ಕಾವ್ಯ ಸಂಗಾತಿ
“ಮರಗಳ ಮನದ ಮಾತು”
ಅನ್ನಪೂರ್ಣ ಸಕ್ರೋಜಿ ಪುಣೆ.

ಹಬ್ಬಗಳಲ್ಲಿ ಮಾವಿನಟೊಂಗೆ ಕತ್ತರಿಸಿ ತರುವುದು, ಯುಗಾದಿ ದಿನ ಬೇವು, ವಟಪೌರ್ಣಿಮೆಯಂದು, ಆಲದ ಗಿಡ, ದಸರೆಯಂದು, ಶಮಿ, ಆರಿ ಟೊಂಗೆ, ತುಳಸಿ ವಿವಾಹದಂದು, ನೆಲ್ಲಿ ಗಿಡ, ಹುಣಸೆ ಮರದ ಟೊಂಗೆ ಕತ್ತರಿಸಿ ತಂದು ಪೂಜಿಸುವುದು ,ನಿಜ ಆದರೆ ಕೀಳುವಾಗ ಆಯಾ ಮರಗಳ ಕ್ಷಮೆ ಕೇಳಿ ಕೀಳುವುದು ಮನುಷ್ಯ ಧರ್ಮ. ಅಥಣಿ ಶಿವಯೋಗಿಗಳು ಮಲ್ಲಿಗೆ ಹೂ ಹರಿಯುವಾಗ ಕ್ಷಮೆ ಕೇಳುತ್ತಾ ನೋವುಂಟಾಯಿತೇ ಎನ್ನುತ್ತಾ ಅತ್ಯಂತ ನಿಧಾನವಾಗಿ ಮಲ್ಲಿಗೆ ಹೂವನ್ನು ನಾಜೂಕಾಗಿ ಹರಿಯುತ್ತಿದ್ದರಂತೆ. ಇದನ್ನೆಲ್ಲ ನೋಡಿ ಕೆಟ್ಟೆನಿಸಿ ಈ ಕವಿತೆ ಬರೆದಿರುವೆ.
ಅರಳಿ ಮರ ಮಾವಿನ ಮರಗಳು
ನೆಲ್ಲಿ ನರಳುವದ ಕಂಡು
ಬಳಿಸಾರಿ ಬಿಗಿದಪ್ಪಿ ಸಂತೈಸುವದ
ನೋಡಿ ಶಮಿ ಓಡಿಬಂತು
ಮನದ ಮಾತುಗಳನು ಅಳುತಲಿ
ಹೇಳತೊಡಗಿದವು ದುಃಖದಿ//
ಹೊನ್ನವರ್ಣದೆಲೆಯ ಆರಿ ಗಿಡ
ಹುಣಸೆ ಮರ ಬಂದವು
ತುಳಸಿಯೊಂದಿಗೆ ಪರಿಮಳದ
ಪುಟ್ಟ ಗಿಡಗಳೂ ಬಂದವು
ನಾನಾವಿಧ ಹಣ್ಣುಗಳ ಮಸಾಲೆಯ
ಮರಗಳೂ ಕಣ್ಣೀರ ತಂದವು//

ಯುಗಾದಿಯಿಂದ ಎಲ್ಲ ಹಬ್ಬಗಳು
ಏಕಾದರೂ ಬರುತ್ತವೆಯೋ
ಕಾರುಣ್ಯ ಶೂನ್ಯ ಜನರಿಗೆ ದಯೆಯೇ
ಇಲ್ಲ ಮನುಷ್ಯತ್ವವೂ ಇಲ್ಲ
ನಾವು ನಮ್ಮಷ್ಟಕ್ಕೆ ಕಾನನದಲಿ ಸುಖ
ಆನಂದದಿಂದ ಇದ್ದೆವಲ್ಲ//
ಇವರಿಗೆ ಬದುಕಲು ಉಸಿರು ಕೊಡುವ
ಹಸುರಿನ ಚೈತನ್ಯ ನಾವು
ಮಳೆ ಸುರಿಸಿ ನೆಲ ಫಲವತ್ತಾಗಲು
ಕಾರಣರೂ ನಾವೇ ನಾವು
ಹೂ ಹಣ್ಣು ಉಣ್ಣುವುದಕ್ಕೆ ತಂಪಿನ
ನೆರಳು ಕೊಡುವವರು ನಾವು//
ಜಾತಿಭೇದ ಮೇಲುಕೀಳು ಭಾವವಿಲ್ಲ
ಎಲ್ಲರಿಗೂ ಆಶ್ರಯದಾತರು
ಗುಡಿಸಿಲೇ ಇರಲಿ ಮನೆಗಳೇ ಇರಲಿ
ಬಿದಿರೇ ಆಸರೆಯದಾತ
ನಮ್ಮೆಲ್ಲರನೂ ನಿನಗೆ ಬೇಕಾದಂತೆ
ಉಪಯೋಗಿಸುವ ಕೃತಘ್ನ//
ಕೃತಜ್ಞತೆಯಿಲ್ಲದ ನೀನು ನಮ್ಮ ಬೇಕು
ಬೇಡಗಳ ಅರಿತಿರುವೆಯಾ
ನಮ್ಮ ಉತ್ತಮ ಬೆಳವಣಿಗೆಯ ಬಗ್ಗೆ
ನೀನು ಯೋಚಿಸಿರುವೆಯಾ
ಸಾಲುಮರದತಿಮ್ಮಕ್ಕತುಳಸಿಗೌಡಳಂತೆ
ನಡೆದುಕೊಂಡಿರುವೆಯಾ//
ಅನ್ನಪೂರ್ಣ ಸಕ್ರೋಜಿ ಪುಣೆ.




