ಮನೆಯಿಂದ ಎಡಕ್ಕೆ ತಿರುಗುವಂತೆ ತಾತ ಸೂಚಿಸಿದಂತೆ ರಂಗ ತಿಮ್ಮರ ಜೋಡಿ ತೋಟದ ಹಾದಿ ಹಿಡಿಯಿತು. ಆ ದಾರಿಯು ತೋಟದ ನಡುವೆ ಹಾದು ದೇವಮ್ಮನ ಗುಡಿ ದಾಟಿ ಪಕ್ಕದೂರಿನ ಅಡ್ಡರಸ್ತೆಯ ಮೂಲಕ ಬೋರ್ಡ್ ಗಲ್ಲಿನ ಹತ್ತಿರ ಬಲಕ್ಕೆ ತಿರುಗಿ ರಾಜ್ಯ ಹೆದ್ದಾರಿಯಲ್ಲಿ ಮುಂದೆ ಸಾಗಿ ಡ್ಯಾಮ್ ಮುಂದಿರುವ ಸೇತುವೆಯ ಮೂಲಕ ಹೊಳೆ ದಾಟಿ ಅದರಾಚಿನ ತಾಲ್ಲೂಕಿನಲ್ಲಿರುವ ಗುಡಿ ತಲುಪಬೇಕಾಗಿತ್ತು.  ಮನೆಯಿಂದ ಹೊರಟಾಗ ತಾತ ಕೊಟ್ಟಿದ್ದು ಒಂದೇ ಸೂಚನೆ. ರಾತ್ರಿ ಹೊತ್ತಾಗಿದ್ದರಿಂದ ರಂಗ ತಿಮ್ಮರು ಬೋರ್ಡ್ ಗಲ್ಲಿನ ಬಳಿಯಿರುವ ಭತ್ತದ ಗಿರಣಿ ಇರಲಾರದು ಎಂದು ಗೊತ್ತುಮಾಡಿಕೊಂಡು ತಾವೇ ಬಲಕ್ಕೆ ತಿರುಗಿ ಮುಂದೆ ಸಾಗತೊಡಗಿದವು.  ಅಪರೂಪಕ್ಕೆ ಬಸ್ಸು, ಲಾರಿಗಳು ಹಾದು ಹೋಗುತ್ತಿದ್ದವು.  ತಾತನಿಗೆ ಮನೆಯಿಂದ ಹೊರಟು ತೋಟ ದಾಟುವಷ್ಟರಲ್ಲಿ ನಿದ್ರೆ ಹತ್ತಿತ್ತು. ರಂಗ ತಿಮ್ಮರು ಹತ್ತು ಕಿಲೋಮೀಟರ್ ನಲ್ಲಿ  ಹೊಳೆ ದಡದ ಊರಿನಲ್ಲಿ ಇದ್ದ ನಮ್ಮ ನೆಂಟರ ಮನೆಯ ಅಡ್ಡದಾರಿಯಲ್ಲಿ ಎಡಕ್ಕೆ ತಿರುಗಿದವು. ಮುತ್ತಜ್ಜಿಗೆ  ಹೆದ್ದಾರಿಯ ವಾಹನಗಳ ತೀಕ್ಷ್ಣ ಬೆಳಕಿನಿಂದಾಗಿ  ನಿದ್ರೆ ಹತ್ತಿರಲಿಲ್ಲ… ನಾನು ರಂಗ ತಿಮ್ಮರ ಕೊರಳಿನ ಗೆಜ್ಜೆಯನ್ನೇ ಆಲಿಸುತ್ತಾ ಇನ್ನೇನು ತೂಕಡಿಕೆಯ ಹೊಸ್ತಿಲಲ್ಲಿದ್ದೆ.  “ಏಯ್ ತಮ್ಮಯ್ಯ ಎಡಕ್ಕೆ ತಿರುಗ್ತಾವೆ ಎತ್ತು ನೋಡೋ. ಆಗಲೇ ನಿದ್ದೆ ಇವ್ನಿಗೆ” ಅಂದರು ಮುತ್ತಜ್ಜಿ.   ತಾತ ತಡಿಕೆಗೆ ಒರಗಿಕೊಂಡಿರುವುದು ಒಂಚೂರೂ ಅಲುಗದಂತೆ  ಹಾಗೆಯೇ ಹಗ್ಗದಲ್ಲೇ ಸೂಚಿಸಿ ಮತ್ತೆ ರಾಜ್ಯ ಹೆದ್ದಾರಿಯ ಕಡೆ ದಾರಿ ಬದಲಿಸಿದರು.  ಹೀಗೆ, ರಂಗ ತಿಮ್ಮರು ತಮಗೆ ನೆನಪಿಲ್ಲದ ಜಾಗಕ್ಕೆ ಲಾಟೀನಿನ ಬೆಳಕಿನಲ್ಲಿ ಗಾಡಿ ಎಳೆಯುತ್ತಾ ಕವಲುದಾರಿಯಲ್ಲಿ ಎಡಕ್ಕೋ ಬಲಕ್ಕೋ ಅನ್ನುವ ಅನುಮಾನದಿಂದ ತಾತನ ಸೂಚನೆ ಕಾಯುತ್ತಾ ಒಂದೆರಡು ಕಡೆ ನಿಂತು, ಸಾಗಿ, ಬೆಳಗಿನ ಜಾವಕ್ಕೆ ಗುಡಿ ತಲುಪಿದೆವು. ತಾತನೂ  ಸೇರಿ ಗಾಡಿಯಲ್ಲಿದ್ದ ಎಲ್ಲರೂ ಮೂರ್ನಾಲ್ಕು ಗಂಟೆ ನಿದ್ರಿಸಿದ್ದೆವು.  ಗುಡಿಗೆ ಬಂದ ನಂತರ ಮುತ್ತಜ್ಜಿಯ ಹರಕೆಯನ್ನು ಸಾಂಗವಾಗಿ ಮುಗಿಸುವವರೆಗೂ, ಗಾಡಿಯ ಹಿಂಬದಿಯಲ್ಲಿದ್ದ ಹುಲ್ಲು ತಿನ್ನುತ್ತಾ  ಸ್ವಲ್ಪ ಹೊತ್ತು ನಿಂತು, ನಂತರ ಮಲಗಿ ದಣಿವಾರಿಸಿಕೊಂಡ ರಂಗತಿಮ್ಮರು ಮಧ್ಯಾಹ್ನದ ಹೊತ್ತಿಗೆ ಮನೆ ಕಡೆ ಹೊರಡಲು ಸಿದ್ಧವಾಗಿದ್ದವು. ವಾಪಸ್ಸು ಬರುವಾಗ “ತಾತ, ನಾನ್ ಗಾಡಿ ಹೊಡಿತಿನಿ” ಅಂದಿದ್ದಕ್ಕೆ, ಸರಿ ಅಂತ್ಹೇಳಿ ಅಡ್ಡತಡಿಕೆ ಮೂಕಿಯ ಮಧ್ಯೆ  ನನ್ನ ಕಾಲಿಳಿಸಿ, ನನ್ನ ಹಿಂದೆ ತಾತ ಕೂತರು. “ಮುಟ್ಟೋದು ಗದರೋದು ಮಾಡಬೇಡ, ದಾರಿ ಗೊತ್ತೈತೆ ಅವಕ್ಕೆ” ಅಂದು ತಾತ ಮುತ್ತಜ್ಜಿಯ ಮತ್ತು ಮನೆಯವರ ಜೊತೆ ಮಾತಿಗೆ ಕೂತರು. ಕತ್ತಲಾಗುವ ಹೊತ್ತಿಗೆ ಪಿಕ್ನಿಕ್ ಮುಗಿಸಿ ಮನೆ ತಲುಪಿದ್ದೆವು. ರಂಗ ತಿಮ್ಮ ಎಳೆಯುವ ಗಾಡಿಯಲ್ಲಿ ಸಾರಥಿ ಯಾರೇ ಆಗಿದ್ದರೂ ಅದು ನೆಪಕ್ಕೆ ಮಾತ್ರ.  ತೀರಾ ಇಳಿಜಾರು… ಹೊಲಗದ್ದೆಯ ಅಂಕುಡೊಂಕಾದ ದಾರಿಗಳು, ಗಾಡಿಜಾಡು ಇಲ್ಲದ ಹೊಲದ ಬದುಗಳಲ್ಲಿ ಗಾಡಿ ಹೊಡೆಯಬೇಕಾದಾಗ ಮಾತ್ರ  ಗಾಡಿಯ ಸುರಕ್ಷತೆಗಾಗಿ ಅನುಭವ ಇರುವವರ ಅಗತ್ಯವಿರುತ್ತಿತ್ತು. ಒಂದು ಗಾಡಿಗೆ ಗರಿಷ್ಟಮಟ್ಟಕ್ಕೆ ತುಂಬಬಹುದಾದ ಹೊರೆಯನ್ನು ನಿರಾಯಾಸವಾಗಿ ಎಳೆಯುತ್ತಿದ್ದ ರಂಗ ತಿಮ್ಮರಿಗೆ ತುಂಬಾ ಭಾರ ಅನಿಸಬಹುದಾದ ಹೊರೆ ಹೊರಿಸಲು ಮುಂದಾದರೆ, ಗಾಡಿ ಮುರಿದುಬೀಳುತ್ತಿತ್ತೇ ಹೊರತು, ಅವುಗಳಿಗೇನೂ ಕಷ್ಟವಾಗುತ್ತಿರಲಿಲ್ಲ. ಹೊಲಗದ್ದೆ ಉಳುಮೆಯಿಂದ ಹಿಡಿದು, ಯಾವುದೇ ಕೃಷಿ ಕೆಲಸವೂ ರಂಗ ತಿಮ್ಮರಷ್ಟು ಬೇಗನೆ ಅಕ್ಕ ಪಕ್ಕದ ಮನೆಯವರ ಎತ್ತುಗಳಿಂದ ಸಾಧ್ಯವಾಗುತ್ತಿರಲಿಲ್ಲ. ಹೊತ್ತು ಇಳಿಯುತ್ತಿದೆ ಬೇಗ ಕೆಲಸ ಮಾಡಬೇಕು ಅಂದರೆ ಅತಿ ಬಿರುಸಾಗಿಯೂ, ಸೂಕ್ಷ್ಮವಾದ ಕೆಲಸಗಳಿದ್ದರೆ ಅತಿ ಜಾಗರೂಕವಾಗಿಯೂ ನಡೆದಾಡುವ ಕೌಶಲ್ಯ ರಂಗ ತಿಮ್ಮರಿಬ್ಬರಿಗೂ ಮೈಗೂಡಿತ್ತು. ಜೊತೆಗೆ ಎಲ್ಲ ಎತ್ತುಗಳಂತೆ ಎಡಗೋಲು ಅಥವಾ ಬಲಗೋಲು ಎಂಬ ಶಿಷ್ಟಾಚಾರವೇನೂ ಇರಲಿಲ್ಲ.  ರೂಢಿ ಎನ್ನುವಂತೆ  ರಂಗ ಬಲಕ್ಕಿರುತ್ತಿದ್ದ ತಿಮ್ಮ  ಎಡಕ್ಕಿರುತ್ತಿದ್ದ. ಆದರೆ ಅವರೆಂದೂ ಬಲಗೋಲು, ಎಡಗೋಲಿಗೆ ಬದ್ಧರಾಗಿರಲಿಲ್ಲ. ಅವರ ಜಾಗ ಅದಲು ಬದಲಾದರೂ ಅವರ ಕೌಶಲ್ಯತೆ ಮತ್ತು ಸಾಮರ್ಥ್ಯ ಕಿಂಚಿತ್ತೂ ಬದಲಾಗುತ್ತಿರಲಿಲ್ಲ. ಕೆಲವೊಮ್ಮೆ  ಅಕ್ಕಪಕ್ಕದ ಮನೆಯವರು ಗದ್ದೆನಾಟಿ ಮಾಡುವ ಸಮಯದಲ್ಲಿ ಮಂಡಿಯುದ್ದ ಹೂತುಕೊಳ್ಳುವ ಗದ್ದೆಗಳಿಗೆ ಸಾಮಾನ್ಯ ಎತ್ತುಗಳಿಂದ ಉಳಲಾಗದಿದ್ದಾಗ, ಮಳೆ ಗಾಳಿಗೆ ಮರ ಬಿದ್ದಾಗ ಎಳೆದುಹಾಕಲು, ಯಾವುದಾದರೂ ಬಂಡೆ ಸರಿಸಬೇಕು ಅಂದಾಗ, ಇಂಥಹ ಎಷ್ಟೋಸಂದರ್ಭಗಳಲ್ಲಿ  ಒಂದ್ಹೊತ್ತು ಎತ್ತು ಕೊಡಿ ಎಂದು ರಂಗ ತಿಮ್ಮನನ್ನು ಎರವಲು ಕೇಳುತ್ತಿದ್ದರು. ಸರಿ ಹಿಡ್ಕೊಂಡ್ ಹೋಗಿ ಅನ್ನೋ ಹಾಗಿಲ್ಲ.  ರಂಗನದ್ದೇನೋ ಒಂದು ಮಟ್ಟಿಗೆ ಸರಿ. ತಿಮ್ಮನೆಂದರೆ ನಮ್ಮ ಮನೆಯ ವಿಐಪಿ.  ಮನೆಯವರಲ್ಲದೇ ಬೇರೆ ಯಾರಾದರೂ ಬಂದರೆಂದರೆ ಗದ್ದೆ ಉಳುಮೆಯಿರಲಿ, ಅವನನ್ನು ಗದ್ದೆಯ ತನಕ ಹಿಡಿದುಕೊಳ್ಳೋ ಧೈರ್ಯವನ್ನೂ ಮಾಡುತ್ತಿರಲಿಲ್ಲ. ತಾತನ ಪರಿಚಯದವರಾಗಿದ್ದರೆ ಅಥವಾ ಮನೆಯವರೊಬ್ಬರು ಜೊತೆಯಲ್ಲಿದ್ದರೆ ಪರವಾಗಿರಲಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆಯಂತೆ ತಾತನೇ ಖುದ್ದಾಗಿ ಹೋಗಿ, ನೊಗ ಹೂಡಿ ಬರುವುದು, ಕೆಲಸ ಮುಗಿದ ನಂತರ ತಾನೇ ಹಿಡಿದು ಮನೆಗೆ ತರುವುದು ಮಾಡುತ್ತಿದ್ದರು. ತಿಮ್ಮನ ಈ ವಿಐಪಿ ಗುಣ, ಯಾರು ಯಾವಾಗ ಬೇಕಾದರೂ ಇವುಗಳನ್ನು ಎರವಲು ಪಡೆಯಬಹುದು ಎನ್ನುವುದಕ್ಕೆ ಕಡಿವಾಣ ಹಾಕಿದಂತಿತ್ತು. ಆಲೆಮನೆಯದ್ದೇ ಒಂದು ವಿಶಿಷ್ಟತೆ. ಆಲೆಮನೆಗೆ ಹೊಂದಿಕೊಂಡ ಕತೆಗಳೆಲ್ಲ ರೋಚಕವಾಗಿರುತ್ತಿದ್ದವು. ಕಬ್ಬು ಕಡಿಯಲು ಆರೇಳು ಆಳಿದ್ದರೂ, ದಿನವಿಡೀ ಗಾಣ ತಿರುಗಬೇಕಾಗಿದ್ದರೂ ಯಾವುದೇ ಅಡ್ಡಿಯಿಲ್ಲದೇ ಗಾಣ ತಿರುಗಿಸುತ್ತಾ, ಒಂದು ಆಲೆಮನೆಯ ಜವಾಬ್ದಾರಿಯನ್ನು ಸಲೀಸಾಗಿ ನಿಭಾಯಿಸುವಂತಹವರು ಈ ರಂಗ ತಿಮ್ಮರು. ಕೆಲವೊಮ್ಮೆ ಗಾಣದಲ್ಲಿ ಅರೆಯಲು ಕಬ್ಬು ಇಲ್ಲದೇ, ಆಳುಗಳಿಗೆ ಅವಸರ ಮಾಡಿ ಜ್ವರ ಬರಿಸಿದ್ದಂತ ಉದಾಹರಣೆಗಳಿದ್ದವಂತೆ. ಆದರೆ ಆಲೆಮನೆ ಕತೆಗಳೆಲ್ಲ ನಾನು ಕೇಳಿದ್ದಷ್ಟೇ… ಎರಡು ವರ್ಷ  ಕೊಪ್ಪರಿಕೆ ಕಟ್ಟಿ ಆಲೆಮನೆ ಹೂಡಿದ್ದ ಸ್ವಲ್ಪವೇ ನೆನಪಿನ ಹೊರತಾಗಿ, ನನ್ನ ಬುದ್ಧಿ ಬೆಳೆಯುವ ಹೊತ್ತಿಗೆ ಆಲೆಮನೆ ಹೂಡುವ ಅಭ್ಯಾಸ ನಿಂತು, ಗಾಣ, ಕೊಪ್ಪರಿಕೆ, ಅಚ್ಚಿನಮಣೆಗಳೆಲ್ಲ ಬರೀ ಬಾಡಿಗೆಗೆ ಕೊಡುವಷ್ಟರಮಟ್ಟಿಗೆ ಬಂದು ನಿಂತಿತ್ತು. ರಂಗ ತಿಮ್ಮರಿಗೆ ಪೇಟೆಯ ಸಂತೆಗೆ ಹೋಗುವುದೊಂದು ನಿಯಮಿತವಾಗಿದ್ದ ಕೆಲಸ.  ಮನೆಯಲ್ಲಿದ್ದ ಭತ್ತ, ರಾಗಿ, ಬೆಲ್ಲ, ಎಳನೀರು, ತೆಂಗಿನ ಕಾಯಿ, ಅಡಿಕೆ ಕೊಯ್ಲಿನ ಸಮಯದಲ್ಲಿ ಕೊಯ್ಲುಮಾಡಿ ಸುಲಿದು ಬೇಯಿಸಿ ಒಣಗಿಸಿಟ್ಟಿದ್ದ ಅಡಿಕೆ, ಒಣಮೆಣಸಿನಕಾಯಿ ಇವುಗಳನ್ನೆಲ್ಲ ಮನೆಯಿಂದ ಸಂತೆಗೆ ಸಾಗಿಸುವುದು ಮತ್ತೆ ಮನೆಯ ನಿತ್ಯಬಳಕೆಯ ವಸ್ತುಗಳನ್ನು ಪೇಟೆಯ ದಿನಸಿ ಅಂಗಡಿಯಿಂದ ತುಂಬಿಸಿಕೊಂಡು ಬರುವುದು, ತಿಂಗಳಿನಲ್ಲಿ ಎರಡು ಮಂಗಳವಾರಗಳು ಖಾಯಂ ಆಗಿರುತ್ತಿತ್ತು. ಅಷ್ಟೇ ಅಲ್ಲದೇ ಹಬ್ಬದ ದಿನಗಳ ಹಿಂದಿನ ವಾರ ಹೆಚ್ಚುವರಿ ಸಂತೆಯೂ ಇರುತ್ತಿತ್ತು.  ನಮ್ಮ ಮನೆಯ ಸರಕು ಸಾಗಿಸುವ ಕೆಲಸವಿಲ್ಲದಿದ್ದರೂ, ಊರಿನ ಬೇರೆ ಮನೆಯವರ  ಮಾರಾಟದ ಸರಕುಗಳನ್ನು ಸಾಗಿಸುವುದು ಮತ್ತೆ ಪೇಟೆಯಿಂದ ಅವರು ಖರೀದಿಸುವ ದೊಡ್ಡ ಗಾತ್ರದ ವಸ್ತುಗಳನ್ನು ಮನೆಗೆ ಸಾಗಿಸುವ ಸಲುವಾಗಿ ಪ್ರತಿ ಮಂಗಳವಾರವೂ ಗಾಡಿ ಹೂಡುತ್ತಿದ್ದರು.  ಪೇಟೆಯ ಪ್ರಯಾಣ ರಂಗ ತಿಮ್ಮರಿಗೆ ಮಕ್ಕಳು ಪ್ರತಿದಿನ ಶಾಲೆಗೆ ಹೋಗುತ್ತಿದ್ದಷ್ಟೇ ಸಾಮಾನ್ಯವಾಗಿತ್ತು. ಬಹುಶಃ ಗಾಡಿಗೆ ದವಸವನ್ನೆಲ್ಲ ತುಂಬಿ ಬೆಳಿಗ್ಗೆ ಬಸ್ಸಿನಲ್ಲಿ ಹೋಗಿದ್ದರೂ ಮಂಡಿ ಎದುರು  ಗಾಡಿ ನಿಂತಿರುತ್ತಿತ್ತು ಎಂದು ಅನುಮಾನವಿಲ್ಲದೇ ಹೇಳಬಹುದು. ಆದರೆ ಕಳ್ಳರು ದವಸವನ್ನು ಲಪಟಾಯಿಸಿಬಿಡಬಹುದು ಎಂದೋ ಏನೋ, ತಾತನಾಗಲೀ ಅಥವಾ ಮಾವಂದಿರಲ್ಲಿ ಒಬ್ಬರಾಗಲೀ ಊರಿನ ಬೇರೊಬ್ಬರ ಜೊತೆಯಲ್ಲಿ ಗಾಡಿ ಏರುತ್ತಿದ್ದರು.  ಸಂತೆಗೆ ಗಾಡಿ ಹೂಡುವ ಪ್ರತಿ ದಿನವೂ  ನಾನು ಗಾಡಿಯಲ್ಲಿ ಸಂತೆಗೆ ಹೋಗಬೇಕು ಅಂತ ಮುತ್ತಜ್ಜಿಯಿಂದ ಹಿಡಿದು ಮನೆಯ ಎಲ್ಲರನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದೆ. ಆದರೆ ನಾನು ಅತ್ತು ಸುಸ್ತಾಗಿ ಮಲಗೋದಷ್ಟೇ ಆಗ್ತಾ ಇದ್ದಿದ್ದು. ಬೆಳಗ್ಗೆ  ನಾನು ಏಳುವಷ್ಟರಲ್ಲಿ ಗಾಡಿ ಸಂತೆ ಸೇರಿರುತ್ತಿತ್ತು. ಒಂದು ದಿನವೂ  ರಂಗ ತಿಮ್ಮರ ಜೊತೆ ಸಂತೆ ಪ್ರಯಾಣ ಮಾಡಲಾಗಲಿಲ್ಲ.  ಜೊತೆಗೆ ಅದು ಮಂಗಳವಾರದ ಸಂತೆ… ಶಾಲೆಗೆ ಚಕ್ಕರ್ ಹೊಡಿಯಬೇಕಿತ್ತು.  ಹಾಗಾಗಿ ರಂಗ ತಿಮ್ಮರ ಪೇಟೆ ಬೀದಿಯ ಸಲೀಸು ಪ್ರಯಾಣ ನಾನು ಬೇರೆಯವರಿಂದ ಕೇಳಿರುವಂತಹದ್ದು.

ಹೊತ್ತಾರೆ Read Post »

ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಡಾ.ಸಣ್ಣರಾಮ ಕಳೆದ ಸಂಚಿಕೆಯಿಂದ…       ಅಕ್ಕ ಕೂಡಲ ಸಂಗಮವನ್ನು ಪ್ರವೇಶಿಸುತ್ತಲೇ ಮತ್ತೊಂದು ಅಗ್ನಿ ಪರೀಕ್ಷೆ ಅವಳಿಗೆ ಕಾದಿತ್ತು. ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭು ಯಾರೇ ಬರಲಿ ಪರೀಕ್ಷಿಸದೇ ಅನುಮತಿಯನ್ನು ಕೊಡುತ್ತಿರಲಿಲ್ಲ. ಶರಣೆ ಅಕ್ಕಮಹಾದೇವಿಯನ್ನು ಕಂಡು ದಿಗ್ಭ್ರಮೆಗೊಂಡ ಅಲ್ಲಮ ಅವಳನ್ನು ಪರೀಕ್ಷಿಸಲು ಮುಂದಾಗಿ                              “ಸತಿ ನೀನು ಇತ್ತಲೇಕೆ ಬಂದೆಯವ್ವಾ ಸತಿಯೆಂದರೆ ಮುನಿವರು   ನಮ್ಮ ಶರಣರು ನಿನ್ನ ಪತಿಯ ಕುರುಹು ಹೇಳಿದರೆ ಬಂದು ಕುಳ್ಳಿರು     ಇಲ್ಲದಿದ್ದರೆ ತೊಲಗು ತಾಯಿ” ಅಕ್ಕ; “ಹರನೇ ನೀನೆನಗೆ ಗಂಡನಾಗಬೇಕೆಂದು ಅನಂತಕಾಲ ತಪಿಸಿದ್ದೆ ನೋಡಾ” ಪ್ರಭು: ಕೇಶಿಯೆಂಬ ಸೀರೆಯು ಲಿಂಗಕ್ಕೆ ಮರೆಯಾಯಿತ್ತು. ಅಪಮಾನವೆಂತು ಹರಿಯಿತ್ತು. ಅಕ್ಕ: ಕಾಯಕರ್ರನೆ ಕಂದಿದರೇನಯ್ಯ ಕಾಯಮಿರ್ರನೆ ಮಿಂಚಿದರೇನಯ್ಯ ಅಂತರಂಗ ಶುದ್ಧವಾದ ಬಳಿಕ ಚನ್ನಮಲ್ಲಿಕಾರ್ಜುನ ಲಿಂಗವು ಒಲಿದ ಕಾಯ ಹೇಗಿದ್ದರೇನಾಯ್ಯ. ಪ್ರಭು: ಭಾವ ಶುದ್ಧವಾದಲ್ಲಿ ಸೀರೆಯನುಳಿದು ಕೂದಲು ಮರೆ ಮಾಡುವುದುದೇತಕ್ಕೆ. ಅಕ್ಕ: ಕಾಮನ ಮುದ್ರೆಯನು ಕಂಡು ನಿಮಗೆ ನೋವಾದೀತೆಂದು  ಆಭಾವದಿಂದ ಮುಚ್ಚಿದೆ. ಕಾಯದೊಳು ಅಕಾಯವಾಯಿತ್ತು. ಜೀವದೊಳಗೆ ನಿರ್ಜೀವಾಯಿತ್ತು. ಭಾವದೊಳೆ ನಿರ್ಭಾವವಾಗಿತ್ತು.   ಅಕ್ಕನ ದಿಟ್ಟ ಸ್ಪಷ್ಟ ಅಂತರಂಗ ಬಹಿರಂಗ ಶುದ್ಧಿಯ ಉತ್ತರವನ್ನು ಕೇಳಿದ ಶರಣ ಸಂಕುಲ ಮೂಕವಿಸ್ಮಿತವಾಗುತ್ತದೆ. ಅಲ್ಲಮಪ್ರಭು “ಅಂತರಂಗದ ಪ್ರಭೆ ಬಹಿರಂಗವೆಲ್ಲಾ ತಾನೆಯಾಗಿ ಗುಹೇಶ್ವರ ಲಿಂಗದಲ್ಲಿ ಸಂದಿಲ್ಲದಪ್ಪ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ” ಎಂದರು. ಆ ಕ್ಷಣವೇ ಶರಣರೆಲ್ಲ ತಲೆಬಾಗಿ ಶರಣೊ ಎನ್ನುವರು.     ಅಕ್ಕನ ವ್ಯಕ್ತಿತ್ವ, ವಿಚಾರಧಾರೆಯೇ ಅಂತದ್ದು. ಸ್ತ್ರೀ ಸ್ವಾತಂತ್ರ್ಯವನ್ನು ಮೆರೆದ          ಅಂತೆಯೇ ಬದುಕಿದ ಅಕ್ಕ ಸ್ತ್ರೀ ಸ್ವಾತಂತ್ರ್ಯ ಅದಾಗೆಯೇ ಲಭಿಸುವುದಿಲ್ಲ. ಆತ್ಮಬಲದಿಂದ ನಾವಾಗಿಯೇ ಪಡೆದುಕೊಳ್ಳಬೇಕು, ಸಾಧ್ಯವಾದರೆ ಒತ್ತಾಯದಿಂದ ಕಸಿದುಕೊಳ್ಳಬೇಕೆಂಬ ಧೋರಣೆಯ ದಿಟ್ಟ ಮಹಿಳೆ. ಪಂಚೇಂದ್ರಿಯಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ? ಸಪ್ತ ವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ? ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೇ ಚನ್ನಮಲ್ಲಿಕಾಜರ್ುನ…….   ಸಂಸಾರವೆಂಬುದು ರತ್ನದ ಸಂಕಲೆ ಇದ್ದಹಾಗೆ, ಆಕರ್ಷಣೀಯವಾದ ಸಂಸಾರ ಸುಖದೊಳಗೆ ಗಂಡನ ಕಟ್ಟುಕಟ್ಟಲೆಯೊಳಗೆ ಅವನಿಚ್ಛೆಯಂತೆ ಬದುಕುವುದು ಅದೊಂದು ಜೀವನವೇ? ಶತಶತಮಾನಗಳ ಪುರುಷನ ದೌರ್ಜನ್ಯವನ್ನು ಪ್ರಶ್ನಿಸಿ ದಿಕ್ಕರಿಸಿದ ಅಕ್ಕ ಬಿಡುಗಡೆಯ ಬಯಸಿದ ಸ್ವತಂತ್ರ ಪ್ರೇಮಿ. ಸಂಸಾರ ಬಂಧನಕ್ಕೆ ಕಾರಣವಾಗುವ ಪಂಚೇಂದ್ರಿಯ ಮತ್ತು ಸಪ್ತ ವ್ಯಸನಗಳ ನಿಯಂತ್ರಿಸಿಕೊಂಡರೆ ಈ ರತ್ನದ ಸಂಕಲೆಯಿಂದ ಬಿಡುಗಡೆಯನ್ನು ಪಡೆಯಬಹುದು. ಮುಂದುವರೆದು ಅಕ್ಕ ಹೇಳುವುದು,  “ಈ ಸಾವಕೆಡುವ ಗಂಡರನೊಯ್ದು ಒಲೆಯೊಳಗೆ ಇಕ್ಕು ತಾಯಿ”-ಎನ್ನುತ್ತಾಳೆ. ಇದು ಅಕ್ಕನ ಉಗ್ರವಾದ ಪ್ರತಿಭಟನೆ. ಆಧುನಿಕ ಮಹಿಳಾ ವಾದಿಯರನ್ನು  ಬೆಚ್ಚಿಬೀಳಿಸುವ ಮಾತುಗಳಿವು.

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

ಅಂಕಣ ಸಂಗಾತಿ

ಹೊತ್ತಾರೆ

ಅಮ್ಮನೂರಿನನೆನಪುಗಳು ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ಹೋರಿ ಕಣ್ಣು ಮೊನ್ನೆ ರಾತ್ರಿ ಊಟ ಮುಗಿಸಿ ಮಲಗಿದ ನಿದ್ರೆ ಹತ್ತಿದ ಸ್ವಲ್ಪ ಹೊತ್ತಿನಲ್ಲೇ ಯಾಕೋ ಇದ್ದಕ್ಕಿದ್ದ ಹಾಗೆ ಕಲ್ಹಳ್ಳಿ ಎತ್ತು ಎದುರಲ್ಲಿ ಬಂದು ನಿಂತಂತೆ ಇತ್ತು!  ಸುತ್ತ ನೋಡಿದೆ, ಯಾರಿದಾರೆ ಜೊತೆಯಲ್ಲಿ,  ಬರೀ ಕಲ್ಹಳ್ಳಿ ಎತ್ತು… ಮನೆ ಎತ್ತು ಯಾವ್ ಕಡೆ ಹೋಯ್ತು? ಮತ್ತೆ ಇನ್ನೊಂದು ಸಲ ಪರಿಶೀಲಿಸಲೇ, ಎಲ್ಲಿದಿವಿ, ಕಲ್ಹಳ್ಳಿ ಎತ್ತು ಮತ್ತು ನಾನು ಇಬ್ಬರೇ. ಯಾರಿಗೆ ಹೇಳೋದು ಈಗ, ಗಾಬರಿಯಾಯ್ತು. ಆ ಗಾಬರಿಗೆ ಕಾರಣ,  ಮನೆ ಎತ್ತು ಜೊತೆಯಲ್ಲಿದ್ದರೆ ಮಾತ್ರ  ಕಲ್ಹಳ್ಳಿ ಎತ್ತಿನ  ಹತ್ತು ಇಪ್ಪತ್ತು ಅಡಿ ದೂರದಲ್ಲಿ ನಾನು ಸುಳಿಯಲು ಧೈರ್ಯಮಾಡುತ್ತಿದ್ದುದು.  ಆದರೆ ಇವತ್ತು  ಎದುರೇ ನಿಂತುಬಿಟ್ಟಿದಾನೆ, ದುರುಗುಟ್ಟು ನೋಡ್ತಾ ಇರುವ ಹಾಗಿದೆ ಬೇರೆ. ಮತ್ತೆ ಸ್ವತಃ ಧೈರ್ಯ ತಂದುಕೊಳ್ಳೋಕೆ ಮನೆಯ ಬೇರೆ ಯಾರೂ ಜೊತೆಯಲ್ಲಿ ಇಲ್ಲ. ಈ ಮನೆ ಎತ್ತು ಮತ್ತು ಕಲ್ಹಳ್ಳಿ ಎತ್ತುಗಳೆರಡೂ ತಾವು ಬದುಕಿದ ಬಹುತೇಕ ದಿನಗಳಲ್ಲಿ ಜೊತೆಯಲ್ಲೇ ಇದ್ದವು. ಬಹುಶಃ ಅವೆರಡಕ್ಕೂ ವಯಸ್ಸಲ್ಲಿ ಎರಡು ಅಥವಾ ಮೂರು ವರ್ಷಗಳ ಅಂತರವಿದ್ದಿರಬಹುದು. ಎಳೆಗರುವಿನಿಂದ ಮುದಿಯಾಗುವವರೆಗೂ ಜೊತೆಯಾಗಿಯೇ ಬೆಳೆದವು, ಜೊತೆಯಾಗಿಯೇ ದುಡಿದವು. ಮನೆಯಲ್ಲೇ ಹುಟ್ಟಿದ ಕರುವಿಗೆ ಜೋಡಿಮಾಡಲು ಕಲ್ಹಳ್ಳಿಯಿಂದ ಖರೀದಿಸಿ ತಂದಿದ್ದ ಕರು ಕಲ್ಹಳ್ಳಿ ಎತ್ತಾಗಿ ಬೆಳೆಯಿತು. ನಾನು ಆರೇಳು ವರ್ಷದವನಿದ್ದಾಗ ಇವೆರಡೂ ಆಗತಾನೇ ತಮ್ಮ ಇಳಿವಯಸ್ಸಿನ ಕಡೆ ಮುಖಮಾಡಿದ್ದರಿಂದ ಅವುಗಳ ಹೆಸರು ಹೋರಿ ಎನ್ನುವುದರಿಂದ ಎತ್ತು ಎನ್ನುವುದಕ್ಕೆ ಬದಲಾಗುತ್ತಿತ್ತು. ಕೆಲವೊಮ್ಮೆ ಹೋರಿ ಎಂದೂ ಮತ್ತೆ ಕೆಲವೊಮ್ಮೆ ಎತ್ತು ಎನ್ನುತ್ತಲೂ, ಬರುಬರುತ್ತಾ ಎತ್ತು, ಮುದಿಎತ್ತು ಹೀಗೆ ಅವುಗಳ ಹೆಸರಿನ ಬಡ್ತಿಯ ನೆನಪು. ಮನೆ ಹೋರಿ ಕರುವಾಗಿದ್ದಾಗಿನಿಂದಲೂ ಮನೆಯವರ ಮತ್ತು ಊರವರ ನೆನಪಿನಲ್ಲೆಲ್ಲಾ ಶಾಂತ ಸ್ವಭಾವದ್ದಾಗಿದ್ದು, ಗೋವು ಅಂತ ನಿರ್ವಿವಾದವಾಗಿ ಕರೆಯಬಹುದಾಗಿತ್ತು. ಅದೇ ಕಾರಣಕ್ಕೋ ಏನೋ, ನನ್ನ ಬಾಲ್ಯದ ಬುದ್ಧಿಗೆ ಮನೆಹೋರಿಯ ಹೆಸರು ‘ರಂಗ’ ಅಂತ ಹೊಳೆದಿತ್ತು. ಕಲ್ಹಳ್ಳಿ ಹೋರಿಯದು ಬೇರೆಯೇ ಕತೆ. ಮನೆ ಹೋರಿಗೆ ಹೋಲಿಕೆಯಲ್ಲಿ ಬಹುತೇಕ ಹೊಂದುತ್ತಿತ್ತಾದರೂ, ಸ್ವಭಾವ ಅದರ ತದ್ವಿರುದ್ಧ. ಮನೆ ಹೋರಿಯ ಜೊತೆಯಲ್ಲೇ ಇದ್ದಿದ್ದರಿಂದಲೋ ಏನೋ, ಶಾಂತವಾಗೇನೋ ಇರುತ್ತಿತ್ತು. ಆದರೆ ಅದರ ಕೋಪ ಪೊಲೀಸನ ಸೊಂಟದಲ್ಲಿರುವ ಪಿಸ್ತೂಲಿನಂತೆ ಸದಾ ಬದಿಯಲ್ಲಿಯೇ ತೂಗುತ್ತಿರುತ್ತಿತ್ತು. ಹಾಗಾಗಿ ಅದರ ಹೆಸರು ನರಸಿಂಹ, ಎಂದು ಕಲ್ಪಿಸಿಕೊಂಡು ನಂತರ ಆ ಹೆಸರನ್ನು ಕುದಿಸಿ ಭಟ್ಟಿ ಇಳಿಸಿ ಸರಳವಾಗಿ ‘ತಿಮ್ಮ’ ಎಂದು ಕಲ್ಪಿಸಿಕೊಂಡಿದ್ದೆ.  ಈ ರಂಗ ಮತ್ತು ತಿಮ್ಮ, ಇವರ ಹೆಸರು ನಾನು ಕಲ್ಪಿಸಿಕೊಳ್ಳುವುದಕ್ಕೆ ಇನ್ನೊಂದು ಕಾರಣವಿತ್ತು. ಈ ಜೋಡಿ ಎತ್ತುಗಳು ಅಜ್ಜಿಮನೆಯ(ಅಮ್ಮನ ತವರು) ದೊಡ್ಡ ಸಂಸಾರದ ಖಾಯಂ ಸದಸ್ಯರಾಗಿ ಇದ್ದಂತಹವು.  ಹಾಗಾಗಿ ಆಕಾರದಲ್ಲಿ ಮನುಷ್ಯರಂತಿಲ್ಲದೆ, ಮಾತು ಬಾರದಿದ್ದರೂ ಅವರಿಬ್ಬರ ಸುತ್ತಮುತ್ತ ಇರುವಾಗ ನಮ್ಮಂತೆಯೇ ಅವುಗಳೂ ಮಾತನಾಡುತ್ತವೆ ಎಂದೇ ಅನಿಸುತ್ತಿತ್ತು… ಸದ್ದು ಬಾರದಿದ್ದರೂ ಅವುಗಳ ಮಾತು ಕಣ್ಣುಗಳಲ್ಲಿ, ಕಾಲ್ಗಳಲ್ಲಿ, ಬಾಲದಲ್ಲಿ ವ್ಯಕ್ತವಾಗುತ್ತಿತ್ತು. ಆ ಜೋಡಿ, ಮನೆಯಲ್ಲಿರುವ ಎರಡು ದುಡಿಯುವ ಮೂಕ ಸದಸ್ಯರು, ಆದರೆ ತಮ್ಮ ನಡೆಯೇ ಅವರ ಭಾಷೆಯಾಗಿ ನಮ್ಮೊಟ್ಟಿಗೆ ಮಾತನಾಡುತ್ತಾರೆ ಎಂಬುದೇ ನನ್ನ ಕಲ್ಪನೆಯಾಗಿತ್ತು.  ರಂಗನ ಬಗ್ಗೆ ನಮಗೆ ಎಳ್ಳಷ್ಟೂ ಆತಂಕವಿರಲಿಲ್ಲ. ಮೈತೊಳೆಯುವುದು, ಹುಲ್ಲುಹಾಕುವುದು, ಹಣೆ ಸವರುವುದು ಏನು ಮಾಡಿದರೂ ರಂಗ ಅಪ್ಪಟ ಸಾಧು.  ತಿಮ್ಮನ ಹತ್ತಿರ ಸುಳಿಯುವುದಿರಲಿ, ನಾನೊಬ್ಬನೇ ಇದ್ದರೆ  ತಿಮ್ಮನ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿದ್ದೆ. ಎಲ್ಲೋ ಅಪರೂಪಕ್ಕೊಮ್ಮೆ ಹತ್ತಿರ ಸುಳಿಯುವುದಿದ್ದರೂ, ಅದು ತಾತನ ಅಥವಾ ಮಾವಂದಿರ ಜೊತೆ ಸುರಕ್ಷಿತವಾಗಿದ್ದಾಗ ಮಾತ್ರ. ನಾನು ಹುಟ್ಟುವುದಕ್ಕೂ ಮೊದಲೇ ನಮ್ಮ ಮನೆಯಲ್ಲಿ ಹೋರಿಗಳಾಗಿದ್ದ ಈ ನಮ್ಮ ಕುಟುಂಬದ ಸದಸ್ಯರ ಬಗ್ಗೆ ತರಹೇವಾರಿ ಕತೆಗಳನ್ನು ನಾನು ಕೇಳಿದ್ದೇನೆ.  ಬೇಸಿಗೆಯ ಒಂದು ದಿನ ಕಟ್ಟೆಅರಸಮ್ಮನ ಹರಕೆಯ ಬಗ್ಗೆ ಮಾತಾಡಿ, ಯಾವತ್ತು ಹೋಗೋದು ಅಂತ ಚರ್ಚಿಸಿ ಒಂದು ದಿನ ಗೊತ್ತುಮಾಡಿದರು. ಕಟ್ಟೆಅರಸಮ್ಮನಿಗೆ ಮುತ್ತಜ್ಜಿಯ ಯಾವುದೋ ಒಂದು ಹಳೆಯ ಹರಕೆಯಿತ್ತಂತೆ. ನಮ್ಮ ಊರಿನಿಂದ ಕಟ್ಟೆಅರಸಮ್ಮನ ಗುಡಿ ನಲವತ್ತು ಕಿಲೋಮೀಟರು ದೂರ. ಗುಡಿ ಅನ್ನೋದಕ್ಕಿಂತ ಅದು ಆಗ ಒಂದು ಸಣ್ಣ ಗೂಡು.  ಈಗ ಒಂದು ಕಟ್ಟಡ ಆಗಿ ಅದು ಗುಡಿ ಆಗಿದೆ.  ಕಟ್ಟೆಅರಸಮ್ಮನ ಹರಕೆ ಅಂದರೆ ಅದು ಕುರಿ, ಕೋಳಿ, ಹಂದಿಯನ್ನು ದೇವಸ್ಥಾನದ ಬಳಿ ಬಲಿಕೊಡುವುದು.ಅದರಲ್ಲಿ ಕಟ್ಟೆ ಅರಸಮ್ಮನ ಪಾಲು ತುಂಬಾ ಕಡಿಮೆಯೇ. ಮಾಂಸವೂ ಸೇರಿದಂತೆ, ಬೇಯಿಸಿದ ಎಲ್ಲಾ ಅಡುಗೆಯನ್ನೂ, ಒಂದು ಆಳಿಗೆ ಬಡಿಸುವಷ್ಟನ್ನು ಬಾಳೆಯೆಲೆಯಲ್ಲಿ ಬಡಿಸುವುದು, ಅದನ್ನು ಇನ್ನೊಂದು ಬಾಳೆಯೆಲೆಯಲ್ಲಿ ಮುಚ್ಚುವುದು. ಅಲ್ಲಿಗೆ ಬಂದಿರುವ ಮನೆಯ ಸದಸ್ಯರೆಲ್ಲರೂ ಹಣ್ಣು ಕಾಯಿ ಇಟ್ಟು ಅಗರಬತ್ತಿ, ಕರ್ಪೂರ ಹಚ್ಚಿ  ಪೂಜೆ ಮುಗಿಸಿದರೆ ಅಲ್ಲಿಗೆ ಹರಕೆ ತೀರಿದಂತೆ. ಆಮೇಲೆ ದೇವರಿಗಿಟ್ಟ ಪಾಲೂ ಸೇರಿದಂತೆ ಮಾಡಿದ ಅಡುಗೆಯೆಲ್ಲ ಪ್ರಸಾದ. ಇದೊಂಥರಾ ಪಕ್ಕಾ ಫ್ಯಾಮಿಲಿ ಪಿಕ್ನಿಕ್ಕು. ಅಂತಹ ಒಂದು ಪಿಕ್ನಿಕ್ಕು ಮುತ್ತಜ್ಜಿಯ ಹರಕೆಯ ಪೂರೈಕೆಗಾಗಿ ಸಿದ್ಧವಾಗಿತ್ತು. ಮುತ್ತಜ್ಜಿ ನನ್ನ ತಾತನಿಗೆ ಚಿಕ್ಕಮ್ಮ, ತಾತನನ್ನು ತಮ್ಮಯ ಅಂತ ಕರೆಯುತ್ತಿತ್ತು.  “ತಮ್ಮಯ್ಯ, ಗಾಡಿಗೆ ದಬ್ಬೆ ಬಿಗಿಬೇಕು, ಯಾರ್ನಾದರೂ ಕರ್ಕೊಂಡ್ ಬಂದು ಬಿರ್ರನೆ  ಶುರು ಮಾಡದಲ್ವಾ” ಅಂದರು ಮುತ್ತಜ್ಜಿ.  “ಗಾಡಿ ತಡಿಕೆ ಐತಲ್ಲ ಮಳೆ ಏನ್ ಬರಾಂಗಿಲ್ಲ, ಸುಮ್ನೆ ಯಾಕೆ ಈ ಕಮಾನು ದಬ್ಬೆ ಚಿಕ್ಕವ್ವ” ಅಂದರು ತಾತ….  “ರಾತ್ರಿಯೆಲ್ಲಾ ಗಾಳಿ ಥಂಡಿಯಿರ್ತದೆ, ದಮ್ಮು ಜಾಸ್ತಿಯಾದ್ರೆ ಆಸ್ಪತ್ರೆಗೆ ಸೇರಿಸಿ ಬತ್ತೀಯಾ, ಸುಮ್ನೆ ಹೇಳಿದ್ದ್ ಕೇಳು, ದಬ್ಬೆ ಕಟ್ಟಿ ಟಾರ್ಪಲ್ ಹಾಕು”  ಎಂದು ಹೇಳುವುದರಿಂದ ಶುರುವಾದ ಪ್ರಯಾಣದ ಕೆಲಸ, ಮುಸ್ಸಂಜೆಯಾಗುವವರೆಗೂ ಎಲ್ಲರೂ ಒಂದಿಲ್ಲೊಂದು ಕಡೆ ಗದ್ದಲದಿಂದ ಕೆಲಸ ಮಾಡುತ್ತಾ ಮುಂದುವರಿದಿತ್ತು. ರಂಗ ಮತ್ತು ತಿಮ್ಮ ಎರಡೂ ರಾಗಿಹುಲ್ಲು ಮೆಲುಕುತ್ತಾ ಎಲ್ಲರನ್ನೂ ಗಮನಿಸುತ್ತಿದ್ದವು. ಮಧ್ಯಾಹ್ನದ ಹೊತ್ತಿಗಾಗಲೇ ಹೊಟ್ಟೆ ತುಂಬಿಸಿಕೊಂಡವರೇ, ಮನೆಮಂದಿಯೆಲ್ಲಾ ಓಡಾಡುವುದನ್ನು ಗಮನಿಸಿ, ಇವತ್ತು ಸಂಜೆ ಗಾಡಿ ಕಟ್ತಾರೆ…  ರಾತ್ರಿಯಿಡೀ ನಾವು ನಡಿತಾನೇ ಇರಬೇಕು ಅಂತ ಗೊತ್ತಾಗಿ ಮಲಗಿದ್ದಲ್ಲೇ ಕೊರಳು ಅತ್ತಿತ್ತ ಆಡಿಸುತ್ತ ಸುಲಭವಾಗಿ ಬಾಯಿಗೆ ಸಿಗುತ್ತಿದ್ದ ಹುಲ್ಲನ್ನು ಬೇಕೋ ಬೇಡವೋ ಎಂಬಂತೆ  ನಿಧಾನವಾಗಿ ಮೆಲ್ಲುತ್ತಿದ್ದವು.  ನಲವತ್ತು ಕಿಲೋಮೀಟರ್ ಅಂದರೆ ಆರೇಳು ಗಂಟೆಯ ಎತ್ತಿನಗಾಡಿಯ ಪ್ರಯಾಣ. ರಂಗ ಮತ್ತು ತಿಮ್ಮರ ದಾಪುಗಾಲಿಂದ ಬೇಗನೆ ತಲುಪಲು ಸಾಧ್ಯವಿದ್ದರೂ, ಮರದ ಗಾಡಿಯಲ್ಲಿ ಪಾತ್ರೆ, ಅಡುಗೆ ಸಾಮಾನು ಜೊತೆಗೆ ಮನೆಯವರು ಗಾಡಿಯಲ್ಲಿ ಕೂತಿರುವುದರಿಂದ ಆತುರದಿಂದ ಓಡಿ ತಲುಪುವುದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿಯೇ, ರಾತ್ರಿ ಊಟ ಮುಗಿಸಿ ಹತ್ತು ಹನ್ನೊಂದರ ಸುಮಾರಿಗೆ ಗಾಡಿ ಕಟ್ಟಿದರು…  ಹಂದಿಯ ಕಾಲು ಬಿಗಿದು ಗಾಡಿಯ ತಳಬದಿಗೆ ಕಟ್ಟಿದ್ದರು. ಒಂದರ್ಧ ಗಂಟೆಯಷ್ಟು ಅದರ ಅರಚಾಟ, ನಂತರ ನಿಧಾನವಾಗಿ ರಾಗಾಲಾಪ ಮಾಡಿ ತನ್ನ ವೇದನಾಗಾಯನಕ್ಕೆ ಮಂಗಳ ಹಾಡಿತು. ಗಾಡಿಯ ಮುಂದೆ ದಾರಿ ಕಾಣುವಂತೆ ಒಂದು ಲಾಟೀನು ಕಟ್ಟಿದರು. ಮುತ್ತಜ್ಜಿಯ ಜೊತೆಯಲ್ಲಿ ನಾನೂ ಸೇರಿದಂತೆ ಇನ್ನು ನಾಲ್ಕು ಜನ ತಯಾರಾಗಿ ಗಾಡಿ ಏರಿ ಕುಳಿತೆವು. ಮುತ್ತಜ್ಜಿಗೆ ಹೊದಿಯಲು ಒಂದು ದಟ್ಟಿ, ಕುದಿಸಿ ಆರಿಸಿದ ನೀರು ಇಟ್ಟುಕೊಂಡು,  ‘ಹುಂ ಹೊರಡಿ’ ಅಂತ ಹೇಳಿದರು. ರಂಗ ಮತ್ತು ತಿಮ್ಮರಿಗೆ ಅನುಭವ ಎಷ್ಟರಮಟ್ಟಿಗಿತ್ತೆಂದರೆ, ಅವುಗಳಿಗೆ ಮಾಮೂಲು ಎತ್ತುಗಳಿಗೆ ಸೂಚಿಸುವ ಹಾಗೆ ಅರ್ರ, ಅನ್ನುವುದು ಮಪ್ಪುರಿಯುವುದು, ಏಯ್, ಹೋಯ್ ಎಂದು ಚೀರುವಂತಹ ಯಾವ ಅಗತ್ಯವೂ ಇರಲಿಲ್ಲ.  ಇನ್ನು ಚಾವುಟಿಯ ಅಥವಾ ಬಾರುಕೋಲಿನ ಅಗತ್ಯವಂತೂ ಇಲ್ಲವೇ ಇಲ್ಲ. ಅವು ಕೆಲಸದಲ್ಲಿ ತಲ್ಲೀನರಾಗಿದ್ದಾಗ ಬೆನ್ನ ಮೇಲೆ ಸಣ್ಣಗೆ ಕೈ ತಾಗಿಸಿದರೂ ಚುರುಕಾಗಿಬಿಡುತ್ತಿದ್ದವು. ಅದರಲ್ಲೂ ತಿಮ್ಮನಂತೂ ಚಂಗನೆ ಜಿಗಿಯುತ್ತಿದ್ದ. ಅಪರೂಪಕ್ಕೆಂಬಂತೆ  ಎಲ್ಲಾದರೂ ನಿಧಾನವಾದರೆ, ಒಂದು ಹುಯ್ಗುಟ್ಟರೆ ತಂತಾನೇ ಜಾಗರೂಕರಾಗಿಬಿಡುತ್ತಿದ್ದವು. ಅಪರೂಪದ ದಾರಿಗಳ ಹೊರತಾಗಿ, ಊರಿನ ಒಳಗಿನ ದಾರಿಗಳು, ನೆಂಟರ ಮನೆಗಳು, ಪೇಟೆಯ ಸಂತೆ ದಾರಿ, ಆ ಸಂತೆಯೊಳಗಿನ ಬೀದಿಗಳು, ಊರಿನ ಎಲ್ಲಾ ಹೊಲಗದ್ದೆಗಳ ದಾರಿ, ದೇವಸ್ಥಾನ ಇವೆಲ್ಲ ಹೆಸರಿನ ಸಮೇತ ರಂಗ ತಿಮ್ಮರಿಗೆ ತಿಳಿದಿತ್ತು.  ಅವುಗಳಿಗೆ ಕೊರಳ ಹುರಿ, ಮೂಗುದಾರ ಮತ್ತು ಹಗ್ಗಗಳು ನೆಪಮಾತ್ರಕ್ಕೆ. ಕುಣಿಕೆ ಬಿಗಿಯದೆಯೂ ಕೊಟ್ಟಿಗೆಯಲ್ಲಿ ಅಥವಾ ಮನೆಗೆ ಚಾಚಿಕೊಂಡಂತೆ ಇದ್ದ ಗಾಡಿ ನಿಲ್ಲಿಸುವ ಮಾಡಿನಲ್ಲಿ  ಹಾಗೆಯೇ ಬಿಟ್ಟಿದ್ದರೂ ತಾವು ಇದ್ದಲ್ಲಿಯೇ ಇರುತ್ತಿದ್ದವು.  ಸೈನ್ಯದಲ್ಲಿ ತರಬೇತಿ ಕೊಟ್ಟ ಸೈನಿಕರಷ್ಟೇ ಶಿಸ್ತಾಗಿರುತ್ತಿತ್ತು ಅವುಗಳ ಚಲನವಲನಗಳು. ಭಾರವಾದ ಹೊರೆ ತುಂಬಿದ ಗಾಡಿ ಎಳೆಯುವಾಗ ಇರಬೇಕಾದ ಬಲಾಢ್ಯತೆಯನ್ನಾಗಲೀ,  ಬಿತ್ತನೆಯಾದ ಒಂದೆರಡು ವಾರವಿರುವ ಪೈರಿನ ನಡುವೆ ಕುಂಟೆ ಹೊಡೆಯುವಾಗ ಇರಬೇಕಾಗಿದ್ದ ಸೂಕ್ಷ್ಮತೆಯಾಗಲೀ ಅವೆರಡಕ್ಕೂ ಹೇಳಿ ತಿಳಿಸಬೇಕಾದ  ಅಗತ್ಯವೇ ಇರುತ್ತಿರಲಿಲ್ಲ. ಬಹುಶಃ ತಿಮ್ಮ ಯಾರಿಗಾದರೂ ತಿವಿದು ಎಡವಟ್ಟು ಮಾಡಿಯಾನು ಎನ್ನುವ ಜಾಗರೂಕತೆಯಿಂದ ತಿಮ್ಮನಿಗೆ ಹಗ್ಗ ಮೂಗುದಾರ ಬೇಕಾಗಿತ್ತೇನೋ. ಆದರೆ ರಂಗನಿಗೆ ಖಂಡಿತಾ ಬೇಕಿರಲಿಲ್ಲ. ————-

ಹೊತ್ತಾರೆ Read Post »

You cannot copy content of this page

Scroll to Top