ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ಮಗುವಿನ ಪರಿಮಳ ಆ ಮಗು ಹುಟ್ಟಿ ಆಗಷ್ಟೇ ಮೂರು ತಿಂಗಳು ದಾಟಿರಬೇಕು. ಬೆಳಕಿನತ್ತ ಮುಖ ಮಾಡುತ್ತೆ. ಹೊಸ ಮುಖಗಳನ್ನು ನಿರ್ಮಲ ಕಣ್ಣುಗಳೊಳಗೆ ತುಂಬಿ ಏನೋ ನೆನಪಿಸಿಕೊಂಡಂತೆ ತನ್ನಷ್ಟಕ್ಕೇ ಮುಗುಳು ನಕ್ಕು ದೃಷ್ಟಿ ಬದಲಿಸುತ್ತೆ.  ಮಾಮನಿಗೆ ಆ ಮಗುವಿನೊಂದಿಗೆ ಆಡುವುದೆಂದರೆ ಇಷ್ಟ!. ಆತ, ಮಗುವಿನ ನುಣುಪು ಹೊಟ್ಟೆಗೆ, ಹೊಕ್ಕುಳ ಸುತ್ತ ತನ್ನ ಮೂಗು ಸವರಿ ” ಪಂಬಳ ಪಂಬಳ ಬತ್ತನ್ನೇ!” ( ಪರಿಮಳ ಪರಿಮಳ ಬರ್ತಿದೇ!) ಅಂತ ಆಘ್ರಾಣಿಸುತ್ತಾನೆ. ಮಗು ತನ್ನ ಬೊಚ್ಚುಬಾಯಿ ಅಗಲಿಸಿ ಗಟ ಗಟ ನಗುತ್ತೆ. ಪುಟ್ಟ ಕೈಗಳನ್ನು ಚಪ್ಪಾಳೆ ಹೊಡೆಯುವಂತೆ ಅಲುಗಾಡಿಸುತ್ತೆ!. ಹೌದು!! ಮಗುವಿಗೆ ಅನೂಹ್ಯ ಪರಿಮಳವಿದೆ.‌ ಆ ಪರಿಮಳ ಮುಗ್ಧ ಪರಿಮಳ. ಕಲಬೆರಕೆಯಾಗದ ಪರಿಮಳ. ಈ ಲೋಕದ್ದೇ ಅಲ್ಲವೋ ಎನ್ನುವ ಪ್ರೀತಿಯ ಪರಿಮಳ. ಮಗು ಬೆಳೆಯುತ್ತಾ ಹೋದಂತೆ, ಆ ಪರಿಮಳ ಮರೆಯಾಗಿ, ಕಲೆಯುತ್ತಾ, ಕಲಿಯುತ್ತಾ ಹೋದಂತೆ,  ಸಮಾಜದ ‘ವಾಸನೆ’ ದೇಹಕ್ಕಂಟುತ್ತೆ.  ಮಗುವಿನ ಪರಿಮಳವನ್ನು ಉಳಿಸಿಕೊಳ್ಳಲು ಸಾಧ್ಯವಿದೆಯೇ?. ಆರು ದಶಕಗಳ ಬದುಕಿನ ದಾರಿಯಲ್ಲಿ ಇಷ್ಟೊಂದು ಗಂಧಗಳು ಮೈ ಮನಸ್ಸಿಗೆ ಅಂಟಿಕೊಳ್ಳುವಾಗ ಮಗುವಾಗಿದ್ದಾಗಿನ ಪರಿಮಳ ಉಳಿಸಿಕೊಂಡು ಹಿಂತಿರುಗಿ ನೋಡಿದರೆ ಹೇಗಿರಬಹುದು!? ಬೆಂಗಳೂರಿನ –  ” ಇಷ್ಟು ಕಾರು, ಬಸ್ಸು,  ಮೆಟ್ರೋ ರೈಲುಗಳು ಓಡಾಡುವ ಜಾಗದಲ್ಲಿ, ಉಸಿರಿದ್ದರಷ್ಟೇ ಸಾಕು ಎಂದು ಜನರು ನಿಟ್ಟುಸಿರಿಡುವಲ್ಲಿ ದೊಡ್ಡದೊಂದು ತೆಂಗು ಗರಿ ತೇಲುತ್ತಾ ಮನೆಯೊಳಕ್ಕೆ ಬಂದು ಬಿದ್ದಿದ್ದನ್ನು ನಂಬುವುದು ಹೇಗೆ?!. ಮನುಷ್ಯರಿಗೆ ಮನುಷ್ಯನ ದನಿಯೇ ಕೇಳದ ಜಾಗದಲ್ಲಿ ಈ ವಲಸೆ ಗರಿಯ ಸದ್ದು ಅವಳಿಗೆ ಕೇಳಿದ್ದಾದರೂ ಹೇಗೆ?!” ಹೀಗೆ ಪೇಟೆಯಲ್ಲಿ ಮನೆಕಟ್ಟಿದ ವಯಸ್ಕ ಮನಸ್ಸೊಳಗೆ ಬಾಲ್ಯದ ನೆನಪಿನ ತೆಂಗಿನ ಮಡಲು ಹಾರಿ ಬರುತ್ತೆ.  ಆಕೆ, ಆ ಮಡಲಿನ ಒಂದೊಂದೇ ಪುಟ್ಟ ಗರಿಗಳನ್ನು ಕೀಳುತ್ತಾಳೆ. ಮೊದಲು ಹೆಣೆಯುವುದೇ ಚಾಪೆ!. ಅದರಲ್ಲಿ ಕುಳಿತು ಗರಿಯ ವಾಚು, ಊದಲು ಪೀಪೀ ಗೆಳೆಯರನ್ನು ಕರೆದು ಅವರಿಗೆಲ್ಲ ‘ಕನ್ನಡಕ’. ” ಕಣ್ಣ ಕನಸುಗಳು ಗರಿಯ ತೋರಣ ಕಟ್ಟಿದವು. ಎಲ್ಲರೂ ಗಿರಗಿಟ್ಟಲೆಯಾಗಿ ಗರಗರ ತಿರುಗಿದರು. ಒಂದೊಂದೇ ಗರಿಗಕ್ಕಿಗಳ ಮಾಡಿ ಹಾರಲು ಬಿಟ್ಟರು.” ಆ ಹಕ್ಕಿಗಳು, ನೆರೆಮನೆಗಳ ಜಜ್ಜಕ್ಕೆ ಬಡಿದು, ಚರಂಡಿಯಲ್ಲಿ ಸಿಕ್ಕಿ ಉಸಿರುಗಟ್ಟಿ, ಗಾಳಿಯ ಚಕ್ರಕ್ಕೆ ಸಿಕ್ಕಿ, ಸಾಯುತ್ತವೆ. ಚೆಲ್ಲಾಪಿಲ್ಲಿಯಾದ ಹಕ್ಕಿಗಳ ಬದುಕನ್ನು ಕಂಡ ಗೆಳೆಯರು ಜಾಗ ಖಾಲಿ ಮಾಡುತ್ತಾರೆ.  ಆದರೆ, ಆಕೆ ಉಳಿದ ಗರಿಗಳನ್ನು ಕಟ್ಟಿ ಪೊರಕೆ ಮಾಡಿ, ಕನಸಿನ ಹಿಡಿಕೆಯನ್ನು ಗರಿಯಲ್ಲೇ ಕಟ್ಟುತ್ತಾಳೆ!. ಅದಕ್ಕೇ ಆಕೆ ಮಗುವಾಗಿದ್ದಾಗಿನ ಪರಿಮಳ ಇನ್ನೂ ಇದೆ!. ಎಂ. ಆರ್. ಕಮಲಾ ಅವರ ಗದ್ಯಗಂಧೀ ಕವಿತೆಗಳು ಪುಸ್ತಕದ ಸಾಲುಗಳವು. ಇದೊಂದು ಆತ್ಮಕವಿತೆ! ಬಾಲ್ಯದ ನಿರ್ಮಲಾನಂದೋಬ್ರಹ್ಮನ ಅನುಭೂತಿಯನ್ನು ಹೊತ್ತು, ಜೀವಕೋಶಗಳು ಬಲಿತಂತೆ, ಸುತ್ತಲಿನ ಒಂದೊಂದೇ ವಾಸನೆಗಳನ್ನು ತುಂಬಿ ಲಯಿಸಿಕೊಂಡು, ಒಂದೊಂದೇ ಬಣ್ಣವನ್ನು ಕಲೆಸಿ ಲೇಪಿಸಿಕೊಂಡು, ತನ್ನ ಸುತ್ತಲೂ ಸ್ವರ ಮಂಡಲದ ಹಲವು ತರಂಗಗಳ ಸಂಕೀರ್ಣ ಪ್ರಸ್ತಾರವನ್ನು ಸಂಗೀತವಾಗಿಸಿಕೊಂಡು, ರುಚಿಗೆ ರುಚಿಯಾಗಿ ರುಚಿಕಟ್ಟಿ ಅಭಿರುಚಿ ಸೃಷ್ಟಿಸಿಕೊಂಡು ನಡೆದ ದಾರಿಯ ಇನ್ನೊಂದು ತುದಿಯಲ್ಲಿ ಕವಯಿತ್ರಿ ನಿಂತು, ಪ್ರತಿಫಲಿಸುತ್ತಾರೆ. ‘ಗದ್ಯಗಂಧೀ ಕವಿತೆಗಳು’, ಪುಸ್ತಕದಲ್ಲಿ, ಹಾಗೆ ನೋಡಿದರೆ ಒಂದೇ ಕವಿತೆಯಿದೆ, ಅಂತ ನನ್ನ ಅನಿಸಿಕೆ. ಒಂದೊಂದೇ ಪುಟವೂ ಒಂದು ಭಾವಕ್ಕೆ, ಇಂದ್ರಿಯಗ್ರಾಹ್ಯ ಅನುಭವಕ್ಕೆ, ನಗೆಯ ಚಿಗುರು ತುಟಿಗೆ, ನೋವಿನ ಕಣ್ಣೀರ ಬಿಂದುಗಳಿಗೆ ‘ಗಂಧ’ವಾಗುತ್ತೆ. ಮಹಾಭಾರತ ಆರಂಭವಾದದ್ದೇ ರಾಜ ಆಕರ್ಷಿತನಾದ ಆ ಗಂಧದಿಂದ. ಶಂತನು ಮಹಾರಾಜ ‘ಯೋಜನಗಂಧಿ’ ಯ ಪರಿಮಳಕ್ಕೆ ಸೋತ ಕ್ಷಣವದು. ‘ಗಂಧ’ ಕ್ಕೆ ಅಂತಹ ಅಪರಿಮಿತ ಶಕ್ತಿಯೂ ಇದೆ, ವ್ಯಾಪ್ತಿಯೂ ಇದೆ. ಗದ್ಯಗಂಧೀ ಕವಿತೆಗಳು, ಇದರ ಎಲ್ಲಾ ಪುಟಗಳ ತುಂಬಾ ಮನಸ್ಸಿನೊಳಗಿನ ಪದರಗಳಲ್ಲಿ ಮೂಡಿದ ಪ್ರತಿಮೆಗಳು ನಿತ್ಯನೋಟದ ವಸ್ತುಗಳ ರೂಪದಲ್ಲಿ ಪ್ರಕಟವಾಗುತ್ತದೆ. ಪ್ರತೀ ಪುಟದಲ್ಲೂ ಮಗು ಮನಸ್ಸು ಮತ್ತು ಸಮಾಜದ ಕಲೆಕ್ಟಿವ್ ಮನಸ್ಸುಗಳ ತುಯ್ದಾಟ ಹಲವು ರೂಪ ಪಡೆದು ಚಿಂತನೆಗೆ ಹಚ್ಚುತ್ತವೆ. ಗದ್ಯದಂತಹ ಸಾಲುಗಳಲ್ಲಿ, ಪದ್ಯಾತ್ಮ ಪ್ರತಿಷ್ಠೆ ಮಾಡುವ ಪ್ರಯತ್ನ ಎನಬಹುದೇ?. ಸಾಧಾರಣವಾಗಿ ಹಿಂದಿ/ ಉರ್ದು ಶಾಯರಿಗಳಲ್ಲಿ ಕಂಡು ಬರುವ ಪಂಚ್ ಲೈನ್ ನ ಹಾಗೆ ಪುಟದ ಕೊನೆಗೆ ಕವಯಿತ್ರಿ, ತನ್ನ ಥಾಟ್ ಲೈನ್ ಅನ್ನು ಪ್ರಕಟಿಸುತ್ತಾರೆ. ಆ ಸಾಲು, ಬಾಲ್ಯದ  ಗಂಧಕ್ಕೇ ವಾಲಿರುವುದೂ ಅಥವಾ ಅದನ್ನು ರಿ-ಇನ್ವೆಂಟ್ ಮಾಡುವ ಪ್ರಯತ್ನ ನಡೆಯುವುದೂ ಸ್ಪಷ್ಟ. ಇದಕ್ಕೆ ಸಾಮ್ಯವಿರುವ ಪ್ರಯತ್ನವೇ ಎಂದು ಹೇಳುವ ಭಾಷಾ ಪಾಂಡಿತ್ಯ ಇಲ್ಲದಿದ್ದರೂ, ವಿದ್ಯಾರ್ಥಿಯ ಕನವರಿಕೆಯ ಹಾಗೆ, ಇದನ್ನು ಉಲ್ಲೇಖಿಸ ಬಯಸುತ್ತೇನೆ. ಕೆ.ವಿ.ತಿರುಮಲೇಶ್ ಅವರ ಈ ಮಹತ್ತರವಾದ ಅಕ್ಷಯ ಕಾವ್ಯ ಪುಸ್ತಕದಲ್ಲಿ ಸುಮಾರು ೪೭೮ ಪುಟಗಳು. ಬಿಡಿ ಬಿಡಿಯಾದ,ಆದರೂ ಇಡಿಯಾದ ಕವಿತೆಗಳು. ತಮ್ಮ ಅಕ್ಷಯ ಕಾವ್ಯ ಪುಸ್ತಕದ ಮುನ್ನುಡಿಯಲ್ಲಿ, ಅವರು ಹೀಗೆ ಬರೆಯುತ್ತಾರೆ. ” ಸೂತ್ರಬದ್ಧತೆ, ಸುಸಂಬದ್ಧತೆ, ಕ್ರಮಬದ್ಧತೆ ಮುಂತಾದ ಯಾವುದೇ ಬದ್ಧತೆಗಳನ್ನು ಈ ಕಾವ್ಯ ಪರಿಪಾಲಿಸಿದ್ದಕ್ಕಿಂತ ಉಲ್ಲಂಘಿಸಿದ್ದೇ ಹೆಚ್ಚು. ಆದ್ದರಿಂದ ಸಾಲು ಸಾಲುಗಳ ನಡುವೆ ಕಂದಕಗಳು ನಿಜವಾದ ಕಂದಕಗಳು ಆದರೂ ಇಲ್ಲೆಲ್ಲೂ ಅಮಾನುಷ ಪ್ರಪಂಚವಿಲ್ಲ…ಕಾವ್ಯಕ್ರಿಯೆಯ ಒಳಹೊರಗಣ ಸೀಮೆಗಳ ಮಿತಿಗಳ ಸ್ಪರ್ಶಿಸುತ್ತಲು ಹಿಂದೆಗೆಯುತ್ತಲು ಮುಗಿಯದ ಕ್ರಿಯೆ ಸದ್ಯ ಇದೊಂದೇ ಸಾಧ್ಯ.” ಈಗ ಗದ್ಯಗಂಧೀ ಕವಿತೆಗಳಿಗೆ ಪುನಃ ಬರೋಣ. ಈ ಒಟ್ಟೂ ಪುಸ್ತಕದ  ಕವಿತೆಯ ಅಷ್ಟೂ ‘ಗಂಧ’ ಗಳನ್ನೂ ಬರೆಯಲು ಅಸಾಧ್ಯವಾದರೂ ಎರಡು  ಪರಿಮಳ ದ್ರವ್ಯಗಳನ್ನಾದರೂ ಗ್ರಹಿಸುವ ಪ್ರಯತ್ನ ನನ್ನದು. ” ಅವಳ ಮನೆಯಲ್ಲಿ ಮೂರು ಕನ್ನಡಿಗಳಿದ್ದವು.” ಎಂದು ಆರಂಭವಾಗುವ ಕವಿತಾದಳದಲ್ಲಿ, ನೆರೆಮನೆಯ ಹುಡುಗಿ ಮತ್ತು ಈಕೆ ಎರಡು ಕನ್ನಡಿಗಳನ್ನು ಎದುರು ಬದುರು ಇಡುತ್ತಾರೆ. ” ಆಹಾ! ಒಂದರೊಳಗೊಂದು ಒಂದರೊಳಗೊಂದು ಕನ್ನಡಿಗಳು! ಕೊಂಚ ಮುಖ ತೂರಿಸಿ ಲೆಕ್ಕವಿರದಷ್ಟು ಬಿಂಬಗಳನ್ನು ಎದೆಯಲ್ಲಿ ಸೆರೆಹಿಡಿದು ಕನ್ನಡಿಗಳ ಸ್ವ ಸ್ಥಾನಕ್ಕೆ ಸೇರಿಸಿದರು.” ಎರಡು ಪುಟ್ಟ ಮಕ್ಕಳ ಆಟದಂತೆ ಕಾಣುವ ಈ ಚಿತ್ರ, ಚಿತ್ತಗನ್ನಡಿಗಳ ನಡುವಿನ ಅಸಂಖ್ಯ ಪ್ರತಿಫಲನಗಳಲ್ಲವೇ? ಆ ಹುಡುಗಿಯ ಯೌವನದಲ್ಲಿ ದಿವಾನಖಾನೆಯ ಕನ್ನಡಿಯೊಳಗಿಂದ ಹುಡುಗ ಹಾಡತೊಡಗಿ, ಅವಳು “ಮಾಯಾಬಜಾರಿ”ನ ಶಶಿರೇಖೆಯಾದಳು. ಹೀಗೆ ಒಂದು ಕನ್ನಡಿಯ ಸುತ್ತ ಪ್ರತಿಫಲಿಸುತ್ತವೆ ಹಲವು ಪ್ರತಿಮೆಗಳು. ಈ ಪುಟದ ಕೊನೆಯ ಸಾಲು ಹೀಗಿದೆ. ” ಈಗಂತೂ ಕನ್ನಡಿಯನ್ನು ಬೀದಿಯ ಕಡೆಗೆ ಮುಖಮಾಡಿ ಇರಿಸಿಬಿಟ್ಟಿದ್ದಾಳೆ. ಹಾದು ಹೋಗುವ ಪ್ರತೀ ಜೀವಿಯ ನೋವು,ನಲಿವು ಅವಳ ಎದೆಯಲ್ಲಿ ಪ್ರತಿಫಲಿಸುತ್ತದೆ.” ಕನ್ನಡಿಯೇ ಕವಯಿತ್ರಿಯ ಹೃದಯವೂ ಆಯಿತು. ಅದು ಸದಾ ಸಮಾಜದ ಚಲನೆಯ, ಬೀದಿಯ ಅಷ್ಟೂ ಡೈನಾಮಿಕ್ಸ್ ಗೆ, ಭಾವ ವೈವಿಧ್ಯಕ್ಕೆ ಕನ್ನಡಿ ಆಗುತ್ತೆ, ಹೃದಯ ಬರೇ ಕನ್ನಡಿಯೇ?. ಇದೊಂದು ಸ್ಪಂದನೆಯ ಕನ್ನಡಿ. ಈ ಎಸಳಿನ ನಂತರ ಒಂದು ವೈಶಿಷ್ಟ್ಯವನ್ನು ಹೇಳುವೆ. ಬೆಲ್ಲ ತಯಾರಿಸುವ ಕಾರ್ಖಾನೆಯಲ್ಲಿ ಕಬ್ಬಿನ ರಸ ಕುದಿಸುವಾಗ ಅದರ ಪರಿಮಳ ಊರೆಲ್ಲಾ ಹರಡುತ್ರೆ. ಕುದಿಸುತ್ತಾ ಅ ರಸ, ಪಾಕವಾಗಿ ಜೇನಿನಂತೆ ಮಂದ, ಸ್ನಿಗ್ಧ ದ್ರವವಾಗುತ್ತೆ. ಈ ಹಂತದಲ್ಲಿ ಅದಕ್ಕೆ ಕಬ್ಬಿನ ರಸದ ಎಲ್ಲಾ ಗುಣಗಳೂ ಇರುತ್ತವೆ,ಆದರೆ ಸಾಂದ್ರವಾಗಿರುತ್ತದೆ. ಹರಿಯುವ ಗುಣವೂ,ಪರಿಮಳವೂ,ಸಿಹಿಯೂ. ಈ ಹಂತದಲ್ಲಿ ಅದನ್ನು ಸಂಗ್ರಹಿಸಲು ಬಾಟಲಿ ಬೇಕು. ಇದರ ಮುಂದಿನ ಹಂತದಲ್ಲಿ ಅದನ್ನು ಗಟ್ಟಿಯಾಗಿಸಿ, ಅಚ್ಚಾಗಿಸಿ, ಆಕರ್ಷಕ ಪ್ಲಾಸ್ಟಿಕ್ ಕವರಿನೊಳಗೆ ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ, ಕಂಪೆನಿಯ ಬೆಲ್ಲದಚ್ಚಾಗಿ ಗ್ರಾಹಕರ ವಿಕ್ರಯದ ವಸ್ತುವಾಗಿ ಪ್ರಕಟವಾಗುತ್ತೆ.  ಕಮಲಾ ಅವರ ಗದ್ಯಗಂಧೀ ಕವಿತೆ ಬೆಲ್ಲದ ಅಚ್ಚು ಅಲ್ಲ. ಇದು ಸಾಂದ್ರವಾದ ಬೆಲ್ಲದ ಪಾಕ. ಇದಕ್ಕೆ ಹರಿವು,ಪರಿಮಳ, ರುಚಿ ಎಲ್ಲವೂ  ಇದೆ. ರೂಪ ಮಾತ್ರ ಪಾಕವನ್ನು ತುಂಬಿಸಿಕೊಂಡ  ಪಾತ್ರೆಯದ್ದೇ. ಗದ್ಯ ಗಂಧಿಯ ಇನ್ನೊಂದು ಎಸಳು ಹೀಗೆ ಆರಂಭವಾಗುತ್ತೆ. “ಅವಳು ಪುಟ್ಟವಳಿದ್ದಾಗ ಅಣ್ಣ ಕೊಟ್ಟ ನಾಲ್ಕಾಣೆ,ಎಂಟಾಣೆ ನಾಣ್ಯವನ್ನು ನೆಲದಲ್ಲಿ ಉರುಳಿ ಬಿಟ್ಟು ಎಷ್ಟು ದೂರ ಹೋಗುತ್ತದೆ ಎಂದು ನೋಡುತ್ತಿದ್ದಳು” ಈ ನಾಣ್ಯ, ಈ ನೆಲ, ಈ  ನಾಣ್ಯದ ಉರುಳು ಚಲನೆ,ಚಲಾವಣೆ ಏನನ್ನು ಧ್ವನಿಸುತ್ತೆ?. ಆಕೆಯ ಅಪ್ಪ , ಪ್ರೀತಿಯಿಂದ ನಾಣ್ಯವನ್ನು ಉರುಳಿಸಿ  ” ಅಂತಃಕರಣದ ನುಡಿಯನ್ನು ಹೀಗೇ ಉರುಳಿಸು. ಆ ಭಾಷೆ ಎಷ್ಟೋ ಜನಕ್ಕೆ ತಿಳಿದೇ ಇರುವುದಿಲ್ಲ. ಅದು ಅವರಿಗೆ ಅರ್ಥವಾಗದಿದ್ದರೂ ಸರಿ, ಉರುಳಿಸುತ್ತಾ ಹೋಗಬೇಕು, ಎಷ್ಟು ದೂರ ಸಾಧ್ಯವಾದರೆ ಅಷ್ಟು ದೂರ” ಉರುಳುವ ನಾಣ್ಯಕ್ಕೆ ಅಂತಃಕರಣದ ನುಡಿಯ ಸ್ವರೂಪ. ಕೊಡು ಕೊಳ್ಳುವಿಕೆಯ ಕ್ರಿಯೆಯಿಂದ, ಪ್ರೀತಿಯಲ್ಲಿ ಕರಗುವ, ಕರಗಿಸುವ, ದ್ರಾವಣದೊಳಗೆ ಒಂದೇ ಆಗುವ ಕ್ರಿಯೆ. ನೀರಲ್ಲಿ ಕರಗಿಸಿದ ಸಕ್ಕರೆಯ ಹಾಗೆ. ನೀರೂ,ಸಕ್ಕರೆಯೂ ಒಂದಕ್ಕೊಂದು ಅಂತಃಕರಣಿಸಿ ಸ್ವಂತ ರೂಪ ಕಳೆದು ಏಕಸ್ವರೂಪ ಹೊಂದಿದ ಹಾಗೆ. ಕೊನೆಯ ಸಾಲುಗಳಲ್ಲಿ ಮನಸ್ಸಿನ ಟ್ರಾನ್ಸ್ಫಾರ್ಮೇಟಿವ್ ಚೈತನ್ಯ ಪರಿಮಳಿಸುತ್ತೆ.  ” ಈಗ ನೀವು ನಿಮ್ಮೊಳಗಿನ ಯಾವ ನಾಣ್ಯವನ್ನಾದರೂ ಅವಳೆದುರಿಗೆ ಉರುಳಿಸಿ. ಎತ್ತಿಕೊಂಡು ಅಂತಃಕರಣದ ನುಡಿಯಾಗಿಸಿ ಉರುಳಿಬಿಡುತ್ತಾಳೆ” ಎಚ್ ನರಸಿಂಹಯ್ಯ ಅವರ ” ಹೋರಾಟದ ಹಾದಿ” ಪುಸ್ತಕದಲ್ಲಿ ಒಂದು ಘಟನೆಯಿದೆ. ಎಚ್. ಎನ್. ಅವರ ಗೆಳೆಯ ಮತ್ತು ಆತನ ಪುಟ್ಟ ಮಗು ಶಟಲ್ ಬ್ಯಾಡ್ಮಿಂಟನ್ ಆಡುತ್ತಿರುತ್ತಾರೆ. ಆ ಮಗು ಕೋರ್ಟ್ ನ ಎಡಭಾಗದಲ್ಲಿ ಇರುವಾಗ,ಎದುರಾಳಿ ಶಟಲ್ ಕಾಕ್ ಅನ್ನು ಕೋರ್ಟಿನ ಬಲಗಡೆಗೆ ಪ್ಲೇಸ್ ಮಾಡುತ್ತಾನೆ. ಮಗು ಕೋರ್ಟ್ನ ಬಲ ಭಾಗದಲ್ಲಿದ್ದರೆ ಎದುರಾಳಿ, ಶಟಲ್ ನನ್ನು ಕೋರ್ಟ್ ನ ಎಡ ಭಾಗಕ್ಕೆ ಹೊಡೆಯುತ್ತಾನೆ. ಮಗು ಬಹಳ ನೊಂದುಕೊಂಡು ಎಚ್. ಎನ್. ಹತ್ರ ಹೇಳುತ್ತೆ, “ಅಂಕಲ್! ಇದು ಚೀಟಿಂಗ್” ಅಂತ. ಇದು ಕೂಡಾ ಮಗುವಿನ ಪರಿಮಳ. ಅಂತಹಾ ಪರಿಮಳವನ್ನು ಮೇಟಿಕುರ್ಕೆ ಯ ಬಾಲ್ಯದ ದಿನದಿಂದ ನಾಗರಿಕ ಜಗತ್ತಿನ ಗಂಧಗಳ ನಡುವೆಯೂ ಉಳಿಸಿಕೊಂಡು, ಇಲ್ಲಿಯೂ ಅಲ್ಲಿಯೂ ಸಲ್ಲುವ ಮತ್ತು ಯಾವುದೇ ನಾಣ್ಯವನ್ನು ಅಂತಃಕರಣದ ನುಡಿಯಾಗಿ ಪರಿವರ್ತಿಸುವ ಕವಿತೆಗಳಿವು. ಕವಿತೆಯುದ್ದಕ್ಕೂ ಸ್ತ್ರೀ ಸಹಜ ಮಮತೆ, ಸಹನೆ, ಮಡಿಲಲ್ಲಿ ತುಂಬಿಕೊಳ್ಳುವ ಕ್ಷಮತೆ, ಹರಿಯುತ್ತಲೇ ಇರುವ ನಿರಂತರತೆ, ತನ್ನ ಗಾಯವಲ್ಲದೇ,ಇತರರ ಗಾಯಗಳನ್ನೂ ಸ್ಪರ್ಶಿಸಿ ಗುಣವಾಗಿಸುವ ಔಷಧೀಯ ಹಸ್ತದ ಮೃದುಲತೆ, ಇವೆಲ್ಲವನ್ನೂ ಚಿತ್ತಾರವಾಗಿಸಿದ್ದನ್ನು ಕಾಣಬಹುದು.  ಈ ಒಂದು ಚಿತ್ರವನ್ನು ಮನದಲ್ಲಿ ರೂಪಿಸಿಕೊಳ್ಳಿ. ಎರಡು ಗುಡ್ಡಗಳಿವೆ. ನಡುವೆ ಬಯಲು. ಒಂದು ಗುಡ್ಡದಲ್ಲಿ ಬಾಲ್ಯದ ಹಳ್ಳಿ, ಅಣ್ಣ ( ಅಪ್ಪ), ಅಮ್ಮ, ಮನೆ, ಕನ್ನಡಿ, ಕಲ್ಲುಗಳು, ತೆಂಗಿನ ಮರಗಳು, ಗಾಜಿನ ಬಳೆಗಳು, ಓಡಿದ ಓಣಿಗಳು, ಹೊಲಗಳು. ಸದಾ ಬೀಸುವ ಗಾಳಿ, ಪೋಸ್ಟ್ ಆಫೀಸ್, ನಕ್ಷತ್ರ, ಇವುಗಳೆಲ್ಲವೂ ಮಗುವಿನ ಪರಿಮಳದಂತೆ. ಮುಗ್ಧ, ನಿರ್ಮಲ, ನೇರ ನಿರಂತರ. ಭಾವ, ಮಮತೆ, ಜೀವಸಂಕುಲದ ಜತೆಗಿನ ತಾದಾತ್ಮ್ಯ ಸ್ಥಿತಿಗಳು ಈ ಗುಡ್ಡದ ತುಂಬಾ. ಎರಡನೆಯ ಗುಡ್ಡದಲ್ಲಿ, ಕಾರು, ಮೆಟ್ರೋ ರೈಲು, ಮುಖವಾಡಗಳು, ಕಲ್ಲು ಮನೆಗಳು, ಬೀಗ ಹಾಕಿದ ಬಾಗಿಲುಗಳು, ಸಿಮೆಂಟ್ ರಸ್ತೆಗಳು,  ತಾಜ್ ಮಹಲ್ ಗಳು ಮತ್ತು ಗಾಳಿಯೂ ಸ್ಥಿರವಾಗಿವೆ.  ಬಯಲಿನಲ್ಲಿ ಒಂದು ಸ್ಥಂಭದಲ್ಲಿ ಪೆಂಡುಲಮ್,ಈ ಎರಡು ಗುಡ್ಡಗಳ ನಡುವೆ ಓಲಾಡುತ್ತೆ. ಆ ಪೆಂಡುಲಮ್ನಲ್ಲಿ ಕವಯಿತ್ರಿ ಕುಳಿತಿದ್ದಾರೆ. ಪ್ರತೀ ಆಸ್ಸಿಲೇಷನ್, ಒಮ್ಮೆ ಮೊದಲ ಗುಡ್ಡದ ಹತ್ತಿರ, ಮತ್ತೆ ಎರಡನೇ ಗುಡ್ಡದ ಸಮೀಪ ಆಂದೋಳಿಸಿ  ತರುವ ಅನುಭೂತಿಯ ಸಂಕಲನವೇ ‘ಗದ್ಯಗಂಧೀ ಕವಿತೆಗಳು’. ********************************************** ಮಹಾದೇವಕಾನತ್ತಿಲ ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ ಘೋರಾರಣ್ಯದಲ್ಲಿ ಹಾರುವ ಹಂಸೆ ಸಮಾಜದಲ್ಲಿ ತುಳಿತಕ್ಕೊಳಗಾದ ಜನರ ಪರವಾದ ನಿಲುವನ್ನು ತಾಳಿದ ಸಾಹಿತ್ಯಕ ಮತ್ತು ಧಾರ್ಮಿಕ ಚಳುವಳಿಯೆಂದರೆ ಅದು ವಚನಸಾಹಿತ್ಯ. ಅದರ ಉಗಮಕ್ಕೆ ಕಾರಣವಾದದ್ದು ಬಸವಾದಿ ಪ್ರಮಥರ ಧಾರ್ಮಿಕ ತಾತ್ವಿಕ ಸುಧಾರಣೆಗಳು ಅದರೊಂದಿಗಿನ ಸಾಮಾಜಿಕ ಸುಧಾರಣೆ. ಅವಿದ್ಯಾವಂತರಿಂದ ವಿದ್ಯಾವಂತರವರೆವಿಗೂ ತಮ್ಮದೇಯಾದ ಸಾಮಾಜಿಕ, ಧಾರ್ಮಿಕವಾಗಿ ಜೀವನಕ್ರಮದ ಬಗೆಗಿನ ಕಾಳಜಿಯ ಅಭಿವ್ಯಕ್ತಿಯು ಮುಕ್ತವಾಗಿ ನಡೆದದ್ದಾಗಿದೆ. ಸಮಾಜ ಸುಧಾರಣೆಯು ಮುಖ್ಯ ಆಶಯವಾಗಿ ವಚನಗಳು ರಚನೆಯಾದರೂ ಅದರೊಂದಿಗಿನ ಸಾಹಿತ್ಯಿಕ ಅಂಶಗಳು ಉಪೋತ್ಪನ್ನವಾಗಿ ಹೊಂದಿ ವಚನಗಳು ರಚಿಸಲ್ಪಟ್ಟವು. ಆ ಚಳುವಳಿಯಲ್ಲಿನ ‘ಕಂಭದ ಮಾರಿತಂದೆ’ ಎಂಬ ವಚನಕಾರನ ಒಂದು ವಚನದ ವಿವೇಚನೆ ಪ್ರಸ್ತುತ ಲೇಖನದ ಉದ್ದೇಶವಾಗಿದೆ.                         ಬಸವಣ್ಣನವರು ಪುರಾತನ ವಚನಕಾರರನ್ನು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ. ಅವರಲ್ಲಿ ಕಂಭದ ಮಾರಿತಂದೆಯೂ ಒಬ್ಬ. ಉಳಿದಂತೆ ಕಿನ್ನರಿ ಬೊಮ್ಮಣ್ಣ, ತೆಲಗು ಜೊಮ್ಮಯ್ಯ, ತಂಗಟೂರು ಮಾರಯ್ಯ, ಮಾದಾರಚೆನ್ನಯ್ಯ ಇತರರು ಇದ್ದಾರೆ. ವಿಶೇಷವೆಂದರೆ ‘ಮಾರಿತಂದೆ’ ಹೆಸರಿನ ಎಂಟು ಜನ ವಚನಕಾರರು ಇರುವರೆಂದು ತಿಳಿದುಬಂದಿದೆ.೧ ಕವಿಚರಿತಾಕಾರರು ಅನುಬಂಧದಲ್ಲಿಯೂ೨ ಮತ್ತು ಡಿ. ಎಲ್. ನರಸಿಂಹಾಚಾರ್ಯರು ಪೀಠಿಕೆಗಳು ಲೇಖನಗಳು (ಕೆಲವು ವಚನಕಾರರು) ಕೃತಿಗಳಲ್ಲಿ ಮಾರಿತಂದೆಯ ಬಗೆಗೆ ಗಮನಸೆಳೆದಿದ್ದಾರೆ.೩ ಕಂಭದ ಮಾರಿತಂದೆಯು ಬೆಸ್ತರ ಜಾತಿಗೆ ಸೇರಿದವನಾಗಿದ್ದು, ಕ್ರಿ.ಶ. ೧೧೬೫ರಲ್ಲಿ ಬಸವಣ್ಣನವರ ಸಮಕಾಲೀನನಾಗಿದ್ದನೆಂದು ಹೇಳಿದ್ದಾರೆ. ಕಂಭದ ಮಾರಿತಂದೆಯು ವಚನ ಚಳುವಳಿಯನ್ನು ಗ್ರಹಿಸಿರುವ ರೀತಿಯೇ ಬೆರಗಾಗಿಸುತ್ತದೆ. ಕಂಭದ ಮಾರಿತಂದೆಯ ಅಂಕಿತನಾಮ ‘ಕದಂಬ ಲಿಂಗ’. ಮಹಾ ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾರುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದ್ದೆ ಕದಂಬಲಿಂಗದಲ್ಲಿಗೆ೪             ಪ್ರಕೃತ ವಚನವನ್ನು ಕವಿಚರಿತಾಕಾರರು ಮತ್ತು ಡಿ. ಎಲ್. ಎನ್ ಬೇರೆಯದೇ ರೀತಿಯ ವಿನ್ಯಾಸದಲ್ಲಿ ಮತ್ತು ಅಲ್ಪ ವಿರಾಮ ಚಿಹ್ನೆಗಳನ್ನಿಟ್ಟು ಕೊಟ್ಟಿದ್ದಾರೆ. ಮತ್ತು ಪಠ್ಯವು ಎರಡೂ ಕೃತಿಗಳಲ್ಲಿ ಸಮಾನವಾಗಿ ಬಂದಿದೆ.೫ ನಡುಗನ್ನಡ ಭಾಷಾರಚನೆಯ ಮುಖ್ಯ ಅಂಶವಾದ ಶಿಥಿಲದ್ವಿತ್ವವನ್ನು ಮತ್ತು ಶಕಟರೇಫೆಯನ್ನು ಕಲಬುರ್ಗಿಯವರು ಕೈ ಬಿಟ್ಟು ಸಂಪಾದಿಸಿದ್ದಾರೆ. ವಚನಸಾಹಿತ್ಯದ ಕಾವ್ಯಸೌಂದರ್ಯ, ಆಧ್ಯಾತ್ಮಿಕ ಸಾಧನೆ ಮತ್ತು ಸಾಮಾಜಿಕ ಔನ್ನತ್ಯದ ಬಗೆಗೆ ಸಮಾಜದಿಂದ ಬಹಿಷ್ಕೃತನೊಬ್ಬ ಬರೆದ ಸಾರ್ವಕಾಲಿಕ ಕಲಾತ್ಮಕ ವ್ಯಾಖ್ಯಾನವೇ ಪ್ರಸ್ತುತ ವಚನವಾಗಿದೆ.             ಹನ್ನೇರಡನೆ ಶತಮಾನದ ವಚನ ಚಳುವಳಿಯು ಸಾಮಾಜಿಕ ಅಸಮಾನತೆ, ಲಿಂಗ ಅಸಮಾನತೆ, ರಾಜಪ್ರಭುತ್ವದ ವಿರುದ್ಧದ ನೇರ ಧ್ವನಿಯಾಗಿದೆ. ಪ್ರಭುತ್ವಕ್ಕೇ ಪ್ರಭುಸಂಹಿತೆಯಂತೆಯೂ, ಸಮಾಜದ ಜನರಿಗೆ ಮಿತ್ರಸಂಹಿತೆಯಂತೆಯೂ, ವೈಯುಕ್ತಿಕ ಆಧ್ಯಾತ್ಮಿಕ ಉನ್ನತಿಗೆ ಕಾಂತಾಸಂಹಿತೆಯಂತೆಯೂ ಕೆಲಸಮಾಡಿದೆ. ರಾಜರ ದಬ್ಬಾಳಿಕೆ, ದೌರ್ಜನ್ಯ ಮೇಲ್ವರ್ಣ ವರ್ಗಗಳ ಕಂದಾಚಾರ-ಧಾರ್ಮಿಕ ಹಿಡಿತಗಳು ಸಾಮಾನ್ಯ ಜನರನ್ನು ಅತಿಯಾಗಿ ಬಹಿಷ್ಕೃತರನ್ನಾಗಿಸುತ್ತಾ ಕಂದಕವನ್ನು ಸೃಷ್ಠಿಸಿತ್ತು. ಅವು ‘ಘೋರಾರಣ್ಯ’ ಆಗಿತ್ತೆಂಬುದನ್ನು ಮೊದಲನೆಯಸಾಲು ಪ್ರತಿನಧಿಸುತ್ತದೆ.                         ಘೋರಾರಣ್ಯ ಸ್ಥಿತಿಯ ಸಮಾಜದಲ್ಲಿ ಅಭಿವ್ಯಕ್ತಿಯು ಮಹಾಕಾವ್ಯಗಳ ರೂಪದಲ್ಲಿ ರಚನೆಯಾಗುತ್ತಿದ್ದು ಅವು ಪಂಡಿತರಿಗಾಗಿದ್ದುದು ಎಂಬುದು ತಿಳಿದೇ ಇದೆ. ಅವುಗಳ ಪ್ರತಿಯಾಗಿ ಸರಳವಾದ ಮಾತು ಮನಸ್ಸಿನ ಸಮರೂಪಿಯ ಚಿತ್ತದಲ್ಲಿ ಹೊರಹಾಕಿದ ಮಾತೇ ‘ವಚನ’ ಗಳಾಗಿವೆ. ಅವು ಒಬ್ಬ ವಚನಕಾರನಿಂದ ಮತ್ತೊಬ್ಬ ವಚನಕಾರನಿಗೆ ಭಿನ್ನವಾಗುತ್ತಾ, ಅನುಭವದ ಪರಿದಿಯಲ್ಲಿ ವಿಸ್ತರಣೆ ಹಾಗು ವಿಭಿನ್ನತೆ ಹೊಂದಿದೆ. ಕಲಾತ್ಮಕತೆಯ ದೃಷ್ಠಿಯಿಂದಂತೂ ಅದ್ಭುತವಾಗಿದೆ. ಅದೇ ಎರಡನೆಯ ಸಾಲು ‘ಆಡುವ ನವಿಲು’ ನ್ನು ಪ್ರತಿನಿಧಿಸುತ್ತದೆ.                         ಕಲಾತ್ಮಕತೆ-ಸೌಂದರ್ಯ ಎಂಬುದು ಅಂತರಂಗದ ದೃಷ್ಠಿಯಿಂದಲೇ ಹೊರತು ಬಾಹ್ಯ ನೋಟದಿಂದಲ್ಲ. ಬಾಹ್ಯದಿಂದ ಸೌಂದರ್ಯವನ್ನು ನೋಡಿದರೂ ಅದರ ನಿಜವಾದ ಸಾರ್ಥಕ್ಯತೆಯು  ಅಂತರಂಗದಲ್ಲೇ ಇರುವುದು. ಸೌಂದರ್ಯವು ಆತ್ಮದ ಬಿಡುಗಡೆಯನ್ನು ಪ್ರತಿಕ್ಷಣವೂ ಮಾಡುತ್ತಿರುತ್ತದೆ. ಇದರಿಂದ ಕುರೂಪದಲ್ಲಿ- ಸುರೂಪಿಯನ್ನು, ಸುರೂಪಿಯಲ್ಲಿ- ಭವ್ಯತೆಯನ್ನು ಕಾಣಲು ಸಹಾಯಕವಾದ್ದಾಗಿದೆ. ಈ ‘ಘೋರಾರಣ್ಯದಲ್ಲಿಯೂ ‘ನವಿಲಿನ ನರ್ತನ’ವೂ ಆತ್ಮವನ್ನು ಬಿಡುಗಡೆಗೊಳಿಸುವ ‘ಹಾರುವ ಹಂಸೆ’ಯಾಗಿರುವ ವಚನಸಾಹಿತ್ಯದ ಆಧ್ಯಾತ್ಮಿಕ ಔನ್ನತ್ಯದ ಸ್ಥಿತಿಯನ್ನು ಮೂರನೆಯ ಸಾಲು ಪ್ರತಿನಿಧಿಸುತ್ತದೆ.(ಹಂಸೆಯು ಹಾರಲಾರದು ಎಂಬುದು ತಿಳಿದಿದ್ದರು ಅಧ್ಯಾತ್ಮದ ಪರಿಭಾಷೆಯಲ್ಲಿ ಜೀವವು ತಿಳುವಳಿಕೆ ಹೊಂದಿ ಮೇಲೆಹಾರುವ, ಬಿಡುಗಡೆ ಪಡೆಯುವ ಕ್ರಿಯೆಯನ್ನ ತಿಳಿಸುತ್ತದೆ. )                         ಬಸವಣ್ಣನವರ ಆದಿಯಾಗಿ ಸಾಮಾಜಿಕ ಜಾಗೃತಿಯು, ಅಲ್ಲಮನ ಮುಂದಾಳತ್ವದಲ್ಲಿ ತಾತ್ವಿಕ ಚಿಂತನೆಯೂ, ಚೆನ್ನಬಸವಣ್ಣನ ಆದಿಯಾಗಿ ಧಾರ್ಮಿಕ ವೀರಶೈವ ಚಿಂತನೆಯೂ ಬೆಳೆದು ಅದನ್ನೊಂದು ವಿಶ್ವಧರ್ಮವಾಗಿ ರೂಪಿಸಿದೆ. ಇವೆಲ್ಲವನ್ನು ಸೂಕ್ಷö್ಮವಾಗಿ ಸಮಾಜದ ಒಳಗಡೆ ಇದ್ದು ಇಲ್ಲದಂತಿದ್ದ ಕಂಬದ ಮಾರಿತಂದೆಯು ಈ ಮೂರು ಪ್ರಮುಖ ವ್ಯಕ್ತಿಗಳಲ್ಲಿ ಯಾರನ್ನು ‘ಕೋಳಿ’ ಎಂದು ಭಾವಿಸಿದ್ದನೆಂದು ನಿಖರವಾಗಿ ಹೇಳುವುದು ಕಷ್ಟವಾದರೂ ಈ ಮೂವರು ಕೋಳಿಯೋಪಾದಿಯಲ್ಲಿ ಕೂಗಿ-ಕೂಗಿ ಬೆಳಕನ್ನು ಕಂಡು ಎಲ್ಲರಿಗೂ ಅದನ್ನು ಕಾಣಿಸುವ ಹಂಬಲದಿಂದ ಮಧ್ಯಕಾಲೀನ ಸಮಾಜದಲ್ಲಿ ಕಾರ್ಯವನ್ನು ನಿರ್ವಹಿಸಿದವರೇ, ಅದನ್ನು ನಾಲ್ಕನೆ ಸಾಲು ಪ್ರತಿನಿಧಿಸುತ್ತದೆ.                         ಒಟ್ಟಾರೆಯಾಗಿ ಧಾರ್ಮಿಕವಾಗಿ, ಸಾಮಾಜಿಕವಾಗಿ, ಆಂತರಿಕವಾಗಿ ಕಲಾತ್ಮಕವಾಗಿ ಬಸವಾದಿ ಪ್ರಮಥರ ಮುಂದಾಳತ್ವದಲ್ಲಿ ನಡೆದ ಸಾಮಾಜಿಕ ಬದಲಾವಣೆಯ ಬೃಹತ್ ಚಳುವಳಿಯು ಸಾಮಾಜಿಕ ಹೊರತಳ್ಳುವಿಕೆಗೆ ಒಳಗಾಗಿದ್ದ, ಬೆಸ್ತರ ಜಾತಿಗೆ ಸೇರಿದ ಮಾರಿತಂದೆಯು ಪರಿಭಾವಿಸುವ ರೀತಿಯು ಅದ್ಭುತವಾಗಿದೆ.  ಇದು ವಚನಸಾಹಿತ್ಯ ಚಳುವಳಿಯನ್ನು ಅತೀ ಸಶಕ್ತವಾಗಿ ವ್ಯಾಖ್ಯಾನ ಮಾಡಿರುವುದು ಎಂದರೆ ಅತಿಶಯೋಕ್ತಿ ಆಗಲಾರದು. ‘ಹಾರುವ ಹಂಸೆ’ ಎಂಬ ಪ್ರತಿಮೆಯು ಅಲ್ಲಮನಿಂದ ಬಂದಿದ್ದೂ ಆಗಿರಬಹುದು, ಇಲ್ಲವೇ ಅಲ್ಲಮನ ವಚನಕ್ಕೇ ಪ್ರೇರಣೆ ನೀಡಿದುದೂ ಆಗಿರಬಹುದು. ಇದು ಅಲ್ಲಮ ಪ್ರಭುವೇ ಹೇಳುವಂತೆ ‘ನಿಂದ ಹೆಜ್ಜೆ’ ಯನ್ನು ಅರಿಯಲು ‘ಹಿಂದಣ ಹೆಜ್ಜೆ’ ಯನ್ನು ಮೌಲಿಕವಾಗಿ ನೋಡಿರುವ ಉನ್ನತಮಟ್ಟದ ವೈಚಾರಿಕ ಮತ್ತು ಕಲಾತ್ಮಕತೆಯು ಮಾರಿತಂದೆಯಲ್ಲಿರುವುದನ್ನು ತಿಳಿಸುತ್ತದೆ.                         ಭಾಷೆಯು ಸಂವಹನದ ಮೊದಲ ಮತ್ತು ಮೂಲಭೂತವಾದ ಮಾಧ್ಯಮವಾಗಿರುವುದರಿಂದ ಮತ್ತು ‘ವಚನ’ ವೆಂಬ ಸಾಹಿತ್ಯಿಕ ಪ್ರಕಾರವೂ ಮಾತೇ ಆಗಿರುವುದರಿಂದ ಭಾಷಿಕವಾಗಿ ನೋಡುವುದಾದರೆ-                         ‘ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ’ ಎಂಬ ಸಾಲು ಸಾರ್ವಕಾಲಿಕ ಸಮಾಜದ ಸ್ಥಿತಿಯನ್ನು ಹೇಳುತ್ತಿದೆ. ‘ಹೋಗುತ್ತಿರಲಾಗಿ’ ಎಂಬುದು ವರ್ತಮಾನ ಕ್ರಿಯಾಪದವಾಗಿದ್ದು ಎಂದು ಈ ವಚನವನ್ನು ಓದಿದರೂ, ಯಾವ ಸ್ಥಳದಲ್ಲಿ ಓದಿದರೂ ಪ್ರಸ್ತುತಗೊಳ್ಳುತ್ತಾ ಸಾಗುತ್ತದೆ. ‘ಕಂಡು’ ಎಂಬುದು ಭೂತಕಾಲ ಪದವಾಗಿದ್ದು ಓದುಗನಲ್ಲಿ ಹಿಂದಕ್ಕೆ ಕರೆದುಕೊಂಡು ಹೋಗುತ್ತಲೇ, ಇಂದಿನ ಸಾಮಾಜಿಕ ಮತ್ತು ಕಾವ್ಯದ ವಿವೇಚನೆ ಮಾಡುವ ಹಾದಿಯನ್ನು ತೆರೆಯುತ್ತದೆ. ಬರೆದಿದ್ದೆಲ್ಲವೂ ಕಾವ್ಯವಾಗಬೇಕೆಂಬ ಹುಚ್ಚು ಹಠದಲ್ಲಿರುವಾಗ ‘ನವಿಲಿ’ನ ಕಲಾತ್ಮಕತೆ, ನರ್ತನವಿರದ, ಪ್ರಜ್ಞೆ – ಆತ್ಮದ ನಿರಸÀನದೊಂದಿಗೆ ಪ್ರಾರಂಭವಾಗುವ ‘ಹಾರುವ ಹಂಸೆ’ ಯ ಬಗೆಗೆ ಕೂತುಹಲವಿರದ ಅದನ್ನರಿಯದ ಸ್ಥಿತಿಯು ಇಂದು ಇರುವಾಗ ಮತ್ತೆ ಮತ್ತೆ ಬಿಡುಗಡೆಗೆ ಮಾರಿತಂದೆ ಕರೆಕೊಟ್ಟಂತೆ ಅನಿಸುತ್ತದೆ. ಕಾವ್ಯದ ಕಾರ್ಯ ಎಚ್ಚರಿಸಬೇಕಾಗಿರುವುದರಿಂದ, ವೈಯಕ್ತಿಕ ಬಿಡುಗಡೆಯೊಂದಿಗೆ ಸಾಮಾಜಿಕ ಬಿಡುಗಡೆಯು ಕಾವ್ಯದ ಕಾರ್ಯವಾಗಿರುವುದರಿಂದ ‘ಕೂಗುವ ಕೋಳಿ’ಯು ಹನ್ನೇರಡನೆ ಶತಮಾನದಲ್ಲಿ ಸಾಧ್ಯವಾಗಿದ್ದರಿಂದ ಮಾರಿತಂದೆಯು ‘ಕಂಡು’ ಎಂಬ ನಿಖರ ಕ್ರಿಯಾಪದವನ್ನು ಬಳಸಿರುವುದು ಔಚಿತ್ಯವಾಗಿದೆ. ಇಂದಿನ ಸಾಹಿತ್ಯಕ ಮತ್ತು ಕಾವ್ಯದ ಸ್ಥಿತಿಯನ್ನು ಪ್ರಶ್ನಿಸುವಂತೆ ಅಥವಾ ಅನುಮಾನದಿಂದ ನೊಡುವಂತೆ ಈ ವಚನ ಮಾಡುತ್ತದೆ. ‘ನವಿಲು’ ‘ಹಂಸ’ ‘ಕೋಳಿ’ ಯ ರೂಪಕಗಳು ಮತ್ತು ಅದರ ಕ್ರಿಯೆಗಳು ಒಂದು ಇಚ್ಚಾಶಕ್ತಿಯ ಜನಸಮೂಹದಿಂದ ಜರುಗಿದಾಗ ಉಂಟಾಗುವ ಬೆಳಕು ದಾರಿತೋರುವುದೇ ಪ್ರಥಮೋದ್ದೇಶವಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಮಾರಿತಂದೆಯ ‘ಕದಂಬಲಿಂಗ’ ವೂ, ಬಸವಣ್ಣನವರ ‘ಕೂಡಲ ಸಂಗಮದೇವ’ ನೂ, ಅಲ್ಲಮನ ‘ಗುಹೇಶ್ವರ’ ನೂ ಕಾಣುತ್ತಾನೆಂದರೆ ಅತಿಶಯೋಕ್ತಿ ಎನಿಸಲಾರದು.                         ಹೀಗೆ ವಚನವೆಂಬ ಪ್ರಕಾರವು ಮೇಲ್ನೋಟಕ್ಕೆ ಕಂಡರೂ ತನ್ನೊಡಲಿನಲ್ಲಿ ಕಾಲಾತೀತವಾದ ಮಹತ್ತಿನ ಬಗೆಗೆ ಚಲನೆಯನ್ನು ಹೊಂದುತ್ತಾ ಆತ್ಮದ ಮತ್ತು ಸಮಾಜದ ಉನ್ನತಿಯನ್ನು ಬಯಸುತ್ತಲೇ ಸಾರ್ವಕಾಲೀನವಾಗಿ ಪ್ರಸ್ತುತವಾಗುತ್ತಿರುತ್ತದೆ.    ಅಡಿಟಿಪ್ಪಣಿಗಳು ೦೧. ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೪ (೧೯೭೧) ( ಕಂಭದ ಮಾರಿತಂದೆ, ಸತ್ತಿಗೆ ಕಾಯಕದ ಮಾರಿತಂದೆ, ಕನ್ನದ ಮಾರಿತಂದೆ, ಕೂಗಿನ ಮಾರಿತಂದೆ, ನಗೆಯ ಮಾರಿತಂದೆ, ಅರಿವಿನ ಮಾರಿತಂದೆ, ವiನಸಂದ ಮಾರಿತಂದೆ, ಗಾವುದಿ ಮಾರಿತಂದೆ.) ೦೨. ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾಚಾರ್ಯ. ಪು ೫೫ ಮತ್ತ ೫೬ (೧೯೨೪) ೦೩. ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೭ (೧೯೭೧) ೦೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವ ಸಂಖ್ಯೆ ೦೬. ಪು ೧೧೯೭ (೨೦೧೬) ೦೫. ಮಹಾಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾಱುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದೆ೵ ಕದಂಬಲಿಂಗದಲ್ಲಿಗೆ        ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೭ ಮತ್ತು ೪೫೮        ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾಚಾರ್ಯ. ಪು ೫೫ ಮತ್ತ ೫೬ ************************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….6 ನಾಗಮ್ಮಜ್ಜಿಯ ಅಂತಿಮಯಾತ್ರೆ                 ನಮ್ಮ ತಂದೆಯವರಿಗೆ ಶಿಕ್ಷಕ ವೃತ್ತಿ ದೊರೆಯಿತಾದರೂ ಇಲಾಖೆಯ ನಿಯಮದಂತೆ ಶಿಕ್ಷಕ ತರಬೇತಿ ಮುಗಿಸುವುದು ಅನಿವಾರ್ಯವಾಗಿತ್ತು. ತರಬೇತಿಗಾಗಿ ಆಯ್ಕೆಗೊಂಡು ಅವರು ಕಾರವಾರದ ಟ್ರೇನಿಂಗ್ ಕಾಲೇಜ್ ಸೇರುವಾಗ ಅವ್ವನ ಗರ್ಭದಲ್ಲಿ ನಾನು ಆಡಲಾರಂಭಿಸಿದ್ದೆನಂತೆ. ನಾಗಮ್ಮಜ್ಜಿಯ ಉತ್ಸಾಹಕ್ಕೆ ಮೇರೆಯೇ ಇರಲಿಲ್ಲ. ಅವ್ವನ ಸೀಮಂತ ಇತ್ಯಾದಿ ಸಡಗರದಲ್ಲಿ ಸಂಭ್ರಮಿಸುತ್ತ ತನ್ನ ಕಣ್ಗಾವಲಿನಲ್ಲಿ ಮಗಳ ಬಾಣಂತನಕ್ಕೆ ಬೇಕು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಊರ ಸುತ್ತಲಿನ ಎಲ್ಲಾ ಗ್ರಾಮದೇವತೆಗಳಿಗೆ ಹಣ್ಣು ಕಾಯಿ ನೀಡಿ ಮೊಮ್ಮಗನೇ ಹುಟ್ಟಬೇಕೆಂದು ಹರಕೆ ಹೊತ್ತು ಬಂದಳಂತೆ. ಕೊನೆಗೂ ಅವ್ವನಿಗೆ ಹೆರಿಗೆಯ ನೋವು ಕಾಣಿಸುವಾಗ ಅಂಕೋಲೆಯ ಸಂಬಂಧಿಯೋರ್ವರ ಮನೆಗೆ ಕರೆತಂದು ಉಳಿಸಿಕೊಂಡಳು. ಏಕೆಂದರೆ ಆಗಿನ ಕಾಲದಲ್ಲಿ ಸರಿಯಾದ ಔಷಧೋಪಚಾರ ಸಿಗುವುದು ಅಂಕೋಲೆಯ ಮಿಶನರಿ ಆಸ್ಪತ್ರೆಯಲ್ಲಿ ಮಾತ್ರ ಎಂಬ ನಂಬಿಕೆ ಆಸುಪಾಸಿನಲ್ಲಿ ಬಲವಾಗಿತ್ತು. ನಾಗಮ್ಮಜ್ಜಿ ಸಾಕಷ್ಟು ಮುಂಜಾಗ್ರತೆ ವಹಿಸಿ ಮಗಳ ಹೆರಿಗೆಗೆ ಸಕಲ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿಯೇ ಮಾಡಿಕೊಂಡಿದ್ದಳು.                 ಮಾರ್ಚ್ ತಿಂಗಳ ಇಪ್ಪತ್ಮೂರನೆಯ ದಿನ, ಸಾವಿರದ ಒಂಬೈನೂರಾ ಐವತ್ಮೂರು ನನ್ನ ಜನನವಾಯಿತು. ನಾಗಮ್ಮಜ್ಜಿಯ ಸಂತೋಷಕ್ಕೆ ಪಾರವೇ ಇರಲಿಲ್ಲವೆಂದು ಅಮ್ಮ ನೆನೆಸಿಕೊಳ್ಳುತ್ತಾಳೆ. ದೇವರಿಗೆ ಹರಕೆ ಹೊತ್ತುದರಿಂದಲೇ ತನಗೆ ಮೊಮ್ಮಗ ಹುಟ್ಟಿದ್ದಾನೆ ಎಂಬ ಮುಗ್ದ ಬಿಂಕದಲ್ಲಿ ಬೇಡಿಕೊಂಡ ಎಲ್ಲಾ ದೇವರಿಗೆ ಹರಕೆಯೊಪ್ಪಿಸಿ, ಬಾಣಂತಿಯನ್ನೂ ಮಗುವನ್ನೂ ಊರಿಗೆ ಕರೆತಂದು ಆರೈಕೆಗೆ ನಿಂತಳು.                 ಮೂರು ತಿಂಗಳ ಕಾಲ ಬಾಣಂತನ ಮುಗಿಸಿ ಕಾರವಾರದಲ್ಲಿ ತರಬೇತಿ ಪಡೆಯುತ್ತಿರುವ ಅಪ್ಪನ ಕೈಗೊಪ್ಪಿಸಿ ಬಿಟ್ಟರೆ ತನ್ನ ಬಹುದೊಡ್ಡ ಜವಾಬ್ದಾರಿ ಮುಗಿಯಿತು ಎಂದುಕೊಂಡಿದ್ದಳು ನಾಗಮ್ಮಜ್ಜಿ. ಮಗುವಿಗೆ ಕೈಬಳೆ, ಕಾಲ್ಕಡಗ, ಹೊಸಬಟ್ಟೆ ತೊಡಿಸಿ ಮಗಳನ್ನೂ ಸಿಂಗರಿಸಿಕೊಂಡು ತೊಟ್ಟಿಲ ಹೊರೆ ಹೊತ್ತು ಕಾರವಾರಕ್ಕೆ ಬಂದಿಳಿದಳು. ಅಂದು ದಿನವಿಡೀ ಮಗಳು, ಅಳಿಯ, ಮೊಮ್ಮಗುವಿನೊಂದಿಗೆ ಆನಂದದಲ್ಲಿ ಮೈಮರೆತಿದ್ದ ನಾಗಮ್ಮಜ್ಜಿಗೆ ಸರಿರಾತ್ರಿ ನಿದ್ದೆಯಲ್ಲಿರುವಾಗ ಹೊಟ್ಟೆನೋವು ಕಾಣಿಸಿಕೊಂಡಿತು.                 ಸಾಮಾನ್ಯವಾಗಿ ತನಗೆ ಎಂಥ ಸಣ್ಣಪುಟ್ಟ ಕಾಯಿಲೆ ಬಂದರೂ ತಾನೇ ಏನಾದರೊಂದು ಔಷಧಿ ಮಾಡಿ ತಿಂದು ಸರಳವಾಗಿ ಬಿಡುತ್ತಿದ್ದ ನಾಗಮ್ಮಜ್ಜಿ ಅಂದು ಮಾತ್ರ ಧೃತಿಗೆಟ್ಟು ನರಳ ತೊಡಗಿದಳಂತೆ! ಅಪರಾತ್ರಿಯ ಹೊತ್ತಿನಲ್ಲಿ ಅಪ್ಪ ಕಾರವಾರದ ಎಲ್ಲಾ ಆಸ್ಪತ್ರೆಗಳ ಬಾಗಿಲು ಬಡಿದು ಕಳಕಳಿಯಿಂದ ಹುಡುಕಾಡಿದರೂ ವೈದ್ಯರೊಬ್ಬರೂ ದೊರೆಯಲಿಲ್ಲ.                 ಸಿಕ್ಕ ಒಬ್ಬಿಬ್ಬರು ಮಧ್ಯರಾತ್ರಿಯ ಹೊತ್ತಿನಲ್ಲಿ ಮನೆ ಬಿಟ್ಟು ಬರಲು ಒಪ್ಪಲಿಲ್ಲ. ರಾತ್ರಿಯೆಲ್ಲಾ ನೋವಿನ ಯಮಯಾತನೆಯಲ್ಲಿ ನರಳಿದ ನಾಗಮ್ಮಜ್ಜಿ ನಸುಕು ಹರಿಯುವ ಹೊತ್ತಿಗೆ ಗಾಢನಿದ್ದೆಗೆ ಶರಣಾಗಿದ್ದಳು.                 ಅವಳು ಈಗ ಮಲಗಿದ್ದಾಳೆ ನೋವು ಕಡಿಮೆಯಾಗಿರಬಹುದು ಎಂದೇ ಭಾವಿಸಿದ ಅಪ್ಪ ಅವ್ವ ಅಜ್ಜಿಯನ್ನು ಅವಳ ಪಾಡಿಗೆ ಬಿಟ್ಟು ದೈನಂದಿನ ಚಟುವಟಿಕೆಗಳಿಗೆ ಸಿದ್ಧರಾದರು. ಅಪ್ಪ ಉಪಹಾರ ಮುಗಿಸಿ ಮಂಜಾನೆಯೇ ಆರಂಭಗೊಳ್ಳುವ ತರಗತಿಗೆ ಹಾಜರಾಗಲು ಅತ್ತ ಹೋದಬಳಿಕ ಅವ್ವ ಕಸಮುಸುರೆ ಇತ್ಯಾದಿ ಕೆಲಸಗಳಲ್ಲಿ ಮೈಮರೆತಿದ್ದಳು. ಅಜ್ಜಿಯ ಪಕ್ಕದಲ್ಲಿಯೇ ನನಗೂ ಸೊಗಸಾದ ನಿದ್ದೆ ಬಿದ್ದುದರಿಂದ ಅವ್ವ ಇತ್ತ ಲಕ್ಷ್ಯ ಕೊಡುವ ಅಗತ್ಯವೂ ಬೀಳಲಿಲ್ಲವಂತೆ.                 ಮನೆಗೆಲಸವನ್ನೆಲ್ಲ ಮುಗಿಸಿ ಹತ್ತು ಹೊಡೆಯುವ ಹೊತ್ತಿಗೆ ಇಷ್ಟು ಹೊತ್ತಾದರೂ ಅವ್ವ ಏಕೆ ಏಳಲಿಲ್ಲ? ಎಂಬ ಅನುಮಾನ ಬಲವಾಗಿ ಬಳಿ ಬಂದು ಎಬ್ಬಿಸಿ ನೋಡುವಾಗ ನಾಗಮ್ಮಜ್ಜಿ ಮರಳಿಬಾರದ ಲೋಕಕ್ಕೆ ಹೊರಟು ಹೋಗಿದ್ದಳು!                 ಅಪರಿಚಿತವಾದ ಊರು. ಉಳಿದುಕೊಂಡದ್ದು ಯಾರದೋ ಮನೆ. ಹೇಳ ಕೇಳುವ ಬಂಧುಗಳು ಯಾರೂ ಹತ್ತಿರವಿಲ್ಲ. ಇಂಥ ಸಂದರ್ಭದಲ್ಲಿ ತೀರ ನಂಬಲೂ ಆಗದ ಸ್ಥಿತಿಯಲ್ಲಿ ಅಜ್ಜಿ ಹೆಣವಾಗಿ ಮಲಗಿದ್ದಾಳೆ….                 ಕಾರವಾರದ ಬೀದಿಗಳಲ್ಲಿ ಬೊಬ್ಬೆಯಿಡುತ್ತಲೆ ಶಿಕ್ಷಕರ ತರಬೇತಿ ಕೇಂದ್ರದತ್ತ ಓಡಿದ ಅವ್ವ ಅಪ್ಪನಿಗೆ ವಿಷಯ ತಿಳಿಸಿ ಅಪ್ಪನನ್ನು ಬೀಡಾರಕ್ಕೆ ಕರೆತರುವಷ್ಟರಲ್ಲಿ ಒಂದು ತಾಸಾದರೂ ಕಳೆದು ಹೋಗಿರಬಹುದು. ಹೆಣದ ಪಕ್ಕದಲ್ಲಿ ಯಾವ ಅರಿವೂ ಇಲ್ಲದೆ ಆಡುತ್ತ ಮಲಗಿದ ನನ್ನನ್ನು ನೆರೆ ಮನೆಯವರಾರೋ ನೋಡಿ ಎತ್ತಿಕೊಂಡಿದ್ದರಂತೆ.                 ಊರಿಗೆ ಸುದ್ದಿ ಮುಟ್ಟಿಸುವುದೂ ಕಷ್ಟವಾಗಿದ್ದ ಕಾಲ. ಸಮೀಪವೆಂದರೆ ಅಂಕೋಲೆಯ ದಾರಿಯಲ್ಲಿ ಅಮದಳ್ಳಿ ಎಂಬಲ್ಲಿ ಶಾನುಭೋಗಿಕೆ ಮಾಡಿಕೊಂಡಿರುವ ನಾಗಣ್ಣ ಎಂಬ ಪರಿಚಿತ ವ್ಯಕ್ತಿ ಮಾತ್ರ. ಅಪ್ಪ ಹೇಗೋ ನಾಗಣ್ಣನಿಗೆ ಸುದ್ದಿ ಮುಟ್ಟಿಸಿ ಅವನಿಂದ ಊರಿನವರೆಗೂ ನಾಗಮ್ಮಜ್ಜಿಯ ಮರಣ ವಾರ್ತೆ ತಲುಪುವಾಗ ಅರ್ಧ ದಿನ ಕಳೆದು ಹೋಗಿತ್ತು. ಅಲ್ಲಿಂದ ಬಂಧು ಬಾಂಧವರು ಹೊರಡ ಬೇಕೆಂದರೂ ಬಸ್ಸು ಇತ್ಯಾದಿ ಸೌಕರ್ಯಗಳಿಲ್ಲ! ಇದ್ದರೂ ಕೈಯಲ್ಲಿ ಕಾಸು ಇಲ್ಲದ ಜನ. ಕಾಲ್ನಡಿಗೆಯಲ್ಲೇ ಹೊರಟು ಕಾರವಾರ ಸೇರುವ ಹೊತ್ತಿಗೆ ಮತ್ತೆ ನಡುರಾತ್ರಿ.                 ಸರಿರಾತ್ರಿಯಲ್ಲಿ ನಾಗಮ್ಮಜ್ಜಿಯ ಶವವನ್ನು ಕಾರವಾರದ ಸ್ಮಶಾನದಲ್ಲಿ ಮಣ್ಣು ಮಾಡಿದರಂತೆ. ಮಗಳು ಮೊಮ್ಮಗನನ್ನು ಅತ್ಯಂತ ಸಡಗರದಿಂದ ಕರೆತಂದು ಅಳಿಯನ ಕೈಗೊಪ್ಪಿಸಿ ನಾಗಮ್ಮಜ್ಜಿ ತನ್ನ ಕನಸುಗಳೊಂದಿಗೆ ಕಣ್ಮರೆಯಾಗಿಬಿಟ್ಟಳು ಎಂಬ ಕತೆಯನ್ನು ಅವ್ವ ಹೇಳತೊಡಗಿದಾಗ ಅಜ್ಜಿಯ ಆಕೃತಿ, ಚಡಪಡಿಕೆ, ಕನಸುಗಳು, ತೀವೃವಾದ ಜೀವನೋತ್ಸಾಹಗಳು ನನ್ನ ಕಣ್ಣೆದುರೇ ಚಿತ್ರ ಶಿಲ್ಪವಾಗಿ ಮೂಡಿದಂತೆನಿಸುತ್ತದೆ. ಅಷ್ಟೊಂದು ಅಕ್ಕರೆ ತೋರುವ ಅಜ್ಜಿಯ ಪ್ರೀತಿ ಆರೈಕೆಗಳನ್ನು ಇನ್ನಷ್ಟು ಕಾಲ ಪಡೆಯುವ ಯೋಗ ನನಗಿದ್ದರೆ? ಎಂದೂ ಚಡಪಡಿಸುತ್ತದೆ. ********************************************

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗ ರಂಗೋಲಿ-06 ಅಜ್ಜಿಯ ಗೂಡಲಿ ಹಾರಲು ಕಲಿತ ಗುಬ್ಬಿ ಮರಿ ಆ ಹಳೇ ಮನೆಯಲ್ಲಿ ತೆಂಗಿನ ಹಸಿ ಮಡಲಿನಿಂದ ಒಂದೊಂದು ಒಲಿಯನ್ನು ತನ್ನ ಚಿಕ್ಕಕತ್ತಿಯಿಂದ ಸರ್ರೆಂದು ಎಳೆದು ನನ್ನ ಆಟಕ್ಕೆ ಹಾವು ,ಬುಟ್ಟಿ, ವಾಚ್,ಕಾಲ್ಗೆಜ್ಜೆ, ಕನ್ನಡಕ ಎಷ್ಟು ಪರಿಕರಗಳು ತಯಾರಾಗುತ್ತಿದ್ದವು. ಮಿದುಳಲ್ಲಿ ಚಿತ್ರವಾದ ಕಲ್ಪನೆಗಳೆಲ್ಲಾ, ಅದ್ಭುತ ಆಟಿಗೆಯಾಗಿ, ಕಲಾಪರಿಕರಗಳಾಗಿ ತಯಾರಾಗುವ ಕಲೆಯ ಕುಲುಮೆಯೇ ಅವರಾಗಿದ್ದರು. ಕಾಡಿಗೆ ಹೋಗಿ ಅದೆಂತದೋ ಕಡ್ಡಿಯಂತಹ ಬಳ್ಳಿ ಎಳಕೊಂಡು ಬರುತ್ತಿದ್ದಳು. ಅದರ ಸಿಪ್ಪೆ ತೆಗೆದು ಹೂ ಬುಟ್ಟಿ,ಅನ್ನ ಬಸಿಯುವ ತಟ್ಟೆ, ದೋಸೆ ಹಾಕುವ ಪಾತ್ರೆ,ಅನ್ನ ಹಾಕಿಡುವ ಪಾತ್ರೆ ತಯಾರಿಸುತ್ತಿದ್ದಳು. ತಾನು ತಾಂಬೂಲ ಹಾಕಿಕೊಳ್ಳುವದಲ್ಲದೆ ಅದಕ್ಕೆಂದೇ ಪುಟ್ಟ ಪರಿಕರ ಈ ಬಳ್ಳಿಯಿಂದ ಮಾಡಿಕೊಂಡಿದ್ದಳು.  ಬಿದಿರನ ರೀತಿಯ ವಾಂಟೆ ಎನ್ನುವ ಗಿಡದಿದ  ಗೊರಬು, ಕುಡ್ಪು, ಈಂಚಿಲ ಗಿಡದ ಚಾಪೆ,ಮುಂಡುಗೆಯ ಚಾಪೆ..ಇದಕ್ಕೆ ಎಲೆ,ಗಿಡ ತಂದು ಕೊಡುವ ಕಾಯಕ ನನ್ನ ಬಾಬನದ್ದು(ಅಜ್ಜ) . ಮನೆಯ ಹಿತ್ತಲಿನನಲ್ಲಿ ಅಂಗಳದಲ್ಲಿ ಬಗೆಬಗೆಯ ಹೂವಿನ ಗಿಡಗಳು ಅದಕ್ಕೆ ಪಾತಿ ಮಾಡಿ ನೆಟ್ಟು ಗಿಡಗಳೊಂದಿಗೆ ಸಂಭಾಷಿಸಿ ಹೂವ ಕೊಯ್ದು ದಾರದಲ್ಲಿ  ಮಾಲೆಯಾಗಿಸುವ ಸೂತ್ರಧಾರೆ ಅವಳು. ಸಾಮಾನ್ಯ ಕಚ್ಛಾವಸ್ತುಗಳು ಅದ್ಭುತ ಕಲಾಪಾತ್ರಗಳಾಗುವ ಈ ಬೆರಗನ್ನು ನೋಡುತ್ತಾ, ಬೆಳೆದ ದಿನಗಳವು. ರಂಗಸ್ಥಳದ ಹಿನ್ನೆಲೆಯಲ್ಲಿ, ಚೌಕಿಯೊಳಗೆ ಪಾತ್ರಗಳ ಭಾವರೂಪಕಗಳು, ಅತಿ ಸಾಮಾನ್ಯ ವ್ಯಕ್ತಿಯೂ ನಾಟಕದ ಅಪೂರ್ವ ಪಾತ್ರಾಭಿವ್ಯಕ್ತಿಯಾಗಿ ತಯಾರಾಗುವ ಕ್ರಿಯೇಟಿವಿಟಿಯ ಮೂಲ ಹುಡುಕುತ್ತಾ ಹೋದರೆ ಬಂದು ನಿಲ್ಲುವುದು ಇಲ್ಲೇ. ಇವಳೊಂದು ಕಡಲು. ಅವಳ ದಂಡೆಯಲ್ಲಿ ಬೆಪ್ಪಾಗಿ ನಿಂತ ಪ್ರವಾಸಿಗಳು ನಾನು. ಕರೆಯುತ್ತಾಳೆ. ಎಷ್ಟು ಮೊಗೆದರೂ ಅಷ್ಟು ಬೊಗಸೆಗೆ ತುಂಬುತ್ತಾಳೆ. ನಾನೇ ಅದರೊಳಗೆ ಮುಳುಗಿ ಮುತ್ತು ರತ್ನ ಆಯಬಹುದು.ನಾನಂತೂ ಮನಸಃ ಈಜಿರುವೆ. ಅವಳ ಬಾಳ ಅಚ್ಚಿನ ಪಾತ್ರೆಯಲ್ಲಿ ತಯಾರಾಗಿ ಬಂದ ಬದುಕು ನಾಟಕದ ಪಾತ್ರ ನಾನು. ಅವಳು ದಾರ ಹಿಡಿದು ಬೊಂಬೆಯ ಕುಣಿತ ಕಲಿಸಿದಳು. ಬಹಿರಂಗದಲ್ಲಿ ಮೊಣಕಾಲೂರಿ ಬಾಗಿ ಪ್ರತಿಯೊಂದರಲ್ಲೂ ಪ್ರೀತಿ ಕಲಿಕೆಯ, ಪಾತ್ರದೊಳಗೆ ತನ್ಮಯತೆಯ ಮಹಾಮಂತ್ರ ಬೋಧಿಸಿದಳು. ಅವಳ ದೃಷ್ಟಿಯಲ್ಲಿ ಯಾವುದೂ ನಿರುಪಯೋಗಿ ವಸ್ತುವಿಲ್ಲ. ಪ್ರತಿಯೊಂದಕ್ಕೂ ಚೌಕಟ್ಟು ಕಟ್ಟಿ ಚೌಕಿಯೊಳಗೆ ಚೆಂದವಾಗಿಸುವುದನ್ನು ತೋರಿಕೊಟ್ಟವಳು.  ಯಕ್ಷಗಾನ ನೋಡಿ ಬಂದ ಮರುದಿನದ ಕತ್ತಲಿಗೆ ಆ ಕಥೆಯ ಉತ್ತರಾರ್ಧ ಚಿಮುಟಿ ದೀಪದ ಬೆಳಕಿನಲ್ಲಿ ಮುಂದುವರೆಸುತ್ತಿದ್ದಳು. ದೀಪದಿಂದ ಬರುವ ಹೊಗೆ ನನಗೆ ಯಾವಾಗಲೂ ಕಥೆ ಕೇಳುವಲ್ಲಿ ಅಡ್ಡಿಯಾಗಲಿಲ್ಲ.  ಹೇಳಿದ ಕಥೆ ಮತ್ತೆ ಪುನರಾವರ್ತನೆ ಆಗುವುದು ಬಹಳ ಕಡಿಮೆ. ಈಕೆಗೆ ಕೇವಲ ರಾಮಾಯಣ, ಮಹಾಭಾರತ ಮಾತ್ರವಲ್ಲ ಇತಿಹಾಸದ ಕಥೆಗಳನ್ನೂ ರೋಚಕವಾಗಿ ಹೇಳ ಬಲ್ಲಳು.ಚಂದ್ರಗುಪ್ತ ಮೌರ್ಯ,ಹಕ್ಕಬುಕ್ಕರು ಅವಳಿಗೆ ತೀರ ಪರಿಚಿತರು. ಹಗಲು ದುಡಿತ,ಮನೆಕೆಲಸ, ನನಗೆ ಕಥೆ..ಇವೆಲ್ಲದರ ಜೊತೆಗೆ ಸ್ವಲ್ಪವಾದರೂ ಕಥೆಗಳನ್ನು ಓದದೆ ಅವಳು ಅಡ್ಡವಾದ ನೆನಪಿಲ್ಲ. ನಾನು ಬೆಳೆದ ನಂತರ ನನ್ನ ಓದಿನ ಹಸಿವು ಹೆಚ್ಚಿದಂತೆ ಆಕೆ ನನ್ನ ಮಗುವಾಗುತ್ತಿದ್ದಳು. ” ಏನೆಲ್ಲ ಓದಿದ್ದೀ..ಅದರಲ್ಲಿ ನಿನಗಿಷ್ಟದ ಚೆಂದದ ಒಂದು ಕಥೆ ಹೇಳು ನೋಡುವ”. ನಾನು ಕಥೆ ಹೇಳುವ ಸಂದರ್ಭ ಬಂದಾಗಲೆಲ್ಲ ಅವಳ ಚರ್ಯೆ ನೆನಪಿಸಿ ಅನುಕರಿಸುತ್ತಿದ್ದೆ. ಕಥೆ ಮತ್ತಷ್ಟು ಅಲಂಕಾರಗೊಂಡು ನನಗಾದ ಆ ಅನುಭೂತಿಯೇ ಅವಳಿಗೂ ಉಣಿಸಬೇಕೆಂಬ ಆಸೆ. ಕೆಲವೊಮ್ಮೆ ಪುಸ್ತಕ ಕೊಟ್ಟು  “ಇದರಲ್ಲಿ ಚೆಂದದ ಇಂದು ಕಥೆ ಓದು. ಕೇಳುತ್ತೇನೆ “, ಎನ್ನುತ್ತಿದ್ದಳು. ನನ್ನ ಓದು ನಿಧಾನಗೊಂಡರೆ.. ” ನನಗೆ ಅರ್ಥ ಆಗುತ್ತಿದೆ. ಗಾಡಿ ಸ್ವಲ್ಲ ಬೇಗ ಹೋಗಲಿ” ಅನ್ನುತ್ತಿದ್ದರು.  ಹೇಳುವ ವೇಗ ಹೆಚ್ಚಿದರೆ,  “ಎಂತ ಅದು ಕಥೆಯಾ..ಓದಬೇಕೂಂತ ಓದುವುದಾ..ಸರಿ ಮಾಡಿ ಮೊದಲಿಂದ ಓದು” ಎನ್ನುವ ಅಪ್ಪಣೆ. ಮುಂದೆ ನಾಟಕವೊಂದು ರಂಗದ ಮೇಲೆ ಬರುವ ಪ್ರಕ್ರಿಯೆಗೆ ಪೂರ್ವಭಾವಿ ಕಾರ್ಯಗಳಲ್ಲಿ ಅದರ ಓದು ಎಷ್ಟೊಂದು ಪ್ರಮುಖ ಪಾತ್ರ ಎಂದು ಅರಿವಿಗೆ ಬಂದಾಗ ನನ್ನ ಕಣ್ಣೆದುರು ಕಥೆ ಓದಿಸುತ್ತಿದ್ದ ನನ್ನ ಮೊದಲ  ನಿರ್ದೇಶಕಿ ಬರುತ್ತಾಳೆ. ಹಗಲಿಡೀ ದುಡಿದು ದಣಿದ ಆಕೆ ನನ್ನ ಪುಟ್ಟ ಕರಗಳನ್ನು ತನ್ನ ಅಂಗೈಯೊಳಗಿರಿಸಿ ಮನೆಯ ಹೊರಗೆ ಸಗಣಿ ಸಾರಿಸಿದ ಅಂಗಳಕ್ಕೆ, ಆ ತೆರೆದ ರಂಗ ಮಂಟಪಕ್ಕೆ ಕರೆತರುತ್ತಿದ್ದಳು. ಎದುರು ಗಗನಚುಂಬನಕ್ಕೆ ಹೊರಟ ತೆಂಗಿನ ಮರ. ಆಕಾಶ ಭಿತ್ತಿಯಲ್ಲಿ ಚಂದಿರ, ನಕ್ಷತ್ರ, ಚೆಲ್ಲುವ ಬೆಳದಿಂಗಳು. ಆ ತಂಪು. ಅಮ್ಮ ನಕ್ಷತ್ರದ ಕಥೆ ಎಂದರೆ ಧ್ರುವ ಮಹಾರಾಜ,ಸವತಿ ಮಾತ್ಸರ್ಯ, ಸಪ್ತ ಋಷಿಗಳ ಕಥೆ, ನಚಿಕೇತ, ಉಲೂಪಿ,ಯಕ್ಷ,ಗಂದರ್ವರು, ನಾಗದೇವತೆಗಳು, ಜನಮೇಜಯನ ಸರ್ಪಯಾಗ ಇವೆಲ್ಲವೂ ಸಾಕ್ಷಾತ್ಕಾರಗೊಳ್ಖುವುದು ಅಲ್ಲೇ. ಚಂದಿರನ ಬೆಳಕು , ತೆಂಗಿನ ಗರಿಗಳ ರಂಗ ವಿನ್ಯಾಸ. ಆಕೆಯ ಮುಖದ ಮೇಲೆ ಕಥೆಯ ಭಾವಕ್ಕೆ ತಕ್ಕಂತೆ ಗಾಳಿಯ ಓಟಕ್ಕೆ ಹರಿದಾಡುವ ನೆರಳು ಬೆಳಕಿನ ಲೈಟಿಂಗ್ ತಂತ್ರಜ್ಞಾನ. ನಾನು ಪ್ರೇಕ್ಷಕಳು. ಆಕೆಯದು ಆ ಅಭಿನಯ ಜಗಲಿಯಲ್ಲಿ ಏಕವ್ಯಕ್ತಿ ಪ್ರಸ್ತುತಿ. ನೂರಾರು ಪ್ರೇಕ್ಷಕರ ಕಣ್ಣೊಳಗೆ ಬಿಂಬವಾಗಿ ಮೂಡುವ, ನಾಟಕದ ಪಾತ್ರವಾಗಲು ಎಂಟೆದೆಯ ಧೈರ್ಯ ಬೇಕು. ಭಾವ, ಅಭಿನಯ, ಮಾತುಗಳು, ರಂಗಚಲನೆ ಇವೆಲ್ಲ ದೇಹದೊಳಗೆ ಹೊಕ್ಕು ವೇಷವಾಗಿ,ಆವೇಶವಾಗಿ ಅಭಿವ್ಯಕ್ತಿಯಾಗಲು, ಒಂದಿಷ್ಟೂ ಹಿಂಜರಿಕೆ, ಭಯ, ಸ್ವಂತಶಕ್ತಿಯ ಮೇಲೆ ಸಂಶಯ ಇರಲೇ ಬಾರದು. ಬಾಲ್ಯದಲ್ಲಿ, ನಾನು ಗುಬ್ಬಿ ಮರಿ. ಗೂಡು ಮಾತ್ರ ಬೆಚ್ಚಗೆ, ಹೊರಗೆಲ್ಲಾ ಅಭದ್ರತೆಯ ಭಾವ. ಅಂಜಿಕೆ, ನಾಚಿಕೆ,ಹೆದರಿಕೆ ಧರಿಸಿಕೊಂಡ ಬಾಲ್ಯದ ನನ್ನ ಚಿತ್ತ ಚಿತ್ರವು ಹಲವಾರು ಸಲ ಭಯದ ಕುಲುಮೆಗೆ ದೂಡಿದಂತಾಗಿ ಚಡಪಡಿಸುತ್ತಿದ್ದೆ. ನಾಲ್ಕು ಜನಗಳಿದ್ದರೆ ಅಡಗಲು ಸುರಕ್ಷಿತ ತಾಣ ಹುಡುಕುತ್ತಿದ್ದೆ.  ಇದಕ್ಕೆ ಹಿನ್ನೆಲೆಯಾಗಿ ಕಾರಣಗಳೇನೇ ಇದ್ದರೂ ಅದು ನನ್ನ ವ್ಯಕ್ತಿತ್ವದ ಭಾಗವಾಗಿ ನಾನೇ ಅದಾಗಿ ಚಡಪಡಿಸುತ್ತಿದ್ದೆ.  ಯಾರ ಎದುರೂ ಬರಲಾರದ, ಮಾತನಾಡಲಾರದ ಪುಕ್ಕಲುತನ.  ಆಗೆಲ್ಲ ಬಡಕಲು ಪುಟ್ಟ ದೇಹದ ನನಗೆ ಶಾಲೆಯಲ್ಲಿ ಮೊದಲ ಬೆಂಚ್ ನಲ್ಲಿ ಸ್ಥಳ ಖಾಯಂ. ಅದೂ ಬಹಳಷ್ಟು ಸಲ ಮೊದಲ ಸಾಲಿನ ಮೊದಲ ಜಾಗ. ವಿಪರೀತ ಚಡಪಡಿಕೆ,ಅಸ್ಯವ್ಯಸ್ತಗೊಂಡು ಕುಂಯ್ಯ್ ಗುಡುವ ಮನ. ಟೀಚರ್ ನನ್ನನ್ನೇ ನೋಡುವರು..ಹೊರ ಒಳಗೆ ಹೋಗಿ ಬರುವಾಗ ನನ್ನ ಸಹಪಾಠಿ ಗಳ ದೃಷ್ಟಿಯೂ ನನ್ನ ಮೇಲೆ. ಪ್ರಶ್ನೆಯೂ ಬಾಣದಂತೆ ನನಗೆ. ಶಾಲೆಯಿಂದ ತಪ್ಪಿಸಿಕೊಂಡು ಮನೆಯ ಆ ಕತ್ತಲೆ ಕೊಠಡಿಯಲ್ಲಿ ಕೂತರೇ..ಅನ್ನಿಸುತ್ತಿತ್ತು. ಅಂತಹ  ಸಂದರ್ಭದಲ್ಲೆ ಮನಸ್ಸಿನ ಗಾಯಗಳಿಗೆ ಮುಲಾಮು ಹಚ್ಚುವಂತೆ ಅಜ್ಜಿ ನುಡಿದಿದ್ದಳು. “ಕೇವಲ ಸೈನಿಕನಾದರೆ ಸಾಲದು. ದಂಡನಾಯಕನಾಗುವ ಬಗ್ಗೆ ಯೋಚಿಸಬೇಕು”  ಒಮ್ಮೆಯಲ್ಲ! ಬಾರಿಬಾರಿ. ನಾನು ಕುಸಿದಾಗಲೆಲ್ಲ..ನಾಯಕತ್ವ ನಿನ್ನ ಕೈಗೆ ತೆಗೆದುಕೋ ಅನ್ನುವುದನ್ನೇ ಅದೆಷ್ಟು ಬಡಿದೆಬ್ಬಿಸುವಂತೆ ಹೇಳುತ್ತಾ ಇದ್ದಳು. “ನಾನು ಉದ್ದ ಇರಬೇಕಿತ್ತು ಅಮ್ಮ” ಎಂದು ನಾನಂದರೆ,  “ಪುಟ್ಟ ದೇಹ ಇರುವುದರಿಂದಲೇ ಸಾಧನೆ. ನೋಡುವ ನಾಳೆಯಿಂದ ಟೀಚರ್ ಹಿಂದೆ ಕುಳಿತುಕೊಳ್ಳಲು ಹೇಳಿದರೂ ನೀನು ಎದುರಿರಬೇಕು. ನಾಳೆ ನೀನು ದಂಡನಾಯಕಿ. ಸೈನ್ಯವನ್ನು ಮುನ್ನಡೆಸಬೇಕು. ನಿನಗೆ ಯಾವುದು ಸಾಧ್ಯವಿಲ್ಲ ಎಂಬ ಭಯ ಇದೆಯೋ, ಅದೇ ಸಾಧ್ಯ ಮಾಡಬೇಕು. ಗೊತ್ತಿಲ್ಲದೆ ಇರುವುದನ್ನು ಗೊತ್ತು ಮಾಡುವ ಬಗ್ಗೆ ಯೋಚಿನೆ,ಯೋಜನೆ ಇರಬೇಕು.” ಅನ್ನುತ್ತಾ ಕಥೆ, ಕಲ್ಪನೆ, ಕಲೆಯನೆಲೆ, ಧೈರ್ಯ ಎಲ್ಲವನ್ನೂ ಈ ಗುಬ್ಬಿ ಮರಿಯ ದೇಹದಲ್ಲಿ ತುಂಬಿ, ಹಾರಲು ಕಲಿಸಿದರು, ******************************* ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿ

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ನಿತ್ಯ ಎದುರಾಗುವ ನಿರ್ವಾಹಕರು ಪ್ರತಿನಿತ್ಯ ಕೆಲಸಕ್ಕೆ ಬಸ್ಸಿನಲ್ಲೆ ತೆರಳುವ ನಾವು ಹಲವಾರು ಜನ ಕಂಡಕ್ಟರುಗಳನ್ನು ಪ್ರತಿನಿತ್ಯ ನೋಡುತ್ತಿರುತ್ತೇವೆ. ಒಬ್ಬೊಬ್ಬ ನಿರ್ವಾಹಕರೇ ಒಂದೊಂದು ಥರ. ಕೆಲವರು ತಾಳ್ಮೆಯಿಂದ ಇರುತ್ತಾರೆ, ಕೆಲವರಿಗೆ ಎಂಥದ್ದೋ ಅವಸರ, ಕೆಲವರು ಎಷ್ಟೊಂದು ದಯಾಮಯಿಗಳು, ಮತ್ತೊಂದಿಷ್ಟು ಜನ ಜಗತ್ತಿನ ಎಲ್ಲ ಕೋಪವನ್ನೂ ಹೊತ್ತು ತಿರುಗುತ್ತಿರುವವರಂತೆ ಚಟಪಟ ಸಿಡಿಯುತ್ತಿರುತ್ತಾರೆ. ಮನಸಿನಂತೆ ಮಹದೇವ ಎನ್ನುವ ಹಾಗೆ ಮನಸಿನ ಅವತಾರಗಳಷ್ಟೇ ವೈವೀಧ್ಯಮಯ ನಿರ್ವಾಹಕರು. ಪ್ರತಿನಿತ್ಯ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಬಹುತೇಕ ಉಂಟಾಗುವ ಜಗಳಕ್ಕೆ ಮುಖ್ಯ ಕಾರಣವಾಗುವುದೇ ಚಿಲ್ಲರೆ ಸಮಸ್ಯೆ. ಬೆಳ್ಳಂಬೆಳಗ್ಗೆ ಬಸ್ ಹತ್ತಿದ ಹತ್ತಿರದ ಊರಿಗೆ ಹೋಗಬೇಕಾದವನು ಐನೂರರ ನೋಟೊಂದನ್ನು ಹಿಡಿದುಬಿಟ್ಟರೆ ನಿರ್ವಾಹಕರ ಪರಿಸ್ಥಿತಿ ಏನು… ಒಬ್ಬರಿಗೋ ಇಬ್ಬರಿಗೋ ಆದರೆ ಸರಿ, ಆದರೆ ಬಸ್ಸಿನಲ್ಲಿರುವ ಪ್ರತಿಯೊಬ್ಬರಿಗೂ ಚಿಲ್ಲರೆ ಕೊಡುವ ಪರಿಸ್ಥಿತಿ ಎದುರಾದಾಗ ಕಂಡಕ್ಟರ್ ಆದರೂ ಎಲ್ಲಿಂದ ಚಿಲ್ಲರೆ ತರಬೇಕು. ಅವರಾದರೂ ಮನೆಯಿಂದಲೂ ಹೆಚ್ಚು ಚಿಲ್ಲರೆ ತರುವಂತಿಲ್ಲ. ನಾನಂತೂ ಸದಾ ಚಿಲ್ಲರೆಯನ್ನು ನನ್ನ ಬ್ಯಾಗಿನಲ್ಲಿ ಇಟ್ಟುಕೊಂಡೇ ತಿರುಗುವುದು ರೂಢಿ ಮಾಡಿಕೊಂಡಿದ್ದೇನೆ. ಮತ್ತೆ ನಮಗೆ ಯಾವ ಕಂಡಕ್ಟರರಿಗೆ ಚಿಲ್ಲರೆ ಕೊಡಬೇಕು ಮತ್ತೆ ಯಾರಿಗೆ ಕೊಡಬಾರದು ಎನ್ನುವುದೆಲ್ಲ ಅದೆಷ್ಟು ಚೆನ್ನಾಗಿ ಗೊತ್ತಾಗಿಬಿಡುತ್ತದೆ! ಅವರು ಬೇರೆಯವರಿಗೆ ಟಿಕೆಟ್ ಕೊಡುವುದನ್ನು ನೋಡುವಾಗಲೇ “ಓ ಇವರಿಗೆ ಚಿಲ್ಲರೆ ಸಮಸ್ಯೆ ಇದೆ ಅಥವಾ ಇಲ್ಲ” ಎನ್ನುವುದನ್ನು ಅಭ್ಯಸಿಸಿಬಿಡುತ್ತೇವೆ. ನಂತರವೇ ನಾವು ಚಿಲ್ಲರೆ ತೆಗೆಯುವುದು. ತೀರಾ ಅಸಹನೆಯ ಕಂಡಕ್ಟರರ ಮುಂದೆ ಚಿಲ್ಲರೆ ಇಲ್ಲದೆ ದೊಡ್ಡ ನೋಟೊಂದನ್ನು ಹಿಡಿದು ನಿಲ್ಲಬೇಕಾಗಿ ಬಂದಾಗ ನಿಜಕ್ಕೂ ಅದೆಷ್ಟು ಅನವಶ್ಯಕ ಮಾತುಗಳನ್ನು ಕೇಳಬೇಕಾಗುತ್ತದೆ ಮತ್ತು ಬಳಸಲಿಕ್ಕೆ ತಯಾರಾಗಬೇಕಾಗಿ ಬರುತ್ತದೆ. ಈ ಕಂಡಕ್ಟರುಗಳದು ಬಹಳ ಒತ್ತಡದ ಕೆಲಸ. ಪ್ರತಿನಿತ್ಯ ಎಂತೆಂಥಾ ಪ್ರಯಾಣಿಕರು ಹತ್ತುತ್ತಾರೆಂದರೆ, ಕೆಲವರಂತೂ ಅವರನ್ನು ತೀರಾ ನಿಕೃಷ್ಟವಾಗಿ ಕಂಡು, ವ್ಯವಹರಿಸುವುದನ್ನು ನೋಡುವಾಗ ಇಂತಹ ಜನಗಳಿಂದಲೇ ಅವರು ಕಠೋರರಾಗಿಬಿಡುತ್ತಾನೋ ಅಂತಲೂ ಅನಿಸತೊಡಗುತ್ತದೆ. ಒಮ್ಮೆ ಬೆಂಗಳೂರಿನಿಂದ ಬರುತ್ತಿದ್ದ ಹುಡುಗಿಯೊಬ್ಬಳು ನಿರ್ವಾಹಕಿಯೊಡನೆ ಗಲಾಟೆ ಶುರುಮಾಡಿಕೊಂಡಿದ್ದಳು. ಆದದ್ದು ಇಷ್ಟು. ಆ ಹುಡುಗಿ ಗೌರಿಬಿದನೂರಿನ ಬಳಿಯ ಒಂದು ಹಳ್ಳಿಯಿಂದ ಬೆಂಗಳೂರಿಗೆ ನಿತ್ಯ  ಕಾಲೇಜಿಗೆ ಹೋಗಿ ಬರುತ್ತಾಳೆ. ಹಾಗಾಗಿ  ಅವಳಲ್ಲಿ ನಿತ್ಯದ ಪಾಸ್ ಇರುತ್ತದೆ. ಆದರೆ ಆ ಸಧ್ಯ ಅದರ ಅವಧಿ ಮುಗಿದದ್ದು, ಅವಳು ಈಗ ಟಿಕೇಟ್ ಕೊಳ್ಳಬೇಕಿತ್ತು. ಅವಳೇ ತಾನಿದ್ದಲ್ಲಿಗೆ ಬಂದು ಪಾಸ್ ಬಗ್ಗೆ ಹೇಳಿ ಟಿಕೇಟ್ ಪಡೆಯಬೇಕಿತ್ತು ಎನದಬುವುದಯ ನಿರ್ವಾಹಕಿಯ ವಾದ. ಇಲ್ಲ ತಾನಿದ್ದಲ್ಲಿಗೆ ಬಂದು ವಿಷಯ ತಿಳಿದುಕೊಂಡು ಟಿಕೇಟ್ ಕೊಡಬೇಕಿತ್ತು ಎನ್ನುವುದು ಆ ಹುಡುಗಿಯ ವಾದ. ಆದರೆ ಕನಿಷ್ಟ ವಯಸ್ಸಿಗೂ ಬೆಲೆ ಕೊಡದೆ ನಿರ್ವಾಹಕಿಯ ಬಳಿ ಹೇಗೆಂದರೆ ಹಾಗೆ ಜಗಳಕ್ಕಿಳಿದಿದ್ದ ಹುಡುಗಿಯ ವರ್ತನೆ ಅಸಹನೀಯವಾಗಿತ್ತು. ಸಾಲದ್ದಕ್ಕೆ “ಎಷ್ಟು ನಿನ್ ನಂಬರ್ರು? ಬಾ ಸ್ಟಾಂಡಿಗೆ ಕಂಪ್ಲೇಂಟ್ ಮಾಡ್ತೀನಿ…” ಎನ್ನುತ್ತಾ ಹೋದ ಹುಡುಗಿಯ ಬಗ್ಗೆ ನೋಡುತ್ತಿದ್ದ ನಮಗೇ ಕೋಪ ಬರುತ್ತಿತ್ತು. ಇಷ್ಟೊಂದು ಉದ್ಧಟತನ ಮತ್ತು ಅಹಂಕಾರವನ್ನು ತಂದೆ ತಾಯಂದಿರಾದರೂ ಹೇಗೆ ಬೆಳೆಯಲು ಬಿಡುತ್ತಾರೆ… ಅವಳಿಗೆ ಯಾವ ಮದವೇ ಇದ್ದಿರಲಿ, ಎದುರಿನವರನ್ನು ಕನಿಷ್ಟ ಗೌರವದಿಂದ ಮಾತಾಡಿಸದಿರುವಂತಹ ವರ್ತನೆ ಅಸಹನೀಯವೇ ಸರಿ. ನನ್ನ ಪುಟ್ಟ ಮಗಳಿಗೆ ಪ್ರತಿನಿತ್ಯ ನನ್ನ ಜೊತೆಗೇ ತಿರುಗಬೇಕಾದ ಅನಿವಾರ್ಯ. ಇನ್ನೂ ಸಣ್ಣವಳಿದ್ದಾಗ, ಅವಳಿಗೆ ಅದೆಂಥದೋ ತಾನೇ ನಿರ್ವಾಹಕರಿಗೆ ದುಡ್ಡು ಕೊಡಬೇಕು, ಟಿಕೇಟ್ ಪಡೆಯಬೇಕು, ಚಿಲ್ಲರೆ ಇಸಿದುಕೊಳ್ಳಬೇಕು ಎನ್ನುವ ಹಂಬಲ. ಆದರೆ ಟಿಕೆಟ್ಟನ್ನು ಮಕ್ಕಳ ಕೈಗೆ ಕೊಡಬೇಡಿ ಎನ್ನುವುದು ನಿರ್ವಾಹಕರ ಕಾಳಜಿ ಮತ್ತು ಆಜ್ಞೆ. ಅದರ ನಡುವೆಯೂ ಇವಳ ಆಸೆಯನ್ನು ಕಂಡು ಪಾಪ ಅನ್ನಿಸಿ ಒಮ್ಮೊಮ್ಮೆ ನಿರ್ವಾಹಕರು, ಖಾಲಿ ಟಿಕೆಟ್ ಹೊಡೆದು ಅವಳ ಕೈಗಿಟ್ಟಾಗ ಅವಳಿಗಾಗುತ್ತಿದ್ದ ಸಂಭ್ರಮವಂತೂ ಅಷ್ಟಿಷ್ಟಲ್ಲ… ಇನ್ನು ಮಾನವೀಯತೆಯೇ ಮೈವೆತ್ತಂತೆ ಇರುವ ಅದೆಷ್ಟೋ ನಿರ್ವಾಹಕರನ್ನು ಕಾಣುವಾಗ ಇವರು ಬರೀ ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ಮನಸೇ ಬರುವುದಿಲ್ಲ. ಆ ಕ್ಷಣಕ್ಕೆ ಯಾರದೋ ತಂದೆ, ಮತ್ಯಾರದೋ ಅಣ್ಣ, ಇನ್ಯಾರದೋ ಮಗನ ಹಾಗೆ ವರ್ತಿಸುತ್ತಾ ನಮ್ಮವರೇ ಆಗಿಬಿಡುವ ಇವರನ್ನು ನಮ್ಮವರಲ್ಲ ಎಂದುಕೊಳ್ಳುವುದಾದರೂ ಹೇಗೆ ತಾನೆ ಸಾಧ್ಯ…. ****************************** ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ. –

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ಸೌಂದರ್ಯ ಲಹರಿ ಆ ಅಜ್ಜ ತನ್ನ ಮನೆಯ ಅಂಗಳದಲ್ಲಿ ಕುಳಿತು ನೋಡುತ್ತಲೇ ಇದ್ದರು. ದಿನಾಲೂ ನೋಡುತ್ತಿದ್ದರು. ಚಿಟ್ಟೆಯನ್ನು! ಬಣ್ಣದ ಚಿಟ್ಟೆಯನ್ನು.  ಅದರ ಎಡ ಬಲದ ರೆಕ್ಕೆಗಳು ಒಂದಕ್ಕೊಂದು ಕನ್ನಡಿ ಹಿಡಿದ ಬಿಂಬಗಳ ಹಾಗೆ. ಆಗಷ್ಟೇ ರವಿ ವರ್ಮ, ತನ್ನ ಕುಂಚದಿಂದ ಬಳಿದು ಬಿಡಿಸಿದ ತೈಲವರ್ಣಚಿತ್ರದ ರೇಖೆಗಳ ಹಾಗೆ ನಾಜೂಕು ವರ್ಣ ರೇಖೆಗಳು ಆ ರೆಕ್ಕೆಗಳಲ್ಲಿ!. ಅದು ಹಾರೋದಂದರೆ! ಲಪ್..ಟಪ್.. ಎಂದು ರೆಕ್ಕೆಯನ್ನು ನಯ ನಾಜೂಕಿನಿಂದ ತೆರೆದು ಮಡಿಸಿ ವಿಶ್ವಾಮಿತ್ರನ ತಪಸ್ಸು ಭಂಗಕ್ಕೆ ಬಂದ ಅಪ್ಸರೆಯ ಮೋಹಕ ಹೆಜ್ಜೆಗಳ ಲಯ ಅದಕ್ಕೆ!. ಬರೆದೇ ಬಿಟ್ಟರು! ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ; ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ. ಈ ಕವನದತ್ತ ಚಿತ್ತ ಹರಿಸುವ ಮುನ್ನ, ಸೃಷ್ಟಿಯಲ್ಲಿ ಕಾಣ ಸಿಗುವ  ಪ್ರತಿಯೊಂದು ರೂಪದ ಹಿಂದಿನ ಸ್ವರೂಪದತ್ತ ದೃಷ್ಟಿ ಹರಿಸಿದರೆ ನಮಗೆ ಒಂದು ಅನೂಹ್ಯ ಸಾಮ್ಯತೆ ಕಾಣ ಸಿಗುತ್ತೆ. ಅದೇ ಸಿಮ್ಮೆಟ್ರಿ ( Symmetry). ನಿಮಗಿಷ್ಟವಾದ ಸಿನೆಮಾ ನಟಿ ಅಥವಾ ನಟನ ಮುಖ ಯಾಕೆ ಚಂದ. ಮುಖದ ಎಡ ಭಾಗ ಮತ್ತು ಬಲ ಭಾಗ ಒಂದಕ್ಕೊಂದು ಮಿರರ್ ಇಮೇಜ್ ಅಲ್ವಾ. ಎಡ ಬಲದಲ್ಲಿ ಕಣ್ಣುಗಳು, ಹುಬ್ಬುಗಳು  ಕಪೋಲಗಳು, ಕಿವಿಗಳು ಮೂಗಿನಲ್ಲೂ ಎರಡು ಹೊಳ್ಳೆಗಳು! ಹೀಗೆ ಸೃಷ್ಟಿಯ ಅದ್ಭುತ ಅಡಗಿದೆ ಮುಖಾರವಿಂದದ ಸಿಮ್ಮೆಟ್ರಿಯಲ್ಲಿ. ಈ ಸುಂದರ ಸಮರೂಪೀ ಚಿತ್ರಗಳು ಪರಸ್ಪರ ಕಣ್ಣು ಮಿಟುಕಿಸಿ “ಲವ್ ಅಟ್ ಫಸ್ಟ್ ಸೈಟ್” ಎಂಬ ಪ್ರೇಮ ಕಥೆ ಆರಂಭ. ಜಗದ ಸೌಂದರ್ಯದ ಹಿಂದೆ ಈ ಸಮರೂಪತ್ವ ಅಥವಾ ಸಿಮ್ಮೆಟ್ರೀ ಇದೆ. ಇದೊಂದು ಪ್ರಕೃತಿ ತತ್ವ. ನಾವು ನೀವು ಬಯಸಿ ರೂಪಿಸಿದ್ದಲ್ಲ. ದಾಸವಾಳ ಹೂವನ್ನು ಗಮನಿಸಿ. ಅದರ ದಳಗಳು ಒಂದರಂತೆ ಇನ್ನೊಂದು, ಒಂದು ಶಂಕುವಿಗೆ ಅಂಟಿಕೊಂಡಂತೆ ಹೊರಗಿಣುಕುತ್ತವೆ. ಅದರ ತೊಟ್ಟನ್ನು ಹಿಡಿದು ಸ್ವಲ್ಪ ಸ್ವಲ್ಪವೇ ದಳದಿಂದ ದಳಕ್ಕೆ ತಿರುಗಿಸಿದರೆ,  ಹೂವು ಒಂದೇ ಥರ ಕಾಣಿಸುತ್ತೆ.  ಇದೂ ಒಂದು ಸಿಮ್ಮಟ್ರೀ. ಅದೂ ಬೇಡ ಅಂದರೆ ಯಾವುದೇ ಗಿಡ ಬಳ್ಳಿಯ ಎಲೆಯನ್ನು ಗಮನಿಸಿ. ಎಲೆ ಮಧ್ಯದಲ್ಲಿ ಒಂದು ನಾರು ಅದು ಜೋಡಿಸಿ ಹಿಡಿದು ಇಕ್ಕೆಲಗಳಲ್ಲಿ ಎಡ ಬಲದ ಎಲೆ!. ಅದೂ ಸಿಮ್ಮೆಟ್ರೀ!. ದೇವದಾರು ಮರದ ಗೆಲ್ಲುಗಳು, ತೆಂಗಿನ ಮರದ ಮಡಲುಗಳು, ಎಷ್ಟೊಂದು ಸಿಮ್ಮೆಟ್ರಿಯಿಂದ ಸ್ವಾಲಂಕಾರ ಭೂಷಣೆಯರು ಅಲ್ಲವೇ. ನಾವು ನಿಂತ ಭೂಮಿ, ಆಕಾಶಕಾಯಗಳು ಸಾಧಾರಣವಾಗಿ ಗೋಲಾಕಾರ. ಅದು ಅತ್ಯಂತ ಹೆಚ್ಚು ಸಿಮ್ಮೆಟ್ರಿಕ್ ಅವಸ್ಥೆ. ಚಂದಮಾಮ ಹುಣ್ಣಿಮೆಯ ದಿನ ಎಷ್ಟು ಚಂದ ಕಾಣಿಸುತ್ತಾನೆ, ವೃತ್ತಾಕಾರದ ಬೆಳ್ಳಿ ತಟ್ಟೆಯ ಹಾಗೆ! ನೀವು ಸಸ್ಯದ ತುಣುಕನ್ನು ಮೈಕ್ರೋಸ್ಕೋಪ್ ನಲ್ಲಿ ಇಟ್ಟು ನೋಡಿದರೆ ಷಟ್ಕೋನಾಕೃತಿಯ  ಜೀವಕೋಶಗಳು ಸಿಮ್ಮೆಟ್ರಿಕ್ ಆಗಿ ಒಂದಕ್ಕೊಂದು ಹೆಗಲು ಜೋಡಿಸಿ ಸಾಲುಗಟ್ಟಿ ನಿಂತ ದೃಶ್ಯ ಕಾಣಿಸುತ್ತೆ. ಸಸ್ಯ ಮತ್ತು ಪ್ರಾಣಿಲೋಕದಿಂದ ಹೊರಬಂದರೆ, ಅದೋ, ಆ ಕಪ್ಪು ಕಲ್ಲು ಇದೆಯಲ್ಲ, ಅದನ್ನು ಒಡೆದೊಡೆದು ಅತ್ಯಂತ ಸಣ್ಣ, ಮೂಲ ಕಣವಾಗಿಸಿದರೆ ಅದು ಸ್ಪಟಿಕ ರೂಪಿಯಾಗಿರುತ್ತೆ. ಆ ಸ್ಫಟಿಕದ ಏಕಕಣ ಕೋಶ ಚಚ್ಚೌಕವೋ ಆಯತ ಘನವೋ, ಇತ್ಯಾದಿ ಹಲವು ರೀತಿಯ ಸಿಮ್ಮೆಟ್ರಿಕ್ ಆಕಾರ ಪಡೆದಿರುತ್ತವೆ. ಅದರ ಮೂಲೆಗಳಲ್ಲಿ ಮತ್ತು ಒಳಗೆ ನಾವು ಗೋಲಾಕಾರ ಎಂದು ನಂಬಿದ ಪರಮಾಣುಗಳು ಕುಳಿತಿರುತ್ತವೆ. ಪರಮಾಣುಗಳೂ ಸಮರೂಪೀ ಗೋಲಕಗಳೇ!. ನಾವು ಉಸಿರಾಡುವ ಆಕ್ಸೀಜನ್, ಕುಡಿಯುವ H2O ನೀರು, ಈ ಎಲ್ಲಾ ಮಾಲೆಕ್ಯೂಲ್ ಗಳೂ ತಮ್ಮದೇ ಆದ ಸಿಮ್ಮೆಟ್ರಿಯಿಂದಾಗಿ, ಸ್ವಭಾವವನ್ನೂ ಪಡೆದ ಅಂದಗಾತಿಯರು. ನಮ್ಮ ಮಿಲ್ಕೀ ವೇ ನಕ್ಷತ್ರ ಮಂಡಲದ ಚಿತ್ರ ನೋಡಿದರೆ ಅದರಲ್ಲೂ ಒಂದು ಸಿಮ್ಮೆಟ್ರಿ. ನಮ್ಮನ್ನು ಬಹಳಷ್ಟು ಕಾಡಿದ ಕರೋನಾ ವೈರಸ್ ನ ಚಿತ್ರವನ್ನು ಗಮನಿಸಿ, ಅದೂ ಸಿಮ್ಮೆಟ್ರಿಕ್ ಆದ ಗೋಲಕದ ಮೇಲ್ಮೈಯಲ್ಲಿ ವ್ಯವಸ್ತಿತ ದೂರದಲ್ಲಿ ಹತ್ತು ಹಲವು ಕಡ್ಡಿಗಳನ್ನು ಚುಚ್ಚಿದಂತೆ ಕಾಣಿಸುತ್ತೆ. ಈ ಸಿಮ್ಮೆಟ್ರಿಯಿಂದಾಗಿ ಆಕಾರಕ್ಕೆ ಸೌಂದರ್ಯವಲ್ಲದೇ ಅದರದ್ದೇ ಆದ ಸ್ಥಿರತೆ ಸಿಗುತ್ತೆ. ಚಿಟ್ಟೆಯ,ಹಕ್ಕಿಗಳ ದೇಹದ ಇಕ್ಕೆಲಗಳ ರೆಕ್ಕೆಗಳು ಅವುಗಳಿಗೆ ಹಾರಾಡುವಾಗ ಏರೋಡೈನಮಿಕ್ ಸ್ಥಿರತೆ ಕೊಡುತ್ತವೆ. ವಿಮಾನದ ಒಂದು ರೆಕ್ಕೆ ಮುರಿದರೆ ವಿಮಾನ ಕೆಳಗೆ ಬಿತ್ತು ಎಂದೇ ಲೆಕ್ಕ. ಕಟ್ಟಡಗಳು ಚಚ್ಚೌಕವೋ ಪಿರಮಿಡ್ ಥರವೋ, ಗುಂಬಜ್ ಆಗಿಯೋ ನಿರ್ಮಿಸಲು ಕಾರಣವೇ  ಸಿಮ್ಮಟ್ರಿಯ ಚಂದದ ಜತೆ ಜತೆಗೇ ಸಿಗುವ ದೃಡತೆ, ಸ್ಥಿರತೆ. ಮನುಷ್ಯ, ಪ್ರಾಣಿಗಳ ದೇಹದ ಸಂರಚನೆಯಲ್ಲಿ ಕಾಣುವ ಸಿಮ್ಮೆಟ್ರಿ, ಆಯಾ ಪ್ರಾಣಿಯ ಜೀವನ ಶೈಲಿಗೆ ಅನುಗುಣವಾದ ಚಲನೆಗೆ ಮತ್ತು ಅಸ್ತಿತ್ವಕ್ಕೆ ಸ್ಥಿರತೆ ದೊರಕಲೆಂದೇ. ಈ ಎಲ್ಲಾ ಪ್ರಕೃತಿ ಸಿದ್ಧ ಪ್ರಕಾರಗಳ ಸ್ವರೂಪವನ್ನು ನಿರ್ಧರಿಸುವ ಸೂತ್ರ ಆ ವ್ಯವಸ್ಥೆಯ ಒಳಗಿನಿಂದಲೇ ಅದಕ್ಕೆ ಆ ರೂಪ ಕೊಡುತ್ತದೆ!. ದಾಸವಾಳ ಹೂವಿನ ಮೊಗ್ಗು ಅರಳಿ ಹೂವಾಗುತ್ತೆ ತಾನೇ!. ಯಾರೋ ತಮ್ಮ ಇಚ್ಛೆಗನುಸಾರ ದಾಸವಾಳದ ದಳಗಳನ್ನು ಒಂದಕ್ಕೊಂದು ಅಂಟಿಸಿದ್ದರಿಂದಾಗಿ,ಆ ಹೂ ಅರಳಿಲ್ಲ ಎಂಬುದು ಮುಖ್ಯ. ಅಂತಃಸತ್ವದ ಬಲದಿಂದ, ಅಂತಃಸೂತ್ರದ ಮಾರ್ಗದರ್ಶನದಿಂದ ಈ ರೂಪದ ಸಿಮ್ಮೆಟ್ರಿ, ಜತೆಜತೆಗೇ ಅದರ  ಸೌಂದರ್ಯ ಪ್ರಕಟವಾಗಿದೆ. ಒಂದು ಶಾಂತವಾದ ಕೊಳದ ಮಧ್ಯಕ್ಕೆ ಒಂದು ಕಲ್ಲೆಸೆದರೆ, ವೃತ್ತಾಕಾರದ ಅಲೆಗಳು ಬಿದ್ದ ಕಲ್ಲಿನ ಬಿಂದುವನ್ನು ಕೇಂದ್ರವಾಗಿಸಿ ಒಂದರ ಹಿಂದೆ ಒಂದರಂತೆ ಕೊಳದ ದಡದತ್ತ ಸರಿಯುತ್ತವೆ. ಈ ಅಲೆಗಳಲ್ಲಿಯೂ ಸಿಮ್ಮೆಟ್ರಿ ಇದೆ. ಅಲೆಗಳ ನಡೆಯಲ್ಲಿ ಲಯವೂ ಇದೆ. ಹಾಗಾಗಿ, ಯಾವುದೇ ಸಿಮ್ಮೆಟ್ರಿಯ ಜತೆಗೆ, ಲಹರಿಯಿದೆ, ಲಯವೂ ಇದೆ. ಈಗ ಕವಿತೆಗೆ ಬರೋಣ! ಕವಿತೆಯ ಸಾಲುಗಳ ರೂಪ  ಮತ್ತು ಅರ್ಥ ಕಟ್ಟುವ ಸ್ವರೂಪವೇ ಛಂದಸ್ಸು!. ಅದಕ್ಕೂ ಹತ್ತು ಹಲವು ಸಿಮ್ಮೆಟ್ರಿಗಳಿವೆ. ಪ್ರಕೃತಿಯ ಚಿತ್ತಾರಗಳ ಸಿಮ್ಮಟ್ರಿ ಹೇಗೆ  ಒಳಗಿನಿಂದಲೇ ಪ್ರಕಟವಾಗುತ್ತದೆಯೋ ಹಾಗೆಯೇ ಕವಿತೆಯ ಛಂದವನ್ನು, ಚಂದವನ್ನು ಮತ್ತು ಅರ್ಥ ವಾಸ್ತುವನ್ನು ಕವಿತೆಯ ಅಂತರಂಗದ ಬೀಜವೇ ನಿರ್ಧರಿಸುತ್ತದೆ. ಅದಕ್ಕೇ ಇರಬೇಕು, ಕವಿಯನ್ನೂ ಬ್ರಹ್ಮನಿಗೆ ಹೋಲಿಸಿದ್ದು. ಕವಿತೆಯ ಛಂದದ ಜತೆಗೂ ಲಹರಿಯಿದೆ. ಲಯವಿದೆ. ಆ ಲಯಕ್ಕೆ ಓದುಗನ ತನ್ಮಯ ಮನಸ್ಸನ್ನು ವಿಲಯನ ಮಾಡುವ ಕಸುವಿದೆ. ಬೇಂದ್ರೆ ಅವರ “ಪಾತರಗಿತ್ತಿ ಪಕ್ಕ” ಕವನದಲ್ಲಿ ಈ ಅಂತರಂಗಜನ್ಯ ಸಿಮ್ಮೆಟ್ರಿ ಮತ್ತು ಸೌಂದರ್ಯ ಲಹರಿ ಎರಡೂ ಎಷ್ಟು ಚೆಂದ!. ಹಾಗಿದ್ದರೆ ಈ ಛಂದದ ಗರ್ಭಕೋಶ ಯಾವುದು. ಅದರ ನೈಸರ್ಗಿಕ ಮತ್ತು ವ್ಯಾಕರಣಾತ್ಮಕ ವ್ಯಾಪ್ತಿ ಏನು?. ಮನುಷ್ಯ ಹೊರಗಿನಿಂದ ಲೇಪಿಸುವ ಛಂದ ಮುಖ್ಯವೇ ಅಥವಾ ಪ್ರಕೃತಿ,ಜನಪದ ಜನ್ಯ ಛಂದವಿಲ್ಲದ ಚಂದ ಮುಖ್ಯವೇ? ಈ ಪ್ರಶ್ನೆ ಹಾಕುವ ಕವಿತೆ, ಪೂರ್ಣಿಮಾ ಸುರೇಶ್ ಬರೆದ “ಛಂದವಿಲ್ಲದ ಚೆಂದ” ಕವಿತೆ. ಅಕ್ಷರರೂಪಿಯಾಗಿ ಹೀಗಿದೆ ನೋಡಿ. ಛಂದವಿಲ್ಲದ ಚೆಂದ *        *         * ನಾವು ಪ್ರಶ್ನೆಗಳ ಪ್ರಕಾರ ಗಣಿತ ಗುಣಿತ ಕಲಿತವರು ಸಮಸ್ಯೆಯ ಲೆಕ್ಕ ಬಿಡಿಸಿ ಅಂಕಗಳ ಕಂಡವರು ಅಡುಗೆ‌ ಮನೆಯ ಕುಕ್ಕರ್ ಕೂಗಿದ ಸದ್ದಿಗೇ ಗಲಿಬಿಲಿ; ಅಂತರಂಗದಲ್ಲಿ ಒಳದನಿಗೆ ಗೀಚಿಟ್ಟ ಸರಳರೇಖೆಗಳೂ ಗೋಜಲು ಅಲ್ಲೇ ಮೂಲೆಯಲ್ಲಿ! ಅಂಗಳದ ರಂಗೋಲಿಗೂ ಜ್ಯಾಮಿತಿಯ ಚುಕ್ಕಿ- ಗೆರೆಗಳು; ಚಿತ್ತಾರದ ಹುಮ್ಮಸ್ಸಿಗೆ ಕಂಠಪಾಠ ಆಗಲೇಬೇಕು ಸೂತ್ರ- ಪ್ರಮೇಯಗಳು ಸಂಭ್ರಮಗಳನ್ನ ಸಿದ್ಧಸೂತ್ರ, ಪ್ರಮೇಯಗಳಲ್ಲಿ ಕಟ್ಟಿಹಾಕಿದ ಸೂತ್ರ ಕಗ್ಗಂಟುಗಳು ಆಗ ಗೆರೆಗಳು  ಬೆರಳ ತುದಿಯಿಂದ ಇಳಿದು.. ಆದರೂ ಆಗೊಮ್ಮೆ ಈಗೊಮ್ಮೆ ನುರಿತ ಬೆರಳುಗಳ ಸಂದಿನಲ್ಲಿಳಿವ ವಕ್ರರೇಖೆಗಳು ಬಣ್ಣಗೆಡಿಸಿಕೊಂಡಾಗ “ಸುಮ್ಮನಿರಿ ಅಕ್ಕ, ಇದೇನುಮಹಾ.. ಇಲ್ಲಿ ಕೊಡಿ” ಹುಡಿಯನ್ನ ಬೆರಳುಗಳ ಕುಡಿಗಳು ಸೆಳೆದು ಸರಸರ ಎಳೆಯುತ್ತಾಳೆ… ಬರೆಯೋ – ಗೆರೆಯೋ, ತಪ್ಪು- ಸರಿ, ಗಣಿತ – ಕಾಗುಣಿತದ ಚಿಹ್ನೆಗಳೋ .. ಸಲೀಸಾಗಿ ಬರೆದು  ರಂಗೋಲಿಯಂತೆಯೇ ಅವಳೂ ನಿರಾಳ ನಗುವಾಗ.. ಇವಳ ಆಯಾಮಗಳ ತೆರೆಯದ ಆಯಾಮಗಳಲ್ಲಿ ಅರಳುವ ಛಂದವಿಲ್ಲದ ಚೆಂದ *        *        * ಛಂದವಿಲ್ಲದ ಚೆಂದ ಅನ್ನುವಲ್ಲಿ ಛಂದ ಎಂದರೇನು?. ಅದು ಕಾವ್ಯದ ಅಂತರಾಳದಿಂದ ಸ್ವಯಂಭೂ ಆಗಿ ಸಂಭವಿಸಿದ, ಸಂಭವಿಸುತ್ತಲೇ ಇರುವ ನೈಸರ್ಗಿಕ ಕ್ರಿಯೆಯೇ? ಅಥವಾ ಬಾಹ್ಯಸ್ತರದಿಂದ ಅಂಕಣದ ಅಂಚುಗಳಿಗೆ ರೂಪ ಕಟ್ಟುವ ಛಂದವೇ?. “ನಾವು ಪ್ರಶ್ನೆಗಳ ಪ್ರಕಾರ ಗಣಿತ ಗುಣಿತ ಕಲಿತವರು ಸಮಸ್ಯೆಯ ಲೆಕ್ಕ ಬಿಡಿಸಿ ಅಂಕಗಳ ಕಂಡವರು” ‘ಗಣಿತ ಗುಣಿತ ಕಲಿತವರು’ ಎಂಬುದನ್ನು ಗಮನಿಸಬೇಕು. ಇದು ಕಲಿತ ಛಂದ. ಸ್ವಯಂ ಭೂ ಛಂದವಲ್ಲ.  ಹೀಗೆ ಕಲಿಸುವ ಕಲೆಸುವ, ಪಾಕ ಬರಿಸುವ, ತರ್ಕ ಶಾಸ್ತ್ರೀಯ, ಬಾಹ್ಯಜಗತ್ತಿನ ಕಾರ್ಯ ಕಾರಣ ಸಂಬಂಧಗಳ ಪದಬಂಧಕ್ಕೆ ಸಿಲುಕಿದ ಅಂತರ್ಮನ, ಮನೆಯ ಕುಕ್ಕರ್ ಕೂಗಿದ ಸದ್ದಿಗೇ ಗಲಿಬಿಲಿಯಾಗುತ್ತೆ. “ಅಂತರಂಗದಲ್ಲಿ ಒಳದನಿಗೆ ಗೀಚಿಟ್ಟ ಸರಳರೇಖೆಗಳೂ ಗೋಜಲು ಅಲ್ಲೇ ಮೂಲೆಯಲ್ಲಿ!” ಈ ಸಾಲುಗಳಲ್ಲಿ ‘ಅಂತರಂಗದ ಒಳದನಿ’ ಅಂತ ಬಳಸಿರುವುದು ಗಮನಾರ್ಹ. ಅದು ಅಂತರಾಳದ ನ್ಯಾಚುರಲ್ ಛಂದ. ಕವಿತೆಯುದ್ದಕ್ಕೂ ನಡೆಯುವ ತುಲನೆ, ಬಾಹ್ಯಜನ್ಯ ಛಂದದ ಲಿಪ್ ಸ್ಟಿಕ್ ಮತ್ತು ಎದೆಯೊಳಗಿನ ಪ್ರೀತಿಯ ಛಂದದ ಚೆಂದ ಗಳ ನಡುವೆ. “ನುರಿತ ಬೆರಳುಗಳ ಸಂದಿನಲ್ಲಿಳಿವ ವಕ್ರರೇಖೆಗಳು ಬಣ್ಣಗೆಡಿಸಿಕೊಂಡಾಗ “ಸುಮ್ಮನಿರಿ ಅಕ್ಕ, ಇದೇನುಮಹಾ.. ಇಲ್ಲಿ ಕೊಡಿ” ಹುಡಿಯನ್ನ ಬೆರಳುಗಳ ಕುಡಿಗಳು ಸೆಳೆದು ಸರಸರ ಎಳೆಯುತ್ತಾಳೆ.”  ಗೆರೆಗಳ  ಮೂಲಕ, ಸಂಭ್ರಮಗಳನ್ನ ಸಿದ್ಧಸೂತ್ರ, ಪ್ರಮೇಯಗಳಲ್ಲಿ ಕಟ್ಟಿಹಾಕಿದ ಸೂತ್ರ ಕಗ್ಗಂಟುಗಳು, ಶಿಷ್ಟ ಪದ್ಧತಿಯ ಕಂಠಪಾಠ ಮಾಡಿದ ‘ನುರಿತ’ ಬೆರಳುಗಳು ರಂಗವಲ್ಲಿ ಬರೆಯುವಾಗ ರೇಖೆಗಳಿಗೆ ಭಾವ ಬರದೇ ಇದ್ದಾಗ ಆ ಜನಪದೀಯ ಹುಡುಗಿ ಸರಸರನೆ ರಂಗೋಲಿ ಬರೆಯುತ್ತಾಳೆ. ಆಕೆಗೆ,  ಬರೆಯೋ – ಗೆರೆಯೋ, ತಪ್ಪು- ಸರಿ, ಗಣಿತ – ಕಾಗುಣಿತದ ಚಿಹ್ನೆಗಳೋ  ಯಾವುದರ ಕಂಠಪಾಠವೂ ಇಲ್ಲ. ( ಕಂಠಪಾಠ ಎಂಬ ಪದ ಎಷ್ಟು ಮೆಕ್ಯಾನಿಕಲ್ ಎಂಬ ಭಾವ ಅಲ್ಲವೇ). ಹಾಗೆ ಆ ಕಾಡು ಹುಡುಗಿ ಸಲೀಸಾಗಿ ಬರೆದು,   “ರಂಗೋಲಿಯಂತೆಯೇ ಅವಳೂ ನಿರಾಳ ನಗುವಾಗ.. ಇವಳ ಆಯಾಮಗಳ ತೆರೆಯದ ಆಯಾಮಗಳಲ್ಲಿ ಅರಳುವ ಛಂದವಿಲ್ಲದ ಚೆಂದ” ರಂಗವಲ್ಲಿಯ ಪೂರ್ವನಿರ್ಧಾರಿತ ಶಿಷ್ಟ ಜ್ಞಾನದ ಗೆರೆಗಳು, ಮತ್ತು ಅಂತರಂಗದಿಂದ ಮೂಡಿ ಆವಿರ್ಭವಿಸಿ ತನ್ನಿಂದ ತಾನೇ ಬರೆಯಲ್ಪಟ್ಟ ರಂಗೋಲಿಯ ನಡುವೆ ಇದು ಸ್ಪರ್ಧೆಯಲ್ಲ. ಮೊದಲನೆಯದ್ದು  ಸೂತ್ರ ಕಗ್ಗಂಟುಗಳಲ್ಲಿ ಬಂದಿಯಾದರೆ, ಎರಡನೆಯದ್ದು ಛಂದವಿಲ್ಲದ ಚಂದವಾಗಿ, ಬಂಧನವಿಲ್ಲದ ಬಾಂಧವ್ಯವಾಗಿ, ಸರಸರನೆ ಬೆರಳುಗಳು ಸರಿದು ಮೂಡುವ ಸಿಮ್ಮೆಟ್ರಿಯಾಗಿ ಮೂಡಿ “ರಂಗೋಲಿಯಂತೆ ಅವಳೂ ನಿರಾಳವಾಗಿ ನಗುತ್ತಾಳೆ! “ ನಾನು ಈ ಮೊದಲು ಉದಾಹರಣೆಯಾಗಿ ಹೇಳಿದ ಪ್ರಕೃತಿಯ ಒಳಕೇಂದ್ರದಿಂದ ಹೊರಮುಖಿಯಾಗಿ ಆಯಾಮದ ಪರಿಧಿಯ ಹಂಗಿಲ್ಲದೆ ಹರಿದು ಮೂಡುವ ಸಿಮ್ಮೆಟ್ರಿಗೆ ಛಂದವಿಲ್ಲದ ಚೆಂದವಿದೆ. ಅದಕ್ಕೆ ಮನುಷ್ಯನಿರ್ಮಿತ ಛಂದಸ್ಸಿನ ಅಗತ್ಯವಿಲ್ಲ. ಅಲ್ಲವೇ ************************************************************ ಮಹಾದೇವಕಾನತ್ತಿಲ ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಜೀವಕ್ಕಿಂತಲೂ ಹೆಚ್ಚಾಗಿ ಅಂಧಶ್ರದ್ಧೆಯಲ್ಲಿ ನಂಬಿಕೆ ಇಟ್ಟಿರುವುದು ನನಗೆ ಹೆಚ್ಚುಕಾಡುವ ವಿಷಯ” ಈ ಸಲದ ಮುಖಾಮುಖಿ ಯಲ್ಲಿ ನಾಗರಾಜ್ ಹರಪನಹಳ್ಳಿ ಸಂದರ್ಶಿಸಿದ್ದಾರೆ ಕವಿ,ಕತೆಗಾರ ಹುಬ್ಬಳ್ಳಿಯ ಕುಮಾರ ಬೇಂದ್ರೆ ಅವರನ್ನು.……….ಪರಿಚಯ :ಸಂಯುಕ್ತ ಕರ್ನಾಟಕ, ಉದಯವಾಣಿ, ಗೌರಿಲಂಕೇಶ್ ಪತ್ರಿಕೆಗಳು ಸೇರದಂತೆ ೧೪ ವರ್ಷಗಳ ಕಾಲ ಪತ್ರಕರ್ತನಾಗಿ ಕೆಲಸ. ಸಧ್ಯ ಚಲನಚಿತ್ರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರಕಲೆಯಲ್ಲಿ ಡಿಪ್ಲೋಮಾ, ಕನ್ನಡ ಎಂ.ಎ. ಪದವಿಧರ. ಸುಮಾರು ಎರಡು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರು. ಮಾದಪ್ಪನ ಸಾವುಅದೃಶ್ಯ ಲೋಕದ ಮಾಯೆ ನಿರ್ವಾಣಗಾಂಧಿ ವೃತ್ತದ ದಂಗೆ ಕಥಾ ಸಂಕಲನಗಳು, ಮನಸೆಂಬ ಮಾಯಾವಿ ಆಯ್ದ ಕತೆಗಳ ಸಂಕಲನ.ಜೋಗವ್ವ ತಲ್ಲಣನೆಲೆ `ದಾಳಿ ಕಾದಂಬರಿ ಸೇರದಂತೆ ಒಟ್ಟು ೧೦ ಕೃತಿಗಳು ಪ್ರಕಟವಾಗಿವೆ.ಜೋಗವ್ವ ಕಾದಂಬರಿಗೆ ಅಮೆರಿಕಾದಲ್ಲಿ ನಡೆದ ೨೦೦೬ರ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸ್ಪರ್ಧೆಯ ಪುರಸ್ಕಾರ ಹಾಗೂ ಕತೆಗಳಿಗೆ ಕ.ಸಾ.ಪ. ದತ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಪತ್ನಿ ಅನುಪಮ ಮತ್ತು ಇಬ್ಬರು ಪುತ್ರರೊಂದಿಗೆ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ.…………………………………. ಕತೆ, ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಬರೆವಣಿಗೆ ಎಂಬುದು ನನಗೆ ಮಾಸಿಕ ಬಿಡುಗಡೆಯ ಒಂದು ಮಾರ್ಗ. ಹೊಟ್ಟೆ ಹಸಿದಾಗ ಹೇಗೆ ಊಟದ ಅಗತ್ಯವಿರುತ್ತದೋ ಹಾಗೆ, ಬರೆವಣಿಗೆ ಮನಸ್ಸಿನ ಹಸಿವು ನೀಗಿಸುವ ಒಂದು ಕ್ರಮ ಎಂದುಕೊಂಡಿದ್ದೇನೆ. ನನಗೆ ಕತೆಗಳಲ್ಲಿ ಹೆಚ್ಚು ಆಸಕ್ತಿ. ಅದು ಕನಸೋ, ಅನುಭವವೋ, ಹುಡುಕಾಟವೋ ಅಥವಾ ಇನ್ನೇನೋ ಆಗಿರಬಹುದು. ಅದನ್ನು ಅಕ್ಷರಗಳಲ್ಲಿ ತೆರೆದಿಟ್ಟು ನಿರಾಳವಾಗುವುದಕ್ಕೆ ಬರೆಯುತ್ತೇನೆ. ವಸ್ತುಸ್ಥಿತಿಯೊಂದರ ಬೆನ್ನುಬಿದ್ದು ಹೊರಟು ಧ್ಯಾನದ ಉತ್ತುಂಗದ ಸ್ಥಿತಿಯಲ್ಲಿ ದೊರೆತ ಅರಿವಿನ ಸಾಕ್ಷಾತ್ಕಾರದ ಫಲವೇ ಕಥನ ಎಂಬುದು ನನ್ನ ನಂಬಿಕೆ.  ಕವಿತೆ, ಕತೆ ಹುಟ್ಟುವ ಕ್ಷಣ ಯಾವುದು? ಆನಂದವಾಗಲಿ, ವಿಸ್ಮಯವಾಗಲಿ, ದುಃಖವಾಗಲಿ ಅಥವಾ ಶೋಧನೆಯ ಹಂಬಲವೇ ಇರಲಿ ಯಾವ ಒಂದು ಸಂಗತಿ ಮನಸ್ಸನ್ನು ತಟ್ಟುತ್ತದೋ; ಬಹಳ ದಿನ ಕಾಡುತ್ತದೋ, ಚಿಂತನೆ-ಜಿಜ್ಞಾಸೆಗೆ ಹಚ್ಚುತ್ತದೋ ಅದು ಕತೆ-ಕವಿತೆಯ ಸ್ವರೂಪದಲ್ಲಿ ರೂಪಗೊಂಡು ವ್ಯಕ್ತವಾಗುತ್ತದೆ. ಅದಕ್ಕೆ ಇಂತಹದೇ ಸಮಯ ಎಂಬುದು ಇಲ್ಲ. ಮನಸ್ಸಿಗೆ ಹತ್ತಿರವಾದದ್ದು, ನಾನೇ ಅರಿಯದ ನನ್ನ ಪ್ರಜ್ಞೆ ಯೊಂದನ್ನು ಜಾಗೃತಗೊಳಿಸುವ ಸಂಗತಿ, ಘಟನೆ, ವ್ಯಕ್ತಿ ಕತೆ ಹುಟ್ಟುವ ಕ್ಷಣಕ್ಕೆ ಮೂಲ.  ನಿಮ್ಮ ಕವಿತೆ, ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಮನುಷ್ಯ ಸಂಬಂಧಗಳ ನಿಗೂಢ ನೆಲೆಗಳನ್ನು ಶೋಧಿಸುವುದು, ಆ ಮೂಲಕ ವಾಸ್ತವಿಕ ನೆಲೆಗಟ್ಟಿನಲ್ಲಿ ಬದುಕನ್ನು ನೋಡುವುದು ನನ್ನ ಹಲವು ಕತೆಗಳ ಗುಣ ಅಥವಾ ವಸ್ತು ಎನ್ನಬಹುದು. ನಾವು ಪರಂಪರೆಯನ್ನು ಒಪ್ಪಿಕೊಂಡು ಯಾವುದನ್ನು ಬದುಕು ಎಂದು ಕೊಂಡು ಕಣ್ಣುಮುಚ್ಚಿ ಜೀವಿಸುತ್ತಿದ್ದೇವೊ ಅದನ್ನು ಮೀರಿದ ಒಂದು ಬದುಕಿನ ಆಯಾಮವನ್ನು ಅನ್ವೇಷಿಸುವ, ದರ್ಶಿಸುವ ಕ್ರಮ ನನ್ನ ಕತೆಗಳಲ್ಲಿ ಹೆಚ್ಚಾಗಿ ವ್ಯಕ್ತವಾಗಿದೆ ಎಂದು ಭಾವಿಸಿದ್ದೇನೆ. ನಮ್ಮ ದೇಶದ ಜನರಿಗೆ ಅಂಟಿಕೊಂಡಿರುವ ಕರಾಳ ಮೌಢ್ಯ ಎಂಬುದು ೨೧ನೇ ಶತಮಾನದಲ್ಲೂ ವಿಮೋಚನೆಯಾಗಿಲ್ಲವಲ್ಲ ಎಂಬುದು ಮತ್ತು ಈ ಜನರು ತಮ್ಮ ಜೀವಕ್ಕಿಂತಲೂ ಹೆಚ್ಚಾಗಿ ಅಂಧಶ್ರದ್ಧೆಯಲ್ಲಿ ನಂಬಿಕೆ ಇಟ್ಟಿರುವುದು ನನಗೆ ಹೆಚ್ಚು ಕಾಡುವ ವಿಷಯ. ನಮ್ಮ ದೇಶದಲ್ಲಿ ಇದಕ್ಕೆ ಕೊನೆಯೇ ಇಲ್ಲವೇನೊ!? ಕವಿತೆ, ಕತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಸಾಮಾನ್ಯವಾಗಿ ಎಲ್ಲ ಲೇಖಕರ ಬರವಣಿಗೆಯಲ್ಲಿ ಬಾಲ್ಯ ಮತ್ತು ಹರೆಯದ ಕಾಲಘಟ್ಟದ ಸಗತಿಗಳು ವ್ಯಕ್ತವಾಗಿರುತ್ತವೆ. ಬಾಲ್ಯವೆಂಬುದು ನಮ್ಮ ಬದುಕಿನ ಅಡಿಪಾಯವಿದ್ದಂತೆ ಹಾಗಾಗಿ ವ್ಯಕ್ತಿ ಎಷ್ಟೇ ಪ್ರಬುದ್ಧನಾದರೂ ಬಾಲ್ಯವನ್ನು ಮರೆಯಲಾರ. ಅದರಂತೆ ಹರೆಯದ ಕಾಲಘಟ್ಟವನ್ನು ಒಂದು ಭಾವಗೀತೆಗೆ ಹೋಲಿಸಬಹುದು. ಅಲ್ಲಿ ವಾಸ್ತಕ್ಕಿಂತ ಹೆಚ್ಚು ಕನಸುಗಳೇ ಇರುತ್ತವೆ. ಹಾಗಾಗಿ ಕತೆ ಮತ್ತು ಕವಿತೆಗಳಲ್ಲಿ ಇವೆರಡೂ ಹಂತಗಳನ್ನು ದಾಟಿ ನಾನೀಗ ಬದುಕು, ಸಮಾಜ ಮತ್ತು ಜಗತ್ತನ್ನು ಒಂದು ಪ್ರಬುದ್ಧ ನೋಟದಿಂದ ನೋಡುವ ಹಂತಕ್ಕೆ ಬಂದಿದ್ದೇನೆ ಅನಿಸುತ್ತದೆ. ಹಾಗಾಗಿ ಹಿಂದೆ ಬರೆದದ್ದೆಲ್ಲ ಅಪೂರ್ಣ ಅನಿಸುತ್ತದೆ. ಇನ್ನುಮುಂದೆ ಬರೆಯುವುದೆಲ್ಲ ಇನ್ನೂ ಪಕ್ವವಾಗಿರಬೇಕು ಅನ್ನಿಸುತ್ತದೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಪ್ರಸ್ತುತ ರಾಕೀಜಯ ಸನ್ನಿವೇಶಗಳ ಬಗೆಗೆ ಮಾತನಾಡಿ ನಮ್ಮ ನೈತಿಕತೆ, ಬದ್ಧತೆಯನ್ನು ಮಲಿನ ಮಾಡಿಕೊಳ್ಳುವುದು ಬೇಡ ಅನ್ನಿಸುತ್ತದೆ. ನೈತಿಕತೆ ಮತ್ತು ಬದ್ಧತೆಯ ವಿಚಾರದಲ್ಲಿ ಇಂದು ರಾಜಕೀಯ ಆ ಮಟ್ಟಕ್ಕೆ ಅಧಃಪತನಗೊಂಡಿದೆ. ದೇಶದಲ್ಲಿ ಇಂದು ಪಕ್ಷ-ಸಿದ್ಧಾಂತಗಳು ಎಂಬುವವೇ ಅಸ್ತಿತ್ವದಲ್ಲಿ ಇಲ್ಲ. ಅಧಿಕಾರ ಸಿಗುವುದಾದರೆ ಯಾವ ವ್ಯಕ್ತಿಯೇ ಆದರೂ ಯಾವುದೇ ಗುಂಪು-ವಿಷಯಗಳೊಂದಿಗೆ ರಾಜಿಯಾಗಬಲ್ಲ. ತನ್ನ ಬದ್ಧತೆಯನ್ನು ತಾನೇ ತುಳಿದು ಅದರ ಮೇಲೆ ಜನರ ಹಿತವನ್ನು ಸಮಾಧಿ ಮಾಡಬಲ್ಲ. ಒಟ್ಟಾರೆ, ಹಣ ಬಲ, ಪ್ರಭಾವ, ಶಕ್ತಿ ಇದ್ದವನೇ ಜನಪ್ರತಿನಿಧಿ ಎನ್ನುವಂತಹ ನೀಚ ಮಟ್ಟಕ್ಕೆ ಈ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಾಂತರಗೊಂಡಿದೆ. ಜನ ಇದನ್ನು ಅರ್ಥ ಮಾಡಿಕೊಂಡು ಜಾಗೃತರಾಗುವವರೆಗೆ ಇದಕ್ಕೆ ಕೊನೆ ಇಲ್ಲ.  ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ನನ್ನ ಪ್ರಕಾರ ಮನುಷ್ಯ ಮಾನವೀಯ ಸಂಸ್ಕಾರಗಳನ್ನು ಅಳವಡಿಸಿಕೊಂಡು ಜೀವಿಸುವುದೇ ಧರ್ಮ. ಧರ್ಮದ ವಿಚಾರದಲ್ಲಿ ಇದನ್ನು ಮೀರಿದ ಇತರ ಸಂಗತಿಗಳೆಲ್ಲ ವ್ಯವಹಾರ-ವ್ಯಾಪಾರಗಳಷ್ಟೇ. ಸಮಾಜದಲ್ಲಿ ಇಂದು ಧರ್ಮದ ವಿಷಯ ಬಂಡವಾಳವಾಗಿ ಮಾರ್ಪಟ್ಟಿದೆ. ತಮ್ಮ ಧರ್ಮವೇ ಹೆಚ್ಚು, ತಮ್ಮ ಧರ್ಮವೇ ಉಳಿಯಬೇಕು- ಬೆಳೆಯಬೇಕು, ವ್ಯಾಪಿಸಬೇಕು ಎಂಬ ಕ್ಷುದ್ರ ಉದ್ದೇಶಗಳು ಧರ್ಮದ ಅರ್ಥವನ್ನು ವಿರೂಪಗೊಳಿಸಿವೆ. ಅದ್ದರಿಂದ ನಾನು ಹೇಳುವುದೇನೆಂದರೆ ಸಮಾಜದಲ್ಲಿ ಸಮದಾಯಗಳು ಸಾವಿರಾರು ಇದ್ದರೂ ಧರ್ಮಕ್ಕೆ ಇರುವ ಅರ್ಥ ಒಂದೇ. ಎಲ್ಲ ಸಮುದಾಯಗಳು ಅದನ್ನು ಅರಿಯಬೇಕಿದೆ. ಸೃಷ್ಟಿಯಲ್ಲಿ ಧರ್ಮ ಮತ್ತು ದೇವರ ಪರಿಕಲ್ಪನೆಗಳು ಸಮನ್ವಯವಾದಂತಹವು. ನಾನು ಯಾವುದನ್ನು ಮಾನವೀಯ ಸಂಸ್ಕಾರ ಎಂದು ಹೇಳಿದೆನೊ ಮನುಷ್ಯನಲ್ಲಿ ಅದನ್ನು ಜಾಗೃತಗೊಳಿಸುವ ಪ್ರಜ್ಞೆಯೇ ದೇವರು. ಅದಕ್ಕೆ ಮೂರ್ತವಾದ ಆಕೃತಿ ಎಂಬುದು ಇಲ್ಲ. ಅದೊಂದು ಮನುಷ್ಯನಲ್ಲಿ ಇರಬೇಕಾದ ಸಕಾರಾತ್ಮಕ ಭಾವವಷ್ಟೇ. ಹಾಗಾಗಿ ದೇವರು ಇದ್ದಾನೋ-ಇಲ್ಲವೋ ಎಂಬುದರ ಕುರಿತು ಮಾತನಾಡುವ ಮೊದಲು `ದೇವರು ಎಂದರೆ ಏನು ಎಂಬುದನ್ನು ವಾಸ್ತವವಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯ. ದೇವರು ಎಂಬ ಇಂತಹ ಶ್ರೇಷ್ಠ ಭಾವ ಇಂದು ಸಮಾಜದಲ್ಲಿ ಕೆಲವರಿಂದ ವ್ಯಾಪಾರೀಕರಣಗೊಂಡು, ರಾಜಕೀಯಕರಣಗೊಂಡು ಇಡೀ ಸಮಾಜವನ್ನೇ ಅಂಧಶ್ರದ್ಧೆಯ ಕೂಪಕ್ಕೆ ತಳ್ಳುವ ಚಟುವಟಿಕೆಯಾಗಿ ಬೆಳೆದಿದೆ. ಅದು ಈ ದೇಶದ ದುರಂತವೆಂದೇ ಹೇಳಬೇಕು. ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತಹ ದೇವರ ರೂಪಗಳನ್ನು ಸೃಷ್ಟಿಸಿಕೊಂಡು ಜನ ಆ ರೂಪಕ್ಕೆ ಹಾಲು-ತುಪ್ಪ, ಹಣ ಸುರಿದು, ಹಸಿದ ಹೊಟ್ಟೆಗಳನ್ನು ಹೊರಳಿಯೂ ನೋಡದಿರುವುದನ್ನು ಕಂಡರೆ `ಅಯ್ಯೋ ಅನಿಸುತ್ತದೆ. ಈ ದೇಶದಲ್ಲಿ ಬುದ್ಧ ಬಂದು ಹೋದ, ಬಸವಣ್ಣ ಬಂದು ಹೋದ, ಅಂಬೇಡ್ಕರ್ ಅವರಂತಹ ಮಹಾ ಜ್ಞಾನಿ ಬಂದು ಹೋದರೂ,  ಕ್ರೂರ ಮೌಢ್ಯದಿಂದ ಹೊರ ಬರದ ಈ ಜನರನ್ನು ಕಂಡಾಗಲೆಲ್ಲ ನನಗೆ ಆಕ್ರೋಶ, ಕೋಪ, ಕಡೆಗೆ ವಿಷಾದ ಮೂಡುತ್ತದೆ.  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ? ಪ್ರಸ್ತುತ ಸಾಂಸ್ಕೃತಿಕ ಕ್ಷೇತ್ರ ತನ್ನ ಧ್ಯೇಯೋದ್ದೇಶಗಳನ್ನು ಕಳೆದುಕೊಂಡು ವ್ಯಾಪಾರಕ್ಕೆ ತಿರುಗಿದೆ ಎಂದು ಹೇಳಬಹುದು. ನಾವು ಯಾವುದನ್ನು ಸಂಸ್ಕೃತಿ ಎಂದು ಅಭಿಮಾನದಿಂದ ಪೋಷಿಸುತ್ತ ಬಂದಿದ್ದೇವೆಯೋ ಇಂದು ಅದು ವ್ಯಾಪಾರದ ಸರಕಾಗಿ ಮಾರ್ಪಟ್ಟಿದೆ. ಕಲೆ-ಸಾಹಿತ್ಯವೂ ಇದಕ್ಕೆ ಹೊರತಾಗಿಲ್ಲ. ಅದಕ್ಕೆ ಕಾರಣ ಜಾಗತೀಕರಣ, ತಂತ್ರಜ್ಞಾನ ಬೆಳವಣಿಗೆ ಮತ್ತು ರಾಜಕೀಯ ಶಕ್ತಿಗಳು. ಕಲೆ, ಸಾಹಿತ್ಯ, ಸಂಸ್ಕೃತಿ ಎಂಬವು ಆಯಾ ದೇಶದ ಸೌಂದರ್ಯದ ದ್ಯೋತಕವಾಗಿರುತ್ತವೆ. ಅವು ವಿರೂಪಗೊಂಡರೆ ದೇಶದ ಸೌಂದರ್ಯವೇ ವಿರೂಪಗೊಂಡತೆ. ಇವನ್ನು ಪೋಷಿಸಬೇಕಾದ ಸರ್ಕಾರಗಳು ಈ ವಿಚಾರವನ್ನು ನಿರ್ಲಕ್ಷಿಸುತ್ತಿವೆ. ಸಮಾಜದಲ್ಲಿ ಕ್ರೌರ್ಯ ಬೆಳೆಯಲು ಇದೂ ಒಂದು ಕಾರಣವಾಗಿರಬಹುದು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ರಾಜಕಾರಣವೆಂಬುದು ಇಂದು ಎಲ್ಲ ಕ್ಷೇತ್ರದಲ್ಲಿ ಇರುವಂತಹದೆ. ರಾಜಕಾರಣ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿರುವುದರಿಂದಲೇ ಸತ್ಯ ಮತ್ತು ಮೌಲ್ಯಗಳು ನೆಲೆ ಕಳೆದುಕೊಂಡಿವೆ. ಅರ್ಹತೆ ಮತ್ತು ಪ್ರತಿಭೆ ಎಂಬುದು ಮೂಲೆಗುಂಪಾಗಿದೆ. ಆದ್ದರಿಂದ ರಾಜಕಾರಣದಲ್ಲಿ ಸಾಹಿತ್ಯ-ಸಂಸ್ಕೃತಿ ಇರಬೇಕೆ ಹೊರತು ಸಾಹಿತ್ಯ-ಸಂಸ್ಕೃತಿಯಲ್ಲಿ ರಾಜಕಾರಣವಿರಬಾರದು. ಇಂದು ಸ್ಥಾನಮಾನ, ಅಧಿಕಾರ, ಪ್ರಶಸ್ತಿ, ಸನ್ಮಾನಗಳ ವಿಚಾದರಲ್ಲಿ ಕೆಲವು ಸಾಹಿತಿಗಳು ರಾಜಕಾರಣಿಗಳನ್ನೂ ಮೀರಿಸುವಂತೆ ರಾಜಕೀಯ ಮಾಡುತ್ತಿರುವುದನ್ನು ನೋಡಿದರೆ ಸಾಹಿತ್ಯದ ಮೌಲ್ಯ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಅರ್ಥವಾಗುತ್ತದೆ. ಸಾಹಿತ್ಯವೆಂಬುದು ಜ್ಞಾನ-ಅರಿವಿನ ಮಾರ್ಗವೇ ಹೊರತು ಸ್ಥಾನಮಾನ, ಅಧಿಕಾರ, ಪ್ರಶಸ್ತಿ, ಸನ್ಮಾನಗಳ ಹಪಾಹಪಿತನವಲ್ಲ. ಈ ಎಲ್ಲದರ ನಡುವೆಯೂ ಪ್ರಾಮಾಣಿಕ ಸಾಹಿತ್ಯ, ಸಾಹಿತಿಗಳು ನೇಪಥ್ಯದಲ್ಲೇ ಇದ್ದಾರೆ.  ಈ ದೇಶದ ಚಲನೆಯ ಬಗ್ಗೆ ನಿಮ್ಮ ನಮ್ಮ ಮನಸು ಏನು ಹೇಳುತ್ತಿದೆ? ಈ ವಿಷಯವಾಗಿ ನಾನು ಮಾತನಾಡುವ ಮೊದಲು ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ನನಗೆ ಯಾವುದೇ ರಾಜಕೀಯ ಪಕ್ಷಗಳಲ್ಲಿ ನಂಬಿಕೆ ಇಲ್ಲ. ಯಾಕೆಂದರೆ ಎಲ್ಲ ಪಕ್ಷಗಳಿಗೂ ಅಧಿಕಾರ ಮುಖ್ಯ ಹೊರತೂ ಜನರ ಹಿತವಲ್ಲ. ಮಾನವೀಯ ಗುಣಗಳನ್ನು ಪ್ರತಿಪಾದಿಸುವ ರೀತಿ-ಸಿದ್ಧಾಂತಗಳಲ್ಲಿ ನಂಬಿಕೆ ಇದೆ. ಅದು ಎಲ್ಲಿದ್ದರೂ ಸ್ವೀಕಾರರ್ಹ. ಚುನಾಯಿತ ಯಾವುದೇ ವ್ಯಕ್ತಿ, ಮಂತ್ರಿ-ಸರ್ಕಾರವೇ ಇರಲಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯಬೇಕಾಗುತ್ತದೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ತಮ್ಮದೇ ಶಾಸನ ಸೃಷ್ಟಿಸುವ ಮೂಲಕ ದೇಶದ ಆಂತರಿಕ ವ್ಯವಸ್ಥೆಯನ್ನೇ ಪಲ್ಲಟಗೊಳಿಸಬಹುದಾದ ಹುನ್ನಾರಗಳನ್ನು ನಾನು ಒಪ್ಪಲಾರೆ. ಒಂದು ರಾಷ್ಟವೆಂದರೆ ಒಂದು ಸಮುದಾಯ, ಧರ್ಮ ಕೇಂದ್ರಿತ ಭೂಪ್ರದೇಶವಲ್ಲ. ಸರ್ವ ಸಮುದಾಯ, ಧರ್ಮ ಕೇಂದ್ರಿತ ಭಾರತದಂತಹ ರಾಷ್ಟ್ರವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿ ರೂಪಾಂತರಗೊಳಿಸುವ ಹುನ್ನಾರ ಸಲ್ಲದು. ದೇಶವನ್ನು ಮುನ್ನಡೆಸುವವರು ಇದನ್ನು ಅರಿಯಬೇಕು. ಓಟ್ ಬ್ಯಾಂಕ್‌ಗಾಗಿ ಸಮುದಾಯ, ಧರ್ಮದ ವಿಷಯಗಳನ್ನು ಅಸ್ತçವಾಗಿಸಿಕೊಂಡು ಜನರ ಮನಸ್ಸು ಒಡೆಯುವುದು ಯಾವ ಪಕ್ಷ-ಸಿದ್ಧಾಂತದ ಮೌಲ್ಯ?  ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ನನ್ನ ಅರಿವಿನಲ್ಲಿ ಹೇಳುವುದಾದರೆ ಸಾಹಿತ್ಯವೆಂಬುದು ಅಂತರಂಗದಲ್ಲಿ ಬೆಳಗುವ ಜ್ಯೋತಿ. ಅದಕ್ಕೆ ಯಾವುದೇ ತರಹದ ಆಡಂಬರ, ವೈಭವ, ಮೆರವಣಿಗೆಗಳ ಅಗತ್ಯವಿಲ್ಲ. ಬರವಣಿಗೆ ಎಂಬುದು ಆ ಜ್ಯೋತಿಯನ್ನು ಹೊತ್ತಿಸಿದರೆ, ಓದು ಎಂಬುದು ಅದನ್ನು ನಿರಂತರವಾಗಿ ಬೆಳಗಿಸುತ್ತದೆ. ಸಾವು ಕಣ್ಣೆದುರು ಬಂದರೂ ಈ ಅರಿವಿನ ಆನಂದ ವೆಂಬುದು ಅದರ ಭಯವನ್ನು ಮರೆಸುತ್ತದೆ. ಹಾಗಾಗಿ ನಾನು ಸಾಹಿತ್ಯದ ಈ ಪ್ರಕ್ರಿಯೆಯನ್ನು ನನ್ನ ಜೀವಿತಾವಧಿಯವರೆಗೂ ಜಾಗೃತವಾಗಿಟ್ಟುಕೊಳ್ಳಲು ಬಯಸುತ್ತೇನೆ. ಇಂದಿಗಿಂತ ನಾಳೆ ಇನ್ನೂ ಚೆನ್ನಾಗಿ ಬರೆಯಬೇಕು ಎಂಬ ಹಂಬಲದಲ್ಲಿರುತ್ತೇನೆ. ಇದು ಆತ್ಮೋದ್ಧಾರದ ಮಾರ್ಗ! ವ್ಯಾಪಾರವಾಗದೇ ಉಳಿಯಬೇಕು ಎಂಬುದು ನನ್ನ ಆಶಯ. ಆದರೆ ಲೇಖಕರು ಬಡವರಾಗಿಯೇ ಉಳಿದು, ಪ್ರಕಾಶಕರು ಮಾತ್ರ ಶ್ರೀಮಂತರಾಗುತ್ತಿರುವುದು ವಿಪರ್ಯಾಸ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು? ಬೇರೆ ಬೇರೆ ಲೇಖಕರು ಬೇರೆ ಬೇರೆ ಕಾರಣಗಳಿಗೆ ಇಷ್ಟವಾಗುತ್ತಾರೆ. ಹಲವರಲ್ಲಿ ಹಲವು ಬಗೆಯ ವೈವಿಧ್ಯವಾದ ಗುಣಗಳು ಇಷ್ಟವಾಗಬಹುದು. ಆದಾಗ್ಯೂ ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತರು ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾನ್ಜ್ ಕಾಫ್ಕಾ, ಆಲ್ಬರ್ಟ್ ಕಮೂ ಅವರು ನನಗೆ ಹೆಚ್ಚು ಇಷ್ಟವಾಗುವ ಲೇಖಕರು. ಯಾವುದೇ ವರ್ಗಕ್ಕೂ ಸೇರಬಹುದಾದ ವಿಶಿಷ್ಟ ಪ್ರಬೇಧದ ಬರವಣಿಗೆ ಮೂಲಕ ತೇಜಸ್ವಿ ಇಷ್ಟವಾದರೆ, ಕಾರಂತರು ಪ್ರಖರ ವೈಚಾರಿಕ ನಿಲುವಿನಿಂದ ಇಷ್ಟವಾಗುತ್ತಾರೆ. `ಮೆಟಮಾರ್ಫಸಿಸ್ ನಂತಹ ಬೆರಗು ಮೂಡಿಸುವಂತಹ ಅಸಂಗತ ಕಾದಂಬರಿ ಮೂಲಕ ಪ್ರಾನ್ಜ್ ಕಾಫ್ಕಾ ಇಷ್ಟವಾಗುತ್ತಾನೆ.  ಈಚೆಗೆ ಓದಿದ ಕೃತಿಗಳಾವುವು? ಟಿ.ಪಿ. ಅಶೋಕ ಅವರ  ಕಥನ ಭಾರತಿ, ಅಮರೇಶ ನುಗಡೋಣಿ ಅವರ  ದಂದುಗ,  ವಸುಧೇಂದ್ರ ಅವರ  ತೇಜೋ ತುಂಗಭದ್ರಾ ಮತ್ತು ಇತರ ಕೃತಿಗಳು.  ನಿಮಗೆ ಇಷ್ಟವಾದ ಕೆಲಸ ಯಾವುದು? ಓದು, ಬರೆವಣಿಗೆಯಂತೆ ಪ್ರವಾಸ ಮತ್ತು ಕಾಡಿನಲ್ಲಿ ಚಾರಣ ಮಾಡುವುದು ಕೂಡ ಇಷ್ಟ. ಕಾಂಕ್ರಿಟ್ ಕಾಡಿನಿಂದ ದೂರ ಹೋಗಿ ನಿಸರ್ಗದ ಮಡಿಲಲ್ಲಿ ಬೆರೆಯುವುದು ಎಂದಿಗೂ ನನಗೆ ಇಷ್ಟದ ಕೆಲಸ. ಅದೇ ರೀತಿ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….5 ಅಪ್ಪ ಅವ್ವನ ಅದ್ಧೂರಿ ಮದುವೆ             ಜೋಯ್ಡಾದಲ್ಲಿ ಶಾನುಭೋಗಿಕೆಯ ಕೆಲಸ ತುಂಬಾ ಅನುಕೂಲಕರವಾಗಿತ್ತು. ತಿಂಗಳ ಸಂಬಳದಲ್ಲಿ ಒಂದು ಪೈಸೆಯನ್ನೂ ಖರ್ಚುಮಾಡಗೊಡದೆ ಹಳ್ಳಿಯ ರೈತಾಪಿ ಜನ ದವಸ-ಧಾನ್ಯ ತರಕಾರಿಗಳನ್ನೆಲ್ಲ ತಂದುಕೊಟ್ಟು ಸಹಕರಿಸುತ್ತಿದ್ದರಂತೆ. ಚಾವಡಿಯ ಒಂದು ಮೂಲೆಯಲ್ಲಿಯೇ ವಾಸ್ತವ್ಯಕ್ಕೆ ಅವಕಾಶವೂ ಇತ್ತು. ಬೆಟ್ಟದ ಹಳ್ಳಿಗಾಡಿನ ಹಳೆಯ ಕಟ್ಟಡವಾದ್ದರಿಂದ ಸಹಜವಾಗಿಯೇ ಕೋಣೆ ತುಂಬಾ ಬಿಲಗಳಿದ್ದವು. ಆ ಬಿಲಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಇಲಿ ಹೆಗ್ಗಣ ಮತ್ತು ಅವುಗಳ ವಾಸನೆ ಹಿಡಿದು ಅಲ್ಲಿಗೆ ಬಂದು ಹೋಗುವ ವಿವಿಧ ಜಾತಿಯ ಹಾವುಗಳ ಉಪದ್ರವ ಬಿಟ್ಟರೆ ಊರಿನ ಜನ ತುಂಬ ಗೌರವದಿಂದ ಸಹಕರಿಸುತ್ತಿದ್ದರಂತೆ. ಆದರೆ, ಗಣಪು ಮಾಸ್ತರನಾಗಬೇಕೆಂದು ಬಯಸಿದ್ದರಿಂದ ಈ ಉದ್ಯೋಗ ಅಷ್ಟೇನೂ ತೃಪ್ತಿ ನೀಡಿರಲಿಲ್ಲ.             ಎರಡು ತಿಂಗಳಲ್ಲೇ ಸರಕಾರಿ ಶಾಲೆಯೊಂದರಲ್ಲಿ ಮಾಸ್ತರಿಕೆಯ ಆದೇಶ ಬಂದಿದೆಯೆಂಬ ಸುದ್ದಿ ಊರಿಂದ ಬಂತು. ಗಣಪು ಹಿಂದೆಮುಂದೆ ನೋಡದೆ ಶಾನುಭೋಗ ಹುದ್ದೆಗೆ ರಾಜೀನಾಮೆ ನೀಡಿ ಊರಿಗೆ ಮರಳಿದ. ಆದರೆ ಈ ರಾಜೀನಾಮೆ ಪ್ರಕ್ರಿಯೆಯಲ್ಲಿ ಎಂಟುದಿನ ತಡವಾಗಿತ್ತು. ಗಣಪು ಊರಿಗೆ ಬಂದು ಆದೇಶವನ್ನು ಪಡೆಯುವಷ್ಟರಲ್ಲಿ ಶಿಕ್ಷಣ ಇಲಾಖೆ ತನ್ನ ಆದೇಶವನ್ನು ಬದಲಿಸಿ ಬೇರೊಬ್ಬ ಶಿಕ್ಷಕನನ್ನು ನೇಮಿಸಿಕೊಂಡಾಗಿತ್ತು.             ಆರು ತಿಂಗಳ ಕಾಲ ಕೈಗೆ ಸಿಕ್ಕ ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಯಾಗಿದ್ದ ಗಣಪುವಿನ ಚಡಪಡಿಕೆಯ ದಿನಗಳಲ್ಲಿ ನಾಡುಮಾಸ್ಕೇರಿಯ ರಾಕು ಬೆನ್ನಿಗೆ ನಿಂತು ಧೈರ್ಯ ತುಂಬುತ್ತಿದ್ದನಂತೆ. ಆರು ತಿಂಗಳ ಬಳಿಕ ಮತ್ತೆ ಮಾಸ್ತರಿಕೆಯ ಆದೇಶ ಬಂತು. ಹೆಗ್ರೆ ಗ್ರಾಮದ ಶಾಲೆಗೆ ಗಣಪು ಮಾಸ್ತರನಾದ.             ಮಾಸ್ತರಿಕೆ ದೊರೆತು ಜೀವನದ ದಾರಿ ಭದ್ರವಾದ ಬಳಿಕ ಗಣಪು ಮದುವೆಗೆ ಯೋಗ್ಯ ವರ’ ಎಂಬ ಭಾವನೆ ಜಾತಿ ಬಾಂಧವರಲ್ಲಿ ಮೂಡಿತು. ಈ ನಡುವೆ ಗುಂದಿಹಿತ್ತಲಿನ ಸಂಪರ್ಕದಿಂದ ದೂರವೇ ಉಳಿಯುತ್ತಿದ್ದ ಗಣಪು ತನ್ನ ಗೆಳೆಯ ರಾಕುವಿನ ಕುಟುಂಬಕ್ಕೆ ಸಹಜವಾಗಿಯೇ ಹತ್ತಿರವಾಗಿದ್ದ. ಹೀಗಾಗಿ ಗಣಪುವಿನ ಮದುವೆಯ ಜವಾಬ್ದಾರಿಯನ್ನು ರಾಕುವೇ ಕೈಗೆತ್ತಿಕೊಂಡು ಕನ್ಯಾ ಶೋಧಕ್ಕೆ ತೊಡಗಿದ.             ರಾಕುವಿನ ಅಣ್ಣನ ಮಗಳು ತುಳಸಿ ಹನ್ನೆರಡರ ಎಳೆಯ ಮಗು. ಇನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಳೆ. ರಾಕುವಿಗೆ ಅದೇ ವಯಸ್ಸಿನ ಸ್ವಂತ ಮಗಳೊಬ್ಬಳಿದ್ದಾಳೆ. ಅವಳು ಶಾಲೆ ಕಲಿಯುತ್ತಿಲ್ಲ. ಹಾಗಾಗಿ ರಾಕು ಅಣ್ಣನ ಮಗಳು ತುಳಸಿಯನ್ನು ಗಣಪುವಿಗೆ ಮದುವೆ ಮಾಡಲು ಸಂಕಲ್ಪ ಮಾಡಿದ. ಜಾತಿ ಬಾಂಧವರು ಕೂಡ “ಕಲಿತ ಹುಡುಗಿ ಯೋಗ್ಯವಧು” ಎಂದು ಅನುಮೋದನೆ ನೀಡಿದರು. ಹುಡುಗಿಯ ವಯಸ್ಸು ಚಿಕ್ಕದು ಎಂಬ ಸಣ್ಣ ಅಪಸ್ವರವೊಂದು ಕೇಳಿ ಬಂತಾದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಗಣಪು ಮತ್ತು ತುಳಸಿಯರ ಮದುವೆ ನಿಶ್ಚಯವಾಯಿತು.             ಎಲ್ಲರಿಗಿಂತ ಹೆಚ್ಚು ಸಂತಸ ಸಂಭ್ರಮ ಪಟ್ಟವಳು ತುಳಸಿಯ ಅವ್ವ ನಾಗಮ್ಮಜ್ಜಿ. ಮಾಸ್ತರಿಕೆಯಲ್ಲಿರುವ ಅಳಿಯ ದೊರೆತಿರುವುದು ಅಂದಿನ ಕಾಲಕ್ಕೆ, ಅದರಲ್ಲಿಯೂ ಅಪರೂಪವಾಗಿ ಶಿಕ್ಷಣ ಸಂಸ್ಕಾರ ಪಡೆಯುತ್ತಿರುವ ಆಗೇರ ಜನಾಂಗದಲ್ಲಿ ಸಾಮಾನ್ಯ ಸಂಗತಿಯಾಗಿರಲಿಲ್ಲ. ಗಂಡ ಗತಿಸಿದ ಬಳಿಕ ಮಗಳ ಭವಿಷ್ಯವೊಂದನ್ನೇ ಮುಖ್ಯ ಗುರಿಯನ್ನಾಗಿಟ್ಟುಕೊಂಡು ಹಿಲ್ಲೂರಿಗೆ ಹೊರಟು ಬೇಸಾಯಕ್ಕೆ ಬಯಸಿದ ನಾಗಮ್ಮಜ್ಜಿ ಅಲ್ಲಿಯ ವೈಫಲ್ಯದಿಂದಾಗಿ ಮರಳಿ ನಾಡುಮಾಸ್ಕೇರಿಗೆ ಬಂದಿದ್ದಳು. ಇಲ್ಲಿ ಕೂಲಿ ಮಾಡುತ್ತ ಮಗಳನ್ನು ಮತ್ತೆ ಶಾಲೆಗೆ ಸೇರಿಸಿದ್ದಳು. ಅಂಥ ಛಲಗಾರ್ತಿಯಾದ ಹೆಂಗಸಿಗೆ ಮಾಸ್ತರನೊಬ್ಬ ಅಳಿಯನಾಗುತ್ತಾನೆ ಎಂಬುದೇ ಸ್ವರ್ಗದಂಥ ಖುಷಿಯ ಸಂಗತಿ. ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದೇ ಸಂಕಲ್ಪ ಮಾಡಿದಳು.             ಲಂಕೇಶರು ಹೇಳಿದ ಹಾಗೆ ಬನದ ಕರಡಿಯಂತೆ ನಾಗಮ್ಮಜ್ಜಿ ಅಕ್ಕಿ, ಬೆಲ್ಲ, ಬಾಳೆ, ಹಲಸು, ಬಾಳೆಲೆಗಳನ್ನೆಲ್ಲಾ ಸಂಗ್ರಹಿಸತೊಡಗಿದಳು. ಹಿಲ್ಲೂರಿನಂಥ ಬೆಟ್ಟದಲ್ಲಿ ಬೇಸಾಯ ಮಾಡಿ ಬಂದ ದುಡಿಮೆಯ ಅನುಭವ ಅವಳದು. ಅದಾಗಲೇ ಅಲ್ಲಿಯ ನೆಂಟರೆಲ್ಲ ಭತ್ತ, ಕಬ್ಬು ಬೆಳೆಯುತ್ತ, ಬೆಲ್ಲದ ಕೊಡಗಳನ್ನೂ, ಅಕ್ಕಿಮೂಡೆಗಳನ್ನು ದಾಸ್ತಾನು ಮಾಡುವ ಹಂತ ತಲುಪಿದ್ದರು. ನಾಗಮ್ಮಜ್ಜಿ ಸ್ವತಃ ಹಿಲ್ಲೂರಿಗೆ ಹೋಗಿ ಅಕ್ಕಿ, ಬೆಲ್ಲ, ಬಾಳಿಗೊನೆ, ಹಲಸು ಇತ್ಯಾದಿಗಳನ್ನು ಸಾಕು ಸಾಕೆಂಬಂತೆ ಸಂಗ್ರಹಿಸಿ ಅವುಗಳನ್ನು ದೋಣಿಯಲ್ಲಿ ತುಂಬಿ ಗಂಗಾವಳಿ ನದಿಯ ಮೂಲಕವೇ ಊರಿಗೆ ಸಾಗಿಸಿದಳು. ಹಿಲ್ಲೂರಿನ ಎಲ್ಲ ಜಾತಿಬಂಧುಗಳಿಗೆ ಮದುವೆಗೆ ತಪ್ಪದೇ ಬರುವಂತೆ ವೀಳ್ಯ ನೀಡಿದ್ದಲ್ಲದೆ, ಊರಿಗೆ ಬರುತ್ತ ನದಿಯ ದಂಡೆಗುಂಟ ಇರುವ ಗುಂಡಬಾಳಾ, ಮೊಗಟಾ, ಸಗಡಗೇರಿ, ಅಗ್ಗರಗೋಣ ಮುಂತಾದ ಊರುಗಳ ಒಳಹೊಕ್ಕು ನೆಂಟರಿಷ್ಟರ ಪ್ರತಿಯೊಂದು ಮನೆಯಲ್ಲೂ ಅಳಿಯ ಮಾಸ್ತರನಿದ್ದಾನೆ’ ಎಂದು ಅಭಿಮಾನದಿಂದ ಹೇಳಿಕೊಂಡು ವೀಳ್ಯ ನೀಡಿ ಬಂದಳು.             ನಾಡುಮಾಸ್ಕೇರಿ ಮತ್ತು ಆಸುಪಾಸಿನ ಎಲ್ಲ ಜಾತಿ ಬಂಧುಗಳನ್ನು, ಪರಜಾತಿಯ ಹಿತೈಷಿಗಳನ್ನು ಕರೆಸಿಕೊಂಡು ಅದ್ದೂರಿಯಾದ ಹಂದರದಲ್ಲಿ ಮಗಳನ್ನು ಗಣಪು ಮಾಸ್ತರನಿಗೆ ಧಾರೆಯೆರೆದ ನಾಗಮ್ಮಜ್ಜಿ, ತಂದೆಯಿಲ್ಲದ ಕೊರತೆಯನ್ನೇ ತೋರಗೊಡದ ಚಿಕ್ಕಪ್ಪ ರಾಕು, ತುಳಸಿಯನ್ನು ದಾಂಪತ್ಯಜೀವನದ ಹೊಸ್ತಿಲಲ್ಲಿ ನಿಲ್ಲಿಸಿದರು. ಹಿರಿಯರ ಸಂಭ್ರಮ ಸಡಗರಗಳನ್ನು ಬೆರಗುಗಣ್ಣುಗಳಿಂದ ನೋಡುವುದನ್ನು ಬಿಟ್ಟರೆ ಹನ್ನೆರಡರ ಹರೆಯದ ಮುಗ್ಧ ತುಳಸಿಗೆ “ವಿವಾಹ ಏನು? ಏಕೆ?” ಎಂಬ ಅರ್ಥವೂ ತಿಳಿದಿರಲಿಲ್ಲ.             ನಾಡುಮಾಸ್ಕೇರಿಯಿಂದ ಗದ್ದೆ ಬಯಲಿಗೆ ಇಳಿದರೆ ಮಾರು ದೂರದಲ್ಲಿ ಸಿಗಬಹುದಾದ ವರನ ಮನೆಯಿರುವ ಗುಂದಿಹಿತ್ತಲಿಗೆ ಸೇರಬೇಕಾದ ದಿಬ್ಬಣ ನಾಗಮ್ಮಜ್ಜಿಯ ಸೂಚನೆಯ ಮೇರೆಗೆ ಹನೇಹಳ್ಳಿಯ ರಾಜಮಾರ್ಗದಲ್ಲಿ ಮೆರವಣಿಗೆ ಹೊರಟು ಬಾವಿಕೊಡ್ಲ, ಬಂಕಿಕೊಡ್ಲ, ಹನೇಹಳ್ಳಿ, ಹೆಗ್ರೆಗಳಲ್ಲಿ ಹಾದು ನಡುವೆ ಸಿಕ್ಕ ಬಂಧುಗಳ ಮನೆಯಲ್ಲಿ ಆರತಿ ಆಶೀರ್ವಾದ ಸ್ವೀಕರಿಸುತ್ತಾ ಗುಂದಿಹಿತ್ತಲಿನ ವರನ ಮನೆಯನ್ನು ಪ್ರವೇಶಿಸುವಾಗ ನಡುರಾತ್ರಿ ಸಮೀಪಿಸಿತ್ತಂತೆ.             ಹೀಗೆ ನಡೆಯಿತು ನಮ್ಮ ಅಪ್ಪ ಅಮ್ಮನ ಅದ್ದೂರಿ ಮದುವೆ. ********************************

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗರಂಗೋಲಿ-5 ಪಾತ್ರೆ ತುಂಬಿದ ಇನ್ನೆರಡು ಪಾತ್ರಗಳು ಪೂರ್ಣ… ಪೂ..ರ್ಣ.. ಅವರು ಕರೆಯುತ್ತಿದ್ದಾರೆ!. ತೆಳ್ಳಗಿನ ಸ್ವರವದು. ಉದ್ದ ಜಗಲಿಯನ್ನು ಹಂಚಿಕೊಂಡ ಮೂರನೆಯ ಹೊಸ್ತಿಲಿನ ಕೊನೆಯ ಕೋಣೆಯದು. ಮುಸ್ಸಂಜೆ ಸಮಯ,  ಒಬ್ಬರೇ ಆ‌ ಮರದ ಕಿಟಕಿಯ ಬಳಿ ಕೂತು  ತಿನ್ನುತ್ತಿದ್ದದ್ದು ಒಂದು ಆಮ್ಲೇಟ್. ಅದೂ ಚಿಕ್ಕದು. ಅದಕ್ಕೆ ಬಹಳ ಹೊತ್ತು ತೆಗೆದುಕೊಳ್ಳುತ್ತಿದ್ದರು.  ಆ ಸಮಯ ಮಾತ್ರ ಅವರು ನನ್ನ ಹೆಸರು ಕೂಗುತ್ತಿದ್ದರು. ಮನೆಯ ಹಿಂಬದಿಗೆ ಆ ಕಿಟಕಿಯ ಅರೆ ಕತ್ತಲಿಗೆ ನಾನು ಓಡುತ್ತಿದ್ದೆ. ಕಡ್ಡಿಯಂತಹ ಬಿಳೀ ಬೆರಳುಗಳು. ಪುಟ್ಟ ಆಮ್ಲೇಟಿನ ತುಂಡು ಆ ಕಿಟಕಿಯ ಸಂದಿನಿಂದ ಹೊರಬರುತ್ತಿತ್ತು. ತಾನು ಬಾಯಿ ತೆರೆದು ನನಗೆ “ಆಂ..” ಎನ್ನುತ್ತಿದ್ದರು. ನನ್ನ ಬಾಯಿಗೆ ಅವರ ಪಾಲಿನ ಆಹಾರ. ನಿನ್ನ ಅಜ್ಜಿಗೆ ಹೇಳಬೇಡ. ಇದೆಲ್ಲ ತಿಂದರೆ ಅವಳು ಬಯ್ಯಬಹುದು. ನಾನು ಬಾಯಿ ಒರೆಸಿ ಆ ಹೊಸ ರುಚಿಗೆ ತವಕಿಸುತ್ತಿದ್ದೆ. ಒಂದು- ಎರಡು ತುಂಡು ನನಗೆ. ಉಳಿದದ್ದು ಅವರಿಗೆ. ಜೊತೆಗೆ ಅವರ ಬಳಿ ಒಂದು ಪಾರದರ್ಶಕ ಗ್ಲಾಸ್. ಅದರಲ್ಲಿ ಎಂತದೋ ಪಾನೀಯ. ತುಸು ಘಾಟು ವಾಸನೆ. ಸಂಜೆಗೆ ಅವರ ಆಹಾರ ಅಷ್ಟೆ ಇದ್ದ ಹಾಗೆ ನೆನಪು. ಮತ್ತೆ ಮೌನಿಯಾಗಿ ತನ್ನ ಕೊಠಡಿ ಸೇರುತ್ತಿದ್ದರು. ಅಜ್ಜಮ್ಮನ ವಠಾರದ ಮತ್ತೊರ್ವ ಅಜ್ಜಿಯೇ ಅವರು. ನನ್ನ ಪ್ರೀತಿಯ ಸಣ್ಣಜ್ಜಿ. ಬಾಲ್ಯದಲ್ಲಿ ಸಿಹಿ ಅನುಬಂಧಗಳನ್ನು ಜೋಡಿಸಿದ ಹಿರಿ ಮನಸ್ಸುಗಳು ಅದೆಷ್ಟೋ ಇದ್ದವು. ಅವರಲ್ಲಿ ಈ ಸಣ್ಣಜ್ಜಿಯೂ ಒಬ್ಬರು. ಆ ವಠಾರ ನನ್ನ ನಾಟಕದ ಅವ್ಯಕ್ತ ಪಾಠಶಾಲೆಯಾಗಿತ್ತು. ಅಜ್ಜಮ್ಮ ಅನ್ನುತ್ತಿದ್ದರು: ನನ್ನ ಖಾಸ ತಂಗಿಯಲ್ಲ,ಆದರೆ ಅವಳು ತಂಗಿ. ಅವಳ ಜವಾಬ್ದಾರಿ ನನ್ನದು”  ಈ ಸಣ್ಣಜ್ಜಿ ಅಜ್ಜಮ್ಮನಷ್ಟು ಮಾತನಾಡುವವರಲ್ಲ. ಮೌನಿ. ಆ ಉದ್ದದ ಮನೆಯ ಮುಕ್ತಾಯ ಹಂತದಲ್ಲಿ ಇರುವ ಕೋಣೆಯಲ್ಲಿ ವಾಸ. ಎದುರು ಭಾಗಕ್ಕೆ ಬರುವುದೇ ಕಮ್ಮಿ. ಹಿತ್ತಲ ಬದಿ ಇರುವ ಬಾಗಿಲಿನ ಸಮೀಪ ಮನೆಯ ಒಳಗಡೆ ಒಂದು ಸಿಮೆಂಟಿನ ಕುರ್ಚಿಯ ತರಹ ಇತ್ತು ಅದಕ್ಕೆ ಹೊಂದಿಕೊಂಡಂತೆ ಮರಗಳ ದಳಿ ಇರುವ ಉದ್ದನೆಯ ಕಿಟಕಿ. ಅಲ್ಲಿ ಬೆಳಗ್ಗೆ, ಮಧ್ಯಾಹ್ನ, ಮತ್ತು ಸಂಜೆ ಹೊತ್ತಿಗೆ  ಬಂದು ಕೂರುತ್ತಿದ್ದರು. ಕೈಯಲ್ಲಿ ಒಂದು ಪುಸ್ತಕ. ಯಾವ ಪುಸ್ತಕ, ಯಾವ ವಿಷಯಗಳ ಬಗ್ಗೆ ಅವರ ಆಸಕ್ತಿ ನನಗೆ ತಿಳಿಯುತ್ತಿರಲಿಲ್ಲ. ಬಹುಶಃ ಯಾರಿಗೂ ತಿಳಿದಿರಲಿಲ್ಲ. ಆ ಪುಸ್ತಕಗಳು ಅವರ ಕೋಣೆಯೊಳಗೆ ಇರುತ್ತಿದ್ದವು. ಆ ಕೋಣೆ ಆ ದೊಡ್ಡ ಮನೆಯೊಳಗಿನ ಅವರ ಮನೆ. ಅಜ್ಜಮ್ಮನ ಪ್ರತಿಯೊಂದು ಚರ್ಯೆ ಅನಾವರಣಗೊಂಡು ಕಣ್ಣೆದುರು ಕಾಣುತ್ತಿದ್ದರೆ ಇವರು ಎಲ್ಲ ವಿಷಯಗಳಲ್ಲೂ ಅಂತರ್ಮುಖಿ. ಸಣ್ಣಜ್ಜಿಯ ಕೋಣೆಯೊಳಗೆ ಹಗಲಲ್ಲೂ ಮಂದ ಬೆಳಕು. ನಾನು ಅಂಜಿಕೊಂಡು ಒಳಗೆ ಇಣುಕುತ್ತಿದ್ದೆ.  ಅವರು ಆ ಅರೆಕತ್ತಲಿನ ಕೋಣೆಗೆ ಇರುವ ಒಂದು ಕಿಟಕಿಯ ಬಳಿ ಕೂತಿರುತ್ತಿದ್ದರು. ತಿಂಡಿ,ಊಟ ಅಲ್ಲೇ. ತಟ್ಟೆಯಲ್ಲಿ ನೀರು ಕೊಡಬೇಕು. ಅಲ್ಲೇ ಕೈ ತೊಳೆಯುವುದು. ನಾನು ಅಡಗಿಕೊಂಡು ಅವರ ಚರ್ಯೆಗಳನ್ನು ಗಮನಿಸುತ್ತಿದ್ದೆ.  ಏನೋ ಯೋಚನೆ ಮಾಡುವ ರೀತಿ ಕೂತಿರುತ್ತಿದ್ದರು. ನಂತರ ಅಲ್ಲೇ ಓದು. ಪುಟ್ಟದೊಂದು ಗೋಡೆಗೆ ಹೊಂದಿಕೊಂಡ ಕಪಾಟು. ಅದರಲ್ಲೇ ಅವರ ಪುಸ್ತಕ,ಪೌಡರ್ ಡಬ್ಬ, ಬಿಳೀ ಪುಟ್ಟ ಡಬ್ಬದಲ್ಲಿ ಪೊಂಡ್ಸ ಕ್ರೀಂ.  ಯಾವುದೂ ಹೊರ ಬಾರದು. ಅವರ ಊಟವೂ ಅಷ್ಟೆ ಮಾತಿಗಿಂತಲೂ ಮಿತ. ಬರೀ ಒಂದು ಮುಷ್ಠಿ ಅನ್ನ,ಒಂದು ಲೋಟ ಹಾಲು,ಒಂದಿಷ್ಟು ಪಲ್ಯ. ಯಾವುದರ ಬಗ್ಗೆಯೂ ಚರ್ಚೆ ಇಲ್ಲ. ಅವರಾಗಿ ಊಟದ ಬಗ್ಗೆ ವಿಚಾರಿಸಿದ್ದು ಕಂಡಿಲ್ಲ. ಬೆಳಗ್ಗೆ ಬೇಗನೆ ಸ್ನಾನ. ಅವರ ದೇವರ ಪೂಜೆಯೂ ಬಹಿರಂಗವಾಗಿ ಕಾಣುತ್ತಿರಲಿಲ್ಲ. ಭಜನೆ,ಹಾಡು ಹಾಡಿದವರಲ್ಲ. ಅವರ ಮನೆಗೆ ಬಹಳಷ್ಟು ಜನ ಬರುತ್ತಿದ್ದರು. ಅಜ್ಜಮ್ಮ ಅವರೊಡನೆ, ಮಾತು ಚರ್ಚೆ ನಡೆಸುತ್ತಿದ್ದರು. ಸಣ್ಣಜ್ಜಿ ಯಾವುದರಲ್ಲೂ ಪಾಲ್ಗೊಂಡ ನೆನಪಿಲ್ಲ. ಭೇಟಿಗೆ ಬಂದವರೇ ಅವರ ಬಳಿ ಹೋಗಿ ಮಾತನಾಡುತ್ತಿದ್ದರು. ಅಜ್ಜಮ್ಮ ನನಗೆ ಮಾತು ಕಲಿಸಿದರೆ ಸಣ್ಣಜ್ಜಿ ಕಲಿಸಿದ್ದು ಮೌನ. ನಾಟಕದಲ್ಲಿ ಹಲವು ಬಾರಿ ಮಾತುಗಳಿಗಿಂತ ಹೆಚ್ಚು ಮೌನ ಮಾತಾಡುತ್ತೆ ಅಂತ ಅರ್ಥವಾದಾಗಲೆಲ್ಲಾ, ನೆನಪಾಗುವುದು ಸಣ್ಣಜ್ಜಿ ಕಲಿಸಿದ ಮೌನ. ಅಜ್ಜಮ್ಮನ ಜೊತೆ ಮಾತು ಮೀರಿ ನಾನು ಸಣ್ಣಜ್ಜಿ ಬಳಿ ಹೋಗಲು ಎದ್ದರೆ ಗದರುತ್ತಿದ್ದರು. ಅವಳು ಯಾಕೆ? ಅವಳಿಗೆ ಗಂಡೂ ಬೇಡ,ಹೆಣ್ಣೂ ಬೇಡ.  ಸಣ್ಣಜ್ಜಿಯ ಪುಸ್ತಕಗಳು, ಅವರ ಕಣ್ಣಲ್ಲಿ ಒಸರುವ ವಾತ್ಸಲ್ಯ ಅದೊಂದು ಅಮೂರ್ತ ಭಾವ ನಿಧಿಯನ್ನು ದೇಣಿಗೆ ನೀಡಿತ್ತು. ಮುಂದೆ ನಾಟಕಗಳಲ್ಲಿ ರಾಮಾಯಣದ ಶಬರಿ, ರಾಮಾಶ್ವಮೇಧದ ಊರ್ಮಿಳಾ, ಮಂದಾರ ರಾಮಾಯಣದ ಅಹಲ್ಯೆ ಪಾತ್ರಗಳು ಮನಸ್ಸಿನಲ್ಲಿ ಚಿತ್ರಿತಗೊಂಡಾಗ ಆ ಪಾತ್ರದ ಮೂರ್ತ ರೂಪದಂತೆ ಅಯಾಚಿತವಾಗಿ ಸಣ್ಣಜ್ಜಿಯ ಕಾಯ ನಿಲ್ಲುತ್ತಿತ್ತು. ಅವರೂ ಯಾರದ್ದೋ ನಿರೀಕ್ಷೆಯಲ್ಲಿದ್ದರೇ ಎಂಬ ಪ್ರಶ್ನೆಯಿಂದ ಈಗಲೂ ಮನಸ್ಸು ತಳಮಳಿಸುತ್ತದೆ. ಈಗ ಅನಿಸುತ್ತದೆ. ಅವರ ಭಾವಕೋಶದೊಳಗೆ ಏನಿತ್ತು? ಕೋಶ ಹರಿದು ಚಿಟ್ಟೆ ಬಣ್ಣದ ರೆಕ್ಕೆ ತೆರೆದಿರಲೇ ಇಲ್ಲವೇ? ಆ ಮೌನವನ್ನು ಯಾರೂ ಮುಟ್ಟುವ ಮನಸ್ಸು ಮಾಡಿಲ್ಲವೇ. ತಪಸ್ವಿನಿಯಂತೆ ಬದುಕಿದರು. ಪದ್ಮಪತ್ರದ ಮೇಲಿನ ಜಲಬಿಂದುವಿನಂತೆ, ಯಾವುದಕ್ಕೂ ಅಂಟಿಕೊಳ್ಳದೆ. ನನ್ನ ಬಾಳ ರಂಗಸ್ಥಳದಲ್ಲಿ ಕಂಡ ಅಪರೂಪದ ಪಾತ್ರ. ಅದೊಂದು ದಿನ ಮಲಗಿದ್ದಲ್ಲಿಯೇ ಕಾಯ ತೊರೆದಿದ್ದರು. ನಂತರದ ದಿನಗಳಲ್ಲಿ ನನ್ನೊಳಗೊಂದು ಭಯ ಹುಟ್ಟಿಕೊಂಡಿತ್ತು. ಅಡುಗೆ ಮನೆ ಹೋಗಬೇಕಾದರೆ ಅವರ ಕೊಠಡಿ ದಾಟಿ ಹೋಗಬೇಕಿತ್ತು. ಬೇಡವೆಂದರೂ ದೃಷ್ಟಿ ತೆರೆದ ಆ ಕೊಠಡಿಯತ್ತ ಓಡುತ್ತಿತ್ತು. ಆ ಪುಟ್ಟ ದೇಹ ಅಲ್ಲಿ ಇದ್ದ ಹಾಗೆ ಅನಿಸಿ ಗಾಬರಿಗೊಳ್ಳುತ್ತಿದ್ದೆ. ಅಜ್ಜಮ್ಮ ಏನಾದರೂ ತರಲು ಹೇಳಿದರೆ ಅಲ್ಲಿಯವರೆಗೆ ಸಹಜವಾಗಿ ಬಂದರೆ ನಡಿಗೆ ನಿಲ್ಲುತ್ತಿತ್ತು. ಮನಸ್ಸಿನಲ್ಲಿ ದೇವರ ನಾಮಸ್ಮರಣೆಯೊಂದಿಗೆ ಕಣ್ಣುಮುಚ್ಚಿ ಓಟದ ನಡಿಗೆಯಲ್ಲಿ  ಆ ಕೊಠಡಿ ದಾಟುತ್ತಿದ್ದೆ.  ಆ ಮನೆಯಲ್ಲಿದ್ದ ಮೂರನೆಯವರೇ ಹೆಣ್ಣು ರೂಪದ ಗಂಡು ಪಾತ್ರದ ವತ್ಸಲ ಚಿಕ್ಕಿ. ಅವರು ನಡೆದಾಡುವ ಶೈಲಿಯೂ ಹಾಗೆ. ಉದ್ದಕ್ಕಿದ್ದರು. ಎದೆಸೆಟೆಸಿ ನಡೆದಂತೆ ನಡೆಯುತ್ತಿದ್ದರು. ದಪ್ಪ ಸ್ವರ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ತಮ್ಮ ಬಳಿ ಇದ್ದ ಕೆಜಿಗಟ್ಟಲೆ ಬಂಗಾರ, ನಗದು ಎಲ್ಲ ಗಂಟು ಕಟ್ಟಿ ಗಾಂಧೀಜಿಯವರನ್ನು ಭೇಟಿ ಮಾಡಿ ಅವರಿಗೆ ಒಪ್ಪಿಸಿದ್ದರಂತೆ. ತನಗಿಷ್ಟವಾದಾಗ ತಿಂಡಿ, ಇಷ್ಟವಾದರೆ ಊಟ. ಯಾರನ್ನೂ ಕೇಳಿ ಉಪಚರಿಸಿಕೊಂಡವರಲ್ಲ. ಬೇಕಾದಾಗ ಅಡುಗೆ ಮನೆಗೆ ನುಗ್ಗಿ ಪಟಪಟ ಸದ್ದು ಮಾಡಿ ತನಗಿಷ್ಟವಾದುದ್ದನ್ನು ತಯಾರಿಸಿ ಉಣ್ಣುತ್ತಿದ್ದರು. ಮನೆಯೊಳಗೂ ಸ್ಲಿಪ್ಪರ್ ಚಪ್ಪಲು ಹಾಕಿ ಓಡಾಟ. ದಿನದಲ್ಲಿ ಮೂರು ನಾಲ್ಕು ಸಲ ಉಡುಪು ಬದಲಿಸುತ್ತಿದ್ದರು. ಎಲ್ಲವೂ ಶಿಸ್ತುಬದ್ಧ. ಬೆಳಗ್ಗೆದ್ದು ಎಲ್ಲಿಗೋ ಹೋಗುತ್ತಿದ್ದರು. ಥಟ್ಟೆಂದು ಪ್ರತ್ಯಕ್ಷವಾಗುತ್ತಿದ್ದರು. ಏನನ್ನೋ ಹೇಳಲಿರುವಂತೆ ಸದಾ ತುಟಿಗಳ ಚಲನೆ. ಖಾದಿ ಉಡುತ್ತಿದ್ದರು. ಮಹಾತ್ಮ ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದರು. ಮನಸ್ಸಾದರೆ  ದೇವಾಲಯಕ್ಕೆ ಹೊರಡುತ್ತಿದ್ದರು. ಅಗೆಲ್ಲ ನನ್ನ ಕರೆದುಕೊಂಡು ಹೋಗುವುದು. ಎದುರಾದ ಗಿಡ, ಮರ, ಕಲ್ಲು ಎಲ್ಲದಕ್ಕೂ ನಮಸ್ಕರಿಸುತ್ತಿದ್ದರು. ಕಾಲಿಗೆ ಕಲ್ಲು ಎಡವಿದರೆ ಆ ಕಲ್ಲಿಗೆ ಎರಡೂ ಕೈಗಳನ್ನು ಬಾಗಿಸಿ ನಮಸ್ಕರಿಸುತ್ತಿದ್ದರು.  “ಎಲ್ಲದರೊಳಗೂ ದೇವರಿದ್ದಾನೆ” ಸ್ವಗತದಂತೆ ಮಾತನಾಡುತ್ತಿದ್ದರು. ನನ್ನ ಕೈ ಹಿಡಿದೇ ಇರುತ್ತಿದ್ದರು. ಪ್ರಹ್ಲಾದ ಕಥೆ ಇವರೊಳಗಿಂದಲೇ ಚಿಗುರಿದಂತೆ.  ನಾನು ಬಹಳ ಕಾಲ ಅವರ ಈ ಅಭ್ಯಾಸ, ಹವ್ಯಾಸ ನನ್ನೊಳಗೆ ಇಳಿಸಿಕೊಂಡು ಅನುಸರಿಸುತ್ತಿದ್ದೆ. ವ್ಯಕ್ತಿಯ ಹಾವ ಭಾವದ ಅನುಕರಣೆ, ಸ್ವಭಾವದ ಅನುಕರಣೆ ಅಭಿನಯ ಮಂಟಪದ ಕಂಭಗಳು ತಾನೇ. ರಂಗದ ರಂಗೋಲಿಯೇ ಪ್ರೀತಿ,ತನ್ನಯತೆಯಿಂದ ನಮ್ಮನ್ನು ಸಮೀಕರಿಸಿ ಸಮರ್ಪಿಸಿಕೊಳ್ಳುವ ದೈವೀಕತೆ. ಪ್ರತೀ ಒಂದರ ಸೂಕ್ಷ್ಮತೆ, ಆಗುಹೋಗುಗಳನ್ನು ತೆರೆದ ಕಣ್ಣು, ಮನಸ್ಸಿನಿಂದ ಎದೆಗಿಳಿಸಿಕೊಳ್ಳುವ ಜಾದೂ. ಅದರ ಮೊದಲ ಅಕ್ಷರಾಭ್ಯಾಸ ಬಾಲ್ಯ.  ನೆನಪಿಗೆ ತಾಲೀಮು, ಉಸಿರಿಗೆ ರಾಗ, ಮಾತಿಗೆ ಕೌಶಲ್ಯ, ದೇಹದ ಚಲನೆ, ಚೈತನ್ಯ ಎಲ್ಲವನ್ನೂ ನಿರಾಳತೆಯಿಂದ ಸ್ವೀಕರಿಸಲು ವೇದಿಕೆ ಕಟ್ಟಿದ್ದರು ಆ ಮೂವರು ದೇವಕನ್ನಿಕೆಯರು. ಅಜ್ಜಮ್ಮ ಹಾಡಿಸಿದ ಹಾಡುಗಳು, ಪ್ರಶ್ನೋತ್ತರಗಳು, ನೃತ್ಯ, ವ್ಯಕ್ತಿಗಳ ಮಾತು, ನಡೆಯ ಅನುಕರಣೆ ಎಲ್ಲವೂ ನನ್ನೊಳಗೆ ಒಬ್ಬ ಕಲಾವಿದೆ ಅಂಕುರಿಸಲು,ರಂಗದಲ್ಲಿ ಕಾಣಿಸಲು ದೀವಿಗೆಯಾಗಿ ಕಂಡಿದೆ.  ಬದುಕಿನ ಹಲವು ಅವಸ್ಥೆಗಳಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಕ್ರಿಯೆ ಮತ್ತು ಪ್ರತಿಯೊಂದು ಪಾತ್ರಗಳಲ್ಲಿ ಅನುಭವಿಸುವ ತಾದಾತ್ಮ್ಯ ಭಾವ ಮನಸ್ಸಿನೊಳಗೆ ಸದಾ ಹಸಿರಾಗಿದೆ. *********************************************************************** ಪೂರ್ಣಿಮಾಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿ

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ

ಅಂಕಣ ಬರಹ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮತ್ತು ಕೊಲೆ! ಪ್ರತಿನಿತ್ಯ ಇಂತಹ ಅಸಂಖ್ಯ ಸುದ್ದಿಗಳು ಸರ್ವೆ ಸಾಮಾನ್ಯ ಎನಿಸುವಷ್ಟು ಬರುತ್ತಿರುತ್ತವೆ. ಓದುವುದಕ್ಕೇ ಆಗದಂಥ ವಿಚಿತ್ರ ಸಂಕಟ… ನಿರ್ಲಕ್ಷಿಸುವುದು ಸಾಧ್ಯವಿಲ್ಲ, ಏನಾದರೂ ಮಾಡುವಾ ಎಂದರೆ ಮಾಡಲಾಗದ ಅಸಹಾಯಕತೆ… ಹಿಂದೆಯೇ ಇಂಥವನ್ನ ಎಷ್ಟು ದಿನ ಅಂತ ಸಹಿಸಿಕೊಳ್ಳುವುದು ಎನ್ನುವ ಬೆಂಬಿಡದ ಪ್ರಶ್ನೆ… ಇನ್ನೂ ಅರಳದ ಮೊಗ್ಗನ್ನ ತಮ್ಮ ಕೆಟ್ಟ ದಾಹಕ್ಕೆ ಬಳಸಿ ಬಿಸಾಡುತ್ತಾರಲ್ಲ, ರಕ್ತ ಕುದಿಯುತ್ತದೆ. ಎಲ್ಲೋ ಕೆಲ ಕಂದಮ್ಮಗಳಿಗೆ ಒಂದಷ್ಟು ಸಂತಾಪವಾದರೂ ಸಿಗುತ್ತದೆ. ಆದರೆ ಅಸಂಖ್ಯ ಮಕ್ಕಳಿಗೆ ಅದೂ ಇಲ್ಲ. ಆ ಮಕ್ಕಳನ್ನು ನೆನೆದು ನಾವಿಲ್ಲಿ ದುಃಖಿಸಿ ದುಃಖಿಸಿ ಅಳುತ್ತೇವೆ. ಪ್ರಾರ್ಥಿಸುತ್ತೇವೆ. ನ್ಯಾಯಕ್ಕಾಗು ಕೂಗುತ್ತೇವೆ. ದೀಪ ಹಚ್ಚಿ ಅವರ ಆತ್ಮಕ್ಕಾಗಿ ನಾವಿಲ್ಲಿ ಶಾಂತಿ ಕೋರುತ್ತೇವೆ. ಹೀಗೇ ಯಾರೋ ಎಂಥದೋ ಸಂಕಟದಲ್ಲಿರುತ್ತಾರೆ, ಮತ್ಯಾರೋ ತುಂಬಾ ಕಷ್ಟಪಡುತ್ತಿರುತ್ತಾರೆ. ಯಾರು ಏನು ಎತ್ತ ಎಂದು ತಿಳಿಯದ ಅವರ ಬಗ್ಗೆ ನಾವಿಲ್ಲಿ ಮರುಗತೊಡಗುತ್ತೇವೆ. ಸಧ್ಯ ಅವರು ಅದರಿಂದ ಹೊರಬಂದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮ ಕೈಲಾದಷ್ಟು ಸಹಾಯ ಮಾಡಲು ಹೊರಡುತ್ತೇವೆ. ಅದು ನಮ್ಮೊಳಗಿನ ಮನುಷ್ಯತ್ವ. ಅದಕ್ಕೆ ಯಾವ ಭೇದವೂ ಇಲ್ಲ, ಬೇಲಿಯೂ ಇಲ್ಲ. ಅದಕ್ಕೆ ನಾವೆಲ್ಲ ಮನುಷ್ಯರು ಎನ್ನುವ ಒಂದೇ ಕಾರಣ ಸಾಕು. ನಮ್ಮ ಅದೆಷ್ಟೋ ಇಂತಹ ನಿಸ್ವಾರ್ಥ ಪ್ರಾರ್ಥನೆಗಳು ಅದೆಷ್ಟೋ ಜನರ ಬದುಕಿನ ಹಿಂದಿರುತ್ತವೆ ಎನ್ನುವುದನ್ನು ನಾವು ಯೋಚಿಸಿಯೂ ಇರುವುದಿಲ್ಲ. ಅಪ್ಪ, ಅಮ್ಮ, ಸಂಬಂಧಿಕರು, ಸ್ನೇಹಿತರು, ಪರಿಚಯದವರಷ್ಟೇ ಅಲ್ಲದೆ ಕೆಲವೊಮ್ಮೆ ಅಪರಿಚಿತರೂ ಆಪದ್ಭಾಂದವರಾಗಿ ಬರುತ್ತಾರೆ. ನಮ್ಮ ಹೊಗಳಿಕೆ, ಗಮನ ಯಾವೊಂದನ್ನೂ ನಿರೀಕ್ಷಿಸದೆ ಪ್ರಾರ್ಥಿಸುವ ಆ ಕೈಗಳು ನಿಜಕ್ಕೂ ಭಗವಂತನ ಆಶೀರ್ವಾದವೇ ಇರಬೇಕು. ಮತ್ತೆ ನಾವು ಸುಖಾ ಸುಮ್ಮನೆ ಸಣ್ಣ ಸಣ್ಣ ವಿಚಾರಕ್ಕೂ ನಮ್ಮನ್ನು ಪ್ರೀತಿಸುವವರೊಂದಿಗೆ ಮುನಿಸಿಕೊಳ್ಳುತ್ತೇವೆ, ದೂರವಾಗಿಬಿಡುತ್ತೇವೆ. ಆದರೆ ಅವರ ಮನಸಿನಲ್ಲಿ ಉಳಿದಿರುವ ನಮ್ಮ ಬಗ್ಗೆ ನಮಗೇ ಅರಿವಿರುವುದಿಲ್ಲ. ನಮ್ಮ ಕಷ್ಟ ಸುಖಕ್ಕೆ ಅವರದೊಂದು ಪ್ರಾರ್ಥನೆ ಸದಾ ಸಲ್ಲುತ್ತಿರುತ್ತದೆ ಎನ್ನುವುದು ಗೊತ್ತೇ ಆಗುವುದಿಲ್ಲ. ಅವಳು ನನ್ನ ಗೆಳತಿ. ಆದರೆ ಬಹಳ ವರ್ಷಗಳಿಂದ ನಮ್ಮಿಬ್ಬರ ನಡುವೆ ಸಂಪರ್ಕವಿಲ್ಲ. ಜಗಳ ಮನಸ್ಥಾಪ ಎಂತದ್ದೂ ಇಲ್ಲ. ಆದರೆ ಸುಮ್ಮನೇ ಅದು ಹೇಗೋ ಸೃಷ್ಟಿಯಾದ ನಿರ್ವಾತವದು. ಅವಳಿಗೆ ಮಕ್ಕಳೆಂದರೆ ಪ್ರಾಣ. ಆದರೆ ಅವಳ ಮಮತೆಯ ಮಡಿಲು ಮಾತ್ರ ಇನ್ನು ತುಂಬಿರಲಿಲ್ಲ. ಎರೆಡು ಮಕ್ಕಳನ್ನು ಕಳೆದುಕೊಂಡಿದ್ದಳು. ದಿನ ತುಂಬಿದ್ದರೂ ಗರ್ಭದಲ್ಲೇ ಮರಣಿಸಿಬಿಟ್ಟಿದ್ದವು. ಮತ್ತೆರೆಡು ಬಾರಿ ಆದ ಗರ್ಭಪಾತಗಳು ಅವಳನ್ನು ಮಾನಸಿಕವಾಗಿ ಕುಗ್ಗಿಸಿಬಿಟ್ಟಿದ್ದವು. ಈಗ ಮತ್ತೊಮ್ಮೆ ಗರ್ಭಿಣಿಯಾಗಿದ್ದಳು. ಅದು ತಿಳಿದಾಗಿನಿಂದಲೂ ಸದಾ ಒಂದು ಪ್ರಾರ್ಥನೆ ಅವಳಿಗಾಗಿ.ಪ್ರತಿದಿನ ದೇವರ ಮುಂದೆ ಕೂತಾಗಲೂ, ಅವಳೇ ಕಣ್ಮುಂದೆ ಬರುತ್ತಾಳೆ, ಒಂದು ಪ್ರಾರ್ಥನೆ ದೇವರ ಪಾದದ ಮೇಲೆ ಬೀಳುತ್ತದೆ, “ಭಗವಂತಾ ಇದೊಂದು ಮಗು ಅವಳ ಮಮತೆಯ ಮಡಿಲಿಗಿಳಿದು ಅವಳ ಮಡಿಲು ಜೀವಂತವಾಗಿಬಿಡಲಿ…” ಎಂದು ಒಂದು ನಿಮಿಷ ಕಣ್ಮುಚ್ಚಿ ಕೈಮುಗಿದು ಕುಳಿತುಬಿಡುತ್ತೇನೆ. ನಾನು ಅವಳಿಗಾಗಿ ಇಲ್ಲಿ ಪ್ರಾರ್ಥಿಸುತ್ತಿದ್ದೇನೆ ಎನ್ನುವ ಸುದ್ದಿಯೂ ಅವಳಿಗೆ ಗೊತ್ತಿಲ್ಲ. ಅವಳಿಗೆ ಗೊತ್ತಾಗಲಿ ಎನ್ನುವ ಕಾರಣಕ್ಕೆ ನಾನು ಪ್ರಾರ್ಥಿಸುತ್ತಲೂ ಇಲ್ಲ. ಆದರೆ ಒಂದು ಮಾತ್ರ ನನಗೂ ಆಶ್ಚರ್ಯ! ಅವಳಿಗೇ ಗೊತ್ತಿಲ್ಲದ ನನ್ನ ಪ್ರಾರ್ಥನೆಯೊಂದು ಅವಳ ಬದುಕಿಗಾಗಿ ಸಲ್ಲುತ್ತಿದೆ.. ಹಾಗೆಯೇ ನಮ್ಮ ಬದುಕಿಗೂ ನಮಗೇ ಗೊತ್ತಿಲ್ಲದ ಅದೆಷ್ಟು ಜನರ ಅದೆಷ್ಟು ಪ್ರಾರ್ಥನೆಗಳು ಸಲ್ಲಿಸಲ್ಪಟ್ಟಿರಬಹುದು! ಇಲ್ಲದ ಇರುವ ಕೊರತೆಗಳನ್ನು ದೊಡ್ಡದು ಮಾಡಿಕೊಂಡು ಬದುಕನ್ನು ಹಳಿಯುವ ಮೊದಲು ನಾವ್ಯಾಕೆ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕು ಎನ್ನುವುದು ಅರ್ಥವಾದರೆ ಖಂಡಿತ ನಾವು ಇರುವುದರಲ್ಲೆ ಸಂತೋಷವಾಗಿ ಬದುಕಬಲ್ಲೆವು. ನಮಗೆ ಸಿಕ್ಕಿರುವ ಈ ಬದುಕಿನ ಅದೆಷ್ಟೋ ಕಾಣದ ಕೈಗಳ ಪ್ರಾರ್ಥನೆ ಇರುವುದು ತಿಳಿದರೆ ನಮ್ಮ ದುರಾಸೆಯ ಬಗ್ಗೆ ನಮಗೆ ಅಂಜಿಕೆ, ಮುಜುಗರವಾಗಬಹುದು. ಬಹಳ ವರ್ಷಗಳ ನಂತರ ಗೆಳತಿಯೊಬ್ಬಳು ಸಿಕ್ಕಿದಳು. ಆಡಿದ ಮಾತುಗಳು ಸಾವಿರ. ನಕ್ಕಿದ್ದೆಷ್ಟೋ… ಅತ್ತಿದ್ದೆಷ್ಟೋ… ಕೊನೆಗೆ ಅವಳು ಮೆಲ್ಲಗೆ, “ನಿನ್ನ ಮೊದಲ ಹೆರಿಗೆಯಲ್ಲಿ ಏನೋ ತೊಂದರೆ ಆಗಿತ್ತಂತೆ ಹೌದಾ..?” ಎಂದು ಕೇಳಿದಳು. ನಾನು ನಗುತ್ತಾ “ಎಂಟು ವರ್ಷಗಳೇ ಕಳೆದು ಹೋದವು… ಈಗ್ಯಾಕೆ ಮಾರಾಯ್ತಿ ಆ ಮಾತೆಲ್ಲ…?” ಎಂದೆ. ಅದಕ್ಕವಳು, “ಏನಿಲ್ಲ ಅವತ್ತು ಯಾರೋ ನನಗೆ ಸುದ್ದಿ ಮುಟ್ಟಿಸಿದ್ದರು. ನನಗಾದ ಗಾಬರಿ ಅಷ್ಟಿಷ್ಟಲ್ಲ, ಹೋಗಿ ದೇವರ ಮುಂದೆ ದೀಪ ಹಚ್ಚಿಟ್ಟು, ದೇವರೇ ಎಲ್ಲ ಸಸೂತ್ರ ಆಗಿ ಅವಳು ಆರೋಗ್ಯವಾಗಿ ಮಗುವಿನೊಟ್ಟಿಗೆ ಮನೆಗೆ ಬಂದುಬಿಡಲಪ್ಪಾ… ” ಎಂದು ಹರಸಿಕೊಂಡಿದ್ದೆ. ಮತ್ತೆ ನೀ ಮನೆಗೆ ಬಂದದ್ದು ತಿಳಿದ ಮೇಲೆ ದೇವರಿಗೆ ಹೋಗಿ ಹರಕೆ ತೀರಿಸಿ ಬಂದಿದ್ದೆ ಎಂದಳು. ನನ್ನ ಕಣ್ಣು ತುಂಬಿಬಿಟ್ಟಿದ್ದವು. ಗಂಟಲು ಕಟ್ಟಿಬಿಟ್ಟಿತ್ತು. ಸುಮ್ಮನೇ ಅವಳನ್ನು ತಬ್ಬಿಕೊಂಡೆ. ಕಣ್ಣೀರು ಅವಳ ಭುಜವನ್ನು ತೋಯಿಸುತ್ತಿತ್ತು. ಇಂಥದೊದು ಹರಕೆ ನನ್ನನ್ನು ಕಾಯುತ್ತಿದೆ ಎನ್ನುವ ಕಲ್ಪನೆಯೂ ಇಲ್ಲದೆಯೇ ಇಷ್ಟು ವರ್ಷ ಬದುಕಿದೆನಲ್ಲ ಅನಿಸಿ ಅಂತಃಕರಣದ ಎಳೆಗಳು  ನಮ್ಮನ್ನು  ಸುತ್ತಿಕೊಂಡು ಪೊರೆಯುವ ರೀತಿಗೆ ಸೋತುಹೋದೆ. ಹೀಗೆ ಬದುಕು ನಮ್ಮ ಹುಂಬ ನಡವಳಿಕೆಗಳನ್ನು ಸುಳ್ಳು ಮಾಡುತ್ತಾ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕು ನಾವು ಎನ್ನುವುದನ್ನು ಮತ್ತೆ ಮತ್ತೆ ಪ್ರಾಮಾಣೀಕರಿಸಿ ತೋರಿಸಿಕೊಡುತ್ತಿರುತ್ತದೆ… **************************************************************** ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ Read Post »

You cannot copy content of this page

Scroll to Top