ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಸ್ವಾತ್ಮಗತ

ಶಾಂತವೇರಿ ಗೋಪಾಲಗೌಡರು.! ಮಾನವ ಸರಳ-ಸಮಾನತೆಯ, ನಿಮ್ನವರ್ಗದ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಶಾಂತವೇರಿ ಗೋಪಾಲಗೌಡರು.! ಕೆ.ಶಿವು ಲಕ್ಕಣ್ಣವರ ನಾನು ಒಂದಿಷ್ಟು ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಮಾಜವಾದಿಗಳ ಬಗೆಗೆ ಬರೆಯುತ್ತಿದಂತೆ ನಮ್ಮ ಎಲ್ಲ ಮಾನವ ಸಮಾನ ಮನಸ್ಕ ಮನುಷ್ಯರ ಬಗೆಗೂ ಒಂದಿಷ್ಟು ಲೇಖನ ಬರೆಯಿರಿ ಎಂದು ಗೆಳೆಯರು ಕಿವಿಮಾತು ಹೇಳಿದರು. ಆಗ ಆ ನಿಟ್ಟಿನಲ್ಲಿ ಯೋಚಿಸಿದಾಗ ಮೊದಲು ಶಾಂತವೇರಿ ಗೋಪಾಲಗೌಡರ ಬಗೆಗೇ ಬರೆಯುವುದೇ ಉತ್ತಮ ಎಂದು ನಮ್ಮ ಶಾಂತವೇರಿ ಗೋಪಾಲಗೌಡರ ಮಾಹಿತಿ ಹೆಕ್ಕಿದೆ. ಇಂತಹ ಸಮಾಜವಾದಿಗಳ ಬಗೆಗೆ ಸಾಕಷ್ಟು ತಿಳಿದುಕೊಂಡ ಕಾಳೆಗೌಡ ನಾಗವಾರರು ಹುಬ್ಬಳ್ಳಿಯ ಕಾರ್ಯಕ್ರಮವೊಂದಕ್ಕೆ ಬಂದಾಗ ಕೊಟ್ಟ ಅವರೇ ಸಂಪಾದಿಸಿದ ಒಂದೆರಡು ಪುಸ್ತಕಗಳನ್ನು ಮತ್ತೊಮ್ಮೆ ತಿರುವಿಹಾಕಿಕೊಂಡೆನು. ಆ ಪುಸ್ತಕಗಳಲ್ಲಿಯ ಕೆಲ ಮಾಹಿತಿ ಹೆಕ್ಕಿ ಗೌಡರ ಬಗೆಗೆ ಬರೆಯಲು ಕುಳಿತೆನು. ಈ ಲೇಖನ ಅದೇ ಈ ಸರಳ-ಸಮಾನತೆಯ, ನಿಮ್ನವರ್ಗದ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು..! ಶಾಂತವೇರಿ ಪಾಲಗೌಡರದು ಎತ್ತರದ ನಿಲುವು; ದುಂಡು ಮುಖ; ಉದ್ದವಲ್ಲದ ಮುದ್ದಾದ ಮೂಗು; ಅಗಲವಾದ ಹಣೆ; ಕೂದಲು ಕಡಿಮೆಯಾದ ದೊಡ್ಡ ತಲೆ; ವಿಶಾಲವಾದ ಕೆಂಗಣ್ಣುಗಳು; ಕಂದು ಬಣ್ಣ; ಶುಭ್ರವಾದ ಬಿಳಿಯ ಖಾದಿ ಜುಬ್ಬ, ಅಚ್ಚುಕಟ್ಟಾಗಿ ಉಟ್ಟ ಕಚ್ಚೆಪಂಚೆ; ಗಂಭೀರ ಮುಖ ಮುದ್ರೆ; ಮಾತನಾಡಲು ಮೆಲ್ಲಗೆ ಎದ್ದು ನಿಂತರು; ಎಲ್ಲರ ಕಣ್ಣು,ಕಿವಿ ಅತ್ತ ತಿರುಗಿದವು! ಆನೆ ಹೆಜ್ಜೆ ಇಟ್ಟ ಹಾಗೆ ಖಚಿತವಾದ ಮಾತು; ಶ್ರೋತೃಗಳನ್ನು ಸೆರೆಹಿಡಿಯುವ ವಾದಸರಣಿ. ಅವರೇ ಶಾಂತವೇರಿ ಗೋಪಾಲಗೌಡರು. ವಿಧಾನಸಭಾಧಿವೇಶನದ ಸಂದರ್ಭಗಳಲ್ಲಿ ಕಂಡು ಬರುತ್ತಿದ್ದ ನಿತ್ಯಸ್ಮರಣೀಯ ದೃಶ್ಯವಿದು… ಅಪೂರ್ವ ವ್ಯಕ್ತಿತ್ವ ರಾಷ್ಟ್ರ, ರಾಜ್ಯ, ಸಮಾಜ, ರಾಜಕೀಯ, ಆಡಳಿತ, ಸಾಹಿತ್ಯ-ಸಂಸ್ಕೃತಿಕ, ಕಲೆ, ಉದ್ಯಮ, ಅರ್ಥವ್ಯವಸ್ಥೆ – ಅದು ಯಾವುದೇ ವಿಚಾರವಿರಲಿ ಅದರ ಬಗ್ಗೆ ಖಚಿತ, ಸದೃಢ, ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಶಾಂತವೇರಿ ಗೋಪಾಲಗೌಡರ ಪ್ರವೃತ್ತಿಯಾಗಿತ್ತು. ಸತ್ಯವನ್ನು ಅವರಿಗೆ ಹೇಳುವುದರಲ್ಲಿ ಅವರಿಗೆ ಸಂಕೋಚವಿರಲಿಲ್ಲ; ಮಾತಿಗೆ ಮಂತ್ರ ಶಕ್ತಿಯನ್ನು ಕೊಡುವ ವ್ಯಕ್ತಿತ್ವದ ಹಿನ್ನೆಲೆ – ಅದಕ್ಕಾಗಿ ಅವರ ಮಾತಿಗೆ ತುಂಬ ಬೆಲೆ. ಅಧಿಕಾರಸ್ಥ ಸರ್ಕಾರ ತಲ್ಲಣಗೊಳ್ಳುವಂತಹ ಗರ್ಜನೆ; ವೈರಿಯೂ ಒಪ್ಪುವಂತಹ ವಿಚಾರಧಾರೆ ಅವರದು… ಉಗ್ರವಾದಿಯಾಗಿದ್ದ ಅವರಿಗೆ ಕೆಲವೊಂದು ಸಂದರ್ಭಗಳಲ್ಲಿ ಶೀಘ್ರಕೋಪ ಉಕ್ಕಿ ಬರುತ್ತಿತ್ತಾದರೂ ಅದು ಆಧಾರರಹಿತವಾಗಿರುತ್ತಿರಲಿಲ್ಲ. ವಿಶಿಷ್ಟ ಸನ್ನಿವೇಶಗಳನ್ನು ಉಂಟು ಮಾಡುವುದರಲ್ಲಿ, ಬಹಳ ಮಟ್ಟಿಗೆ ಪ್ರಥಮ ಸ್ಥಾನ ಪಡೆದಿದ್ದ ಗೋಪಾಲಗೌಡರು, ಅಂತಹ ಸನ್ನಿವೇಶಗಳಿಗೆ ಅರ್ಥಪೂರ್ಣ ಹಿನ್ನೆಲೆ ಇದೆ ಎಂಬುದನ್ನು ತೋರಿಸಿ ಕೊಡುತ್ತಿದ್ದರು… ಕೇವಲ ಐವತ್ತು ವರ್ಷಗಳ ಅವಧಿಯಲ್ಲಿ ಪ್ರಚೋದಕ ಶಕ್ತಿಯಾಗಿ ರೂಪುಗೊಂಡ ಗೋಪಾಲಗೌಡರ ಬೆಳವಣಿಗೆಯ ಹಿನ್ನೆಲೆ ಮನಮುಟ್ಟುವಂತಹ ಘಟನೆಗಳಿಂದ ಕೂಡಿತ್ತು. ವಿದ್ಯಾಭ್ಯಾಸದ ಹಾದಿ ಅಡಚಣೆಗಳ ಆಗರವಾಗಿ ಪರಿಣಮಿಸಿತಾದರೂ ವಿಶಾಲವಾದ ಸಮಾಜ ಜೀವನ, ಸ್ವಾತಂತ್ರ್ಯ ಹೋರಾಟದ ಮೈನವಿರೇಳಿಸುವ ಸನ್ನಿವೇಶ, ರಾಜಕೀಯ ರಂಗದ ರಂಗುರಂಗಿನ ಘಟನೆಗಳು ಅವರ ವ್ಯಕ್ತಿತ್ವ ನಿರೂಪಣೆಗೆ ಪೋಷಣೆ ನೀಡಿದವು; ರಾಜಕೀಯ ಮುತ್ಸದ್ದಿಯನ್ನಾಗಿ ಕಡೆದು ನಿಲ್ಲಿಸಿದವು. ಶಾಂತವೇರಿ ಗೋಪಾಲಗೌಡರ ಬಾಲ್ಯ, ಬೆಳವಣಿಗೆ ಶಿಕ್ಷಣ– ಮೊದಲಾದ ಎಲ್ಲ ಹಂತಗಳೂ ಗಮನಿಸುವಂತಹ ಪ್ರಸಂಗಗಳು… ಬಡತನದ ಕುಟುಂಬ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಆರಗದ ರೈತ ಕುಟುಂಬದಲ್ಲಿ ಶಾಂತವೇರಿ ಗೋಪಾಲಗೌಡರ ಜನನ. ೧೯೨೩ನೆಯ ಮಾರ್ಚ್ ೧೪ ರಂದು ಕೊಲ್ಲೂರಯ್ಯ ಮತ್ತು ಶೇಷಮ್ಮನವರ ಮೂರನೆಯ ಮಗುವಾಗಿ ಜನಿಸಿದವರು. ಅಣ್ಣ ಧರ್ಮಯ್ಯಗೌಡ; ಅಕ್ಕ ಸಿದ್ಧಮ್ಮ. ಇವರ ತಾತ ಲೋಕಣ್ಣಗೌಡರು ಅನುಕೂಲಸ್ಥರಾಗಿದ್ದರು. ಆದರೆ, ತಂದೆ ಕೊಲ್ಲೂರಯ್ಯನವರು ಬಡತನದ ಸುಳಿಯಲ್ಲಿ ಸಿಕ್ಕವರು… ಓದು- ಬರಹಗಳನ್ನು ಬಲ್ಲ ಕೊಲ್ಲೂರಯ್ಯನವರು ಅಂಚೆಪೇದೆಯಾಗಿ ಕೆಲಸಕ್ಕೆ ಸೇರಿದವರು; ಕೇವಲ ಹನ್ನೊಂದು ರೂಪಾಯಿಯ ಸಂಬಳ. ಅಂಚೆ ವಿತರಣೆಗಾಗಿ ಅನೇಕ ಹಳ್ಳಿಗಳನ್ನು ತಿರುಗಬೇಕಾಗಿತ್ತು. ಕವಲೇದುರ್ಗ, ಕೊಳವಳ್ಳಿ, ಹೊಸಗದ್ದೆ, ನಿಲುವಾಸೆ ಮೊದಲಾದ ಹಳ್ಳಿಗಳಿಗೆ ಅವರ ಅಂಚೆ ಯಾತ್ರೆಯು ಸಾಗಿತ್ತು… ಬಡತನದ ಬದುಕು ಗೋಪಾಲಗೌಡರ ಪಾಲಿಗಿತ್ತಾದರೂ ದೈವದತ್ತವಾದ ಮಲೆನಾಡ ಪ್ರಕೃತಿ ಸಂಪತ್ತಿನ ಮಡಿಲಲ್ಲಿ ಬೆಳೆದ ಅವರ ಮೈ- ಮನಸ್ಸುಗಳ ಮೇಲೆ ಮಧುರ ಪ್ರಭಾವ ಮೂಡಿ ಬಂದಿತು… ಗೋಪಾಲಗೌಡರ ಪ್ರಾಥಮಿಕ ವಿದ್ಯಾಭ್ಯಾಸ ಆರಗದಲ್ಲಿಯೇ ನಡೆಯಿತು. ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿಗೆ ಹೋಗಲು ಸಾಧ್ಯವಾಗಲಿಲ್ಲ. ಅಂಚೆಪೇದೆ ಕೆಲಸದ ಜೊತೆಗೆ ಸಣ್ಣ ವ್ಯವಸಾಯವನ್ನೂ ಇಟ್ಟುಕೊಂಡಿದ್ದ ಕೊಲ್ಲೂರಯ್ಯನವರಿಗೆ ನೆರವು ನೀಡುವುದು; ದನ ಮೇಯಿಸುವುದು; ಕಾಡು ಮೇಡುಗಳಲ್ಲಿ ತಿರುಗಾಡಿ ಸೊಪ್ಪು ಸದೆ ಹೊತ್ತು ತರುವುದು- ಇವೇ ಮೊದಲಾದ ಕಾಯಕಷ್ಟದ ಕೆಲಸಗಳಲ್ಲಿ ತೊಡಗಿದರು… ಗೋಪಾಲಗೌಡರು ದನಕಾಯುವ ಕಾಯಕದಲ್ಲಿ ತೊಡಗಿದ್ದಾಗ ಒಂದು ದಿನ ಒಂದು ಘಟನೆ ನಡೆಯಿತೆಂದು ಪ್ರತೀತಿ. ಉತ್ತರ ಕರ್ನಾಟಕದ ಸ್ವಾಮಿಗಳೊಬ್ಬರು ದನ ಮೇಯಿಸುವ ಹುಡುಗನನ್ನು ಅಕಸ್ಮಾತ್ತಾಗಿ ನೋಡಿದರಂತೆ. ಆತನ ಕಡೆಗೆ ಆಕರ್ಷಣೆಯಾಯಿತಂತೆ! ಆತನನ್ನು ಮಾತನಾಡಿಸಿ, ಎಲ್ಲ ವಿಚಾರಗಳನ್ನೂ ತಿಳಿದುಕೊಂಡು, ಕಣ್ಣುಗಳ ಹೊಳಪನ್ನೂ ಹಸ್ತರೇಖೆಯನ್ನೂ ನೋಡಿ ‘ನೀನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು’ ಎಂದು ತಿಳಿಸಿದರಂತೆ… ಆಗ ಆತ ಅಸಹಾಯಕತೆಯನ್ನು ತೋಡಿಕೊಂಡನಂತೆ. ಎಲ್ಲವನ್ನೂ ಕೇಳಿ ತಿಳಿದುಕೊಂಡ ಸ್ವಾಮಿಗಳು ಕೊಲ್ಲೂರಯ್ಯನವರ ಬಳಿಗೆ ಹೋಗಿ ‘ನಿಮ್ಮ ಮಗನಿಗೆ ಒಳ್ಳೆಯ ಭವಿಷ್ಯವಿದೆ. ವಿದ್ಯಾಭ್ಯಾಸವನ್ನು ನಿಲ್ಲಿಸಬೇಡಿ. ಹೇಗಾದರೂ ಮಾಡಿ ಓದಿಸಲೇಬೇಕು…’ ಎಂದು ಸಲಹೆ ಮಾಡಿ ಹೊರಟು ಹೋದರಂತೆ… ಅಷ್ಟರಲ್ಲಿ, ಗೋಪಾಲಗೌಡರ ಅಣ್ಣ ಧರ್ಮಯ್ಯ ಗೌಡರು ಶಿಕಾರಿಪುರದಲ್ಲಿ ರೆವಿನ್ಯೂ ಇನ್‌ಸ್ಪೆಕ್ಟರಾದರು. ಹೀಗಾದದ್ದರಿಂದ ಗೋಪಾಲಗೌಡರ ವಿದ್ಯಾಭ್ಯಾಸ ಮುಂದುವರಿಯಲು ಸಹಾಯಕವಾಯಿತು. ಶಿಕಾರಿ ಪುರದಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆ ಮುಗಿಸಿದರು… ಸ್ವಾತಂತ್ರ್ಯದ ಹೋರಾಟ, ಸೆರೆಮನೆ ಮುಂದೆ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ತೀರ್ಥಹಳ್ಳಿಗೆ ತೆರಳಿದರು. ಹೈಸ್ಕೂಲಿನಲ್ಲಿ ತರುಣ ವಿದ್ಯಾರ್ಥಿಯಾಗಿದ್ದ ಗೋಪಾಲಗೌಡರು ತಮ್ಮ ಪ್ರಭಾವವನ್ನು ತೋರಿಸತೊಡಗಿದರು. ಎಳೆಯ ವಯಸ್ಸಿನಲ್ಲೇ ನಾಯಕ ಲಕ್ಷಣದ ಸೊಗಡು ಅವರಲ್ಲಿ ಹೊರಹೊಮ್ಮುತ್ತಿತ್ತು. ನಾಯಕ ಲಕ್ಷಣಗಳಿಗೆ ನೀರೆರೆಯಲೆಂಬಂತೆ, ೧೯೪೨ರ ಸ್ವಾತಂತ್ರ್ಯ ಹೋರಾಟದ ಮಹಾ ಚಳುವಳಿ ಪ್ರಾರಂಭವಾಯಿತು. ಗಾಂಧಿ, ನೆಹರೂ ಮೊದಲಾದ ಹಿರಿಯ ನಾಯಕರೆಲ್ಲರ ಬಂಧನವಾಯಿತು. ಗಾಂಧೀಜಿಯವರು ‘ಬ್ರಿಟಿಷರೇ, ಭಾರತವನ್ನು ಬಿಟ್ಟು ತೊಲಗಿ’ ಎಂಬ ಘೋಷಣೆಯನ್ನು ಮಾಡಿದ್ದರು… ಇಡೀ ದೇಶವೇ ಈ ಘೋಷಣೆಯನ್ನು ಮಾರ್ದನಿಗೊಳಿಸಿತ್ತು. ಸ್ವಾತಂತ್ರ್ಯ ಪ್ರಿಯರಾಗಿದ್ದ ಭಾರತೀಯರು ಹೋರಾಟಕ್ಕೆ ಸಿದ್ಧರಾದರು. ಶಾಲಾ- ಕಾಲೇಜುಗಳು ಇದಕ್ಕೆ ಹೊರತಾಗಲಿಲ್ಲ. ದೇಶದ ಎಲ್ಲ ಕಡೆಯಂತೆ ತೀರ್ಥಹಳ್ಳಿಯ ಹೈಸ್ಕೂಲು ವಿದ್ಯಾರ್ಥಿಗಳು ಮೈಮುರಿದೆದ್ದರು. ಗೋಪಾಲಗೌಡರಲ್ಲಿ ಒಳಗೊಳಗೆ ಕುದಿಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಧಿಗ್ಗನೆ ಎದ್ದು ನಿಂತಿತು. ವಿದ್ಯಾರ್ಥಿ ನಾಯಕರಲ್ಲಿ ಪ್ರಮುಖ ವ್ಯಕ್ತಿಯಾಗಿ ಮುಂಚೂಣಿಯಲ್ಲಿ ನಿಂತರು. ಅಂದಿನ ಉಲ್ಬಣಗೊಂಡ ಸನ್ನಿವೇಶವನ್ನು, ಅಲ್ಲಿ ಕನ್ನಡ ಪಂಡಿತರಾಗಿದ್ದ ಕಮಗೋಡು ನರಸಿಂಹಶಾಸ್ತ್ರಿಗಳವರು ಚೆನ್ನಾಗಿ ವಿವರಿಸುತ್ತಿರುತ್ತಾರೆ… ಶಾಸ್ತ್ರಿಗಳವರು ಶಿಸ್ತು, ನಿಷ್ಠೆ, ಸರಳ ಭಾವ, ಮಮತೆ, ಪ್ರೀತಿ ಬೋಧನಾ ಕ್ರಮದ ವೈಶಿಷ್ಟ್ಯ, ವಿಚಾರವಂತಿಕೆ ಮೊದಲಾದ ಶ್ರೇಷ್ಠ ಗುಣಗಳಿಗೆ ಹೆಸರಾಗಿದ್ದವರು. ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದರು. ವಿದ್ಯಾರ್ಥಿಗಳು ಅವರಲ್ಲಿ ತುಂಬು ಪ್ರೀತಿ ಗೌರವಗಳನ್ನು ಇಟ್ಟುಕೊಂಡಿದ್ದರು… ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ ವಿದ್ಯಾರ್ಥಿಗಳು, ಅದರಲ್ಲೂ ಗೋಪಾಲಗೌಡರಂತಹವರು ಉಪಾಧ್ಯಾಯರ ಬಳಿಗೆ ಹೋಗಿ, ತರಗತಿಗಳಿಂದ ಹೊರಗೆ ಬರುವಂತೆ ಉಗ್ರವಾಗಿಯೇ ಒತ್ತಾಯಪಡಿಸಿದರು; ಚಳುವಳಿಯಲ್ಲಿ ಸೇರಿಕೊಳ್ಳ ಬೇಕೆಂದು ಕೇಳಿಕೊಂಡರು. ರಾಜೀನಾಮೆ ಕೊಡಬೇಕೆಂದು ಆಗ್ರಹಪಡಿಸಿದರು. ಎಲ್ಲರ ಪ್ರೀತಿಗೂ ಪಾತ್ರರಾಗಿದ್ದ ನರಸಿಂಹಶಾಸ್ತ್ರಿಗಳವರನ್ನೂ ಇದು ಬಿಡಲಿಲ್ಲ. ಅವರು ರಾಜೀನಾಮೆ ಕೊಡುವುದಿಲ್ಲವೆಂದು ಗೊತ್ತಾದ ಮೇಲೆ ಗೋಪಾಲಗೌಡರು ಅವರ ಬಳಿಗೆ ಹೋಗಿ ‘ಸಾರ್……. ಸ್ವಲ್ಪ ಇರಿ… ನೋಡಿಕೋತೀವಿ…’ಎಂದು ಕೋಪೋದ್ರೇಕದಿಂದ ಹೇಳಿ ಸರಕ್ಕನೆ ಹೊರಟು ಹೋದರು… ಅಂದಿನ, ಆ ಉದ್ರೇಕಪೂರ್ಣ ಸನ್ನಿವೇಶ ಅಲ್ಲಿದ್ದ ಎಲ್ಲರ ಮನಸ್ಸಿನಲ್ಲಿಯೂ ಉಳಿದು ನಿಂತಿತು. ಚಳುವಳಿಯ ಬಿಸಿಯಿಂದಾಗಿ ಗೋಪಾಲಗೌಡರ ಬಂಧನವಾಯಿತು. ವಿಚಾರಣೆಗೊಳಗಾಗಿ, ಶಿವಮೊಗ್ಗ ಕಾರಾಗೃಹದಲ್ಲಿ ಆರು ತಿಂಗಳು ೧೯ ದಿನಗಳನ್ನು ಕಳೆದರು. ಆದರೆ, ಆಮೇಲೆ (ಟೆಲಿಗ್ರಾಫ್) ತಂತಿ ಕತ್ತರಿಸಿದ್ದಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದರು. ಸೆಷನ್ಸ್ ನ್ಯಾಯಾಲಯಕ್ಕೆ ಅಪೀಲು ಮಾಡಿಕೊಂಡಿದ್ದರಿಂದ ಶಿಕ್ಷೆ ರದ್ದಾಯಿತು. ಈ ಹೋರಾಟದ ಮಧ್ಯೆ ೧೯೪೩-೪೪ರಲ್ಲಿ ಎಸ್.ಎಸ್. ಎಲ್.ಸಿ. ಮುಗಿಸಿದರು… ಉಪಾಧ್ಯಾಯರು ಹೈಸ್ಕೂಲ್ ಶಿಕ್ಷಣವೇನೋ ಮುಗಿಯಿತು. ಆದರೆ, ಮುಂದೆ? ಮುಂದೆ ಓದಬೇಕೇ ಬಿಡಬೇಕೆ ಎಂಬ ಪ್ರಶ್ನೆ ಅವರನ್ನೂ, ಅವರ ಹಿರಿಯರನ್ನೂ ಕಾಡತೊಡಗಿತು. ಹಾಗೂ ಹೀಗೂ ಪ್ರಯತ್ನಮಾಡಿ ಶಿವಮೊಗ್ಗದಲ್ಲಿ ಇಂಟರ್‌ಮೀಡಿಯೆಟ್ ಕಾಲೇಜಿಗೆ ಸೇರಿದರು… ಆದರೆ, ಹಣದ ಅಡಚಣೆಯಿಂದಾಗಿ ಅವರು ಶಿಕ್ಷಣವನ್ನು ನಿಲ್ಲಿಸಬೇಕಾಯಿತು. ಆ ಬಳಿಕ ೧೯೪೫-೪೬ರಲ್ಲಿ ಆರಗದ ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯ ವೃತ್ತಿಯನ್ನು ಅವಲಂಬಿಸಿಕೊಂಡರು. ಅಲ್ಲಿ-ಉಪಾಧ್ಯಾಯರಾಗಿ ಸೇರಿಕೊಂಡ ಪ್ರಸಂಗ ತುಂಬಾ ಸ್ವಾರಸ್ಯಕರವಾಗಿದೆ… ಆರಗದ ಮಾಧ್ಯಮಿಕ ಶಾಲೆಯಲ್ಲಿ ‘ಶ್ರೀನಾಗಾನಂದ’ ಎಂಬ ಹೆಸರಿನಲ್ಲಿ ಸಾಹಿತ್ಯ ರಚಿಸುತ್ತಿದ್ದ ಮಹನೀಯರೊಬ್ಬರು ಉಪಾಧ್ಯಾಯರಾಗಿದ್ದರು. ಉಪಾಧ್ಯಾಯ ವೃತ್ತಿಯ ಜೊತೆಗೆ ಅವರು ವೈದ್ಯಕೀಯವನ್ನೂ ನಡೆಸುತ್ತಿದ್ದರು. ಕಾಲೇಜು ಬಿಟ್ಟು ಬಂದ ಗೋಪಾಲಗೌಡರು ಅವರ ಬಳಿಗೆ ಹೋದರು. ಆ ವೇಳೆಗಾಗಲೇ ಗೋಪಾಲಗೌಡರಿಗೆ ತಲೆ ಸರಿಯಾಗಿಲ್ಲವೆಂಬ ಸುದ್ದಿ ಹಬ್ಬಿತ್ತು! ಆದರೆ ಶ್ರೀನಾಗಾನಂದರಿಗೆ ಹಾಗೇನೂ ಅನ್ನಿಸಲಿಲ್ಲ. ಅವರ ಸಂಗಡ ಗೌಡರು ಸರಿಯಾಗಿಯೇ ಮಾತನಾಡಿದರಂತೆ. ‘ನನಗೆ ಹುಚ್ಚೇನು ಸಾರ್, ನೀವೇ ಹೇಳಿ’ ಎಂದು ಗೌಡರು ಕೇಳಿದ ಪ್ರಶ್ನೆ ಬಹು ದಿನಗಳ ವರಗೆ ಅವರ ಕಿವಿಯಲ್ಲಿ ತುಂಬಿಕೊಂಡಿದವಂತೆ. ಶ್ರೀಯುತರು ಗೋಪಾಲಗೌಡರ ಪ್ರತಿಭೆ, ಭಾಷೆಯ ಮೇಲಿನ ಹಿಡಿತ, ಸಾಹಿತ್ಯಾಭಿರುಚಿ ಮೊದಲಾದವುಗಳನ್ನು ಗುರುತಿಸಿದರು. ಅವರ ನಿಕಟ ಸಂಪರ್ಕವನ್ನು ಬೆಳೆಸಿಕೊಂಡರು. ಅವರಿಂದ ಇಂಗ್ಲಿಷ್ ಲೇಖನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸುತ್ತಿದ್ದರು. ತನಿ ಲೇಖನಗಳನ್ನು ಕೂಡ ಬರೆಸುತ್ತಿದ್ದರು. ಕೆಲವು ಪತ್ರಿಕೆಗಳಲ್ಲಿ ಪ್ರಕಟಿಸಿಯೂ ಆಯಿತು. ಗಾಢ ಸ್ನೇಹಸಂಪರ್ಕವಾದ ಮೇಲೆ, ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯವೃತ್ತಿಯನ್ನು ಕೊಡಿಸಿದರು… ಗೋಪಾಲಗೌಡರ ಮಾನಸಿಕ ಸ್ಥಿತಿಯನ್ನು ಸಮೀಪವಾಗಿ ಗಮನಿಸುತ್ತಿದ್ದ ಶ್ರೀ ನಾಗಾನಂದರು ‘ಇವರಲ್ಲಿರುವ ಗಾಬರಿಗೆ ಏನೋ ಹಿನ್ನೆಲೆಯಿರಬೇಕು. ಎಂದು ಮನಸ್ಸಿನಲ್ಲಿಯೇ ಲೆಕ್ಕಹಾಕಿ ಒಂದು ದಿನ ಸರಸ ಸಲ್ಲಾಪದಲ್ಲಿದ್ದಾಗ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದರಂತೆ. ಆಗ ಗೌಡರು ತಮ್ಮ ಅಧೀರತೆಗೆ ಅಧಿಕ ಎದೆಬಡಿತವೇ ಕಾರಣವೆಂದು ಹೇಳಿ ಅದು ಹೇಗೆ ಪ್ರಾರಂಭವಾಯಿತೆಂಬುದನ್ನು ವಿವರಿಸಿದರಂತೆ. ಆ ಪ್ರಸಂಗ ಹೀಗಿದೆ– ಒಂದು ದಿನ ಬಸ್ಸಿನಲ್ಲಿ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೊರಟರು. ಬಸ್ಸಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿಕೊಂಡಿದ್ದರು… ಗೋಪಾಲಗೌಡರು ಕಂಡಕ್ಟರ್ ಸೀಟಿನಲ್ಲಿ ಕುಳಿತುಕೊಂಡಿದ್ದರು. ಬಸ್ಸು ಇಳಿಜಾರಿನಲ್ಲಿ ವೇಗವಾಗಿ ಚಲಿಸುತ್ತಿತ್ತು. ಹಾಗೆಯೇ ಪಕ್ಕದಲ್ಲಿ ನೋಡುತ್ತಿದ್ದ ಗೌಡರಿಗೆ, ಮುಂದಿನಚಕ್ರ ಸಡಿಲವಾಗಿ ಕ್ರಮೇಣ ಹೊರಗಡೆಗೆ ಸರಿಯುತ್ತಿದ್ದುದು ಕಂಡುಬಂದಿತು… ‘ಇನ್ನೇನು ಚಕ್ರ ಕಳಚಿಹೋಗುತ್ತದೆ; ಬಸ್ಸು ಪಲ್ಟಿ ಹೊಡೆಯುತ್ತದೆ; ಅನೇಕರು ಸತ್ತು ಹೋಗುತ್ತಾರೆ; ಅವರಲ್ಲಿ ನಾನೂ ಒಬ್ಬ..!’ ಎಂದು ಗಾಬರಿಗೊಂಡ ಗೌಡರ ಎದೆ ಬಲವಾಗಿ ಬಡಿದುಕೊಳ್ಳತೊಡಗಿತು. ಕುಳಿತಿದ್ದ ಸೀಟನ್ನು ಬಲವಾಗಿ ತಬ್ಬಿಕೊಂಡರು. ಕಣ್ಣುಗಳಲ್ಲಿ ಬಿಳೀಗುಡ್ಡೆ ಮಾತ್ರ ಕಾಣಿಸುತ್ತಿತ್ತೆಂದು ಪ್ರಯಾಣಿಕರೊಬ್ಬರು ಆಮೇಲೆ ಹೇಳಿದರಂತೆ! ಕಂಡಕ್ಟರ್‌ನ ಮುಂಜಾಗ್ರತೆಯಿಂದಾಗಿ ಬಸ್ಸು ನಿಂತಿತು. ಆಮೇಲೆ ಸರಿ ಮಾಡಿಸಿಕೊಂಡು ಮುಂದೆ ಪ್ರಯಾಣ ಮಾಡಿತು. ಬಸ್ಸಿನ ಆ ಘಟನೆ ನಡೆದಮೇಲೆ, ಯಾವಾಗಲಾದರೂ ಉದ್ರೇಕದ ಪರಿಸ್ಥಿತಿ ಉಂಟಾದಾಗ ಗೌಡರ ಎದೆಯ ಬಡಿತ ಜಾಸ್ತಿಯಾಗುತ್ತಿತ್ತು. ಅಂತಹ ಸಂದರ್ಭಗಳಲ್ಲಿ ಏನೇನೋ ಮಾತನಾಡುವುದು ಕಂಡುಬರುತ್ತಿತ್ತು. ಇದಕ್ಕೆಲ್ಲ ವಿಪರೀತ ಎದೆಬಡಿತವೇ ಕಾರಣವಾಗಿತ್ತು! ಇದನ್ನು ಕಂಡವರು, ವಾಸ್ತವಾಂಶವನ್ನು ತಿಳಿಯದೇ ಬುದ್ಧಿ ಭ್ರಮಣೆ ಎಂದು ಮಾತನಾಡಿಕೊಂಡದ್ದುಂಟು. ಉದ್ರೇಕದ ಸನ್ನಿವೇಶಗಳು ಸಂಭವಿಸಿದಾಗ, ಹೇಗೆ ಹೇಗೋ ನಡೆದುಕೊಳ್ಳುವ ಸಾಧ್ಯತೆಯಿತ್ತೆಂಬುದು ಸಮೀಪವರ್ತಿಗಳಾಗಿದ್ದವರಿಗೆ ಮನವರಿಕೆಯಾದ ದ್ದುಂಟು… ಉಪಾಧ್ಯಾಯರಾಗಿದ್ದ ಗೋಪಾಲಗೌಡರಿಗೆ ಮುಂದೆ ಓದಬೇಕೆಂಬ ಆಸೆ ಬಲಗೊಳ್ಳತೊಡಗಿತು. ಆದರೆ ಅವರ ಮನೋಗತಿಯನ್ನು ಕಂಡ ಅವರ ಹಿರಿಯರಿಗೆ ಮುಂದೆ ಓದುವುದಕ್ಕೆ ಕಳುಹಿಸಲು ಅಷ್ಟಾಗಿ ಇಷ್ಟವಿರಲಿಲ್ಲ. ಹಣದ ಅಡಚಣೆಯು ಬಹಳವಾಗಿತ್ತು. ಆದರೆ, ಅವರ ನಿಕಟವರ್ತಿಗಳಾಗಿದ್ದ ‘ಶ್ರೀನಾಗಾನಂದರು’ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚಾರಮಾಡಿ ಅಭ್ಯಾಸಕ್ಕೆ ಅಗತ್ಯವಾದ ಹಣ ವನ್ನೊದಗಿಸಿಕೊಟ್ಟರು. ಹೀಗಾಗಿ ಶಿವಮೊಗ್ಗದಲ್ಲಿ ಮತ್ತೆ ಇಂಟರ್‌ಮೀಡಿಯೆಟ್ ತರಗತಿಗೆ ಸೇರಿ ಅಭ್ಯಾಸವನ್ನು ಮುಂದುವರಿಸಿದರು. ನೆರವು ನೀಡಿದ ಹತ್ತಾರು ಸದ್ಗೃಹಸ್ಥರನ್ನು ಸದಾ ನೆನೆಯುತ್ತಿದ್ದರು… ಆಗರದಲ್ಲಿ ಉಪಾಧ್ಯಾಯ ವೃತ್ತಿಯನ್ನು ಅವಲಂಬಿಸಿಕೊಂಡದ್ದು ಕೇವಲ ಒಂದು ವರ್ಷದಷ್ಟು ಕಾಲವಾದರೂ ಆ ಅವಧಿ, ಅವರ ಮುಂದಿನ ಸಾರ್ವಜನಿಕ ಜೀವನಕ್ಕೆ ಭದ್ರವಾದ

ಸ್ವಾತ್ಮಗತ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಹೈದರಾಬಾದ್ ಕರ್ನಾಟಕ 371ನೆ ಕಲಂ ತಿದ್ದುಪಡಿಯ ಬಗ್ಗೆ ಕೆ.ವು ಲಕ್ಕಣ್ಣವರ ಸಮಗ್ರ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ೩೭೧ ನೇ ಕಲಂ ತಿದ್ದುಪಡಿ ಮಾಡಲೇಬೇಕು..! ದಕ್ಷಿಣ ಕರ್ನಾಟಕಕ್ಕೆ ಉತ್ತರ ಕರ್ನಾಟಕವೆಂದರೆ ಮುಂಬೈ ಕರ್ನಾಟಕ ಹಿಂದುಳಿದ ಪ್ರದೇಶ. ಇನ್ನೂ ಮುಂಬೈ ಕರ್ನಾಟಕಕ್ಕೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕ ತೀರಾ ಹಿಂದುಳಿದ ಪ್ರದೇಶವಾಗಿದೆ. ಈ ಕಾರಣಕ್ಕಾಗಿಯೇ ಈ ಹೈದರಾಬಾದ್ ಕರ್ನಾಟಕಕ್ಕೆ ೩೭೧ನೇ ಕಲಂ ಜಾರಿ ಮಾಡಿರುವುದು. ಆದರೆ ಈ ೩೭೧ನೇ ಕಲಂ ಜಾರಿಯಾದರೂ ಈ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಗಗನಕುಸುಮವಾಗಿದೆ. ಈ ಕಾರಣಕ್ಕಾಗಿಯೇ ಅಲ್ಲಿಯ ಹೈದರಾಬಾದ್ ಕರ್ನಾಟಕ ಕೆಲ ನನ್ನ ಸ್ನೇಹಿತ ಹೋರಾಟಗಾರರು ಮತ್ತು ರೇಣುಕಾ ಹೆಳವರ ಮತ್ತು ಸ್ನೇಹಿತರು ನಾನು ಸಮಗ್ರ ಉತ್ತರ ಕರ್ನಾಟಕದ ಸಮಸ್ಯೆಯ ಬಗೆಗೆ ಬರೆಯುತ್ತಿದಂತೆ ಹೈದರಾಬಾದ್ ಕರ್ನಾಟಕದ ೩೭೧ನೇ ಕಲಂ ಕೆಲ‌ ವಿಷಯಗಳಲ್ಲಿ ಅನುಷ್ಠಾನವಾದರೂ ಸಮಗ್ರವಾಗಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಸಾಕಾರವಾಗಿಲ್ಲ. ಇದು ಕೆಲ ರಾಜಕಾರಣಿಗಳ ಸಯಂ ಅಭಿವೃದ್ಧಿಗೆ ಮಾತ್ರ ಉಪಯೋಗವಾಗಿದೆ. ವೀರೇಂದ್ರ ಪಾಟೀಲರಾದಿಯಾಗಿ ಎಲ್ಲಾ ರಾಜಕಾರಣಿಗಳು ಈ ಬಗೆಗೆ ರಾಜಕೀಯ ಇಚ್ಛಾಶಕ್ತಿ ಪ್ರರ್ಧಶನ ಮಾಡಲಿಲ್ಲ. ಹೀಗಾಗಿ ಹೈದರಾಬಾದ್ ಕರ್ನಾಟಕ ಇನ್ನೂ ಹಿಂದುಳಿದೇ ಇದೆ. ಸಮಗ್ರ ಅಭಿವೃದ್ಧಿ ಗಗನಕುಸುಮವಾಗಿಯೇ ಇದೆ. ಹಾಗಾಗಿ ಹೈದರಾಬಾದ್ ಕರ್ನಾಟಕದ ಸಮಸ್ಯೆಗಳ ಬಗೆಗೆ ಬರೆಯಿರಿ ಎಂದು ಹೇಳಿದರು. ಆ ಕಾರಣಕ್ಕಾಗಿ ಈ ಹೈದರಾಬಾದ್ ಕರ್ನಾಟಕದ ಬಗೆಗೆ ಬರೆಯಬೇಕಾಯಿತು. ಈ ಲೇಖನ ಬರೆಯಬೇಕಾಯಿತು. ಅದು ಹೀಗಿದೆ…– ಸಮಗ್ರ ಹೈದರಾಬಾದ್ ಕರ್ನಾಟಕ ಅಭಿವೃದ್ದಿಗಾಗಿಯೇ ೩೭೧ನೇ ಕಲಂ ಜಾರಿ ಯಾಗಿದ್ದು. ಇಷ್ಟಾದರೂ ಸಮಗ್ರವಾಗಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿಲ್ಲವಿನ್ನೂ… -ಹೈದ್ರಾಬಾದ ಕರ್ನಾಟಕ ಮತ್ತು ಪ್ರಾದೇಶಿಕ ಅಸಮತೋಲನ– ಹೈದ್ರಾಬಾದ ಕರ್ನಾಟಕ ಭಾಗವೂ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಾಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶ ಎಂದು ಎಲ್ಲರಿಗೂ ತಿಳಿದ ವಿಷಯ. ಇದಕ್ಕೆ ಪೂರಕವಾಗಿ ಈ ಹಿಂದೆ ಸರಕಾರ ನೇಮಿಸಿದ ಹಲವಾರು ಸಮಿತಿಗಳು ವರದಿ ನೀಡಿವೆ. ೧೯೮೦ರಲ್ಲಿ ಮಾನ್ಯ ಶ್ರೀ ಗುಂಡುರಾವ್ ಅವರ ಸರಕಾರ ನೇಮಿಸಿದ ಶ್ರೀ ಎನ್.ಧರ್ಮಸಿಂಗ್ ಸಮಿತಿಯು ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿಯಲ್ಲಿನ ಅಸಮತೋಲನವನ್ನು ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸಿ, ಈ ಭಾಗದ ಅಭಿವೃದ್ಧಿಗಾಗಿ ಒಂದು ವಿಷೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಲಾಗಿತ್ತು. ಈ ಸಮಿತಿಯ ಶಿಫಾರಸ್ಸಿನಂತೆ ೧೯೯೨ ರಲ್ಲಿ ರಾಜ್ಯ ಸರಕಾರ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ವರ್ಷಕ್ಕೆ ೧೦ ರಿಂದ ೫೦ ಕೋಟಿ ರೂಪಾಯಿವರೆಗೆ ಅನುದಾನವನ್ನು ನೀಡಿ ಕೈ ತೊಳೆದು ಕೊಂಡಿತ್ತೇ ವಿನಃ ಇದರಿಂದ ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗುವಂತಹ ಕೆಲಸ ಆಗಿರುವುದಿಲ್ಲ ಎನ್ನಬಹುದು… ತದ ನಂತರ ೨೦೦೨ರಲ್ಲಿ ಮಾನ್ಯ ಶ್ರೀ ಎಸ್.ಎಮ್.ಕೃಷ್ಣರವರ ನೇತೃತ್ವದ ಸರಕಾರವು ನೇಮಿಸಿದ ಡಾ: ಡಿ.ಎಮ್.ನಂಜುಂಡಪ್ಪ ಉನ್ನತಾಧಿಕಾರ ಸಮಿತಿಯು ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಂಡು ಪ್ರಾದೇಶಿಕ ಅಸಮತೋಲನ ಕುರಿತು ಆಳವಾಗಿ ಅಧ್ಯಯನ ಮಾಡಿ ಸಲ್ಲಿಸಿರುವ ವರದಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶವು ಅಭಿವೃದ್ದಿಯಲ್ಲಿ ಮೈಸೂರು ಕರ್ನಾಟಕ ಮತ್ತು ಮುಂಬಯಿ ಕರ್ನಾಟಕಕ್ಕೆ ಹೋಲಿಸಿದಾಗ ನೂರು ವರ್ಷದಷ್ಟು ಹಿಂದುಳಿದಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ… ಡಾ: ಡಿ.ಎಮ್.ನಂಜುಂಡಪ್ಪ ಉನ್ನತಾಧಿಕಾರ ಸಮಿತಿ ಸಲ್ಲಿಸಿರುವ ವರದಿಯು ರಾಜಕೀಯ ಪಕ್ಷಗಳಿಗೆ ಚುನಾವಣೆ ಸಮಯದಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಜನರಿಗೆ ವಂಚಿಸುವ ಒಂದು ಚುನಾವಣಾ ವಿಷಯವಾಯಿತೇ ವಿನಃ ಆ ವರದಿಯನ್ನು ಸಂಪೂರ್ಣವಾಗಿ ಜಾರಿ ತರುವ ಮನಸ್ಸು ಸುಮಾರು ೨೦೦೨ ರಿಂದ ಇಲ್ಲಿಯವರೆಗೆ ಬಂದ ಯಾವ ಸರಕಾರಗಳು ಮಾಡಲಿಲ್ಲ… ಡಾ: ಡಿ.ಎಮ್.ನಂಜುಂಡಪ್ಪ ಉನ್ನತಾಧಿಕಾರ ಸಮಿತಿ ಸಲ್ಲಿಸಿರುವ ವರದಿಯಲ್ಲಿ ರಾಜ್ಯದಲ್ಲಿರುವ ೧೭೫ ತಾಲ್ಲೂಕುಗಳನ್ನು ಅಭಿವೃದ್ಧಿ ದೃಷಿಯಿಂದ ನಾಲ್ಕೂ ವಿಧಗಳಾಗಿ ವಿಂಗಡಿಸಲಾಗಿದೆ. ೧. ಸಾಪೇಕ್ಷವಾಗಿ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು, ೨. ಹಿಂದುಳಿದ ತಾಲ್ಲೂಕುಗಳು, ೩. ಅತೀ ಹಿಂದುಳಿದ ತಾಲ್ಲೂಕುಗಳು ಮತ್ತು ೪. ಅತ್ಯಂತ ಹಿಂದುಳಿದ ತಾಲ್ಲೂಕುಗಳು ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ ೬೧ ತಾಲ್ಲೂಕುಗಳು ಅಭಿವೃದ್ದಿ ಹೊಂದಿದ ತಾಲ್ಲೂಕುಗಳು ಮತ್ತು ೧೧೪ ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳು ಎಂದೂ ಅವುಗಳಲ್ಲಿ ೩೫ ಹಿಂದುಳಿದ ತಾಲ್ಲೂಕುಗಳು, ೪೦ ಅತೀ ಹಿಂದುಳಿದ ತಾಲ್ಲೂಕುಗಳು ಹಾಗೂ ೩೯ ಅತ್ಯಂತ ಹಿಂದುಳಿದ ತಾಲ್ಲೂಕುಗಳು ಎಂದು ವಿಶ್ಲೇಶಣೆ ನೀಡಲಾಗಿದೆ. ಇದೇ ರೀತಿಯಲ್ಲಿ ನಮ್ಮ (ರಾಯಚೂರು) ಜಿಲ್ಲೆಯನ್ನು ಪರಿಗಣಿಸಿದರೆ, ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಒಂದು ಅತೀ ಹಿಂದುಳಿದ ತಾಲ್ಲೂಕು ರಾಯಚೂರು ತಾಲ್ಲೂಕಾಗಿದೆ. ಇದರಲ್ಲಿ ಅತ್ಯಂತ ಹಿಂದುಳಿದ ನಾಲ್ಕು ತಾಲ್ಲೂಕುಗಳೆಂದರೆ ಸಿಂಧನೂರು, ಲಿಂಗಸಗೂರು, ದೇವದುರ್ಗ ಹಾಗೂ ಮಾನ್ವಿ ತಾಲ್ಲೂಕುಗಳು ಇರುತ್ತವೆ… ಹೈದ್ರಾಬಾದ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ೩೪ ತಾಲ್ಲೂಕುಗಳಲ್ಲಿ ಕೇವಲ ಮೂರು ತಾಲ್ಲೂಕುಗಳು ಸಾಪೇಕ್ಷವಾಗಿ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು ಮತ್ತು ಉಳಿದ ೩೧ ತಾಲ್ಲೂಕುಗಳು ಹಿಂದುಳಿದವು ಎಂದಿದೆ. ಹೈದ್ರಾಬಾದ ಕರ್ನಾಟಕದ ಶೇಕಡ ೯೧.೧೭ ರಷ್ಟು ತಾಲ್ಲೂಕುಗಳು ಹಿಂದುಳಿದಿವೆ ಎಂದು ಸ್ಪಷ್ಟವಾಗುತ್ತದೆ. ರಾಜ್ಯದ ೩೯ ಅತ್ಯಂತ ಹಿಂದುಳಿದ ತಾಲ್ಲೂಕುಗಳ ಪೈಕಿ ೨೧ ತಾಲ್ಲೂಕುಗಳು ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿವೆ ಎನ್ನುವದೇ ಅತೀ ಸೋಜಿಗದ ವಿಷಯವಾಗಿದೆ. ಡಾ: ಡಿ.ಎಮ್.ನಂಜುಂಡಪ್ಪನವರ ವರದಿಯು ರಾಜ್ಯದಲ್ಲಿ ವಿಭಾಗವಾರು ಒಟ್ಟಾರೆಯಾಗಿ ಅಭಿವೃದ್ದಿ ಹೊಂದಿದ (ಯಾವುದೇ ಹಿಂದುಳಿದ ತಾಲ್ಲೂಕುಗಳು ಇಲ್ಲದ) ಮೂರು ಜಿಲ್ಲೆಗಳನ್ನು ಗುರುತಿಸಿದ್ದು ಆ ಮೂರು ಜಿಲ್ಲೆಗಳು ಮೈಸೂರು ಭಾಗದಲ್ಲಿವೆ. ಅದೇ ರೀತಿ ಒಟ್ಟಾರೆಯಾಗಿ ಅಭಿವೃದ್ದಿ ಹೊಂದಿರದ (ಯಾವುದೇ ಅಭಿವೃದ್ದಿ ಹೊಂದಿದ ತಾಲ್ಲೂಕುಗಳು ಇಲ್ಲದ) ಮೂರು ಜಿಲ್ಲೆಗಳನ್ನು ಗುರುತಿಸಿದ್ದು ಆ ಮೂರು ಜಿಲ್ಲೆಗಳು (ಅವಿಭಜಿತ ಗುಲ್ಬರ್ಗಾ, ರಾಯಚೂರು ಮತ್ತು ಕೊಪ್ಪಳ) ಹೈದ್ರಾಬಾದ-ಕರ್ನಾಟಕದಲ್ಲಿವೆ ಎಂಬುದು ಈ ಭಾಗದ ಜನರಿಗೆ ಚಿಂತೆಗೀಡು ಮಾಡಿದೆ… ಐತಿಹಾಸಿಕ ಹಿನ್ನಲೆ:- ಹೈದ್ರಾಬಾದ-ಕರ್ನಾಟಕ ಪ್ರದೇಶವು ಅಭಿವೃದ್ದಿ ಕಾಣದೇ ಹಿಂದುಳಿಯಲು ಈ ಕೆಳಗಿನ ಕಾರಣಗಳನ್ನು ಕೊಡಬಹುದು. ಹೈದ್ರಾಬಾದ-ಕರ್ನಾಟಕವು ಅತ್ಯಂತ ಸಂಪದ್ಭರಿತ ನಾಡಾಗಿದ್ದು, ನೈಸರ್ಗಿಕ ಸಂಪನ್ಮೂಲಗಳಿಂದ ಕೂಡಿರುವ ಪ್ರದೇಶವಾಗಿದೆ. ಇಂತಹ ಸಂಪದ್ಭರಿತ ನಾಡಿನ ಮೇಲೆ ತಮ್ಮ ಹಿಡಿತ ಸಾದಿಸಲು ಇಲ್ಲ ಯಾವಾಗಲೂ ಯುದ್ದ ನಡಿತಾ ಇದ್ದದ್ದು ಇತಿಹಾಸದಿಂದ ತಿಳಿದು ಬರುತ್ತದೆ. ಈ ಪ್ರದೇಶವನ್ನು ತೆಲುಗು ಭಾಷಿಗನಾದ ಶ್ರೀ ಕೃಷ್ಣದೇವರಾಯನ ವಂಷಸ್ಥರಿಂದ, ಉರ್ದು/ಪಾರ್ಸಿ ಭಾಷೆಯನ್ನು ಮಾತನಾಡುವ ಬಿಜಾಪುರದ ಸುಲ್ತಾನರು ಮತ್ತು ಹೈದ್ರಾಬಾದ ಸಂಸ್ಥಾನದ ನಿಜಾಮನ ವಂಶಸ್ಥರು ಸುಮಾರು ೭೦೦ ವರ್ಷಗಳ ಕಾಲ ಆಳ್ವಿಕೆ ನಡೆಸಿರುತ್ತಾರೆ. ಹೀಗಾಗಿ ಈ ಭಾಗದ ಜನರು ಬೇರೆಯವರ ಆಳ್ವ್ವಿಕೆಯ ದಾಸ್ಯಕ್ಕೊಳಗಾಗಿ ಅಭಿವೃದ್ದಿಯಿಂದ ವಂಚಿತರಾಗಿದ್ದಾರೆ ಎಂದು ಹೇಳಬಹುದು. ಇಲ್ಲಿ ಲಬ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಜನರ ಜೀವನ ಉತ್ತಮಗೊಳಿಸುವ ಕೆಲಸ ನಮ್ಮನ್ನಾಳಿದ ಯಾವ ರಾಜ ಮಹಾರಾಜರು ಮತ್ತು ಪ್ರಜಾಪ್ರಭುತ್ವ ಸರಕಾರಗಳು ಮಾಡಲಿಲ್ಲ… ಶೈಕ್ಷಣಿಕ ಸಮಸ್ಯೆಗಳು:- ಸ್ವಾತಂತ್ರ್ಯಪೂರ್ವದಲ್ಲಿ ಆಳುವ ವರ್ಗದ ಆಡಳಿತ ಭಾಷೆ ಒಂದಾದರೆ, ಇಲ್ಲಿಯ ಜನರ ಆಡುವ ಭಾಷೆ ಮತ್ತೊಂದು ಆಗಿತ್ತು. ಹೀಗಾಗಿ ನೂರಾರು ವರ್ಷಗಳ ಕಾಲ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ೧೯೪೮ ರವರೆಗೂ ಇಡೀ ಹೈದ್ರಾಬಾದ-ಕರ್ನಾಟಕದಲ್ಲಿ ಕೇವಲ ಮೂರೇ ಮೂರು ಹೈಸ್ಕೂಲಗಳಿದ್ದವು ಮತ್ತು ಶಿಕ್ಷಣವು ಖಡ್ಡಾಯವಾಗಿ ಉರ್ದು ಮಾದ್ಯಮದಲ್ಲೇ ಪಡೆಯಬೇಕಾಗಿತ್ತು ಎಂದರೆ ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬಹುದು. ತೀರ ಇತ್ತೀಚಿನವರೆಗೆ ಅಂದರೆ ೧೯೯೦ ರ ವರೆಗೆ ತಾಲ್ಲೂಕಿಗೆ ಎರಡು-ಮೂರು ಪ್ರೌಡಶಾಲೆಗಳಿದ್ದವು ಮತ್ತು ಇಂದಿನವರೆಗೂ ಕೂಡ ಎಷ್ಟೋ ಶಾಲೆಗಳು ಏಕೋಪಾದ್ಯಯ ಶಾಲೆಗಳಾಗಿವೆ. ಇಂದಿಗೂ ನಮ್ಮ ಭಾಗದ ಬಹಳಷ್ಟು ಶಾಲಾ/ಕಾಲೇಜುಗಳು, ಶಿಕ್ಷಕರ/ಉಪನ್ಯಾಸಕರ ಕೊರತೆಯನ್ನು ಎದುರಿಸುತ್ತಿವೆ. ಉದಾಹರಣೆಗೆ ರಾಯಚೂರು ಜಿಲ್ಲೆಯಲ್ಲಿರುವ ೩೯ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮಂಜೂರಾದ ಸುಮಾರು ೪೦೦ ಉಪನ್ಯಾಸಕರ ಹುದ್ದೆಗಳಲ್ಲಿ ೧೯೨ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಅದೇ ರೀತಿ ರಾಜ್ಯದಲ್ಲಿ ೨೦೦೯-೧೦ ನೇ ಸಾಲಿನಲ್ಲಿ ೪೦೦೦ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ತುಂಬಲಾಗಿದ್ದು ಅವುಗಳಲ್ಲಿ ೨೫೦೦ ಹುದ್ದೆಗಳು ಹೈದ್ರಾಬಾದ-ಕರ್ನಾಟಕ ವಿಭಾಗದಲ್ಲಿ ಖಾಲಿ ಇದ್ದವು. ಇಡೀ ಕೊಪ್ಪಳ ಜಿಲ್ಲೆಗೆ ಇವತ್ತು ಕೂಡ ಒಂದೇ ಒಂದು ವೃತ್ತಿಪರ ಕಾಲೇಜುಗಳಿಲ್ಲದಿರುವದು ವಿಪರ್ಯಾಸವೇ ಸರಿ. ಈ ರೀತಿ ಶೈಕ್ಷಣಿಕ ಕೇಂದ್ರಗಳ ಹಾಗೂ ಮೂಲಭೂತ ಸೌಲಬ್ಯಗಳ ಕೊರತೆಯಿಂದ ಇಲ್ಲಿ ಅನಕ್ಷರತೆ ಮಡುಗಟ್ಟಿದೆ… ನೀರಾವರಿ ಸಮಸ್ಯೆ:- ಹೈದ್ರಾಬಾದ-ಕರ್ನಾಟಕವು ನದಿಗಳ ಬೀಡು ಎಂದರೆ ಅತೀಶಯೋಕ್ತಿಯಾಗಲಾರದು. ಈ ಭಾಗದಲ್ಲಿ ತುಂಗೆ-ಭದ್ರೆ, ಕೃಷ್ಣೆ, ಭೀಮಾ, ಕಾರಂಜಾ ಇವೆಲ್ಲ ನದಿಗಳು ಹರಿಯುತ್ತವೆ. ಇಲ್ಲಿನ ಜನರ ದುರ್ದೈವವೆಂದರೆ, ಈ ನದಿಗಳಲ್ಲಿ ಹರಿಯುವ ನೀರು ರೈತರ ಹೊಲಗಳಿಗೆ ತಲುಪದೇ ಇರುವದು ನಮ್ಮ ಸರಕಾರಗಳ ನಿರ್ಲಕ್ಷ್ಯ ಎನ್ನಬಹುದು. ನೀರಾವರಿ ಯೋಜನೆಯಡಿಯಲ್ಲಿ ತುಂಗಾ-ಭದ್ರಾ ಎಡದಂಡೆ ಕಾಲುವೇ ನಿರ್ಮಿಸಿದ್ದು, ಅದು ರೈತರ ಹೊಲಗಳಿಗೆ ಉಪಯೋಗವಾದದ್ದಕ್ಕಿಂತ ಬೇಳೆಗಳನ್ನು ಹಾಳು ಮಾಡಿದ್ದೆ ಹೆಚ್ಚು, ಯಾಕೆಂದರೆ ವರ್ಷದಲ್ಲಿ ಎರಡು-ಮೂರು ಸಲ ಅದು ಖಂಡಿತವಾಗಿ ಒಡೆದು ಹೋಗುತ್ತದೆ. ಅದೇ ಪರಸ್ಥಿತಿ ನಾರಾಯಣಪುರ ಕೃಷ್ಣ ಬಲದಂಡೆ ಕಾಲುವೆಯದ್ದು ಆಗಿದೆ. ಇನ್ನೂ ಬಾಕಿ ಉಳಿದಿರುವ ನೀರಾವರಿ ಯೋಜನೆಗಳು ಹಲವಾರು, ಅವುಗಳಲ್ಲಿ ಮುಖ್ಯವಾದವುಗಳೆಂದರೆ ಭೀಮಾ ಬ್ಯಾರೇಜ ನಿರ್ಮಾಣ, ಕಾರಂಜಾ ಏತ ನೀರಾವರಿ ಯೋಜನೆ, ರಾಂಪುರ ಏತನೀರಾವರಿ ಯೋಜನೆ, ನಂದವಾಡಗಿ ಏತ ನೀರಾವರಿ ಯೋಜನೆ, ಹೀರೆ ಹಳ್ಳ ಯೋಜನೆ ಮುಂತಾದವು ಹಾಗೆ ನೆನೆಗುದಿಗೆ ಬಿದ್ದಿವೆ. ರಾಜ್ಯ ಸರಕಾರಗಳು ಮನಸ್ಸು ಮಾಡಿದರೆ ಈ ಭಾಗದ ಇಂಚಿಂಚು ಭೂಮಿಯನ್ನು ನೀರಾವರಿಗೊಳಪಡಿಸಬಹುದಾದಷ್ಟು ನೀರು ಇಲ್ಲಿ ಲಬ್ಯವಿದೆ… ನಿರುದ್ಯೋಗ ಸಮಸ್ಯೆ:- ಈ ಭಾಗದ ರೈತರು, ಕೂಲಿಕಾರ್ಮಿಕರು ಹೊಟ್ಟೆಪಾಡಿಗಾಗಿ ತಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಸಹಕುಟುಂಬ ಪರಿವಾರ ಸಮೇತ ಮಹಾನಗರಗಳಿಗೆ ಉದ್ಯೋಗವನ್ನರಸಿ ಗೂಳೆ ಹೋಗುವದು ಸರ್ವೇ ಸಾಮಾನ್ಯವಾಗಿದೆ. ಅದೇ ರೀತಿ ಶೈಕ್ಷಣಿಕ ಕೇಂದ್ರಗಳ ಹಾಗೂ ಮೂಲಭೂತ ಸೌಲಬ್ಯಗಳ ಕೊರತೆಯಿಂದ ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ದಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾದ್ಯವಾಗದೇ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಸಂಖ್ಯೆಯಲ್ಲಿ ವಂಚಿತರಾಗಿ ಸೋತಿರುವದು ಸ್ಪಷ್ಟ. ಇದರಿಂದಾಗಿ ಈ ಭಾಗದ ಸರಕಾರಿ ಶಾಲಾ-ಕಾಲೇಜುಗಳಲ್ಲಿ, ಸರಕಾರಿ ಕಛೇರಿಗಳಲ್ಲಿ ಜವಾನರಿಂದ ಹಿಡಿದು ಅಧಿಕಾರಿಗಳವರೆಗೂ ಸರಕಾರಿ ನೌಕರರೆಲ್ಲರೂ ರಾಜ್ಯದ ಬೇರೆ ಭಾಗದವರೇ ಆಗಿರುತ್ತಾರೆ. ರಾಜ್ಯ ಸರಕಾರ ಜಿಲ್ಲಾವಾರು ನೇಮಕಾತಿ ಮಾಡಿಕೊಳ್ಳುವ ಸರಕಾರಿ ಹುದ್ದೆಗಳ ಅಂಕಿ ಅಂಶಗಳನ್ನು ನೋಡಿದಾಗ ಆಶ್ಚರ್ಯವಾಗುವ ಸಂಗತಿ ಗೋಚರಿಸುತ್ತದೆ. ಉದಾಹರಣೆಗೆ ಇತ್ತೀಚಿನ ವರ್ಷಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರ ವಿವರಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ವರ್ಷ ಖಾಲಿ ಹುದ್ದೆಗಳ ವಿವರ ನೇಮಕಾತಿ ಮಾಡಿದ ಹುದ್ದೆಗಳ ವಿವರ ರಾಯಚೂರು ಜಿಲ್ಲೆಯವರೇ ನೇಮಕವಾದವರ ಸಂಖ್ಯೆ ಶೇಕಡಾವಾರು (%) ೨೦೦೬-೦೭ ೬೯೬ ೬೯೬ ೧೫೧ ೨೧.೬ ೨೦೦೭-೦೮ ೧೪೬೩ ೧೪೬೩ ೧೦೪ ೭.೧ ೨೦೦೮-೦೯ ೧೧೫೪ ೧೧೫೪ ೭೫ ೬.೨ ಇದರಿಂದ ಈ ಭಾಗದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವದು ಕಳವಳಕಾರಿ ವಿಷಯವಾಗಿದೆ… ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಿಸಲು ಒಂದೇ ಒಂದು ಪರಿಹಾರ ಎಂದರೆ ಸಂವಿಧಾನದ ೩೭೧ ನೇ ಕಲಂ ತದ್ದುಪಡಿ ಮಾಡುವ ಮೂಲಕ ಮುಲ್ಕಿ ಕಾನೂನು ಜಾರಿಮಾಡಿ ಸ್ಥಳೀಯ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಮತ್ತು ಉನ್ನತ ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ನೀಡುವ ಅವಶ್ಯಕತೆ ಇರುತ್ತದೆ. ಮುಲ್ಕಿ ಕಾನೂನು:- ಇಲ್ಲಿ ಶೈಕ್ಷಣಿಕ ಸೌಲಭ್ಯಗಳ ಕೊರತೆಯಿಂದ ಸರಿಯಾದ ಶಿಕ್ಷಣ ಸಿಗುತ್ತಿರಲಿಲ್ಲ. ಅಂದು ಹೈದ್ರಾಬಾದ ರಾಜ್ಯದ ಆಡಳಿತ ಭಾಷೆ ಉರ್ದುವಾಗಿತ್ತು ಮತ್ತು ಬಹು ಸಂಖ್ಯಾತ ಜನರ ಭಾಷೆ ತೆಲುಗು, ಮರಾಠಿ ಮತ್ತು ಕನ್ನಡವಾಗಿತ್ತು, ಇದರಿಂದಾಗಿ ಎಲ್ಲರಿಗೂ ಶಿಕ್ಷಣ ದಕ್ಕುವದು ಕಷ್ಟವಾಗುತಿತ್ತು. ಆ ಸಂದರ್ಭದಲ್ಲಿ ಸರಕಾರಿ ಹುದ್ದೆಗಳಿಗೆ ನೇಮಕವಾಗುತ್ತಿದ್ದವರು ಹೆಚ್ಚಿನ ಸಂಖ್ಯೆಯಲಿ ಉತ್ತರ ಭಾರತದ ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ ಅಭ್ಯರ್ಥಿಗಳಾಗಿದ್ದರು. ಇದನ್ನು ಮನಗೊಂಡು ಹೈದ್ರಾಬಾದ

ಸ್ವಾತ್ಮಗತ Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ಸಿಟ್ಟು ಸಿಟ್ಟು ಒಬ್ಬ ಮನುಷ್ಯ ಅಂದಮೇಲೆ ಅವನಿಗೆ ಎಲ್ಲಾತರದ ಭಾವನೆಗಳು ಇರುವುದು ಸಹಜ. ಭಾವನೆಗಳ ಸರಮಾಲೆಯಲ್ಲಿ ಅವನು ತನ್ನನ್ನು ತಾನು ವೈಯಕ್ತಿಕವಾಗಿ, ಮಾನಸಿಕವಾಗಿ ಬೆಳೆಸುತ್ತಾನೆ.ಶಾಲೆಗಳಲ್ಲಿ ಈ ನಿಟ್ಟಿನಲ್ಲಿ ಮಕ್ಕಳ ಮೇಲೆ ಪ್ರಭಾವಗಳು ಕಡಿಮೆಯೇ. ಸಮಯದ ಅಭಾವವೊ, ಹೊಸ ಹೊಸ ಕಾನೂನುಗಳ ಮಧ್ಯಸ್ತಿಕೆಯೊ, ಅಂಕಪಟ್ಟಿ ಹಾಗೂ ಅಂಕಗಳ ನಡುವಿನ ಹೋರಾಟವೋ, ತಿಳಿಯದು. ಹೀಗೆ ಒಬ್ಬ ಭಾವನಾ ಲೋಕದ ತಿರುವುಗಳಲ್ಲಿ ಸಿಲುಕಿಕೊಂಡು ಒದ್ದಾಡುತ್ತಾನೆ.  ಇವನೊಬ್ಬ ಅತಿ ತೆಳು ಮೈಕಟ್ಟಿನ ಸರಳ ಜೀವಿ. ‘ಮಿಸ್’ ‘ಮಿಸ್’ ಎಂದು ಹೇಳಿಕೊಂಡು ಇರುವುದೇ ಒಂದು ಕಾಯಕ. ಸಿಟ್ಟು ಬಂದರೆ ಮಾತ್ರ ಅವನ ಹುಚ್ಚಾಟ ತಡೆಯಲಾಗದು…. ತನ್ನನ್ನು ತಾನು ನಿಯಂತ್ರಿಸಿಕೊಳ್ಳುವುದರಲ್ಲಿ ಅತಿ ಶೂನ್ಯ. ಸಿಟ್ಟು ಏನಕ್ಕೆ ಬೇಕಾದರೂ ಬರಬಹುದು! ಯಾಕೆ ಬಂತು? ಎಲ್ಲಿಗೆ ಹೋಯ್ತು? ಏನು ಮಾಡಿದ? ಯಾವುದಕ್ಕೂ ಲೆಕ್ಕ ಚುಕ್ತಾ ಇಲ್ಲ.. ಒಂದಿಷ್ಟು ಕಾರಣಗಳ ಕಂತೆಯಷ್ಟೇ.. ಹತ್ತನೇ ತರಗತಿಯಲ್ಲಿ ಓದುತ್ತಿದ್ದ. ಅವನ ಜೊತೆ ಇನ್ನಷ್ಟು ಮಕ್ಕಳು…ನನ್ನ ವಿಚಾರಧಾರೆಗಳು, ರೀತಿ-ನೀತಿಗಳು, ಇವರಿಗೆ ತಿಳಿದಿರಲಿಲ್ಲ.. ಓದುತ್ತಿದ್ದ ಶಾಲೆಯಲ್ಲಿ ಅವನದೇ ದರ್ಬಾರು.. ಬರಿಯ ಆಟ ಆಟ ಆ…ಟ. ಯಾವುದೊಂದರ ಜವಾಬ್ದಾರಿಯೂ ಇದೆ ಎನಿಸುತ್ತಿರಲಿಲ್ಲ…ಈ ಹುಡುಗನಲ್ಲಿ ಮೊದಲಿನಿಂದಲೂ ಸಭ್ಯವಾದ ಅಸಭ್ಯತೆ…ತಾಳ್ಮೆ-ಸಿಟ್ಟು ಎರಡರ ವಿಚಿತ್ರ ಮಿಶ್ರಣ. ಇವನದೊಂದು ಹೊಸ ತತ್ವ-ಸಿಟ್ಟು ಬಂದರೆ ಹೊಡ್ದು ಬಿಡೋದು.. ಯಾರು? ಏನು? ಎತ್ತ? ಎಷ್ಟು ಪೆಟ್ಟು? ಯಾವುದರ ಲೆಕ್ಕ  ಗೊತ್ತಿಲ್ಲದವ. ವಿಚಿತ್ರ ಏನು ಅಂದ್ರೆ ತಾಯಿಗೆ ಬೇಜಾರ್ ಮಾಡುವುದಿಲ್ಲ. ತಾಯಿಗೆ ಬೇಜಾರಾದರೆ, ಅವಳನ್ನು ಖುಷಿಪಡಿಸಲು ಏನು ಬೇಕಾದ್ರೂ  ಮಾಡುತ್ತಾನೆ. ತಾಯಿ “ಹೊಡಿಬೇಡ!” ಅಂದ್ರೆ ಮಾತ್ರ ಕೇಳಕ್ಕಾಗಲ್ಲ..ಇದು ಇವನ ನಿತ್ಯದ ಕಾರ್ಯ…ಒಂದಿನ ಕ್ಲಾಸಿನೊಳಗೆ ಬಂದ… “ಮಿಸ್, ಇವತ್ತು ಅವನಿಗೆ ಹೊಡೆದು ಬಂದೆ, ಬಹಳ ದಿಮಾಕ್ ತೋರಿಸುತ್ತಿದ್ದ!”  ನಾನು“ಯಾಕೋ? ನಿನಗದೇ ಕೆಲಸನಾ?  ಎಷ್ಟು ಸಂಬಳ ಕೊಡುತ್ತಾರೆ ಎಲ್ಲರಿಗೆ ಹೊಡೆಯೋಕೆ? ಹೊಡೆಯೋದು ಗಂಡಸ್ತನ ಅಲ್ಲಾ ,ನಿಜವಾದ ಗಂಡಸು ಸುಮ್ ಸುಮ್ನೆ ಕೈ ಎತ್ತಲ್ವೋ..” ಸಮಾಧಾನವಾಗಿ ಹೇಳೋದು-ಪ್ರತೀ ಸಲ…ಸುಮ್ಮನೆ ಇವನಿಗೊಂದು ಕಾರಣ ಬೇಕು ಹೊಡೆಯಕ್ಕೆ ಕೈ ಕಾಲು ತುರಿಸ್ತಾ ಇರುತ್ತೇನೋ?..ಇವನ ಹೊಡೆತಕ್ಕೆ ಇವನ ತಾಯಿ ಸ್ಕೂಲಿಗೆ ಹೋಗಿ ತಲೆ ತಗ್ಗಿಸಬೇಕು…ಮನೆಗೆ ಬಂದು ಬೊಬ್ಬೆ. ಹೀಗಾದರೆ ಸಮಸ್ಯೆ ಬಗೆಹರಿಯುತ್ತಾ….ತಾಯಿ- ಗುರುಗಳ ಬಗ್ಗೆ ಗೌರವ ಇರುವವನು, ಮಾತು ಕೇಳದೆ ಇರ್ತಾನಾ? ಅವನ ಹಳೆಯ ಅನುಭವಗಳು, ಹೊಸ  ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನೋಡಲು ಬಿಡುತ್ತಿರಲಿಲ್ಲ…. ಇದು ತಿಳಿದು ಬಂತು ನನಗೆ.ಈಸಾರಿ ಮನಸ್ಸು ಮಾಡಿ ಹೇಳಿಬಿಟ್ಟೆ… “ನೀನು ಹೊಡೆದಾಡಿಕೊಂಡು ಬಂದರೆ ನನ್ನ ಹತ್ತಿರ ಪಾಠ ಕಲಿಯಲು ಬರಲೇಬೇಡ…”ಗುಂಪನ್ನು ಸೇರಿ ಹೊಡೆದಾಡೋದು, ಕೀಟಲೆ ಮಾಡೋದು, ಎಲ್ಲ ಬಿಡಲು ಪ್ರಯತ್ನ ಮಾಡಲು ಪ್ರಾರಂಭಿಸಿದ. “ಯಾವತ್ತಾದರೂ ನಿನ್ನೆದುರಿಗೆ ನಿನಗಿಷ್ಟವಾಗದವರು ಬಂದರೆ ಅವರನ್ನ ಬಿಟ್ಟುಬಿಡು……. ಸಿಟ್ಟು ಬಂದರೆ ಸುಮ್ಮನೆ ಜಾಗ ಖಾಲಿ ಮಾಡು. ನಾಯಿ ಎದುರು ಹೋಗಿ ಸುಮ್ಮನೆ ಅಲ್ಲಾಡಿದರೆ ಸಾಕು, ಅದು  ಬೊಗಳಲು ಶುರು ಮಾಡುತ್ತೆ. ಅದೇ ಹುಲಿ ಎದುರು ಹೋಗಿ ನೀನೇನೇ ಮಾಡಿದರೂ, ಅದಕ್ಕೆ ಹಸಿವಿದ್ದಾಗ ಮಾತ್ರ ನಿನ್ನ ತಿನ್ನುತ್ತೆ! ಇಲ್ಲ, ಅದರ ಪಾಡಿಗೆ ಅದು ಇರುತ್ತೆ…ಅರ್ಥ ಮಾಡ್ಕೊಳೋ….” ಅಂದೆ.. ಹುಟ್ಟಿದಾಗಿನಿಂದ ಬಂದ ಸಿಟ್ಟನ್ನು ಸುಲಭವಾಗಿ ತೆಗೆಯಲಾಗದು.. ಅವನಿಗೆ ಸಿಟ್ಟು ಬಂದಾಗಲೆಲ್ಲಾ, ಬೆವರು ಇಳಿಯುವ ಹಾಗೆ ಎಕ್ಸಸೈಜ್ ಮಾಡಿಸ್ತಿದ್ದೆ.“ಸಾರಿ ಮಿಸ್, ನಾ ಇನ್ಮೇಲೆ ಸಿಟ್ಟು ಮಾಡಿಕೊಳ್ಳಲ್ಲ” ಅಂತ ಹೇಳಿ ಎರಡು ದಿನಕ್ಕೆ ಮತ್ತೊಬ್ಬರಿಗೆ ಹೊಡೆದು ಬಂದಿದ್ದ…ಇವನ ಸಿಟ್ಟನ್ನು   ಹೇಗಾದರೂ ಸರಿ ಮಾಡಬೇಕು, ಇವನ ಸಿಟ್ಟನ್ನು ನಿಯಂತ್ರಿಸೋದು ಅಥವಾ ಸರಿ ಹಾದಿಯಲ್ಲಿ ಹೊರ ಹಾಕುವುದು ಅತ್ಯಗತ್ಯ. ಕಲಿಸಲೇಬೇಕು ಅಂತ ನಾನು ಪಣತೊಟ್ಟು….. ದಿನವೂ ಒಂದು ಹತ್ತು ನಿಮಿಷನಾದ್ರೂ ಅವನನ್ನು ಉರ್ಸೋದು, ಸಿಟ್ಟು ಬರೋಹಾಗೆ ಮಾಡೋದು, ಆಮೇಲೆ, “ಊಟ ಮಾಡು, ನೀರು ಕುಡಿ, ಹೊಡಿತೀಯಾ ಹೊಡಿ ಬಾ” ಅಂತ ರೇಗ್ಸೋದು… ಸಿಟ್ಟಾಗುವುದಕ್ಕೆ , ಆಗದೆ ಇರುವುದಕ್ಕೆ, ಇರುವ ಹಲವು ಕಾರಣಗಳನ್ನು ತಿಳಿಸಿ, ಅದನ್ನು ನಿಯಂತ್ರಿಸುವ ಬಗ್ಗೆ ಎಲ್ಲ ವಿಷಯ ಪ್ರಾಕ್ಟಿಕಲ್ ಆಗಿ ಮಾಡಿಸಿಲಿಕ್ಕೆ ಶುರುಮಾಡಿದೆ…. ಅವನ ಸಿಟ್ಟಿನಿಂದ ಆಗುವ ತೊಂದರೆಗಳನ್ನು ಅವನೇ ಅನುಭವಿಸುವ ಹಾಗೆ ಮಾಡಿದೆ.. ಅವನ ತಾಯಿ ನನ್ನ ಮಾತಿಗೆ ಬೆಲೆ ಕೊಟ್ಟು, ನಾನು ಹೇಳೋ ಹಾಗೆ ಮಾಡುತ್ತಿದ್ದರು…ದಿನ ಕಳೆದಂತೆ ಅವನ ಸಿಟ್ಟು ಸ್ವಲ್ಪ ಸ್ವಲ್ಪ ಹತೋಟಿಗೆ ಬರತೊಡಗಿತ್ತು…ಹತ್ತನೇ ಕ್ಲಾಸಿನ ಪರೀಕ್ಷೆಗೆ ಒಂದು ವಾರ ಇದೆ ಎನ್ನುವಾಗ,  ಮತ್ತೊಬ್ಬ ಹುಡುಗನಿಗೆ ಹೊಡೆದು ಬಂದ…. ನಾನು ‘ಯಾಕೆ? ಏನು?’ ಎಂದು ಕೇಳಲಿಲ್ಲ. “ಪೆಟ್ಟು ತಿಂದವನಿಗೆ ಆದ ಗಾಯ ಮಾಸುವರೆಗೂ ನಿನ್ನಲ್ಲಿ ಸಲಿಗೆಯಿಂದ ಇರುವುದಿಲ್ಲ” ಎಂದು ಹೇಳಿಬಿಟ್ಟೆ.. ತಾಯಿಯ ಅನುರಾಗದ ಮಾತು, ನನ್ನ ತಿಳುವಳಿಕೆಯ ಚಾಟಿ ಮಾತುಗಳು, ಆಪ್ತ ಸ್ನೇಹಿತರ ಬುದ್ಧಿವಾದ, ಎಲ್ಲಾ ಸೇರಿ ಮೋಡಿಯಂತು ಮಾಡಿತು.. ಇದಾದ ನಂತರ ಬಹಳ ಬದಲಾವಣೆ ಕಾಣತೊಡಗಿತ್ತು…ಸಣ್ಣ ಸಣ್ಣ ವಿಷಯಕ್ಕೆ ಸಿಟ್ಟು ಮಾಡೋದು, ಕಾರಣವಿಲ್ಲದೆ ಸಿಟ್ಟು ಮಾಡಿಕೊಳ್ಳುವುದು, ಎಲ್ಲಾ ಕಡಿಮೆಯಾಯಿತು…ಆದರೆ ಈ ಪಯಣದಲ್ಲಿ ಅವನು ಕಲಿತದ್ದು ಬಹಳ.. “ಜರ್ನಿ ಫ್ರಮ್ ಮ್ಯಾನ್ ಟು ಜಂಟಲ್ಮ್ಯಾನ್”  ಅಂದರೂ ತಪ್ಪೇನಿಲ್ಲ…. ಜೊತೆಜೊತೆಗೆ ಓದುವುದರಲ್ಲೂ ಗಮನ ಹೆಚ್ಚಿತು ಜವಾಬ್ದಾರಿ ಹೆಚ್ಚಿತು, ತರಗತಿಯಲ್ಲಿ ಒಳ್ಳೆ ಅಂಕಗಳನ್ನು ತೆಗೆದ.ಪ್ರತಿ ಸಾರಿ ಅವನನ್ನು ಒಂದೇ ಮಾತಲ್ಲಿ ರೇಗಿಸೋದು …”ಸಿಟ್ಟು ಕಾಲಲ್ಲಿ ಇದೆಯೋ ತಲೆಯಲ್ಲಿ ಇದೆಯೋ ಹೇಳು, ನಾನು ಸರಿ ಮಾಡ್ತೀನಿ. ಮರದ್ ಬನ್ರೇ ಮರದ್…!ಜನ್ ತೊ ಬಹುತ್ ಮಿಲೇಂಗೆ! ಸಜ್ಜನ್ ಬನ್ ಮೇರೆ ಬಚ್ಚೆ! “ಹೇಗೆ ಕಾಲಚಕ್ರ ಉರುಳಿತೊ ಗೊತ್ತಾಗದು.. ಈಗಲೂ ಅದೇ ಹುಡುಗ ನನ್ನೊಂದಿಗೆ ತಿಳಿಸಾರು ತಿನ್ನಲು ಆಶಿಸುತ್ತಾ ಬರುತ್ತಾನೆ.ನಾನು ಮಾಡುವ ಕೆಲಸಗಳಿಗೆ ಕರೆದಾಗಲೆಲ್ಲಾ ಬಲಗೈ ಬಂಟನಾಗಿ ನಿಲ್ಲುತ್ತಾನೆ.ಆದರೆ ತಾಳ್ಮೆ ಇದೆ ಈಗ. ಬೇರೆ ಬೇರೆಯವರೊಂದಿಗೆ ಹೇಗೆ ಸಂಭಾಷಣೆ ಮಾಡೋದು ಎನ್ನುವುದು ಗೊತ್ತಿದೆ.. ಸ್ವಲ್ಪ ಸ್ನೇಹಿತರ ಪ್ರಭಾವವಿದ್ದರೂ ತನ್ನನ್ನು ತಾನಾಗಿಯೇ ಉಳಿಸಿಕೊಂಡಿದ್ದಾನೆ.. ಅದೇ ಸಂತೋಷ ತರುವುದು. ಸಿಟ್ಟು ಸಹಜ. ಅಭ್ಯಾಸದಿಂದ ನಿಯಂತ್ರಿಸು.ಇಲ್ಲ ಸರಿದಿಕ್ಕಿನಲ್ಲಿ ಹಾರಿಬಿಡು. ಆಗ ಮಾತ್ರ ಗೆಲುವು ನಿನ್ನದು. ========= ReplyForward

ಅವ್ಯಕ್ತಳ ಅಂಗಳದಿಂದ Read Post »

ಅಂಕಣ ಸಂಗಾತಿ

ಸ್ವಾತ್ಮಗತ

“ಕರ್ನಾಟಕ ಗಾಂಧಿ” ಹಾಗೂ ವಿಭೂತಿ ಪುರುಷ ಹರ್ಡೇಕರ ಮಂಜಪ್ಪ ..! ಕೆ.ಶಿವು ಲಕ್ಕಣ್ಣವರ್ ದೇಶದ ಸ್ವಾತಂತ್ರಕ್ಕಾಗಿನ ಹೋರಾಟದಲ್ಲಿ ತಮ್ಮ ನಿಸ್ವಾರ್ಥ ಸೇವೆಯಿಂದ ಶಿಕ್ಷಣ, ಸಮಾಜ ಸೇವೆ, ವೈದ್ಯಕೀಯ ಮತ್ತು ಕರಕುಶಲ ಕಲೆಗಳಲ್ಲಿ ನುರಿತವರಾದ ಹಲವಾರು ಮಂದಿ ಹೆಸರಾಗಿದ್ದಾರೆ… ಮಹಾತ್ಮ ಗಾಂಧೀಜಿಯವರ ನೇರ ಪ್ರಭಾವಕ್ಕೆ ಒಳಗಾದ ಕರ್ನಾಟಕದ ಹಲವಾರು ಮಹಾಪುರುಷರು ಮತ್ತು ಮಹಿಳೆಯರು ಕೂಡಾ ಇಂತಹ ಮಹನೀಯರ ಸಾಲಿನಲ್ಲಿ ಪ್ರಮುಖರಾಗಿದ್ದು ಈ ನಿಟ್ಟಿನಲ್ಲಿ, ಉಮಾಬಾಯಿ ಕುಂದಾಪುರ್, ಕಮಲಾದೇವಿ ಚಟ್ಟೋಪಾದ್ಯಾಯ, ಎನ್. ಎಸ್. ಹರ್ಡೇಕರ್ ಅವರುಗಳು ಸಮಾಜ ಸೇವೆಯಲ್ಲಿ ಮಹತ್ವವಾದ ಸೇವೆ ಸಲ್ಲಿಸಿದವರಾಗಿದ್ದಾರೆ… ಹರ್ಡೇಕರ್ ಮಂಜಪ್ಪನವರು ಈ ಪೈಕಿ ಒಂದು ಹೆಜ್ಜೆ ಮುಂದು. ಅವರು ಗಾಂಧಿಜಿಯಂತೆ ಬದುಕಿ, ಭುಜಿಸಿ, ಬೋಧಿಸಿ, ಬರೆದು, ಸಂಪೂರ್ಣ ಬ್ರಹ್ಮಚರ್ಯೆ ಮತ್ತು ತಪಸ್ವೀ ಜೀವನ ನಡೆಸಿದವರು. ತಮ್ಮ ಜೀವನದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ ಬಹಳಷ್ಟು ಮಂದಿ ಇದ್ದಾಗ್ಯೂ ಹರ್ಡೇಕರ್ ಮಂಜಪ್ಪನವರಂತೆ ಅತ್ಯಂತ ಕಟ್ಟುನಿಟ್ಟಿನ ಸ್ವಯಂ ನಿಯಂತ್ರಣದಲ್ಲಿ ಬದುಕನ್ನು ಸಾಧಿಸಿದವರು ಮತ್ತು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಬಡತನದ ಬವಣೆ ಅನುಭವಿಸುತ್ತಿರುವವರಿಗಾಗಿ ಬದುಕಿದವರು ಅತ್ಯಂತ ವಿರಳವೆನ್ನಬೇಕು…. ಹರ್ಡೇಕರ್ ಮಂಜಪ್ಪನವರು ಪಂಪನ ಕಾವ್ಯಬಣ್ಣಿತವಾದ ಬನವಾಸಿಯಲ್ಲಿನ ಬಡ ಕುಟುಂಬವೊಂದರಲ್ಲಿ ಫೆಬ್ರವರಿ 18, 1889ರಲ್ಲಿ ಜನಿಸಿದರು. ಅವರು 1903ರ ವರ್ಷದಲ್ಲಿ ಹತ್ತಿರದ ಸಿರಸಿಯಲ್ಲಿ ಮುಲ್ಕಿ (ಪ್ರಾಥಮಿಕ ಶಿಕ್ಷಣ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಶಿರಸಿಯಲ್ಲಿ ಶಾಲಾ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಸಿದವರು. ಸಂಬಳ ೭ ರೂಪಾಯಿ ಮಾತ್ರ ಪ್ರತಿ ತಿಂಗಳಿಗೆ… ಬರಹ ಪ್ರವೀಣರಾದ ಹರ್ಡೇಕರ್ ಮಂಜಪ್ಪನವರು ಮಕ್ಕಳಿಗೆ ಅರ್ಥವಾಗುವ ಹಾಗೆ ಪದ್ಯಗಳ ರಚನೆ ಮಾಡಿದ್ದಲ್ಲದೆ ಅವನ್ನು ಮಕ್ಕಳ ಮನೋಧರ್ಮಕ್ಕೆ ರುಚಿಸುವ ಹಾಗೆ ಹಾವಭಾವ ಪೂರಕವಾಗಿ ಬೋಧಿಸಿದರು. ಅವರಿಗೆ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿಯಬೇಕೆಂಬ ಆಸೆ ಇದ್ದಿತಾದರೂ, ಆ ನಿಟ್ಟಿನಲ್ಲಿ ಗುರುಗಳನ್ನು ಪಡೆಯುವ ಸೌಲಭ್ಯ ಇಲ್ಲದಿದ್ದ ಕಾರಣಗಳಿಂದ ತಾವೇ ಸ್ವಯಂ ಆಚಾರ್ಯರಾಗಿ ಕಲಿಯಲಾರಂಭಿಸಿದರು… ಸ್ವದೇಶೀ ಆಂದೋಲನ ಪ್ರಬಲವಾಗಿ ಮುಂಚೂಣಿಯಲ್ಲಿದ್ದ ದಿನಗಳವು. ೧೯೦೬ರಲ್ಲಿ ತಿಲಕರ ಸ್ವದೇಶಿ ಚಳುವಳಿಯಿಂದ ಪ್ರಭಾವಿತರಾಗಿ ಅಧ್ಯಾಪಕ ವೃತ್ತಿ ಬಿಟ್ಟು ದಾವಣಗೆರೆಗೆ ಬಂದು ೧೯೦೬ರ ಸೆಪ್ಟೆಂಬರ್ ೨ರಂದು ’ಧನುರ್ಧಾರಿ’ ವಾರ ಪತ್ರಿಕೆ ಪ್ರಕಟನೆಯ ಆರಂಭಿಸಿದರು. ಹರ್ಡೇಕರ್ ಮಂಜಪ್ಪ ಮತ್ತು ಅವರ ಹಿರಿಯ ಸಹೋದರರು ತಿಲಕರ ಕೇಸರಿ ಪತ್ರಿಕೆಯಿಂದ ತೀವ್ರ ಪ್ರಭಾವಿತರಾಗಿ, ಅದರಲ್ಲಿನ ಲೇಖನಗಳನ್ನು ಕನ್ನಡದಲ್ಲಿ ಪ್ರಕಟಿಸಲು ಅನುಮತಿ ಪಡೆದುಕೊಂಡರು. ಮರಾಠಿ ಭಾಷೆಯನ್ನು ಚೆನ್ನಾಗಿ ಅರಿತಿದ್ದ ಹರ್ಡೇಕರ್ ಸಹೋದರರು ತಮ್ಮ ಸಾಪ್ತಾಹಿಕದಲ್ಲಿ ಪ್ರಕಟಿಸಿದಾಗ ಅದು ಕೆಲವೇ ದಿನಗಳಲ್ಲಿಯೇ ಹತ್ತು ಸಾವಿರ ಗ್ರಾಹಕರನ್ನು ಪಡೆದುಕೊಂಡಿತು. ’ಧನುರ್ಧಾರಿ’ಯ ಕೆಲವೊಂದು ಪ್ರತಿಗಳು ಹಳೆಯ ಮೈಸೂರು ರಾಜ್ಯದಲ್ಲೂ ಅಲ್ಲಲ್ಲಿ ಭಿತ್ತರಗೊಂಡಾಗ ಆಗಿನ ಮೈಸೂರು ರಾಜ್ಯದ ದಿವಾನರಾಗಿದ್ದ ಮಾಧವರಾಯರು ಈ ಪತ್ರಿಕೆಯಲ್ಲಿನ ಪ್ರಕಟಣೆಗಳು ಪ್ರಚೋದನಕಾರಿಯಾಗಿದ್ದೆಂಬ ಕಾರಣದಿಂದ ಪತ್ರಿಕೆಗೆ ನಿಷೇಧ ಹಾಕಿ ಭೀಕರ ಪರಿಣಾಮಗಳನ್ನೆದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಹೀಗಾಗಿ ’ಧನುರ್ಧಾರಿ’ ಪತ್ರಿಕಾಲಯ ತನ್ನ ಬಾಗಿಲನ್ನು ಮುಚ್ಚಬೇಕಾಯಿತು… ಮಂಜಪ್ಪನವರು ಮದುವೆಯಾದರೆ ಸಮಾಜ ಸೇವೆಗೆ ತೊಡಕಾಗುವುದೆಂದು ೧೯೧೦ರಲ್ಲಿ ಮದುವೆ ಆಗಬಾರದೆಂಬ (೨೨ನೆ ವಯಸ್ಸಿನಲ್ಲಿ) ನಿರ್ಧಾರಿಸಿದರು. ಬ್ರಹ್ಮಚರ್ಯೆಯಿಂದ ಕೂಡಿದ ಸಾತ್ವಿಕ ತಪಶ್ಚರ್ಯೆಯ ಜೀವನವನ್ನು ಅಳವಡಿಸಿಕೊಂಡು ಅದಕ್ಕಾಗಿ ತಮ್ಮ ಬಡ ಅಕ್ಕಿ – ಬೇಳೆಯ ಆಹಾರದಲ್ಲಿಯು ಸಹಾ ಉಪ್ಪು ಸಕ್ಕರೆಯಂತಹ ರುಚಿಗಳನ್ನು ನಿಷೆಧಿಸಿಕೊಂಡು ಬಿಟ್ಟರು ಹಾಗೂ ಬ್ರಹ್ಮ ಚರ್ಯಕ್ಕೆ ಪೋಷಕವಾಗುವ ರೀತಿಯ ಆಹಾರ ಸೇವನೆಯ ಆರಂಭಿಸಿ, ಉಪ್ಪು, ಹುಳಿ, ಖಾರ ಹಾಗು ಸಿಹಿ ಪದಾರ್ಥಗಳ ಸೇವನೆ ನಿಲ್ಲಿಸಿದರು. ಆಹಾರದಲ್ಲಿನ ಸ್ವಯಂ ನಿರ್ಬಂಧಗಳು ಶುದ್ಧ ಮತ್ತು ಶಿಸ್ತಿನ ಜೀವನವನ್ನು ಸಾಗಿಸಲು ಸಹಾಯಕ ಎಂದು ಮಂಜಪ್ಪನವರ ನಂಬಿಕೆಯಾಗಿತ್ತು… “ಕರ್ನಾಟಕ ಗಾಂಧಿ” ಹರ್ಡೇಕರ ಮಂಜಪ್ಪ ಬಹುಷಃ ಸ್ವತಃ ಗಾಂಧೀಜಿಯವರು ತಮ್ಮ ಮೇಲೆ ವಿಧಿಸಿಕೊಂಡಿದ್ದಕ್ಕಿಂತ ಹೆಚ್ಚಿನ ಶಿಸ್ತನ್ನು ಮಂಜಪ್ಪನವರು ತಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಚರಕದಿಂದ ನೂಲುವುದು ಮತ್ತು ಖಾದಿ ಬಟ್ಟೆಯ ನೇಯ್ಗೆಯನ್ನು ಸಹಾ ತಮ್ಮ ದಿನಚರಿಯಾಗಿಸಿಕೊಂಡ ಮಂಜಪ್ಪನವರು ತಮ್ಮ ‘ಖಾದಿ ವಿಜಯ’ ಮಾಸ ಪತ್ರಿಕೆಯ ಮೂಲಕ ಖಾದಿ ಪ್ರಚಾರವನ್ನು ಕೈಗೊಂಡರು. ‘ಖಾದಿಯ ವಿಜ್ಞಾನ’ ಎಂಬ ಗ್ರಂಥವನ್ನು ಸಹಾ ಮಂಜಪ್ಪನವರು ರಚಿಸಿದರು. ಆದ್ದರಿಂದಲೇ ಜನ ಇವರನ್ನು “ಕರ್ನಾಟಕ ಗಾಂಧಿ” ಎಂದು ಕರೆದರು… ಕಾಲಕ್ರಮೇಣದಲ್ಲಿ ಹರ್ಡೇಕರ್ ಅವರು ಬಸವೇಶ್ವರರ ತತ್ವಗಳಲ್ಲಿ ಆಕರ್ಷಿತರಾದರು. ತಮ್ಮ ಪರಿಸರದಲ್ಲಿದ್ದ ಲಿಂಗಾಯತದಲ್ಲಿ ಅಷ್ಟೊಂದು ಪಂಗಡಗಳಿರುವುದು ಅವರನ್ನು ಆಶ್ಚರ್ಯಚಕಿತರನ್ನಾಗಿಸಿತು. ಲಿಂಗಾಯತ ಚಿಂತನೆಗಳು ಮತಧರ್ಮಗಳ ಗೋಡೆಗಳನ್ನು ಉರುಳಿಸಿ ಆ ಮೂಲಕ ಆಚರಣೆಗಳಲ್ಲಿದ್ದ ದುಷ್ಟಪದ್ಧತಿಗಳನ್ನು ಮತ್ತು ಮೂಢ ನಂಬಿಕೆಗಳನ್ನು ಹೋಗಲಾಡಿಸುವ ಮೂಲೋದ್ದೇಶವನ್ನು ಹೊಂದಿದ್ದ ಹಿನ್ನಲೆಯಲ್ಲಿ ಆ ಜನಾಂಗದಲ್ಲೂ ಪಂಗಡ, ಉಪಪಂಗಡಗಳು ಹುಟ್ಟಿಕೊಂಡಿದ್ದುದು ಅವರಿಗೆ ನುಂಗಲಾರದ ತುತ್ತಾಗಿತ್ತು. ಹೀಗಾಗಿ ಬಸವೇಶ್ವರರ ತತ್ವಗಳನ್ನು ಪ್ರಸ್ತುತ ಪಡಿಸುವ ಹಲವಾರು ಪುಸ್ತಿಕೆಗಳನ್ನು ಹೊರತಂದು ಅವನ್ನು ಉಚಿತವಾಗಿ ಹಂಚಿ ಆ ಜನಾಂಗವನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದರು. ಈ ಕಾರ್ಯದಲ್ಲಿ ಲಿಂಗಾಯತ ಧರ್ಮ ಸಹೃದಯಿಗಳಾದ ಧಾರವಾಡದ ಮುರುಘಾಮಠದ ಮೃತ್ಯುಂಜಯ ಸ್ವಾಮೀಜಿಯವರು ಹರ್ಡೇಕರ್ ಮಂಜಪ್ಪನವರಿಗೆ ಅಪಾರ ಬೆಂಬಲವಿತ್ತರು. ಹರ್ಡೇಕರ್ ಮಂಜಪ್ಪನವರ ಈ ಚಿಂತನೆಗಳಿಗೆ ಅನೇಕರು ಅನುಯಾಯಿಗಳಾಗಿ ಹೊರಹೊಮ್ಮಿದರು… ೧೯೧೧ ರಲ್ಲಿ ದಾವಣಗೆರೆಯಲ್ಲಿ ಮೃತ್ಯುಂಜಯ ಮಹಾಸ್ವಾಮಿಗಳವರ ಸಹಕಾರದೋಂದಿಗೆ ಶ್ರಾವಣ ಉಪನ್ಯಾಸಮಾಲೆ (ಸಾಮೂಹಿಕ ಭಜನೆ ಮತ್ತು ವ್ಯಾಖ್ಯಾನ ಕಾರ್ಯಕ್ರಮ) ಪ್ರಾರಂಭ. ಬಿಡುವಿನ ವೇಳೆಯಲ್ಲಿ ಧಾರ್ಮಿಕ ಪುಸ್ತಕಗಳ ಓದು, ಜ್ಞಾನಾರ್ಜನೆ, ಸಮಾಜಸೇವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡ ಮಂಜಪ್ಪನವರು ನೈಷ್ಠಿಕ ಬ್ರಹ್ಮಚಾರಿಯಾಗಿಯೇ ಉಳಿದರು… ಸಾರ್ವಜನಿಕ ’ಬಸವ ಜಯಂತಿ’ ಆಚರಣೆ ಆರಂಭಿಸಿದ ಮೊದಲಿಗ ಹರ್ಡೇಕರ ಮಂಜಪ್ಪ ೧೯೧೩ರಲ್ಲಿ ಆಧುನಿಕ ರೀತಿಯಲ್ಲಿ ಸಾರ್ವಜನಿಕ ’ಬಸವ ಜಯಂತಿ’ ಆಚರಣೆಯನ್ನು ಪ್ರಾರಂಭಿಸಿ ಜನರೆಲೆರಿಗೆ ಬಸವ ತತ್ವ ತಿಳಿಪಡಿಸಿದರು. ೧೯೧೫ರಲ್ಲಿ ’ಸ್ವಕರ್ತವ್ಯ ಸಿದ್ಧಾಂತ’ ಪ್ರಥಮ ಗ್ರಂಥ ಪ್ರಕಟನೆ ಮಾಡಿದರು. ೧೯೧೯ರಲ್ಲಿ ಗಾಂಧೀಜಿಯವರ ಕಾರ್ಯ ಚಟುವಟಿಕೆಯಿಂದ ಪ್ರಭಾವಿತರಾದರು. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ’ಮಹಾತ್ಮಾ ಗಾಂಧೀಜೀ ಚರಿತ್ರೆ’ ಪ್ರಕಟಣೆಯನ್ನು ಮಾಡಿದರು… ೧೯೨೨ರಲ್ಲಿ ’ಸತ್ಯಾಗ್ರಹ ಧರ್ಮ’ ಗ್ರಂಥ ಪ್ರಕಟನೆ ಹಾಗೂ ಹುಬ್ಬಳ್ಳಿಯಲ್ಲಿ ’ಸತ್ಯಾಗ್ರಹ ಸಮಾಜ’ ಸ್ಥಾಪನೆ ನೆರವೇರಿಸಿದರು. ೧೯೨೩ ಹರಿಹರದ ಬಳಿ ತುಂಗಭದ್ರಾ ನದಿ ತೀರದಲ್ಲಿ ’ಸತ್ಯಾಗ್ರಹ ಆಶ್ರಮ’ ಸ್ಥಾಪನೆ ಮಾಡಿದರು… ೧೯೨೪ ’ಬಸವ ಚರಿತ್ರೆ’ ಸಂಶೋಧನಾತ್ಮಕ ಗ್ರಂಥ ಪ್ರಕಟನೆ. ಮಾರ್ಚ ತಿಂಗಳಲ್ಲಿ ಗಾಂಧೀಜಿಯವರ ಸಾಬರಮತಿ ಆಶ್ರಮದಲ್ಲಿ ವಾಸ್ತವ್ಯ. ಗಾಂಧೀಜಿಯವರ ನೇತೃತ್ವದಲ್ಲಿ ೧೯೨೪ರ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಅವರು ಹಿರಿಯ ಪಾತ್ರವನ್ನು ನಿರ್ವಹಿಸಿದ್ದರು. ಗಾಂಧೀಜಿಯವರಿಗೆ ಬಸವೇಶ್ವರರ ಬಗ್ಗೆ ಅವರ ವಚನಗಳ ಬಗ್ಗೆ ತಿಳಿಸಿಕೊಟ್ಟರು. ’ಬಸವೇಶ್ವರ ಸೇವಾದಳ’ದೊಂದಿಗೆ ಪ್ರಯಾಣ ಹಾಗೂ ’ಸತ್ಯಾಗ್ರಹಿ ಬಸವೇಶ್ವರ’ ಗ್ರಂಥವನ್ನು ಗಾಂಧೀಜಿಯವರಿಗೆ ಕೊಟ್ಟರು… ೧೯೨೫ ಬಂಥನಾಳ ಮಹಾಸ್ವಾಮಿಗಳೊಂದಿಗೆ ವಿಜಾಪುರ ಜಿಲ್ಲೆಯ ಹಳ್ಳಿಗಳ ಸಂಚಾರ ಹಾಗೂ ಜನರಲ್ಲಿ ಬೇರು ಬಿಟ್ಟ ದುಶ್ಚಟಗಳ ನಿರ್ಮೂಲನಕ್ಕಾಗಿ ದೇಶೀ ಚಳವಳಿಯ ಆರಂಭಿಸಿದರು. ೧೯೨೬ ’ಬಸವ ಭೋಧಾಮೃತ’ ಗ್ರಂಥ ಪ್ರಕಟನೆ ಕೈಗೊಂಡರು… ಹರ್ಡೇಕರ್ ಮಂಜಪ್ಪನವರು, ೧೯೨೭ ಮಾರ್ಚ್ ೨೭ರಂದು ಕಲಬುರ್ಗಿಯಲ್ಲಿ ಗಾಂಧೀಜಿಯವರನ್ನು ಕಂಡು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮಾರ್ಗ ದರ್ಶನ ಕೋರಿದರು. ಆಲಮಟ್ಟಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಸಿ ಆಶ್ರಮ ಶಾಲೆಯನ್ನು ಪ್ರಾರಂಭಿಸಿದರು. ಇದಕ್ಕೆ ಮೊದಲು ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಸಂಚರಿಸಿದ ಹರ್ಡೇಕರ್ ಅವರು ಗಾಂಧೀಜಿಯವರ ಕಾರ್ಯಕ್ರಮಗಳು ಮತ್ತು ಚಿಂತನೆಗಳ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಮಹತ್ತರವಾದ ಕಾರ್ಯ ನಡೆಸಿದರು. ಬಸವೇಶ್ವರರು ಮತ್ತು ಗಾಂಧೀಜಿಯವರ ಬೋಧನೆಗಳಲ್ಲಿ ತಾದ್ಯಾತ್ಮವನ್ನು ಕಂಡ ಮಂಜಪ್ಪನವರಿಗೆ, ಬಸವೇಶ್ವರರ ಬಗ್ಗೆ ಅರಿವಿದ್ದ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಗಾಂಧೀಜಿಯವರ ತತ್ವಗಳನ್ನು ತಲುಪಿಸುವ ಸಾಮರ್ಥ್ಯ ರೂಢಿಗೊಂಡಿತ್ತು. ಸತ್ಯಾಗ್ರಹ, ರಾಷ್ಟ್ರ ಪ್ರೇಮ, ರಾಷ್ಟ್ರೀಯತೆ, ಸ್ತ್ರೀಪುರುಷರಲ್ಲಿ ಸಮಾನತೆ ಮುಂತಾದ ಮಹತ್ವದ ವಿಚಾರಗಳಲ್ಲಿ ಮಂಜಪ್ಪನವರು ಸಹಸ್ರಾರು ಉಪನ್ಯಾಸಗಳನ್ನು ನೀಡಿದರು. ಸಬರಮತಿ ಆಶ್ರಮದಲ್ಲಿ ಮೂರು ವಾರಗಳ ಕಾಲ ತಂಗಿದ್ದು ಸತ್ಯಾಗ್ರಹಿಗಿರಬೇಕಾದ ಮೂಲಭೂತಗುಣಗಳ ಅನುಭವವನ್ನು ನೇರವಾಗಿ ಪಡೆದುಕೊಂಡರು. ಸ್ವತಃ ಕಾಂಗ್ರೆಸ್ ಪಕ್ಷದ ಭಾಗವಾಗದಿದ್ದರೂ ಸಹಾ ಮಂಜಪ್ಪನವರು ಕಾಂಗ್ರೆಸ್ ಪಕ್ಷಕ್ಕಾಗಿ ಹಲವಾರು ಸಮಾಜ ಸೇವಾ ಶಿಬಿರಗಳನ್ನು ಆಯೋಜಿಸಿಕೊಟ್ಟರು… ತಮ್ಮ ಆತ್ಮಚರಿತ್ರೆಯನ್ನೂ ಒಳಗೊಂಡಂತೆ ಹರ್ಡೇಕರ್ ಮಂಜಪ್ಪನವರು ಇಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ. ೧೯೩೧ ’ಶರಣ ಸಂದೇಶ’ ವಾರಪತ್ರಿಕೆ ಪ್ರಕಟನೆಯ ಆರಂಭವಾಯಿತು… ೧೯೩೫ ಸ್ತ್ರೀ ಜಾಗೃತಿಗಾಗಿ ಅಕ್ಕ ಮಹಾದೇವಿಯ ಜಯಂತಿ ಆಚರಣೆ ಆರಂಭಸಿದರು… ೧೯೩೮ ’ಶುದ್ಧಿ ಮತ್ತು ಸಂಘಟನೆ’ ಹಾಗೂ ’ವಚನಕಾರರ ಸಮಾಜ ರಚನೆ’ ಗ್ರಂಥಗಳ ಪ್ರಕಟನೆ ಕೈಗೊಂಡರು… ೧೯೪೨ ಯುದ್ಧ ಸಮಯದಲ್ಲಿ ಕಾಗದದ ಅಭಾವ, ಕೈ ಕಾಗದ ತಯಾರಿಸಿ ’ಶರಣ ಸಂದೇಶ’ ಪ್ರಕಟನೆಯ ಮುಂದುವರಿಸಕದರು… ತಮ್ಮ ಜೀವನಪರ್ಯಂತವಾಗಿ ನಮ್ಮ ದೇಶ ಸ್ವಾತಂತ್ರಗೊಳ್ಳಲು ಹಲವಾರು ಶಕ್ತಿಯುತ ಹೋರಾಟಗಳನ್ನು ನಡೆಸಿದ ಹರ್ಡೇಕರ್ ಮಂಜಪ್ಪನವರು ದೇಶ ಸ್ವಾತಂತ್ರ ಪಡೆಯಲು ಕೆಲವೇ ತಿಂಗಳುಗಳ ಮುಂಚೆ, 3ನೆ ಜನವರಿ 1947ರಂದು ಲಿಂಗೈಕ್ಯರಾದರು… ಹೀಗೆ ಪೂಜ್ಯ ಹರ್ಡೇಕರ ಮಂಜಪ್ಪನವರು ಒಬ್ಬ ಹಿರಿಯ ವಿಭೂತಿ ಪುರುಷರಾಗಿದ್ದರು… ‌‌ ‌‌‌‌=============

ಸ್ವಾತ್ಮಗತ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಡಾ.ಕಾಳೇಗೌಡ ನಾಗವಾರ ಅಕ್ಷರಲೋಕದ ಮಹಾತಪಸ್ವಿ ಕೆ.ಶಿವು ಲಕ್ಕಣ್ಣವರ ಅಕ್ಷರಲೋಕದ ಮಹಾತಪಸ್ವಿ ಡಾ.ಕಾಳೇಗೌಡ ನಾಗವಾರರು..! ಮೊನ್ನೆ ನನ್ನ ಪುಸ್ತಕದ ಸಂದೂಕದಲ್ಲಿ ಏನೋ ಒಂದು ಪುಸ್ತಕ ಹುಡುಕುತ್ತಿದ್ದೆ. ಆಗ ಅಕಸ್ಮಾತ್ತಾಗಿ ನನ್ನ ನೆಚ್ಚಿನ ಬರಹಗಾರ ಕಾಳೇಗೌಡ ನಾಗವಾರರ ‘ಬೆಟ್ಟಸಾಲು ಮಳೆ’ ಕತಾ ಸಂಕಲನ ಕೈಗೆಟುಕಿತು. ಆ ಕತಾ ಸಂಕಲನವನ್ನು ಸಮಾಜವಾದಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎನ್. ಎನ್. ಕಲ್ಲಣ್ಣನವರ ಮಗ, ನನ್ನ ಆತ್ಮೀಯ ಗೆಳೆಯನಾದ ಚಿತ್ತರಂಜನ ಕಲ್ಲಣ್ಣನವರ (ಈ ಚಿತ್ತರಂಜನ ಕಲ್ಲಣ್ಣನವರ ಈಗಿಲ್ಲ) ಕೊಟ್ಟಿದ್ದನು. ಅದನ್ನು ಹಾಗೇ ಜೋಪಾನವಾಗಿ ತೆಗೆದಿಟ್ಟುಕೊಂಡಿದ್ದೆನು. ಒಮ್ಮೆ ಓದಿದ್ದೆ. ಅದಕೋ ಮತ್ತೆ ನನ್ನ ಕೈಗೆಟುಕಿ ಮತ್ತೇ ಮತ್ತೆ ಓದಬೇಕಿನಿಸಿ ಇಂದು ರಾತ್ರಿ ಓದಲಾರಂಭಿಸಿದೆ. ಈ ಕತಾ ಸಂಕಲನದಲ್ಲಿ ನನಗೆ ತೀರಾ ಕಾಡಿದ ಕತೆ ಎಂದರೆ ‘ಬೆಟ್ಟಸಾಲು ಮಳೆ’ ಕತೆ. (‘ಬೆಟ್ಟಸಾಲು ಮಳೆ’ ಕತಾ ಸಂಕಲನದ ಬಗೆಗೆ ಒಮ್ಮೆ ಬರೆಯುತ್ತೇನೆ.) ಹಾಗೆಯೇ ಕಾಳೇಗೌಡ ನಾಗವಾರರೂ ನೆನಪಾದರು… ಈ ಕಾಳೇಗೌಡ ನಾಗವಾರರ ಬಗೆಗೆ ಈಗ ಏಕೆ ‌ಬರೆಬಾರದು ಎನ್ನಿಸಿ ಹೀಗೆಯೇ ನಾಲ್ಕು ಸಾಲು ಗೀಚಿದೆ… ಅವರು ಮೊನ್ನೆ ಹಾವೇರಿಗೆ ಬಂದಾಗ ಅವರು ಕೊಟ್ಟ ಕೃತಿ ‘ಮಂಗಳಕರ ಚಿಂತನೆ’ಯನ್ನು ಓದಿದೆ. ಆ ಕುರಿತು ನಂತರ ಬರೆಯುತ್ತೇನೆ. ಈಗಿವರ ಬಗೆಗೆ ನನಗೆ ಏಕೋ ಬರೆಯಬೇಕಿನಿಸಿತು, ಹೀಗೇ ಬರೆದೆ… ಕಾಳೇಗೌಡ ನಾಗವಾರ ಇವರು ೧೯೪೮ರಲ್ಲಿ ಬೆಳಗಾವಿಯಲ್ಲಿ ಜನಿಸಿದರು. ಬೆಂಗಳೂರು ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದವರು… ಅವರ ಇತರ ಕೃತಿಗಳು ಹೀಗಿವೆ– ೧) ಅಲೆಗಳು. ೨) ಕರಾವಳಿಯಲ್ಲಿ ಗಂಗಾಲಗ್ನ. ೩) ಬಯಲು ಸೀಮೆಯ ಲಾವಣಿಗಳು. ೪) ತ್ರಿಪದಿ ರಗಳೆ. ೫) ಬೀದಿ ಮಕ್ಕಳು ಬೆಳೆದೊ. ೬) ಬೆಟ್ಟಸಾಲು ಮಳೆ. ೭) ಬೇಕಾದ ಸಂಗಾತಿ. ಹೀಗೆಯೇ ಹತ್ತು ಹಲವು ವೈಚಾರಿಕ ಬರಹಗಳ ಕೃತಿಗಳು… ೧೯೭೯ರಲ್ಲಿ ‘ಬೆಟ್ಟ ಸಾಲು ಮಳೆ’ ಕಥಾ ಸಂಕಲನಕ್ಕೆ ಹಾಗೂ ೧೯೮೫ರಲ್ಲಿ ‘ಅಲೆಗಳು’ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ… ಡಾ.ಕಳೇಗೌಡ ನಾಗವಾರರು ಕನ್ನಡ ಸಾಂಸ್ಕೃತಿಕ ಲೋಕದ ಮಾನವೀಯ ಅಪಾರ ಕಾಳಜಿವುಳ್ಳ ಲೇಖಕ.‌ ಕಥೆಗಾರ, ಕವಿ ಹಾಗೂ ವಿಚಾರವಾದಿ. ಕಾಳೇಗೌಡ ನಾಗವಾರರು ಪ್ರಗತಿಪರತೆಗೆ ಸದಾ ಮಿಡಿಯುವ ಅಲ್ಲದೇ ಸದಾ ತಮ್ಮ ಅರವನ್ನು ಎಚ್ಚರದಿಂದ ಕಾಯ್ದುಕೊಂಡು ಬರಹ ಮಾಡುವ ಮಹಾನ್‌ ಚಿಂತಕ… ಡಾ.ಕಾಳೇಗೌಡ ನಾಗವಾರರು ಸಾಂಸ್ಕೃತಿಕ ಲೋಕದ ಮಾನವೀಯಕತೆಗಾರರು. ಅಪಾರ ಅಂತಃಕರಣ ಕವಿ, ‘ಮಂಗಳಕರ ಚಿಂತನೆ’ಗೆ ಹಾತೊರೆಯುವ ವಿಚಾರವಾದಿ… ದೇಶಿಸಂಕೃತಿಗಳ ಬಗೆಗೆ ತುಂಬು ಹೆಂಗರುಳುಳ್ಳ ಅಕ್ಕರೆಯ ಜಾನಪದ ತಜ್ಞ. ಇದನ್ನು ನಾನಷ್ಟೇಯಲ್ಲ ಇವರನ್ನು ಬಲ್ಲವರೆಲ್ಲ ಹೇಳುವ ಮನೆಮಾತು. ಹಾಗೆಂದೇ ಸಮಾಜವಾದಿ ಚಿಂತಕ ಹಾಗೂ ಡಿ.ದೇವರಾಜ್ ಅರಸರ ಕಾಲದಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಕಡುಬಡವ ಎನ್. ಎನ್. ಕಲ್ಲಣ್ಣನವರ ಬಗೆಗಿನ ಒಂದು ‘ಅಭಿನಂದನ ಗ್ರಂಥ’ವಿರಲಿ ಎಂದು ನನ್ನ ಎನ್. ಎನ್. ಕಲ್ಲಣ್ಣನವರ ಮಗ ಚಿತ್ತರಂಜನ ಕಲ್ಲಣ್ಣನವರ ಕಾರ್ಯದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ಬಿ.ಜಿ.ಬಣಕಾರ, ಕಲ್ಲೇಶಿವೋತ್ತಮರಾವ್ ಹಾಗೂ ಇತರೆ ಲೇಖಕರಿಂದ ಸತಪ್ರಯತ್ನ ಮಾಡಿಸಿ ಲೇಖನ ಬರೆಯಿಸಿ, ಕೊನೆಗೂ ಸಮಾಜವಾದಿ ಎನ್. ಎನ್. ಕಲ್ಲಣ್ಣನವರ ಬಗೆಗೆ ಒಂದು ಅಭಿನಂದನ ಗ್ರಂಥವನ್ನು ತಂದರು. ಹೀಗೆಯೇ ಬೆಸಗರಹಳ್ಳಿ ರಾಮಣ್ಣನವರ ಬಗೆಗೆ ಅಪಾರ ಕಕ್ಕುಲತೆವುಳ್ಳವರಾಗಿದ್ದರು… ಹೀಗೆ ಹೆಂಗರುಳುಳ್ಳ ಡಾ.ಕಾಳೇಗೌಡ ನಾಗವಾರರು ಜಾನಪದ ತಜ್ಞರಾಗಿ ಪ್ರಖ್ಯಾತಿ ಪಡೆದವರು. ಕರ್ನಾಟಕದ ಉದ್ದಗಲಕ್ಕೂ ಅವಿರತವಾಗಿ ಅಲೆದಾಡುತ್ತ ಅಪಾರವಾದ ಲೋಕಾನುಭವ ಪಡೆದವರು. ತಮ್ಮೋಳಗಿನ ಜನಪರ ಆಲೋಚನೆಯ ಸೂಕ್ಷ್ಮ, ಸೃಜನಶೀಲ ಮನಸ್ಸನ್ನು ಎಚ್ಚರಿಕೆಯಿಂದ ಕಾಯ್ದುಕೊಂಡು ಬಂದಿರುವ ಪ್ರತಿಭಾವಂತ ಲೇಖಕಕರಿವರು… ಅಪ್ಪಟ ಕನ್ನಡದ ಗ್ರಾಮೀಣ ಸತ್ವದಿಂದ ರೂಪಗೊಂಡವರು ಡಾ.ಕಾಳೇಗೌಡ ನಾಗವಾರರು. ಇಪ್ಪತ್ತನೇ ಶತಮಾನದಿಂದ ಎಪ್ಪತ್ತರ ದಶಕದಿಂದೀಚೆಗಿನ ಕನ್ನಡ ಸೃಜನಶೀಲ ಪ್ರಜ್ಞೆಯ ಅವಿಭಾಜ್ಯ ಅಂಗವಾಗಿದ್ದಾರೆ ಡಾ.ಕಾಳೇಗೌಡ ನಾಗವಾರರು… ಕ್ರಿಯಾಶೀಲ ಸಂಘಕರಾದ ಇವರು ಉದ್ದಕ್ಕೂ ‌ಕನ್ನಡದ ಪ್ರಗತಿಪರ ಚಳುವಳಿಗಳೊಂದಿಗೇ ಬೆಳೆದು ಬಂದವರು. ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಒಟ್ಟು ನಾಲ್ಕು ದಶಕಗಳ ಕಾಲ ದುಡಿದು ಈಗ ವಿಶ್ರಾಂತ ಕನ್ನಡ ಪ್ರಧ್ಯಾಪಕರಾಗಿರುವ ಇವರು ಎಲ್ಲಾ ಬರೆವಣಿಗೆಗಳು ಸಮಾಜವಾದಿ ಆಶಯಗಳ ನೆಲಗಟ್ಟಿನ ಮೇಲೆ ನಿಂತಿವೆ… ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನಾಗವಾರ ಗ್ರಾಮದವರಾದ ಇವರು ಕನ್ನಡ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಮುಖ ಘಟ್ಟವಾದ ಬಂಡಾಯ ಸಾಹಿತ್ಯ ಚಳುವಳಿಯ ಸ್ಥಾಪಕ ಸಂಚಾಲಕರೊಬ್ಬರಾಗಿದ್ದಾರೆ… ಭಾರತೀಯ ಭಾಷೆಗಳಲ್ಲೇ ಮೊದಲ ಬಾರಿಗೆ ಲೋಹಿಯಾ ಅವರ ಸಮಾಜವಾದಿ ವಿಚಾರಗಳನ್ನು ಸಮಗ್ರವಾಗಿ ಕನ್ನಡಕ್ಕೆ ತರುವ ಮಹತ್ವದ ಯೋಜನೆಯ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ಕಾಳೇಗೌಡ ನಾಗವಾರರು ಅತಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ… ಜನಸಮುದಾಯದ ಅನುಭವ ಲೋಕದ ಸಕಲ ಸೂಕ್ಷ್ಮಗಳನ್ನೂ ತೆರದ ಮನಸ್ಸಿನಿಂದ ಗ್ರಹಿಸುವ ಹಂಬಲವುಳ್ಳ ಆಶಾವಾದಿ ಲೇಖಕರಾಗಿರುವ ಡಾ.ಕಾಳೇಗೌಡ ನಾಗವಾರರು ವೈಶಿಷ್ಟ್ಯಪೂರ್ಣ ಚೇತನವಾಗಿದ್ದಾರೆ… ಸ್ವಾತಂತ್ರ್ಯ, ಸಮಾನತೆ ಮತ್ತು ಜನತಂತ್ರ ನಿಲುವುಗಳ ನಿತ್ಯಧ್ಯಾನದ ಚಿಂತಕರಾಗಿರುವ ಇವರು ತಮ್ಮ ವೈಚಾರಿಕ ಬರಹಗಳು, ವಿಮರ್ಶೆ ಮತ್ತು ಜಾನಪದ ಅಧ್ಯಯನಕ್ಕೆ ಸೃಜನಶೀಲತೆಯ ಪ್ರಾಣಶಕ್ತಿಯನ್ನು ತುಂಬಿರುವವರಾಗಿದ್ದಾರೆ. ವಿವಿಧ ಬಗೆಯ ಜಾನಪದ ಅಭಿವ್ಯಕ್ತಿಗಳು ಮತ್ತು ದೇಶೀ ಸಂಕೇತಗಳ ಸೂಕ್ಷ್ಮ ಹರಿಕಾರರಾಗಿರುವ ಡಾ.ಕಾಳೇಗೌಡ ನಾಗವಾರರು ಕಲಾವಿದರ ಬಗೆಗೆ ಸದಾ ಕಟ್ಟಕ್ಕರೆಯಿಂದಿರುವ ಇವರು ಕರ್ನಾಟಕ ಜಾನಪದ ಕಲಾವಿದರ ಬಗೆಗೆ ಅಪಾರ ಸಕ್ಕರೆಯನ್ನೂವುಳ್ಳವರಾಗಿದ್ದಾರೆ… ಕಾಳೇಗೌಡ ನಾಗವಾರರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಕ್ರಿಯಾಶೀಲ ಅಧ್ಯಕ್ಷರಾಗಿದ್ದು ೧೯೯೮ ರಿಂದ ೨೦೦೧ ರ ಅವಧಿಯಲ್ಲಿ ಅಪಾರವಾಗಿ ದುಡಿದವರಾಗಿದ್ದಾರೆ. ಅಕ್ಕರೆ, ಸಂತನ ಧ್ಯಾನ, ಜೀವಪ್ರೇಮದ ಅಚ್ಚರಿ, ಇಂಥ ಪ್ರೀತಿಯ ನಾವೆ-ಇವು ಡಾ.ಕಾಳೇಗೌಡ ನಾಗವಾರರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕುರಿತ ಗ್ರಂಥಗಳಾಗಿವೆ. ಹೀಗೆಯೇ ಡಾ.ಕಾಳೇಗೌಡ ನಾಗವಾರರು ಅಕ್ಷರಲೋಕದ ಮಹಾತಪಸ್ವಿಯೂ ಹೌದು ಎಂದರೆ ಅತಿಶಯೋಕ್ತಿಯಲ್ಲವೆಂದುಕೊಂಡಿದ್ದೇನೆ..! ===========================

ಸ್ವಾತ್ಮಗತ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ರೈತ ದಿನಾಚರಣೆ ಕೆ.ಶಿವು ಲಕ್ಕಣ್ಣವರ್ ಬೆವರು ಕಂಬನಿ ರಕುತವ ಸುರಿಸಿ, ನೆಲವನು ತಣಿಸಿ, ಕೆಸರಿನಿಂದ ಅಮೃತಕಲಶನೆತ್ತಿ ಕೊಡುತಿರುವ ರೈತನ ದಿನಾಚರಣೆ ಇಂದು..! ಇಂದು ಡಿಸೆಂಬರ್ 23. ಅಂದರೆ ರೈತ ದಿನಾಚರಣೆ. ಈ ದಿನಾಚರಣೆ ನಮ್ಮೆಲ್ಲರ ಊಟವನ್ನು ಮಾಡಿಸುತ್ತಿರುವ ರೈತನ ನೆನೆ, ನೆನೆದು ಉಣ್ಣುವ ದಿನ… ಆ ನಿಮಿತ್ಯ ರೈತನನ್ನು ನೆನೆವ ಲೇಖನವಿದು… ಗದ್ದೆ ಕೆಸರನು ಕುಡಿದು ಕಾಡು ಮುಳ್ಳನು ಕಡಿದು, ಮುಂಜಾನೆಯಿಂದ ಸಂಜೆಯವರೆಗೆ ದುಡಿದುಡಿದು ಚಳಿಯೋ ಮಳೆಯೋ ಬಿಸಿಲೋ ಬೇಗೆಯಲ್ಲವ ಸಹಿಸಿ, ಬೆವರು ಕಂಬನಿ ರಕುತವ ಸುರಿಸಿ, ನೆಲವನು ತಣಿಸಿ, ಕೆಸರಿನಿಂದ ಅಮೃತಕಲಶವನೆತ್ತಿ ಕೊಡುತ್ತಿರುವವ ರೈತ… ಹಸಿದು ಉನ್ನುವುದು ಪ್ರಕೃತಿ, ಹಸಿಯದೇ ಉನ್ನುವುದು ವಿಕೃತಿ ತಾನು ಹಸಿದರೂ ಇತರರಿಗೆ ಉಣಬಡಿಸುವವನು ರೈತ. ಇಂತಹ ಶ್ರಮಜೀವಿ ಈ ನಾಡಿನ ಸ್ವಾಭಿಮಾನಿ. ಇಂತಹ ರೈತನ ದಿನಾಚರಣೆ ಎಷ್ಟೋ ಜನರಿಗೆ ಇನ್ನೂ ಗೊತ್ತೇ ಇಲ್ಲ. ಇದು ತುಂಬಾ ವಿಪರ್ಯಾಸ… ಅಂದರೆ, ಅನ್ನ ಕೊಡುವ ರೈತನನ್ನೇ ಮರೆತು ಜೀವನ ಸಾಗಿಸಿದರೆ ಇನ್ನೇಲ್ಲಿದೆ ರೈತನಿಗೆ ಗೌರವ. ರೈತ ದಿನಾಚರಣೆ ಇತಿಹಾಸ ಮತ್ತು ಹಿನ್ನೇಲೆ ತಿಳಿದು ಆತನ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ವಂದಿಸಬೇಕಿದೆ. “ನೀನು ಇವತ್ತು ಊಟ ಮಾಡಿದ್ದರೆ ರೈತನನ್ನು ನೆನೆ” ಎಂಬ ನಾಣ್ಣುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೇ ನಿಶ್ಚಿತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದರ ಹಿಂದೆ ರೈತನ ಶ್ರಮ ಮತ್ತು ಬೆವರೇ ಮುಖ್ಯ ಕಾರಣ… ಇಂತಹ ರೈತನಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕೆಂಬುದು ಮೇಲಿನ ಸಾಲಿನ ಅರ್ಥ. ನಮಗೆಲ್ಲರಿಗೂ ಡಾಕ್ಟರ್‍ಗಳು, ಲಾಯರ್‍ಗಳು, ಇಂಜನಿಯರ್‍ಗಳೂ ಮಾತ್ರ ಬೇಕಾಗುತ್ತಾರೆ. ಆದರೆ, ದಿನ ಒಂದಕ್ಕೆ ಮೂರು ಹೊತ್ತು ತುತ್ತು ಅನ್ನವನ್ನು ನೀಡಿದ ರೈತನ ನೆನಪು ಮಾತ್ರ ಬರುವುದಿಲ್ಲ. ಇಂತಹ ರೈತನನ್ನೇ ನಾವಿಂದು ಕಡೆಗಣಿಸಿದ್ದೇವೆ… ಭಾರತದ ಮೊದಲ ಪ್ರಧಾನ ಮಂತ್ರಿ ಆಗಿದ್ದ ಜವಾಹರಲಾಲ ನೆಹರೂರವರು ಹೇಳಿದಂತೆ “ಪ್ರಕೃತಿಯು ಕೃಷಿಯೊಂದಿಗೆ ಜೂಜಾಟ ಆಡುತ್ತಿದೆ”. ಹಲವಾರು ಪ್ರದೇಶಗಳಲ್ಲಿ ಅತಿವೃಷ್ಠಿ ಅಥವಾ ಅನಾವೃಷ್ಠಿ, ಇಲ್ಲವೇ ರೋಗ-ಕೀಟಗಳ ಬಾಧೆ, ಹೀಗೆ ಅನೇಕ ಕಾರಣಗಳಿಂದ ರೈತರು ನಿರಂತರವಾಗಿ ನಷ್ಟಗಳನ್ನು ಅನುಭವಿಸುತ್ತಾ ಸಾಲಗಾರರಾಗಿದ್ದಾರೆ. ಇಷ್ಟೆಲ್ಲ ಸವಾಲುಗಳ ನಡುವೆಯೂ ಒಂದೊಮ್ಮೆ ಒಳ್ಳೆಯ ಫಸಲು ಬಂದಾಗಲೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ನಷ್ಟವಾಗಿ ಬೆಳೆಗಳನ್ನು ಬೆಳೆಯಲು ಸುರಿದ ಬಂಡವಾಳವು ಮರಳಿ ಬಾರದಂತಾಗಿದೆ. ಕೆಲವರಂತೂ ಸಾಲದ ಬಾಧೆ ತಾಳದೇ ನೇಣಿಗೇ ಕೊರಳೊಡ್ಡುತ್ತಿದ್ದಾರೆ. ಇದು ಅತ್ಯಂತ ಚಿಂತಾದಾಯಕ ಸ್ಥಿತಿ. ಹಲವಾರು ಸಂಕಷ್ಟಗಳ ನಡುವೆಯೂ ನಮ್ಮ ದೇಶದಲ್ಲಿ ಹಸಿವೆಯಿಂದ ಬಳಲುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಈ ನೆಲದ ಮಣ್ಣಿನ ಮಗ… ರೈತನ ಶ್ರಮ, ಆತನ ಬೆವರ ಹನಿ, ಮಳೆ ಇರಲಿ-ಬಿಡಲಿ-ಹೆಚ್ಚಾಗಲಿ-ಕಡಿಮೆಯಾಗಲಿ ಒಂದು ಒಳ್ಳೆಯ ಬೆಳೆಯನ್ನು ಪಡೆಯುವ ಆಸೆಯ ನಿರೀಕ್ಷೆಯಿಂದ ಹೊಲವ ಬಿತ್ತುತ್ತಾನೆ. ಸಾಕಷ್ಟು ಪ್ರಯತ್ನ ಪಟ್ಟು ಮಳೆ ಚಳಿ ಬಿಸಿಲುಗಳೆನ್ನದೇ, ಹಗಲು-ರಾತ್ರಿ ಪರಿವೇ ಇಲ್ಲದೇ, ಶ್ರಮ ವಹಿಸಿ ವ್ಯವಸಾಯ ಮಾಡುತ್ತಾನೆ. ಈ ವ್ಯವಸಾಯವೇ ನಮ್ಮ ಅನ್ನದ ಬಟ್ಟಲನ್ನು ತುಂಬಿಸುತ್ತದೆ… ಇಂತಹ ರೈತರ ಶ್ರಮಕ್ಕೆ ನಾವಿಂದು ಬೆಲೆ ಕೊಡಬೇಕಾಗಿದೆ, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಕೃಷಿಗೆ ಹೆಚ್ಚು ಒತ್ತು ಸಿಗಬೇಕಾದ ವ್ಯವಸ್ಥಿತವಾದ ಕೃಷಿ ಮಾಹಿತಿ ವಿನಿಮಯ ವ್ಯವಸ್ಥೆ, ವ್ಯವಸ್ಥಿತ ಮಾರುಕಟ್ಟೆಗಳ ಲಭ್ಯತೆ ಮತ್ತು ಸ್ಥಿರವಾದ ಬೆಲೆಯನ್ನು ದೊರಕಿಸಿಕೊಡುವ ಪ್ರಮಾಣಿಕ ಪ್ರಯತ್ನ ಸರ್ಕಾರ ಮತ್ತು ಉನ್ನತ ಮಟ್ಟದ ಆಡಳಿತ ವರ್ಗದಿಂದ ಆಗಬೇಕಾಗಿದೆ… ಒಕ್ಕಲನು ನಲುಗಿಸದೇ ಲೆಕ್ಕವನು ಸಿಕ್ಕಿಸದೇ, ಕಕ್ಕುಲತೆಯಿಂದ ನಡೆಸುವ ಅರಸು ತಾ ಚೆಕ್ಕಂದವಿರುವ – ಸರ್ವಜ್ಞ ರೈತ ಸಂಕಷ್ಟದಲ್ಲಿದ್ದಾಗ ಆತನಿಗೆ ಸಹಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾದಾಗ ಮಾತ್ರ ರೈತ ಸಧೃಡವಾಗಿ ಬದುಕಲು ಸಾಧ್ಯ. ಇಲ್ಲದೇ ಹೊದಲ್ಲಿ ಆ ನಾಡಿನ ಆರ್ಥಿಕ ಬೆಳವಣಿಗೆ ಆರೋಗ್ಯಕರವಾಗಿರುವುದಿಲ್ಲ. ರೈತ ಸಮಸ್ಯೆಗಳ ಸುಳಿಗೆ ಸಿಕ್ಕು ಹಳ್ಳಿಗಳಿಗೆ ಬೆನ್ನು ಮಾಡಿ ಪಟ್ಟಣಗಳತ್ತ ಮುಖ ಮಾಡಿದರೆ, ಪ್ರತಿಯೊಬ್ಬರು ಅನ್ನದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ದೇಶ ಹಳ್ಳಿಗಳ ದೇಶ. ರೈತ ಉದ್ಧಾರವಾದರೆ, ಹಳ್ಳಿಗಳು ಉದ್ಧಾರವಾದಂತೆ. ಹಳ್ಳಿಗಳು ಉದ್ಧಾರವಾದರೆ, ಇಡೀ ದೇಶವೇ ಉದ್ಧಾರವಾದಂತೆ ಎಂಬುದನ್ನು ಎಲ್ಲರೂ ಮನಗಾಣಬೇಕಾಗಿದೆ… ನಮ್ಮ ಶ್ರಮಜೀವಿ ರೈತರ ಪಾತ್ರದ ಗೌರವಾರ್ಥ ಭಾರತದ ಮಾಜಿ ಪ್ರಧಾನಿ ಅಪಾರ ರೈತಪರ ಕಳಕಳಿಯನ್ನು ಹೊಂದಿದ ಗೌರವಾನ್ವಿತ ಶ್ರೀ ಚೌದರಿ ಚರಣ್ ಸಿಂಗ್‍ರ ಜನ್ಮದಿನವಾದ ಡಿಸೆಂಬರ, 23 ನೇ ತಾರೀಖಿನಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ… ಶ್ರೀ ಚೌದರಿ ಚರಣ್ ಸಿಂಗ್‍ರವರು ರೈತ ಕುಟುಂಬದಿಂದ ಬಂದವರಾಗಿದ್ದು, ಅತ್ಯಂತ ಸರಳ ಜೀವಿಗಳು, ಸೂಕ್ಷ್ಮ ಸಂವೇದಿಗಳು. ರೈತರ ಮತ್ತು ಕೂಲಿ ಕಾರ್ಮಿಕರ ಮೇಲೆ ತೀವ್ರತರ ಕಳಕಳಿಯನ್ನು ಹೊಂದಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ, ಭಾರತದ ಪ್ರಧಾನಿ ಹಾಗೂ ಉಪ ಪ್ರಧಾನಿಯಾದಾಗ ಬಜೆಟ್‍ಗಳನ್ನು ಕೃಷಿಕರ ಪರವಾಗಿರುವಂತೆ ನೋಡಿಕೊಂಡರು. ರೈತರ ಪರವಾಗಿ ಹಲವಾರು ನೀತಿಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು… ಇವರು ಜುಲೈ 28, 1979 ರಿಂದ ಜನೇವರಿ 14, 1980 ರವರೆಗೆ ಅಲ್ಪಾವಧಿಗೆ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. 1979 ನೇ ಸಾಲಿನ ಬಜೇಟ್‍ನ್ನು ಮಂಡಿಸಿದ ಇವರು ರೈತರ ಅಗತ್ಯತೆಗಳನ್ನು ಪೂರೈಸಲು ಬೇಕಾದ ಎಲ್ಲ ಅಂಶಗಳನ್ನು ಬಜೆಟ್‍ನಲ್ಲಿ ಸೇರಿಸಿದ್ದರು. ಇದರಲ್ಲಿ ರೈತ ಪರವಾದ ಹಲವಾರು ನೀತಿಗಳನ್ನು ಪ್ರಕಟಿಸಿದ್ದರು. ಇವರ ಪ್ರಯತ್ನಗಳಿಂದಾಗಿ ಎಲ್ಲ ಸಣ್ಣ ಮತ್ತು ಬಡ ರೈತರುಗಳನ್ನು ದೊಡ್ಡ ಭೂ ಮಾಲಿಕರು ಮತ್ತು ಹಣದಾಳದಾರರ ವಿರುದ್ಧ ಒಗ್ಗೂಡಿಸಲು ದೊಡ್ಡ ಶಕ್ತಿಯಾಗಿ ಕೆಲಸ ಮಾಡಿದರು… ಇವರು ಲೋಕಸಭೆಯಲ್ಲಿ ಪರಿಚಯಿಸಿದ್ದ ಕೃಷಿ ಉತ್ಪಾದನೆ ಮಸೂದೆಯು ಅತ್ಯಂತ ಪ್ರಸಿದ್ಧ ಮಾರುಕಟ್ಟೆ ಮಸೂದೆಯಾಗಿತ್ತು. ಈ ಮಸೂದೆಯನ್ನು ಹಣವುಳ್ಳ ವಿತರಕರು ಮತ್ತು ಭೂ ಮಾಲಿಕರು ರೈತರನ್ನು ಶೋಷಣೆ ಮಾಡುವುದರಿಂದ ತಡೆಯುವ ಉದ್ದೇಶದಿಂದ ಹೊರತರಲಾಗಿತ್ತು. ಇವರು ಜಮೀನ್ದಾರಿ ನಿರ್ಮೂಲನಾ ನೀತಿ ಹೊರತರುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದರು. ಇದರಿಂದ ರೈತರ ಮೇಲಿನ ತಮ್ಮ ಕಳಕಳಿ ಅತ್ಯಂತ ಕಾಳಜಿಯುತವಾದದ್ದೆಂದು ತೋರಿಸಿಕೊಟ್ಟಿದ್ದರು… ಇವರು ಉತ್ತಮ ವಾಗ್ಮಿಗಳಲ್ಲದೆ, ಒಳ್ಳೆಯ ಬರಹಗಾರರೂ ಆಗಿದ್ದರು. ಬರಹಗಾರರಾಗಿ ರೈತರ, ಬಡವರ ಸಮಸ್ಯೆಗಳ ಕುರಿತ ಆಲೋಚನೆಗಳನ್ನು ಚಿತ್ರಿಸುವ ಲೇಖನಗಳನ್ನು ಮತ್ತು ಪುಸ್ತಕಗಳನ್ನು ರಚಿಸಿದ್ದಲ್ಲದೆ, ಎಲ್ಲ ಸಮಸ್ಯೆಗಳಿಗೆ ಸಾಧ್ಯವಿರುವಂತಹ ವಿವಿಧ ಪರಿಹಾರಗಳನ್ನು ಸಹ ಕೊಡುತ್ತಿದ್ದರು… ಇವರು ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿಯವರ ಘೋಷಣೆಯಾದ “ಜೈ ಜವಾನ್ ಜೈ ಕಿಸಾನ್” ರೈತರ ಕ್ಷೇಮಕ್ಕಾಗಿ ಸದಾ ಶ್ರಮಿಸುತ್ತಿದ್ದರು. ಹಳ್ಳಿಯ ರೈತಾಪಿ ಕುಟುಂಬದಲ್ಲಿ ಜನಿಸಿದ್ದರಿಂದ ಅಲ್ಲಿನ ಜನರ ಪರಿಸ್ಥಿತಿ ಮತ್ತು ಸಮಸ್ಯೆಗಳ ಆಳವಾದ ಅರಿವನ್ನು ಹೊಂದಿದ್ದರಿಂದ ಹಳ್ಳಿಗರು, ಹಿಂದುಳಿದವರ ಮತ್ತು ರೈತರ ಅಭಿವೃದ್ಧಿಗಾಗಿ ಸದಾ ಕಾರ್ಯಪ್ರವೃತ್ತರಾಗಿರುತ್ತಿದ್ದರು. ಶೇ. 70 ಕ್ಕಿಂತ ಹೆಚ್ಚು ಜನ ಹಳ್ಳಿಯವರಿದ್ದು, ಅವರ ಕಸುಬು ವ್ಯವಸಾಯವಾಗಿರುತ್ತದೆ. ರೈತರು ನಮ್ಮ ದೇಶದ ಬೆನ್ನೆಲುಬು ಹಾಗೂ ಹಳ್ಳಿಗಳ ಅಭಿವೃದ್ಧಿಯಿಂದಲೇ ದೇಶದ ಏಳಿಗೆ ಸಾಧ್ಯವೆಂದು ದೃಢವಾಗಿ ನಂಬಿದ್ದರು. ಹೀಗಾಗಿ ಇವರನ್ನು ರೈತ ಸಮುದಾಯಕ್ಕೆ ಸೇರಿದ ಮಣ್ಣಿನ ಮಗನನ್ನಾಗಿ ಗುರುತಿಸಲ್ಪಡಲಾಗುತ್ತಿದೆ. ಮೇ 29, 1987 ನೇ ದಿವಸದಂದು ಕೊನೆಯುಸಿರೆಳೆದರು. ಇವರ ಸಮಾಧಿ ಸ್ಥಳವನ್ನು “ಕಿಸಾನ್ ಘಾಟ್” ಎಂದು ನಾಮಕರಣ ಮಾಡಿ ರೈತ ಪರ ಕಾಳಜಿ ಹೊಂದಿದ ಇವರಿಗೆ ಗೌರವ ಸಲ್ಲಿಸಲಾಗಿದೆ… ಶ್ರಮಜೀವಿ ರೈತರ ಗೌರವಾರ್ಥ ಮತ್ತು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ರೈತರ ಪಾತ್ರದ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ 23 ರಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ… ಉತ್ತರ ಪ್ರದೇಶದಲ್ಲಿ ಈ ದಿನದಂದು ಸಾರ್ವಜನಿಕ ರಜೆ ಇರುತ್ತದೆ. ಈ ದಿನದಂದು ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿಯೂ ಕೃಷಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಸಂಶೋಧನಾ ಕೇಂದ್ರಗಳಲ್ಲೆಡೆಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ… ಇಂದು ರೈತಪರ ಹೋರಾಟಗಳಲ್ಲಿ ಮುಂದಾಳತ್ವ ವಹಿಸಿದ ರೈತರ ಯಶೋಭಿವೃದ್ಧಿಗೆ ಶ್ರಮಿಸಿದ ನಾಯಕರಿಗೆ ಗೌರವ ಸಲ್ಲಿಸಲಾಗುತ್ತದೆ. ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಚರ್ಚಾಕೂಟ, ವಸ್ತು ಪ್ರದರ್ಶನಗಳನ್ನು, ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾರೆ. ರೈತರ ಮತ್ತು ಕೃಷಿಯಲ್ಲಿ ಸ್ವಾತಂತ್ರ್ಯದ ನಂತರದಿಂದ ಇಲ್ಲಿಯವರಿಗೆ ನಡೆದು ಬಂದ ಹಾದಿ, ಮುಂದೆ ಸಾಗಬೇಕಾದ ದಾರಿಯ ರೂಪರೇಷೆಗಳು, ರೈತರ ಸಮಸ್ಯೆಗಳ ಪರಿಹಾರೋಪಾಯಗಳು ಮುಂತಾದ ವಿಚಾರಗಳ ಚರ್ಚೆಯನ್ನು ವಿಜ್ಞಾನಿಗಳು, ವಿಸ್ತರಣಾಧಿಕಾರಿಗಳು ಮತ್ತು ರೈತ ನಾಯಕರುಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ… ಕೃಷಿ ಮತ್ತು ರೈತ ಎರಡೂ ಅತ್ಯಂತ ಪ್ರಮುಖವಾಗಿದ್ದರೂ ಅಭಿವೃದ್ಧಿ ಪಥದಲ್ಲಿ ಇವೆರಡೂ ಹೆಚ್ಚು ನಿರ್ಲಕ್ಷಕ್ಕೆ ಒಳಗಾಗಿವೆ ಎಂದು ಹೇಳಬಹುದು. ಕೃಷಿಯ ಬೆಳೆವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ನೀತಿಗಳನ್ನು ರೂಪಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಇವು ಇತರೆ ಕ್ಷೇತ್ರಗಳಿಗೆ ಹೋಲಿಸಿದಲ್ಲಿ ತೀವ್ರ ಕಡಿಮೆ ಎನ್ನಬಹುದು ಅಥವಾ ನಮ್ಮ ವ್ಯವಸ್ಥೆಯಲ್ಲಿನ ದೋಷಗಳಿಂದ ಅವು ರೈತರಿಗೆ ತಲುಪದೆ ಅಭಿವೃದ್ಧಿ ಪಥದಲ್ಲಿ ಕೃಷಿ ಇನ್ನೂ ಎಗುತ್ತಲೇ ಸಾಗಿದೆ ಎನ್ನಬಹುದು. ಇದಕ್ಕೆ ಇನ್ನೂ ಹಲವಾರು ಕಾರಣಗಳನ್ನು ಹೆಸರಿಸಬಹುದು… “ಹಸಿರು ಕ್ರಾಂತಿ” ಯಿಂದಾಗಿ ದೇಶದ ಆಹಾರೋತ್ಪಾದನೆ ಹೆಚ್ಚಾಗಿದ್ದಂತು ನಿಜ. ಆದರೆ, ಹಸಿರು ಕ್ರಾಂತಿಯ ಜೊತೆ ಜೊತೆಗೆ ಬಂದ ರಾಸಾಯನಿಕ ಗೊಬ್ಬರಗಳು ಮತ್ತು ಪೀಡೆನಾಶಕಗಳು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗಳಿಗೆ ಕಾರಣಗಳಾಗುತ್ತವೆ ಎಂಬುದನ್ನು ಸರಕಾರಗಳು ಮತ್ತು ಇಲಾಖೆಗಳು ಮುಂದಾಲೋಚಿಸಿರಲಿಲ್ಲ. ಹಸಿರು ಕ್ರಾಂತಿಯ ಪರಿಣಾಮದಿಂದ ಭೂಮಿಯ ಒಡಲು ವಿಷದಿಂದ ತುಂಬಿದೆ. ಭೂಮಿಯಲ್ಲಿ ಸಾವಯವದ ಅಂಶ ತೀವ್ರ ಕಡಿಮೆಯಾಗಿ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ. ವಾಸ್ತವವಾಗಿ ಭೂಮಿಯು ನಿರ್ಜೀವವಾಗುತ್ತಿದೆ. ಮಣ್ಣಿನ ತೇವಾಂಶವನ್ನು ಹಿಡಿದಿಡುವ ಶಕ್ತಿ ಕಡಿಮೆಯಾಗಿ ಬೆಳೆಗಳಿಗೆ ನೀರಿನ ಅಭಾವವುಂಟಾಗಿ ನಿರೀಕ್ಷಿತ ಇಳುವರಿಯನ್ನು ಪಡೆಯಲಾಗುತ್ತಿಲ್ಲ… ಎಷ್ಟೋ ಬಾರಿ ಖುರ್ಚು ಮಾಡಿದ ಬಂಡವಾಳವೂ ಸಹಿತ ಮರಳದಂತಾಗಿದೆ. ಇದರಿಂದಾಗಿ ನಮ್ಮ ರೈತರು ತೀವ್ರ ಸಂಕಷ್ಟಗಳಿಗೆ ಈಡಾಗುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಗಳು, ಕೈಗಾರಿಕೆಗಳು, ಶಹರಗಳು, ವಿಮಾನ ನಿಲ್ದಾಣಗಳು ಮುಂತಾದವುಗಳ ನಿರ್ಮಾಣಕ್ಕಾಗಿ ಕೃಷಿ ಭೂಮಿಯನ್ನು ಉಪಯೋಗಿಸಿಕೊಳ್ಳುವುದರಿಂದ ದಿನೇ ದಿನೇ ಕೃಷಿ ಭೂಮಿ ಕ್ಷೀಣಿಸುತ್ತಿದೆ. ಅಭಿವೃದ್ಧಿಯ ಈ ನಾಗಾಲೋಟದ ಕಾರಣ, ಕಾಡುಗಳು ಸಹ ನಾಶವಾಗುತ್ತಿದ್ದು, ಪರಿಸರದಲ್ಲಿ ಅತಿ ಹೆಚ್ಚಿನ ಅಸಮತೋಲನ ಕಂಡು ಬರುತ್ತಿದೆ. ಇದರಿಂದ ಬರ, ಅಕಾಲಿಕ ಮಳೆ ಕೆಲವೆಡೆ ಪ್ರವಾಹದಂತಹ ಪರಿಸ್ಥಿತಿಗಳು ಎದುರಾಗುತ್ತ್ತಿವೆ. ಇನ್ನು ತಾಪಮಾನವು ಸಹ ಹೆಚ್ಚುತ್ತಿದ್ದು, ತೇವಾಂಶದ ಕೊರತೆಯ ಜೊತೆಗೆ ಹೆಚ್ಚಿದ ಉಷ್ಣಾಂಶದಿಂದ ಕೆಲವೊಂದು ಬೆಳೆಗಳನ್ನು ಬೆಳೆಯಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ಜಾಗತಿಕ ತಾಪಮಾನದ ಪರಿಣಾಮ ಎನ್ನಬಹುದು… ಒಟ್ಟಾರೆ ಕೃಷಿ ಮತ್ತು ರೈತ ಎಲ್ಲ ಕಡೆಯಿಂದಲೂ ಪರೀಕ್ಷೆಗೆ ಒಳಪಡಲಾಗುತ್ತಿದ್ದು, ಒಂದು ಬೆಳೆಯನ್ನು ಬೆಳೆಯಲು ಹಲವಾರು ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಒಟ್ಟಾರೆ ಭಾರತದ ಕೃಷಿ ಸ್ಥಿತಿಯು ಗೊಂದಲಮಯ ಸ್ಥಿತಿಯಲ್ಲಿದೆ. ಇಲ್ಲಿಂದ ಮುಂದಕ್ಕೆ ಇಡಬೇಕಾದ ಹೆಜ್ಜೆಯನ್ನು ನಾವಿನ್ನು ಮುಂದಾಲೋಚನೆಯಿಂದ, ವಿವೇಕತನದಿಂದ ಮತ್ತು ಅತ್ಯಂತ ಜಾಗರೂಕತೆಯಿಂದ ಇಡಬೇಕಾಗಿದೆ. ನಮ್ಮ ದೇಶದ ಮಟ್ಟಿಗೆ ಕೃಷಿಯು ಕೇವಲ ಆಹಾರೋತ್ಪಾದನೆಯ ಕಾರ್ಖಾನೆಯಾಗಿರದೆ, ಅದೊಂದು ಬದುಕಿನ ಭಾಗ ಮತ್ತು ಜೀವ ವಿಧಾನವಾಗಬೇಕಿದೆ. ಸ್ವಾವಲಂಬಿ ಬದುಕಿನ ಮಾರ್ಗವಾಗಬೇಕಾಗಿದೆ. ಆದರೆ, ಆಧುನಿಕ ದಿನಗಳಲ್ಲಿ ಕೃಷಿಯು ಅಸ್ಥಿರವಾಗಿದೆ ಮತ್ತು ಎಲ್ಲದಕ್ಕೂ ಇತರರನ್ನು ಅವಲಂಬಿಸಿರುವ ಕೃಷಿಯಾಗಿದೆ… ನಾವಿನ್ನು ಬದಲಾಗಬೇಕಿದೆ. ರೈತರು ವೈಜ್ಞಾನಿಕ ತಿಳುವಳಿಕೆಯಿಂದ ಹೊಸ ತಂತ್ರಜ್ಞಾನಗಳ ಜೊತೆಗೆ ಸುಸ್ಥಿರ ಮತ್ತು ಸ್ವಾವಲಂಬಿ ಕೃಷಿ ವಿಧಾನಗಳಾದ ಸಾವಯವ ಕೃಷಿಯನ್ನು ಸಾಧ್ಯವಾದಷ್ಟು ಒಳಸುರಿಗಳನ್ನು [ರಸಾಯನಿಕ ಗೊಬ್ಬರ ಮತ್ತು ಪೀಡೆ ನಾಶಕ] ಗಳನ್ನು ನಮ್ಮಲ್ಲಿಯೇ ಉತ್ಪಾದಿಸಿ ಬಳಸುವತ್ತ ಚಿತ್ತ ಹರಿಸಬೇಕಿದೆ… ಜೊತೆಗೆ

ಸ್ವಾತ್ಮಗತ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಚಿಂದೋಡಿ ಲೀಲಾ ನಾಟಕರಂಗದ ಒಂದು ಸಾಹಸ ಪಯಣ ಕೆ.ಶಿವು ಲಕ್ಕಣ್ಣವರ್ ಸುಮಾರು ಎಂಟು ದಶಕಗಳ ಇತಿಹಾಸವುಳ್ಳ ಕನ್ನಡ ವೃತ್ತಿ ನಾಟಕ ಮಂಡಲಿಯ ಒಡತಿ. ಶತಮಾನೋತ್ಸವ, ಸಹಸ್ರಮಾನೋತ್ಸವಗಳನ್ನಾಚರಿಸಿದ ನಾಟಕಗಳ ಪ್ರಧಾನ ಅಭಿನೇತ್ರಿ ಚಿಂದೋಡಿ ಲೀಲಾ ಅವರು… ಕನ್ನಡ ವೃತ್ತಿರಂಗ ಭೂಮಿಯಲ್ಲಿ ಇನ್ನೂ ಸರಿಗಟ್ಟಲಾಗದ ದಾಖಲೆಗಳನ್ನು ಸ್ಥಾಪಿಸಿದ ಸಾಹಸಿ. ಜನ್ಮ ದಾವಣಗೆರೆಯಲ್ಲಿ 1941ರಲ್ಲಿ… ತಂದೆ ಚಿಂದೋಡಿ ವೀರಪ್ಪನವರು. ಪ್ರಖ್ಯಾತ ಗಾಯಕರು, ನಟರೂ ಆಗಿದ್ದವರು. ತಾಯಿ ಶಾಂತಮ್ಮ ಗೃಹಿಣಿಯಾಗಿದ್ದರು… ಚಿಂದೋಡಿ ವೀರಪ್ಪ ದಾವಣಗೆರೆಯಲ್ಲಿ ಸ್ಥಾಪಿಸಿದ್ದ ‘ಶ್ರೀಗುರು ಕರಿಬಸವ ರಾಜೇಂದ್ರ ನಾಟಕ’ ಮಂಡಳಿ (ಕೆ.ಬಿ.ಆರ್.ಡ್ರಾಮಾ ಕಂಪನಿ) ಅಭಿನಯಸುತ್ತಿದ್ದ ಗುಲೇಬ ಕಾವಲಿ, ಕಾಳಿದಾಸ, ಸಂಪೂರ್ಣ ರಾಮಾಯಣ, ಗುಣಸಾಗರಿ ಅತ್ಯಂತ ಜನಪ್ರಿಯ ನಾಟಕಗಳಾಗಿದ್ದವು… ಮೈಸೂರಿನ ಅರಸರಾದ ಕೃಷ್ಣರಾಜ ಒಡೆಯರು ವೀರಪ್ಪನವರ ಅಭಿನಯ ಗಾಯನವನ್ನು ಮೆಚ್ಚಿ ಗಾಯನ ಗಂಧರ್ವ’ ಎಂಬ ಬಿರುದುಕೊಟ್ಟುಕೊಟ್ಟು ಚಿನ್ನದ ತೋಡಾ ನೀಡಿ ಗೌರವಿಸಿದ್ದರು.ಚಿನ್ನದ ತೋಡಾ ತೊಟ್ಟ ವೀರಪ್ಪ, ಚಿಂದೋಡಿ ವೀರಪ್ಪನಾಗಿ ಪ್ರಸಿದ್ಧರು. `ಚಿಂದೋಡಿ ಮನೆತನದ ಹೆಸರಾಗಿ ಬಳಕೆಗೆ ಬಂತು ಆಗ… ಚಿಂದೋಡಿ ವೀರಪ್ಪನವರ ಐದು ಮಂದಿ ಗಂಡು, ನಾಲ್ಕು ಹೆಣ್ಣುಮಕ್ಕಳಲ್ಲಿ ಲೀಲಮ್ಮ ಕೊನೆಯವರು; ಗಂಡು ಮಕ್ಕಳೆಲ್ಲಾ ಕಂಪನಿಯ ನಟರು. ಇವರದು ಸಂಪ್ರದಾಯಸ್ಥ ವೀರಶೈವ ಕುಟುಂಬ. ಹೆಣ್ಣುಮಕ್ಕಳು ನಾಟಕ ರಂಗಪ್ರವೇಶ ಮಾಡುವುದು ನಿಷಿದ್ಧವಾಗಿತ್ತು. ಚಿಂದೋಡಿ ವೀರಪ್ಪನವರ ಕಂಪನಿಯಲ್ಲಿ ಸ್ತ್ರೀ ಪಾತ್ರಗಳನ್ನು ಅವರ ಮಕ್ಕಳೇ ಮಾಡುತ್ತಿದ್ದರು. ಈ ಸಂಪ್ರದಾಯಕ್ಕೆ ವಿರುದ್ಧವಾಗಿ ಚಿಂದೋಡಿ ಲೀಲಾ ತಮ್ಮ 5ನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದರು. ಶಿವಯೋಗಿ ಸಿದ್ಧರಾಮ ನಾಟಕದಲ್ಲಿ ಬಾಲ ಸಿದ್ಧರಾಮನ ಪಾತ್ರ ಮಾಡಿದರು. ಬಾಲ ನಟಿಯ ಅಭಿನಯ ಜನಕ್ಕೆ ಮೆಚ್ಚುಗೆಯಾಯಿತು. ಪುರುಷರೇ ಸ್ತ್ರೀಪಾತ್ರ ನಿರ್ವಹಿಸುತ್ತಿದ್ದ ಕಾಲವದು. ಬದಲಾವಣೆ ಮಾಡಬಾರದೇಕೆ? ಎಂಬ ಕಲ್ಪನೆ ಬಂದದ್ದೇ ತಡ. ಲೀಲಮ್ಮ ತಮ್ಮ 14ನೇ ವಯಸ್ಸಿನಲ್ಲಿಹಳ್ಳಿಹುಡುಗಿ’ ನಾಟಕದಲ್ಲಿ ಪ್ರಧಾನ ಸ್ತ್ರೀ ಪಾತ್ರ ನಿರ್ವಹಿಸಿದವರು. ಚೂಟಿಯಾದ ಚೆಲುವಿನ ಕಿಶೋರಿಯ ಅಭಿನಯಕ್ಕೆ ಸರ್ವತ್ರ ಮೆಚ್ಚುಗೆ ಪ್ರಶಂಸೆ ಬಂತು ನಾಟಕ ಪ್ರೀಯರಿಂದ. ಆ ನಂತರ ಚಿಂದೋಡಿ ಲೀಲಾ ಹಿಂತಿರುಗಿ ನೋಡಲಿಲ್ಲ. ರಂಗಕ್ಕೆ ಪ್ರವೇಶ ಮಾಡಿ 50 ವರ್ಷಗಳಾದರೂ ನಿರ್ಗಮನ ಕಾಣಲಿಲ್ಲ… ಚಿಂದೋಡಿ ವೀರಪ್ಪನವರ ಐದು ಮಂದಿ ಗಂಡು, ನಾಲ್ಕು ಹೆಣ್ಣುಮಕ್ಕಳಲ್ಲಿ ಲೀಲಮ್ಮ ಕೊನೆಯವರು; ಗಂಡು ಮಕ್ಕಳೆಲ್ಲಾ ಕಂಪನಿಯ ನಟರು. ಇವರದು ಸಂಪ್ರದಾಯಸ್ಥ ವೀರಶೈವ ಕುಟುಂಬ. ಹೆಣ್ಣುಮಕ್ಕಳು ನಾಟಕ ರಂಗಪ್ರವೇಶ ಮಾಡುವುದು ನಿಷಿದ್ಧವಾಗಿತ್ತು. ಚಿಂದೋಡಿ ವೀರಪ್ಪನವರ ಕಂಪನಿಯಲ್ಲಿ ಸ್ತ್ರೀ ಪಾತ್ರಗಳನ್ನು ಅವರ ಮಕ್ಕಳೇ ಮಾಡುತ್ತಿದ್ದರು. ಈ ಸಂಪ್ರದಾಯಕ್ಕೆ ವಿರುದ್ಧವಾಗಿ ಚಿಂದೋಡಿ ಲೀಲಾ ತಮ್ಮ 5ನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದರು. ಶಿವಯೋಗಿ ಸಿದ್ಧರಾಮ ನಾಟಕದಲ್ಲಿ ಬಾಲ ಸಿದ್ಧರಾಮನ ಪಾತ್ರ ಮಾಡಿದರು. ಬಾಲ ನಟಿಯ ಅಭಿನಯ ಜನಕ್ಕೆ ಮೆಚ್ಚುಗೆಯಾಯಿತು. ಪುರುಷರೇ ಸ್ತ್ರೀಪಾತ್ರ ನಿರ್ವಹಿಸುತ್ತಿದ್ದ ಕಾಲವದು. ಬದಲಾವಣೆ ಮಾಡಬಾರದೇಕೆ? ಎಂಬ ಕಲ್ಪನೆ ಬಂದದ್ದೇ ತಡ. ಲೀಲಮ್ಮ ತಮ್ಮ 14ನೇ ವಯಸ್ಸಿನಲ್ಲಿಹಳ್ಳಿಹುಡುಗಿ’ ನಾಟಕದಲ್ಲಿ ಪ್ರಧಾನ ಸ್ತ್ರೀ ಪಾತ್ರ ನಿರ್ವಹಿಸಿದವರು. ಚೂಟಿಯಾದ ಚೆಲುವಿನ ಕಿಶೋರಿಯ ಅಭಿನಯಕ್ಕೆ ಸರ್ವತ್ರ ಮೆಚ್ಚುಗೆ ಪ್ರಶಂಸೆ ಬಂತು ನಾಟಕ ಪ್ರೀಯರಿಂದ. ಆ ನಂತರ ಚಿಂದೋಡಿ ಲೀಲಾ ಹಿಂತಿರುಗಿ ನೋಡಲಿಲ್ಲ. ರಂಗಕ್ಕೆ ಪ್ರವೇಶ ಮಾಡಿ 50 ವರ್ಷಗಳಾದರೂ ನಿರ್ಗಮನ ಕಾಣಲಿಲ್ಲ… 1960-1975ರವರೆಗಿನ ಅವಧಿಯಲ್ಲಿ ಕೆ.ಬಿ.ಆರ್. ಡ್ರಾಮಾ ಕಂಪನಿ ಗುಣಸಾಗರಿ, ಲಂಕಾದಹನ, ಚಿತ್ರಾಂಗದ, ಶಾಕುಂತಲ, ಹಳ್ಳಿಹುಡುಗಿ ಮೊದಲಾದ ನಾಟಕಗಳನ್ನು ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಸಹಸ್ರಾರು ಪ್ರದರ್ಶನಗಳನ್ನು ನೀಡಿತ್ತು. ಆದರೆ ಇವುಗಳಲ್ಲಿ ಅತ್ಯಂತ ಜನಪ್ರಿಯವಾದುದು, ಚಿಂದೋಡಿ ಲೀಲಾ ಪಾತ್ರ – ಹಳ್ಳಿ ಹುಡುಗಿ’ ಪಾತ್ರ ಕರ್ನಾಟಕದಲ್ಲಿ ಆ ಪಾತ್ರ ಮನೆ ಮಾತಾಯಿತು. ಲೀಲಾ ಅವರನ್ನುಹಳ್ಳಿ ಹುಡುಗಿ’ ಎಂದೇ ಅಭಿಮಾನಿ ಪ್ರೇಕ್ಷಕರು ಗುರುತಿಸುತ್ತಿದ್ದರು… ಗಡಿ ನಾಡಿನಲ್ಲಿ ಕನ್ನಡದ ಜಯಭೇರಿ ಬಾರಿಸುವ ಬಯಕೆ, ಬೆಳಗಾವಿಯಲ್ಲಿ ಕ್ಯಾಂಪ್. ಅಭಿನಯಿಸಿದ ನಾಟಕಗಳೆಲ್ಲಾ ಶತದಿನೋತ್ಸವ ಆಚರಿಸಿದವು. ಗಡಿ ಭಾಗದಲ್ಲಿ 2000 ಕನ್ನಡ ನಾಟಕಗಳ ಪ್ರದರ್ಶನ ನೀಡಿದ್ದಕ್ಕಾಗಿ ಕರ್ನಾಟಕ ರಾಜ್ಯಪಾಲ ಎ.ಎನ್ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ವಿಶೇಷ ಉತ್ಸವವೇ ನಡೆಯಿತು. ಗಡಿನಾಡಿನಲ್ಲಿ ನಡೆಸಿದ ಕಲಾ ಸೇವೆ ಮೆಚ್ಚಿ ಸರ್ಕಾರ ತಾತ್ಕಾಲಿಕ ರಂಗಮಂದಿರ ನಿರ್ಮಿಸಿದ್ದ ಜಮೀನನ್ನೇ 30 ವರ್ಷಗಳ ಗುತ್ತಿಗೆಗೆ ನೀಡಿತು. ಅಲ್ಲಿ ಈಗ `ಚಿಂದೋಡಿ ಲೀಲಾ ರಂಗಮಂದಿರ’ ನಿರ್ಮಾಣವಾಗಿದೆ. ಬೆಳಗಾವಿಯ ಉತ್ತರ ಭಾಗದ ಜನರಿಗೆ ಅನುಕೂಲವಾಗಲೆಂದು, ಸದಾಶಿವ ನಗರದಲ್ಲಿ ಕೆ.ಬಿ.ಆರ್. ಕನ್ನಡ ಸಂಸ್ಕೃತಿ ಕೇಂದ್ರ ರಂಗಮಂದಿರ ನಿರ್ಮಿಸಿದ್ದಾರೆ… 1950-60ರ ದಶಕದ ನಂತರ ಹಿರಣ್ಣಯ್ಯ ಮಿತ್ರ ಮಂಡಲಿಯಂತಹ ಸಂಸ್ಥೆಗಳನ್ನು ಬಿಟ್ಟರೆ, ವೃತ್ತಿಪರ ನಾಟಕ ಸಂಸ್ಥೆಗಳ ಚಟುವಟಿಕೆ ಬೆಂಗಳೂರಿನಲ್ಲಿ ಕಂಡು ಬರುತ್ತಿರಲಿಲ್ಲ. ಚಿಂದೋಡಿ ಲೀಲಾ ಬೆಂಗಳೂರಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲೆಂದು 1995ರ ಅಕ್ಟೋಬರ್‍ನಲ್ಲಿ ಬಂದರು. ಬೆಂಗಳೂರಿನ ಹೃದಯ ಭಾಗದಲ್ಲಿರುವ ಗುಬ್ಬಿ ವೀರಣ್ಣ ಚಿತ್ರಮಂದಿರದಲ್ಲಿ ಆರಂಭವಾದ `ಪೊಲೀಸನ ಮಗಳು’ ನಾಟಕ, ಸತತ ಮೂರು ವರ್ಷಗಳು ನಡೆಯಿತು. ದಿನಕ್ಕೆರಡು ಪ್ರದರ್ಶನ. ಒಂದೇ ನಾಟಕ, ಒಂದೇ ತಂಡದಿಂದ. ದಿನಕ್ಕೆ ಎರಡು ಮೂರು ಪ್ರದರ್ಶನದಂತೆ ನಿರಂತರವಾಗಿ 1135 ಪ್ರದರ್ಶನಗಳನ್ನು ಕಂಡಿತು. ಈ ಯಶಸ್ಸಿನ ಕೇಂದ್ರ ಬಿಂದು ಪ್ರಧಾನ ಪಾತ್ರಧಾರಿ ಚಿಂದೋಡಿ ಲೀಲಾರವರೇ ಎಂದು ಹೇಳಿದರೆ ತಪ್ಪಾಗಲಾರದು… ಬೆಂಗಳೂರಿನಲ್ಲಿ ಅಪೂರ್ವ ಯಶಸ್ಸು ಸಾಧಿಸಿದ ಪೊಲೀಸನ ಮಗಳು’ ಕರ್ನಾಟಕದ ಎಲ್ಲೆಡೆ ಪ್ರದರ್ಶಿತವಾಗಿದೆ. ಒಟ್ಟು 3340 ಪ್ರದರ್ಶನ ಕಂಡ ನಾಟಕ, ಗಿನ್ನೆಸ್ ದಾಖಲೆಗೆ ಸೇರಲಿರುವ ವೃತ್ತಿ ನಾಟಕ ಸಂಸ್ಥೆಯ ನಾಟಕವದು. ಚಿಂದೋಡಿ ಲೀಲಾ ಪ್ರಧಾನ ಭೂಮಿಕೆಯಲ್ಲಿರುವ ಇನ್ನೊಂದು ನಾಟಕಧರ್ಮದ ದೌರ್ಜನ್ಯ’ ಅನೇಕ ಊರುಗಳಲ್ಲಿ ಶತದಿನೋತ್ಸವ ಪ್ರದರ್ಶನಗೊಂಡ ನಾಟಕವಾಯಿತು. ಈ ನಾಟಕದಲ್ಲಿ ಚಿಂದೋಡಿ ಲೀಲಾ ಪೊಲೀಸ್ ಸೂಪರಿಂಟೆಂಡ್ `ಜ್ಯೋತಿ’ ಯಾಗಿ ಅಭಿನಯಿಸಿದ್ದಾರೆ. ಹಳ್ಳಿ ಹುಡುಗಿಯಂತೆಯೇ ಪ್ರಸಿದ್ಧವಾದ ಪಾತ್ರ. ಶಾಕುಂತಲ, ಚಿತ್ರಾಂಗದ, ಲಂಕಾ ದಹನ, ಮಹರಾವಣ, ಸಿಂಡಿಕೇಟ್-ಇಂಡಿಕೇಟ್, ಬ್ರಹ್ಮಚಾರಿಯ ಮಗ-ಇವು ಚಿಂದೋಡಿ ಲೀಲಾ ಅಭಿನಯದ ಪ್ರಮುಖ ನಾಟಕಗಳು ಮತ್ತು ಜನಪ್ರಿಯ ನಾಟಕಗಳು… ಚಿಂದೋಡಿ ವೀರಪ್ಪ 1928ರಲ್ಲಿ ಸ್ಥಾಪಿಸಿದ ಕೆ.ಬಿ.ಆರ್. ಡ್ರಾಮಾ ಕಂಪನಿ, ಇಂದಿಗೂ ಜೀವಂತ. ಕುಟುಂಬದ ಮೊದಲ ಬಂಗಾರ ತೋಡಾಧಾರಿಯಾದ ವೀರಪ್ಪ ನಿಧನಾನಂತರ, ಅವರ ಹಿರಿಯ ಮಗ ಚಿಂದೋಡಿ ವೀರಪ್ಪ ನೇತೃತ್ವದಲ್ಲಿ ಕಂಪನಿ ಮುಂದುವರೆಯಿತು. ಎರಡನೇ ವೀರಪ್ಪನವರ ನಿಧನಾನಂತರ, 1978ರಲ್ಲಿ ಕಂಪನಿ ಕುಟುಂಬದಲ್ಲಿ ಮೂರು ಕವಲಾಗಿ ಹಂಚಿ ಹೋಯಿತು. ಕೆಲ ಕಾಲಾನಂತರ ಆ ಮೂರು ಸಂಸ್ಥೆಗಳು ಚಿಂದೋಡಿ ಲೀಲಾ ನೇತೃತ್ವದಲ್ಲಿ ಮುನ್ನಡೆದವು. ಈಗ ಅವು ಮೂರು ಮತ್ತೆ ಒಂದಾಗಿವೆ; ಲೀಲಾ ಸಾರಥ್ಯದಲ್ಲಿ ಮುಂದುವರೆದವು. ಸಂಸ್ಥೆಯ ಕೇಂದ್ರ ಸ್ಥಾನವಾದ ದಾವಣಗೆರೆಯಲ್ಲಿ `ಚಿಂದೋಡಿ ಲೀಲಾ ಕಲಾಕ್ಷೇತ್ರ ನಿರ್ಮಾಣ ಕಾರ್ಯ ಮುಗಿದಿದೆ ಈಗ. ಆಧುನಿಕ ಉಪಕರಣಗಳಿಂದ ಕೂಡಿದ ಅತ್ಯಾಧುನಿಕ ರಂಗಮಂದಿರ ಸಿದ್ಧವಾಗಿದೆ… ಕನ್ನಡ ವೃತ್ತಿಪರ ನಾಟಕ ಸಂಸ್ಕೃತಿ ಪರಿಚಯ ಕಾರ್ಯಕ್ರಮದ ಅಂಗವಾಗಿ ಕಾಸರಗೋಡಿನಿಂದ ಕಾಶಿಯವರೆಗೆ ರಂಗಯಾತ್ರೆ ನಡೆಸಿದ್ದಾರೆ. ಈ ರಂಗಯಾತ್ರೆ ಕಾಲದಲ್ಲಿ ಅನೇಕ ನಗರಗಳಲ್ಲಿ ವಿಚಾರ ಸಂಕೀರ್ಣ ನಡೆಸಿ, ನಾಟಕಗಳನ್ನು ಪ್ರದರ್ಶಿಸಲಾಯಿತು. ಕರ್ನಾಟಕ ಸರಕಾರದ ನೆರವಿನಿಂದ ಬ್ರಿಟನ್ ಮತ್ತಿತರ ದೇಶಗಳಿಗೆ ಹೋಗಿ ಅಲ್ಲಿಕಿತ್ತೂರು ಚೆನ್ನಮ್ಮ ಟಿಪ್ಪೂ ಸುಲ್ತಾನ್,ಜಗಜ್ಯೋತಿ ಬಸವೇಶ್ವರ ನಾಟಕಗಳನ್ನೂ ಪ್ರದರ್ಶಿಸಿದ್ದಾರೆ… ಚಿಂದೋಡಿ ಲೀಲಾ ಅವರಿಗೆ ಸರ್ಕಾರವಲ್ಲದೆ ಖಾಸಗಿ ಸಂಘ ಸಂಸ್ಥೆಗಳು, ಗುರು ಮಠಗಳೂ ಸನ್ಮಾನಿಸಿವೆ. ಅನೇಕ ಪ್ರಶಸ್ತಿಗಳನ್ನು ನೀಡಿವೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1985), ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1994), ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ (2003)-ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳಿಂದ ಸನ್ಮಾನಿತರಾಗಿರುವ ಈ ಕಲಾವಿದೆಗೆ ಕೇಂದ್ರ ಸರ್ಕಾರ `ಪದ್ಮಶ್ರೀ ಪ್ರಶಸ್ತಿ (1988) ನೀಡಿ ಗೌರವಿಸಿದೆ… ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ (1987) ಅನಂತರ ಅಧ್ಯಕ್ಷೆಯಾಗಿ(1991) ರಂಗಭೂಮಿಗೆ ಗಣನೀಯ ಸೇವೆ ಸಲ್ಲಿಸಿದ್ದಾರೆ ಚಿಂದೋಡಿ ಲೀಲಾ… ಕನ್ನಡದ ಕೆಲವು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ನಿರೀಕ್ಷಿಸಿದ ಪ್ರೋತ್ಸಾಹ ದೊರೆಯದ ಕಾರಣ, ನಾಟಕ ರಂಗದಲ್ಲೇ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡರು. ಸೋದರಳಿಯ ಬಂಗಾರೇಶ್ (ಅಣ್ಣ ಚಿಂದೋಡಿ ವೀರಪ್ಪನ ಮಗ) ನಿರ್ದೇಶನದ ಚಿಂದೋಡಿ ಲೀಲಾ ನಿರ್ಮಿಸಿದ `ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರಕ್ಕೆ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ದೊರಕಿರುವುದು ತೃಪ್ತಿ ತಂದಿದೆ. ಕರ್ನಾಟಕ ಸರಕಾರ ಗಾನಯೋಗಿ ಚಿತ್ರಕ್ಕೆ 1995-96ರ ಅತ್ಯುತ್ತಮ ಚಿತ್ರ ಪ್ರಶಸ್ತಿ (ನಿರ್ದೇಶಕ: ಚಿಂದೋಡಿ ಬಂಗಾರೇಶ್), ಅತ್ಯುತ್ತಮ ಪೋಷಕ ನಟ ಪ್ರಶಸ್ತಿ (ಗಿರೀಶ್ ಕಾರ್ನಾಡ್), ಅತ್ಯುತ್ತಮ ಸಂಗೀತ ನಿರ್ದೇಶಕ (ಹಂಸಲೇಖ) ನೀಡಿ ಗೌರವಿಸಿದೆ… ಹೀಗೆ ಸಾಗಿತ್ತು ಚಿಂದೋಡಿ ಲೀಲಾ ನಾಟಕ ಮತ್ತು ಅಭಿನಯದ ಪಯಣ. ಚಿಂದೋಡಿ ಲೀಲಾ ಮರೆಯಾದರೂ ಇನ್ನೂ ಈ ನಾಟಕ ಕಂಪನಿಯ ಪ್ರಯತ್ನವಿನ್ನೂ ಮುಂದುವರಿದೇ. ಯಾವುದಕ್ಕೂ ನಾವು ಇಂತಹ ವೃತ್ತಿ ರಂಗದ ನಾಟಕ ಕಂಪನಿ ಉಳಿಸಿ ಬೆಳೆಸಬೇಕಾಗಿದೆ…

ಸ್ವಾತ್ಮಗತ Read Post »

ಅಂಕಣ ಸಂಗಾತಿ

ಹೊತ್ತಾರೆ

ಅಮ್ಮನೂರಿನ ನೆನಪುಗಳು. ಅಮೇರಿಕಾದಿಂದ ಅಶ್ವಥ್ ಅಶ್ವಥ್ ಮೊದಲೇ ಹೇಳಿದಂತೆ, ರಂಗ ತಿಮ್ಮರ ಸಂತೆ ಪ್ರಯಾಣ ನಿಯಮಿತವಾಗಿರುತ್ತಿತ್ತು. ಮೂಟೆಯಲ್ಲಿ ಇರುವ ಪದಾರ್ಥದ ಆಧಾರದ ಮೇಲೆ ನಾಲ್ಕೈದು  ಮಂಡಿಗಳಿಗೆ ಗಾಡಿ ಸಾಗಬೇಕಾಗಿತ್ತು. ಅವುಗಳಲ್ಲಿ ಭತ್ತ, ರಾಗಿ, ತೆಂಗುಗಳದ್ದು ಒಂದೇ ಮಂಡಿ. ಅದು ರಂಗ ತಿಮ್ಮರ ಮೊದಲ ನಿಲ್ದಾಣ, ಆಮೇಲೆ ಬೆಲ್ಲದ ಮಂಡಿ, ನಂತರ ಅಪರೂಪಕ್ಕೊಮ್ಮೆ ಅಡಿಕೆ ಮಂಡಿ. ಇವಿಷ್ಟೂ ರೌಂಡ್ಸ್ ಆದ ಮೇಲೆ ಮನೆಯಿಂದ ತಂದಿರುತ್ತಿದ್ದ ಹುಲ್ಲು ತಿನ್ನುವುದು.  ಗಾಡಿಯ ಕೆಳಭಾಗದಲ್ಲಿ ನೇತುಹಾಕಿರುತ್ತಿದ್ದ ಬಕೆಟ್  ತೆಗೆದು ಸಂತೇಮಾಳದ ಕೈಪಂಪಿನಿಂದ ಹಿಡಿದ (ಕಡೆಗೆ ನಲ್ಲಿಯೂ ಬಂದಿತ್ತೋ ಏನೋ) ನೀರು.  ಇನ್ನು ಮನೆಕಡೆ ಹೊರಡುವುದಕ್ಕಿಂತ ಮೊದಲು ದಿನಸಿ ಅಂಗಡಿಯಲ್ಲಿ ಒಂದು ನಿಲುಗಡೆ, ಕಡಲೇಪುರಿ, ಖರ್ಜೂರ ಸಿಹಿತಿಂಡಿಗಳ ಅಂಗಡಿಯ ಬಳಿ ಮತ್ತೊಂದು ನಿಲುಗಡೆ. ಈ ನಿಲುಗಡೆಗಳೆಲ್ಲ ಕಡ್ಡಾಯವಾಗಿರುವಂತಹವು, ಒಮ್ಮೊಮ್ಮೆ ನಿಲ್ಲಿಸಬೇಕಾದ ಅಗತ್ಯವಿಲ್ಲದಿದ್ದರೂ, ರಂಗ ತಿಮ್ಮರ ಅಭ್ಯಾಸಬಲ ಎಷ್ಟಿತ್ತು ಅಂದರೆ, ಗೌಡಜ್ಜಿಯ ಗಾಡಿ ಅಂಗಡಿ ಮುಂದೆ ನಿಲ್ಲದೇ ಹೋಗುವುದಿಲ್ಲ ಎಂದು ದಿನಸಿ ಅಂಗಡಿಯ ಶೆಟ್ಟರು ಖಡಾಖಂಡಿತವಾಗಿ ಹೇಳುವಷ್ಟು. ಪೇಟೆಯೊಳಗೆ ಮತ್ತು ಸಂತೆಮಾಳದಲ್ಲಿ ಬಸ್ಸು, ಕಾರು ಲಾರಿಗಳ ಮಧ್ಯೆ ಸಂತೆಯ ಜನಜಂಗುಳಿಯಲ್ಲೂ ಸಹ ಯಾರ ಮೇಲ್ವಿಚಾರಣೆಯೂ ಇಲ್ಲದೆ, ಯಾರಿಗೂ ಅಡ್ಡಿಯಾಗದಂತೆ ತಮ್ಮ ಜಾಡನ್ನೇ ಹಿಡಿದು ಸಾಗುವುದು ಅದೆಷ್ಟೋ ಜನರ ಕಣ್ಣಿಗೆ ಆಶ್ಚರ್ಯವೇ ಸರಿ. ಸಂತೆಮಾಳ ಬಿಟ್ಟ ತಕ್ಷಣ, ಮಾವಂದಿರು ಗಾಡಿಯಿಂದ ಇಳಿದು, ರಂಗ ತಿಮ್ಮರನ್ನು ತಮ್ಮ ಪಾಡಿಗೆ ಬಿಟ್ಟು ಊರಿನ ಜನರ ಜೊತೆ ಮಾತನಾಡುತ್ತಾ ಬೇರೆ ಗಾಡಿಗಳಲ್ಲಿ ಬರುತ್ತಿದ್ದರು. ದಿನವೂ ನಾಲ್ಕೂವರೆಗಂಟೆಗೆ ಶಾಲೆ ಮುಗಿದರೂ, ಕತ್ತಲಾಗುವ ತನಕ ಗೆಳೆಯರೊಂದಿಗೆ ಆಡಿಕೊಂಡು ಮನೆ ಸೇರುತ್ತಿದ್ದ ನಾನು, ಮಂಗಳವಾರ ಸಂಜೆ ಆಟದ ನೆನಪೂ ಮಾಡಿಕೊಳ್ಳದೆ ನಮ್ಮನೆಯ ಜಗುಲಿಯ ಮೇಲೆ ಹಾಜರಿರುತ್ತಿದ್ದೆ. ನನ್ನ ಈ ಹಾಜರಿಗೆ ಕಡಲೆಪುರಿ, ಖರ್ಜೂರ, ಸಕ್ಕರೆಅಚ್ಚು, ಬೆಣ್ಣೆಬಿಸ್ಕತ್ತುಗಳು, ಬಾಳೆಹಣ್ಣು ಇರುವ ಚೀಲ ಮುಖ್ಯ ಕಾರಣವಾಗಿದ್ದರೂ, ರಂಗ ತಿಮ್ಮರು ಹದಿನೈದು ಕಿಲೋಮೀಟರು ದೂರದ ಪೇಟೆಯ ಸಂತೆಗೆ ಮಸುಕಿನಲ್ಲಿ ಗಾಡಿಯ ಹೊರೆ ಎಳೆದು ಹೋಗಿ ಮತ್ತೆ ಗೋಧೂಳಿಯ ಹೊತ್ತಿಗೆ ಗಾಡಿಯನ್ನು ಮನೆ ಬಾಗಿಲು ಮುಂದೆ ತಂದು ನಿಲ್ಲಿಸಿ ಬಾಲ ಅಲ್ಲಾಡಿಸುವ ಅವುಗಳ ಹುರುಪು ನೋಡುವುದೇ ಒಂದು ಖುಷಿ. ಸಂತೆಗೆ ಗಾಡಿ ಹೋಗದಿದ್ದ ವಾರವೂ ಸಹ ನಾನು ರಂಗ ತಿಮ್ಮರ ಬರುವಿಕೆಗಾಗಿ ಕಾದಿದ್ದಿದೆ… ರಂಗತಿಮ್ಮರು ಪೇಟೆಯ ರಸ್ತೆಯಿಂದ ಬರದೇ, ಹಿತ್ತಿಲಿನಿಂದ ತಾತ ಹಿಡಿದುಕೊಂಡು ಬರುತ್ತಿದ್ದರೆ, ಗಾಡಿ ನಿಲ್ಲಿಸುತ್ತಿದ್ದ ಮಾಡಿನ ಹತ್ತಿರ ಹೋಗಿ ನೋಡುತ್ತಿದ್ದೆ. ಓಹ್! ಇವತ್ತು ಸಂತೆಗೆ ರಜಾ ಅಂತ ಬೇಸರವಾಗುತ್ತಿತ್ತು. ರಂಗ ತಿಮ್ಮ ಇಬ್ಬರೂ ನಮ್ಮ ಮನೆಯವರ, ಅದರಲ್ಲೂ ತಾತನ ಧ್ವನಿಯನ್ನು ಸಂತೆಯ ಗದ್ದಲದ ಒಳಗೂ ಗುರುತಿಸುತ್ತಿದ್ದವು.  ಇನ್ನು ನಾನು ಹುಟ್ಟಿಬೆಳೆದ ಮನೆಯನ್ನು ನಾನು ಹುಟ್ಟುವುದಕ್ಕಿಂತ ಒಂದೆರಡು ವರ್ಷಗಳ ಮೊದಲು ಕಟ್ಟಿದ್ದು.  ಆ ಮನೆಕಟ್ಟಲು ಮಣ್ಣು ಹೊತ್ತಿದ್ದು, ನೀರು ಹೇರಿ ತಂದಿದ್ದು,  ಮರಮಟ್ಟು ಸಾಗಿಸಿದ್ದು, ಪೇಟೆಯಿಂದ ಹೆಂಚು ಸಾಗಿಸಿದ್ದು ಈ ರಂಗ ತಿಮ್ಮರೇ. ಮಂಗಳೂರು ಹೆಂಚಿನ ನನ್ನ ತಾತನ ಹೊಸಮನೆಯ ಗೋಡೆ ಹೆಂಚುಗಳಿಗೆ ರಂಗ ತಿಮ್ಮರ ದುಡಿಮೆ ಸದಾ ಅಂಟಿಕೊಂಡಿದೆ. ನಾನು ರಂಗ ತಿಮ್ಮರನ್ನು ನೋಡಿದ ಅಷ್ಟೂ ದಿನಗಳಲ್ಲಿ ಕೆಲಸ ಮಾಡಿ ಅವುಗಳು ಬಳಲಿರುವ ದಿನಗಳೇ ಇರಲಿಲ್ಲ. ದುಡಿಮೆ ಅಂದರೆ ಅವುಗಳಿಗೆ ಉಸಿರಾಡುವಷ್ಟು, ಮೇವುತಿನ್ನುವಷ್ಟು ಸಲೀಸು. ಮುಂಗಾರಿನ ಬಿರುಸಾದ ಅಡ್ಡಮಳೆಯಿಂದ ಹಿಡಿದು ಭಾದ್ರಪದದ ಸೋನೆಮಳೆಯೂ ರಂಗ ತಿಮ್ಮರನ್ನು ನೆನೆಯಿಸುತ್ತಿರಲಿಲ್ಲ. ಬೇಸಿಗೆಯ ಜಳಜಳ ಬಿಸಿಲು ಅವುಗಳನ್ನು ಎಂದೂ ಒಣಗಿಸಿರಲಿಲ್ಲ. ಹತ್ತಾರು ಎಕರೆ ಹೊಲ, ಗದ್ದೆ ತೋಟಗಳನ್ನು ಉಳುಮೆ ಮಾಡಿ ಹದಗೊಳಿಸಿದವು ಅವು. ಅವುಗಳ ಹುರುಪಿನ ದುಡಿಮೆಗೆ ತಕ್ಕಂತೆ ಬಂದ ಫಸಲನ್ನು ಅಷ್ಟೇ ಶ್ರಮದಿಂದ ಕಣಕ್ಕೆ ಸಾಗಿಸುತ್ತಿದ್ದವು. ಅದೇ ಪಸಲನ್ನು ವಾರಕ್ಕೊಮ್ಮೆ ಸರದಿಯಲ್ಲಿ ಪೇಟೆಗೆ ಹೊತ್ತು, ಸಂತೆಯನ್ನೂ ಸುತ್ತಿ ಮನೆಗೆ ಉಪ್ಪು, ಎಣ್ಣೆಯಾದಿಯಾಗಿ ದಿನಸಿಯನ್ನು ಸಾಗಿಸುತ್ತಿದ್ದವು. ನನ್ನ ಇಡೀ ಬಾಲ್ಯ ಅವುಗಳ ಮುಂದೆ ಕಳೆಯಿತು… ಅವುಗಳು ಬೆಳೆಯುತ್ತಿದ್ದ ಕರುಗಳಾಗಿದ್ದಾಗಿನ ದಿನಗಳ ತುಂಟಾಟದ ಸಂದರ್ಭಗಳನ್ನೂ ತಾತ, ಅಕ್ಕಪಕ್ಕದ ಮನೆಯವರು, ಮತ್ತು ಊರಿನವರೂ ಹೇಳುತ್ತಿರುತ್ತಿದ್ದರು. ರಂಗ ಹುಟ್ಟಿದಾಗಿನಿಂದ ಕಡೆಯವರೆಗೂ ಮನೆಯವನಂತೆಯೇ ಆಗಿತ್ತು. ತಿಮ್ಮ ಬೇರೆಮನೆಯಲ್ಲಿ ಹುಟ್ಟಿ ನಂತರ ರಂಗನ ಜೊತೆಯಾದರೂ ರಂಗನಷ್ಟೇ ಮನೆಯ ಸ್ವಂತದವನಂತೆ ಇತ್ತು. ಅವುಗಳ ಆಯಸ್ಸೇ ಕಡಿಮೆ… ಇಪ್ಪತ್ತು ವರ್ಷ. ಅವು ಇದ್ದ ಅಷ್ಟೂ ದಿನಗಳಲ್ಲಿ ಅವುಗಳಿಗೆ ಬದುಕಲು ಬೇಕಾಗಿದ್ದು, ಮುಂಗಾರಿನಲ್ಲಿ ಹೊಲದ ಬದುವಿನ ಹಸಿರು ಹುಲ್ಲು, ಬೇಸಿಗೆಯಲ್ಲಿ ಬಣವೆಯಲ್ಲಿನ ಒಣಹುಲ್ಲು ಜೊತೆಗೆ ದಿನದ ಮೂರು ಹೊತ್ತು ಕೆರೆಯ ನೀರು ಅಥವಾ ಕಲಗಚ್ಚು. ಗದ್ದೆನಾಟಿಯ ಸಮಯದಲ್ಲಿ ಕಡಲೆಹಿಂಡಿ, ಬೇಯಿಸಿದ ಹುರುಳಿ. ಅದೇ ಅವುಗಳಿಗೆ ಮೃಷ್ಟಾನ್ನ. ನಾನು ಬೆಳೆಯುತ್ತಿರುವಂತೇ ರಂಗ ತಿಮ್ಮರಿಗೆ ಮುದಿತನ ಆವರಿಸುತ್ತಿತ್ತು. ಇನ್ನು ಇವುಗಳಿಂದ ಕೆಲಸ ಆಗುವುದಿಲ್ಲ ಮಾರಿಬಿಡುವುದು ಒಳ್ಳೆಯದು ಎಂದು ಕೆಲವರ ಅಭಿಪ್ರಾಯ… ಅಷ್ಟು ಸಾಲದು ಅಂತ ತಿಮ್ಮ ಮನೆಯಲ್ಲೇ ಒಬ್ಬರ ಕೆಂಗಣ್ಣಿಗೆ ಗುರಿಯಾದ. ಅದೇನು ಕೇಳಿಸಿತೋ, ಯಾವುದಕ್ಕೆ ಗಾಬರಿಯೋ, ಬದುವಿನಲ್ಲಿ ಮೇಯುವಾಗ, ಇದ್ದಕ್ಕಿದ್ದಂತೆ ಹರಿಹಾಯ್ದಿತೆನ್ನುವ ಒಂದು ಕಾರಣ. ತಿಮ್ಮನಿಗೆ ವಯಸ್ಸಾಗುತ್ತಿದ್ದರೂ ತನ್ನ ಸ್ವಭಾವ ಬದಲಾಗಿರಲಿಲ್ಲ.  ಆದರೂ ಮಾರಲು ಒಂದೋ ಅಥವಾ ಎರಡೋ ಪ್ರಯತ್ನ ನಡೆಸಿದ ತಾತ ಮಾರಲು ಮನಸ್ಸು ಮಾಡದೇ ಸೋತು ಸುಮ್ಮನಿದ್ದರು. ಅವತ್ತೊಂದು ದಿನ, ಅದು ಯಾವ ದಿನ ಎನ್ನುವುದು ನೆನಪಿಲ್ಲ.  ರಂಗನಿಗೆ ಒಂದೆರಡು ದಿನದಿಂದ ಹುಷಾರಿರಲಿಲ್ಲ.  ವಯಸ್ಸಾಗಿದೆಯಲ್ಲ, ಅದಕ್ಕೇ ಹಾಗಾಗಿದೆ,  ಸರಿಹೋಗುತ್ತೆ ಅಂತಲೋ ಏನೋ, ಮದ್ದು ಏನೂ ಕೊಟ್ಟಿರಲಿಲ್ಲ. ಎಂದಿನಂತೆ ಕೊಟ್ಟಿಗೆಯಿಂದ ಮನೆ ಮುಂಭಾಗಕ್ಕೆ ತಂದು ಬಳಪದ ಕಲ್ಲಿಗೆ ಕಟ್ಟಿದ್ದರು. ನಾನು ಶಾಲೆಗೆ ಹೊರಡುವಾಗ ರಂಗ ಮಲಗಿದ್ದಂತೆ ನೆನಪು. ಮಧ್ಯಾಹ್ನ ಊಟಕ್ಕೆ ಮನೆಗೆ ಬರಬೇಕಾಗಿದ್ದರೂ, ನಾನು ಅಪರೂಪಕ್ಕೆ ಮನೆಗೆ ಮಧ್ಯಾಹ್ನದ ಊಟಕ್ಕೆ ಬರುತ್ತಿದ್ದುದು. ಮಿಕ್ಕಂತೆಲ್ಲಾ ಬೆಳಿಗ್ಗೆ ರೊಟ್ಟಿ ತಿನ್ನುವಾಗಲೇ ಒಂದಿಷ್ಟು ಮಿಕ್ಕಿಸಿ ಪುಸ್ತಕದ ಮಧ್ಯೆ ಇಟ್ಟು ಓಡುತ್ತಿದ್ದೆ. ಊಟದ ಬಿಡುವಿನಲ್ಲಿ ಕಳ್ಳಾ-ಪೊಲೀಸು, ಲಗೋರಿ, ಗದ್ದೆಕೊಯ್ಲಿನ ಸಮಯವಾದರೆ ಶಾಲೆಯ ಪಕ್ಕದ ಕಣಗಳಲ್ಲಿ ಇರುತ್ತಿದ್ದ ಬಣವೆಗಳ ನಡುವೆ ಕಣ್ಣಾಮುಚ್ಚಾಲೆ ಹೀಗೆ ತರಹೇವಾರಿ ಆಟಗಳು. ಮಧ್ಯಾಹ್ನದ ಶಾಲೆ ಮುಗಿದು ನಾಲ್ಕೂವರೆ ನಂತರದಿಂದ ಕತ್ತಲಾಗುವ ತನಕ ಮತ್ತೆ ಆಟ. ಅವತ್ತೂ ಹಾಗೇ ಮಾಡಿದ್ದೆ. ಶಾಲೆ ಬಿಟ್ಟ ನಂತರ ಮಾಮೂಲಿನಂತೆ ನನ್ನ ಆಟ…  ಆಮೇಲೆ ಮನೆಗೆ ಬಂದೆ. ಕತ್ತಲಾಗಿತ್ತು. ಮನೆಯವರೆಲ್ಲರೂ ಒಂದು ರೀತಿ ಮೌನವಾಗಿದ್ದರು… ಎಂದಿನ ಲವಲವಿಕೆಯಿಲ್ಲ. ಅಮ್ಮ (ಅಜ್ಜಿ) ಊಟ ಮಾಡಲು ಕೂರದೇ ಏನೋ ಗೊಣಗುತ್ತಿದ್ದರಿಂದ, ಈ ಬಣಗುಡುವ ರಾತ್ರಿಗೆ ಕಾರಣವೇನಿರಬಹುದು ಅಂತ ಅಮ್ಮನನ್ನೇ ದಿಟ್ಟಿಸಿದೆ. “ಅಷ್ಟೊರ್ಷ  ಕಲ್ಲುಬಂಡೆಯಂಗಿದ್ದ ಎತ್ತಿಗೆ ಮೂರೇ ದಿನಕ್ಕೆ ಹಿಂಗಾಯ್ತಲ್ಲ. ಏನೋ, ಅತ್ಲಾಗಿ ಕೊರಗದಂತೆ ಜೀವ ಹೋಯ್ತು” ಅಂದರು.  ಆಗ ಅಡುಗೆಮನೆಯಿಂದ ಕೊಟ್ಟಿಗೆಗೆ ಒಂದು ಸಣ್ಣ ಕಿಟಕಿಯಿತ್ತು.  ನಾನಿನ್ನೂ ಅದನ್ನು ಇಣುಕುವಷ್ಟು ಎತ್ತರ ಬೆಳೆದಿರಲಿಲ್ಲ. ಅಲ್ಲೇ ಇದ್ದ ಸ್ಟೂಲ್ ಎಳೆದು ಅಂತೂ ಇಣುಕಿಯೇಬಿಟ್ಟೆ.  ತಿಮ್ಮ ಒಂದೇ ನಿಂತಿತ್ತು.  ಅದುವರೆಗೆ ಹುಷಾರಿಲ್ಲದಿದ್ದರೂ ಸಹ ಕೊಟ್ಟಿಗೆಯಲ್ಲೇ ಪಕ್ಕದಲ್ಲಿರುತ್ತಿದ್ದ ರಂಗ ಇರಲಿಲ್ಲ. ಜಾಗ ಅಗಲವಾಗಿದ್ದರಿಂದ ತಿಮ್ಮ ಹಿಂದಿನ ಕಾಲನ್ನು ಅತ್ತಿಂದಿತ್ತ ಅಡ್ಡ ಎಸೆಯುತ್ತಾ, ತೆರವು ಮಾಡಿದ್ದ ರಂಗನ ಜಾಗವನ್ನು ಕಾಯ್ದಿರಿಸುವವನಂತೆ ಕಾಣುತ್ತಿತ್ತು. ಮನೆಯವರ ಮೌನದೊಳಗೆ ನಾನೂ ಮುಳುಗಿಹೋದೆ. ನೆಪಕ್ಕೆ ಅನ್ನುವಂತೆ ಊಟಮಾಡಿ ದೀಪ ಆರಿಸಿದೆವು. ಬೆಳಗಾಗುತ್ತಲೇ ಹೊರಗೆ ಹೋಗಿ ಗಮನಿಸಿದೆ.  ಹಿಂದಿನ ದಿನ ರಂಗನನ್ನು ಕಟ್ಟಿದ್ದ ಬಳಪದಕಲ್ಲಿನ ಪಕ್ಕ ಒಂದಿಷ್ಟು ಕುಂಕುಮ, ಕೆಲವು ಅಗರಬತ್ತಿ ತುಂಡುಗಳು, ಹಿತ್ತಲಿನ ಹೂವಿನ ಗಿಡದ ಒಂದಿಷ್ಟು ಬಾಡಿದ ಹೂವುಗಳು. ಇದಾದ ಒಂದು ವಾರದಷ್ಟು ಸಮಯದಲ್ಲಿ ತಿಮ್ಮನ ಒಂಟಿತನ ತಾತನ ಗಮನಕ್ಕೆ ಬಂತು. ನೋಡಕಾಗಲ್ಲ ಮಾರಿಬಿಡು ಅತ್ಲಾಗಿ ಅಂತ ಬೇಸರದಿಂದಲೇ ಹೇಳಿ ಸಂತೆಗೆ ಒಂಟಿತಿಮ್ಮನನ್ನು ಹೊರೆಯನ್ನೇನೂ ಹೊರಿಸದೇ ಕರೆದೊಯ್ದಿದ್ದರು. ಈಗ ಅವುಗಳು ಇಲ್ಲವಾಗಿ ಇಪ್ಪತ್ತು ವರ್ಷಗಳೇ ಕಳೆದಿವೆ. ಇದರ ನಡುವೆ ಜೀವನಚಕ್ರ ಎಷ್ಟೋ ದೂರ ಉರುಳಿದೆ. ತಾತನ ಮನೆಯಲ್ಲಿ ನಾನೇ ಮೊದಲ ಮೊಮ್ಮಗ.  ಅದು ಅಕ್ಕನ(ತಾಯಿ) ತವರಾಗಿದ್ದರೂ, ನಾನು ಅಪ್ಪನ ಮನೆಯನ್ನು ಅಪ್ಪನ ಮನೆ ಎಂದಷ್ಟೇ ನೆನಪಿಸಿಕೊಳ್ಳುವೆನೇ ವಿನಃ, ಬಾಲ್ಯದ ನನ್ನ ಮನೆ ಅಂದರೆ ಈ ರಂಗ ತಿಮ್ಮರ  ಹೆಜ್ಜೆಯ, ಕೊರಳಿನ ಗೆಜ್ಜೆಯ ಸದ್ದು ಇದ್ದ ಮನೆಯೇ. ಅಲ್ಲಿ ಇದ್ದಷ್ಟೂ ದಿನ ಜೀವನದ ಬಿಸಿಲೇ ತಾಕಿರಲಿಲ್ಲ. ರಂಗ ತಿಮ್ಮರಿರುವ ಅಷ್ಟೂ ದಿನ ಮನೆಯಲ್ಲಿ ಸಮೃದ್ಧಿಯಿತ್ತು. ಹೊಸ ಮನೆಯೂ ಆಗಿತ್ತು. ಸುತ್ತಲವರು ಮೆಚ್ಚುವಷ್ಟು ಬೆಳೆಯೂ ಬರುತ್ತಿತ್ತು. ಮನೆಗೆ ಹೋಗಿಬರುವವರು, ನೆಂಟರಿಷ್ಟರು ಅದೆಷ್ಟೋ. ಹಬ್ಬದ ದಿನಗಳು ನಿಜವಾಗಿಯೂ ವಿಶೇಷವಾಗಿರುತ್ತಿದ್ದವು. ಇದೆಲ್ಲದರ ಹಿಂದೆ ಮನೆಯ ಸದಸ್ಯರ ಶ್ರಮ ಇದ್ದರೂ, ಅದಕ್ಕೆ ರಂಗ ತಿಮ್ಮನ ಪಾತ್ರವನ್ನು ಅಳೆಯುವುದಕ್ಕೆ ಸೇರು ಬಳ್ಳಗಳಿಂದಾಗಲಿ, ಮಾರು ಮೊಳಗಳಿಂದಾಗಲಿ, ಮೀಟರು ಕಡ್ಡಿಗಳಿಂದಾಗಲೀ ಸಾಧ್ಯವಿರಲಿಲ್ಲ.  ರಂಗ ತಿಮ್ಮರ ಕತೆ ಹದಿನೈದು-ಹದಿನೆಂಟು ವರ್ಷಗಳಲ್ಲಿ ನಡೆದ ಒಂದು ಮಿನಿ ಮಹಾಭಾರತವೇ ಹೌದು! ರಂಗ ತಿಮ್ಮರಿದ್ದ ಆ ನನ್ನ ಮನೆ ಸಣ್ಣದೊಂದು ನಂದನವನದಂತೆ ಇತ್ತು. ಡಿವಿಜಿ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದಾರಲ್ಲ, ‘ಬೆಳಕೀವ ಸೂರ್ಯಚಂದ್ರರದೊಂದೂ ಸದ್ದಿಲ್ಲ’ ಎನ್ನುವಂತೆ  ರಂಗ ತಿಮ್ಮ ಇಬ್ಬರೂ ತಮ್ಮ ಸ್ನಾಯುಶಕ್ತಿಯ ಶ್ರಮದಿಂದಲೇ ಮನೆಗೆ ಬೆಳಕನಿತ್ತು, ಸದ್ದಿಲ್ಲದೇ ಸರಿದುಹೋದರು. ಈಗ ಇವುಗಳ ನೆನಪು ಬಾಯಾರಿದ ಗಂಟಲಿಗೆ ಸಿಹಿನೀರಿದ್ದಂತೆ! ನಾನು ಕಲಾವಿದನಾಗಿದ್ದರೆ, ಮೊನ್ನೆಯ ಕನಸಿನಲ್ಲಿ ದುರುಗುಟ್ಟು ನೋಡುತ್ತಿದ್ದ ತಿಮ್ಮನ ಆ ಕಣ್ಣುಗಳನ್ನು ಅಚ್ಚುಒತ್ತಿದ ಹಾಗೆ ಬಿಡಿಸಿರುತ್ತಿದ್ದೆ! ******

ಹೊತ್ತಾರೆ Read Post »

ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು ಡಾ.ಸಣ್ಣರಾಮ ಹಿಂದಿನ ಸಂಚಿಕೆಯಿಂದ——— ಇಂದಿನ ಆಧುನಿಕ ಮಹಿಳಾವಾದಿಗಳು ಹೆಣ್ಣು ತನ್ನ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿದರೆ ಪುರುಷ ದೌರ್ಜನ್ಯದಿಂದ ಪೂರ್ಣ ವಿಮುಕ್ತಿ ಪಡೆಯಬಹುದು ಎಂದು ಹೇಳುತ್ತಾರೆ. ಈ ತತ್ವವನ್ನು 12ನೇ ಶತಮಾನದಷ್ಟು ಹಿಂದೆ ಅಕ್ಕ ಹೇಳಿದ್ದಾಳೆ ಎಂಬುವುದನ್ನು ಮಹಿಳಾವಾದಿಗಳು ಗಮನಿಸಬೇಕು. ಅಕ್ಕನ ಬದುಕೆ ಇಂದಿನ ಮಹಿಳಾವಾದಕ್ಕೆ ಮೂಲ ಪ್ರೇರಣೆಯಾಗಬಲ್ಲದು. ಕದಳಿ ಎಂಬುದು ವಿಷಂಗಳು ಕದಳಿ ಎಂಬುದು ಭವ ಘೋರಾರಣ್ಯ ಈ ಕದಳಿ ಎಂಬುದು ಗೆದ್ದು ತಾವೆ ಬದುಕಿ ಬಂದು ಕದಳಿ ಬನದಲ್ಲಿ ಭವಹರನ ಕಂಡೆನು ಭವಗೆದ್ದು ಬಂದ ಮಗಳೆ ಎಂದು ಕರುಣದಿ ತೆಗೆದು ಬಿಗಿದಪ್ಪಿದಡೆ ಚನ್ನಮಲ್ಲಿಕಾರ್ಜುನನ ಹೃದಯ ಕಮಲದಲ್ಲಿ ಅಡಗಿದೆನು- ಈ ವಚನ ಅಕ್ಕನ ಪ್ರೌಢಮೆಗೆ, ಪ್ರಬುದ್ಧ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ. ಕೆದಕಿದಷ್ಟು ಅರ್ಥವನ್ನು ಹಿಡಿ ಹಿಡಿಯಾಗಿ ಸಹೃದಯರಿಗೆ ಉಣಬಡಿಸುತ್ತದೆ. “ಕದಳಿ” ಎಂಬ ಪದವನ್ನು ಎಷ್ಟು ಅರ್ಥದಲ್ಲಿ ಬಳಸಿದ್ದಾಳೆಂಬುದು ಗ್ರಹಿಕೆಗೆ ಸಿಕ್ಕರೆ ಭಾಷಾ ಪಂಡಿತರು ಬೆಕ್ಕಸ ಬೆರಗಾಗುತ್ತಾರೆ. ತನು, ಮನ, ಸಂಸಾರ, ಲೌಕಿಕ ಬದುಕು ಮೃದುಭಾವ ಮೊದಲಾದ ಅರ್ಥದಲ್ಲಿ ಕದಳಿ ಎಂಬ ಪದ ಬಳಕೆಯಾಗಿದೆ. ಈ ಸಂಸಾರವೆಂಬ ಘೋರ ಅರಣ್ಯವನ್ನು ಜಯಿಸಲು “ಕದಳಿ” ತನುಬೇಕು. ತನುವಿಲ್ಲದೆ ಪೂರ್ಣ ತತ್ವ ಲಭಿಸುವುದಿಲ್ಲ. ಕದಳಿ ತನುವಿನಿಂದ ಪೂರ್ಣ ತತ್ವವನ್ನು ಇಹದಲ್ಲಿ ಸಾಧಿಸಿದವರು ಪರದಲ್ಲಿ ಪೂರ್ಣವನ್ನು ಪಡೆಯುತ್ತಾರೆ. ಪೂರ್ಣದಲ್ಲಿ ಪೂರ್ಣವು ಸೇರಿದರೆ ಉಳಿಯುವುದು ಬಯಲು. ಈ ಬಗೆಯ ಅದ್ಭುತ ತತ್ವವನ್ನು ಸರಳ ಪದಗಳಲ್ಲಿ ನಿರ್ವಚಿಸಿರುವ ರೀತಿ ಅಪೂರ್ವವಾದುದು. ಪ್ರಾಚೀನ ಕಾಲದಲ್ಲಿಯೂ ಭಾರತದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನ ಮಾನ್ಯತೆಯನ್ನು ಪಡೆದಿದ್ದರೆಂಬುದಕ್ಕೆ ನಿಕತ್ತಾ, ಸಾಸ್ವತಿ, ಮೈತ್ರೇಯಿ, ಗಾರ್ಗಿ, ಅಪಲಾ, ಯಯಾಂತ ಇವರು ನಿದರ್ಶನರಾಗಿದ್ದಾರೆ. ಶರಣೆ ಅಕ್ಕಮಹಾದೇವಿ ಕನ್ನಡದ ಮೊದಲ ಮಹಿಳಾವಾದಿಯಂತೆ ಮೊದಲ ಕವಿಯಿತ್ರಿಯೂ ಹೌದು. ಹತ್ತನೆ ಶತಮಾನದಲ್ಲಿ ಕೆಲವು ಸಾಲುಗಳ ಬರವಣಿಗೆ ಇದೆ ಎಂದು ಹೇಳಲಾಗುತ್ತಿರುವ “ಕಂತಿ” ಎಂಬುವಳನ್ನು ಹೊರತು ಪಡಿಸಿದರೆ 354 ವಚನಗಳನ್ನು “ಯೋಗಾಂಗ ತ್ರಿವಿಧಿ”, “ಸೃಷ್ಟಿಯ ವಚನ”, “ಮಂತ್ರ ಗೋಪ್ಯ” ಎಂಬ ಕೃತಿಗಳನ್ನು ರಚಿಸಿದ ಮಹಾದೇವಿ ಅಕ್ಕ ಬರೆದಿದ್ದಾಳೆ. ಅಕ್ಕನ ವಚನಗಳಲ್ಲಿ ತತ್ವವಿದೆ, ಸತ್ವವಿದೆ, ವೇದನೆಯಿದೆ. ಕನ್ನಡ ಸಾರಸ್ವತ ಲೋಕಕ್ಕೆ ಅಕ್ಕನ ಕೊಡುಗೆ ಶ್ಲಾಘನೀಯ. ಅಕ್ಕಮಹಾದೇವಿಯ ವಚನದ ಮಹೋನ್ನತಿಯನ್ನು ಕುರಿತಂತೆ ಚನ್ನಬಸವಣ್ಣನವರು ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ ಅಜಗಣ್ಣನ ಐದು ವಚನಕ್ಕೆ ಕೂಡಲ ಚನ್ನಸಂಗಮದೇವಾ ಮಹದೇವಿಯಕ್ಕನ ಒಂದು ವಚನ ನಿರ್ವಚನ-ಎಂದಿದ್ದಾನೆ. ಅಕ್ಕಮಹಾದೇವಿಯ ವಚನ, ಅನುಭವ ಸಂಪತ್ತು ಅಷ್ಟು ಘನವಾಗಿತ್ತು. ಎಲ್ಲಾ ಆದ್ಯರ, ಹಿರಿಯರ ವಚನಗಳ ಸತ್ವವನ್ನು ಮೀರಿ ನಿಲ್ಲಬಲ್ಲವಾಗಿದ್ದಾವೆ ಎಂದು ಸಾಕ್ಷಿಕರಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಸತ್ಯಕ್ಕ: ಶರಣರ ಕ್ರಾಂತಿಗೆ ಶಕ್ತಿ ತುಂಬಿದ, ಅಲ್ಲಮ ಪ್ರಭುದೇವ ಮತ್ತು ಅಕ್ಕಮಹಾದೇವಿಯು ಶಿವಮೊಗ್ಗ ಜಿಲ್ಲೆಯವರೇ ಆಗಿದ್ದಾರೆ. ಜಿಲ್ಲೆಯ ಕೀರ್ತಿಯ ಕಿಡಿಯನ್ನು ಇಲ್ಲಿಂದಲೇ ಗುರುತಿಸಬಹುದಾಗಿದೆ. ಇವರೊಂದಿಗೆ ಶರಣೆ ಸತ್ಯಕ್ಕ ಸಹ ಶಿವಮೊಗ್ಗ ಜಿಲ್ಲೆಯ ಶರಣ ಚಳುವಳಿಯ ಕ್ರಾಂತಿಯ ಕಿಡಿ. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಸಮೀಪದ ಹಿರೇಜಂಬೂರು ಸತ್ಯಕ್ಕಳ ಜನ್ಮಸ್ಥಳ. ಸತ್ಯಕ್ಕ ಜನಪದ ಸಾಹಿತ್ಯದಲ್ಲಿ ಪ್ರವೀಣೆಯಾಗಿ ವಚನಗಾರ್ತಿಯು ಆಗಿದ್ದಳು. ಇವಳ ಕಾಯಕ, ನಿಷ್ಠೆ, ಭಕ್ತಿಯ ಪರಕಾಷ್ಠೆ ಆ ಕಾಲದಲ್ಲಿ ಮನೆಮಾತಾಗಿತ್ತು. ಶಿವಭಕ್ತರ ಮನೆಯ ಅಂಗಳ ಗುಡಿಸುವ ಕಾಯಕ ಇವಳದಾಗಿತ್ತು. ಈ ಕಾಯಕದಲ್ಲಿಯೇ ದೇವರನ್ನು ಕಂಡವಳು ಶಿವ ಶರಣೆ ಸತ್ಯಕ್ಕ. ಶಿವನ್ನಲ್ಲದೆ ಅನ್ಯ ದೈವವನ್ನು ಪೂಜಿಸುವುದಿಲ್ಲ. ಶಿವನ್ನಲ್ಲದೇ ಅನ್ಯ ದೈವದ ಶಬ್ಧವನ್ನು ಕೇಳುವುದಿಲ್ಲವೆಂದು ಪ್ರತಿಜ್ಞೆ ಮಾಡಿದ ಕಟ್ಟಾ ಶಿವಭಕ್ತೆ. ಅಂತೆಯೇ ತನ್ನ ಪ್ರತಿಜ್ಞೆಯನ್ನು ಪಾಲಿಸುತ್ತಾ ಬಂದವಳು. ಒಮ್ಮೆ ಶಿವನು ವೃದ್ಧ ಭಿಕ್ಷುಕನ ರೂಪದಲ್ಲಿ ಸತ್ಯಕ್ಕನ ಶಿವನಿಷ್ಠೆಯನ್ನು ಪರೀಕ್ಷಿಸಲು ಬರುತ್ತಾನಂತೆ. ಸತ್ಯಕ್ಕ ಬಿಕ್ಷೆ ಹಾಕಿದಾಗ ಹರಿದ ಜೋಳಿಗೆಯಿಂದ ಹಾಕಿದ ಬಿಕ್ಷೆಯು ನೆಲದಲ್ಲಿ ಚೆಲ್ಲುತ್ತದೆ. ಬಿಕ್ಷುಕ ರೂಪದ ಶಿವನು “ಅಯ್ಯೋ ಹರಿದ ಹರಿಯಿಂದ ಕಾಳು ಹರಿದು ಹೋಯ್ತು” ಎಂದು ಉದ್ಗರಿಸುತ್ತಾರೆೆ. ಹರಿ ಎಂಬ ಶಬ್ಧ ಕಿವಿಗೆ ಬೀಳುತ್ತಲೇ ಸಿಟ್ಟಾದ ಸತ್ಯಕ್ಕ ಸಿಟ್ಟಾಗಿ ಕೈಯಲ್ಲಿದ್ದ ಸಟ್ಟುಗದಿಂದ ಶಿವನನ್ನೇ ಹೊಡೆದಳೆಂದು ಐತಿಹ್ಯವಿದೆ. ಅಷ್ಟರ ಮಟ್ಟಿಗೆ ಶಿವಭಕ್ತೆಯಾಗಿದ್ದಳು. ಸತ್ಯಕ್ಕನ ಒಟ್ಟು 29 ವಚನಗಳು ದೊರೆತಿವೆ. ಶಂಬುಜಕೇಶ್ವರ ಎಂಬುದು ಅವಳ ಅಂಕಿತನಾಮ. ಜಂಬೂರಿನಲ್ಲಿ ಶಂಬುಕೇಶ್ವರ ಎಂಬ ದೇವರಿದ್ದಾರೆ. ಈ ಶಂಬುಕೇಶ್ವರ ದೇವರ ನಾಮವನ್ನೆ ಸತ್ಯಕ್ಕನ ತನ್ನ ಅಂಕಿತದಲ್ಲಿಟ್ಟುಕೊಂಡಿರಬೇಕು. ಅದು ವ್ಯತ್ಯಾಸವಾಗಿ ಶಂಬುಜಕೇಶ್ವರ ಆಗಿರಬೇಕೆಂಬುದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ತಳ ಸಮುದಾಯದ ಸತ್ಯಕ್ಕನ ವಚನಗಳಲ್ಲಿ ಅಪರೂಪದ ತತ್ವಗಳು ತುಂಬಿವೆ. ಸತಿ-ಪತಿಭಾವ, ಸಮರ್ಪಣಭಾವ, ಶಿವನಿಷ್ಠೆಗಳು ಸರಳವಾದ ಭಾಷೆಯಲ್ಲಿ ಮೈದುಂಬಿ ನಿಂತಿವೆ. ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಾಮಾಣಿಸಲಿಲ್ಲ ಕಾಸೆ ಮಿಸೆ ಕಠಾರವಿದ್ದುದೆ ಗಂಡೆAದು ಪ್ರಮಾಣಿಸಲಿಲ್ಲ ಅದು ಜಗದ ಹಾಹೆ: ಬಲ್ಲವರ ನೀತಿಯಲ್ಲ ಏತರ ಹೆಣ್ಣಾದಡೂ ಮಧುರವೆ ಕಾರಣ ಅಂದವಿಲ್ಲದ ಕುಸುಮಕ್ಕೆ ವಾಸನೆ ಕಾರಣ ಇದರಂದವ ನೀನೇ ಬಲ್ಲೆ ಶಂಭಜಕ್ಕೇಶ್ವರಾ ಸತ್ಯಕ್ಕ ಹಲವಾರು ವಚನಗಳಲ್ಲಿ ಪುರುಷ ಪ್ರಾಧ್ಯಾನತೆಯನ್ನು ದಿಕ್ಕರಿಸಿದ್ದಾಳೆ. ಅನುಭಾವಕ್ಕೆ ಲಿಂಗ ಭೇದವಿಲ್ಲ ಎಂದು ಸಾರಿದ್ದಾಳೆ. ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದಿದ್ದಾಳೆ. ಶಿವಶರಣರ ಕ್ರಾಂತಿಯಲ್ಲಿ ಪಾಲ್ಗೊಂಡು ಅದರ ದನಿಯಲ್ಲಿ ಗಟ್ಟಿದನಿಯನ್ನು ಹೊರಡಿಸಿದ ಶಿವಮೊಗ್ಗದ ಶರಣರು ತಮ್ಮದೇ ಅನನ್ಯತೆಯನ್ನು ಮೆರೆದಿದ್ದಾರೆ. ಶಿವಮೊಗ್ಗ ಕ್ರಾಂತಿಯ ನಾಡೆಂಬುದನ್ನು ಆ ಕಾಲಕ್ಕೆ ತೋರಿದ ಕೀರ್ತಿ ಈ ಶಿವಶರಣ-ಶರಣೆಯರಿಗೆ ಸಲ್ಲುತ್ತದೆ. ಮುಂದುವರೆಯುತ್ತದೆ…

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಏಕತೆ ಸಾರುವ ಹುಸೇನ್-ಷಾವಲಿ ತಾತಯ್ಯ…! ಕೆ.ಶಿವು.ಲಕ್ಕಣ್ಣವರ `ಸರ್ವಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ’ ಎಂಬುದು ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯಲ್ಲಿನ ಒಂದು ಸಾಲು. ಇಂತಹ ಸೌಹಾರ್ದ ಪರಂಪರೆಗೆ ಸಾಕ್ಷಿ ಎಂಬಂತೆ ಬಾಗೇಪಲ್ಲಿಯಲ್ಲಿ ದರ್ಗಾ-ಕರಗ, ಮಂದಿರ, ಮಸೀದಿ, ಗುಡಿ, ಚರ್ಚ್ ಎಲ್ಲವೂ ಇಲ್ಲೇ ಇವೆ. ಈ ನೆಲದಲ್ಲಿ ಸೌಹಾರ್ದ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಹಜರತ್ ಸೈಯ್ಯದನಾ ಶೇಕ್ ಹುಸೇನ್ ಷಾ ಖಾದ್ರಿ ಅವರ ಕೊಡುಗೆ ಸಾಕಷ್ಟಿದೆ… ಹಿಂದು-ಮುಸ್ಲಿಂರು ತಮ್ಮ ಗುರು ಮತ್ತು ಮಾರ್ಗದರ್ಶಕರೆಂದೇ ಅವರನ್ನು ಕಾಣುತ್ತಾರೆ. ಅದೇ ಕಾರಣಕ್ಕೆ ಮುಸ್ಲಿಂರ ಪಾಲಿಗೆ ಅವರು ಹುಸೇನ್ ಶಾವಲಿಯಾದರೆ, ಹಿಂದುಗಳಿಗೆ ಅವರು ಪ್ರೀತಿಯ ತಾತಯ್ಯ. ದಾಸರಿಂದ ಹುಸೇನ್ ದಾಸ ಎಂದೂ ಅವರು ಕರೆಸಿಕೊಂಡಿದ್ದಾರೆ. ಸೌಹಾರ್ದ ಮತ್ತು ಸಹಬಾಳ್ವೆಗೆ ಸಾಕ್ಷಿಯಾಗಿದ್ದಾರೆ ಅವರು… 1963ರ ದಿನಗಳಲ್ಲಿ ಜವಳಿ ಉದ್ಯಮಿಯಾಗಿದ್ದ ಹಜರತ್ ಸೈಯ್ಯದನಾ ಶೇಕ್ ಹುಸೇನ್ ಷಾ ಖಾದ್ರಿ ಅವರು ಸಂತರಾದದ್ದು ಆಕಸ್ಮಿಕ ಪವಾಡವೇನಲ್ಲ. ಅವರು ಜನರಿಗೆ ಏನನ್ನೂ ಬೋಧನೆ ಮಾಡಲಿಲ್ಲ. ತತ್ವ ಪದಗಳನ್ನು ಹೇಳಲಿಲ್ಲ. ಆದರೆ ಅವರ ಇಡೀ ಬದುಕೇ ಲೌಕಿಕ ಸತ್ಯಗಳನ್ನು ಹೇಳುವ ವಿಶ್ವವಿದ್ಯಾಲಯವಾಯಿತು… ಶ್ರೀಮಂತರಾಗಿದ್ದ ಅವರು ಪ್ರತಿ ದಿನ ಹೊಸ ಬಟ್ಟೆ ಧರಿಸುತ್ತಿದ್ದರು. ಯಾವುದೇ ಕೊರತೆ ಅವರಿಗೆ ಇರಲಿಲ್ಲ. ಆದರೆ ಧರ್ಮಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿ, ಕೊನೆಯುಸಿರೆಳೆದಾಗ ಅವರಲ್ಲಿ ವೈರಾಗ್ಯ ಮೂಡಿತು. ಅತ್ತ ಹಾಲು ಕುಡಿಯುವ ಮಗು ಮತ್ತು ಇತ್ತ ವ್ಯಾಪಾರ- ವಹಿವಾಟು ತ್ಯಜಿಸಿ ದೈವ ಸಾಕ್ಷಾತ್ಕಾರದ ಮಾರ್ಗದಲ್ಲಿ ಬೆಳೆದು ನಿಂತವರು ಸಂತ ಹುಸೇನ್ ಷಾವಲಿ ತಾತಯ್ಯ..! ಹೆಗಲ ಮೇಲೆ ಕಂಬಳಿ ಹಾಕಿಕೊಂಡು, ಸೊಂಟಕ್ಕೆ ತುಂಡು ಬಟ್ಟೆ ಧರಿಸಿಕೊಂಡು, ಕಾಡು-ಮೇಡು ಅಲೆಯಲು ಆರಂಭಿಸಿದರು. ಪ್ರತಿ ನಿತ್ಯ ಸ್ವಾದಿಷ್ಟ ತಿನಿಸುಗಳನ್ನು ತಿನ್ನುತ್ತಿದ್ದವರು ಭಿಕ್ಷಾಪಾತ್ರೆಯನ್ನು ಹಿಡಿದು ಮನೆಗಳ ಮುಂದೆ ಭಿಕ್ಷೆ ಕೇಳತೊಡಗಿದರು. ಅಲ್ಲಿಗೆ ಅವರು ಸಂಪೂರ್ಣವಾಗಿ ಬದಲಾದರು. ಮೊದ ಮೊದಲು ಅವರನ್ನು ಹುಚ್ಚ, ಧರ್ಮ ವಿರೋಧಿ ಎಂದು ಮಸೀದಿಯಿಂದ ಜನರೇ ಹೊರ ನೂಕಿದರು. ಆದರೆ ನಂತರದ ದಿನಗಳಲ್ಲಿ ಅವರ ತತ್ವ, ಆದರ್ಶಗಳ ಪ್ರಭಾವಕ್ಕೆ ಒಳಗಾಗಿ ಅದೇ ಜನರು ಸಾವಿರಾರು ಸಂಖ್ಯೆಯಲ್ಲಿ ಅನುಯಾಯಿಗಳಾದರು… `ಗುಡಿ-ಮಸೀದಿಗಳಲ್ಲಿ ಭಗವಂತನನ್ನು ನೋಡದೇ ಪ್ರಾಣಿ-ಪಕ್ಷಿ ಸೇರಿದಂತೆ ಸಕಲ ಜೀವರಾಶಿಗಳಲ್ಲಿಯೂ ಧರ್ಮಾತ್ಮನನ್ನು ಕಾಣಿರಿ. ಹಿಂದು-ಮುಸ್ಲಿಂ ಎನ್ನುವಂತಹದ್ದು ಮನುಷ್ಯ ಸ್ಥಾಪಿಸಿಕೊಂಡಿರುವುದು. ದೈವನಿರ್ಣಯವಲ್ಲ. ಜಾತಿ, ಧರ್ಮಗಳು ಬೇರೆ ಬೇರೆಯಾದರೂ ನಡೆದು-ಕುಣಿದಾಡುವ ಆತ್ಮ ಒಂದೇ. ನಾನು ನನ್ನ ಹೊಟ್ಟೆ ತುಂಬಿಸಿಕೊಳ್ಳಲು ನಿಮ್ಮಿಂದ ಭಿಕ್ಷೆ ಬೇಡುತ್ತಿಲ್ಲ. ನಿಮ್ಮ ಪಾಪ-ಕರ್ಮಗಳನ್ನು ಬೇಡುತ್ತಿದ್ದೇನೆ. ನಂತರ ಕರುಳನ್ನು ಹರಿಯುವ ನದಿಯಲ್ಲಿ ತೊಳೆಯುತ್ತಿದ್ದೇನೆ’ ಎಂದು ಅವರು ತಮ್ಮ ಶಿಷ್ಯಂದಿರಿಗೆ ಹೇಳುತ್ತಿದ್ದರು…! ಅವರು ಗತಿಸಿ ಇಂದಿಗೆ 50 ವರ್ಷಗಳ ಮೇಲಾಗಿವೆ. ರಂಜಾನ್ ಹಬ್ಬದ ಮಾರನೆಯ ದಿನದಿಂದ 11ನೇ ದಿನಕ್ಕೆ ಅವರು ಇಹಲೋಕವನ್ನು ತ್ಯಜಿಸಿದರು. ಇಸ್ಲಾಂ ಧರ್ಮದ ಪ್ರಕಾರ, ಈ ದಿನವನ್ನು ಸೌಹಾಲ್ 11ನೇ ತಾರೀಖು ಎನ್ನುತ್ತಾರೆ. ಪ್ರಾಣ ತ್ಯಾಗ ಮಾಡಿದ ದಿನದಂದು ಜಾತಿ- ಧರ್ಮಗಳು ಮೀರಿ ತಮ್ಮ ಗುರುವಿನ ಆಜ್ಞೆಯಂತೆ ಎಲ್ಲರೂ ಒಂದಾಗಿ ಅವರನ್ನು ಸಮಾಧಿ ಮಾಡಿದ ಅಂದಿನಿಂದ ಇಂದಿನವರಿಗೂ ಜಾತ್ಯತೀತವಾಗಿ ಪ್ರತಿದಿನ ದರ್ಗಾಗೆ ಪ್ರವೇಶಿಸಿ ತಮ್ಮ ಸಂಕಷ್ಟಗಳನ್ನು ಬಗೆಹರಿಸುವಂತೆ ಪ್ರಾರ್ಥಿಸುವುದು ರೂಢಿಯಾಗಿದೆ…! `ಈ ಸಂತನಿಗೆ ನಡೆದುಕೊಳ್ಳುವ ಜನರು ಹೃದಯವಂತಾಗಿರಬೇಕು. ಮನುಷ್ಯತ್ವ ಇರುವಂತಾಗಿರಬೇಕು. ಸಕಲ ಜೀವಿಗಳಲ್ಲಿ ಪರಮಾತ್ಮನನ್ನು ಕಾಣುವ ಹೃದಯವಂತರಾಗಿರಬೇಕು. ಅಷ್ಟೇ ಹೊರತು ಜಾತಿವಂತರಲ್ಲ…! ಎಲ್ಲಾ ಜಾತಿ, ವರ್ಗದವರು, ಜಾತ್ಯತೀತತೆ, ಏಕತೆ, ಸಹೋದರ ಭಾವ ಹೊಂದಿದವರೆಲ್ಲ ದರ್ಗಾಗೆ ಬರುತ್ತಾರೆ. ತಾತಯ್ಯ ಕಣ್ಮರೆಯಾದರೂ ಅವರ ಶಿಷ್ಯಂದಿರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ’ ಎನ್ನುತ್ತಾರೆ ದರ್ಗಾದವರು… ಈದ್-ಉಲ್-ಫಿತರ್ ಹಬ್ಬದ ಮಾರನೆ ದಿನದಿಂದ 11ನೇ ದಿನಕ್ಕೆ ಸಂತ ಹಜರತ್ ಶೇಖ್ ಹುಸೇನ್-ಷಾವಲಿ ತಾತಯ್ಯ ಇಹಲೋಕ ತ್ಯಜಿಸಿದರು. ಆ ದಿನವನ್ನು ಸೌಹಾಲ್ ಎಂದು ಕರೆಯಲಾಗುತ್ತದೆ…! ಹಿಂದು ಮತ್ತು ಮುಸ್ಲಿಂ ಸಮುದಾಯದವರು ಸೋಮವಾರ ರಾತ್ರಿ 8ರ ಸುಮಾರಿಗೆ `ಸಂದಲ್-ಎ-ಶರೀಫ್’ (ಗಂಧದ ಅಭಿಷೇಕ), ಅನ್ನದಾನ ಮತ್ತು ಆರಾಧನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ಯಾರೆ…! ಹೀಗಿದೆ ಸಂತ ಹಜತತ್ ಶೇಖ್ ಹುಸೇನ್-ಷಾವಲಿ ತಾತಯ್ಯನ ಪುರಾಣ..!! ———– ‌‌‌‌

ಸ್ವಾತ್ಮಗತ Read Post »

You cannot copy content of this page

Scroll to Top