ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೊದಲ ಕವಿತೆಯ ರೋಮಾಂಚನ

ರೇಶ್ಮಾಗುಳೇದಗುಡ್ಡಾಕರ್

Now we know Mahatma Gandhi was a fraud- The New Indian Express

ಅಂದು ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಮನೆಯ ಕಡೆ ಪಯಣ ಬೆಳಸಿದ್ದೆ . ನನ್ನ ಪ್ರೀತಿಯ ಲೇಡಿ ಬರ್ಡ ನೊಂದಿಗೆ.   ಮತ್ತೆ ಒಂದು ಘಂಟೆ ಕಳೆದು ಲ್ಯಾಬ್ ಗೆ ಹೋಗ ಬೇಕಾಗಿತ್ತು . ಸರ ಸರ ಮನೆಗೆ ಬಂದು ನನ್ನ ಸೈಕಲ್ ಅಂಗಳದಲ್ಲೆ ಬಿಟ್ಟು ಒಳಗೆ ಬಂದೆ “ಬಾಬಾ ರೇಶ್ಮಾ ಹೊಸತು ಪತ್ರಿಕೆ ಎರಡು ಬಂದಿದೆ ನೋಡು “.ಎಂದು ನನಗೆ ತಂದು ಕೊಟ್ಟರು .ತಂದೆಯವರಿಗೂ ಪತ್ರಿಕೆ ನೋಡಿ ಅಚ್ಚರಿಯಾಗಿದೆ .ನಾನು ಕವಿತೆ ಕಳಿಸಿರುವ ವಿಚಾರ ಅವರಿಗೆ  ತಿಳಿಸಿರಲಿಲ್ಲ ನಂತರ ಅಣ್ಣನಿಂದ ವಿಚಾರ ತಿಳಿದು ನಾನು ಬಂದ ಮೇಲೆ ನನ್ನ ಕೈಗೆ ಪತ್ರಿಕೆ ನೀಡಿದರು .

ಎಲ್ಲರೂ ಪತ್ರಿಕೆಯನ್ನು ಓದಿ ಖುಷಿಯಾಗಿದ್ದಾರೆ

ನನಗೆ ಆಶ್ಚರ್ಯ ಯಾಕೆ ,ಏನು ,ಎಂದು ತಿಳಿಯಲಿಲ್ಲ .ತೆಗೆದುಕೊಂಡು ನನ್ನ ಕೊಠಡಿಗೆ ಬಂದೆ ಅಣ್ಣಾ ನಗುತ್ತಾ ನಿನ್ನ ಕವನ ‘ಗಾಂಧಿ ‘ ಪ್ರಕಟವಾಗಿದೆ ನೋಡು ಎಂದು ಹೇಳಿದರು .ನನಗೆ   ಅಚ್ಚರಿ  ಸಂತಸವೋ ಸಂತಸ ಜೊತೆ ಗೌರವ ಧನ ೨೫ ರೂಗಳು ಬಂದಿತ್ತು .ಅಗ ನಾನು ಪದವಿಯ ಮೊದಲ ವರ್ಷದಲ್ಲಿದ್ದೆ .ಮಯೂರ, ಹೊಸತು ,ಸಂಕ್ರಮಣ ಪತ್ರಿಕೆಗಳು ಮನೆಗೆ ಬರುತ್ತಿದ್ದವು .ಹೊಸತು ಪತ್ರಿಕೆಯಲ್ಲಿ ಗಾಂಧಿ ಕುರಿತ ಚಿಂತನೆ ,ಬರಹಗಳು ಅವರ ಅನುಯಾಯಿಗಳ ಸಂದರ್ಶನಗಳು ನನಗೆ ಅತೀವ ಕುತೂಹಲಕಾರಿಯಾಗಿದ್ದವು  .

ಅವೆಲ್ಲ ನನ್ನೊಳಗೆ ಗಾಂಧಿ ಕುರಿತ ಒಂದು ಸಂವೇದನೆಯನ್ನು  ಹುಟ್ಟುಹಾಕಿದವು.  ಹಾಗೂ ಒಳನೋಟವನ್ನು ನೀಡಿದ್ದವು.

ಹೊಸತು ಪತ್ರಿಕೆಯಿಂದ ಅಗ ನನಗೆ ಹೊಸ ತಿಳಿವಿನ ಜಗತ್ತು ಕಾಣುತ್ತಿತ್ತು ಮತ್ತು ವಾಸ್ತವದ ಬಗ್ಗೆ ಒಂದು ಮಾನವೀಯ ಎಚ್ಚರದ ಅರಿವನ್ನು ಕಾಣುವ ಬರಹಗಳು ಇದ್ದವು.ಇದೆಲ್ಲ ಒಂದು ಧನಾತ್ಮಕ ಸಂಘರ್ಷವಾಗಿ ನನ್ನಲ್ಲಿ ಗಾಂಧಿ ಕವಿತೆ ರೂಪುಗೊಂಡಿತು . ನಾನು ಬರೆದ ಕವಿತೆ ಅಣ್ಣನೆ ಹೋಗಿ ಅಂಚೆ ಮಾಡಿ ಬಂದಿದ್ದರು .ಕಳಿಸಿ ಎರಡು ತಿಂಗಳಾದರೂ ಉತ್ತರವಿಲ್ಲ ಪ್ರತಿ ತಿಂಗಳು ಪತ್ರಿಕೆಯಲ್ಲಿ ಹುಡುಕಾಟ ನಡೆಸಿ ಸುಮ್ಮನಾದರೆ. ಆದರೆ ಅಕ್ಟೋಬರ್‌ ಸಂಚಿಕೆಯಲ್ಲಿ ನನಗೆ  ಅಚ್ಚರಿ ಕಾದಿತ್ತು .ಕವನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ತದನಂತರ ನನ್ನ ಕವನದ ಮೆಚ್ಚುಗೆ ಕುರಿತು ನನಗೆ ಹಲವು ಪತ್ರಗಳು ಮನೆಗೆ ಬರತೊಡಗಿದವು .

ಜೊತೆಗೆ   ಡಾ||. ಶ್ರೀಧರ್ ಪಿಸ್ಸೆ ಅವರ ಪತ್ರವು ಬಂತು.  ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಕವಿತೆಗೆ ನನ್ನ ಕವಿತೆ ಆಯ್ಕೆ ಅಗಿದೆ ಎಂಬ ಸಂಗತಿ ಹೊತ್ತು .ಇದನ್ನು ನಾನು ಊಹಿಸಿ ಇರಲಿಲ್ಲ  ಈ ವಿಶೇಷ ಅನುಭೂತಿಯನ್ನು ಬದುಕಿನುದ್ದಕ್ಕೂ ಮರೆಯಲು ಸಾದ್ಯವಿಲ್ಲ .ಅವರ ಸಂಪಾದಕತ್ವದಲ್ಲಿ ನನ್ನ ಕವಿತೆ

2006 ರ ವಾರ್ಷಿಕ ಕವಿತೆ  ಹೊತ್ತಿಗೆ ಯಲ್ಲಿ ಪ್ರಕಟವಾಯಿತು .

ನನಗೆ ಓದು ನೀಡಿದ ಉಡುಗೊರೆ ನನ್ನ ಬದುಕಿಗೆ ಎಂದು ನಾನು ಭಾವಿಸಿದ್ದೇನೆ .ಹೊಸತು ಪತ್ರಿಕೆ ಸಂಪಾದಕ ಬಳಗಕ್ಕೆ ಈ ವೇದಿಕೆ ಮೂಲಕ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ತುಂಬ ದಿನಗಳ ನಂತರ

ಬಾಲ್ಯದಿಂದಲೂ ಓದಿನ ಗೀಳು ನನಗೆ ಹೆಚ್ಚು ಬಾಲಮಂಗಳ,ಚಂಪಕ,ಚಂದಮಾಮಾ, ಮನೋರಮಾ ನನಗೆ ಆಗಿನ ಒಡನಾಡಿಗಳು .ತದನಂತರ ದಿನಗಳಲ್ಲಿ ತೇಜಸ್ವಿ, ಕಾರಂತರು, ಜಿಎಸ್ಎಸ್ ,ಲಂಕೇಶ್ , ನೇಮಿಚಂದ್ರ ,ಎಂ.ಕೆ.ಇಂದಿರಾ ,

ಗೊರೂರು ,ಅವರ ಕೃತಿಗಳು ಮನಸೆಳೆದವು ತ್ರಿವೇಣಿ ಅವರ ಕಾದಂಬರಿಗಳು ಮನೋವಿಜ್ಞಾನ ವನ್ನು ನನಗೆ ಅರ್ಥೈಸಿಕೊಳ್ಳಲು ಬಹುವಾಗಿ ಸಹಾಯವಾಯಿತು ,ವೈಜ್ಞಾನಿಕ ಬರಹಗಳ ಓದು ನನಗೆ ವಿಜ್ಞಾನದ ಕುತೂಹಲ ತಣಿಯಲು ಸಹಾಯವಾದವು ಜೊತೆಗೆ ತೇಜಸ್ವಿ ಅವರ ಕಾಡಿನ ಕತೆಗಳು ವಿಜ್ಞಾನ ಬರಹ ಅಚ್ಚುಮೆಚ್ಚು .ಪದವಿಯಲ್ಲಿ ವಿಷಯ ಪುಸ್ತಕಗಳಿಗಿಂತ ಸಾಹಿತ್ಯದ ಓದೇ ಹೆಚ್ಚಾಗಿತ್ತು ಮನೆಯಲ್ಲಿ ತಂದೆಯವರು ಪುಸ್ತಕ ಪ್ರೇಮಿಯಾಗಿದ್ದರು ಹಲವು ಕೃತಿಗಳು ಇದರಿಂದ ಪರಿಚಯವಾಯಿತು .

ಸಾಹಿತ್ಯದ ಕಣ್ಣಲ್ಲಿ ಜಗವನ್ನು ನೋಡಿದ್ದಲ್ಲಿ ಯಾವುದು ಕಷ್ಟ ವಾಗಲಾರದು ಎಂಬದು ನನ್ನ ಬಲವಾದ ನಂಬಿಕೆ. ಓದು ಎಂಬುದು ಬದುಕಿಗೆ ಮದ್ದು. ಸೃಜನಾತ್ಮಕ ದೃಷ್ಟಿ ಕೋನ ಹಾಗೂ ಧನಾತ್ಮಕ ಸಂಚಲನ ನೀಡುತ್ತದೆ.ನಮ್ಮೊಳಗಿರುವ ಕಾಣದ ಲೋಕವನ್ನು ಸಾಹಿತ್ಯ ಅನಾವರಣಗೋಳಿಸುತ್ತದೆ .ವರ್ತಮಾನದ ಆಪಾರ ಕಾಳಜಿಯನ್ನು ಸೂಕ್ಷ್ಮ ಅವಲೋಕನವನ್ನು ನೀಡುತ್ತದೆ

ಕನ್ನಡದಲ್ಲಿ ಬಹಳಷ್ಟು ಮೌಲ್ವಿಕ ಕೃತಿಗಳು ಇವೆ ಅದು ನನಗೆ ಹೆಮ್ಮೆ .ಮತ್ತಷ್ಟು ಓದುವ ಬಯಕೆ ಇದೆ.

ಇಂದಿನ ಸಾಮಾಜಿಕ ತಾಣ ಒಂದು ಅದ್ಭುತ ವೇದಿಕೆ ಉತ್ತಮ ಬರಹಗಳು ಸುಲಭವಾಗಿ ಓದಲು ಸಿಗುತ್ತಿವೆ. ಇದು ನನಗೆ ಓದಿನ ಖುಷಿ ಇಮ್ಮಡಿ ಮಾಡಿದೆ. ಈ ವೇದಿಕೆಯನ್ನು ಗುಣಾತ್ಮಕವಾಗಿ ಬಳಸಿಕೊಂಡು ಮತ್ತಷ್ಟು ಉತ್ಕೃಷ್ಟ ಸಾಹಿತ್ಯ ಕೃಷಿಯಾಗಲಿ ಎಂಬುದು ನನ್ನ  ಮನದಾಳದ  ಬಯಕೆ.

                       **************************

About The Author

1 thought on “ಗಾಂಧಿಯೇ ಮೊದಲ ಕವಿತೆ”

  1. ತುಂಬಾ ಚೆನ್ನಾಗಿ ನಿಮ್ಮ ಅನುಭವ ಹಂಚಿಕೊಂಡಿರುವಿರಿ. ಓದು ಎನ್ನುವುದು ನಿಜಕ್ಕೂ ಬದುಕಿಗೆ ‘ಮದ್ದೇ’. ನಿಮ್ಮ ಮನದಾಳದ ಬಯರೆ ಈಡೇರಲಿ. ಹೆಚ್ಚು ಓದಿರಿ ಹಾಗೂ ಬರೆಯಿರಿ.. ಅಭಿನಂದನೆಗಳು..

Leave a Reply

You cannot copy content of this page

Scroll to Top