“ಒಣರೊಟ್ಟಿ ತಿಂದು
ತಣ್ಣೀರ ಕುಡಿ, ಫರೀದ್
ಇತರರ ತುಪ್ಪ ರೊಟ್ಟಿಯ ಕಡೆ
ನೋಡದಿರು ಹಂಬಲಿಸಿ”
-ಬಾಬಾ ಷೇಖ್ ಫರೀದ್
ಕಾಲವೆಂಬ ಗಿರಿಯ ಏರುತ್ತಾ ಏರುತ್ತಾ ಹಿಂತಿರುಗಿ ನೋಡಿದಾಗ ಅದೆಷ್ಟೋ ಅಂದಿನ ಸಾಮಾನ್ಯ ಸಂಗತಿಗಳು ಇಂದು ವಿಶಿಷ್ಟವೆನಿಸ ತೊಡಗುತ್ತವೆ. ಕಾಡುವ ನೆನಪುಗಳಾಗಿ ಹಂಚಿಕೊಳ್ಳಲೇಬೇಕೆಂಬ ತಹತಹ ಮೂಡಿಸುತ್ತವೆ. ಅಂತಹ ನೆನಪುಗಳ ಮಾಲಿಕೆ ಈ ಅಂಕಣ. ಬನ್ನಿ ನೆನಪಿನ ದೋಣಿಯನ್ನೇರಿ ಗತ ವೆಂಬ ಸಾಗರದ ಪರ್ಯಟನೆ ಮಾಡಿ ಬರೋಣ.
ಅಂಕಣ ಸಂಗಾತಿ ತೊರೆಯ ಹರಿವು ‘ಸಾವಿಗೊಂದು ಘನತೆ ಕೊಡುವ…’ ಅಪ್ಪು ಎಂಬ ಮನದ ಮಗನ ಸಾವಿಗೆ ಕರ್ನಾಟಕ ಇನ್ನಿಲ್ಲದಂತೆ ಕೊರಗುತ್ತಿದೆ. ‘ಈ ಸಾವು ನ್ಯಾಯವೇ ?’ ಎಂದು ಪ್ರಶ್ನಿಸುತ್ತಿದೆ. ‘ಸಾಯೋ ವಯಸ್ಸಾ ಇದು? ವಿಧಿಗೆ ಕುರುಡೇ? ಯಮನ ಕಿಂಕರರಿಗೆ ಕರುಣೆ ಇಲ್ಲವೇ?’ ಎಂದೆಲ್ಲಾ ನೂರಾರು ಪ್ರಶ್ನೆಗಳನ್ನು ಎಲ್ಲರ ಮನಸ್ಸು ಜಗ್ಗಿ ಕೇಳುತ್ತಿದೆ. ಇದಂತೂ ಈ ಕಾಲಮಾನದಲ್ಲಿನ ಎಲ್ಲಾ ವಯೋಮಾನದವರ ಮನದಲ್ಲಿ ಉಳಿದು ಹೋದ ಅಹಿತಕರ ಘಟನೆ. ಯಾರೂ ಊಹಿಸದಿದ್ದ ಆಘಾತ! ‘ಹುಟ್ಟಿದ ಮೇಲೆ ಸಾವು ಸಹಜ’ ಎಂದರೂ ಬಾಳಿ ಬದುಕಬೇಕಾದ ಒಂದು ಒಳಿತಿನ ಜೀವಕ್ಕೆ ಇಂಥದ್ದೊಂದು ಸಾವು ಬಂದುದನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೊಂದು ಎಂದಿಗೂ ಮಾಯದ ಗಾಯ. ಪುನೀತ್ ಕೇವಲ ನಟನಾಗಿದ್ದರೆ ಸಿನಿಪ್ರಿಯರಿಗೆ, ಅಭಿಮಾನಿಗಳಿಗೆ ಹೆಚ್ಚು ದುಃಖವಾಗುತ್ತಿದ್ದಿರಬಹುದು. ಆದರೆ ಜನಾನುರಾಗಿಯೂ ಹೃದಯವಂತನೂ ಆದ ಚೆಂದದ ವ್ಯಕ್ತಿಯೊಬ್ಬರ ಈ ಸಾವು ಎಲ್ಲಾ ವಯೋಮಾನದವರನ್ನೂ ಕಾಡಿದೆ. ಇಂಥಾ ದಿಢೀರ್ ಸಾವಿಗೆ ಕಾರಣವನ್ನು ಹುಡುಕುತ್ತಿದೆ. ಸಾವು ಸಹಜ ಎಂದ ಮೇಲೆ ಅದು ಬಂದಂತೆ ಸಹಜವಾಗಿ ಸ್ವೀಕರಿಸಬೇಕು ಎಂದು ಹೇಳುವುದು ಸುಲಭ. ಆದರೆ ಅಕಾಲದ ಸಾವನ್ನು ಸ್ವೀಕರಿಸುವುದು ಹೇಗೆ? ಅಕಾಲದ ಸಾವೆಂದರೆ ಏನು? ಸಾವಿಗೆ ಕಾಲ ಎನ್ನುವುದಿದೆಯೇ? ಎಂಬೆಲ್ಲಾ ಜಿಜ್ಞಾಸೆಗೆ ಮನ ತುಡಿಸುತ್ತದೆ. ನಮ್ಮ ಹಿರಿಯರು ಹೇಳುವಂತೆ ಅಥವಾ ನಾವು ಬೆಳೆದು ಬಂದ ರೂಢಿಯಲ್ಲಿ ತುಂಬು ಬಾಳನ್ನು ಅಪೇಕ್ಷಣೀಯ ಎನ್ನಲಾಗುತ್ತದೆ. ಇಲ್ಲಿ ‘ತುಂಬು ಬಾಳು ತುಂಬಿರುವ ತನಕ ತುಂಬಿ ತುಂಬಿ ಕುಡಿಯಬೇಕು’ ಎನ್ನುವ ಹಿರಿಮನಸ್ಸಿನ ಹಾರೈಕೆಯಿರುತ್ತದೆ. ‘ ಶತಮಾನಂ ಭವತಿ ಶತಾಯುಹ್ ಪುರುಷಃ ಶತೇಂದ್ರಿಯಃ ಆಯುಶ್ಯೇವೇಂದ್ರಿಯೇ ಪ್ರತಿತಿಷ್ಠತಿ’ ಎಂಬುದು ದೀರ್ಘಾಯುಶ್ಯ ಹಾಗೂ ಉತ್ತಮ ಆರೋಗ್ಯ ಹೊಂದಿರಿ ಎಂಬ ಸದಾಶಯ ಹೊಂದಿರುವ ಆಶೀರ್ವಾದ ಸ್ವರೂಪದ ಮಂತ್ರವನ್ನು ಆಗಾಗ್ಗೆ ಕೇಳುವ ಆಚರಣೆಗಳ ಜೊತೆ ಜೊತೆಗೆ ಬೆಳೆದು ಬಂದಿರುತ್ತೇವೆ. ಕೊನೆಗೆ ‘ನೂರು ವರ್ಷ ಸುಖವಾಗಿ ಬಾಳಿದರು’ ಎಂಬ ಸುಖಾಂತ್ಯವೇ ಆಗಿರಬೇಕೆನ್ನುವ ಅಪೇಕ್ಷೆಯಲ್ಲೇ ಎಲ್ಲಾ ಕತೆಗಳನ್ನು ಹೆಣೆಯುತ್ತೇವೆ. ಪುರಾಣಗಳಲ್ಲಿ ‘ಚಿರಂಜೀವಿ’ಗಳನ್ನು ಹುಟ್ಟಿಸಿ ವಿಚಿತ್ರ ಸಮಾಧಾನಪಡುವವರು ನಾವು. ‘ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ | ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ‘ ಎಂದು ಅವರನ್ನು ಹೆಸರಿಸುವ ಸಂಸ್ಕೃತ ಶ್ಲೋಕವಿದೆ. ಚಿರಂಜೀವಿಗಳಾಗಿರಿ, ಆಯುಶ್ಮಾನ್ಭವ ಎಂದು ಆಶೀರ್ವದಿಸುವ ರೂಢಿ ನಮ್ಮಲ್ಲಿದೆ. ಹೀಗಿರುವಾಗ, ಅಪಘಾತದ ಸಾವುಗಳು, ಅನಾರೋಗ್ಯದ ಕಾರಣಕ್ಕೆ ಬರುವ ಸಾವುಗಳನ್ನು ಸ್ವೀಕರಿಸುವ ಬಗೆ ಹೇಗೆ? ಮನಸ್ಸು ಯಾವಾಗಲೂ ದೀರ್ಘಾಯುಷ್ಯಕ್ಕೆ ಸಿದ್ಧವಾಗಿರುವಾಗ ಅಪಘಾತ, ಅನಾರೋಗ್ಯದ ಕಾರಣ ಅಕಾಲಿಕ ಸಾವು ಬಂದರೆ?! ಅಂಥ ಸಂದರ್ಭಗಳಲ್ಲಿ ನಮ್ಮ ಕೈ ಮೀರಿದ ವಿಷಯಕ್ಕೆ ಅತೀವ ದುಃಖವಾಗುವುದು ಸುಳ್ಳಲ್ಲ. ದೇಶಗಳ ಆಂತರಿಕ ರಾಜಕೀಯ ಕಲಹಕ್ಕೆ ಬಲಿಯಾಗಿ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ಸತ್ತ ಪುಟ್ಟ ಸಿರಿಯನ್ ಬಾಲಕ ‘ಅಲಾನ್ ಕುರ್ದಿ’ ಆಗಲಿ, ಭಾರತ ಯುದ್ಧದಲ್ಲಿ ವೀರ ಮರಣಕ್ಕೆ ಒಳಗಾದ ಪದೇ ಪದೇ ನೆನಪಿಗೆ ಬರುವ ‘ವೀರ ಅಭಿಮನ್ಯು’ವಾಗಲೀ, ಕೆವಿನ್ ಕಾರ್ಟರನ ಪುಲಿಟ್ಚರ್ ಪ್ರಶಸ್ತಿಯ ಚಿತ್ರದೊಳಗಿನ ಅಪೌಷ್ಠಿಕಾಂಶದ ‘ಆಫ್ರಿಕಾದ ಮಗು’ ವಾಗಲಿ, ಮಹಾಯುದ್ಧದ ಕ್ರೂರ ನೆನಪಾಗಿ ಕಾಡುವ ಅಣುಬಾಂಬಿನ ದಾಳಿಗೆ ಸಿಲುಕಿದ ಆ ಎರಡು ನಗರಗಳ ಕಂದಮ್ಮಗಳಾಗಲಿ.. ಅಕಾಲದ ಸಾವಿಗೆ ವಿನಾಕಾರಣ ಬಲಿಯಾದವರು. ಇಂಖಾ ಸಾವುಗಳು ಇಡೀ ಮನುಕುಲವನ್ನು ಕಾಡುತ್ತವೆ. ಹಾಗೆ ಕಾಡುವ ದೂರ ದೇಶಗಳ, ಇತಿಹಾಸ ಪುರಾಣಗಳ ಸಾವುಗಳ ನಡುನಡುವೆ ನಮ್ಮ ಸುತ್ತಳತೆಯಲ್ಲಿ ಘಟಿಸಿಬಿಡುವ ಪುನೀತರಂತಹ ಅದಮ್ಯ ಚೇತನಗಳ ಸಾವು ಕಂಗೆಡಿಸಿ ತಲ್ಲಣಗೊಳಿಸುತ್ತವೆ. ಹುಟ್ಟಿದ ಜೀವಿಗಳಿಗೆ ಸಾವು ಅನಿವಾರ್ಯವೇ. ಆದರೆ ಅದನ್ನು ನಿರೀಕ್ಷಿಸುತ್ತಾ ಯಾರೂ ಕುಳಿತಿರಲಾರರು. ಸಾವಿನಂತಹ ಅಂತಿಮ ಸತ್ಯವನ್ನು ಅರಿತಿದ್ದರೂ ಅದರ ರೀತಿ ರಿವಾಜುಗಳನ್ನು ನಮ್ಮ ಬಾಲಿಶ ಮನಸ್ಸು ಸ್ವೀಕರಿಸಲು ತಯಾರಿರುವುದಿಲ್ಲ. ವಾರ ಕಳೆದರೂ ಗರ ಬಡಿದಂತಿರುವ ಮನಸ್ಸಿಗೆ ದಿಕ್ಕು ತೋಚದಂತಾಗಿ ಬಿಡುವುದು ಸತ್ಯವೇ. ಆದರೂ ಈ ಅನಿರೀಕ್ಷಿತ ಆಘಾತದ ಸಂದರ್ಭದಲ್ಲಿ ದುಡುಕಿನ ಕೈಗೆ ಮತಿಕೊಟ್ಟು ಮಂಕಾದ ಮನಸ್ಥಿತಿಯಲ್ಲಿ ನಮ್ಮ ಸಾವಿಗೆ ನಾವೇ ಆಹ್ವಾನ ಕೊಡುವುದಿದೆಯಲ್ಲ ಅದೊಂದು ಪರಮ ಮೂರ್ಖತನದ ಕೆಲಸ. ಈಗಾಗಲೇ ಹಲವಾರು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದು ನಿಜಕ್ಕೂ ಬೇಸರದ ವಿಚಾರ. ಯಾವ ನೋವುಗಳೂ ಶಾಶ್ವತವಾಗಿರುವುದಿಲ್ಲ. ಸುಖ ದುಃಖಗಳು ಬಾಳಿನೆರಡು ಮುಖಗಳು. ಇದೊಂದು ಗಳಿಗೆ ಇದ್ದರೆ ಅದೊಂದು ಗಳಿಗೆ ಇರುತ್ತದೆ. ಇಂಗ್ಞೀಶಿನಲ್ಲಿ ಒಂದು ಪದವಿದೆ passing clouds ಎಂದು. ಇದನ್ನು ಯಾವುದಕ್ಕೂ ಹೋಲಿಸಬಹುದು. ಸುಖವಾಗಲಿ ದುಃಖವಾಗಲಿ ಸ್ಥಿರವಲ್ಲ. ಬೇಸರ ಭಾವ ಯಾವತ್ತಿಗೂ ಸ್ಥಿರವಲ್ಲ. ಹಾಗೆಯೇ ಸುಖವೂ ಶಾಶ್ವತವಲ್ಲ. ಇದನ್ನು ತಿಳಿದ ನಮ್ಮ ಹಿರಿಯರು ಬದುಕನ್ನು ಚಕ್ರಕ್ಕೆ ಹೋಲಿಸಿದ್ದರು. ಗಾಲಿ ಸುತ್ತುತ್ತಿರುವಾಗ ಬಂಡಿಯು ಚಲಿಸುವಂತೆ, ಜೀವನ ಚಕ್ರವು ಚಲಿಸಲು ಸುಖವೊಮ್ಮೆ ದುಃಖವೊಮ್ಮೆ ಮೇಲಾಟವಾಡಬಹುದು. ನಿರಂತರವಾಗಿ ಯಾವ ಅಡೆತಡೆಯೂ ಇಲ್ಲದೆ ಗುರಿಯನ್ನು ಮುಟ್ಟುವಂತೆ ಬದುಕಿನ ಬಂಡಿ ಚಲಿಸುವುದು ಅಸಾಧ್ಯ. ಸರ್ವ ಜೀವಿಗಳಿಗೂ ಅದರದ್ದೇ ಆದ ಕಷ್ಟಸುಖಗಳಿರುತ್ತವೆ. ಯಾವಾಗಲೂ ಒಂದೇ ರೀತಿಯ ಜಡಭಾವದಲ್ಲಿ ಬದುಕಲಾಗದು. ಚಲಿಸುವ ಗಾಲಿಯಂತೆ ನಮ್ಮ ಜೀವನ ಚಕ್ರವೂ ಚಲಿಸುತ್ತಿರಬೇಕು. ಬೆಳಕಿನಂಥ ಬುದ್ಧಿಯನ್ನಾವರಿಸುವ ಕತ್ತಲೆಯಂತಹ ಕ್ರೋಧ, ಮಂಕುತನವನ್ನು ನಿವಾರಿಸಿಕೊಳ್ಳಬೇಕು. ಮಬ್ಬು ಹಿಡಿಸುವ ಆಲೋಚನೆಗಳಿಂದ ಕಷ್ಟಪಟ್ಟಾದರೂ ಹೊರಬರಬೇಕು. ವಿಚಾರದ ಯೋಗ್ಯ ನಿರ್ಣಯಕ್ಕೆ ಮನಸ್ಸನ್ನು ತಾಲೀಮುಗೊಳಿಸಬೇಕು. ಈಗೀಗಂತೂ ಆತ್ಮಹತ್ಯೆಗಳು, ಕೊಲೆಗಳು ತೀರಾ ಸಾಮಾನ್ಯ ಎನ್ನುವಂತಾಗಿಬಿಟ್ಟಿವೆ. ‘ಕೊಂದರೆ ತೀರಿತೆ ಮಂದಿಯ ದುಃಖ!’ ‘ಆತ್ಮಹತ್ಯೆಯಿಂದ ಸಿಗುವುದೇ ನೋವಿಗೆ ಅಂತ್ಯ!’ ಎಂದು ಯಾರು ಯಾರನ್ನೋ ಕೇಳಬೇಕಾಗಿಲ್ಲ. ನಮ್ಮ ಮನಗಳನ್ನು ಸಂತೈಸಿಕೊಳ್ಳಬೇಕಾದ ಕಾಲವಿದು. ನಮ್ಮೊಡನೆ ಇರುವ ಕುಟುಂಬಕ್ಕೆ, ನಾವು ಬದುಕುತ್ತಿರುವ ಸಮಾಜಕ್ಕೆ ಜವಾಬ್ದಾರರಾಗಿರುವ ಬದ್ಧತೆ ನಮಗಿರಬೇಕು. ಕಳೆದುಕೊಂಡವರ ನೋವನ್ನು ಇತರರು ಹಂಚಿಕೊಳ್ಳಲಾಗದು. ‘ದುಃಖ ಭರಿಸುವ ಶಕ್ತಿ ಸಿಗಲಿ’ ಎಂಬ ನಾಲ್ಕು ಸಮಾಧಾನದ ಮಾತನಾಡುವ ಸಂದರ್ಭದಲ್ಲಿ ನಮ್ಮ ದುಡುಕಿನ ನಿರ್ಧಾರಗಳು ನೊಂದವರ ಹೃದಯವನ್ನು ಮತ್ತಷ್ಟು ಭಾರಗೊಳಿಸಬಾರದು. ಸಾವು ಬಂದಾಗ ಬರಲಿ. ಬಂದೇ ತೀರುವ ಅತಿಥಿಯನ್ನು ಇಂದೇ ಕರೆಯುವ ಹಠ ಯಾರಿಗೂ ಬೇಡ. ತಾನಾಗಿ ಬರಲಿರುನ ಸಾವಿಗೊಂದು ಘನತೆಯ ಬದುಕನ್ನು ಕಟ್ಟಿ ಕೊಡುವ… – ವಸುಂಧರಾ ಕದಲೂರು . ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ಅಂಕಣ ಸಂಗಾತಿ ಗಜಲ್ ಲೋಕ ಸಾಲಿಯವರ ಗಜಲ್ ಉದ್ಯಾನವನ… ನಮಸ್ಕಾರ… ಎಂದಿನಂತೆ ಇಂದೂ ಸಹ ನಾಡಿನ ಖ್ಯಾತ ಗಜಲ್ ಕಾರರೊಬ್ಬರ ಪರಿಚಯದೊಂದಿಗೆ ತಮ್ಮ ಮುಂದೆ ಬಂದಿದ್ದೇನೆ. ಓದಲು ತಾವು ಕಾತುರರಾಗಿದ್ದೀರೆಂದು ಬಲ್ಲೆ. ಸಮಯವನ್ನು ಹಾಳು ಮಾಡದೆ, ನೇರವಾಗಿ ವಿಷಯಕ್ಕೆ ಬರುತ್ತೇನೆ. “ಪ್ರೇಮಿಯ ಕಾರಣ ಇತರ ಎಲ್ಲ ಕಾರಣಗಳಿಂದ ಪ್ರತ್ಯೇಕವಾಗಿದೆ ಪ್ರೀತಿಯು ದೇವರ ರಹಸ್ಯಗಳ ಖಗೋಳ“ –ರೂಮಿ ಉರ್ದು ತುಂಬಾ ಕಾವ್ಯಾತ್ಮಕ ಭಾವದ ಭಾಷೆ. ‘ಕಾವ್ಯಾತ್ಮಕ ಭಾಷೆ’ ಎಂದರೆ ಆ ಭಾಷೆಯೂ ಶಬ್ಧಗಳಿಗಿರುವ ಅರ್ಥಬಾಹುಳ್ಯ ಎಂದರ್ಥ. ಇದು ಶಿಷ್ಟತೆಯ-ಸಭ್ಯತೆಯ ಸಂಸ್ಕೃತಿಯನ್ನು ಒಳಗೊಂಡಿದ್ದು, ಸುಸಂಸ್ಕೃತರ ಭಾಷೆಯಾಗಿದೆ. ಇದು ಶಾಯರಿಗೆ, ಅದರಲ್ಲೂ ಗಜಲ್ ಗೆ ಹೇಳಿ ಮಾಡಿಸಿದಂತಹ ಭಾಷೆ!! ಅದರ ಮೃದುತ್ವ, ಆರ್ತತೆ, ಲಾಲಿತ್ಯ, ನಾಲಿಗೆಯ ಮೇಲೆ ಸಕ್ಕರೆಯಂತೆ ಕರಗುವ, ಕಿವಿಗಳಲ್ಲಿ ಗಾಜಿನ ಗೆಜ್ಜೆಯಂತೆ ಕುಣಿಯುವ ಅದರ ಬಾಗು ಬಳಕು ಬೇರೆ ಯಾವ ಭಾಷೆಗೂ ದಕ್ಕಿಲ್ಲ!! ಈ ಹಿನ್ನೆಲೆಯಲ್ಲಿ ಗಜಲ್ ಪ್ರತಿ ಓದುಗನ ಹಾಗೂ ಪ್ರತಿ ಕೇಳುಗನ ಹೃದಯದೊಂದಿಗೆ ಸಂವಾದ ಮಾಡುತ್ತದೆ. ಇಂತಹ ಉರ್ದು ಗಜಲ್ ಪರಂಪರೆಯ ಚೌಕಟ್ಟನ್ನು ಮೀರದೆ, ಕನ್ನಡಕ್ಕೆ ಅತ್ಯಂತ ಸುಂದರವಾದ ಹಾಗೂ ರಸಪೂರ್ಣವಾದ ಗಜಲ್ ಗಳನ್ನು ನೀಡಿದ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು. ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಇವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಸಾಲಿಯವರು ಕವಿಗಳಾಗಿ, ಕಥೆಗಾರರಾಗಿ, ಅನುವಾದಕರಾಗಿ, ಗಜಲ್ ಕಾರರಾಗಿ ಹಾಗೂ ಉತ್ತಮ ಸಂಪಾದಕರಾಗಿ ಹೆಸರು ಮಾಡಿದ್ದಾರೆ. ಇವರ ಒಟ್ಟು 26 ಕೃತಿಗಳಲ್ಲಿ 13 ಕೃತಿಗಳು ಸೃಜನಶೀಲತೆಗೆ ಸಾಕ್ಷಿಯಾಗಿದ್ದರೆ 10 ಕೃತಿಗಳು ಅನುವಾದವಾಗಿವೆ. ಇನ್ನೂ ಉಳಿದ 03 ಕೃತಿಗಳು ಸಂಪಾದನೆಯಾಗಿವೆ. ಇವರ ‘ಮೌನ’ ಎಂಬ ಗಜಲ್ ಸಂಕಲನವು ಓದುಗರ ಹೃದಯವನ್ನು ಗೆದ್ದು ಹಲವು ಪ್ರಕಟಣೆಗಳನ್ನು ಕಂಡಿದೆ. ಇನ್ನೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ‘ಕನ್ನಡ ಗಜಲ್’ ಎಂಬ ಸಂಪಾದಿತ ಕೃತಿಯು ಗಜಲ್ ಸಾಹಿತ್ಯ ಲೋಕದಲ್ಲಿ ಒಂದು ಮೈಲಗಲ್ಲಾಗಿದೆ. ಇದು ಹಲವಾರು ಗಜಲ್ ಕಾರರ ಗಜಲ್ ಗಳನ್ನು ಒಳಗೊಂಡಿದ್ದು ಗಜಲ್ ಕಾರರಿಗೆ ಆಕರ ಗ್ರಂಥವಾಗಿದೆ. ಗಜಲ್ ನ ಸರಿಯಾದ ಮಾದರಿಯನ್ನು ತಿಳಿಸಿಕೊಡುವ, ಈ ಪ್ರಕಾರವನ್ನು ಎಲ್ಲ ನೆಲೆಗಳಿಂದ ಪರಾಮರ್ಶನಕ್ಕೊಳಪಡಿಸಿರುವ ವಿದ್ವತ್ಪೂರ್ಣ ಪ್ರಬಂಧಗಳು ಮತ್ತು ಪ್ರಾತಿನಿಧಿಕ ರಚನೆಗಳ ಸಂಗ್ರಹ, ಸಂಪಾದನೆಯೇ ‘ಗಾಳಿಗೆ ಬಳುಕಿದ ಬೆಳಕು’ ಕೃತಿ. ಇದು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ. ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್ … ಭಾಷೆಗಳಲ್ಲಿ ಪ್ರಭುತ್ವ ಹೊಂದಿರುವ ಇವರು ಅನ್ಯ ಭಾಷೆಯ ಹಲವು ಮೌಲ್ಯಿಕ ಕೃತಿಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಅವುಗಳಲ್ಲಿ ‘ಇಂದ್ರಸಭಾ’ವೂ ಒಂದು. ಇದು ಉತ್ತಮ ಸದಭಿರುಚಿಯ ಗಜಲ್ ಗಳಿಂದ ಕೂಡಿದ್ದು, ಓದುಗರ ನೆಚ್ಚಿನ ಕೃತಿಯಾಗಿದೆ. ಸಾಲಿಯವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಲವು ಪ್ರಶಸ್ತಿ, ಪುರಸ್ಕಾರಗಳು, ಗೌರವ, ಸನ್ಮಾನಗಳು ಲಭಿಸಿವೆ. ಅವುಗಳಲ್ಲಿ ಕಣವಿ ಕಾವ್ಯ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಗುಲ್ಬರ್ಗಾ ವಿ.ವಿ ರಾಜ್ಯೋತ್ಸವ ಪುಸ್ತಕ ಬಹುಮಾನ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ (ಎರಡು ಸಲ) ಕಟ್ಟಿಮನಿ ಯುವ ಸಾಹಿತ್ಯ ಪ್ರಶಸ್ತಿ, 2020ನೇ ಸಾಲಿನ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ…. ಮುಂತಾದವುಗಳು. ಇವರ ಬರವಣಿಗೆಗಳು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳಾಗಿವೆ. ಇವರ ಕೆಲವು ಬಿಡಿ ಬಿಡಿ-ಕತೆಗಳು ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷಿಗೆ ಅನುವಾದಗೊಂಡಿವೆ. ಗಜಲ್ ಕಾವ್ಯ ಪ್ರಕಾರವು ಇಂದು ಸಾಹಿತ್ಯ ಪ್ರೇಮಿಗಳಿಗೆ ಮೃಷ್ಟಾನ್ನ ಭೋಜನವನ್ನು ಉಣಬಡಿಸುತ್ತಿದೆ, ಅದೂ ತನು-ಮನಗಳೆರಡಕ್ಕೂ!! ಈ ನೆಲೆಯಲ್ಲಿ ಗಜಲ್ ಗಜಲ್ ಗೋ ಅವರ ಅಹಮಿಕೆಯನ್ನು ನಿರಸನಗೊಳಿಸುತ್ತದೆ. ಯಾವ ಶ್ರೇಷ್ಠ ಗಜಲ್ ಅಹಮಿಕೆಯಿಂದ ರೂಪುಗೊಳ್ಳುವುದಿಲ್ಲ. ಅಹಮಿಕೆ ಯಾವ ಮಹತ್ವದ ವಸ್ತುವಿಗೂ ಜನ್ಮ ನೀಡದು. ಅಂತೆಯೇ ಗಜಲ್ ಎಂದರೆ ಬದುಕುವ ಕಲೆ, ಉಸಿರಾಡುವ ವಿಧಾನ, ಪ್ರೀತಿಯ ಊರುಗೋಲು! ಹೃದಯವನ್ನು ವಿಹ್ವಲಗೊಳಿಸುವ ಅನುಕ್ತ ವ್ಯಥೆಯಲ್ಲಿ ಮೀಯುತ್ತಲೇ ಪ್ರೇಮ ಮತ್ತು ಸೌಂದರ್ಯದ ಬಿಸಿಲು ನೆರಳಿನ ಬೀದಿಯಲ್ಲಿ ವಿಹರಿಸಿದಂತಹ ಮಧುರಾನುಭವವನ್ನು ಗಜಲ್ ನೀಡುತ್ತದೆ. ತನ್ನ ಕೊರಳ ಇನಿದನಿಯಿಂದಲೇ ಜಗದ ಕರುಳಿನ ಮಿಡಿತವನ್ನು ಆಲಿಸುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಮಧುಬಾಲೆಯ ಅಂತಃಕರಣದ ಬೊಗಸೆಯಲ್ಲಿ ಇಡೀ ಬ್ರಹ್ಮಾಂಡವೇ ಇದೆ. ಕನ್ನಡ ಗಜಲ್ ಪರಂಪರೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿರುವವರಲ್ಲಿ ಸಾಲಿಯವರೂ ಪ್ರಮುಖರು. ಇವರ ಗಜಲ್ ಗಳಲ್ಲಿ ಭಾವತೀವ್ರತೆ, ರೂಪಕಗಳ ದಿಬ್ಬಣವಿದೆ, ಸಂಯಮದ ನೆಲೆಯಲ್ಲಿ ಹುಡುಕುವ ಸತ್ಯದ ಹುಡುಕಾಟವಿದೆ. ಇಡೀ ಪರಪಂಚವೇ ತಮ್ಮ ತಮ್ಮ ನಿರಾಳತೆಯನ್ನು ಅರಸುತ್ತ ದೂರ ಉಳಿದ ಮಾನವೀಯ ದುರಂತವನ್ನು ಸಾಲಿಯವರು ತಮ್ಮ ಗಜಲ್ ಗಳಲ್ಲಿ ಸೆರೆ ಹಿಡಿದಿದ್ದಾರೆ. “ಜೋರು ಬಿರುಗಾಳಿಗೆದುರಾಗಿ ಪುಟ್ಟ ಹಣತೆಯನಿಟ್ಟಿದ್ದು ನಿಮ್ಮದೇ ತಪ್ಪು ಬೀಸು ಪ್ರವಾಹಕ್ಕೆದುರು ಸಣ್ಣ ನಾವೆಯ ತೇಲಿಬಿಟ್ಟಿದ್ದು ನಿಮ್ಮದೇ ತಪ್ಪು“ ಈ ಷೇರ್ ಸಾಮಾಜಿಕ ವ್ಯವಸ್ಥೆಯ ಅಸಮಾನತೆಯ ವಿರುದ್ಧ ಮೌನ ಪ್ರತಿಭಟನೆ ಮಾಡುತ್ತಿದೆ. ಸಮಸ್ಯೆಯ ಪರಿಹಾರಕ್ಕೆ ಜೋಶ್ ಜೊತೆಗೆ ಹೋಶ್ ಬೇಕು ಎಂಬುದನ್ನು ಅರಹುತ್ತಿದೆ. ಈ ಹಿನ್ನೆಲೆಯಲ್ಲಿ ‘ನಿಮ್ಮದೇ ತಪ್ಪು’ ಎಂಬ ರದೀಫ್ ತುಂಬಾ ಸಶಕ್ತವಾಗಿ ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚುವಂತಿದೆ. “ಸಾಲಿ ಆಡಿದ ಮಾತಿಗೇನುಂಟು? ಒಂದೇ ಹುಟ್ಟು, ಅರ್ಥ ಮತ್ತು ಸಾವು ಸುಮ್ಮನಿದ್ದೇ ಸಾವಿರ ಮಾತಾಡುತ ನೂರು ಭಾವಗಳ ಮೆರೆಸಿಹುದು ಮೌನ“ ಎನ್ನುವ ಮಕ್ತಾ ಮೌನದೊಂದಿಗೆ ಮಾತಿಗಿಳಿಯುತ್ತದೆ. ಮಾತು ಬದುಕಿನಲ್ಲಿರುವ ವೈರುಧ್ಯಗಳನ್ನು ತೋರಿಸಿದರೆ, ಮೌನ ವೈರುಧ್ಯಗಳನ್ನು ಪರಿಚಯಿಸುತ್ತದೆ. ಅಂತೆಯೇ ಬಿಶರ್ ಇಬ್ನ್ ಹರೀತ್ ರವರು ಹೇಳಿದ ಮಾತೊಂದನ್ನು ಇಲ್ಲಿ ಉಲ್ಲೇಖಿಸಬಹುದು. “ನಿಮಗೆ ಮಾತಾಡುವುದು ಖುಷಿಯಾಗುತ್ತದೆಂದು ಅನಿಸಿದಾಗ ಮೌನವಾಗಿರಿ! ಮೌನ ಖುಷಿ ಕೊಡುವಾಗ ಮಾತಾಡಿ!” ಸಿರಿ ಸಂಪತ್ತು ಇರುವಾಗಲೂ ಬಡತನವನ್ನು ಅನುಭವಿಸುವುದು, ಅಧಿಕಾರವಿದ್ದಾಗಲೂ ವಿನೀತ ಭಾವ ಹೊಂದಿರುವಂತಹ ಸೂಫಿ ನೆಲೆಯ ಚಿಂತನೆಯನ್ನು ಪ್ರತಿಧ್ವನಿಸುತ್ತದೆ!! ಪ್ರೀತಿ, ಪ್ರೇಮ, ಪ್ರಣಯ, ಮಧುಶಾಲೆ… ಮುಂತಾದ ಮೂಲ ಗುಣಗಳೊಂದಿಗೆ ಕಾಲಕ್ಕನುಗುಣವಾಗಿ ತನ್ನನ್ನು ತೆರೆದುಕೊಳ್ಳುತ್ತಿರುವ ಗಜಲ್ ನ ಹೆಜ್ಜೆ ಗುರುತುಗಳನ್ನು ಚಿದಾನಂದ ಸಾಲಿಯವರ ಗಜಲ್ ಗಳಲ್ಲಿ ಗುರುತಿಸಬಹುದು. ಇಂತಹ ನೂರಾರು ಗಜಲ್ ಗಳು ಇವರಿಂದ ಹೂರಬರಲಿ, ಅಕಾಡೆಮಿಕ ಕಾರ್ಯಾಗಾರಗಳು ನಡೆಯುವಂತಾಗಲಿ ; ಅವುಗಳು ಪ್ರಕಟವಾಗಿ ಓದುಗರ ಜ್ಞಾನದ ದಾಹವನ್ನು ತಣಿಸಲಿ ಎಂದು ಶುಭಕೋರುತ್ತನೆ. “ಪ್ರೇಮದಲಿ ಸ್ವಲ್ಪ ಎಚ್ಚರಿಕೆಯಿಂದಿರುವುದು ಒಳಿತು ಇಲ್ಲವಾದರೆ ಬಳಿಕ ಪಶ್ಚಾತ್ತಾಪ ಪಡಬೇಕಾದಿತು“ -ಬುಲ್ಲೇ ಶಾ ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಬ್ಬ ಗಜಲ್ ಮಾಂತ್ರಿಕರೊಂದಿಗೆ ನಿಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೂ ಧನ್ಯವಾದಗಳು… ಡಾ. ಮಲ್ಲಿನಾಥ ಎಸ್. ತಳವಾರ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ಅಂಕಣ ಸಂಗಾತಿ ತೊರೆಯ ಹರಿವು ಭಾವಶುದ್ಧ ಇರದವರಲ್ಲಿ…. ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು. ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು. ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು. ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು. ಭಾವ ಶುದ್ಭವಿಲ್ಲದವರಲ್ಲಿ ಧೂಪನೊಲ್ಲೆಯಯ್ಯಾ ನೀನು. ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು. ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾನೀನು. ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು. ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ – ಅಕ್ಕ ಮಹಾದೇವಿ. ತನು ಮನ ಕರಗದವರು, ಹದುಳಿಗರಲ್ಲದವರು, ಅರಿವು ಕಣ್ತೆರೆಯದವರು, ಭಾವಶುದ್ಧ ಇಲ್ಲದವರು, ಪರಿಣಾಮಿಗಳಲ್ಲದವರು, ತ್ರಿಕರಣ ಶುದ್ಧವಿಲ್ಲದವರು, ಹೃದಯ ಕಮಲ ಅರಳದವರು ಇಂಥವರಿಂದ ಯಾವುದನ್ನೆಲ್ಲಾ ‘ಒಲ್ಲೆ’ ಎನ್ನುವುದು ಕೇವಲ ದೇವರಿಗೆ ಇರಬೇಕಾದ ಭಾವವೇ? ಮಾನವರೂ ಈ ಕುರಿತು ಗಟ್ಟಿ ನಿಲುವನ್ನು ತೆಗೆದುಕೊಳ್ಳಬೇಕೆ, ಬೇಡವೆ? ಎಂದು ಚಿಂತಿಸುವಂತೆ ಈ ವಚನ ಮಾಡುತ್ತದೆ. ೧೨ನೆಯ ಶತಮಾನದ ವಚನಕಾರರು, ಸಮಾಜೋ-ಧಾರ್ಮಿಕ ಸುಧಾರಣೆಯ ಹರಿಕಾರರು. ಡಾಂಭಿಕತೆಯ ಕಟು ವಿರೋಧಿಗಳು ಹಾಗೂ ಗೊಡ್ಡು ಆಚರಣೆಯ ತೀವ್ರ ವಿಮರ್ಶಕರು. ವಚನಕಾರರಲ್ಲಿದ್ದ ಈ ಬಗೆಯ ಚಿಕಿತ್ಸಕ ಗುಣವು ಅವರಿಂದ ಅದೆಷ್ಟು ಚೆನ್ನಾದ ವಚನಗಳನ್ನು ರಚಿಸುವಂತೆ ಮಾಡಿದೆ ಎಂದರೆ, ವಚನಕಾರರ ರಚನೆಗಳ ಆಶಯವನ್ನು ೨೧ ನೆಯ ಶತಮಾನದ ನಮ್ಮ ಜೀವನಕ್ರಮಕ್ಕೆ ಹೊಂದಿಸಿಕೊಳ್ಳಬೇಕಾಗಿ ಬಂದಿರುವುದು ಆಶ್ಚರ್ಯವಾದರೂ ತೀವ್ರ ವಿಷಾದ ಎನಿಸುತ್ತದೆ. ಏಕೆಂದರೆ, ಹೆಚ್ಚು ಕಡಿಮೆ ಒಂದು ಸಹಸ್ರಮಾನದ ಅಂತರವಿದ್ದರೂ ಮಾನವರ ವ್ಯಕ್ತಿತ್ವಗಳಲ್ಲಿ ಬದಲಾವಣೆ ಆಗದೆ, ಆಗಿನ ರಚನೆಗಳೇ ನಮಗೆ ಇಂದಿಗೂ ಪಾಠಗಳಾಗುತ್ತಿವೆಯಲ್ಲಾ, ಎಂದು. ಒಂದು ಪುಟ್ಟ ಮಗು ಕೂಡ ನಿಸ್ಪೃಹ ಮನಸ್ಸಿಲ್ಲದವರಿಂದ ಮುದ್ದು ಮಾಡಿಸಿಕೊಳ್ಳಲು ನಿರಾಕರಿಸುವುದನ್ನು ನಾವು ಕಾಣಬಹುದು. ಬಸವಣ್ಣ, ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ….’ ಬೇಡ ಎನ್ನುವ ನಿಷೇಧಾರ್ಥಕ ಪದವನ್ನು ಬಳಸಿ ಹೇಳಿದ ಎಲ್ಲಾ ಬೇಡಗಳೂ ಯಾವ ಕಾಲಕ್ಕೂ ವರ್ಜ್ಯಗಳೇ.. ಬದುಕಿನಲ್ಲಿ ಮೌಲ್ಯಗಳನ್ನು ಸ್ವೀಕರಿಸಬೇಕು. ಮೌಲ್ಯಗಳ ಅಪಮೌಲೀಕರಣ ಮಾಡಬಾರದು. ಆದರೆ ಆಗುತ್ತಿರುವುದೇನು? ಗಾಂಧೀ ಕ್ಲಾಸು, ಸತ್ಯ ಹರಿಶ್ಚಂದ್ರ, ಮಹಾ ಶರಣ.. ಮೊದಲಾದ ಪದಗಳನ್ನು ಮೂದಲಿಕೆಗೆ ಸಂವಾದಿಯಾಗಿ ಬಳಸುತ್ತಿರುವುದು ಮನೋವ್ಯಾಧಿ ಅಲ್ಲದೆ ಮತ್ತೇನು? ನಮ್ಮ ಹಿರಿಯರು, “ಒಳ್ಳೆಯವರು ಇರೋ ಹೊತ್ತಿಗೆ ಕಾಲಕಾಲಕ್ಕೆ ಮಳೆ ಬೆಳೆ ಆಗ್ತಿರೋದು” ಎಂಬ ಮಾತನ್ನು ಪದೇ ಪದೇ ಹೇಳುತ್ತಿರುತ್ತಾರೆ. ಎಂದರೆ, ಒಳ್ಳೆಯವರಾಗಿ ಇರುವುದು ಅತ್ಯಂತ ಉದಾತ್ತ ಮೌಲ್ಯ. ಹಾಗಾದರೆ, ಒಳ್ಳೆಯತನದ ವ್ಯಾಖ್ಯಾನ ಏನು ಎಂದರೆ ಹೇಗೆ ವಿವರಿಸುವುದು? ‘ಸರ್ವರೊಳಗೆ ಒಂದಾಗಿ ಬದುಕುವ ಗುಣ’, ‘ಅಂತರಂಗ ಬಹಿರಂಗ ಶುದ್ಧಿ’ ಹೊಂದಿರುವ ಭಾವ, ‘ನಡೆನುಡಿಗಳು ಒಂದಾಗಿಹ ರೀತಿ’… ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ‘ಒಳಿತು ಮಾಡು ಮನುಶಾ.. ನೀ ಇರೋದು ನಾಕು ದಿವಸಾ…’ ಎಂಬ ತತ್ವಪದದ ರೀತಿ ಇರುವ ಗೀತೆಯೊಂದು ನಾಕು ದಿನ ಇದ್ದು ಆಮೇಲೆ ಬಿದ್ದು ಹೋಗುವ ಮನುಷ್ಯರು ತಮ್ಮ ಅಶಾಶ್ವತ ಬದುಕಿನಲ್ಲಿ ಒಳಿತು ಮಾಡಬೇಕಾದ ಮಹತ್ವವನ್ನು ಹೃದಯ ತುಂಬಿ ಬರುವಂತೆ ಅಭಿವ್ಯಕ್ತಿಸುತ್ತದೆ. ‘ಮಾನವ ಜನ್ಮ ದೊಡ್ಡದೂ ಇದ ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ…’ ಎನ್ನುವ ದಾಸವಾಣಿಯೂ ಸಹ ಸಕಲ ಜೀವರಿಗೆ ಲೇಸು ಬಯಸುವಂತೆ ಬದುಕಬೇಕಾದ ಲೋಕ ಧರ್ಮವನ್ನು ಸಾರುತ್ತದೆ. ಲೋಕಧರ್ಮವೆಂದು ಯಾವುದನ್ನು ಕರೆಯುತ್ತೇವೆಯೋ ಅವೆಲ್ಲವೂ ಸಕಲ ಜೀವಾತ್ಮರ ಲೇಸನ್ನು ಬಯಸುವಂತಹವೇ ಆಗಿವೆ. ಸ್ವಾರ್ಥ ಕಳೆದ ಜೀವ ನಿಸ್ವಾರ್ಥದಿಂದ ಹಲವು ಲೋಕೋಪಯೋಗಿ ಕೆಲಸಗಳನ್ನು ಮಾಡುವುದು. ಬಾಗದ ಹೊರತು ಬೀಗಬಾರದು ಎಂಬ ಮಾತೊಂದಿದೆ. ಆದರೆ ಬೀಗುವವರ ಜಾತ್ರೆಯಲ್ಲಿ ಬಾಗುವವರನ್ನು ಯಾರೂ ಕಾಣಲಾರದ ಸ್ಥಿತಿ ಈಗ ನಿರ್ಮಾಣಲಾಗುತ್ತಿದೆ. ಅದೃಷ್ಟವಶಾತ್, ಕೆಲವು ಇ-ಮಾಧ್ಯಮಗಳು ಅವರವರಿಗೆ ವೈಯಕ್ತಿಕ ವೇದಿಕೆಯನ್ನು ಕಲ್ಪಿಸಿಕೊಟ್ಟು ಸಮಾಧಾನ ಹೇಳುತ್ತಿವೆ. ಇದು ವಿರೋಧವಾದದ್ದೂ ಉಂಟು. ಇಂಥಾ ಮಾಧ್ಯಮಗಳೂ ಅನಿಯಂತ್ರಿತ ಮನಸ್ಸನ್ನು ಒತ್ತಕ್ಕೆ ದೂಡಿರುವುದುಂಟು. ವೈಯಕ್ತಿಕ ನೆಲೆಯ ಉದ್ಧಾರಕ್ಕಿಂತ ಸಮಷ್ಟಿಯ ಲೇಸನ್ನು ಬಯಸಿ ಬದುಕುವವರು ಇಂದು ಬೇಕಾಗಿದ್ದಾರೆ. ನರಮನುಷ್ಯರ ಆಯಸ್ಸು ಅಲ್ಪಕಾಲದ್ದಾದರೂ, ಅವರ ಕೊಡುಗೆ ಸುದೀರ್ಘ ಪರಿಣಾಮಗಳನ್ನು ಬೀರುತ್ತವೆ. ಶುದ್ಧತೆ ಎನ್ನುವುದು ಮೇಲ್ನೋಟದ ಸ್ವಚ್ಛತೆ ಆಗಬಾರದು. ಅಂತರಂಗ ಬಹಿರಂಗ ಶುದ್ಧಿ ಹೊಂದದವರನ್ನು ಮೆಚ್ಚಲಾರನು ಪರಮಾತ್ಮ ಎಂದ ಬಸವಣ್ಣನವರ ವಚನದ ತಿರುಳನ್ನು ಗ್ರಹಿಸಿ, ಗುಣಗ್ರಾಹಿಗಳಾದರೆ ಬದುಕು ನಮ್ಮದೂ ಸಹ್ಯವಾಗುವುದು ಜೊತೆಗೆ ನಮ್ಮೊಡನೆ ಬಾಳುತ್ತಿರುವ ಸಮಾಜ ಜೀವಿಗಳದ್ದೂ ಸುಂದರವಾಗುವುದು. ನಿರ್ಮಾಪಕರು ನಾವೇ ಆಗಿರುವುದರಿಂದ ನಾವು ನಿರ್ಮಿಸುವ ಕೃತಿ ಕಲಾಕೃತಿ ಎನಿಸಿಕೊಳ್ಳುವಂತೆ ಮಾಡುವುದೂ ಸಹ ನಮ್ಮ ಕೈಯಲ್ಲೇ ಇರುತ್ತದೆ. ಒಳಗೊಂದು ಹೊರಗೊಂದು ಮಾಡುವವರೇ ಚೆನ್ನಾಗಿ ಬದುಕುತ್ತಾರೆ ಎಂಬ ಅಪಾಯಕಾರಿ ನಿಲುವಿಗೆ ಕೆಲವೊಮ್ಮೆ ಬಂದು ನಿಲ್ಲುತ್ತೇವೆ. ಇದು ಹತಾಶ ಮನಸ್ಸಿನ ನಿರ್ಧಾರ. ಸುತ್ತಲಿನ ಕ್ರಿಯೆಯು ವ್ಯತಿರಿಕ್ತವಾಗಿದ್ದರೆ ಪ್ರತಿಕ್ರಿಯೆಯೂ ಹಾಗೆಯೇ ಋಣಾತ್ಮಕವಾಗಿರುತ್ತದೆ. ಆದರೆ, ತೆಗೆದುಕೊಂಡ ಗಟ್ಟಿ ನಿರ್ಧಾರಗಳು ಬಹಳ ನಿರೀಕ್ಷಿತ ಶುಭ ಫಲವನ್ನು ನೀಡುವಲ್ಲಿ ಸಮಯ ಬೇಡುತ್ತವೆ. ನೆಟ್ಟ ಬೀಜಗಳು ಮೊಳೆತು ಚಿಗುರಿ ಹೂ-ಹಣ್ಣಿನ ಫಲ ನೀಡಲು ಸಮಯಾವಕಾಶ ಕೋರುವುದನ್ನು ನೆನೆದು ಸಮಾಧಾನಿಗಳಾಗಿರಬೇಕು. ಅಲ್ಲಿಯವರೆಗೂ ತನು ಮನ ಭಾವ ಶುಧ್ಧತೆಯನ್ನು ಪರಿಣಾಮಕಾರಿಯಾಗಿ ಹೊಂದಬೇಕು. ತೀವ್ರತೆ ಇರದ ಯಾವುದೂ ಪರಿಣಾಮಕಾರಿಯಲ್ಲ ಎನ್ನುವುದನ್ನು ಮರೆಯಬಾರದು. ಹಾಗೆಂದು ತೀವ್ರತೆ ತರಲೋಸುಗವೇ ಅನಗತ್ಯ ಒತ್ತಡ ನಿರ್ಮಿಸಿಕೊಂಡು ತೊಳಲಾಡಬಾರದು. – ವಸುಂಧರಾ ಕದಲೂರು. ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—48 ಮತ್ತೆ ಮರುದನಿಗೊಂಡ ಅಸ್ಪೃಶ್ಯತೆ ನೋವುಗಳು…… ನನ್ನ ವಿವಾಹವೇನೋಸಹಜ ಪ್ರಕ್ರಿಯೆಯಂತೆ ನಿರಾತಂಕವಾಗಿ ನಡೆಯಿತು. ಹಲವರು ಶುಭಹಾರೈಕೆಗಳಿಂದ ನಮ್ಮ ನಿಲುವುಗಳನ್ನು ಬೆಂಬಲಿಸಿದರು. ಕೆಲವರು ನೇರ ನನ್ನ ಕಿವಿಗೂ ಕೇಳಿಸುವಂತೆ ಟೀಕಾಸ್ತ್ರಗಳ ಬಳುವಳಿಯನ್ನೂ ಕೊಡಮಾಡಿದರು. ಬಹುತೇಕ ನಮ್ಮ ಜಾತಿಯ ಬಂಧುಗಳಿಗೆ ನಾನು ಅಂತರ್ಜಾತಿಯ ವಿವಾಹ ಮಾಡಿಕೊಂಡದ್ದು ಸಮಂಜಸವೆನಿಸಲಿಲ್ಲ. “ಉತ್ತಮ ಶಿಕ್ಷಣ ಪಡೆದು ಒಂದು ಒಳ್ಳೆಯ ಉದ್ಯೋಗದಲ್ಲಿ ಇದ್ದವನು ಸ್ವಜಾತಿಯ ಹುಡುಗಿಯನ್ನೇ ಮದುವೆ ಮಾಡಿಕೊಂಡು ಸ್ವಜಾತಿಯ ಹುಡುಗಿಯೊಬ್ಬಳಿಗೆ ಬದುಕು ನೀಡಬಹುದಿತ್ತು. ಓದಿದ ಮತ್ತು ಉತ್ತಮ ಉದ್ಯೋಗ ಪಡೆದ ಯುವಕರೆಲ್ಲ ಹೀಗೆ ಬೇರೆ ಸಮುದಾಯದ ಹುಡುಗಿಯನ್ನು ಇಷ್ಟಪಟ್ಟು ಮದುವೆ ಮಾಡಿಕೊಂಡರೆ ನಮ್ಮ ಸಮುದಾಯದ ಯುವತಿಯರ ಭವಿಷ್ಯದ ಗತಿಯೇನು? ಇದು ಸ್ವಜಾತಿಗೆ ಮಾಡಿದ ಅನ್ಯಾಯವೇ ಅಲ್ಲವೇ?” ಇತ್ಯಾದಿ ತರ್ಕಗಳೂ ಅಲ್ಲಲ್ಲಿ ವ್ಯಕ್ತವಾದವು. ರಾಮಕೃಷ್ಣ ಗುಂದಿ ಕನ್ನಡದಖ್ಯಾತಕತೆಗಾರ. ಅವಾರಿ, ಕಡಲಬೆಳಕಿನದಾರಿಗುಂಟ, ಅತಿಕ್ರಾಂತ, ಸೀತೆದಂಡೆಹೂವೇ …ಈನಾಲ್ಕುಅವರಕಥಾಸಂಕಲನಗಳು. ಅವರಸಮಗ್ರಕಥಾಸಂಕಲನಸಹಈಚೆಗೆಪ್ರಕಟವಾಗಿದೆ.ಯಕ್ಷಗಾನಕಲಾವಿದ. ಕನ್ನಡಉಪನ್ಯಾಸಕರಾಗಿಅಂಕೋಲಾದಜೆ.ಸಿ.ಕಾಲೇಜಿನಲ್ಲಿಸೇವೆಪ್ರಾರಂಭಿಸಿ, ಕಾರವಾರದದಿವೇಕರಕಾಲೇಜಿನಲ್ಲಿಪ್ರಾಂಶುಪಾಲರಾಗಿಕರ್ತವ್ಯನಿರ್ವಹಿಸಿನಿವೃತ್ತರಾಗಿದ್ದಾರೆ. ಯಕ್ಷಗಾನಅಕಾಡೆಮಿಸದಸ್ಯರಾಗಿಸೇವೆಸಲ್ಲಿಸಿದ್ದಾರೆ. ಮಗಅಮೆರಿಕಾದಲ್ಲಿಸಾಫ್ಟ್ವೇರ್ಎಂಜಿನಿಯರ್. ಅಗೇರಸಮುದಾಯದಿಂದಬಂದಗುಂದಿಅವರುಅದೇಜನಾಂಗದಬಗ್ಗೆಪಿಎಚ್ಡಿಪ್ರಬಂಧಮಂಡಿಸಿ, ಡಾಕ್ಟರೇಟ್ಸಹಪಡೆದಿದ್ದಾರೆ . ದಲಿತಜನಾಂಗದಕಷ್ಟನಷ್ಟನೋವು, ಅವಮಾನ, ನಂತರಶಿಕ್ಷಣದಿಂದಸಿಕ್ಕಬೆಳಕುಬದುಕುಅವರಆತ್ಮಕಥನದಲ್ಲಿದೆ. ಮರಾಠಿದಲಿತಸಾಹಿತಿಗಳ,ಲೇಖಕರಒಳನೋಟ , ಕನ್ನಡನೆಲದದಲಿತಧ್ವನಿಯಲ್ಲೂಸಹಇದೆ. ರಾಮಕೃಷ್ಣಗುಂದಿಅವರಬದುಕನ್ನುಅವರಆತ್ಮಕಥನದಮೂಲಕವೇಕಾಣಬೇಕು. ಅಂತಹನೋವಿನಹಾಗೂಬದುಕಿನ ಚಲನೆಯಆತ್ಮಕಥನವನ್ನುಸಂಗಾತಿ ..ಓದುಗರಎದುರು, ಕನ್ನಡಿಗರಎದುರುಇಡುತ್
ಗಜಲ್ ಎಂಬುದು ಆತ್ಮದ ಪಿಸುಮಾತು. ಹೃದಯದ ಮಾತುಗಳು ಜೀವಕಾರುಣ್ಯದಿಂದ ಸ್ನಿಗ್ಧವಾಗಿರುತ್ತವೆ. ಸಕಲ ಜೀವಿಗಳೊಂದಿಗಿನ ಪ್ರೇಮಭಾವದಿಂದ ಮಾಧುರ್ಯವನ್ನು ಪಡೆಯುತ್ತವೆ
ಅಂಕಣ ಬರಹ
ಸಾಧಕಿಯರ ಯಶೋಗಾಥೆ
‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ
ಅಂಕಣ ಬರಹ ತೊರೆಯ ಹರಿವು ಅಮ್ಮನಾಗಿ ಬರೆಯುವಾಗ ನಾನೊಬ್ಬ ಹೊರಗೆ ದುಡಿಯಲು ಹೋಗುವ ಆಧುನಿಕ ಕಾಲದ ಅಮ್ಮ. ವೃತ್ತಿಯ ಜೊತೆಗೆ ಕೆಲವು ಪ್ರವೃತ್ತಿಗಳಿವೆ. ಅದರಲ್ಲೂ ಓದು – ಬರವಣಿಗೆ ಎಂಬುದು ನನ್ನ ಪ್ರೀತಿಯ ಹವ್ಯಾಸ. ಆದರೆ, ಈ ಹವ್ಯಾಸಿ ಬರವಣಿಗೆ ಅನ್ನುವುದು ಯಾವ ಸಮೀಕ್ಷೆ ಅಥವಾ ಅಧ್ಯಯನಗಳಿಗೆ ಒಳಗಾಗದ ಅನೂಹ್ಯ ಘಟನೆ ಎನ್ನುವುದು ನನ್ನ ಅಭಿಮತ. ಏಕೆಂದರೆ, ಬರವಣಿಗೆಗೆ ಒಂದು ಭಾವ ಅಗತ್ಯ. ಆದರೆ, ಭಾವ ಸ್ಫುರಿಸಿದಾಗ ಬರೆದು ಬಿಡಬಹುದಾದ ಯಾವ ಅನುಕೂಲಗಳೂ ವೃತ್ತಿಪರ ಬರಹಗಾರರಲ್ಲದ ನನ್ನಂಥವರಿಗೆ ಇರುವುದಿಲ್ಲ. ಸೃಜನಶೀಲ ಬರವಣಿಗೆಗೆ ಹೊತ್ತುಗೊತ್ತಿನ ಕಟ್ಟುಪಾಡು ಇರುವುದಿಲ್ಲ. ಯಾವುದೇ ನಿರ್ದಿಷ್ಟವಾದ ನಿರ್ಧರಣೆಯಿಲ್ಲದೇ ಬರುವ ಹಲವು ಭಾವಗಳನ್ನು ಆಗಲೇ ಬರಹಕ್ಕೆ ಇಳಿಸಬೇಕಾದುದು ಬರಹಗಾರರಿಗೆ ಇರಬೇಕಾದ ಅನಿವಾರ್ಯದ ಸ್ಥಿತಿ. ಆದರೆ, ದೈನಂದಿನ ಕೆಲಸ ಕಾರ್ಯಗಳನ್ನು ಒತ್ತಟ್ಟಿಗಿಟ್ಟು ನನ್ನಂಥವರಿಗೆ ದಿಢೀರನೆ ಬರೆಯಲಾಗುವುದಿಲ್ಲ. ಹಾಗೆಂದು, ಮೂಡಿ ಬಂದ ಭಾವನೆಗಳನ್ನು, ಕ್ಷಣದಲ್ಲಿ ಮಿಂಚುವ ವಿಚಾರಗಳನ್ನು ಎಷ್ಟು ಹೊತ್ತು ನೆನಪಿನಲ್ಲಿಟ್ಟುಕೊಂಡು ಬಿಡುವು ಸಿಕ್ಕ ಅನಂತರ ಬರೆಯಲು ಸಾಧ್ಯ? ಸೃಜನಶೀಲ ಬರವಣಿಗೆಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ತಿಣುಕಾಡಿ ಬರೆದರೆ ಅದರಷ್ಟು ಪೇಲವವಾದ ವಿಚಾರ ಮತ್ತೊಂದಿರುವುದಿಲ್ಲ. ಹಾಗೆಂದು ಹಠ ಹಿಡಿದೇ ಬರೆದೆವೆಂದರೆ, ಮತ್ತೊಮ್ಮೆ ನಮಗೇ ಓದಲಾಗುವುದಿಲ್ಲ. ಸಹಜವಾಗಿ ಮೋಡಗಟ್ಟಿ ಮಳೆಗರೆಯುವಂತೆ ಭಾವನೆ- ವಿಚಾರಗಳು ಹರಳುಗಟ್ಟಿ ಬರಹವಾಗಬೇಕು. ಮೋಡ ಬಿತ್ತನೆಯಿಂದ ಕೃತಕ ಮಳೆ ಎಷ್ಟು ತರಿಸಲಾದೀತು? ಹಾಗೆಯೇ ಸೃಜನಾತ್ಮಕ ಬರಹವಣಿಗೆಯನ್ನು ಕೃತಕವಾಗಿ ಮಾಡಲಾಗದು. ಹೇಗೋ ತಿಣುಕಾಡಿ ಬರೆದರೂ, ಅದು ಭ್ರಮನಿರಸನ ಉಂಟು ಮಾಡುವಷ್ಟು ಭಾವತೀವ್ರತೆಯ ಕೊರತೆಯಿಂದ ತುಂಬಿಕೊಂಡಿರಬಹುದು. ವೈಯಕ್ತಿಕವಾಗಿ ಹೇಳಬೇಕೆಂದರೆ, ಬರವಣಿಗೆಗೆ ತೊಡಗುವಾಗ ಕಚೇರಿ ಕೆಲಸ, ಮನೆವಾರ್ತೆಯ ಬಹುಮುಖ್ಯ ಅಗತ್ಯಗಳನ್ನು ಮೊದಲಿಗೆ ಪೂರೈಸಿಬಿಡುತ್ತೇನೆ. ಏಕೆಂದರೆ, ಬರೆಯುವಾಗ ಒತ್ತಡ ರಹಿತ ಪರಿಸ್ಥಿತಿ ಬಹಳ ಅಗತ್ಯ. ಸಾಮಾಜಿಕ ಜವಾಬ್ದಾರಿಯ ನಿರ್ವಹಣೆ ಮಾಡುವುದು ಯಾರಿಗಾದರೂ ಮೊದಲ ಆದ್ಯತೆ ಆಗಿರಲೇಬೇಕು. ಹಲವಾರು ಜನ ಕೇಳುತ್ತಾರೆ, ಕಚೇರಿ, ಮನೆ, ಪುಟ್ಟಮಕ್ಕಳು ಇವನ್ನೆಲ್ಲಾ ನಿಭಾಯಿಸಿಕೊಂಡು ಹೇಗೆ ಇತರೆ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯ?! ಎಂದು. ಅದಕ್ಕೆ ನನ್ನ ಒಂದೇ ಉತ್ತರ, ‘ಮನಸ್ಸಿದ್ದರೆ ಮಾರ್ಗ ‘ ಹಾಗೂ ನಮ್ಮ ಇತರೆ ಅನಗತ್ಯದ ಒತ್ತಡಗಳನ್ನು, ಅಮುಖ್ಯ ವಿಚಾರಗಳನ್ನು, ಇತರೆ ಏನೆಲ್ಲಾ ಅವಸರಗಳನ್ನು ಅನಾಮತ್ತಾಗಿ ಪಕ್ಕಕ್ಕೆ ಸರಿಸಿ ಬಿಡಬೇಕೆಂದು. ಒಂದು ವೈಯಕ್ತಿಕ ಶಿಸ್ತನ್ನು ರೂಢಿಸಿಕೊಂಡರೆ ಹಾಗೂ ಮನೆಮಂದಿಯ ಸಹಕಾರ ದೊರಕಿಸಿಕೊಂಡರೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೂ, ಏನೆಲ್ಲವನ್ನೂ ಅನಾಮತ್ತಾಗಿ ಪಕ್ಕಕ್ಕೆ ಸರಿಸಬಲ್ಲೆನಾದರೂ, ಮಕ್ಕಳ ಸಣ್ಣ ಬೇಡಿಕೆಗಳನ್ನು, ಅವರೊಡನೆ ಕಳೆಯಬಹುದಾದ ದಿವ್ಯ ಗಳಿಗೆಗಳನ್ನು ನಿರಾಕರಿಸುವ ಧೈರ್ಯವನ್ನು ನಾನು ಮಾಡುವುದು ಕಡಿಮೆಯೇ.. ಏಕೆಂದರೆ, ಮಕ್ಕಳೆಂದರೆ ನನನಗಷ್ಟೇ ಅಲ್ಲ ಸಮಾಜಕ್ಕೆ ಸೇರಿದ ಪ್ರಜೆಗಳು. ಹಾಗಾಗಿ ಅವರನ್ನು ಜವಾಬ್ದಾರಿಯುತರನ್ನಾಗಿ ಬೆಳೆಸಬೇಕಾದ ಪ್ರಜ್ಞೆಯೂ ಆಂತರ್ಯದಲ್ಲಿ ಕೆಲಸ ಮಾಡುತ್ತಿರುತ್ತದೆ. ಹೀಗೆ, ಭವದ ಮಕ್ಕಳತ್ತ ಚಿತ್ತ ನೆಟ್ಚಾಗ ಮನದಲ್ಲಿ ಮೂಡಿದ್ದ ‘ಭಾವ’ವೆಂಬ ಹೊಸದಾಗಿ ಜನ್ಮ ತಳೆಯುವ ಆಸೆಯಲ್ಲಿದ್ದ ‘ಬರಹದ ಕೂಸು’ ನನ್ನ ಮೇಲೆ ಮುನಿದುಕೊಂಡದ್ದು ಬೆರಳೆಣಿಕೆಯ ಬಾರಿಯಲ್ಲ. ಚೆಂದದ ಅನುಭೂತಿ ಮೂಡಿಯೂ ಬರೆಯಲಾಗದೇ ಮರೆಯಾದ ಅನನ್ಯ ಭಾವಗಳು, ಕಲ್ಪನೆಗಳು ಅವೆಷ್ಟೋ..!!! ಯಾವಾಗಲೋ ಹೊಳೆದ ನನ್ನಷ್ಟಕ್ಕೆ ಅತ್ಯುತ್ತಮ ಎನಿಸುವ ಸಾಲುಗಳನ್ನು, ಮೋಹ ಉಕ್ಕಿಸುವ ಬರಹ ರೂಪಗಳನ್ನು ಮಕ್ಕಳ ಸಲುವಾಗಿ ನಾನು ಮರೆತು ಬಿಡಬೇಕಾಗುತ್ತದೆ. ಹಲವು ಬಾರಿ ಒಂದು ಸಣ್ಣ ಟಿಪ್ಪಣಿಯನ್ನೂ ಮಾಡಿಕೊಳ್ಳಲೂ ಆಗಿರುವುದಿಲ್ಲ. ಆಗೆಲ್ಲಾ ಬರವಣಿಗಾಗಿಯೇ ಬದುಕು ಮುಡಿಪಿಟ್ಟವರನ್ನು ನೆನೆದುಕೊಂಡಿದ್ದೇನೆ. ಬರವಣಿಗೆಯವ್ಲಿರುವ ಲೇಖಕರ ಮಕ್ಕಳನ್ನು ನಿಭಾಯಿಸುವ ಪತಿ/ಮಡದಿ, ಮೂಡು ಬರಿಸಿಕೊಳ್ಳಲು ಅವರು ಮೊರೆ ಹೋಗುವ ತಿರುಗಾಟಗಳು, ಮೋಜು-ಮಸ್ತಿಗಳು, ಅನಾಯಾಸವಾಗಿ ಸಿಕ್ಕಿಬಿಡುವ ಸಮಯಾನುಕೂಲಗಳು (ಇವೆಲ್ಲಾ ವಿಶೇಷವಾಗಿ ಪುರುಷ ಲೇಖಕರಿಗೆ) ಹೀಗೆ… ಇಂಥವೆಲ್ಲಾ ನೆನೆದಾಗ ನನ್ನಂತಹ ಹವ್ಯಾಸಿ ಮಹಿಳಾ ಬರಹಗಾರರಿಗೆ ಆಪ್ತ ಸಮಯ ಎನ್ನುವುದು ಗಗನ ಕುಸುಮವಲ್ಲದೇ ಮತ್ತೇನು..? ಎನಿಸುತ್ತದೆ. ವೃತ್ತಿ ಪ್ರವೃತ್ತಿಗಳ ನಡುವೆ ಮನೆ-ಮಕ್ಕಳ ಜವಾಬ್ದಾರಿಗಳನ್ನು ಮರೆಯುವಂತೆಯೇ ಇಲ್ಲವಲ್ಲ. ಹಾಗೇನಾದರು ಆದರೆ ಅದೆಲ್ಲಿಯೋ ಮರೆಯಾಗಿರುವ ‘ನಾನು ಒಳ್ಳೆ ಅಮ್ಮ ಅಲ್ಲ’, ‘ಮಕ್ಕಳಿಗೆ ಕ್ವಾಲಿಟಿ ಟೈಂ ಕೊಡುತ್ತಿಲ್ಲ’ ಎಂಬ ಛದ್ಮವೇಷದಲ್ಲಿರುವ ‘ಅಪರಾಧಿ’ ಪ್ರಜ್ಞೆಯೊಂದು ಬಂದು ತಲೆಯೊಳಗೆ ಕುಳಿತು ಕೆಲವೊಮ್ಮೆ ಇನ್ನಿಲ್ಲದಂತೆ ಕಾಡುತ್ತಾ ಹಿಂಸಿಸುತ್ತದೆ. ಅಲ್ಲದೇ ಹಲವು ಬಾರಿ, ಓದಲು ಬರೆಯಲು ಕುಳಿತಾಗ ಮಕ್ಕಳೇ ಹತ್ತಿರ ಬಂದು ಆಟಕ್ಕೋ ಮತ್ತೊಂದಕ್ಕೋ ಕರೆಯುತ್ತಾರೆ. ಬೆಳಗ್ಗಿಂದಲೂ ಮನೆಯ ಹೊರಗೇ ಇರುವ ನಾನು, ಮನೆಗೆ ಬಂದ ಮೇಲೂ ಅವರಿಂದ ದೂರ ಇರುವುದನ್ನು ಒಪ್ಪಲು ಅವರು ಸಿದ್ಧರಿರುವುದಿಲ್ಲ. ನಾನು ಅವರ ಅಮ್ಮ. ಅವರಿಗೆ ಬೇಕಾದಾಗ ಈ ಅಮ್ಮ ಸಿಗಬೇಕು. ಅವರ ಅಮ್ಮ ಅವರಿಗೆ ಬೇಕು ಅಷ್ಟೇ… ಇದೇ ಅವರ ಅಂತಿಮ ಡಿಮ್ಯಾಂಡ್. ಹೀಗಾಗಿ ಮನೆಗೆ ಬಂದ ಮೇಲೆಯೂ ನಾನು ನನಗಾಗಿ ಸ್ಪೇಸ್ ಅಪೇಕ್ಷಿಸಲು ಸಾಧ್ಯವಾಗದು. ಹಾಗೇನಾದರು ಮಾಡಿದರೆ ಮಕ್ಕಳೇ ನನ್ನ ಮೇಲೆ ಕೋಪಿಸಿಕೊಂಡು ದೂಷಿಸದೇ ಇರಲಾರು. ಆ ಅನುಭವಗಳೂ ಸಾಕಷ್ಟು ಆಗಿವೆ.. ಹೀಗೆ ಬರೆಯಬೇಕೆಂದು ಕುಳಿತಾಗ ಹಲವಾರು ಬಾರಿ ಅನಾನುಕೂಲಗಳು ಆಗುವುದು ಹೌದು. ತಕ್ಷಣಕ್ಕೆ ಹೊಳೆಯು ಆ ಪದ, ಆ ಸಾಲು ಮನದಿಂದ ಮರೆಯಾಗಬಹುದು. ಜೊತೆಗೆ ಆ ಭಾವತೀವ್ರತೆಯೂ ಕೊನೆಯಾಗಬಹುದು. ಹಾಗೆಂದು ಮಕ್ಕಳನ್ನು ಅಪರಾಧಿ ಸ್ಥಾನದಲ್ಲಿಟ್ಟು ನೋಡಲಾರೆ. ಎಷ್ಟಾದರು ನಾನು ಅಮ್ಮನಲ್ಲವೇ.. ಬರೆಯಲಾಗದ ಬಹಳಷ್ಟು ಸಮಯದಲ್ಲಿ ನನ್ನ ಇಬ್ಬರು ಮಕ್ಕಳೂ ನನ್ನ ಮತ್ತೊಂದು ಬಗೆಯ ಬರಹದ ಪ್ರಸ್ತುತಿಗಳೇ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ. ಏಕೆಂದರೆ ನಾನು ಹೆಣ್ಣು, ಮಿಗಿಲಾಗಿ ಅಮ್ಮ…. ವಸುಂಧರಾ ಕದಲೂರು. ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ


