ರಾಮಕೃಷ್ಣ ಗುಂದಿ ಆತ್ಮಕತೆ–02 ಗುಂದಿ ಹಿತ್ತಲದಲ್ಲಿ ಕಡ್ಲೆ ಬೇಸಾಯ ಗಂಗಾವಳಿ ನದಿಯ ದಕ್ಷಿಣ ತೀರದಿಂದ ನದಿಯ ಶಾಖೆಯಾಗಿ ಚಿಕ್ಕ ಹಳ್ಳವೊಂದು ಅಗ್ಗರಗೋಣ ಗ್ರಾಮದ ಅಂಚಿನಿಂದ ಹೆಗ್ರೆ ಗ್ರಾಮದವರೆಗೆ ಹರಿದು ಅಗ್ರಗೋಣ ಮತ್ತು ನಾಡುಮಾಸ್ಕೇರಿ ಗ್ರಾಮಗಳ ನಡುವೆ ಗಡಿರೇಖೆಯೊಂದನ್ನು ನಿರ್ಮಿಸಿದೆ. ಹಳ್ಳದ ಇಕ್ಕೆಲದಲ್ಲೂ ವಿಸ್ತಾರವಾದ ಗದ್ದೆಬಯಲು ಹನೇಹಳ್ಳಿಯ ಅಂಚಿನವರೆಗೂ ವ್ಯಾಪಿಸಿದೆ. ಹಳ್ಳದ ಪೂರ್ವ ದಂಡೆಯ ಅಗ್ಗರಗೋಣ ಗ್ರಾಮ ವ್ಯಾಪ್ತಿಯ ಬಯಲಲ್ಲಿ ಒಂದು ಪುಟ್ಟ ದಿನ್ನೆಯಿದೆ. ಹಳ್ಳಕ್ಕೆ ಹತ್ತಿರವಾಗಿ ಎರಡು-ಮೂರು ಗುಂಟೆಯ ಅಳತೆಯಲ್ಲಿ ವಿಸ್ತರಿಸಿಕೊಂಡಿರುವ ಈ ಗುಂದವನ್ನು ಜನರು ವಾಡಿಕೆಯಲ್ಲಿ “ಗುಂದಿಹಿತ್ತಲ” ಎಂದೇ ಗುರುತಿಸುತ್ತಿದ್ದರು. ನನಗೆ ಬುದ್ದಿ ಬಲಿತ ಸಂದರ್ಭದಲ್ಲಿ ನಾನು ಗುಂದಿಹಿತ್ತಲವನ್ನು ನೋಡಿದಾಗ ಎಂಟತ್ತು ತೆಂಗಿನ ಮರಗಳು ಗೊನೆಬಿಟ್ಟು ನಿಂತಿದ್ದವು. ಉಳಿದಂತೆ ಒಂದು ಅಮಟೆ ಮರ, ಎರಡು ಕರವೀರ ಹೂವಿನ ಗಿಡಗಳು, ಬೇಲಿಗುಂಟಿ ಹಾಲುಗಳ್ಳಿಯ ಗಿಡಗಳು ಇದ್ದವು. ತಲೆತಲಾಂತರದಿಂದ ಬಂದ ಮೂರು ಕುಟುಂಬಗಳಲ್ಲಿ ನಾನು ನನ್ನ ವಂಶವಾಹಿನಿಯ ಮೂಲವನ್ನು ಶೋಧಿಸಬೇಕಿತ್ತು… ನಾನು ಮೊದಲ ಬಾರಿಗೆ ನೋಡಿದಾಗ ಗುಂದಿಹಿತ್ತಲಿನಲ್ಲಿ ಸುಕ್ರು , ವತ್ತು, ಬೇಡು ಎಂಬ ಹಿರಿಯ ಸಹೋದರರು ತಮ್ಮ ಕುಟುಂಬದ ಸದಸ್ಯರೊಟ್ಟಿಗೆ ಎರಡು ಪ್ರತ್ಯೇಕ ಮನೆಗಳಲ್ಲಿ ಅಲ್ಲಿ ನೆಲೆಸಿದ್ದರು. ಈ ಕುಟುಂಬಗಳಿಗೆ ಕಡ್ಲೆಮನೆತನ’ ಎಂಬ ಹೆಸರಿತ್ತು. ಬಹುಶಃ ಇವರ ಕುಟುಂಬದ ಹಿರಿಯರಲ್ಲಿ ಯಾರೋ ಕಡ್ಲೆ ಎಂಬ ಹೆಸರಿನವರಿದ್ದಿರಬೇಕು. ಅವನ ವಂಶಸ್ಥರೆಲ್ಲ ಕಡ್ಲೆಮನೆಮಂದಿ’ ಎಂದೇ ಗುರುತಿಸಿಕೊಂಡಿರಬಹುದು. ಎರಡೂ ಕುಟುಂಬಗಳಲ್ಲಿ ನಾಲ್ಕು ನಾಲ್ಕು ಗಂಡು ಮತ್ತು ಹೆಣ್ಣು ಮಕ್ಕಳಿದ್ದು ತುಂಬಿದ ಮನೆತನವಾಗಿತ್ತು. ಗುಂದಿಹಿತ್ತಲ’ ಪಿತ್ರಾರ್ಜಿತ ಆಸ್ತಿಯೆಂಬುದನ್ನು ಬಿಟ್ಟರೆ ಈ ಕುಟುಂಬಗಳಿಗೆ ಆದಾಯದ ಮೂಲವೇನೂ ಇರಲಿಲ್ಲ. ಎರಡೂ ಕುಟುಂಬಗಳ ಗಂಡಸರು ಹೆಂಗಸರೆಲ್ಲ ಉಪ್ಪಿನಾಗರದಲ್ಲಿ ಉಪ್ಪು ತೆಗೆಯುವುದು, ಕಲ್ಲುಗಣಿಗಳಲ್ಲಿ ಕಲ್ಲು ತೆಗೆಯುವುದು, ನಾಡವರ ಮನೆಗಳಲ್ಲಿ ಕೃಷಿಕೂಲಿ ಇತ್ಯಾದಿ ಕೆಲಸಗಳಿಂದ ಹೊಟ್ಟೆ ಹೊರೆಯುತ್ತಿದ್ದರು. ಕುಚ್ಚಿಗೆ ಅಕ್ಕಿಯ ಗಂಜಿ ಇಲ್ಲವೆ ರಾಗಿ ಅಂಬಲಿ ಅವರ ಮುಖ್ಯ ಆಹಾರವಾಗಿತ್ತು. ಪಕ್ಕದಲ್ಲಿಯೇ ಇದ್ದ ಹಳ್ಳದಲ್ಲಿ ಗಾಳ ಹಾಕಿ ಅಥವಾ ಬಲೆ ಬೀಸಿ ಬಂದರೆ ಬುಟ್ಟಿ ಬುಟ್ಟಿ ತುಂಬ ಶಾಡಿ, ಕರ್ಶಿ, ಮಡ್ಲೆ, ಗರಗಟ್ಲೆ, ಏಡಿ, ಶೆಟ್ಲಿ ಇತ್ಯಾದಿ ಮೀನುಗಳನ್ನು ಹಿಡಿದು ತರುತ್ತಿದ್ದರು. ಮಳೆಗಾಲದಲ್ಲಿ ಗದ್ದೆ ಬಯಲಲ್ಲೂ ಗದ್ದೆ ಬೆಲಗುಗಳಲ್ಲಿ ಕೂಳಿ ಹಾಕಿ ಕೈಂಜಬ್ಬು’ಗಳನ್ನು ಹಿಡಿದು ತರುತ್ತಿದ್ದರು. ಹೀಗಾಗಿ ಮೀನು ಇತ್ಯಾದಿ ಹಣಕೊಟ್ಟು ಖರೀದಿಸುವ ತಾಪತ್ರಯ ಇರಲಿಲ್ಲ. ಶನಿವಾರ ಪನಿವಾರಗಳಲ್ಲಿ ನಾಡವರ ಹಿತ್ತಲಲ್ಲಿ ಅಥವಾ ಬೇರೆಲ್ಲಾದರೂ ಬೆಳೆದ ಕೆಸುವಿನ ಸೊಪ್ಪು, ನುಗ್ಗೆ ಸೊಪ್ಪುಗಳನ್ನು ತಂದು ಪುಡಿ ಹಾಕಿ ಗಂಜಿಯೊಟ್ಟಿಗೆ ಉಣ್ಣುತ್ತಿದ್ದರು. ಮೂರು ಗುಂಟೆಯಷ್ಟಾದರೂ ಸ್ವಂತ ಆಸ್ತಿ ಹೊಂದಿದ ಕಡ್ಲೆಮನೆತನ ಎಂಬ ಬಿಂಕ ಒಂದುಕಡೆಯಾದರೆ ಕುಟುಂಬದ ಸದಸ್ಯರ ಸಂಖ್ಯೆಯ ಹೆಚ್ಚುಗಾರಿಕೆ ಇನ್ನೊಂದುಕಡೆ. ಒಟ್ಟಾರೆಯಾಗಿ ಸುತ್ತಲ ಗ್ರಾಮಗಳ ಇತರ ಆಗೇರರು ಕಡ್ಲೆಮನೆತನದ ಕುರಿತು ಹಗುರವಾಗಿ ಮಾತನಾಡಲು ಅಂಜುತ್ತಿದ್ದರು. ಇದರೊಡನೆ ಈ ಮನೆತನದ ಕುರಿತು ಒಂದಿಷ್ಟು ಭಯವೂ ಸೇರಿಕೊಳ್ಳಲು ಇನ್ನೊಂದು ಪ್ರಬಲ ಕಾರಣವೂ ಇತ್ತು. ಅದು ಕೋಳಿ ಅಂಕ. ಕಡ್ಲೆ ಮನೆತನದ ಸುಕ್ರು ಮತ್ತು ಬೇಡು ಎಂಬ ಇಬ್ಬರೂ ಹಿರಿಯರಿಗೆ ಕೋಳಿ ಅಂಕದ ಹವ್ಯಾಸವಾಗಿತ್ತು. ಅಲ್ಲದೆ ಈ ಇಬ್ಬರೂ ಕೋಳಿಗಳ ಬಣ್ಣ ಮತ್ತು ಆಕಾರಗಳಿಂದಲೇ ಅವುಗಳ ಸಾಮರ್ಥ್ಯವನ್ನು ಅಳೆಯಬಲ್ಲ ಪ್ರತಿಭೆಯುಳ್ಳವರಾಗಿದ್ದರು. ಅವುಗಳಿಗಾಗಿ ಪ್ರತ್ಯೇಕ ಗೂಡುಗಳನ್ನು ಮಾಡದೆ ತಮ್ಮ ಮಲಗುವ ಅಥವಾ ಅಡಿಗೆ ಕೋಣೆಯ ಒಂದು ಮೂಲೆಯಲ್ಲಿಯೆ ಅಂಕದ ಕೋಳಿಗಳನ್ನು ಕಟ್ಟಿ ಸಾಕುತ್ತಿದ್ದರು. ಹದವಾಗಿ ಬೆಳೆದ ಅಂಕದ ಕೋಳಿಗಳಿಗೆ ಹೋರಾಟದ ತರಬೇತಿ ನೀಡುವುದರಲ್ಲಿ ಅವುಗಳ ಕಾಲಿಗೆ ಕತ್ತಿಕಟ್ಟಿ ಬಿಡುವುದರಲ್ಲಿ, ಗಾಯಗೊಂಡ ಕೋಳಿಗಳ ಗಾಯಕ್ಕೆ ಹೊಲಿಗೆ ಹಾಕಿ ಉಪಚರಿಸುವುದರಲ್ಲಿ ಇಬ್ಬರೂ ನಿಪುಣರಾಗಿದ್ದರು. ಹೀಗಾಗಿ ಸುತ್ತಮುತ್ತ ಎಲ್ಲಿಯೇ ಅಂಕಗಳು ನಡೆಯಲಿ ಸುಕ್ರು ಮತ್ತು ಬೇಡು ಸಹೋದರರು ಅನಿವಾರ್ಯವಾಗಿದ್ದರು. ಅನ್ಯರು ತಮ್ಮ ಕೋಳಿಗಳನ್ನು ಅಂಕಕ್ಕೆ ಒಡ್ಡುವಾಗಲೂ ಇವರನ್ನೆ ಅವಲಂಬಿಸುತ್ತಿದ್ದರು. ಈ ಸಹೋದರರಲ್ಲಿ ಯಾರಾದರೊಬ್ಬರು ತಮ್ಮ ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಬೆನ್ನು ನೇವರಿಸಿ ಬಿಟ್ಟರೆ ಅವು ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತವೆ ಎಂಬ ನಂಬಿಕೆ ಅವರದ್ದಾಗಿತ್ತು. ಅವರ ಈ ಬಗೆಯ ನಂಬಿಕೆಗೆ ಇನ್ನೂ ಒಂದು ಪ್ರಬಲ ಕಾರಣವೂ ಇತ್ತು. ಅದು ಏನೆಂದರೆ, ಇಬ್ಬರಿಗೂ ಇರುವ ಭೂತ ಬೆಂಬಲ: ಸುಕ್ರು ಮತ್ತು ಬೇಡು ಸಹೋದರರು ಅಂಕದಲ್ಲಿ ಕೋಳಿಗಳನ್ನು ಒಡ್ಡುವ ಮುನ್ನ ಸ್ಮಶಾನದಲ್ಲಿ ಬಂಧಿಯಾಗಿರುವ ತಮ್ಮ ಮನೆತನದ ಹಿರಿಯರ ಪ್ರೇತಾತ್ಮಗಳನ್ನು ಜಾಗೃತಗೊಳಿಸಿ ಬರುತ್ತಿದ್ದರಂತೆ: ಕೋಳಿ ಅಂಕದ ಸೀಸನ್ ಆರಂಭವಾಗುವುದೇ ಗದ್ದೆ ಕೊಯ್ಲಿನ ಬಳಿಕ. ಇಷ್ಟು ಹೊತ್ತಿಗೆ ಅಂಕದ ಕೋಳಿಗಳೂ ಬೆಳೆದು ಯುದ್ಧಕ್ಕೆ ಸಜ್ಜಾದ ಯೊಧರಂತೆ ನಿಗುರಿ ನಿಂತಿರುತ್ತಿದ್ದವು. ಅಂಥ ಸಮಯದಲ್ಲಿ ಸುಕ್ರು ಮತ್ತು ಬೇಡು ಸಹೋದರರು ಅಗ್ರಗೋಣದ ಹೊಲೆವಟ್ರ ಎಂಬ ಗ್ರಾಮ ದೇವತೆಯಲ್ಲಿ ಬಾಗಿಲುಕಟ್ಟಿ’ ಹರಕೆ ಮಾಡಿಕೊಂಡು ಸ್ಮಶಾನದಲ್ಲಿರುವ ತಮ್ಮ ಹಿರಿಯರ ಪ್ರೇತಾತ್ಮಗಳಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಂಕದಲ್ಲಿ ಕೋಳಿ ಗೆದ್ದು ಬಂದರೆ, ಸೋತ ಕೋಳಿಯ ಮಾಂಸವನ್ನು ಬಂಧು ಬಳಗದೊಂದಿಗೆ ಹಂಚಿ ತಿನ್ನುವ ಮುನ್ನ ಭಯ ಭಕ್ತಿಯಿಂದ ಪ್ರೇತಾತ್ಮಗಳಿಗೆ ಮೀಸಲು ನೀಡುತ್ತಿದ್ದರು. ಈ ರಹಸ್ಯವನ್ನು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಹೇಗೋ ತಿಳಿದುಕೊಂಡಿದ್ದರು. ಹೀಗಾಗಿ ಜಾತಿಬಾಂಧವರಾದ ಆಗೇರರು ಮಾತ್ರವಲ್ಲದೆ ಕೋಳಿ ಅಂಕದಲ್ಲಿ ಆಸಕ್ತಿಯಿರುವ ಹಾಲಕ್ಕಿಗಳು, ನಾಮಧಾರಿಗಳು, ನಾಡವರೆಲ್ಲಾ ಕಡ್ಲೆ ಮನೆತನದ ಈ ಸಹೋದರರನ್ನು ಪರಿಣತ “ಜೂಂಜುಕಾರ” ರೆಂದು ವಿಶಿಷ್ಟವಾದ ಗೌರವದಿಂದ ಗುರುತಿಸುತ್ತಿದ್ದರು. ಬೇಡು ಮತ್ತು ಸುಕ್ರು ಇಬ್ಬರಿಗೂ ಕೋಳಿ ಅಂಕದ ಕಾರಣದಿಂದ ಸಿಕ್ಕ ಸಾಮಾಜಿಕ ಗೌರವ ಮತ್ತು ಪಿತ್ರಪ್ರೇತಾತ್ಮದ ಬೆಂಬಲದ ನಂಬಿಕೆ ಯಿಂದಾಗಿ ನಮ್ಮ ಆಗೇರ ಜಾತಿಯಲ್ಲಿ ನಮ್ಮ ಕಡ್ಲೆಮನೆತನಕ್ಕೆ ಒಂದಿಂಚು ಹೆಚ್ಚಿನ ಗೌರವವಿತ್ತು. ಅಗ್ರಗೋಣ, ಹೆಗ್ರೆ, ನಾಡುಮಾಸ್ಕೇರಿ ಮೂರು ಗ್ರಾಮಗಳ ಆಗೇರರೊಡನೆ ಗದ್ದೆ ಬಯಲ ನಡುವಿನ ಗುಂದಿಹಿತ್ತಲದ ಕಡ್ಲೆಮನೆ’ ಕುಟುಂಬದ ಸಂಬಂಧ ಸಹಜವಾಗಿಯೇ ಸೌಹಾರ್ದದಿಂದ ಕೂಡಿತ್ತು. ಜಾತಿ ಕೂಟಗಳು, ಹಬ್ಬ ಹರಿದಿನಗಳು, ಯಕ್ಷಗಾನ ಪ್ರಸಂಗಗಳು (ಬೈಟಕ್) ನಡೆಯುವಾಗ ಮೂರು ಗ್ರಾಮಗಳು ಒಟ್ಟಾಗಿ ಸೇರಿ ಆಚರಿಸಿ ಆನಂದಿಸುತ್ತಿದ್ದವು. ಪರಸ್ಪರ ಕಷ್ಟಸುಖ ಏನೇ ಇದ್ದರೂ ಈ ಮೇಲಿನ ಮೂರೂ ಗ್ರಾಮಗಳ ಆಗೇರರಲ್ಲಿ ಭೇದ ಭಾವವಿಲ್ಲದ ಅನೋನ್ಯತೆ ಸಾಧ್ಯವಾಗಿತ್ತು. ಹಲವಾರು ಬಾರಿ ಗುಂದಿಹಿತ್ತಲಿನ ಕಡ್ಲೆಮನೆ ಸಂಕಷ್ಟಕ್ಕೆ ಸಿಲುಕಿದಾಗ ನೆರೆಯ ಈ ಮೂರು ಗ್ರಾಮದವರೆ ನೆರವಿಗೆ ಬಂದು ನಿಲ್ಲುತ್ತಿದ್ದರು. ಗದ್ದೆ ಬಯಲಿನ ನಟ್ಟನಡುವೆ ಇರುವ ಗುಂದಿಹಿತ್ತಲ ಪ್ರಚಂಡ ಮಳೆಗಾಲದಲ್ಲಿ ಒಂದು ಪುಟ್ಟ ದ್ವೀಪದಂತೆ ಗೋಚರಿಸುತ್ತಿತ್ತು. ಹಳ್ಲದಲ್ಲಿ ನೆರೆ ಬಂದರೆ ಗುಂದಿಹಿತ್ತಲವಿಡೀ ಮುಳುಗಿ ಮರೆಯಾಗಿಬಿಡುವ ಸಂದರ್ಭಗಳೂ ಇರುತ್ತಿದ್ದವು. ಇಂಥ ಸಮಯದಲ್ಲಿ ಅಗ್ಗರಗೋಣ, ಹೆಗ್ರೆ ಅಥವಾ ನಾಡುಮಾಸ್ಕೇರಿಯ ಜಾತಿ ಜನರು ಗುಂದಿಹಿತ್ತಲಿನ ಎರಡೂ ಕುಟುಂಬಗಳನ್ನು ತಮ್ಮಲ್ಲಿಗೆ ಕರೆದೊಯ್ದು ಆಶ್ರಯ ನೀಡುತ್ತಿದ್ದರು. ಹೀಗೆ ನೆರವಾಗುವ ಸಂದರ್ಭದಲ್ಲೂ ಈ ಕುಟುಂಬದ ಘನತೆಗೆ ಕುಂದು ಬಾರದಂತೆ ಗೌರವದಿಂದ ನಡೆಸಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಜೋಡಿ ಸಹೋದರರಲ್ಲಿ ಕಿರಿಯವನು ಬೇಡು. ಮೂವರು ಗಂಡುಮಕ್ಕಳು, ನಾಲ್ಕು ಜನ ಹೆಣ್ಣು ಮಕ್ಕಳ ತಂದೆ. ಮಕ್ಕಳಲ್ಲಿ ಯಾರೂ ಅಕ್ಷರ ಕಲಿಕೆಯಲ್ಲಿ ಆಸಕ್ತಿ ತೋರಿಸಲಿಲ್ಲ. ಮೂಲ ಕಸುಬುಗಳನ್ನು ಆಶ್ರಯಿಸಿ ಮದುವೆ ಮಾಡಿಕೊಂಡು ಬೇರೆ ಬೇರೆ ಊರುಗಳಿಗೆ ಹೋದರು. ಹಿರಿಯವನಾದ ಸುಕ್ರುವಿಗೆ ಇಬ್ಬರು ಹೆಂಡಿರು. ಮೊದಲ ಹೆಂಡತಿ ನಡುವಯಸ್ಸಿನಲ್ಲಿ ತೀರಿಕೊಂಡಳಾದರೂ ಅದಾಗಲೇ ಅವಳಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಎರಡನೆಯ ಹೆಂಡತಿ ಸುಕ್ರುವಿನಿಂದ ಓರ್ವ ಗಂಡುಮಗುವನ್ನು ಪಡೆದಳಾದರೂ ಸಂಸಾರ ನಡೆಸಲಾಗದೇ ಗಂಡ ನಿಂದ ಬೇರೆಯಾಗಿ ತನ್ನ ತವರೂರು ಅಂಕೋಲೆಗೆ ಹೊರಟವಳು ಅಲ್ಲಿಯೇ ನೆಲೆಸಿದ್ದಳು. ಕಡ್ಲೆ ಮನೆತನದ ಸಂಬಂಧದಿಂದ ಹೊರಗೇ ಉಳಿದುಬಿಟ್ಟಳು. ಸುಕ್ರುವಿನ ಹಿರಿಯ ಹೆಂಡತಿಯ ಇಬ್ಬರು ಗಂಡುಮಕ್ಕಳು ಮುರ್ಕುಂಡಿ ಮತ್ತು ಗಣಪು ಹೆಣ್ಣು ಮಕ್ಕಳು ದೇವಿ ಮತ್ತು ನಾಗಮ್ಮ. ಸುಕ್ರುವಿನ ಎರಡನೆಯ ಗಂಡುಮಗ ಗಣಪುವಿನ ಹೊರತಾಗಿ ಉಳಿದ ಮೂವರು ಶಾಲೆ ಕಲಿಯಲು ಆಸಕ್ತಿ ತೋರಿಸಲಿಲ್ಲ. ಆದರೆ ಗಣಪು ಎಂಬ ಹುಡುಗ ಶಾಲೆ ಕಲಿಯಲು ಹಠ ಮಾಡಿದ್ದೇ ಅಪರಾಧವಾಗಿತ್ತು. ಕೂಲಿ ಮಾಡಿದರೆ ತುತ್ತು ಅನ್ನ ಸಿಗುತ್ತದೆ, ಶಾಲೆ ಕಲಿತರೆ ಉಪವಾಸವೇ ಗತಿ ಎಂದು ನಂಬಿದ ಪಾಕಲರ ನಡುವೆ ಅಕ್ಷರದ ಬೆನ್ನು ಹತ್ತಿದ ಗಣಪು ಪಟ್ಟ ಕಷ್ಟ ನಡೆಸಿದ ಹೋರಾಟ ಅಷ್ಟಿಷ್ಟಲ್ಲ! ಅಂದು ಆತ ಆ ಬಗೆಯ ಹೋರಾಟ ನಡೆಸಿ ನಾಲ್ಕು ಕಾಳಿನಷ್ಟಾದರೂ ಅಕ್ಷರಗಳನ್ನು ಆಯ್ದು ತನ್ನ ಜೋಳಿಗೆಯಲ್ಲಿ ತುಂಬಿಕೊಳ್ಳದಿದ್ದರೆ ಇಂದು ನಾನು ಹೀಗಿರುತ್ತಿರಲಿಲ್ಲ. ಏಕೆಂದರೆ ಅಂದು ಅಕ್ಷರ ಪ್ರೀತಿಯಲ್ಲಿ ಅರೆಹೊಟ್ಟೆ ಉಂಡು ಮನೆಯನ್ನೇ ಬಿಟ್ಟು ಹೊರ ನಡೆದ ಛಲಗಾರ ಬೇರೆ ಯಾರೂ ಅಲ್ಲ, ನನ್ನ ತಂದೆ ಗಣಪು ಮಾಸ್ತರ! ಡಾ.ರಾಮಕೃಷ್ಣ ಗುಂದಿಯವರ ಹಳೆಯ ಪೋಟೊಗಳು ********************************************************* ಡಾ.ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ…
ಅಂಕಣ ಬರಹ ರಂಗ ರಂಗೋಲಿ -೨ ‘ಸಿರಿ’ ತುಂಬಿದ ಬಾಲ್ಯ ಒಂದು ಭಾವನಾ ಲೋಕದ ಹೊಸಿಲಿನ ಒಳಗೆ ರಂಗು ರಂಗಾದ ಕಲ್ಪನಾಲೋಕ ಶೃಂಗಾರಗೊಂಡು ಕೂತಿತ್ತು. ಅಲ್ಲಿ ನಿತ್ಯ ನರ್ತನ ವಿಲಾಸ. ನನ್ನಲೊಳಗೆ ” ಸಿರಿ” ಎಂಬ ಪ್ರೀತಿ ಅರಳಿದ ಪ್ರಕ್ರಿಯೆಗೆ ಮೂಲ ಬಿತ್ತನೆಯಿದು. ಹಾಂ..ಸಿರಿ!. ಹೌದು..ಸ್ತ್ರೀ ಕುಲಕ್ಕೆ ಪ್ರತಿಭಟನೆಯ ದಾರಿಯನ್ನು ತೋರಿಸಿಕೊಟ್ಟ, ಪುರುಷ ಪ್ರಧಾನ ಸಮಾಜದ ವಿರುದ್ಧ ಬಂಡಾಯ ಸಾರಿದ ಹಳ್ಳಿಯ ಹೆಣ್ಣಿನ ಆತ್ಮವಿಶ್ವಾಸದ ಪ್ರತೀಕ. ಸ್ತ್ರೀತ್ವವನ್ನು ಅರಿವಿನ ನೆಲೆಯಲ್ಲಿ ಗ್ರಹಿಸಬೇಕಾದ ಒತ್ತಾಯವನ್ನು ತಿಳಿಸಿದ ಇಲ್ಲಿನ ಮಣ್ಣಿನಲ್ಲಿ ಮೂಡಿಬಂದ ಶಕ್ತಿ ಸ್ವರೂಪಿಣಿ. ಮನವು ಮತ್ತೆ ಅಲ್ಲಿಗೆ ಓಡುತ್ತಿದೆ. ಅದು ಹುಚ್ಚು ಅಮಲಿನ ಹೊಳೆ…ಆ ಸಿರಿಯ ಪಾದದ ಬಳಿಗೆ. ಬನ್ನಿ! ,ಹೀಗೆ ಬನ್ನಿ!! ಇದೋ ನೋಡಿ ನನ್ನೂರಿನ ಜಾತ್ರೆ, ಉತ್ಸವ. ನಿಮಗೆ ನಾನು ಸಿರಿಯನ್ನು ತೋರಿಸುವೆ. ನಾನು ಸಿರಿಯನ್ನು ಮೊದಲು ಕಂಡದ್ದೂ ಅಲ್ಲೇ. ಆಗ ನನ್ನದು ಬಾಲ್ಯ ಸಹಜ ಆಟದ ಉತ್ಸಾಹ, ಕುತೂಹಲ, ಅಚ್ಚರಿಗಳು ಬೆರೆತುಕೊಂಡ ವಯಸ್ಸು. ನಮ್ಮೂರಲ್ಲಿ ಚಂದ್ರನ ಹುಣ್ಣಿಮೆ ಸಂಭ್ರಮವೂ ಸಿರಿ ಜಾತ್ರೆಯೂ ಜತೆ ಜತೆಗೆ. ಊರಿನ ದೇವರ ಉತ್ಸವ ಜನಜೀವನ ತುಂಬಾ ಬಣ್ಣವೋ ಬಣ್ಣ. ಆ ಹುಣ್ಣಿಮೆಯ ರಾತ್ರಿ ವರ್ಷದ ಬೇರೆ ಹುಣ್ಣಿಮೆ ಇರುಳಿನಂತಲ್ಲ. ಊರ ಮಣ್ಣಿನ ಕಣಕಣದಲ್ಲಿ ಮೊಳಕೆಗೊಳ್ಳುತ್ತವೆ ಹೆಣ್ಣು ಹೃದಯಗಳು. ಬಲಿಯುತ್ತದೆ ಆತ್ಮಸಮ್ಮಾನದ ಕೂಗು. ಅನಾವರಣಗೊಳ್ಳತ್ತಲೇ ಹೋಗುತ್ತದೆ ಆ ಸುಪ್ತ ಮನಸ್ಸು. ಮನಸ್ಸಿನ ಒಳಪದರದಲ್ಲಿ ಹುಗಿದಿಟ್ಟ ದುಗುಡ ದುಮ್ಮಾನ, ನಿರಾಸೆ, ಹತಾಶೆ, ಆಸೆ, ಈಡೇರದ ಕನಸು, ಆ ಬೆಳದಿಂಗಳ ಸ್ಪರ್ಶಕ್ಕೆ ಬುಳಬುಳ ಎಂದು ಮನಸ್ಸಿನಾಚೆ ಆ ದೇವಾಲಯದ ಎದುರಿನ ಬಯಲು ಗದ್ದೆಗೆ ಹರಿದು ಬಗೆಬಗೆಯ ಆಕಾರ ತಾಳುತ್ತದೆ. ರೋಷ, ಸಿಟ್ಟು,ಆರ್ಭಟ, ಹೂಂಕಾರ, ನಿರ್ವಿಕಾರತೆ ಬಗೆಬಗೆಯಾಗಿ ನವರಸ ಪಾಕ ಹೊಯ್ದಂತೆ. ಹೆಂಗಸರು ಸಿರಿಯಾಗಿ ಅರಳುತ್ತಾರೆ. ಆಗೆಲ್ಲ ಹೆಂಗಸರ ಈ ನಡೆ, ಅದಕ್ಕೆ ಕಾರಣಗಳು ಅರ್ಥ ಆಗುವ, ಅಥವಾ ಆಲೋಚನೆಗಳು ಆ ದಿಕ್ಕಿನತ್ತ ಒಂದಿಷ್ಟೂ ತಿರುಗುವಷ್ಟು ಬುದ್ಧಿ ಬಲಿತಿರಲಿಲ್ಲ. ಹುಣ್ಣಿಮೆಯ ಮುನ್ನ ದಿನವೇ ನಾವು ಮಕ್ಕಳು ಸಂಭ್ರಮವನ್ನು ಮೈ ಮನಸ್ಸಿಗೆ ಹೊಯ್ದುಕೊಂಡಂತೆ ಓಡಾಟ ಆರಂಭಿಸುತ್ತಿದ್ದೆವು. ಹೊಸ ಅಂಗಿ, ಅದರ ಹೊಸತನದ ಪರಿಮಳ ಮೂಸಿ ಮೂಸಿ ನೋಡಿ ಗೆಳತಿಯರ ಮನೆಗೆ ಓಡುವುದು. ಅಲ್ಲಿ ಅವಳ ಫ್ರಾಕ್,ಅದರ ಬಣ್ಣವನ್ನು ಹೀರಿಕೊಂಡ ಮನಸ್ಸು ಮತ್ತೆ ಓಟವನ್ನು ಮುಂದುವರೆಸುತ್ತದೆ. ಕೊನೆಗೆ ನಾಲ್ಕೈದು ಮಂದಿ ಒಂದೆಡೆ ಸೇರಿ ಹೊಸ ಜಂಭದಲ್ಲಿ ದೇವಾಲಯದ ಸಮೀಪ ಹೋಗುವುದು. ದೇವಾಲಯದ ಎದುರಿನ ಗದ್ದೆ, ಆ ರಸ್ತೆಗಳಲ್ಲಿ ಗಸ್ತು ತಿರುಗುವ ಕಾಯಕ. ಜಾತ್ರೆಗೆ ಎರಡು ದಿನ ಇದೆ ಎನ್ನುವಾಗ ರಾಶಿರಾಶಿ ಗೊರಬುಗಳು ಮಾರಾಟಕ್ಕೆ ಬರುತ್ತಿದ್ದವು. ರೈತರು ಮಳೆ ಬಿಸಿಲಲ್ಲಿ ತೋಟ-ಗದ್ದೆಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಇದನ್ನು ತಲೆಗೆ ಧರಿಸಿ ಬೆನ್ನಿಗೆ ಇಳಿಬಿಡುವ ತೆರೆದ ಜನಪದ ಜಾಕೆಟ್ಟು ಇದು. ಉತ್ಸವದ ಸಮಯದಲ್ಲಿ ಲಾರಿ ಲಾರಿಗಳಲ್ಲಿ ಈ ಗೊರಬುಗಳು ಬರುತ್ತಿದ್ದವು. ನಮಗೆ ಈ ಲಾರಿಗಳನ್ನು ಹಾಗೂ ತುಂಬಿಕೊಳ್ಳುವ ಗೊರಬುಗಳ ರಾಶಿ ಇವನ್ನು ಎಣಿಕೆ ಮಾಡುವುದೇ ಅತ್ಯಂತ ಖುಷಿ ಕೊಡುವ ಸಂಗಾತಿಯಾಗಿತ್ತು. ಮತ್ತೆ ಹೊಸ ಲಾರಿ ಬಂದರೆ ಮೊದಲಿನಿಂದ ಲೆಕ್ಕ ಶುರು. ಗೊರಬುಗಳ ಲೆಕ್ಕಾಚಾರದಿಂದ ಮುಂದೆ ಬಂದರೆ ನಮಗೆ ಕಾಣುವುದು ನಿರ್ಮಾಣ ಹಂತದ ಸಂತೆ ಅಂಗಡಿಗಳು, ಜಾತ್ರೆಗೆ ಬಂದ ಸರ್ಕಸ್ ನ ಇನ್ನೂ ಜೋಡಣೆಯಾಗದ ಉಪಕರಣಗಳು, ಬೋನಿನೊಳಗಿನ ಪ್ರಾಣಿಗಳು, ಸೊಂಟ ಕೈ ಕಾಲು ಬಿಡಿ ಬಿಡಿಯಾಗಿ ಬಿದ್ದ ವಿವಿಧ ಬಗೆಯ ಆಟದ ಯಂತ್ರಗಳು, ಮಕ್ಕಳಾಟದ ಸಾಮಾನುಗಳು. ಡೇರೆಯೊಳಗೆ ಕೂತಿರುವ ಬೆಂಚು, ಟೇಬಲ್. ಮರುದಿನ ರಾತ್ರಿ ಆ ಜಾಗ ಮಸಾಲೆ ದೋಸೆ ಪರಿಮಳ ಬರುವ ಹೋಟೇಲ್ ಆಗಿರುತ್ತದೆ. ಗೋಣಿ ಚೀಲದಲ್ಲಿ ಕೂತ ಪ್ಲಾಸ್ಟಿಕ್, ಸ್ಟೀಲ್ ಪಾತ್ರೆಗಳು. ಮುಚ್ಚಿದ ದೊಡ್ಡ ಪ್ಲಾಸ್ಟಿಕ್ ಹೊದಿಕೆಯೊಳಗೆ ಮುಸುಗುಡುವ ಅಪರಿಚಿತ ವಸ್ತುಗಳು. ಅವುಗಳ ಬಗ್ಗೆ ಅತೀವ ಕುತೂಹಲ, ಚರ್ಚೆಯಾಗುತ್ತ ಎಲ್ಲವನ್ನೂ ಕಣ್ಣು,ಬಾಯಿ ಬಿಟ್ಟು ನೋಡುತ್ತಾ, ಕತ್ತಲು ನಮ್ಮ ಸುತ್ತಲೂ ಆವರಿಸುವುದನ್ನು ನೋಡಿ ಮನೆಗೆ ಓಡುತ್ತಿದ್ದೆವು. ಹುಣ್ಣಿಮೆಯ ದಿನ ಎಳೆಯ ಮನಸ್ಸುಗಳಿಗೆ ಸಂಭ್ರಮ, ಕುತೂಹಲ, ಆಸಕ್ತಿ. ದೊಡ್ಡವರಲ್ಲಿ ಮಕ್ಕಳ ಪ್ರಶ್ನೆ! “ಎಷ್ಟು ಹೊತ್ತಿಗೆ ಜಾತ್ರೆ ಶುರು?”. ಉತ್ತರ ಸಿಕ್ಕರೂ ಮತ್ತದೇ ಪ್ರಶ್ನೆ. ಸಂಜೆ ಅವಸರದಲ್ಲಿ ಸಿಕ್ಕಿದ್ದು ಒಂದಷ್ಟು ಮುಕ್ಕಿ ಜಾತ್ರೆಗೆ ಜಾಗವಾದ ಗದ್ದೆಗೆ ಹಾಜಾರಾತಿ ಕೊಡುತ್ತಿದ್ದೆವು. ಆಗಲೇ ವಾದ್ಯಗಳು, ಪಾಡ್ದನದ ನಾದ ಕಿವಿ ತುಂಬುತ್ತಿತ್ತು. ” ನಾರಾಯಣ ಓ ನಾರಾಯಿಣೋ ಓ..ಓ..ಆ..ಆ.. ಇನಿ ಯೆನ್ನ ಪಡಿಸಂಪಗೆ ಓ ಈರ್ ಪತ್ತಲೆ ಬೆರಮ್ಮಣಂದ್ ಪನ್ಪೋಲ್ ಆಲ್ ದಾರು ಆಲ್..ಓ….ಓ…” ಜನ ತುಂಬುತ್ತಿದ್ದರು. ಅದು ಸಿರಿ ಜಾತ್ರೆ. ಎಲ್ಲಿ ನೋಡಿದರೂ ಹೆಂಗಳೆಯರು. ಒತ್ತೊತ್ತಾಗಿ ಕೂತು, ನಿಂತು, ಮುಡಿ ಕೆದರಿ ಏನನ್ನೋ ಮೆಲು ಧ್ವನಿಯಲ್ಲಿ ಮಣಮಣಿಸುತ್ತಿದ್ದರು. ಸಣ್ಣನೆಯ ಆಲಾಪದಂತೆ ಪಾಡ್ದನ ಆರಂಭಗೊಳ್ಳುತ್ತಿತ್ತು. “ಡೆನ್ನ ಡೆನ್ನ ಡೆನ್ನನಾ…ಓ..ಓ..” ಆ ಎಳೆ ಹಿಡಿಯುವುದೇ ಖುಷಿ. “ನಾರಾಯಿಣ ಓ ನಾರಾಯಿಣೋ… ಓ..ಓ…ಓ..ಆ… ಆಹ್ಹ..ಹ್ಃ..ಹ್ಹ..ಓ..ಓ..ಸ್ಹ್ ಉ…” ನಾವು ಜನರ ಗುಂಪಿನಲ್ಲಿ ತೂರಿಕೊಳ್ಳುತ್ತ ಒಬ್ಬಬ್ಬ ಸಿರಿಯ ಬಳಿಗೂ ಹೋಗಿ ನಿಂತಿರುತ್ತಿದ್ದೆವು. ಚಂದ್ರನ ಒಡೆತನ ತುಂಬಿದಂತೆ, ಬೆಳದಿಂಗಳು ಚೆಲ್ಲಿದ ನಶೆಗೆ, ಮನಕಡಲು ಅಲೆಯೆದ್ದು ಹೆಂಗಳೆಯರ ಕೊರಳಿಗೆ ಶಕ್ತಿ ತುಂಬಿಕೊಳ್ಳುತ್ತದೆ. ಉಸಿರಿಗೆ ಹೊಸ ಆಯಾಮ..ಕಣ್ಣು ಸಹಜತೆಯ ಮಿತಿಯಾಚೆಗೆ ಚಾಚಿ ಯಾವುದೋ ಉನ್ಮಾದ, ನಿಂತಲ್ಲಿ ಭಾರವಾಗುವ ಹೆಜ್ಜೆ, ತೇಲುವ ದೇಹ. ಪಿಸು ನುಡಿಯಂತೆ ,ನಿಧಾನವಾಗಿ ನಾಭಿಯಾಳದಿಂದ ಹೊರಬರುವ ಧ್ವನಿ ಕ್ರಮೇಣ ತನ್ನ ಮೃದುತ್ವ ಕಳಕೊಂಡು ಏರುಧ್ವನಿಯಾಗುತ್ತದೆ. ಕಣ್ಣಲ್ಲಿ ಉನ್ಮಾದ , ಶಾಂತ ವಾಗಿರುವ ಸ್ವರ ಅದರಾಚೆಗೆ ನಡೆದು ಯಾವುದೋ ಅನಾಮಿಕ ಭಾವ. ನಾವು ಹೊಟ್ಟೆಯೊಳಗೆ ಭೀತಿ ಅದುಮಿಟ್ಟು ಅದನ್ನೂ ಮೀರಿದ ಕುತೂಹಲದಿಂದ ಇಣುಕುತ್ತಿದ್ದೆವು. “ನಾರಾಯಿಣೊ..ನಾರಾಯಿಣೋ “ ಅವರ ಪ್ರತೀ ಹಾವ ಭಾವ ನನ್ನೊಳಗೆ ಅಚ್ಚಾಗುತ್ತಿತ್ತು. ಕೈಯಲ್ಲಿ ಆಯುಧದಂತೆ ಹಿಡಿದಿರುವ ಹಿಂಗಾರ ಹೂ. ಮುಖದ ಇಕ್ಕಡೆ, ಹಿಂದುಗಡೆ ಕೆದರಿ ಹರಡಿಕೊಂಡ ಮುಡಿ, ಉಸಿರಿನ ಏರಿಳಿತಕ್ಕೆ ಸರಿಯಾಗಿ ಧ್ವನಿಸುವ ಆ ಆಳದ ಸ್ವರ, ಆಗಾಗ ತಲೆಗೂದಲನ್ನೇ ಕಣ್ಣಿಗೆ ಮುಖಕ್ಕೆ ಅಡ್ಡವಾಗಿ ಹಿಡಿದು ಬಿಕ್ಕುವ ಪರಿ, ಹಿಂಗಾರವನ್ನು ಆಗಾಗ ಸಮಾಧಾನದಿಂದ,ಮತ್ತೆ ರೋಷದಿಂದ ಮುಖದ ಮೇಲೆಯೇ ಬಡಿಯುತ್ತ ಕೈಗಳನ್ನು ಅದೇ ರಭಸದಲ್ಲಿ ಹಿಂದೆ ಮುಂದೆ ಆಡಿಸುತ್ತ ಸಣ್ಣನೆ ಹೆಜ್ಹೆ ಹಾಕಿ ಕುಣಿವ, ಆವೇ ಶದಲ್ಲಿ ಹಿಂಗಾರ ಹೂವಿನೊಂದಿಗೆ ಮೇಲಕ್ಕೆ ಹಾರುವ, ನವ ನಶೆಯು ಮೈಯ ಕೋಶ ಕೋಶಗಳಲ್ಲೂ ತುಂಬಿಕೊಂಡು ಎದೆಯನ್ನು ಆಲಾಪದೊಂದಿಗೆ ಪ್ರಾಣದ ಜೊತೆಗೆ ಆಟವಾಡುವಂತೆ ಆಡಿಸುವ ಅವರ ಆ ಪರಿ. ಎದುರುಗಡೆ ದೀನರಾಗಿ ನಿಲ್ಲುವ ಆ ‘ಸಿರಿ’ ರೂಪೀ ಹೆಂಗಳೆಯರ ಮನೆಯವರು. ಅವರ ಕಣ್ಣಿನಾಳದ ಭಯದ ಜೊತೆಜೊತೆಗೆ ತುಂಬಿಕೊಂಡ ಭಕ್ತಿ. ಎಲ್ಲವನ್ನೂ ಬಹಳ ಆಸಕ್ತಿಯಿಂದ ಗಮನಿಸುವ ನನ್ನೊಳಗೂ ಅಂತಹುದೇ ಅದಾವುದೋ ಅಪರಿಚಿತ ಭಾವ ಶಕ್ತಿ ಸಂಚಯಿಸುತ್ತಿತ್ತು. ಎಲ್ಲಿ ಎದುರಿನ ಸಿರಿ ಜೋರಾಗಿ ಒಮ್ಮೆ ಕಿರುಚಿದಳೋ ಡವಗುಡುವ ಎದೆಯನ್ನು ಅಂಗೈಯಲ್ಲಿ ಒತ್ತಿ ಹಿಡಿದು ನಿಂತ, ದಪ್ಪ ದಪ್ಪ ಕಾಲುಗಳ ಸಂದಿಯಲಿ ನೂರಿಕೊಳ್ಳುತ್ತ ಮತ್ತೊಬ್ಬ ‘ಸಿರಿ’ಯ ಕಡೆ ಓಡುತ್ತಿದ್ದೆ. ಅಲ್ಲಿ ಒಬ್ಬೊಬ್ಬ ‘ಸಿರಿ’ಯ ಬಳಿಯೂ ಒಂದು ಕಥೆ ತೆರೆದುಕೊಂಡು ಆ ಮಣ್ಣಿಗೆ ಬಿದ್ದು ಆವಿಯಾಗುತ್ತಿತ್ತು. ಹೆಣ್ಣು ತನ್ನ ಕಥೆಯನ್ನು ಒಳ ಚಿಪ್ಪಿನಿಂದ ಹರಿದು ತೆಗೆದು ತಾನು ಕಳಚಿಕೊಂಡಂತಹ ನಿರಾಳತೆಗೆ ಒಳಗಾಗುತ್ತಿದ್ದಳೇನೋ. ಮತ್ತೆ ನಾಳೆಗಳು ಅದೇ ಕಥೆಗಳ ಮುನ್ನುಡಿ ಬರೆಯಲಾರದೇ?. ಈ ಯೋಚನೆ ಆಗ ಬರುವುದು ಸಾಧ್ಯವೇ ಇರಲಿಲ್ಲ. ಅದು ಮಕ್ಕಳ ಮನಸ್ಸು. ಸ್ವಚ್ಛ ಖಾಲಿ ಕಾಗದ. ಏನು ಕಂಡೆನೋ ಅಷ್ಟೇ ಅಚ್ಚಾಗುತ್ತಿತ್ತು. ಹೊಸದನ್ನು ಕಾಣುವ ಸಂಭ್ರಮಕ್ಕೆ ಇಲ್ಲಿ ಹಸಿವು. ಬಲು ಆಸಕ್ತಿ, ಕುತೂಹಲ, ಅಚ್ಚರಿಯಿಂದ ಆ ಕಥೆಗಳನ್ನು ನನ್ನೊಳಗೆ ಬರಮಾಡಿಕೊಳ್ಳುತ್ತಿದ್ದೆ. ಎಲ್ಲವೂ ಕೆಳವರ್ಗದ, ಬಡವರ, ಹಳ್ಳಿಯಲ್ಲಿ ಗದ್ದೆ, ತೋಟಗಳಲ್ಲಿ ದುಡಿವ ಹೆಣ್ಣುಮಕ್ಕಳ, ಹೆಂಗಸರ ಹರಳುಗಟ್ಟಿದ ನೋವುಗಳು, ‘ಸಿರಿ’ರೂಪದಲ್ಲಿ ಕರಗುತ್ತಿತ್ತು. ಒಳಗಿರುವ ಭಗವಂತ ಅವರಿಗೆ ಮೂರ್ತ,ಅಮೂರ್ತ ಸಾಕ್ಷಿ. ಪ್ರತಿ ಹೆಣ್ಣು ಮನಸ್ಸೂ ಅಂತರಂಗದ ಭಾವ ಹೊರತೆಗೆದು ಆಟವಾಡಿದಂತೆ. ಆಕೆ ತನಗಾಗುತ್ತಿರುವ ಅನ್ಯಾಯಕ್ಕೆ ಹಾವಿನಂತೆ ಭುಸುಗುಡುತ್ತಾಳೆ, ಕಣ್ಣನ್ನು ಉರುಟುರುಟಾಗಿ ರಪರಪನೆ ತಿರುಗಿಸಿ ಎದುರಿನವರ ಬಲವನ್ನೇ ಉಡುಗಿಸುತ್ತಾಳೆ. ಆಕ್ರೋಶದಲ್ಲಿ ಒಮ್ಮೆಲೆ ಕಿಟಾರನೆ ಕಿರುಚುತ್ತಾಳೆ. ಒಳಕೋಪಕ್ಕೆ ಕೈಯಲ್ಲಿ ಹಿಡಿದ ಹಿಂಗಾರ ಪರಪರ ಹೊಡೆದುಕೊಳ್ಳುತ್ತಾಳೆ. ಪ್ರಶ್ನಿಸುತ್ತಾಳೆ. ಸಹಜ ಬದುಕಿನ ಪಾತ್ರಗಳು ಇಲ್ಲಿ ಅದಲು ಬದಲಾದಂತೆ. ಎಲ್ಲ ಬಗೆಯ ಭಾವಾಭಿವ್ಯಕ್ತಿಗೆ ಇಲ್ಲಿ ಮುಕ್ತ ವೇದಿಕೆ. ಮುಂದೆ ಹೋದರೆ ಸುಸ್ತಾಗಿ ಒರಗಿರುವ ‘ಸಿರಿ’ಯರು. ಅಕ್ಷತೆ ಚೆಲ್ಲಿದಂತೆ ಎಲ್ಲೆಡೆ ಬಿದ್ದಿರುವ ಹಿಂಗಾರದ ಹೂಗಳು. ದೇಗುಲದ ಪ್ರಾಂಗಣದೊಳಗೆ ಬರಬೇಕು. ಅಲ್ಲಿ ಸುತ್ತ ಚಾವಡಿಯಲ್ಲಿ ಸಿಂಗಾರಗೊಂಡು ಬಿಳಿ ಝರಿ ಲಂಗ ಮಲ್ಲಿಗೆ ಹೂ ಮುಡಿದು ಅಲಂಕರಿಸಿ ಕೂತ ಹೆಣ್ಣು ಮಕ್ಕಳು. ಗರ್ಭಗುಡಿಗೆ ಒಂದು ಪ್ರದಕ್ಷಿಣೆಗೊಂಡು ಎದುರು ಬಂದರೆ ಸೇವಂತಿಗೆ, ಮಲ್ಲಿಗೆ, ಕೇಪುಳ ರಾಶಿ ರಾಶಿ ಹೂಗಳು, ಕುಂಕುಮ, ಊದುಬತ್ತಿ, ಅರಶಿನ ಗುಪ್ಪೆ ಗುಪ್ಪೆಯಾಗಿ ಕೂತಿರುತ್ತಿದ್ದವು. ಒಳಗಡೆ ಅಲಂಕಾರಗೊಂಡ ಊರ ದೇವರು ವೀರಭದ್ರ. ಉರಿಯುತ್ತಿರುವ ಹಣತೆಗಳು. ಅರೆಬರೆ ನಮಿಸಿ. ಮತ್ತೆ ಹೊರಗೆ ಓಟ. ಅಲ್ಲಿ ಸುತ್ತ ವಿವಿಧ ದೈವದೇವರುಗಳು. ವ್ಯಾಘ್ರಮುಖೀ ಚಾಮುಂಡಿ. ಇಲ್ಲಿ ನೋಡಬೇಕು ಥೇಟು ಹುಲಿಯ ಹಾವಭಾವ ತೋರುವ ಗಂಡು ಸಿರಿ. ಹುಲಿ ಆರ್ಭಟದಲ್ಲಿ ಆವೇಶಗೊಳ್ಳುವ ಗಂಡಸರು. ಅಂದು ಕಾಣುತ್ತಿದ್ದುದೇ ಸಿರಿ ಲೋಕ. ಅದು ಬಾಲಕಿಯ ಮನಸ್ಸಿನ ಪುಟ್ಟ ಕಣ್ಣೊಳಗೆ ಹಲವು ಪಾತ್ರ ರೂಪ,ಸ್ವರ, ಅಚ್ಚಾಗಿ ರಂಗ ‘ಸಿರಿ’ ಪ್ರಪಂಚ ಬೀಡು ಬಿಟ್ಟಿತ್ತು. ************************************************************ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.
ಗಾಯಗೊಂಡ ಹೃದಯದ ಸ್ವಗತ
ಪುಸ್ತಕ ಸಂಗಾತಿ ಗಾಯಗೊಂಡ ಹೃದಯದ ಸ್ವಗತ ಗಾಯಗೊಂಡ ಹೃದಯದ ಸ್ವಗತತೆಲುಗು ಮೂಲ : ಅಯಿನಂಪೂಡಿ ಶ್ರೀಲಕ್ಷ್ಮಿ ಕನ್ನಡಕ್ಕೆ : ರೋಹಿಣಿ ಸತ್ಯಪ್ರ : ಸ್ನೇಹ ಬುಕ್ ಹೌಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೭೦ಪುಟಗಳು : ೬೪ ಇದು ಒಂದು ನೀಳ್ಗವನ. ತನ್ನ ಗೃಹಕೃತ್ಯದ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಶ್ರದ್ಧೆಯಿಂದ ನೆರವೇರಿಸುತ್ತಿದ್ದ ಗೃಹಿಣಿಯೊಬ್ಬಳು ಸ್ತನದ ಕ್ಯಾನ್ಸರಿನಿಂದ ಬಳಲಿ ಚಿಕಿತ್ಸೆಯ ಅನೇಕ ಯಾತನಾಪೂರ್ಣ ಹಂತಗಳನ್ನು ದಾಟಿ, ಧೈರ್ಯ ಮತ್ತು ಆತ್ಮವಿಶ್ವಾಸಗಳಿಂದ ಸಾವನ್ನು ಗೆಲ್ಲುವುದು ಈ ಕವಿತೆಯ ವಸ್ತು. ಇದು ಕವಯಿತ್ರಿ ಅಯಿನಂಪೂಡಿ ಶ್ರೀಲಕ್ಷ್ಮಿಯವರ ನಿಜ ಕಥೆಯೂ ಹೌದು. ಕವನದ ಉದ್ದಕ್ಕೂ ನಾವು ನಿರೂಪಕಿಯ ಬದುಕು ಹಾಗೂ ಆಕೆಯ ವ್ಯಕ್ತಿತ್ವದ ವಿವಿಧ ಮುಖಗಳನ್ನು ನೋಡುತ್ತ ಹೋಗುತ್ತೇವೆ. ಒಟ್ಟಿನಲ್ಲಿ ಇದು ಓದುಗನ ಮನಸ್ಸನ್ನು ಶುದ್ಧೀಕರಣಕ್ಕೊಳಗಾಗಿಸುವ ಕೆಥಾರ್ಸಿಸ್ ಪರಿಣಾಮವಿರುವ ಕಾವ್ಯ. ಇದು ಒಂದು ಸ್ವಗತದ ನಿರೂಪಣೆಯಾದರೂ ಸ್ತ್ರೀಯ ಅಗಾಧವಾದ ಜೀವ ಚೈತನ್ಯ ಮತ್ತು ಧಾರಣ ಶಕ್ತಿಗಳಿಗೆ ಬರೆದ ಭಾಷ್ಯವೇ ಆಗಿದೆ ಅನ್ನಬಹುದು. ಕ್ಯಾನ್ಸರ್ ಅನ್ನುವುದು ಎಲ್ಲರೂ ಹೆದರಿ ನಡುಗುವ ಒಂದು ಭಯಾನಕ ಕಾಯಿಲೆ. ಬದುಕಿನ ಬಗೆಗಿನ ಭರವಸೆಗಳನ್ನೆಲ್ಲ ಬುಡಮೇಲು ಮಾಡಿ ವ್ಯಕ್ತಿಯನ್ನು ಭಯ-ತಲ್ಲಣಗಳ ಅಂಚಿಗೆ ದೂಡುವ ಒಂದು ಮಹಾಮಾರಿ. ಆದರೆ ಇಲ್ಲಿನ ಕಥಾನಾಯಕಿ ಸಾಮಾನ್ಯಳಲ್ಲ. ಇಂಥ ಒಂದು ಗದಗುಟ್ಟಿಸುವ ಸನ್ನಿವೇಶ ಎದುರಾದಾಗಲೂ ಅದನ್ನು ಆಕೆ ಲೀಲಾಜಾಲವಾಗಿ ಮುಗುಳ್ನಗೆಯೊಂದಿಗೆ ಅತ್ಯಂತ ಸಹಜವಾಗಿ ನಿಭಾಯಿಸುತ್ತಾಳೆ. ಮನಸ್ಸಿನ ತುಂಬಾ ಕೋಲಾಹಲವೇ ಆದರೂ ಅದನ್ನು ತನ್ನೊಳಗೇ ಪರಿಹರಿಸಿಕೊಳ್ಳುತ್ತ, ಹೊರಗೆ ತೋರಗೊಡದೇ ಇರುವುದರಲ್ಲಿ ಆಕೆ ಯಶಸ್ವಿಯಾಗುತ್ತಾಳೆ. ಯಾಕೆಂದರೆ ಇದೆಲ್ಲವನ್ನೂ ತಾನು ಒಂದು ದಿನ ಗೆದ್ದೇ ಗೆಲ್ಲುತ್ತೇನೆಂಬ ದೃಢವಾದ ನಂಬಿಕೆ ಅವಳಲ್ಲಿದೆ. ಈ ನೀಳ್ಗವನವನ್ನು ಪ್ರೋಲಾಗ್, ಇಂಟ್ರೋ, ಸ್ಟೇಜ್ ೧, ಸ್ಟೇಜ್ ೨, ಸ್ಟೇಜ್ ೩, ಫ್ಲಾಷ್ಬಾಕ್, ಫ್ಲಾಷ್ ಪ್ರೆಸೆಂಟ್, ಇನ್ ದ ಥಿಯೇಟರ್, ಪಿಂಕ್ ಹೋಪ್, ಮರಣಾಮರಣ-ಎಂದು ಒಂದು ಪಾಶ್ಚಾತ್ಯ ಪ್ರಾಚೀನ ನಾಟಕದ ರೂಪದಲ್ಲಿ ವಿಭಾಗಿಸಲಾಗಿದೆ. ಪ್ರಾಯಶಃ ಬದುಕು ಆಕಸ್ಮಿಕ ಸನ್ನಿವೇಶಗಳ ನಾಟಕವೆಂಬ ಕವಯಿತ್ರಿಯ ಧೋರಣೆ ಇದಕ್ಕೆ ಕಾರಣವಾಗಿರಬಹುದು. ಕವಯಿತ್ರಿ ತನ್ನ ನೋವುಗಳನ್ನೂ ಭಾವನಾತ್ಮಕ ಸಂವೇದನೆಗಳನ್ನೂ ತಾತ್ವಿಕ ಚಿಂತನೆಗಳನ್ನೂ ಇಲ್ಲಿ ಸುಂದರವಾದ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅನುವಾದದ ಶೈಲಿಯೂ ಅಷ್ಟೇ ಕಾವ್ಯಾತ್ಮಕವಾಗಿದ್ದು ಸಹಜವಾಗಿ ಓದಿಸಿಕೊಂಡು ಹೋಗುತ್ತದೆ. ಆರಂಭದಲ್ಲಿ ಎಂ.ಎಸ್.ಆಶಾದೇವಿಯವರ ಸೊಗಸಾದ ವಿಮರ್ಶಾತ್ಮಕ ಮುನ್ನುಡಿಯೊಂದಿಗೆ ಕಾವ್ಯವೇ ಒಂದು ಚಿಕಿತ್ಸೆ ಎಂಬ ಅರ್ಥದಲ್ಲಿ ಮಾಮಿಡಿ ಹರಿಕೃಷ್ಣ ಅವರು ಬರೆದ ‘ಪೋಯಟ್ರಿ ಒಂದು ಫೀಲಿಂಗ್, ಒಂದು ಕೆಥಾರ್ಸಿಸ್ ಒಂದು ಥೆರಪಿ’ ಎಂಬ ಲೇಖನ, ಈ ಕಾವ್ಯದ ಹಿನ್ನೆಲೆಯನ್ನು ವಿವರಿಸಿ ಮೂಲ ಲೇಖಕಿ- ಅನುವಾದಕಿಯರ ಮಾತುಗಳಿವೆ. ************************************************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಗಾಯಗೊಂಡ ಹೃದಯದ ಸ್ವಗತ Read Post »
ಅಂಕಣ ಬರಹ ಸಾಮಾನ್ಯ ಸಂಗತಿಗಳಲ್ಲೇ ಅಸಾಮಾನ್ಯ ಬೆರಗನ್ನು ಹಿಡಿದಿಡುವ ಉಮಾ ಮುಕುಂದರ ಕವಿತೆಗಳು . ಸಂಗಾತಿಗಾಗಿ ಈ ಅಂಕಣವನ್ನು ಆರಂಭಿಸಿದಾಗ ಫೇಸ್ಬುಕ್ಕಿನ ಕವಿತೆಗಳ ವಿಶ್ಲೇಷಣೆ ಅಷ್ಟೇನೂ ಕಷ್ಟವಾಗದು ಮತ್ತು ನನ್ನ ಇಷ್ಟೂ ದಿನದ ಕಾವ್ಯದ ಓದು ಅದನ್ನು ಪೊರೆಯುತ್ತದೆಂದೇ ಅಂದುಕೊಂಡಿದ್ದೆ. ಆದರೆ ಫೇಸ್ಬುಕ್ಕಿನಲ್ಲಷ್ಟೇ ಮೊದಲು ಪ್ರಕಟಿಸಿ ಆ ಮಾಧ್ಯಮದ ಮೂಲಕವೇ ಬೇರೆಡೆಯೂ ಖ್ಯಾತರಾದ ಅನೇಕ ಹೆಸರುಗಳು ಆನಂದ ಮತ್ತು ಆಶ್ಚರ್ಯವನ್ನು ಉಂಟು ಮಾಡುವುದರ ಜೊತೆಗೇ ಈವರೆವಿಗೂ ಪತ್ರಿಕೆಗಳಲ್ಲಿ ಪ್ರಕಟಿಸದೆಯೂ ತಮ್ಮ ಆಳದನುಭವಗಳಿಗೆ ಕವಿತೆಯ ರೂಪ ಕೊಡುವುದಕ್ಕಷ್ಟೇ ಸೀಮಿತವಾಗದೇ ಇಷ್ಟೂ ದಿನದ ಕಾವ್ಯ ಪರಂಪರೆಯ ಮೂಲಕ ಅರಿತ ಕಾವ್ಯದ ನಡಿಗೆಗೆ ಹೊಸದೇ ದಿಕ್ಕು ತೋರುತ್ತಿರುವ ಮತ್ತು ಫೇಸ್ಬುಕ್ ಕವಿಗಳನ್ನು ಲಘುವಾಗಿ ಕಾಣದೆ ಅವರನ್ನೂ ಮುಖ್ಯ ವಾಹಿನಿಯ ಜೊತೆಗೇ ಪರಿ ಗಣಿಸಲೇಬೇಕೆಂಬ ಎಚ್ಚರವನ್ನೂ ಆ ಅಂಥ ಹೆಸರುಗಳು ಎಚ್ಚರಿಸಿವೆ. ಆ ಅಂಥ ಹೆಸರುಗಳ ಪೈಕಿ ಶ್ರೀಮತಿ ಉಮಾ ಮುಕುಂದರ ಹೆಸರು ಅತಿ ಮುಖ್ಯವಾದುದು. ಓದಿನ ಮೂಲಕ ಅರಿತು ಕವಿತೆಗಳೆಂದು ಯಾವುದನ್ನು ನಾವು ಸಾಮಾನ್ಯವಾಗಿ ಅಂದುಕೊಂಡಿದ್ದೇವೋ ಹಾಗಿರದೆ ಮೇಲ್ನೋಟಕ್ಕೆ ಸಾಮಾನ್ಯ ಸಾಲುಗಳಂತೆ ಕಂಡರೂ ಆಳದಾಳದಲ್ಲಿ ಬೆಡಗು ಬೆರಗು ಮತ್ತು ಹೊಳಹನ್ನು ಉಮಾ ಮುಕುಂದರು ಈತನಕ ಪ್ರಕಟಿಸಿರುವ ಫೇಸ್ಬುಕ್ ಕವಿತೆಗಳು ಇಟ್ಟುಕೊಂಡಿವೆ. ಉಮಾ ಮುಕುಂದ ಈವರೆಗೂ ಫೇಸ್ಬುಕ್ಕಿನಲ್ಲಿ ಪ್ರಕಟಿಸಿದ ೩೬ ಕವಿತೆಗಳನ್ನು ಅವಧಿಯ ಜಿ.ಎನ್.ಮೋಹನರ “ಬಹುರೂಪಿ” ಪ್ರಕಾಶನವು “ಕಡೇ ನಾಲ್ಕು ಸಾಲು” ಹೆಸರಿನಲ್ಲಿ ಪ್ರಕಟಿಸಿದೆ. ಸಂಕಲನದ ನಾಡಿಮಿಡಿತವನ್ನು ಅದ್ಭುತವಾಗಿ ಹಿಡಿದ ಹೆಚ್. ಎಸ್. ರಾಘವೇಂದ್ರರಾವ್ ಅವರ ಮುನ್ನುಡಿ ಮತ್ತು ಇಲ್ಲಿನೆಲ್ಲ ಪದ್ಯಗಳ ಉಸಿರಲ್ಲೂ ಇರುವ ಬಗೆಬಗೆಯ ಏರಿಳಿತಗಳನ್ನು ವೈದೇಹಿಯವರ ಬೆನ್ನುಡಿ ದಾಖಲಿಸಿ ಉಳಿದವರು ಇನ್ನು ಈ ಕುರಿತು ಬರೆಯಲು ಸಾಧ್ಯವೇ ಇಲ್ಲದಂಥ ಅದ್ಭುತ ನೋಟವನ್ನು ಈ ಇಬ್ಬರೂ ಕೊಟ್ಟಿದ್ದಾರೆ. ಈ ಪುಸ್ತಕಕ್ಕೆ ಹಾಸನದ ಮಾಣಿಕ್ಯ ಪ್ರಕಾಶನದ “ಕಾವ್ಯ ಮಾಣಿಕ್ಯ” ಪ್ರಶಸ್ತಿಯೂ ಲಭಿಸಿದೆ. ನಿತ್ಯ ದಂದುಗದ ಸಂತೆಯಲ್ಲಿ ಯಾವ ಕಾರಣಕ್ಕೂ ಕಳೆದು ಹೋಗ(ಲೇ)ಬಾರದೆಂಬ ಅತಿ ಎಚ್ಚರದ ಸೂಕ್ಷ್ಮತೆಯ ಜೊತೆಗೇ ಎಂಥ ರಿಕ್ತತೆಯಲ್ಲೂ ಸಂವೇದನಾಶೀಲತೆಯನ್ನು ಬಿಟ್ಟುಕೊಡದೆ ಕಾಪಿಟ್ಟುಕೊಳ್ಳಲೇ ಬೇಕೆಂಬ ಹೆಬ್ಬಯಕೆಯ ಈ ಕವಿಯ ಕವಿತೆಗಳು ಸ್ವಗತದಂತೆ ಮತ್ತು ಮನುಷ್ಯತ್ವದ ಮೇರು ಯಾಚ(ತ)ನೆಗಳಂತೆ ಸರಳವಾದ ಕವಿತೆಗಳಾಗಿ ಅರಳಿವೆ ಮತ್ತು ಮೇಲ್ನೋಟದ ಯಾವ ಸಂಕೀರ್ಣತೆಯನ್ನು ತೋರದೆಯೂ ಆ ಸಂಕೀರ್ಣತೆಯನ್ನೇ ಆಭರಣವನ್ನಾಗಿ ಹೊದ್ದ ಅನುಪಮ ಅನುಭವದ ಸಾರ ಸರ್ವಸ್ವವೇ ಆಗಿ ಬದಲಾಗಿವೆ. ಬದುಕ ಪಯಣದ ನಿರಂತರದ ಹಾದಿಯಲ್ಲೂ ನಿತ್ಯ ಹೊಸತನ್ನೇ ಕಾಣುವ ಬಯಸುವ ಈ ಕವಿ ಮನಸ್ಸು ಅನುಭವದಿಂದ ಮಾಗಿದ ನಿಜದ ಅನುಭಾವವೇ ಆಗಿ ಬದಲಾಗಿದೆ. ಉದಾಹರಣೆಗಾಗಿ “ದೈನಿಕ” ಪದ್ಯದ ಪೂರ್ಣ ಪಾಠವನ್ನು ಗಮನಿಸಿ; ದೈನಿಕ ಅದೇ ಸೂರ್ಯ ಅದೇ ಹಗಲು ಬೆಳಕಿನಾಟ ಬೇರೆ ಬೇರೆ ಅದೇ ಗಿಡ ಅದೇ ಮರ ಎಲೆ ಎಲೆಯ ನವಿರು ಬೇರೆ ಅದೇ ಹಕ್ಕಿ ಅದೇ ಹಾಡು ಪಾಡು ಮಾತ್ರ ಬೇರೆ ಬೇರೆ ಅದೇ ನಡಿಗೆ ಅದೇ ಜನ ಉಸಿರ ಭಾರ ಬೇರೆ ಬೇರೆ ಅದೇ ಅಡುಗೆ ಅದೇ ಸಾರು ಅಂದಂದಿನ ರುಚಿ ಬೇರೆ ಅದೇ ಉಡುಗೆ ಅದೇ ತೊಡುಗೆ ತನುಭಾವ ಬೇರೆ ಬೇರೆ ಅದೇ ನಾನು ಅದೇ ಅವನು ಅನುದಿನದ ಸಾಂಗತ್ಯ ಬೇರೆ ಬೇರೆ ಬೇರೆ. ಪದ್ಯದ ಬಗ್ಗೆ ಬರೆಯುವಾಗ ಅಥವ ಮಾತನಾಡುವಾಗ ಕವಿಯೊಬ್ಬನ ಕವಿತೆಯ ಯಾವುದೋ ಒಂದು ಸಾಲನ್ನು ಕೋಟ್ ಮಾಡುತ್ತ ತನ್ನ ಹೇಳಿಕೆಗಳನ್ನು ಆ ವಿಮರ್ಶಕ/ ಬರಹಗಾರ ಸಮರ್ಥಿಸಿಕೊಳ್ಳುವುದುಂಟು. ಆದರೆ ಈಗ ಮೇಲೆ ಕಂಡಿರಿಸಿದ ಪದ್ಯದ ಯಾವ ಸಾಲನ್ನು ಹೇಳಿದರೂ ಇಡೀ ಪದ್ಯ ಹೇಳಲು ತವಕಿಸುತ್ತಿರುವ ಸಂಗತಿ “ಬೇರೆ ಬೇರೆ ಬೇರೆ” (different, root & totally inter depending) ಅನ್ನುವುದನ್ನು ಮುಟ್ಟಿಸಲಾಗುವುದೇ ಇಲ್ಲ ಮತ್ತು ಅನಿವಾರ್ಯವಾಗಿ ಇಡೀ ಪದ್ಯವನ್ನು ಓದದೇ ಇದ್ದರೆ ಕವಿ ಹೇಳ ಹೊರಟ ಅನುಭೂತಿ ಓದುಗನನ್ನು ತಟ್ಟುವುದೇ ಇಲ್ಲ. ಈ ಇಂಥ ಕಸುಬುದಾರಿಕೆ, ಹೇಳಿಕೆ ಅಥವ ಘೋಷಣೆಗಳ ಮೂಲಕವೇ ಮೊರೆಯುವ ಸಾಮಾನ್ಯ ಕವಿಗೆ ಸಾಧ್ಯವಿಲ್ಲದ ಸಂಗತಿ. ಈ “ತಿಳಿ”ವಳಿಕೆ ಅಗಾಧ ಓದು ಮತ್ತು ಬದುಕಿನ ಆಳ ಅನುಭವಗಳಿಂದ ದಕ್ಕಿದ ಮತ್ತು ಸಾಮಾನ್ಯ ಸಂಗತಿಗಳಿಂದಲೂ “ಅರಿವ”ರೀತಿಯಿಂದ ಮಾಗಿದ ಪದ್ಯಗಳೇ ಆಗಿವೆ. ಹಾಗೆಂದು ಇವು ಮುಕ್ತಕಗಳೂ ಅಲ್ಲ. ಉಪನಿಷತ್ತುಗಳ ಪರಿಚಯ ಇರುವವರಿಗೆ ಅಲ್ಲಿ ಬರುವ ಪ್ರಶ್ನೋತ್ತರಗಳ ಪರಿ ಅರಿತವರಿಗೆ ಇಲ್ಲಿನ ಎಲ್ಲ ಕವಿತೆಗಳೂ ಕವಿತೆಯ ವೇಷ ಧರಿಸಿದ ಅನುಭವ ಪಾರಮ್ಯದ ಬಿಕ್ಕುಗಳು ಎಂದು ಹೇಳಿದರೆ ಈ ಕವಿಗೆ ಸಮಾಧಾನವಾದೀತು. ಏಕೆಂದರೆ ಈ ಕವಿತೆಗಳಲ್ಲಿ ಕೃತ್ರಿಮತೆಯಾಗಲೀ, ಜಿದ್ದಿಗೆ ಬಿದ್ದು ಕವಿತೆ ಬರೆಯಲೇಬೇಕೆಂಬ ಆವುಟವಾಗಲೀ ಅಥವ ಬೇರೆ ಯಾರೂ ಹೇಳದ ಸಂಗತಿಯನ್ನು ತಾನು ಹೇಳಿದ್ದೇನೆ ಎಂಬ ಬಿಂಕವಾಗಲೀ ಎಳ್ಳಷ್ಟೂ ಇಲ್ಲವೇ ಇಲ್ಲ. ” ದಾರಿ” ಹೆಸರಿನ ಪದ್ಯದ ಕಡೆಯ ಸಾಲುಗಳನ್ನು ಗಮನಿಸಿ. ಬಾಗಿ ನೆಲದ ಮೇಲೆ ಚೆಲ್ಲಾಡಿದ್ದ ಕಾಸ ಒಂದೊಂದನ್ನೇ ಹೆಕ್ಕಿ ಮೆಲ್ಲನೆ ಅವಳ ಹೆಗಲು ಬಳಸಿ ಅಂಗೈಯಲ್ಲಿಟ್ಟಾಗ ಥಟ್ಟನೆ ನನ್ನ ಕೈಯನ್ನು ಗಟ್ಟಿ ಹಿಡಿಯುತ್ತಾಳೆ ಇಬ್ಬರ ಉಸಿರೂ ಬೆರೆತು ನಿಟ್ಟುಸಿರಾಗುತ್ತದೆ ಮೆಲ್ಲನೆ ಕೈ ಸಡಿಲಿಸಿ ಮನೆ ದಾರಿ ಹಿಡಿದಾಗ ಹೆಜ್ಜೆಗಳು ವಜ್ಜೆಯಾಗುತ್ತವೆ ಮನುಷ್ಯ ಮನುಷ್ಯರ ಸಾಂಗತ್ಯದ ದ್ವೈತ ಅದ್ವೈತಗಳ ಮತ್ತು ಅಸ್ಮಿತೆ- ಅನುಸಂಧಾನದ ತಾಕಲಾಟಗಳು ‘ಬಯಕೆ’, ‘ಹೀಗೊಂದು ಬೆಳಗು’ ‘ನೆನಪು’ ‘ನಾನೂ ನೀನೂ’ ‘ನಡೆ’ ಇತ್ಯಾದಿ ಪದ್ಯಗಳಲ್ಲಿವೆ. ಇಷ್ಟು ಹೇಳಿದ ಮಾತ್ರಕ್ಕೆ ಸಹಿಸದೇ ಈ ಕವಿಯ ಮೂಲ ಆಶಯವೇನು ಅವರು ಬದುಕಿನ ಬಗೆಗೆ ಕೊಡುವ ವ್ಯಾಖ್ಯೆಯೇನು ಎಂದೂ ರಿಪಿರಿಪಿ ಮಾಡುವವರು ಖಂಡಿತ “ಆ ದಿನ ಈ ದಿನ” ಕವಿತೆಯ ಈ ಸಾಲನ್ನು ಗಮನಿಸಬೇಕು; ಆ ದಿನ.. ಈ ದಿನ.. ಒಬ್ಬೊಬ್ಬರಿಗೂ ಒಂದೇ ದಿನ!!!! ಎಲ್ಲ ದಿನ ಎಲ್ಲರ ದಿನವಾದ ದಿನ.. ಸುದಿನ. ಇದಕ್ಕಿಂತ ಉತ್ತಮವಾದ ಸರ್ವರನ್ನೂ ಒಳಗೊಳ್ಳುವ ಸುದಿನವನ್ನು ಬಯಸುವ ಕವಿ ಮನಸ್ಸು ಇನ್ನು ಹೇಗೆ ತಾನೇ ಲೌಕಿಕದ ತರ ತಮಗಳನ್ನು ಸಹಿಸೀತು? ಹಾಗಾಗಿಯೇ ತೀರ ಸಾಮಾನ್ಯರಲ್ಲೂ ಇರುವ ಅಸಾಮಾನ್ಯ ಸಂಗತಿಗಳ ಶೋಧ ಇವರ ಕಾವ್ಯ ಕಸುಬಿನ ಮೂಲ ಸ್ರೋತ. ಹಾಗೆಂದು ಸ್ವಂತದ ಶೋಧವೂ ಕೂಡ ಬಲು ಮುಖ್ಯವಾದ ಸಂಗತಿಯೇ. ಅದನ್ನು ಈ ಪದ್ಯದಲ್ಲಿ ಗಮನಿಸಿ; ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವೇ ನಾನಲ್ಲ ಎನಿಸುತ್ತಿದೆ ನನಗೆ ಇನ್ನು ಫೋಟೋದಲ್ಲಿರುವ ನಾನು ನಾನಾಗಲು ಹೇಗೆ ಸಾಧ್ಯ? ಈ ಇಂಥ “ತಿಳಿ”(ಳು ಅಲ್ಲವೇ ಅಲ್ಲ)ವಳಿಕೆ ಬರುವುದು ನಿರಂತರವಾಗಿ ಕವಿ ಸಾಮಾಜಿಕನಾದಾಗ ಮಾತ್ರ ಸಾಧ್ಯ ಆಗುವ ಮಾತು. ಎಲ್ಲರಿಗೂ ತಿಳಿದಂತೆ ಶ್ರೀಮತಿ ಉಮಾ ಬಾಳ ಸಂಗಾತಿ ಮುಕುಂದ್ ಪ್ರಖ್ಯಾತ ಫೋಟೋಗ್ರಾಫರ್. ಅವರ ಕಪ್ಪು ಬಿಳುಪಿನ ಛಾಯಾಚಿತ್ರಗಳಿಗೆ ಸೆರೆ ಸಿಕ್ಕದ ಖ್ಯಾತನಾಮರು ವಿರಳಾತಿವಿರಳ. ” ಮುಖ ಮುದ್ರೆ” ಅವರ ಛಾಯಾಚಿತ್ರಗಳ ವಿಶೇಷ ಆಲ್ಬಂ. ಛಾಯಾ ಚಿತ್ರ ತೆಗೆಯುವುದು ಕೂಡ ಸವಾಲಿನ ಕೆಲಸವೇ ಹೌದು. ಒಂದು ಮಿಂಚಿನ ಕ್ಷಣದಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನೇ ಇಡಿಕರಿಸಿದಂಥ ಫೋಸು ಸಿಕ್ಕಬಹುದು. ಆ ಕ್ಷಣವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುವುದೇ ಛಾಯಾಗ್ರಾಹಕನ ಸಾಹಸ. ಆದರೆ ಈ ಕ್ಷಣ ತನ್ನದು ಎಂದು ಅವನಿಗೆ ಗೊತ್ತಿರಬೇಕಿದ್ದರೆ ತಾನು ಫೋಟೋ ತೆಗೆಯುವ ವ್ಯಕ್ತಿಯ ಗುಣ, ಸ್ವಭಾವ, ಚಿಂತನಾ ವೈಶಿಷ್ಟ್ಯಗಳ ಬಗ್ಗೆ ಆತ ವಿಶೇಷವಾಗಿ ತಿಳಿದುಕೊಂಡಿರಬೇಕಾಗುತ್ತದೆ. ಮಾತ್ರವಲ್ಲದೆ ತನ್ನ ಗುರಿಯ ಬಗ್ಗೆ ಖಚಿತತೆ ಆತನಲ್ಲಿ ಇರಬೇಕಾಗುತ್ತದೆ. ಇದೆಲ್ಲದರಲ್ಲೂ ಮುಕುಂದರಲ್ಲಿ ತಜ್ಞತೆ ಇರುವುದರಿಂದಲೇ “ಮುಖ ಮುದ್ರೆ”ಯಲ್ಲಿರುವ 50 ಮಂದಿ ಸಾಹಿತಿಗಳ, ರಂಗಕರ್ಮಿಗಳ ಮತ್ತು ಚಿತ್ರ ರಂಗಗಳಲ್ಲಿ ದುಡಿದ ಮಹನೀಯರ ಚಿತ್ರಗಳ ಜೊತೆಗೆ ಅವರ ಕುರಿತ ಟಿಪ್ಪಣಿ ಕೂಡ ಈ ಪುಸ್ತಕದಲ್ಲಿ ಇರುವುದು ವಿಶೇಷ. ಸೂಕ್ಷ್ಮತೆ ಮತ್ತು ವ್ಯಕ್ತಿಯೊಬ್ಬರ ಸಹಜತೆಯನ್ನು ಚಿತ್ರಕ್ಕಿಳಿಸುವ ವ್ಯವಧಾನ ಮುಕುಂದರಿಂದ ಉಮಾ ಕಲಿತರೋ ಅಥವಾ ಮುಕುಂದರ ಜೊತೆಗೇ ಇರುತ್ತಾ ಇರುತ್ತಾ ಅವರ ಪಟಗಳಿಗೆ ಆಹ್ವಾನಿತ ಗಣ್ಯರನ್ನು ರೂಪದರ್ಶಿಯಾಗಿಸುವ ಕಾಯಕದಲ್ಲಿ ಉಮಾ ಕಂಡುಕೊಂಡ ಅನುಭವವೆ ಹೀಗೆ ಬದಲಾಯಿತೋ ಈ ದಂಪತಿಗಳೇ ಹೇಳಬೇಕು. ಹೆಗ್ಗೋಡಿನ ನೀನಾಸಂ ಶಿಬಿರ, ಬೆಂಗಳೂರಿನ ಬಹುತೇಕ ಸಾಹಿತ್ಯಕ ಕಾರ್ಯಕ್ರಮಗಳು, ಡಾ.ಎಚ್ಚೆಸ್ವಿ ನಡೆಸಿ ಕೊಡುತ್ತಿದ್ದ ” ಅಭ್ಯಾಸ” ತರಗತಿಗಳಲ್ಲಿ ಈ ದಂಪತಿಗಳನ್ನು ಕಾಣದೇ ಉಳಿದವರಿಲ್ಲ. ಹಾಗೆಂದ ಮಾತ್ರಕ್ಕೆ ದಾಂಪತ್ಯದ ಏಳು ಬೀಳುಗಳು, ಸರಸ ವಿರಸಗಳು ಇವರನ್ನು ಬಾಧಿಸದೇ ಬಿಡದು. ಅದನ್ನು ಕವಿ “ನಡೆ” ಅನ್ನುವ ಹೆಸರಿನ ಪದ್ಯದಲ್ಲಿ ಹೀಗೆ ಹೇಳುತ್ತಾರೆ; ನಡೆ ಎಲ್ಲೋ ಹುಟ್ಟಿದ ಅವನು ಮತ್ತೆಲ್ಲೋ ಹುಟ್ಟಿದ ನಾನು ಹೇಗೋ ಬೆಸೆದು ಬಂಧ ಶುರುವಾದ ಪಯಣ ಸಾಗಿದೆ ಮೂರು ದಶಕಗಳಿಂದ ಅಂದ ಮಾತ್ರಕ್ಕೆ ನಾವೇನು ಅಪರೂಪವಲ್ಲ ಸಿಟ್ಟು ಸೆಡವು, ಸಣ್ಣತನ ಎಲ್ಲವೂ ಇದ್ದು ಶರಂಪರ ಜಗಳವಾಡಿ ಮುಖ ತಿರುಗಿಸಿ ಮಾತು ಬಿಟ್ಟು ವಾರ ಕಳೆವಷ್ಟರಲ್ಲಿ ಸಾಕೆನಿಸಿ, ‘ಟೋಕಿಯೋ ಸ್ಟೋರಿ’ ಸಿನೆಮಾ ನೋಡೋಣವೇ ಇಂದು ಮತ್ತೆ? ಎಂದು ಕರೆದಾಗ ಅವನು, ಸೊರಗಿ ಸುಕ್ಕಿಟ್ಟ ಶುಂಠಿ ಕೊಂಬೊಂದು ಕೊನರಿದೆ ಕಾಣು ಬಾ.. ಎಂದು ಕರೆದಾಗ ನಾನು ಮರೆತು ಬಿಡುತ್ತೇವೆ ಮಾತು ಬಿಟ್ಟದ್ದನ್ನು ಮುಂದಾಗಿರಬಹುದೊಮ್ಮೆ ಅವನು ಮತ್ತೊಮ್ಮೆ ನಾನು. ಸಾಲ, ಸೋಲುಗಳಲ್ಲಿ ರೋಗ ರುಜಿನಗಳಲ್ಲಿ ದುಃಖ ದುಮ್ಮಾನದಲಿ ಹಮ್ಮು ಬಿಮ್ಮುಗಳಳಿದು ಮುಂದುವರಿದಿದೆ ನಡಿಗೆ ಹೊರಳಿ ನೋಡುತ್ತೇವೆ ಕಂಡ ಕನಸುಗಳನ್ನು ನೆನೆನೆನೆದು ನಗುತ್ತೇವೆ ಹಾರುಗುದುರೆಯನೇರಿ ಹಾರಾಡಿ ಬಿದ್ದದ್ದನ್ನು. ವಸಂತಗಳುರುಳಿ.. ಕೂದಲು ನೆರೆತು ಮಂಡಿ ಸವೆದರೂ ನಡೆಯುತ್ತಿದ್ದೇವೆ ನಿಂತರೂ ಆಗಾಗ ಜೊತೆಗೇ. ರಾಮಾನುಜನ್ ತಮ್ಮ ಯಾವುದೋ ಸಂಕಲನದ ಬಗ್ಗೆ ಮಾತನಾಡುತ್ತ ಆಡುತ್ತ “ಇದು ಯಾಕೋ ಮಾತು ಅತಿಯಾಯಿತು” ಎನ್ನುತ್ತಾರೆ. ಹಾಗೆ ನೀವು ಹೇಳುವ ಮೊದಲು ಮತ್ತು ಸೀಮಿತ ಚೌಕಟ್ಟಿನ ಈ ಅಂಕಣದ ಬರಹವನ್ನು ಎಂದಿನ ಹಾಗೆ ಕವಿಯ ನಾಲ್ಕೋ ಐದೊ ಕವಿತೆಗಳನ್ನು ಆಯ್ದು ಓದಿ ಎಂದು ಹೇಳುವ ಬದಲು ಉಮಾ ಮುಕುಂದರ ಫೇಸ್ಬುಕ್ ಅಕೌಂಟನ್ನು ತೆರೆದು ಅವರ ಎಲ್ಲ ಕವಿತೆಗಳನ್ನು ಓದಿಕೊಂಡರೆ ಸಿಕ್ಕುವ ಅನುಭೂತಿ ನಿಮ್ಮದೂ ಆಗಲಿ ಎಂದು ಹೇಳುತ್ತಲೇ ಹಾಗೆ ಪುರುಸೊತ್ತು ಇಲ್ಲದವರು ಓದಲೇ ಬೇಕಾದ ಐದು ಕವಿತೆಗಳನ್ನು ಇಲ್ಲಿ ಕೊಟ್ಟಿದ್ದೇನೆ. ಮತ್ತು “ಕಡೇ ನಾಲ್ಕು ಸಾಲು” ಸಂಕಲನವು ಬಹುರೂಪಿ ಅಂತರ್ಜಾಲ ಮಳಿಗೆಯಲ್ಲಿ ಮಾರಾಟಕ್ಕೆ ಇದೆ ಎಂದೂ ಸೂಚಿಸಬಯಸುತ್ತೇನೆ ———————————————————————– . ಉಮಾ ಮುಕುಂದ್ ಅವರ ಕವಿತೆಗಳು ೧. ಅಲ್ಲೂ.. ಇಲ್ಲೂ.. ಅಂದೊಂದು ದಿನ ಅವಳು ಜೀನ್ಸು, ಸ್ಲೀವ್ ಲೆಸ್ ಟಾಪು ತೊಟ್ಟು ಕೂದಲಿಳಿಬಿಟ್ಟು ಬೀಸಿ ನಡೆದವಳು ಥಟ್ಟನೆ ಹಿಂತಿರುಗಿ ತುರುಬುಕಟ್ಟಿ ಸೀರೆಯುಟ್ಟು ದೊಡ್ಡ ಕುಂಕುಮ ತೊಟ್ಟಳು ಇನ್ನೊಂದು ದಿನ ಅವರು ಇದ್ದಕ್ಕಿದ್ದಂತೆ ಬಂದಿಳಿದಾಗ ನೀರುಳ್ಳಿ, ಬೆಳ್ಳುಳ್ಳಿ, ಮಸಾಲೆ ಬೆರೆಸಿ ಖಮ್ಮನೆ ಮಾಡಿಟ್ಟ ಖಾದ್ಯವ ಮುಚ್ಚಿಟ್ಟು ಮೆಣಸು ಜೀರಿಗೆ ಸಾರು ಮಾಡುಣಿಸಿದಳು ಮತ್ತೊಂದು ದಿನ ಇವರು ಹಾಡು ಹಾಡೆಂದು ಕಾಡಿದಾಗ ಒತ್ತರಿಸಿ ಬಂದ ‘ನಾನು ಬಳ್ಳಿಯ ಮಿಂಚ’ ಕತ್ತಲ್ಲೆ ಕತ್ತರಿಸಿ ‘ರಾಮ ಮಂತ್ರವ..’ ಹಾಡಿ ಮುಗಿಸಿದಳು ಕೊನೆಗೊಂದು ದಿನ ಸೋನೆ ಮಳೆ ಸಂಜೆ.. ಬಿಸಿಬಿಸಿ ಚಳಿ ಕೋಣೆ ಬಾಗಿಲು ಜಡಿದು, ತೆರೆದಿಟ್ಟು ಕಿಟಕಿ ಸಿಪ್ಪು ಸಿಪ್ಪಾಗಿ ಬಿಯರು ಚಪ್ಪರಿಸುವಾಗ ಈಗಿಂದೀಗಲೆ ನಿಂತೇಹೋದರೆ ಉಸಿರು ಏನೆಂದುಕೊಳ್ಳುವರೊ ಜನರು ಎಂದೆಣಿಸಿ.. ಎಣಿಸಿ.. ಧಡಕ್ಕನೆದ್ದು ಬಾಗಿಲು ತೆರೆದಿಟ್ಟು ‘ಜ಼ಿಂದಗಿ ಭರ್ ಭೂಲೇಂಗಿ ನಹಿ..’ ಎಂದು ದೊಡ್ಡಕೆ ಹಾಡತೊಡಗಿದಳು. ೨. ಸೊಪ್ಪಿನವಳು ನಟ್ಟ ನಡು ಹಗಲು ಹೊತ್ತು
ಅಂಕಣ ಬರಹ ಸುಜಾತಾ ಎನ್. ರವೀಶ್ ಸುಜಾತಾ ಎನ್. ಮೈಸೂರಿನಲ್ಲಿಯೇ ಹುಟ್ಟಿ ಬೆಳೆದದ್ದು .ಬಿಕಾಂ ಪದವೀಧರೆ. ಅನಂತರ ಅಂಚೆ ದೂರಶಿಕ್ಷಣದ ಮೂಲಕ ಎಂಕಾಂ ಪದವಿ ಪೂರೈಸಿದರು. ಚಿಕ್ಕಂದಿನಿಂದ ಓದುವ ಹವ್ಯಾಸ ಇತ್ತು. ಶಾಲೆ ಕಾಲೇಜು ಪತ್ರಿಕೆಗಳಲ್ಲಿ ಕಥೆ ಕವನಗಳು ಪ್ರಕಟವಾದವು. ಭಾರತೀಯ ಜೀವ ವಿಮಾ ನಿಗಮ ಮೈಸೂರು ಶಾಖೆ ೫ ರಲ್ಲಿ ವೃತ್ತಿ. ಈ ಮಧ್ಯೆ ಸುದೀರ್ಘ ಮೂವತ್ತು ವರ್ಷಗಳ ಅವಧಿಯಲ್ಲಿ ಓದುವ ಹವ್ಯಾಸ ಮುಂದುವರಿದಿದ್ದರೂ ಏಕೋ ಬರವಣಿಗೆ ಕೈ ಹಿಡಿದಿರಲಿಲ್ಲ. ಇತ್ತೀಚೆಗೆ ಮೂರು ವರ್ಷಗಳಲ್ಲಿ ಎಫ್ .ಬಿ. , ವಾಟ್ಸಾಪ್ ಗ್ರೂಪುಗಳಲ್ಲಿ ಸಕ್ರಿಯವಾದರು. ನಂತರ ,ಕವನಗಳ ಕೃಷಿ ಮತ್ತೆ ಮೊದಲಾಗಿ ಈಗ ಐನೂರಕ್ಕೂ ಹೆಚ್ಚು ಕವನಗಳು, ೨೦೦ ಗಝಲ್ಗಳು ರಚಿಸಿದ್ದಾರೆ. ರುಬಾಯಿ, ಟಂಕಾ ,ಹಾಯಿಕು, ವಚನ ಇನ್ನಿತರ ಪ್ರಕಾರಗಳು ರಚಿಸಿದ್ದಾರೆ. ಈಗ ಸೋದರ ಮುತ್ತುಸ್ವಾಮಿಯವರ ಪ್ರೋತ್ಸಾಹದಶ್ರೀಯುತ ನಾಗೇಶ ಮೈಸೂರು ಅವರು ಸಂಪಾದಿಸಿದ “ನಾವು ನಮ್ಮವರು” ಕವನ ಸಂಕಲನದಲ್ಲಿನ ಅವರ ‘ ನನ್ನ ಮುಖವಾಡಗಳು’ ಎಂಬ ಕವನವನ್ನು ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿಎಸ್ ಸಿ ತರಗತಿಯ ಪೂರಕ ಪಠ್ಯವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇವರ ಪ್ರಥಮ ಸಂಕಲನ “ಅಂತರಂಗದ ಆಲಾಪ” ೭೬ ಕವನಗಳ ಸಂಕಲನವಾಗಿದ್ದು ಮೇ ೨೦೧೯ ರಲ್ಲಿ ಲೋಕಾರ್ಪಣೆಗೊಂಡಿದೆ .ಸಾಹಿತ್ಯೋತ್ಸವ ಎಂಬ ಮುಖ ಹೊತ್ತಿಗೆಯ ಸಾಹಿತ್ಯಿಕ ಗುಂಪಿನ ನಿರ್ವಾಹಕರಲ್ಲಿ ಒಬ್ಬಳಾಗಿದ್ದಾರೆ. ಅಲ್ಲಿನ ಸಾಪ್ತಾಹಿಕ ಕವನ ಸ್ಪರ್ಧೆ “ಪದ ಪದ್ಯೋತ್ಸವ”ದ ನಿರ್ವಹಣೆ ನಡೆಸುತ್ತಿದ್ದಾರೆ ಮುಖಾಮುಖಿಯಲ್ಲಿ ಈ ಸಲ ಸುಜಾತ ರವೀಶ್ ಮೈಸೂರು ಅವರನ್ನು ಮಾತಾಡಿಸಿದ್ದಾರೆ ನಾಗರಾಜ ಹರಪನಹಳ್ಳಿ. ” ನಾನು ದೇವರನ್ನು ಖಂಡಿತಾ ನಂಬುತ್ತೇನೆ “ ಕವಿತೆಗಳನ್ನು ಯಾಕೆ ಬರೆಯುತ್ತೀರಿ ನನ್ನ ಮನಸ್ಸಿನ ನೋವನ್ನಾಗಲಿ, ನಲಿವನ್ನಾಗಲಿ ಆಂತರಿಕ ತುಮುಲ ದ್ವಂದ್ವಗಳನ್ನಾಗಲಿ, ಒಂದು ವಿಷಯದ ಬಗೆಗಿನ ಜಿಜ್ಞಾಸೆಯಾಗಲಿ, ಕೆಲವೊಮ್ಮೆ ಸಣ್ಣಪುಟ್ಟ ಸಂಭ್ರಮಗಳನ್ನಾಗಲಿ, ಇವುಗಳನ್ನೆಲ್ಲಾ ಹೊರಹಾಕುವ ಹಂಚಿಕೊಳ್ಳುವ ಮಾಧ್ಯಮ ನನಗೆ ಕವಿತೆ . ಕವಿತೆ ಹುಟ್ಟುವ ಕ್ಷಣ ಯಾವುದು ? ಮನಸ್ಸಿನ ಭಾವನೆಗಳನ್ನು ಒಳಗೇ ಅದುಮಿಟ್ಟುಕೊಳ್ಳಲಾಗದೇ ಈ ಕ್ಷಣ ಪದಗಳಲ್ಲಿ ಹೊರಹಾಕಲೇಬೇಕು , ಅವು ಅದಮ್ಯ ಎನಿಸಿದ ಆ ಹೊತ್ತು .ಇದ್ದಕ್ಕಿದ್ದ ಹಾಗೆ ಪದಪುಂಜಗಳು ತಲೆಯಲ್ಲಿ ಮೂಡಿ ಬಿಡುತ್ತವೆ. ಆ ಕ್ಷಣ ಅವುಗಳನ್ನು ಬರೆದಿಡಬೇಕು ನಂತರ ಬರೆವೆನೆಂದರೆ ಆ ಕ್ಷಣದ ತೀವ್ರತೆ ಅದೇ ಪದಗಳು ಮತ್ತೆ ಬರುವುದಿಲ್ಲ . ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? . ಹೆಚ್ಚಾಗಿ ನನ್ನ ಕವನಗಳೆಲ್ಲ ಭಾವನಾಜಗತ್ತಿಗೆ ಸಂಬಂಧಪಟ್ಟಂಥವು. ನಿತ್ಯ ಜೀವನದ ಸುಖ ದುಃಖಗಳು. ಸುತ್ತಣ ಪ್ರಕೃತಿಯ ದೃಶ್ಯಗಳು. ಒಮ್ಮೊಮ್ಮೆ ಸಮಾಜದಲ್ಲಿ ನಡೆಯುವ ಅನ್ಯಾಯ ಅನಾಚಾರಗಳು ನನ್ನ ಕವಿತೆಗೆ ಕಾರಣವಾಗಿವೆ . ಕೆಲವೊಂದು ವಸ್ತುಗಳು ಸಂಧರ್ಭಗಳು ಹಾಗೂ ಸ್ಥಳಗಳು ಕವಿತೆಗೆ ವಸ್ತುವಾಗಿಸಿದೆ ಪುರಾಣದ ಪಾತ್ರಗಳು ನನ್ನ ಮತ್ತೊಂದು ಮೆಚ್ಚಿನ ವಿಷಯ ಊರ್ಮಿಳೆ, ಗಾಂಧಾರಿ, ಕೈಕೇಯಿ, ಅಹಲ್ಯೆ, ಭೀಷ್ಮ, ಕರ್ಣ ಇವರೆಲ್ಲ ನನ್ನ ಕವನದಲ್ಲಿ ಬಂದು ಹೋಗಿದ್ದಾರೆ . ಆದರೆ ಅನುಭವದ ಕೊರತೆಯೋ ನನ್ನ ದೌರ್ಬಲ್ಯವೋ ಗೊತ್ತಿಲ್ಲ ಮನಸ್ಸಿನ ಭಾವನೆ ತುಮುಲಗಳೇ ಹೆಚ್ಚಾಗಿ ನನ್ನನ್ನು ಕಾಡಿ ಕವಿತೆ ಬರೆಸುತ್ತವೆ. ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಖಂಡಿತ… ಕವಿತೆಗಳು ಬಾಲ್ಯ ಹರೆಯದ ಮೆಲುಕುಗಳು ಅನುಭವದ ಪಡಿ ನೋಟಗಳೇ ಅಗಿವೆ .ಮುಗ್ಧತೆ ಬೆರಗು ತುಂಬಿದ ನೋಟ ಪ್ರಪಂಚದೆಡೆಗಿನ ಅಚ್ಚರಿ ಇದೆಲ್ಲ ಬಾಲ್ಯದ ಕಾಣಿಕೆಯಾದರೆ ,ನನ್ನ ಹೆಚ್ಚಿನ ಪ್ರೇಮ ಕವಿತೆಗಳಲ್ಲಿ ಹರೆಯ ಇಣುಕಿ ಹಾಕಿದೆ . ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ನಿಸ್ವಾರ್ಥ ಹಾಗೂ ಜನಹಿತಕ್ಕಾಗಿ ಮಿಡಿಯುವುದು ಇದು ರಾಜಕೀಯಕ್ಕೆ ಬರುವವರ ಮೂಲಭೂತ ಮಂತ್ರ. ಆದರೆ ಅದೇ ಕಣ್ಮರೆಯಾಗುತ್ತಿರುವ ವಿಪರ್ಯಾಸದ ದುರಂತ ಕಣ್ಣಿಗೆ ಕಟ್ಟುತ್ತಿದೆ ವಿಷಾದ ತರಿಸುತ್ತಿದೆ . ಜನಗಳ ಏಳಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡ ನಾಯಕರುಗಳ ಕೊರತೆ ನಮ್ಮಲ್ಲಿ ಕಾಡುತ್ತಿದೆ ಅಂತಹ ನಾಯಕರನ್ನು ಬೆಳೆಸಿ ಆರಿಸುವುದು ನಮ್ಮಗಳ ಕರ್ತವ್ಯವೂ ಎಂಬುದು ನೆನಪಿಗೆ ಬರುತ್ತದೆ . ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ನಾನು ದೇವರನ್ನು ಖಂಡಿತಾ ನಂಬುತ್ತೇನೆ ದೇವರು ಎಂಬುದು ಒಂದು ನಂಬಿಕೆ ಹಾಗೂ ಗಮ್ಯವಾದರೆ ಧರ್ಮಗಳು ಅದನ್ನು ಸೇರುವ ಮಾರ್ಗಗಳು. ದಾರಿ ಯಾವುದಾದರೇನು ಗಮ್ಯವನ್ನೇ ಮುಟ್ಟುತ್ತವೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಸಾಂಸ್ಕೃತಿಕ ವಾತಾವರಣದ ಪರಿಭಾಷೆ ಬದಲಾಗುತ್ತಿದೆ ಮೊದಲೆಲ್ಲಾ ಮುಖತಃ ನಡೆಯುತ್ತಿದ್ದ ಕಾರ್ಯಕ್ರಮಗಳು ಈಗ ದೂರದರ್ಶನ ಹಾಗೂ ಆನ್ ಲೈನ್ ಮೂಲಕ ನಡೆಯುತ್ತಿವೆ. ಎಲ್ಲೋ ವೈಯುಕ್ತಿಕ ಸಂಪರ್ಕ ಹಾಗೂ ಅದರ ಮೂಲಕ ನಡೆಯುತ್ತಿದ್ದ ವಿಶಿಷ್ಟ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಸಂಗೀತವಾಗಲಿ ನೃತ್ಯವಾಗಲಿ ಕಲೆಯ ಪ್ರದರ್ಶನಕ್ಕಿಂತ ತಾಂತ್ರಿಕತೆಯ ಅದ್ಧೂರೀಕರಣ ಕಣ್ಣಿಗೆ ರಾಚುತ್ತದೆ. ವೈಭವ ಹಾಗೂ ಪ್ರದರ್ಶನಪ್ರಿಯತೆ ಹೆಚ್ಚಾಗುತ್ತಿದೆ. ಕಲೆಗಾಗಿ ಕಲೆ ಎನ್ನುವುದು ಮಾಯವಾಗಿ ಎಲ್ಲದರಲ್ಲೂ ವಾಣಿಜ್ಯೀಕರಣದ ಭರಾಟೆ . ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ತೀರಾ ಇತ್ತೀಚೆಗೆ 2 ವರ್ಷದಿಂದ ಬರೆಯುತ್ತಾ ಬಂದಿರುವ ನನಗೆ ಅದರ ಪರಿಚಯ ಇಲ್ಲ .ಬರೆಯುವ ಸಾಹಿತ್ಯ ಗಟ್ಟಿಯಾಗಿದ್ದರೆ ಇಂದಲ್ಲ ನಾಳೆ ಮೌಲ್ಯ ಇದ್ದೇ ಇದೆ ಎನ್ನುವ ನಂಬಿಕೆ ಇದೆ. ಇನ್ನು ಪರಿಷತ್ತು ಹಾಗೂ ಇನ್ನಿತರ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ಹೇಳ ಬೇಕೆಂದರೆ ಹಿಡಿಯಬೇಕಾದ ಹಾದಿಯನ್ನು ಬಿಟ್ಟು ಬೇರೆತ್ತಲೋ ಸಾಗುತ್ತಿದೆ ಅಂತ ಅನ್ನಿಸುತ್ತೆ . ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉನ್ನತ ಪರಂಪರೆ ಸಂಸ್ಕ್ರತಿಯ ದೇಶ ನನ್ನದು ಅಂತ ಬರಿ ಗತ ಇತಿಹಾಸದ ಬಗ್ಗೆ ಗರ್ವ ಪಡದೆ ಈ ಯುಗದಲ್ಲಿ ಹೇಗೆ ಮುನ್ನಡೆಯಬೇಕೆಂಬ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ. ಹೊಸ ಚಿಗುರು ಹಳೆ ಬೇರು ಎಂಬ ತತ್ವದಡಿಯಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸುವ ಕೆಲಸ ಆಗಬೇಕಿದೆ. ಆದರೆ ಸ್ವಹಿತಾಸಕ್ತಿ ರಾಜಕೀಯ ದೊಂಬರಾಟಗಳ ಮಧ್ಯೆ ಮೂಲೋದ್ದೇಶ ಮರೆತು ಕವಲುದಾರಿಯಲ್ಲಿ ಸಾಗುತ್ತಿದೆ ಎನ್ನಿಸುತ್ತದೆ . ಜನರಲ್ಲಿ ಇನ್ನೂ ಹೆಚ್ಚಿನ ದೇಶಪ್ರೇಮ ಜಾಗೃತಿ ಮೂಡಿಸಬೇಕು. ಆದರೆ ಮಾಡುವರ್ಯಾರು ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು ಎಂಬ ಹಾಗೆ. ಸ್ವಾತಂತ್ರ್ಯ ಪೂರ್ವದಲ್ಲಿ ಮೂಡಿದ್ದ ಐಕ್ಯತೆ ಅದೇ ಕೆಚ್ಚು ಈಗಲೂ ಬಂದರೆ ನಾವು ಏನನ್ನಾದರೂ ಸಾಧಿಸಬಹುದು . ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ನನಗೇನೂ ಅಂಥ ದೊಡ್ಡ ಕನಸುಗಳಿಲ್ಲ. ಇನ್ನೂ ಇನ್ನೂ ಓದುತ್ತಾ ಮತ್ತಷ್ಟು ಹೆಚ್ಚಿನ ಮೌಲಿಕ ಸಾಹಿತ್ಯ ರಚಿಸಬೇಕೆಂಬ ಬಯಕೆ ಅಷ್ಟೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಕನ್ನಡದಲ್ಲಿ ಕುವೆಂಪು ಮತ್ತು ಎಸ್ ಎಲ್ ಭೈರಪ್ಪ ಅವರು. ಕುವೆಂಪು ಅವರು ವರ್ಣಿಸುವ ಪ್ರಕೃತಿ ಅವರ ಪದಗಳ ಪ್ರಯೋಗ ಕುತೂಹಲ ಮೂಡಿಸುತ್ತವೆ ಮತ್ತೆ ಮತ್ತೆ ಓದಬೇಕೆನಿಸುತ್ತದೆ .ಭೈರಪ್ಪನವರ ಯೋಚನಾಲಹರಿ ಅವರ ಪಾತ್ರಗಳ ಸಂಕೀರ್ಣತೆ ಯೋಚನೆಗಳಿಗೆ ಅವರು ಕೊಡುವ ಸ್ಪಷ್ಟತೆ ಮತ್ತು ಅವರು ಕಥೆ ಕಟ್ಟುವ ರೀತಿ ತುಂಬಾ ಇಷ್ಟವಾಗುತ್ತದೆ. ಇಂಗ್ಲಿಷಿನಲ್ಲಿ ಹೆಚ್ಚು ಓದಿಕೊಂಡಿಲ್ಲ ಆದರೆ ಶೇಕ್ಸ್ ಪಿಯರ್ ಇಷ್ಟ . ಈಚೆಗೆ ಓದಿದ ಕೃತಿಗಳಾವವು? ಡಾ ರಾಜಶೇಖರ ಜಮದಂಡಿ ಅವರು ಸಂಪಾದಿಸಿದ ಪ್ರಮುಖ ನೂರು ಲೇಖಕರ ಅಪ್ಪನ ಬಗ್ಗೆ ಬರೆದ ಆಪ್ತ ಬರಹಗಳು ” ಅಪ್ಪನ ಹೆಗಲು “. ತಮ್ಮ ತಂದೆಯವರ ಬಗ್ಗೆ ಪ್ರಮುಖ ಲೇಖಕರುಗಳು ಬರೆದ ಲೇಖನವನ್ನು ಸಂಪಾದಿಸಿದ್ದಾರೆ ಓದಲು ಆಸಕ್ತಿದಾಯಕವಾಗಿದೆ ದಿ” ಲಾಸ್ಟ್ ಲೆಕ್ಚರ್” ರ್ಯಾಂಡಿ ಪಾಶ್ ಅವರು ಬರೆದು ಕನ್ನಡಕ್ಕೆ ಉಮೇಶ್ ಅವರು ಅನುವಾದಿಸಿದ ಪುಸ್ತಕ. ಕ್ಯಾನ್ಸರ್ ನಿಂದ ಇನ್ನೇನು ಸಾವು ಖಚಿತ ಎನ್ನುವ ವ್ಯಕ್ತಿಯೊಬ್ಬ ತನ್ನ ಮಕ್ಕಳಿಗಾಗಿ ತನ್ನ ಆಲೋಚನೆಗಳನ್ನು ತೆರೆದಿಡುವ ಹಾಗೂ ಜೀವನದ ಸಾರವನ್ನು ಶಬ್ದಗಳಲ್ಲಿ ಹಿಡಿದಿಡುವ ಅಪರೂಪದ ಪ್ರಯತ್ನ. ಮನಸ್ಸಿಗೆ ತುಂಬಾ ತಟ್ಟಿತು ನಿಮಗೆ ಇಷ್ಟವಾದ ಕೆಲಸ ಯಾವುದು? ಓದು ಬರವಣಿಗೆ ಬಿಟ್ಟರೆ, ಅಡುಗೆ ಮಾಡುವುದು ನಿಮಗೆ ಇಷ್ಟವಾದ ಸ್ಥಳ ಯಾವುದು ? ಕುಪ್ಪಳ್ಳಿಯ ಕವಿಶೈಲ. ತುಂಬಾ ವರ್ಷಗಳಿಂದ ನೋಡಬೇಕೆಂದಿದ್ದೆ. ಈಗ ಕಳೆದ 2 ವರ್ಷದಲ್ಲಿ 2 ಬಾರಿ ಸಂದರ್ಶಿಸಿದ್ದೇನೆ. ಆ ಮನೆಯ ಗಹನ ಗಂಭೀರತೆ, ಕವಿ ಶೈಲ ದಲ್ಲಿನ ಒಂದು ರೀತಿಯ ನಿಗೂಡತೆ, ಹರಡಿ ಹಾಸಿ ಚೆಲ್ಲಿದ ಪ್ರಕೃತಿ ಸೌಂದರ್ಯ ಎಲ್ಲಾ ನನ್ನ ಮನಸ್ಸನ್ನು ಸೆರೆಹಿಡಿದಿವೆ. ಅಲ್ಲಿ ಓಡಾಡುವಾಗಲೆಲ್ಲ ಇಲ್ಲಿ ರಸಋಷಿ ಗಳು ನಡೆದಿದ್ದರು ಎಂಬ ಭಾವವೇ ಒಂದು ರೀತಿಯ ಪುಳಕ ತರುತ್ತದೆ . ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ಹಿಂದಿಯ ದೋ ಆಂಖೆ ಬಾರಹ್ ಹಾಥ್ ಹಾಗೂ ಕನ್ನಡದ ಶರಪಂಜರ ನೀವು ಮರೆಯಲಾರದ ಘಟನೆ ಯಾವುದು? ಯಾವುದೇ ವಶೀಲಿ ಶಿಫಾರಸ್ಸು ಇಲ್ಲದೆ “ನಾವು ನಮ್ಮವರು” ಎಂಬ ಸಂಪಾದಿತ ಸಂಕಲನದಲ್ಲಿನ ನನ್ನ “ಮುಖವಾಡಗಳು” ಕವನವನ್ನು ಕುವೆಂಪು ವಿಶ್ವವಿದ್ಯಾಲಯದ ಎರಡನೇ ಬಿ ಎಸ್ಸಿಯ ಪೂರಕ ಪಠ್ಯವಾಗಿ ಆಯ್ಕೆಮಾಡಿದ್ದು. ತುಂಬಾ ಖುಷಿ ಕೊಟ್ಟ ಸಂಗತಿಯೂ ಹೌದು ಹೇಳಲೇ ಬೇಕಾದ ಕೆಲ ಸಂಗತಿಗಳು; ಕಾಲೇಜು ಓದುವ ಕಾಲದಲ್ಲಿ ಬರೆಯುವ ಹವ್ಯಾಸ ಇತ್ತು .ಅದನ್ನು ಮುಂದುವರಿಸಿಕೊಂಡು ಹೋಗಲು ಆಗದಿದ್ದುದಕ್ಕೆ ಖೇದವಿದೆ. ಅದಕ್ಕಾಗಿಯೇ ಈಗ ಬರೆಯುವ ಆಸಕ್ತಿಯಿರುವವರಿಗೆ “ಸಾಹಿತ್ಯೋತ್ಸವ” ಎಂಬ ಮುಖಹೊತ್ತಿಗೆಯ ಗುಂಪಿನ ನಿರ್ವಾಹಕಿಯಾಗಿ ಕೈಲಾದಷ್ಟು ಪ್ರೋತ್ಸಾಹ ನೀಡುತ್ತಿದ್ದೇನೆ . ಇಷ್ಟು ಬರೆಯುವ ತುಡಿತ ಮಿಡಿತ ಇಟ್ಟುಕೊಂಡು ಇಷ್ಟು ದಿನ ಬರೆಯದೆ ಹೇಗೆ ಸುಮ್ಮನಿದ್ದೆ ಎಂದು ನನ್ನ ಬಗ್ಗೆ ನನಗೇ ಆಶ್ಚರ್ಯ ಉಂಟಾಗುತ್ತದೆ. ಈಗಂತೂ ದಿನಕ್ಕೆ ಏನಾದರೂ ಚೂರು ಬರೆಯದಿದ್ದರೆ ಆಗುವುದೇ ಇಲ್ಲ . ಇನ್ನು ನನ್ನ ಬರವಣಿಗೆಯ ಬಗ್ಗೆ ಹೇಳಬೇಕೆಂದರೆ ಸಾಹಿತ್ಯ ಕ್ಷೇತ್ರದಲ್ಲಿ ಈಗ ಅಂಬೆಗಾಲಿಡುತ್ತಿರುವ ತೊದಲು ನುಡಿ ಆಡುತ್ತಿರುವ ಮಗು ನಾನು. ನನ್ನ ಪ್ರಥಮ ಸಂಕಲನದ ವಿಮರ್ಶೆ ಮಾಡಿದ ಶ್ರೀಯುತ ಪ್ರಕಾಶ ಕಡಮೆ ಅವರು ಹೇಳಿದಂತೆ ಪ್ರಾಸದ ತ್ರಾಸ ಕಳಚಿಕೊಳ್ಳಬೇಕಾಗಿದೆ, ಅಂತರಂಗದ ಪರಿಧಿಯನ್ನು ದಾಟಿ ಯೋಚನೆಗಳು ಕವಿತೆಗಳು ವಿಸ್ತೃತ ವಿಶಾಲ ಹರಹಿಗೆ ಚಾಚಿಕೊಳ್ಳಬೇಕಾಗಿದೆ. ಸಾಮಾಜಿಕ ತುಡಿತ ಮಿಡಿತಗಳಿಗೆ ಸಾಕ್ಷಿಯಾಗಬೇಕಾಗಿದೆ. ಇವೆಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಂಡು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಹಿತ್ಯ ಕೃಷಿ ನಡೆಸಬೇಕಾಗಿದೆ ಮತ್ತಷ್ಟು ಮೌಲ್ಯಯುತ ಬರವಣಿಗೆಯನ್ನು ಕೊಡಬೇಕಿದೆ. ************************************************************************ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅಂಕಣ ಬರಹ ಗಾನ್ ವಿತ್ ದ ವಿಂಡ್ ಗಾನ್ ವಿತ್ ದ ವಿಂಡ್ಮೂಲ ಇಂಗ್ಲಿಷ್ : ಮಾರ್ಗರೆಟ್ ಮಿಶೆಲ್ ಕನ್ನಡಕ್ಕೆ : ಶ್ಯಾಮಲಾ ಮಾಧವಪ್ರ : ಅಂಕಿತ ಪುಸ್ತಕಪ್ರಕಟನೆಯ ವರ್ಷ : ೨೦೦೪ : ಎಂದಿನಂತೆ ಶ್ಯಾಮಲಾ ಮಾಧವ ತಮ್ಮ ಅನುವಾದಕ್ಕಾಗಿ ಒಂದು ಕ್ಲಾಸಿಕ್ ಕಾದಂಬರಿಯನ್ನು ಎತ್ತಿಕೊಂಡಿದ್ದಾರೆ. ೧೮೬೧ರಲ್ಲಿ ಅಮೆರಿಕಾದಲ್ಲಿ ನಡೆದ ಅಂತರ್ಯುದ್ಧದ ಸಂದರ್ಭದ ಒಂದು ಕಥೆ ಇಲ್ಲಿದೆ. ಆದ್ದರಿಂದ ಕಥೆಯ ಜತೆಜತೆಗೇ ಯುದ್ಧದ ವರ್ಣನೆಯೂ, ಅದರಿಂದಾಗುವ ಅನಾಹುತಗಳ ವರ್ಣನೆಯೂ ಸಾಗುತ್ತದೆ. ದಕ್ಷಿಣ ಅಮೇರಿಕಾದ ಜಾರ್ಜಿಯಾದ ಟಾರಾ ಎಂಬಲ್ಲಿನ ಒಂದು ಪ್ಲಾಂಟೇಷನ್ ಮಾಲೀಕರ ಮುದ್ದಿನ ಮಗಳು ಸ್ಕಾರ್ಲೆಟ್ ಓಹರಾ. ಅವಳು ತನ್ನನ್ನು ಮದುವೆಯಾಗಲು ಬಂದ ಅನೇಕ ಯುವಕರನ್ನು ನಿರಾಕರಿಸಿ ಆಶ್ಲೆ ವಿಲ್ಕಿಸ್ ಎಂಬವನನ್ನು ಇಷ್ಟಪಟ್ಟು ಮದುವೆಯಾಗ ಬಯಸುತ್ತಾಳೆ. ಆದರೆ ಆಶ್ಲೆ ಆಗಲೇ ಸಾಮಾನ್ಯ ರೂಪಿನ ಕೃಶಕಾಯದ ಹುಡುಗಿ ಮೆಲಾನಿ ಹ್ಯಾಮಿಲ್ಟನ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆAದು ತಿಳಿದಾಗ ಅವಳು ನಿರಾಶಳಾಗುತ್ತಾಳೆ. ಆದರೂ ಆಶ್ಲೆ ಮೇಲಿನ ಅವಳ ಪ್ರೀತಿ ಕಡಿಮೆಯಾಗುವುದಿಲ್ಲ. ಆ್ಲಶ್ಲೆ ಅವಳನ್ನು ತಿರಸ್ಕರಿಸುವುದನ್ನು ಸಾಹಸಪ್ರಿಯ ಮತ್ತು ಒರಟು ಸ್ವಭಾವದ ರ್ಹೆಟ್ ಬಟ್ಲರ್ ಎಂಬವನು ನೋಡುತ್ತಾನೆ. ಅವನಿಗೆ ಸ್ಕಾರ್ಲೆಟ್ ಮೇಲೆ ಮನಸ್ಸಿರುತ್ತದೆ. ಆಶ್ಲೆಯ ಮೇಲೆ ಸೇಡು ತೀರಿಸುವುದಕ್ಕೋಸ್ಕರವೋ ಎಂಬAತೆ ಸ್ಕಾರ್ಲೆಟ್ ಭೋಳೆ ಸ್ವಭಾವದ ಮೆಲಾನಿಯ ಅಣ್ಣ ಚಾರ್ಲ್ಸ್ ಹ್ಯಾಮಿಲ್ಟನ್ನನ್ನು ವಿವಾಹವಾಗುತ್ತಾಳೆ. ಆದರೆ ಚಾರ್ಲ್ಸ್ ಯುದ್ಧಕ್ಕೆ ಹೋದವನು ಅಲ್ಲೇ ಸಾಯುತ್ತಾನೆ. ಸ್ಕಾರ್ಲೆಟ್ಗೆ ತಾನು ಗರ್ಭಿಣಿಯೆಂದು ಗೊತ್ತಾಗುತ್ತದೆ. ಟಾರಾದಲ್ಲಿ ವೈರಿಗಳ ದಾಳಿಯ ಕಾರಣದಿಂದ ಅನ್ನಾಹಾರಕ್ಕೆ ಕಷ್ಟವಾಗಿ ಸ್ಕಾರ್ಲೆಟ್ ಮೆಲಾನಿಯ ಜತೆಗೂಡಿ ಅಟ್ಲಾಂಟಾಕ್ಕೆ ಹೋಗಿ ವಾಸಿಸುತ್ತಾಳೆ. ಅಲ್ಲಿ ಅವಳು ಪುನಃ ರ್ಹೆಟ್ ನನ್ನು ಭೇಟಿಯಾಗುತ್ತಾಳೆ. ಅವನು ಅವಳನ್ನು ತನ್ನ ಒರಟು ಮಾತುಗಳಿಂದ ನೋಯಿಸುತ್ತಾನಾದರೂ ಟಾರಾದ ಸಾಮಾಜಿಕ ಅಗತ್ಯಗಳಿಗೆ ಅವಳು ಸ್ಪಂದಿಸಬೇಕೆಂದು ಪ್ರೋತ್ಸಾಹಿಸುತ್ತಾನೆ. ಮೆಲಾನಿ ಹೆರಿಗೆಯ ನೋವಿನಲ್ಲಿದ್ದಾಗ ವೈರಿಗಳಾದ ಯಾಂಕಿಗಳು ಅಟ್ಲಾಂಟಕ್ಕೂ ಮುತ್ತಿಗೆ ಹಾಕುತ್ತಾರೆ. ಆಗ ಸ್ಕಾರ್ಲೆಟ್ ಮೆಲಾನಿಯನ್ನೂ ಅವಳ ಮಗುವನ್ನೂ ತನ್ನ ಮಗುವನ್ನೂ ಕರೆದುಕೊಂಡು ಟಾರಾಕ್ಕೆ ಬರುತ್ತಾಳೆ. ಟಾರಾದಲ್ಲೂ ಯಾಂಕಿಗಳ ಆಕ್ರಮಣದ ಪರಿಣಾಮವಾಗಿ ಸಾಕಷ್ಟು ಅನಾಹುತಗಳಾಗಿವೆ. ಸ್ಕಾರ್ಲೆಟ್ಳ ತಾಯಿ ತೀರಿಹೋಗಿ ತಂದೆಗೆ ಬುದ್ಧಿಭ್ರಮಣೆಯಾಗಿದೆ. ಪ್ಲಾಂಟೇಷನ್ ಪೂರ್ತಿಯಾಗಿ ಆಕ್ರಮಣಕಾರರಿಂದ ಹಾಳಾಗಿ ಹೋಗಿದೆ. ಅಲ್ಲದೆ ಆಸ್ತಿಯ ಮೇಲಿನ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆಂದೂ ಅವಳ ಆಸ್ತಿಯನ್ನು ಲಪಟಾಯಿಸುವುದು ಅವರ ಉದ್ದೇಶವೆಂದೂ ಸ್ಕಾರ್ಲೆಟ್ಳಿಗೆ ಸುದ್ದಿ ಸಿಗುತ್ತದೆ. ತನ್ನ ಆಸ್ತಿಯನ್ನು ತಾನು ಉಳಿಸಲೇ ಬೇಕೆಂದು ಅವಳು ತೆರಿಗೆಯ ಹಣವನ್ನು ಸಂಪಾದಿಸಲು ಅಟ್ಲಾಂಟಕ್ಕೆ ಬರುತ್ತಾಳೆ. ಟಾರಾದ ಪ್ಲಾಂಟೇಷನನ್ನು ಮೊದಲ ಸ್ಥಿತಿಗೆ ತಂದೇ ತೀರುವೆನೆಂದು ಹಠ ತೊಡುತ್ತಾಳೆ. ಆದರೆ ಹಣ ಸಂಪಾದಿಸುವ ವಿಚಾರದಲ್ಲಿ ಅವಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಒಂದು ಹಂತದಲ್ಲಿ ರ್ಹೆಟ್ನನ್ನು ಮದುವೆಯಾಗುತ್ತಾಳೆ. ಅವನಿಂದ ಒಂದು ಮಗುವನ್ನೂ ಪಡೆಯುತ್ತಾಳೆ. ಆದರೆ ಸ್ವಲ್ಪ ಕಾಲದ ನಂತರ ರ್ಹೆಟ್ ಅವಳನ್ನು ತಿರಸ್ಕರಿಸುತ್ತಾನೆ. ಆಗ ಸ್ಕಾರ್ಲೆಟ್ಗೆ ತಾನು ಅವನನ್ನು ಪ್ರೀತಿಸುತ್ತಿದ್ದೇನೆಂದು ಅರಿವಾಗುತ್ತದೆ, ಅವನ ಪ್ರೀತಿಯನ್ನು ಹೇಗಾದರೂ ಮಾಡಿ ಸಂಪಾದಿಸಲೇ ಬೇಕೆಂದು ಅವಳು ನಿರ್ಧರಿಸುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಸ್ಕಾರ್ಲೆಟ್ಳ ದಿಟ್ಟತನದ ಚಿತ್ರಣವಷ್ಟೇ ಕಾದಂಬರಿಯ ಪ್ರಮುಖ ಅಂಶವಲ್ಲ. ಪುರುಷಾಹಂಕಾರ, ಹಠ, ಪ್ರತೀಕಾರ, ಅಧಿಕಾರ ದಾಹಗಳ ಕಾರಣದಿಂದ ನಡೆಯುವ ಯುದ್ಧವು ಸ್ತ್ರೀಯರ ಬದುಕನ್ನು ಯಾವ ರೀತಿ ಮೂರಾಬಟ್ಟೆ ಮಾಡುತ್ತದೆ ಅನ್ನುವುದನ್ನು ಚಿತ್ರಿಸುವುದು ಕಾದಂಬರಿಯ ಉದ್ದೇಶವಾಗಿದೆ. ಎಲ್ಲರ ಬದುಕೂ ಯುದ್ಧವು ಉಂಟು ಮಾಡುವ ಅನಾಹುತಗಳಿಂದಾಗಿ ಗಾಳಿಯ ಹೊಡೆತಕ್ಕೆ ಸಿಕ್ಕಿ ಸೂತ್ರ ಕಿತ್ತ ಗಾಳಿಪಟದಂತಾಗುತ್ತದೆ ಅನ್ನುವುದು ಶೀರ್ಷಿಕೆಯ ಅರ್ಥ. ಶ್ಯಾಮಲಾ ಮಾಧವ ಅವರ ಅನುವಾದವು ಎಂದಿನಂತೆ ಹೃದ್ಯವಾಗಿದೆ ********************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಕಬ್ಬಿಗರ ಅಬ್ಬಿ ಮನಸ್ಸು ಕಟ್ಟಿದ ಕೇರಿ ಮತ್ತು ಸಾಕ್ಷೀಪ್ರಜ್ಞೆ ಆ ಸಾಯಂಕಾಲ ಪಶ್ಚಿಮ ಘಟ್ಟದ ಮೇಲ್ ಮೆಟ್ಟಿಲು ಗಳಲ್ಲಿ ಒಂದಾದ, ‘ಕೊಟ್ಟಿಗೆಹಾರ’ ದಿಂದ ಸೈಕಲ್ ತುಳಿಯುತ್ತಾ ಇಳಿದರೆ ಘಟ್ಟದ ಬುಡದಲ್ಲಿ ಧರ್ಮಸ್ಥಳ. ಪಶ್ಚಿಮದ ಅರಬ್ಬೀ ಸಮುದ್ರ ಅಲೆಯೆಬ್ಬಿಸಿ ಸೂರ್ಯಾಲಿಂಗನಕ್ಕೆ ತೋಳು ಚಾಚಿ ಕಾಯುತ್ತಿತ್ತು. ಅದು ಚಾರ್ಮಾಡಿ ಘಟ್ಟ. ಯಾವಾಗಲೂ ಹತ್ತುವ ರಸ್ತೆ ಎಂದೂ ಮುಗಿಯದ ಪಯಣದಂತಿದ್ದರೆ, ಇಳಿಯುವ ರಸ್ತೆ ಹಾಗಲ್ಲ. ಮೈಭಾರ ಹೆಚ್ಚಿದ್ದಷ್ಟು ಬೇಗ ಭಾರ ಇಳಿಸುವ ತವಕ ಅದಕ್ಕೆ. ಅದೆಷ್ಟು ತಿರುವುಗಳೋ!. ಸೈಕಲ್ ಚಕ್ರಗಳು ಅಲೆಕ್ಸಾಂಡರ್ ನ ಕುದುರೆಯ ಹಾಗೆ ನಾಗಾಲೋಟ ಓಡಲು ಕಾರಣ, ಚಕ್ರವೂ ಅಲ್ಲ, ನನ್ನ ತುಳಿಸಾಮರ್ಥ್ಯವೂ ಅಲ್ಲ!. ಅದು ಭೂಮಿತಾಯಿಯ ಗುರುತ್ವಾಕರ್ಷಣ ಶಕ್ತಿ. ರಸ್ತೆಯಲ್ಲಿ ಇರುವ ತಿರುವುಗಳು ಹೆಂಗಳೆಯರು ಮುಂಗುರುಳಿಗೆ ಹಾಕುವ ಪಿನ್ ನಂತಹ (ಹೆಯರ್ ಪಿನ್ ) ತಿರುವುಗಳು. ಹೋಗುವ ದಿಶೆಯನ್ನು ರಸ್ತೆ, ಒಮ್ಮಿಂದೊಮ್ಮೆಯೇ ವಿರುದ್ಧ ದಿಕ್ಕಿಗೆ ತಿರುಗಿಸುತ್ತೆ. ‘ನನ್ನ ದಿಕ್ಕನ್ನು ನಾನೇ ನಿರ್ಧರಿಸುವೆ ‘ ಎಂಬ ಜಂಭವಿದ್ದರೆ, ಇಳಿಜಾರಿನ ಯಮಪ್ರಪಾತ ಬಾಯ್ತೆರೆದು ಕಾಯುತ್ತೆ. ಸಾಯಂಕಾಲದ ಬಣ್ಣ ಬಣ್ಣದ ಮದಿರೆ ಹೀರಿದ ಗಗನದಲ್ಲಿ ಗಾಳಿ ತೂರಾಡುತ್ತೆ. ವಾತಾವರಣದ ನೋಹಕ ನಶೆಯಲ್ಲಿ ರಸ್ತೆ, ಪಸ್ಚಿಮಘಟ್ಟಗಳ ದಟ್ಟ ಕಾಡುಗಳನ್ನು ಬಳಸಿ, ಕೆಳನೆಗೆಯುವ ತೊರೆಗಳಲ್ಲಿ ನೆನೆದು ಇಳಿದಂತೆ,ಅದಕ್ಕಂಟಿದ ಸೈಕಲ್ ಚಕ್ರಗಳು ತಿರು ತಿರುಗಿ ಓಡುತ್ತವೆ. ಆಗಸದಲ್ಲಿ ಹಕ್ಕಿಗಳು ತಮಗೆ ಬೇಕಾದಂತೆ ರೆಕ್ಕೆ ತೇಲಿಸಿ ಇಳಿಯುತ್ತವೆ,ಅದು ಚಂದ. ಅವುಗಳಿಗೆ ರಸ್ತೆಯ ಅಗತ್ಯವೂ ಇಲ್ಲ, ಬಂಧನವೂ ಇಲ್ಲ. ಹಾಗಂತ ಅವು ದಿಶಾಹೀನ ಅಲ್ಲ. ರಾತ್ರೆಯಾದಂತೆ, ರೊಮ್ಯಾಂಟಿಕ್ ಆಗಿದ್ದ ಬಣ್ಣಗಳೂ, ಕತ್ತಲೆಯ ಕಪ್ಪಿಗೆ ಸಮರ್ಪಣೆ ಮಾಡಿಕೊಂಡು, ನಮ್ಮ ಪರ್ಸೆಪ್ಷನ್ ನಲ್ಲಿ ಪರಿಸರದ ಗಾಢಕತ್ತಲೆಯಲ್ಲಿ ಕಳೆದುಹೋಗುತ್ತವೆ. ಘಟ್ಟಗಳ ಬುಡಕ್ಕಿಳಿದಾಗ ದಟ್ಟ ಕತ್ತಲು. ತಲೆಯೆತ್ತಿ ನೋಡಿದರೆ ಬೆಟ್ಟಗಳ ಸಾಲುಗಳ ಚಿತ್ರ ಅಕ್ಷಿಪಟಲದಲ್ಲಿ ಮೂಡವು. ಅನುಭವಕ್ಕೂ ಬಾರವು. ಸೈಕಲ್ ಒಂದು ಮ್ಯಾಜಿಕ್!. ಇದರಲ್ಲಿ ಕುಳಿತು ಎಡಕ್ಕೆ ವಾಲಿದರೂ,ಬಲಕ್ಕೆ ವಾಲಿದರೂ ಬೀಳುತ್ತೀರಿ!. ಸೈಕಲ್ ಎಡಕ್ಕೋ ಬಲಕ್ಕೋ ವಾಲಿದರೆ,ಕೂಡಲೇ ದೇಹಭಾರವನ್ನು ವಿರುದ್ಧ ದಿಕ್ಕಿಗೆ ವಾಲಿಸಿ ಸಮತೋಲಿಸಬೇಕು. ದೇಹ, ಸೈಕಲ್ ನ ಜತೆಗೂಡಿ, ಗುರುತ್ವ ಕೇಂದ್ರವನ್ನು, ಸೈಕಲ್ ನ ಒಟ್ಟೂ ಘನತ್ವದ ಮಧ್ಯಬಿಂದುವಿನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹಾಗೆ ಸಂಪಾದಿಸಿದ ಸಮದೃಷ್ಟಿಯೇ ಸೈಕಲ್ ಗೂ, ಚಲನೆಗೂ ಸಮತೋಲನ ತಂದುಕೊಟ್ಟು ಗುರಿಯತ್ತ ಮುಖಮಾಡುತ್ತೆ. ಮನಸ್ಸು ಕೂಡಾ ಅಷ್ಟೇ, ಎಡಕ್ಕೋ,ಬಲಕ್ಕೋ, ಯಾವುದೇ ಸಿದ್ಧಾಂತದತ್ತ ವಾಲಿದರೆ, ಚಲನಶೀಲತೆಗೆ ಅಗತ್ಯವಾದ ಬ್ಯಾಲೆನ್ಸ್ ಅನ್ನು ಕಳೆದುಕೊಳ್ಳುತ್ತದೆ, ಅಯಸ್ಕಾಂತಕ್ಕೆ ಅಂಟಿ ನಿಂತ ಕಬ್ಬಿಣದ ತುಂಡಿನ ಹಾಗೆ. ಸೈಕಲ್ ನನ್ನು ನಿಂತಲ್ಲೇ ಬ್ಯಾಲೆನ್ಸ್ ಮಾಡಲು ಅತ್ಯಂತ ಕಷ್ಟ. ಸೈಕಲ್ ನಲ್ಲಿ ಕುಳಿತು ಅದು ಚಲನಶೀಲವಾದಾಗ ಬ್ಯಾಲನ್ಸ್ ಸುಲಭ. ಪ್ರಕೃತಿಯ ಸಹಜತತ್ವ ಚಲನಶೀಲತೆಯಲ್ಲಿಯೇ ಸಮತೋಲನ ಕಾಣುವಂತೆಯೇ ಸೈಕಲ್ ಸವಾರಿಯೂ ಕಾಣುತ್ತೆ. ಯಾವುದೇ ಸವಾರಿಯಲ್ಲಿ, ಅದು, ಸೈಕಲ್, ಬಸ್ಸು,ರೈಲು, ವಿಮಾನ ಎಲ್ಲದರಲ್ಲೂ, ಪ್ರಯಾಣಿಕನ ಪ್ರಜ್ಞೆ ಮತ್ತು ಪರಿಸರದ ಅವಸ್ಥೆಗಳಲ್ಲಿ ಸಾಪೇಕ್ಷತೆ ಕೆಲಸ ಮಾಡುತ್ತೆ. ವೇಗವಾಗಿ ಚಲಿಸುವ ರೈಲಿನಲ್ಲಿ ಕುಳಿತಾಗ, ಹೊರಗೆ ಕಾಣುವ ಮರಗಳು, ಕಟ್ಟಡಗಳು ಎಲ್ಲವೂ ವೇಗವಾಗಿ ಹಿಮ್ಮುಖವಾಗಿ ಚಲಿಸುವ ಅನುಭವ ಆಗುತ್ತಲ್ಲ. ಅದೇ ಸಾಪೇಕ್ಷ ಅನುಭವ. ಅಂದರೆ, ಡೈನಮಿಕ್ ವ್ಯವಸ್ಥೆಯಲ್ಲಿ ಅನುಭವ, ಚಲಿಸುವ ದೇಹ ಮತ್ತು ಮನಸ್ಸಿನ ಮೇಲೆ ( ಫ್ರೇಮ್ ಆಫ್ ರೆಫರೆನ್ಸ್), ಚಲಿಸುವ ದಿಕ್ಕಿನ ಮೇಲೆ ಮತ್ತು ಪರಿಸರದ ಅವಸ್ಥೆಯ ಮೇಲೆ ಅವಲಂಬಿತವಾಗಿರುವಾಗ, ಕಾವ್ಯಪ್ರಜ್ಞೆಯೂ, ಸಿದ್ಧಾಂತಗಳನ್ನು ರೂಪಿಸುವ ತಾರ್ಕಿಕ ಮನಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಆದ್ದರಿಂದ ಯಾತ್ರೆಯುದ್ದಕ್ಕೂ, ನಮ್ಮ ಅಬ್ಸರ್ವೇಷನ್ ನ ಮೇಲೆ ಇತ್ಯಾತ್ಮಕ ಅಭಿಪ್ರಾಯಗಳನ್ನು ಸ್ಥಿರೀಕರಿಸುವುದು ಮತ್ತು ಪ್ರತಿಪಾದಿಸುವುದು, ನಿತ್ಯಚಲನಶೀಲವಾದ ಪ್ರಕೃತಿ ತತ್ವಕ್ಕೆ ಪೂರಕವಾಗದು. ಸೈಕಲ್ ಸವಾರ ಚಲಿಸುತ್ತಾ ಹೋಗುತ್ತಿದ್ದಂತೆ, ಕಾಲ ಹಿಂದಕ್ಕೆ ಓಡುತ್ತೆ. ವಿಪರ್ಯಾಸವೆಂದರೆ ಸೈಕಲ್ ಸವಾರ ಯಾತ್ರೆ ಮುಗಿಸಿ ಹಿಂತಿರುಗಬಲ್ಲ. ಆದರೆ, ಕಾಲ ಹಿಂತಿರುಗಲ್ಲ. ಅದು ಏಕಮುಖೀ. ಒಮ್ಮೆ ಭೂತಕಾಲವಾದ ವರ್ತಮಾನ, ಪುನಃ ವರ್ತಮಾನಕ್ಕೆ ಹಿಂತಿರುಗಲ್ಲ!. ಇವಿಷ್ಟು ತಯಾರಿಯೊಂದಿಗೆ ವಿಜಯ್ ದಾರಿಹೋಕ ಅವರ ಕವಿತೆ ” ಸೈಕಲ್,ರಸ್ತೆ, ತುಡಿತ ಇತ್ಯಾದಿ” ಎಂಬ ಕವಿತೆಯನ್ನು ನೋಡೋಣ. ** ** ** *** ಸೈಕಲ್,ರಸ್ತೆ, ತುಡಿತ ಇತ್ಯಾದಿ ಎಲ್ಲ ಮರೆತ ಒಂದು ಹಳೆಯ ಊರಕೇರಿಯ ದಾರಿಗುಂಟ ಸತತ …ಸೈಕಲ್ ತುಳಿವ ತುಡಿತ….! ಇನ್ನೇನು …ದಿನ ಕಳೆದು, ಹುಟ್ಟಿಗೆ ಸಿದ್ದವಾದ ರಾತ್ರಿಗೆ, ಸಂಜೆಯ ಹುಂಜದ ಹಂಗಿಲ್ಲ..! ಅಪರಿಚಿತ ಊರಕೇರಿಯ ದಿಕ್ಕು.. ಹಣ್ಣು ಹಣ್ಣಾದ ರಸ್ತೆಗೂ ಎಂತಹ ಸೊಕ್ಕು…! ತುಸುವೇ ಹೊತ್ತಿನ ಬಳಿಕ.. ನಾನು ತಲುಪುವ ಕೇರಿಯಾದರೂ ಎಂಥದು..?? ಮುದಿ ಲಾಟೀನಿನ ಮಂದ ಬೆಳಕಲ್ಲಿ ಮಿಂದ ಮುಖಗಳೊ,ಮಿಣುಕುವ ಕಣ್ಣುಗಳೋ ಆ ಊರಿನಲ್ಲಿ.. ? ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳು ಹಾಡಿನಂಥ ಸದ್ದುಗಳೋ ಆ ಊರಿನಲ್ಲಿ..!? ಒಣ ಗಂಡಸರು,ಇಲಿಗಳಂತ ಮಕ್ಕಳು,ಬಳೆಯ ಹೆಂಗಸರೋ ಆ ಊರಿನಲ್ಲಿ..? ನನ್ನನು ಅಲ್ಲಿ ಊಹಿಸುವ ಉಮೇದಿಗೆ ದುಗುಡ ಕೂಡ ಬೆರೆತಿದೆ..! ಒಂದೋ, ಅಪರಿಚಿತ ಗುಡಿಸಲೊಂದರಲ್ಲಿ ಮಂಕು ದೀಪದ ಸುತ್ತ ಕೆಲವರ ಮುಂದೆ ಪ್ರಕಟಗೊಳ್ಳುವೆ, ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿ… ಗಹ ಗಹಿಸಿ ನಗುವೆ, ಪವಡಿಸುವೆ… ಇಲ್ಲವೋ.. ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದು ಅತ್ತಿಂದಿತ್ತ ಅಲೆವೆ,ಸವೆವೆ ಒಂದೇ ಸಮನೆ , ಮಟ ಮಟ ರಾತ್ರಿಯು ನೆತ್ತಿಗೇರುವ ತನಕ …? ಹಳತು ಮರೆತ ಕೇರಿಯ ದಾರಿಗುಂಟ ಸತತ ಸೈಕಲ್ ತುಳಿವ ತುಡಿತ..? ಎದುರು ಸಪೂರ ಕಾಲುಗಳ ಮೇಲೆ ಬಂದ ಎಷ್ಟೊಂದು ಗಂಟುಗಳೂ, ಮೂಟೆಗಳು, ಎವೆಯೆಕ್ಕದೆಯೆ ನನ್ನ ನೋಡುತ ಸಾಗುವ ಪರಿಗೆ ಕಂಗಾಲಾಗಿ ಕಿವಿಗೆ ಗಾಳಿ ಹೊಕ್ಕಂತೆ ಸೈಕಲ್ ಓಡಿತು..! ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆ.. ನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ..? ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ..! ……. ಹಳತು, ಮರೆತ ಕೇರಿಯ ದಾರಿಗುಂಟ ಸತತ ಸೈಕಲ್ ತುಳಿವ ತುಡಿತ..! ** ** ** ** ಎಲ್ಲ ಮರೆತ ಒಂದು ಹಳೆಯ ಊರಕೇರಿಯ ದಾರಿಗುಂಟ, ಸತತ …ಸೈಕಲ್ ತುಳಿವ ತುಡಿತ….! ಹಳೆಯ ಊರಕೇರಿ, ಮರೆತು ಹೋಗಿದ್ದರೂ, ಎಲ್ಲೋ ಮನಸ್ಸಿನ ಮೂಲೆ ಕೋಣೆಯಲ್ಲಿ ಅಚ್ಚಾಗಿದೆ!. ಬಾಲ್ಯದ್ದು ಇರಬಹುದು, ಊರಕೇರಿ ಎನ್ನುವುದು, ಒಂದು ಸಾಮಾಜಿಕ ವ್ಯವಸ್ಥೆ,ತಾನೇ. ಆ ವ್ಯವಸ್ಥೆ, ಊರಿಗೇ ಸೀಮಿತವೂ ಹೌದು, ಕೇರಿಯ ಕಟ್ಟು ಕಟ್ಟಳೆಯಿಂದ ಬಂಧಿತವೂ ಹೌದು. ಕವಿತೆಯುದ್ದಕ್ಕೂ ಕವಿಗೆ ಆ ಕೇರಿಯ ಬಗ್ಗೆ ಬಣ್ಣ ಬಣ್ಣದ ಕನಸಿಲ್ಲ. ಆದರೆ ಅದರ ಸುತ್ತ ಸೈಕಲ್ ತುಳಿಯುವ ತುಡಿತ. ಅಂದರೆ ಆತ ಬರೇ ವೀಕ್ಷಕ ( ಅಬ್ಸರ್ವರ್) ಆಗುತ್ತಾನೆ. ಸೈಕಲ್ ತುಳಿಯುತ್ತಾ, ನೋಡುವಾಗ, ಊರಕೇರಿಯ ಸ್ಥಾವರ ಚಿತ್ರ, ಜಂಗಮ ಫ್ರೇಮ್ ನ ಮೂಲಕ ಕಾಣುವ ತುಡಿತವೇ?. ‘ದಿನ ಕಳೆದು ಹುಟ್ಟಿಗೆ ಸಿದ್ಧವಾದ ರಾತ್ರಿ’ ಅನ್ನುವ ಕವಿ ಕಲ್ಪನೆಗೆ ಅನನ್ಯತೆಯಿದೆ. ನಮ್ಮ ಮನಸ್ಸು ಹಗಲಿನ, ಬೆಳಕಿನ ಪಕ್ಷಪಾತಿ. ಆದರೆ ಹಗಲಿನದ್ದು ಮತ್ತು ರಾತ್ರಿಯದ್ದು ಪರಸ್ಪರ ಪೂರಕ ಮತ್ತು ಸಾಪೇಕ್ಷ( ರಿಲೇಟಿವ್) ಅಸ್ತಿತ್ವ. ಅದಕ್ಕೇ ರಾತ್ರೆಯ ಹುಟ್ಟು ತುಂಬಾ ತಾತ್ವಿಕ ಕಲ್ಪನೆ. ಹಾಗೆಯೇ ಇನ್ನೊಂದು ಅಪೂರ್ವ ಸಾಲು, ಹಣ್ಣು ಹಣ್ಣಾದ ರಸ್ತೆ!. ರಸ್ತೆ ಹಣ್ಣಾಗುವುದು ಎಂದರೆ, ದಿನವಿಡೀ ಚಲಿಸುವ ವಾಹನಗಳ ತುಳಿತದಿಂದ ಬಳಲಿ ಹಣ್ಣಾದದ್ದೇ?. ಅಥವಾ ಚಲಿಸುವ ವಾಹನಗಳಿಗೆ ದಾರಿತೋರಿ, ದಾರಿಯೇ ಆಗಿ, ಪಕ್ವವಾದ ಅನುಭವವೇ?. ದಾರಿ ಸಿಗದ ಯಾತ್ರಿಕರಿಗೆ ದಾರಿಯಾಗಿ ಅತೀವ ಹೆಮ್ಮೆಯ ಸೊಕ್ಕು, ರಸ್ತೆಗೆ!. ಆ ಕೇರಿಯ ಲಾಟೀನು ಮುದಿಯಾಗಿದೆ. ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳುಹಾಡುಗಳಂತಹಾ ಸದ್ದುಗಳು, ಒಣ ಗಂಡಸರು, ಹೀಗೆ ಕವಿ ಕೇರಿಯ ವಿವರಣೆ ಕೊಡುವಾಗ, ಒಂದು ರಸಹೀನ,ಜೀವಭಾವ ರಹಿತ ವ್ಯವಸ್ಥೆಯ ಚಿತ್ರ ಮೂಡುತ್ತೆ. ಬದಲಾವಣೆಗೆ ಒಗ್ಗದೆ ಕಾಲದಲ್ಲಿ ಕಾಲವಾದ ವ್ಯವಸ್ಥೆಯನ್ನು, ಚಲನಶೀಲ ಮನಸ್ಸು ಸೈಕಲ್ ತುಳಿಯುತ್ತಾ ಕಾಣುತ್ತೆ. ಗಮನಿಸಿ!, ನೋಟಕನ ಸೈಕಲ್ ನಿಲ್ಲಿಸಿ ನೋಡುವುದಿಲ್ಲ, ಚಲಿಸುತ್ತಲೇ ಇರುತ್ತೆ. ” ಅಪರಿಚಿತ ಗುಡಿಸಲೊಂದರಲ್ಲಿ ಮಂಕು ದೀಪದ ಸುತ್ತ ಕೆಲವರ ಮುಂದೆ ಪ್ರಕಟಗೊಳ್ಳುವೆ, ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿ… ಗಹ ಗಹಿಸಿ ನಗುವೆ, ಪವಡಿಸುವೆ… ಇಲ್ಲವೋ.. ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದು ಅತ್ತಿಂದಿತ್ತ ಅಲೆವೆ,ಸವೆವೆ ಒಂದೇ ಸಮನೆ , ಮಟ ಮಟ ರಾತ್ರಿಯು ನೆತ್ತಿಗೇರುವ ತನಕ …” ಈ ಸಾಲುಗಳನ್ನು ಓದುವಾಗ, ಕವಿ, ಈ ವ್ಯವಸ್ಥೆಯನ್ನು ದಿಕ್ಕರಿಸಿ ಬಂದಂತಿದೆ. ವ್ಯವಸ್ಥೆಯನ್ನು ನಿಂತ ನೀರಾಗಿಸಿದ, ರಸಹೀನವಾಗಿಸಿದ ಕೆಲವು ಮಂದಿಯ ಬಗ್ಗೆ ಆಕ್ರೋಶ ಇದೆ. ಅದನ್ನು ಪ್ರಶ್ನಿಸುವ ಆಸೆಯಿದೆ. ಆದರೆ ಆ ವ್ಯವಸ್ಥೆ, ತನ್ನ ಪ್ರಶ್ನೆಗಳಿಂದ ಬದಲಾಗಲ್ಲ ಎಂಬ ಆಸಮಧಾನವೂ ಇದೆ. ‘ಮಟ ಮಟ ರಾತ್ರಿಯು ನೆತ್ತಿಗೇರುವ ತನಕ’ ಎಂಬ ಈ ಸಾಲುಗಳು ಸೂರ್ಯ ನೆತ್ತಿಗೇರುವ ಹಾಗೆಯೇ ರಾತ್ರಿಯೂ, ಎಂಬ ಹೊಸ ಕಲ್ಪನೆಯನ್ನು ಬಿಂಬಿಸುವ ಜತೆಗೇ, ನಿರಾಶಾದಾಯಕ ಮನಸ್ಥಿತಿಯ ಕ್ಶಿತಿಜವನ್ನೂ ಪರಿಚಯಿಸುತ್ತೆ. ಹಳತನ್ನು ಮರೆತು ಹೊಸತಿಗೆ ತೆರೆಯುವ ಕೇರಿಯ ಗುಂಟ ಸೈಕಲ್ ತುಳಿಯಬೇಕೆಂಬ ಹಂಬಲ ಕವಿ ಮನಸ್ಸಲ್ಲಿ ಇದ್ದಂತಿದೆ. “ಸಪೂರ ಕಾಲುಗಳ ಮೇಲೆ ಬಂದ ಎಷ್ಟೊಂದು ಗಂಟುಗಳು, ಮೂಟೆಗಳು” ಕಾಲುಗಳು, ದೇಹಕ್ಕೂ, ದೇಹ ಹೊರುವ ಹೊರೆಗೂ ಆಧಾರ. ಆದರೆ ಆಧಾರ, ಅಡಿಪಾಯ, ಗಟ್ಟಿಯಾಗಿಲ್ಲ. ಪೋಷಕಾಂಶಗಳ ಕೊರತೆಯಿಂದ ಕಾಲುಗಳು ಸಪೂರವಾಗಿವೆ. ವ್ಯವಸ್ತೆಯ ಜೀವಪೋಶಕ ಅಂಶ ವಿರಳವಾದಾಗ, ಆಧಾರ ಸ್ಥಂಭಗಳು ದುರ್ಬಲವಾಗುತ್ತವೆ. ಆ ದುರ್ಬಲ ವ್ಯವಸ್ಥೆ ಹೊತ್ತಿರುವ ಮೂಟೆಗಳು ಮಣ ಭಾರ. ಗಂಟುಗಳು ಎಂದರೆ, ಕ್ಲಿಷ್ಟವಾದ, ಬಿಡಿಸಲಾಗದ ಅಥವಾ ಬಿಡಿಸಲು ಪ್ರಯತ್ನವೇ ಮಾಡದೆ ಕ್ಲಿಷ್ಟವಾದ ಸಮಸ್ಯೆಗಳನ್ನು, ಪ್ರತಿನಿಧಿಸುವಂತಿದೆ. ಸೈಕಲ್ ನಲ್ಲಿ ಸವಾರನಾದ ಕವಿಗಯನ್ನು ಈ ಪ್ರಶ್ನೆಗಳು ಅಧೀರನನ್ನಾಗಿಸುತ್ತವೆ. ” ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆ.. ನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ..? ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ..!” ಕೇರಿಯ ಸುತ್ತಲಿನ ರಸ್ತೆಯೇ ಈಗ ಮಾತಾಡುತ್ತೆ. ಸಮಸ್ಯೆಯ ಅಗಾಧತೆಯ ಪರಿಚಯ ಮಾಡಿಕೊಡುತ್ತೆ. ಈ ಕವಿತೆಯಲ್ಲಿ ಸೈಕಲ್ ಸವಾರ, ವ್ಯಕ್ತಿಯೇ ಆಗಬೇಕಿಲ್ಲ. ನಮ್ಮ ಮನಸ್ಸಿನೊಳಗಿನ ಸಾಕ್ಷೀ ಪ್ರಜ್ಞೆಯೂ ಆಗಬಹುದು. ನಾವು ಅನುಭವ ರೂಪದಲ್ಲಿ ಸಂಗ್ರಹಿಸಿದ ವಿಷಯಗಳ ಆಧಾರದಲ್ಲಿ ಮನಸ್ಸೊಳಗೇ ಕೇರಿ ನಿರ್ಮಾಣ ( ಪೂರ್ವಾಗ್ರಹ) ಮಾಡುತ್ತೇವೆ. ನಮ್ಮ ಸಾಕ್ಷಿ ಪ್ರಜ್ಞೆ ನಿರಂತರವಾಗಿ ಅದರ ಸುತ್ತ ಸುತ್ತುತ್ತದೆ, ಪ್ರಶ್ನಿಸುವ ಪ್ರಯತ್ನ ಮಾಡುತ್ತೆ. ಆದರೆ, ಮನಸ್ಸಿನಲ್ಲಿ ರೂಪುಗೊಂಡ, ಮೂರ್ತವಾದ ಅಭಿಪ್ರಾಯ, ಸಿದ್ಧಾಂತಗಳು, ಬದಲಾವಣೆಯನ್ನು, ಪ್ರತಿರೋಧಿಸುತ್ತವೆ. ಅದರೂ ಸಾಕ್ಷಿಪ್ರಜ್ಞೆ ಸೈಕಲ್ ತುಳಿಯುತ್ತಲೇ ಇರುತ್ತೆ. ಅದೊಂದು ನೆವರ್ ಎಂಡಿಂಗ್ ಸ್ಪಿರಿಟ್ . ಈ ಸೈಕಲ್ ಯಾತ್ರೆ ಒಂದು ಪೂರ್ತಿ ಬದುಕಿನ ಪಯಣವೂ ಆಗಬಹುದು. ಮನೋಲೋಕದೊಳಗೆ ದಿನ ನಿತ್ಯ ಹಳತು ಹೊಸತರ ನಡುವೆ, ಸಿದ್ಧಾಂತಗಳ ವೈರುಧ್ಯಗಳ ನಡುವೆ, ಭಾವ ಬುದ್ಧಿ ಗಳ ನಡುವೆ ನಡೆಯುವ ಸಂಘರ್ಷಗಳು, ಸೈಕಲ್ ಸವಾರನ ವೀಕ್ಷಕ ವಿವರಣೆಯಲ್ಲಿ ದಾಖಲಾದಂತೆಯೂ ಅನ್ವಯಿಸಬಹುದು. ವ್ಯಕ್ತಿ ಮತ್ತು ವ್ಯವಸ್ಥೆ ಗಳ ನಡುವಿನ ತಾಕಲಾಟವಾಗಿಯೂ ನೋಡಬಹುದು ಈ ಕವಿತೆಯಲ್ಲಿ ‘ಕೇರಿ’ಯ ಪ್ರತಿಮೆಯನ್ನು ಕವಿ ಬಹಳ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಇದೇ ರೀತಿ ದ.ರಾ. ಬೇಂದ್ರೆಯವರೂ ಕೇರಿಯ ರೂಪಕವನ್ನು ತಮ್ಮ ಕವನ ” ಬಾರೋ ಸಾಧನ ಕೇರಿಗೆ” ತುಂಬಾ ಧನಾತ್ಮಕವಾಗಿ ಬಳಸಿದ್ದಾರೆ. “ಬಾ ಬಾರೋ, ಬಾರೋ ಬಾರೋ ಬಾರೊ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ
ಅಂಕಣ ಬರಹ ಪ್ರಾಮಾಣಿಕರ ಅಹಮಿಕೆ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಮಲೆನಾಡಿನ ಗಾಂಧಿ ಎಂದೂ ಕರೆಯಲಾಗುತ್ತಿದ್ದ ಕಡಿದಾಳು ಮಂಜಪ್ಪನವರು ಲೇಖಕರೂ ಆಗಿದ್ದರೆಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಅವರು `ಪಂಜರವಳ್ಳಿಯ ಪಂಜು’ `ನಾಳೆಯ ನೆಳಲು’ `ಕ್ರಾಂತಿಕೂಟ’ ಕಾದಂಬರಿಗಳನ್ನು ಬರೆದರು. ಆದರೆ ಇವಕ್ಕಿಂತ ಅವರ ಆತ್ಮಕಥೆಯೇ (`ನನಸಾಗದ ಕನಸು’) ಚೆನ್ನಾಗಿದೆ. ಅದರಲ್ಲಿ 40-50ರ ದಶಕದ ರಾಜಕಾರಣದ ಸ್ಮøತಿಗಳಿವೆ; 20ನೇ ಶತಮಾನದ ಮೊದಲ ಭಾಗದ ಮಲೆನಾಡಿನ ಚಿತ್ರಗಳಿವೆ. ಕುತೂಹಲ ಹುಟ್ಟಿಸುವುದು ಅದರ ನಿರೂಪಣೆ ಮತ್ತು ಆ ಮೂಲಕ ಹೊಮ್ಮುವ ಲೋಕದೃಷ್ಟಿ.ಮಂಜಪ್ಪನವರು ಆತ್ಮಕತೆಯನ್ನು “ನಾನು ಜನ್ಮ ತಾಳಿದ್ದು ನಮ್ಮ ಕುಟುಂಬದ ಮನೆಯ ಪಕ್ಕದಲ್ಲಿದ್ದ ಕೋಳಿಕೊಟ್ಟಿಗೆಯಲ್ಲಿ. ಅಂದಿನ ಕಾಲದಲ್ಲಿ ವಾಸದ ಮನೆಯಲ್ಲಿ ಹೆರಿಗೆಯಾಗುವುದು ನಿಷಿದ್ಧವಾಗಿತ್ತು. ಆ ಕಾರಣ ಹೆಂಗಸರಿಗೆ ಪ್ರಸವ ವೇದನೆ ಪ್ರಾರಂಭವಾದ ತಕ್ಷಣ ವಾಸದ ಮನೆಯಿಂದ ಹೊರಗಡೆ ಇಡುತ್ತಿದ್ದರು’’ ಎಂದು ಆರಂಭಿಸುತ್ತಾರೆ. ಅವರಿಗೆ ಆತ್ಮಕತೆಯ ಜತೆಗೆ ತಮ್ಮ ಕಾಲದ ಮಲೆನಾಡಿನ ಸಂಪ್ರದಾಯಗಳನ್ನೂ ಕಾಣಿಸುವ ಉದ್ದೇಶವಿದೆ. ಅವರು ಕಾಣಿಸುವ ಕೆಲವು ಸಂಪ್ರದಾಯ ಮತ್ತು ಆಚರಣೆಗಳಂತೂ ಭೀಕರವಾಗಿವೆ. ಅವುಗಳಲ್ಲಿ ಮಹಿಳೆಯರ ಸಾವು ಮತ್ತು ಗಂಡಸರ ಮರುಮದುವೆಯೂ ಒಂದು: “ಆಗಿನ ಕಾಲದಲ್ಲಿ ಮಲೆನಾಡಿನಲ್ಲಿ ಮಲೇರಿಯಾ ಹಾವಳಿಯಿಂದ ಗರ್ಭಿಣಿಯರೂ ಬಾಣಂತಿಯರೂ ಹೆಚ್ಚು ಸಂಖ್ಯೆಯಲ್ಲಿ ಸಾಯುತ್ತಿದ್ದರು. ಇದರ ಪರಿಣಾಮವಾಗಿ ಹೆಂಗಸರ ಸಂಖ್ಯೆ ದಿನೇದಿನೇ ಕ್ಷೀಣವಾಗುತ್ತಿತ್ತು. ಆದ್ದರಿಂದ ಹೆಣ್ಣುಗಳಿಗಾಗಿ ಬಹಳ ಪೈಪೋಟಿ ಇತ್ತು. ಶ್ರೀಮಂತ ವಿಧುರರು ಎರಡು ನೂರು ರೂಪಾಯಿಗಳಿಂದ ಐದುನೂರರ ರೂಪಾಯಿಗಳವರೆಗೆ ಹೆಣ್ಣುಗಳಿಗೆ ತೆರಕೊಟ್ಟು ಮದುವೆಯಾಗುತ್ತಿದ್ದರು. ಈ ಕಾರಣದಿಂದ ನಮ್ಮ ತಂದೆಗೆ ತಮ್ಮ ಸಹೋದರಿಯರ ಮದುವೆ ಮಾಡಲು ಯಾವ ತೊಂದರೆಯೂ ಆಗಲಿಲ್ಲ.’’ ಒಂದು ಪ್ರದೇಶದ ಭೌಗೋಳಿಕ ಸನ್ನಿವೇಶಕ್ಕೂ ಪುರುಷರ ಬಹುಪತ್ನಿತ್ವಕ್ಕೂ, ಅವರ ಸಿರಿವಂತಿಕೆಗೂ, ಗರ್ಭಧಾರಣೆ ಹೆರಿಗೆ ಮುಂತಾದ ಮಹಿಳೆಯರ ಜೈವಿಕ ಆವರ್ತನಗಳಿಗೂ ಇಲ್ಲಿ ಏರ್ಪಟ್ಟಿರುವ ಸಂಬಂಧ ವಿಶಿಷ್ಟವಾಗಿದೆ. ಪುರುಷ ವ್ಯವಸ್ಥೆ ಮಲೇರಿಯಾದಂತಹ ಸನ್ನಿವೇಶವನ್ನೂ ತನಗೆ ಬೇಕಾದಂತೆ ಬಳಸಿಕೊಂಡಿರುವ ಪರಿ ದಿಗ್ಭ್ರಮೆ ತರುತ್ತದೆ. ಮಲೆನಾಡಲ್ಲಿ ಹೆರಿಗೆಯಿಂದ ಮಾತ್ರವಲ್ಲ, ಹಾವು ಕಚ್ಚಿ, ಸೇತುವೆಯಂತಿದ್ದ ಸಂಕಮುರಿದು, ನೆರೆಯಲ್ಲಿ ಕೊಚ್ಚಿಹೋಗಿ- ನಾನಾ ಕಾರಣಕ್ಕೆ ಜನ ಸಾಯುವುದನ್ನು ಮಂಜಪ್ಪ ದಾಖಲಿಸುತ್ತಾರೆ. ಈ ದುರಂತಗಳಿಗೆ ನಾಗರಿಕ ಸೌಲಭ್ಯಗಳಿಲ್ಲದೆ ಇರುವುದು ಅರ್ಧ ಕಾರಣವಾದರೆ, ದಲಿತರು ಬಡವರು ಸ್ತ್ರೀಯರನ್ನು ಕುರಿತ ಸಾಮಾಜಿಕ ಧೋರಣೆ ಇನ್ನರ್ಧ ಕಾರಣ. ಗರ್ಭಿಣಿಯರಾಗುತ್ತಿದ್ದ ವಿಧವೆಯರಿಗೆ ವಿಧಿಸುತ್ತಿದ್ದ ಶಿಕ್ಷೆ ಹಾಗೂ ಅಸ್ಪøಶ್ಯತೆಯ ಆಚರಣೆಗಳಂತೂ ಅಮಾನುಷ. ಗತಕಾಲದ ಕರ್ನಾಟಕವನ್ನು ಎಗ್ಗಿಲ್ಲದೆ ಕೀರ್ತಿಸುವ ಸಂಸ್ಕøತಿ ಚಿಂತಕರು, ಎಷ್ಟೊಂದು ಆತ್ಮವಂಚಕ ಬರೆಹಗಳನ್ನು ಮಾಡಿದರು ಎಂದು ಕಸಿವಿಸಿಯಾಗುತ್ತದೆ. ಬಹುಶಃ ಬ್ರಿಟಿಶರ ಜತೆ ಬಂದ ಪಾಶ್ಚಿಮಾತ್ಯ ಆಧುನಿಕತೆ, ದಲಿತರ ಮತ್ತು ಮಹಿಳೆಯರ ಪಾಲಿಗೆ ಬಿಡುಗಡೆಕೋರನಾಗಿ ಕಾಣಿಸಿದ್ದು ಸಹಜವಾಗಿದೆ. ಲೇಖಕರು ವಸ್ತುಸ್ಥಿತಿಯನ್ನು ಅಡಗಿಸದೆ ಎಲ್ಲವನ್ನೂ ದಾಖಲಿಸುತ್ತಾರೆ.ಲೇಖಕರು ವಕೀಲರಾಗಿದ್ದರಿಂದ ದಿನಾಂಕ, ಮೊಕದ್ದಮೆಯ ಸಂಖ್ಯೆ, ಸಮಯ, ವ್ಯಕ್ತಿಯ ಮತ್ತು ಊರಿನ ಹೆಸರು, ಹಣದ ಮೊಬಲಗು ಇತ್ಯಾದಿಯನ್ನು ಅಂಕಿಸಂಖ್ಯೆ ಸಮೇತ ಕೊಡುತ್ತಾರೆ. “ಉತ್ತರೋತ್ತರ ನಮ್ಮ ತಂದೆ ತಾರೀಖು 24.10.1887ರಂದು ರಿಜಿಸ್ಟರ್ ಆಗಿದ್ದ ಮೂಲಗೇಣಿ ಕರಾರಿನ ಪ್ರಕಾರ ಶ್ರೀರಾಮಚಂದ್ರಾಪುರದ ಮಠದಿಂದ 5 ಎಕರೆ 38ಗುಂಟೆ ತರಿ ಜಮೀನನ್ನೂ 38ಗುಂಟೆ ಅಡಿಕೆ ಬಾಗಾಯ್ತನ್ನು 3 ಗುಂಟೆ ಖುಷ್ಕಿ ಭೂಮಿಯನ್ನೂ ಮೂಲಗೇಣಿಗೆ ಪಡೆದರು’’-ತರಹದ ವಾಕ್ಯಗಳು ಇಲ್ಲಿ ಸಾಕಷ್ಟಿವೆ. ಇವುಗಳಿಂದ ಬರೆಹಕ್ಕೆ ಒಂದು ನಮೂನೆಯ ಖಚಿತತೆ ಬಂದಿದೆ. ಇದುವೇ ಬರೆಹವು ಕಲ್ಪನಾಶಕ್ತಿಯನ್ನು ಬಳಸಿಕೊಳ್ಳುವುದಕ್ಕೆ ತೊಡಕನ್ನೂ ಒಡ್ಡಿದೆ. ತಾವು ಓದುತ್ತಿದ್ದ ಶಾಲೆ ಮೂರು ತಿಂಗಳಿಗೊಮ್ಮೆ ಸುಟ್ಟುಹೋಗುತ್ತಿತ್ತು ಎಂದು ಲೇಖಕರು ನಿರ್ಲಿಪ್ತವಾಗಿ ದಾಖಲಿಸಿ ಮುಂದೆ ಹೋಗುತ್ತಾರೆ. ಅವರೇ ಪ್ರಸ್ತಾಪಿಸುವ ಕ್ರೂರ ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ಸೇಡು ತೀರಿಸಿಕೊಳ್ಳುತ್ತಿದ್ದ ಬಗೆ ಇದ್ದೀತು ಇದು ಎಂದು ಊಹಿಸಲು ಮರೆಯುತ್ತಾರೆ. ಆತ್ಮಕತೆಗಳಲ್ಲಿ ಮುಖ್ಯವಾದುದು ಗತಕಾಲದ ಖಚಿತ ವಿವರಗಳಷ್ಟೇ ಅಲ್ಲ; ಅವನ್ನು ಮಂಡಿಸುವ ದೃಷ್ಟಿಕೋನ, ಅವನ್ನು ವಿಶ್ಲೇಷಿಸಿ ವ್ಯಾಖ್ಯಾನಿಸಿ ಸಮಕಾಲೀನ ಬದುಕನ್ನು ಜೀವಂತಗೊಳಿಸುವ ದಾರ್ಶನಿಕತೆ ಕೂಡ.ಮಲೆನಾಡನ್ನೂ ತಮ್ಮ ಬದುಕನ್ನೂ ಒಟ್ಟಿಗೇ ಮಂಡಿಸುತ್ತಿರುವ ಮಂಜಪ್ಪನವರದು ಉದಾರ ಮಾನವತಾವಾದಿ ದೃಷ್ಟಿಕೋನ. ಕುವೆಂಪು ಸಮಕಾಲೀನರಾಗಿದ್ದ ಅವರು ತಕ್ಕಮಟ್ಟಿಗೆ ವೈಚಾರಿಕ ಮನೋಭಾವ ರೂಢಿಸಿಕೊಂಡಿದ್ದರು. ಆದರೆ ಅವರ ವೈಚಾರಿಕತೆ ಕೆಳಜಾತಿಯ ಸಂಪ್ರದಾಯಗಳನ್ನು ಮೌಢ್ಯವೆಂದು ಹೀಗಳೆಯುವಂತಹದ್ದು; ಗಣ ಬರಿಸುವುದನ್ನು ಅವರು ಕ್ಷುದ್ರದೇವರು ಎಂದು ಕರೆಯುತ್ತಾರೆ. ಆದರೂ ಮಲೆನಾಡಿನ ಕೆಲವು ಆಚರಣೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ. “ಜನಸಾಮಾನ್ಯರಲ್ಲಿ ಅಗಾಧ ಮೌಢ್ಯವಿದ್ದರು ಕೂಡ ಅವರಲ್ಲಿ ಸುಸಂಸ್ಕøತಿಯಿತ್ತು” ಎನ್ನುತ್ತಾರೆ. ಮಲೆನಾಡಿಗರು ಹೆಂಡ ಕುಡಿಯುವುದನ್ನು ವ್ಯಾಖ್ಯಾನಿಸುತ್ತ “ನಾಟಿಕಾಲದಲ್ಲಿ ವಿಪರೀತ ಮಳೆ ಬರುತ್ತಿದುದರಿಂದ ನಾಟಿ ಕೆಲಸಕ್ಕೆ ಹೋಗಿ ಮನೆಗೆ ಬಂದ ನಂತರ ಸಾಮಾನ್ಯವಾಗಿ ಎಲ್ಲರೂ ಅಕ್ಕಿಹೆಂಡವನ್ನು ಸೇವಿಸುತ್ತಿದ್ದರು. ಅಕ್ಕಿಯ ಹೆಂಡ ಕುಡಿದವರು ದೃಢಕಾಯರಾಗಿ ಆರೋಗ್ಯವಂತರಾಗಿದ್ದರು. ಅವರುಗಳ ಮುಖದಲ್ಲಿ ರಕ್ತ ಚಿಮ್ಮುವಂತಿತ್ತು’’ ಎಂದು ವ್ಯಾಖ್ಯಾನಿಸುತ್ತಾರೆ. ಮಿತಿಯೆಂದರೆ, ಅವರೊಳಗೆ ಹೊಕ್ಕಿರುವ ಕುವೆಂಪು ಚಿಂತನೆ ಪುರೋಹಿತಶಾಹಿ ವಿರೋಧದ ವೈಚಾರಿಕ ಪ್ರಜ್ಞೆಯಾಗಿ ಬದಲಾಗದೆ ಹೋಗುವುದು. ಲೇಖಕರು ಆರಂಭದಲ್ಲೇ “ನನ್ನ ಬರವಣಿಗೆಯಲ್ಲಿ ಅಸತ್ಯದ ಮಾತುಗಳು ಸೇರದಿರುವಂತೆ ಅನುಗ್ರಹಿಸಬೇಕೆಂದು” ದೇವರಲ್ಲಿ ಪ್ರಾರ್ಥಿಸುತ್ತಾರೆ. ತನ್ನನ್ನು ಸತ್ಯದ ಪ್ರತಿಪಾದಕನೆಂದು ಬಿಂಬಿಸಿಕೊಳ್ಳುವ ಈ ಧೋರಣೆ ಬಂದಿದ್ದು, ತನ್ನ ವೈಯಕ್ತಿಕ ಮಿತಿಗಳನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಬಲ್ಲ ಗಾಂಧೀಜಿಯ ಪ್ರಾಮಾಣಿಕತೆಯಿಂದ; ಅವರ `ಸತ್ಯದೊಡನೆ ನನ್ನ ಪ್ರಯೋಗಗಳು’ ಎಂಬ ಆತ್ಮಕತೆಯಿಂದ. “ನಾನೊಬ್ಬ ಯಃಕಶ್ಚಿತ್ ವ್ಯಕ್ತಿ. ಭೂಹೀನ ಗೇಣಿದಾರನೊಬ್ಬನ ಮಗನಾಗಿ ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳೆದು ಜೀವನದಲ್ಲಿ ಹಲವು ವಿಧವಾದ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದವನು. ಅನೇಕ ಎಡರು ತೊಡರುಗಳನ್ನು ಎದುರಿಸಿದ್ದ ನಾನು ಅಂದು ಕಷ್ಟಪಟ್ಟಂತೆಯೇ ತಮ್ಮ ಜೀವನದಲ್ಲಿ ಇಂದು ಕಷ್ಟ ಪಡುತ್ತಿರುವ ಜನರಿಗೆ ನನ್ನ ಅನುಭವದಿಂದ ಅಲ್ಪಸ್ವಲ್ಪವಾದರೂ ಪ್ರಯೋಜನವಾಗಬಹುದು ಎಂಬ ಆಶೆ’’ಯಿಂದ ಆತ್ಮಕತೆ ಬರೆದಿರುವುದಾಗಿ ಲೇಖಕರು ಹೇಳಿಕೊಳ್ಳುತ್ತಾರೆ. ಈ ಉದ್ದೇಶವು ತನ್ನ ಆದರ್ಶ ವ್ಯಕ್ತಿತ್ವವನ್ನು ಪ್ರಜ್ಞಾಪೂರ್ವಕವಾಗಿ ಮಂಡಿಸುವುದಕ್ಕೆ ಪೂರ್ವಪೀಠಿಕೆಯಂತಿದೆ. ತನ್ನನ್ನು ಚಾರಿತ್ರ್ಯವಂತನೆಂದು ಬಿಂಬಿಸಿಕೊಳ್ಳುವ ಇಲ್ಲಿನ ಗುಣವೇ ಬರೆಹದ ಪ್ರಾಮಾಣಿಕತೆಗೆ ಚ್ಯುತಿ ತರುತ್ತದೆ. ಆತ್ಮಕತೆ ಬರೆಯುವವರ ಬಾಳು ಪ್ರಾಮಾಣಿಕತೆಯಿಂದ ಕೂಡಿರಬಹುದು. ಅದನ್ನು ಕಟ್ಟಿಕೊಡುವಾಗ ನೈತಿಕ ಅಹಂಕಾರ ಕೂಡಿಕೊಂಡರೆ, ಅಲ್ಲಿನ ವಿನಯ ಕೃತಕವಾಗುತ್ತದೆ. ಸ್ವಂತ ಬದುಕನ್ನು ಶೋಧಿಸಿ ಮರುಮೌಲ್ಯಮಾಪನ ಮಾಡಿಕೊಳ್ಳುವ ಆತ್ಮಕತೆಗಳು ಆತ್ಮಸಂಭಾವಿತನವಿಲ್ಲದ ಕಾರಣದಿಂದಲೇ ಸಹಜವಾಗಿ ಕಾಣುತ್ತವೆ. ಇಂದಿರಾ ಲಂಕೇಶ್, ಇಳಾವಿಜಯಾ, ಸಿಎನ್ಆರ್, ನವರತ್ನ ರಾಮರಾವ್ ಮುಂತಾದವರ ಆತ್ಮಕತೆಗಳು ತಟ್ಟನೆ ನೆನಪಾಗುತ್ತಿವೆ. ಕುವೆಂಪು ಅವರಲ್ಲೂ ಆತ್ಮಸಂಭಾವಿತನವಿದೆ. ಆದರೆ ಅದನ್ನು ದಾಟಿ ಸ್ವಮಿತಿಯನ್ನು ಹೇಳಿಕೊಳ್ಳಬಲ್ಲ ದಿಟ್ಟತನವೂ ಅವರಲ್ಲಿದೆ. ಆತ್ಮಕತೆಗಳು ಬರೆದವರ ವ್ಯಕ್ತಿತ್ವದ ಕನ್ನಡಿಗಳೇನೂ ಹೌದು. ಆದರೆ ಕೆಲವು ಕನ್ನಡಿಗಳು ತೋರಿಸುವ ಬಿಂಬಗಳು ಪೂರ್ತಿ ಅವರವೇ ಆಗಿರುವುದಿಲ್ಲ. ಈ ಅರಕೆಯಿಂದ ಆತ್ಮಕತೆಗಳಿಗೆ ಬಿಡುಗಡೆಯೂ ಇಲ್ಲ. ಅವು ಓದುಗರ ಮೆಚ್ಚುಗೆ ಮತ್ತು ಸಣ್ಣಸಂಶಯದಲ್ಲೇ ತಮ್ಮ ಅಸ್ತಿತ್ವವನ್ನು ಪಡೆದುಕೊಂಡಿರುತ್ತವೆ. ******************************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಅಂಕಣ ಬರಹ-01 ಆತ್ಮಕತೆಯ ಮೊದಲ ಕಂತು.. ಅಸ್ತಿತ್ವವಿಲ್ಲದ ಅವ್ವನ ಹೆಜ್ಜೆಗಳು ಅಕ್ಟೋಬರ್, ೧, ೨೦೦೮ ಕಾರವಾರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲನಾಗಿ ಕರ್ತವ್ಯಕ್ಕೆ ಹಾಜರಾದೆ. ಕಳೆದ ಮೂವತ್ಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿರುವಾಗಿನ ಸಿಹಿ ಕಹಿ ನೆನಪುಗಳ ಚಿಪ್ಪಿನಿಂದ ಪೂರ್ತಿಯಾಗಿ ಹೊರಬರುವುದು ಇನ್ನೂ ಸಾಧ್ಯವಾಗಿರಲಿಲ್ಲ. ಮುಂದಿನ ವೃತ್ತಿನಿರತ ಬದುಕಿನ ನಾಲ್ಕು ವರ್ಷಗಳನ್ನು ಕಾರವಾರದ ಹೊಸ ಪರಿಸರದಲ್ಲಿ ಹೇಗೆ ಹೊಂದಿಸಿಕೊಳ್ಳಬೇಕೆಂಬ ಆಲೋಚನೆ ಒಂದುಕಡೆ ಮನಸ್ಸನ್ನು ಕೊರೆಯುತ್ತಿತ್ತು. ಕಾಲೇಜ್ ಕ್ಯಾಂಪಸ್ಸಿನ ಆವರಣದಲ್ಲಿಯೇ ಪ್ರಾಚಾರ್ಯರ ವಸತಿ ಗ್ರಹದ ಅನುಕೂಲತೆಯಿದೆ. ಅಗತ್ಯವೆನಿಸುವ ಎಲ್ಲ ಮೂಲಭೂತ ಸೌಲಭ್ಯಗಳೂ ಇದ್ದವು. ಸಮುದ್ರ ತೀರದ ನಿಸರ್ಗದ ಸಹಜ ಸುಂದರ ವಾತಾವರಣವೂ ಇದೆ. ಕೇವಲ ನಮ್ಮ ಮನಸ್ಸುಗಳನ್ನು ಇಲ್ಲಿಯ ಪರಿಸರ ಮತ್ತು ಮನುಷ್ಯ ಸಂಬಂಧ ಗಳೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಸಜ್ಜಾಗುತ್ತಿದ್ದೆವು. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಹಿರಿಯ ಮಗ ಸಚಿನ್, ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಇಂಜಿನಿಯಿಂಗ್ ಓದುತ್ತಿರುವ ಎರಡನೆಯ ಮಗ ಅಭಿಷೇಕ್ ನಮ್ಮ ವಸತಿಗ್ರಹ ಮತ್ತು ಕಾಲೇಜ್ ಕ್ಯಾಂಪಸ್ ನೋಡುವುದಕ್ಕಾಗಿಯೇ ಕಾರವಾರಕ್ಕೆ ಬಂದಿದ್ದರು. ಒಂದು ರಾತ್ರಿ ಊಟ ಮುಗಿಸಿ ಕಾಲೇಜು ಮೈದಾನದಲ್ಲಿ ಹೆಂಡತಿ ಮಕ್ಕಳೊಡನೆ ಹೀಗೆ ಹರಟುತ್ತಾ ತಿರುಗಾಡುತ್ತಿದ್ದೆ. ಮೈದಾನದ ಎದುರುಗಡೆ ರಾಷ್ಟ್ರೀಯ ಹೆದ್ದಾರಿ ಹದಿನೇಳರ ಆಚೆ ಸ್ಮಶಾನದ ಕಂಪೌಂಡಿನ ಹೆಬ್ಬಾಗಿಲು ಸರಿಯಾಗಿ ಗೋಚರಿಸುತ್ತಿತ್ತು. ಐದಾರು ದಶಕಗಳ ಹಿಂದೆ ಬರಿಯ ಸಮುದ್ರದ ಬೇಲೆಯಾಗಿದ್ದ ಇದೇ ಸ್ಮಶಾನ ಭೂಮಿಯಲ್ಲಿ ಅಜ್ಜಿಯನ್ನು ಮಣ್ಣುಮಾಡಿದ ಘಟನೆಯನ್ನು ಅವ್ವನ ಬಾಯಿಂದ ಕೇಳಿದ್ದು ನೆನಪಾಯಿತು. ಮಕ್ಕಳಿಗೆ ಹೇಳಿದೆ, “ಐವತ್ತಾರು ವರ್ಷಗಳ ಹಿಂದೆ ನಿಮ್ಮ ಮುತ್ತಜ್ಜಿ ಇದೇ ಸ್ಮಶಾನದಲ್ಲಿ ಮಣ್ಣಾಗಿದ್ದಾಳೆ. ನಾನಾವಾಗ ಎರಡು ತಿಂಗಳ ತೊಟ್ಟಿಲ ಮಗುವಾಗಿದ್ದೆ. ಈಗ ಇಷ್ಟು ವರ್ಷಗಳ ಬಳಿಕ ಈ ಸ್ಥಿತಿಯಲ್ಲಿ ಇಲ್ಲಿಗೆ ಬಂದು ಅಜ್ಜಿಯ ಸಮಾಧಿ ಸ್ಥಳ ನೋಡಬಹುದೆಂದು ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ. ಜೀವನ ಅಂದ್ರೆ ಹೀಗೆಯೇ ಚಿತ್ರವಿಚಿತ್ರ ತಿರುವುಗಳು ನೋಡಿ,” ಎಂದು ಮಾತು ಮುಗಿಸುವಾಗ ನಾನು ಅನಪೇಕ್ಷಿತವಾಗಿ ಭಾವುಕನಾಗಿದ್ದೆ. ಹೆಂಡತಿ ಮಕ್ಕಳಿಗೆ ಸಖೇದಾಶ್ಚರ್ಯ!. ಕುಟುಂಬದವರಿಲ್ಲ. ಜಾತಿ ಬಾಂಧವರಿಲ್ಲ. ಇಂಥಲ್ಲಿ ಅಜ್ಜಿಯ ಹೆಣ ಮಣ್ಣು ಮಾಡಿದ್ದಾರೆ ಅಂದರೆ ನಂಬುವುದಕ್ಕೆ ಆಗದ ಸ್ಥಿತಿಯಲ್ಲಿದ್ದರು. ಅವರಿಗೆ ಆರು ದಶಕಗಳ ಹಿಂದಿನ ಇತಿಹಾಸದ ತುಣುಕೊಂದನ್ನು ಕಥೆಯಾಗಿಸಿ ಹೇಳಬೇಕಾಯಿತು. ಮೈದಾನದ ಕಲ್ಲು ಬೆಂಚಿನ ಮೇಲೆ ಅವರನ್ನು ಕೂಡ್ರಿಸಿಕೊಂಡು ನಮ್ಮ ಅವ್ವನ ನತದ್ರಷ್ಟ ತಾಯಿ ನಾಗಮ್ಮಜ್ಜಿಯ ಪುರಾಣ ಬಿಚ್ಚಿದೆ…. ಕುಮಟಾ ತಾಲೂಕಿನ ನಾಡುಮಾಸ್ಕೇರಿ ಎಂಬ ಪುಟ್ಟ ಗ್ರಾಮದ ಕೃಷಿಕೂಲಿಕಾರ ದಂಪತಿಗಳಾದ ಕೃಷ್ಣ-ನಾಗಮ್ಮ ನಮ್ಮ ಅವ್ವ ತುಳಸಿಯ ತಂದೆ ತಾಯಿಯರು. ತಂದೆ ಕೃಷ್ಣ ಆಗೇರ ನಿರಕ್ಷರಿಯಾದರೂ ಉತ್ತಮ ಯಕ್ಷಗಾನ ಕಲಾವಿದನಾಗಿದ್ದ. ಶೃಂಗಾರ ಪಾತ್ರಗಳಿಗೆ ಹೇಳಿ ಮಾಡಿಸಿದಂತ ವ್ಯಕ್ತಿತ್ವ ಅವನದ್ದಾಗಿತ್ತೆಂದು ಅವ್ವ ಆಗಾಗ ನೆನಪಿಸಿಕೊಳ್ಳುತ್ತಿದ್ದಳು. ತಮ್ಮ ಒಬ್ಬಳೇ ಮಗಳು ತುಳಸಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದೇ ಕನಸು ಕಟ್ಟಿಕೊಂಡು ತಾಯಿ ತಂದೆಯರಿಬ್ಬರೂ ಮಗಳನ್ನು ಶಾಲೆಗೆ ಸೇರಿಸಿದ್ದರು. ಆದರೆ ದೈವೇಚ್ಛೆ ಹಾಗಿರಲಿಲ್ಲ. ದುರ್ದೈವದಿಂದ ತಂದೆ ಕೃಷ್ಣ ಆಗೇರ ಖಚದೇವಯಾನಿ’ ಯಕ್ಷಗಾನ ಬಯಲಾಟದಲ್ಲಿ ಖಚನ ಪಾತ್ರ ಮಾಡುತ್ತಿದ್ದಾಗ ರಂಗದಲ್ಲಿಯೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ. ನಾಲ್ವತ್ತರ ಹರೆಯದ ತಂದೆ ತೀರಿಕೊಂಡಾಗ ಮಗಳು ತುಳಸಿ ಇನ್ನೂ ಮೂರನೆಯ ತರಗತಿಯ ಮುಗ್ಧ ಬಾಲಕಿ. ಊರಿನ ಕೆಲವು ದಲಿತರಿಗೆ ಅಂಕೋಲಾ ತಾಲೂಕಿನ ಹಿಲ್ಲೂರಿನ ಅರಣ್ಯಭೂಮಿಯನ್ನು ಬೇಸಾಯಕ್ಕಾಗಿ ಸರಕಾರ ಮಂಜೂರಿ ನೀಡಿತು. ನಾಡುಮಾಸ್ಕೇರಿಯಲ್ಲದೆ ಸುತ್ತಲಿನ ಹೆಗ್ರೆ, ಅಗ್ರಗೋಣ ಮುಂತಾದ ಗ್ರಾಮಗಳಲ್ಲಿ ಕೂಲಿಮಾಡಿಕೊಂಡಿದ್ದ ಆರೆಂಟು ದಲಿತ ಕುಟುಂಬಗಳು ಸ್ವಂತ ಜಮೀನು ಹೊಂದುವ ಉತ್ಸಾಹದಲ್ಲಿ ಹಿಲ್ಲೂರಿಗೆ ಹೊರಟು ನಿಂತವು. ವಿಧವೆ ನಾಗಮ್ಮಜ್ಜಿ ತನ್ನ ಮಗಳನ್ನು ಕಟ್ಟಿಕೊಂಡು ತಾನೂ ಹಿಲ್ಲೂರಿನೆಡೆಗೆ ಮುಖ ಮಾಡಿದಳು. ಅಲ್ಲಿಗೆ ಅವ್ವನ ಓದುವ ಕನಸು ಭಗ್ನವಾಯಿತು. ನಾಗಮ್ಮಜ್ಜಿ ತಾನೂ ಸ್ವಂತ ಜಮೀನು ಹೊಂದುವ ಆಸೆಯಿಂದ ತನ್ನ ಮಗಳೊಂದಿಗೆ ಹಿಲ್ಲೂರಿಗೆ ಬಂದಳಾದರೂ ಅವಳಿಗೆ ಜಮೀನು ಮಂಜೂರಿಯಾಗಲಿಲ್ಲ. ಸಂಬಂಧಿಕರ ಇದ್ದುಕೊಂಡು ಜಮೀನು ಪಡೆದವರ ಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ಕೂಲಿಯಾಗಿ ದುಡಿದಳು. ಗಟ್ಟಿಗಿಟ್ಟಿಯಾದ ನಾಗಮ್ಮಜ್ಜಿ ಬೆಟ್ಟದ ಭೂಮಿಯ ಬಿದಿರು ಹಿಂಡುಗಳನ್ನು ಕಡಿದು ಬೆಂಕಿಯಿಟ್ಟು ಬಯಲು ಮಾಡಿ, ಕುಠಾರಿ ಹಿಡಿದು ನೆಲ ಅಗೆಯುವ ಕಾಯಕ ನಿಷ್ಠೆಯನ್ನು ಕಂಡ ಬ್ರಿಟಿಷ್ ಅಧಿಕಾರಿಯೊಬ್ಬರು “ನಾಗಮ್ಮನಿಗೆ ಲ್ಯಾಂಡ್ ಸ್ಯಾಂಕ್ಶನ್ ಮಾಡಲೇಬೇಕು” ಎಂದು ಹಠ ಹಿಡಿದು ಅವಳ ಹೆಸರಿಗೂ ಹತ್ತು ಎಕರೆ ಅರಣ್ಯ ಭೂಮಿ ಮಂಜೂರಿ ಮಾಡಿಸಿದರು. ತನ್ನದೇ ಎಂಬ ಭೂಮಿ ದೊರೆತ ಬಳಿಕ ಇನ್ನಷು ಕಷ್ಟಪಟ್ಟು ದುಡಿದ ನಾಗಮ್ಮಜ್ಜಿ ಭೂಮಿಯನ್ನು ಹದಗೊಳಿಸಿಕೊಂಡು ಬೇಸಾಯಕ್ಕೆ ಅಣಿಗೊಳಿಸಿದಳು. ಆದರೆ ಪಟ್ಟಾ ಬರೆಯುವ ಸ್ವಜಾತಿ ಬಂಧು ಶಾನುಭೋಗನೊಬ್ಬ ದಾಖಲೆಗಳಲ್ಲಿ ಈ ಎಲ್ಲ ಜಮೀನನ್ನು ನಾಗಮ್ಮ ಎಂಬ ತನ್ನ ಹೆಂಡತಿಯ ಹೆಸರಿಗೆ ದಾಖಲಿಸಿದ್ದ: ಆರೆಂಟು ವರ್ಷಗಳು ಕಳೆದ ಮೇಲೆಯೇ ತನಗೆ ವಂಚನೆಯಾದ ಸಂಗತಿ ನಾಗಮ್ಮಜ್ಜಿಯ ಅರಿವಿಗೆ ಬಂತಾದರೂ ತನ್ನ ಭೂಮಿಗಾಗಿ ಕಾನೂನು ಇತ್ಯಾದಿ ಬಳಸಿಕೊಂಡು ಹೋರಾಟ ಮಾಡಲು ಅವಳ ಬೆಂಬಲಕ್ಕೆ ಯಾರೂ ಇರಲಿಲ್ಲ. ಬೇರೆದಾರಿಯಿಲ್ಲದೆ ನಾಗಮ್ಮಜ್ಜಿ ತನ್ನ ಮಗಳೊಂದಿಗೆ ಸ್ವಂತ ಊರು ನಾಡುಮಾಸ್ಕೇರಿಗೆ ಮರಳಿದಳು. ***************************************************** ಡಾ.ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ…
ಅಂಕಣ ಬರಹ-01 ನಾಂದಿ ಪದ್ಯ ತೆಂಗಿನ ಮಡಲಿನಿಂದ ನೇಯ್ದ ತಟ್ಟಿ ಆ ಮನೆಯ ಹೊರ ಆವರಣದ ತಡೆ ಗೋಡೆ. ಮಣ್ಣಿನ ನೆಲಕ್ಕೆ ಮಣ್ಣಿನದ್ದೇ ಪರಿಮಳ. ಮಳೆಗಾಲದಲ್ಲಿ ಆ ಮನೆಯ ನೆಲವು ನೀರ ಒಸರಿಗೆ ಹಸಿ ಹಸಿಯಾಗುತ್ತದೆ. ಹೊರಗೆ ಧೋ ಎನ್ನುವ, ಹನಿಹನಿ ಟಪಟಪ ಹನಿಸಿ ಮರ್ಮರಿಸುವ, ಗುನುಗುವ, ಆರ್ಭಟಿಸುವ ಹಠಮಾರಿ ಮಳೆ. ಚಾಪೆಯಂತೆ ಹೆಣೆದ ಆ ತಟ್ಟಿಯನ್ನು ನನ್ನ ಪುಟ್ಟ ಬೆರಳಿನಲ್ಲಿ ಅಗಲಿಸಿ ಒಂದು ಕಣ್ಣನ್ನು ಆ ಖಾಲಿಗೆ ಹೊಂದಿಸಿ..ಇನ್ನೊಂದು ಕಣ್ಣ ಮುಚ್ಚಿ ಹೊರಗೆ ಸುಯ್ಯುತ್ತಿದ್ದ ಮಳೆಯೊಂದಿಗೆ ಮುಗ್ಧ ಮನಸ್ಸಿನ ಅವ್ಯಕ್ತ ಅನುಸಂಧಾನ ನಡೆಯುತ್ತಿತ್ತು. ಎದೆಗೆ ಹೊಯ್ಯತ್ತಿದ್ದ ಭಾವಗಳಿಗೆ ಅಕ್ಷರದ ರೂಪವಿಲ್ಲ. ಆದರೆ ಕಣ್ಣುಗಳಲ್ಲಿ ಚುಕ್ಕಿಗಳ ಹೊಳಪು. ಸ್ಪಷ್ಟವಾಗದ ಅವರ್ಣನೀಯ ಮಾತುಗಳು ಗಿರಕಿ ಹೊಡೆಯುತ್ತಿದ್ದವು. ಅದೇ ಭಾವವನ್ನು ಹೊತ್ತು ಮುಖ ತಿರುಗಿಸುತ್ತಿದ್ದೆ. ಮಗ್ಗದ ಸೀರೆ ಉಟ್ಟ, ಉದ್ದದ ಮೂಗುತಿ, ನತ್ತು ಮೂಗಿಗೇರಿಸಿಕೊಂಡು, ಹಣೆಯಲ್ಲಿ ದೊಡ್ಡದಾಗಿ ಹುಣ್ಣಿಮೆಯ ಚಂದ್ರನಂತ ಕುಂಕುಮ ತಂಪಾಗಿ ನಗುತ್ತಿದ್ದರೆ ..ಅದರದೇ ಬೆಳಕು ಹೊದ್ದಂತೆ ಕಣ್ಣು ಮುಖದಲ್ಲಿ ಮಿಂಚಿನಂತಹ ಬೆಳಕು ಹಾರಿಸಿ ಎದುರಿನ ಕೆಳತುಟಿ ಕಚ್ಚಿ ಕೂತ ಎರಡು ಹಲ್ಲು ಬಿಡುತ್ತಿದ್ದಳು ನನ್ನಜ್ಜಿ. ನಾನು ಮತ್ತೆ ಕಣ್ಣನ್ನು ಹೊರಗಿನ ಮಳೆಗೆ ಸಿಲುಕಿಸುತ್ತಿದ್ದೆ. “ಇನ್ನು ಸ್ವಲ್ಪ ದಿನ ಆಮೇಲೆ ಆಟ ಶುರು..ಈ ಮಳೆ ನಿಲ್ಲುತ್ತಲೇ ಒಂದೊಂದೇ ಮೇಳ ಹೊರಡಲು ಶುರುವಾಗುತ್ತದೆ”. ಒಂದೇ ನೆಗೆತಕ್ಕೆ ಆಕೆಯ ತೆಕ್ಕೆಗೆ ಜೋತು ಬೀಳುತ್ತಿದ್ದೆ. ಮಳೆಯ ಸದ್ದಿನಾಚೆ ಅದನ್ನೂ ಮೀರಿಸುವಂತೆ ಚಂಡೆಯ ಸದ್ದು ಕಿವಿಯೊಳಗೆ ಅನುರಣಿಸಿದಂತೆ ತೊನೆಯುತ್ತಿದ್ದೆ. ಬಣ್ಣಬಣ್ಣದ ವಸ್ತೃ, ಕಿರೀಟ. ಅಬ್ಬಾ!ಆ ಶಕರನ ಮುಖ, ತೆರೆದುಕೊಂಡ ಕಣ್ಣು. ಅದರ ಸುತ್ತ.ಬಣ್ಣದ ರೇಖೆಗಳು. ಅದು ರಾಕ್ಷಸ ವೇಷ. ಎದೆಯಲ್ಲಿ ಬಂದು ಕೂತ ಉರೂಟು ಭಯ..ಶಕಾರ ಎದ್ದ. ಹೋಓಓಓಒ…ಥೈ ಥೈಥೈ… “ಎಲ್ಲೀ…ಆ ವಶಂತ ಶೇನೆ” ದೇಹದೊಳಗೆ ತುಂಬಿಕೊಳ್ಳುವ ಅದು ಯಾವುದೋ ಆವೇಶ. ನಾಯಿ ಓಡಿಸಲು ಮೂಲೆಯಲ್ಲಿ ಕೂತ ಕೋಲು ಬಿಲ್ಲು ಬಾಣವಾಗಿ ಮನಸಿನೊಳಗಿನ ಆ ಪುರುಷಾಕೃತಿ ಮುಖಕ್ಕೆ ಕಟ್ಟಿದ ಕಂಗಿನ ಹಾಳೆಯ ತುಂಡಿನ ಮುಖವಾಡದಿಂದ ಅನಾವರಣಗೊಳ್ಳುತ್ತಿತ್ತು. ನನ್ನ ಪುಟ್ಟ ದೇಹವನ್ನು ತನ್ನ ಆಧೀನಕ್ಕೆ ತಂದು ಕುಣಿಸುತ್ತಿತ್ತು. “ಶಕರ” ಹೂಂಕರಿಸುತ್ತಿದ್ದ. “ಹ್ಹೇ…ವಶಂತಶೇನೆ..ಎಲ್ಲಿರುವೆ. ಬಂದೆ ನಾನು… “ ಕೇವಲ ಎರಡು ಹಲ್ಲಿನ ಬೊಜ್ಜುಬಾಯಿ ಅಗಲಿಸಿ ಈ ಸೂತ್ರಧಾರಿ ನನ್ನಜ್ಜಿ ನಗುತ್ತಿದ್ದಳು…ನಗು ನಗು.. ” ಅಬ್ಬಬ್ಬಾ..ಈ ಶಕರನ ಧಾಳಿ ತಡಕೊಳ್ಳುವುದು ಕಷ್ಟ. ಏ.. ನಿಲ್ಲಿಸು..ನಿನ್ನ ವಶಂತ..ಶೇನೆ ಬರುತ್ತಾಳೆ..ಇಲ್ಲದಿದ್ರೆ ಈಗ ಕೋಲು ಬರ್ತದೆ.” ಮತ್ತೆ ನಗು. ಆ ನಗುವಿನಿಂದ ಮತ್ತಷ್ಟು ಹುಮ್ಮಸ್ಸು ಏರಿ ತೆಂಗಿನ ಕಾಯಿಯ ತುದಿ ಸಿಪ್ಪೆ ಸಮೇತ ( ಅದು ವಸಂತಸೇನೆಯ ಮುಡಿ) ಹಿಡಿದು ಎಳೆತರುತ್ತಿದ್ದೆ. ಕುಣಿತ..ಸುತ್ತುಸುತ್ತಿ ಸುತ್ತಿ ಗಿರ್ ಗಿಟಿ ಹಾಕಿ ಒದ್ದೆ ನೆಲದಲ್ಲಿ ಕುಸಿಯುತ್ತಿದ್ದೆ. ನನ್ನೊಳಗೆ ಚಂಡೆಯ ಅಬ್ಬರ ಏರುತ್ತಲೇ ಇತ್ತು. ವಸಂತಸೇನೆ ಆರ್ತಳಾಗಿ ಅಜ್ಜಿಯತ್ತ ನೋಡುವಂತೆ ಭಾಸವಾಗುತ್ತಿತ್ತು. “ರಕ್ಷಿಸಿ..ಎಲ್ಲಿ ನನ್ನ ಚಾರುದತ್ತ..” “ತರ್ತೇನೆ ಈಗ ಕೋಲು..ನಿನ್ನ ಪಾಠ ಪುಸ್ತಕ ಎಲ್ಲುಂಟು. ಅದು ಚೀಲದಿಂದ ಹೊರ ಬರಲಿಕ್ಕೆ ಉಂಟಾ.. ಆಟದ ಸುದ್ದಿ ತೆಗೆದದ್ದೇ ದೊಡ್ಡ ತಪ್ಪಾಯ್ತು. ನೋಡ್ತೇನೆ ನಿನ್ನ ಮಾರ್ಕು.ಕುಂಡೆಗೆ ಬಿಸಿ ಬರೆ ಹಾಕಲಿಕ್ಕುಂಟು..ಆಮೇಲೆ ಶಕಾರ,ವಸಂತಸೇನೆ.” ಅವಳ ಜೋರು ಕಿವಿಯ ಬದಿಯಿಂದ ಹಾದುಹೋದರೆ ಒಳಗಿಳಿದು ಸದ್ದು ಮಾಡುವುದು ಯಕ್ಷಗಾನದ ಆ ಪಾತ್ರಗಳು. ಶುರುವಾಗುತ್ತಿತ್ತು. ಪುಟ್ಟ ಮನಸ್ಸಿನೊಳಗೆ ರಂಗಿನಾಟ..ಬಣ್ಣ ಗಾಢವಾಗುತ್ತಲೇ ಹೋಗುತ್ತಿತ್ತು. ಕಲ್ಪನಾಲೋಕದೊಳಗಿನ ಒಡ್ಡೋಲಗ. ರಾಜ, ರಾಣಿ ರಾಜಕುಮಾರ, ರಾಕ್ಷಸ ಅವತರಿಸಿ ನನ್ನಲ್ಲಿ ನಶೆ ಏರಿಸುತ್ತಿದ್ದ ಪರಿ. ಹನಿದ ಮಳೆ ಕ್ಷೀಣವಾಗುತ್ತಾ,ಆಗುತ್ತಾ, ಮಾಯಾ ಲೋಕದೆಡೆಗೆ ಸರಿದು ಹೋದರೆ..ಬಿಳಿಬಿಳಿ ಚಳಿ ಧರೆಗಿಳಿಯುತ್ತಿತ್ತು. ಪೆಟ್ಟಿಗೆ ಸೇರಿದ್ದ ಪುರಾಣದ ಪಾತ್ರಗಳ ರಂಗಸಜ್ಜಿಕೆ ಮೈ ಕೊಡವಿ ಎದ್ದು..ಮೇಳಗಳು ಸಂಚಾರಕ್ಕೆ ಹೊರಡುತ್ತಿದ್ದವು. ಇರುಳು ಕವಿಯುತ್ತಲೇ ಯುಗ ಬದಲಾಗಿ ತ್ರೇತಾ ,ದ್ವಾಪರ ತೆರೆದುಕೊಂಡು ರಾಮ,ಕೃಷ್ಣ ಎಲ್ಲರೂ ಧರೆಗಿಳಿಯುತ್ತಿದ್ದರು. ಅಜ್ಜಿಯ ಸೊಂಟದಲ್ಲಿ ಕೂತು ಆರಂಭವಾದ ನನ್ನ ಅವಳ ಈ ಯಕ್ಷಲೋಕದೆಡೆಗಿನ ಪಯಣ ಅವಳ ಕೈ ಹಿಡಿದು ನಾನು ನಡೆಸುವವರೆಗೂ ಸಾಗಿತ್ತು. ರಾತ್ರಿ ಬಯಲಾಟದ ವೀಕ್ಷಣೆ.. ಹಗಲಿಗೆ ಅರೆಮಂಪರಿನಲ್ಲಿ ಒಳಗಡೆಯ ಚಂಡೆಯ ಸದ್ದಿಗೆ ಸಿಕ್ಕಿದ ಕೋಲು ಹಿಡಿದು ಕುಣಿತ..ಅಮ್ಮನ ಹಳೆಯ ಸೀರೆ ತುಂಡು, ಸೋದರ ಮಾವನ ಲುಂಗಿಗಳು..ಒಡ್ಡೋಲಗದ ಪರದೆ, ಬಗೆಬಗೆಯ ವಸ್ತ್ರಗಳಾಗಿ ಕಲ್ಪನಾಲೋಕದ ಭ್ರಮರವು ಮನಸೋ ಇಚ್ಛೆ ಹಾರುತ್ತಲೇ ಇತ್ತು. ಶಾಲೆಗೆ ಹೋಗಿ ಕೂತರೂ ವೇಷ ಎದುರುಬಂದಂತೆ.. “ಬಂದಳು..ಚೆಲು..ವೆ ಚಿತ್ರಾಂಗದೆ.” ಅದೆಷ್ಟು ಹೊಸ ಹೊಸ ಪಾತ್ರಗಳು ಮನಃಪಟಲದಲ್ಲಿ ಅರಳಿ ನಾನೇ ಅದಾಗಿ ರೂಪುಗೊಳ್ಳುವ ಚೆಂದವೆಂತಹುದು…ಆಹಾ..ನನಗೋ ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಿ ಹೊರತರಬೇಕಾದ ತುರ್ತು. ಪಕ್ಕದಲ್ಲಿ ಕೂತ ಗೆಳತಿಯರಿಗೆ ಸ್ಲೇಟಿನಲ್ಲಿ ಟೀಚರ್ ಕೊಟ್ಟ ಲೆಕ್ಕ ಬಿಡಿಸಿ, ಮಗ್ಗಿ ಬರೆದು ಆಮಿಷ ಹುಟ್ಟಿಸುತ್ತಿದ್ದೆ. ಆಮೇಲೆ ನಾನು ಕಥೆ ಹೇಳುವುದನ್ನು ನೀನು ಕೇಳಬೇಕು. ಮನೆಗೆ ಓಡಬಾರದು ಹೀಗೆ ಹಲವು ಒಳ ಒಪ್ಪಂದಗಳು. ಹೊಸ ಹೊಸ ಪಾತ್ರಗಳು ನನ್ನಲ್ಲಿ ಬಣ್ಣ ಹಚ್ಚಿಕೊಳ್ಳುತ್ತಿದ್ದವು. ರಾತ್ರಿ ಎದೆಗಿಳಿದ ಅವುಗಳ ಮಾತುಗಳು ಚೂರು ಪಾರು ಮಾರ್ಪಾಡು ಹೊಂದಿ ಬಣ್ಣದ ಚಿತ್ತಾರದ ಗ್ಲಾಸಿನಲ್ಲಿ ತುಂಬಿದ ಶರಭತ್ತಿನ ರುಚಿಯಂತೆ ವ್ಯಕ್ತವಾಗುತ್ತಿದ್ದವು. ಮತ್ತೆ ಆ ಪಾತ್ರಗಳಿಗೆ ಹೆಸರು ಹುಡುಕುವ ಪರದಾಟ. ಸೌದಾಮಿನಿ, ಧಾರಿಣಿ, ಮೈತ್ರೇಯಿ, ವೈದೇಹಿ..ಎಲ್ಲರೂ ಬಿಂಕ ಲಾಸ್ಯದಿಂದ ಗೆಜ್ಜೆ ಕಟ್ಟಿ ಮನೆ ಕದ ತೆರೆದು ಹೊರಗಡೆ ಹಾರುತ್ತಿದ್ದರು. ಅದೊಂದು ಅದ್ಭುತ ಲೋಕ. ಅರಿವಿನ ಜಗತ್ತು ಮೊಳಕೆಗೊಳ್ಳುವ ಮುನ್ನವೇ ಅಜ್ಜಿಯೆಂಬ ಅಚ್ಚರಿಯ ಮಾಂತ್ರಿಕಳು ನನ್ನೊಳಗೆ ಕಲ್ಪನೆಯ ಪ್ರಪಂಚ ತೆರೆದು ತೋರಿಸಿ ನನ್ನನ್ನು ಅಲ್ಲಿ ಕೂರಿಸಿದ್ದಳು. ತನ್ನ ಚಿರಿಟಿ ಹೋದಂತಹ ಸೊಂಟದಲ್ಲಿ ನನ್ನ ಕೂರಿಸಿ ಥಂಡಿ ಗಾಳಿಯ ಒರೆಸುತ್ತ ದೇವಾಲಯದ ಎದುರಿನ ಗದ್ದೆ, ಶಾಲೆಯ ಎದುರಿನ ಬಯಲು, ಯಾರದೋ ಮನೆಯಂಗಳದಲ್ಲಿ ನಡೆವ ಹರಕೆಯ ಬಯಲಾಟ ಒಂದನ್ನೂ ಬಿಡದೆ ರಾತ್ರಿ ತೆಂಗಿನೆಣ್ಣೆ, ಉಪ್ಪು ಬೆರೆಸಿದ ಕುಚುಲಕ್ಕಿ ಗಂಜಿ ಉಣಿಸಿ ಕಂಡೊಯ್ಯುತ್ತಿದ್ದಳು. ಅಲ್ಲೇ ಆ ಮಣ್ಣಿನ ನೆಲದಲ್ಲಿ ಕಣ್ಣು ಬಾಯಿ ಕಿವಿ,ಮೂಗು, ಮೈಯೆಲ್ಲ ಅರಳಿಸಿ ಕೂತು ಆಟ ನೋಡುತ್ತಿದ್ದೆ. ಈ ಜಗದ ತಂತು ಕಡಿದು ಅಲ್ಲೆಲ್ಲೋ ಸೇರಿದಂತೆ..ಎಂತಹ ವಿಸ್ಮಯ ಪ್ರಪಂಚವದು. ದೇವತೆಗಳು ಬರುತ್ತಿದ್ದರು. ಸುಂದರ ಉದ್ಯಾನವನ, ಅತಿ ಸುಂದರ ರಾಜಕುಮಾರಿ, ಆ ರಾಜ..ಈ ರಾಕ್ಷಸ.. ಮತ್ತೆ ಯುದ್ದ..ಆರ್ಭಟ. ಅತ್ಯಂತ ಮನೋಜ್ಞವಾಗಿ, ಚಾಕಚಕ್ಕತೆಯಿಂದ ,ಕೌಶಲ್ಯದ ಮಾತುಗಳ ಕೊಂಡಿಗಳು ಕ್ಕೋ ಕೊಟ್ಟಂತೆ,ಅರಳು ಅರಳಿದಂತೆ ಹರಡಿಕೊಳ್ಳುತ್ತಿದ್ದವು. ರಾಜಕುಮಾರಿಯ ಜೊತೆಗಿನ ಸಖಿಯಾಗಿ, ಆ ರಾಜಕುಮಾರಿಯೇ ನಾನಾಗಿ ಅಲೆದಾಟ,ನಗು,ಅಳು, ವಿರಹದ ಅರ್ಥವೇ ಇಣುಕದ ವಯಸ್ಸಿನಲ್ಲಿ ವಿರಹ ಶೃಂಗಾರ ಎಲ್ಲವೂ ತಣ್ಣಗೆ ಮುಗ್ಧ ಮನಸ್ಸಿನ ಒಳಗಿಳಿಯುತ್ತಿತ್ತು. ಆಗೆಲ್ಲ ರಾಮಾಯಣ, ಮಹಾಭಾರತದ ಕಥೆಗಳು ಹಾಗೂ ಅಲ್ಲಿ ಸಿಗುವ ಉಪಕಥೆಗಳು ಬಯಲಾಟದ ಪ್ರಸಂಗಗಳಾಗಿರುತ್ತಿದ್ದವು. ಭಕ್ತಿಪ್ರಧಾನ,ನೀತಿಭೋದಕ ಕಥೆಗಳು. ಇಂತಹ ಸಂದರ್ಭದಲ್ಲೇ ಆ ಪುಟ್ಟ ವಯಸ್ಸಿನಲ್ಲಿ ನೋಡಿದ ವಸಂತಸೇನೆ ಎಂಬ ಪ್ರಸಂಗ ಬಹಳ ಆಳಕ್ಕಿಳಿದು ನನ್ನ ಕುಣಿಸುತ್ತಿತ್ತು. ನಿಜವೆಂದರೆ ನಂತರದ ದಿನಗಳಲ್ಲಿ ಕಥೆ ಮಾಸಿದರೂ, ಅದರಲ್ಲಿ ಬರುವ ವಸಂತಸೇನೆಯ ಪ್ರೀತಿ ಹಾಗೂ ಖಳನಾಯಕ ಶಕರನ ಗಟ್ಟಿ ಸೀಳುಧ್ವನಿಯ ಮಾತು ಉಳಿದುಬಿಟ್ಟಿತು. ಶಕರ ಬಂದ ಎಂದರೆ ಹೆದರಿಬಿಡುತ್ತಿದ್ದೆ. ಮತ್ತೆ ನಾನೇ ಶಕರನಾಗಿ ಕುಣಿಕುಣಿದು.. ‘ಎಲ್ಲಿ ಆ ವಶಂತ ಶೇನೆ ‘ ಎನ್ನುತ ಅದೇ ಶೈಲಿಯಲ್ಲಿ ದೊಡ್ಡ ಹೆಜ್ಜೆ ಇರಿಸಿ ಸಂಭ್ರಮಿಸುತ್ತಿದ್ದೆ. ಹಗಲಲ್ಲಿ ಶಕರನಾಗಿ ಬದಲಾಗುವ ನಾನು ರಾತ್ರಿ ಊಟದ ಸಮಯ ಬಂದು ಶಕರ ಎಂದರೆ ಹೆದರಿ ಗಬಗಬ ಉಣ್ಣುತ್ತಿದ್ದೆ. ರಾತ್ರೆಯಾದರೆ ನಾನು ಥೇಟು ವಸಂತಸೇನೆ!. ರಂಗ ಏರುವ ಆಸೆ,ನಶೆ..ತೀರದ ಹುಚ್ಚಿಗೆ ಈ ಬಯಲಾಟಗಳೇ ಮೊದಲ ಸಜ್ಜಿಕೆ. ನಿಂತಲ್ಲಿ, ಕೂತಲ್ಲಿ ಶಕರ, ವಸಂತಸೇನೆ, ಶ್ವೇತಕುಮಾರ, ದ್ರೌಪದಿ, ದಮಯಂತಿ,..ಸಾಲು ಸಾಲು ಪಾತ್ರಗಳು ನನ್ನನ್ನು ಗಟ್ಟಿಯಾಗಿ ಆವರಿಸಿಕೊಳ್ಳತೊಡಗಿದವು. ಎಲ್ಲೋ ಒಂದಿನಿತು ಮರೆಗೆ ಹೋಗಲು ಯತ್ನಿಸಿದರೆ ಈ ಜಾದೂಗಾರಿಣಿ ಅಜ್ಜಿ ಮತ್ತೆ ಮತ್ತೆ ತುತ್ತು ಇಡುವಾಗ, ತಲೆಗೆ ನೀರು ಹೊಯ್ಯುವಾಗ, ಎಣ್ಣೆಯಿಟ್ಟು ಜಡೆ ಹೆಣೆಯುವಾಗ, ಬೇಸರದ ಕ್ಷಣಗಳಲ್ಲಿ ಮುದ್ದಿಸುವಾಗ ಕಥೆಯ ಮಾಲೆ ಹೊರತೆಗೆದು ಒಂದೊಂದಾಗಿ ಬಿಡಿಸುತ್ತಿದ್ದಳು. ಓಹ್..ಎಂತಹ ಶ್ರೀಮಂತ ದಿನಗಳವು. ಆ ದಿನಗಳು ನನ್ನ ನಾಟಕ ಬದುಕಿನ ಮೊದಲ ಪುಟಗಳು ಅನ್ನಲೇ,ಅಥವಾ ಮುನ್ನುಡಿ ಬರಹ ಅನ್ನಲೇ. ************************************************************************ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.






