ಹಸೀನ ಮಲ್ನಾಡ್ ಅವರ ಕವಿತೆ-ಸ್ವಾತಂತ್ರ್ಯದ ಸಿರಿ

ದಿಟ್ಟ ನೇರ ಗಟ್ಟಿ ಧ್ವನಿ
ರೋಷದಿಂದ ಮೊಳಗಿತು
ಆಂಗ್ಲರಿಂದ ಮುಕ್ತಿಪಡೆವ
ಹಠವು ಇಲ್ಲಿ ಹುಟ್ಟಿತು

ನೀನು ನಾನು ಭೇದ ಮರೆತು
ಒಂದೇ ನಾವು ಎಂದರು
ನಮ್ಮ ನೆಲದ ಹಕ್ಕಿಗಾಗಿ
ಟೊಂಕ ಕಟ್ಟಿ ನಿಂತರು

ಹಿರಿಯ ಕಿರಿಯ ಎಲ್ಲ ಸೇರಿ
ಎದೆಯುಬ್ಬಿಸಿ ನಡೆದರು
ಹೋರಾಟದ ಕಿಚ್ಚು ಹೆಚ್ಚೆ
ಪ್ರಾಣವನ್ನೆ ತೊರೆದರು

ನಮ್ಮ ಒಡೆಯೆ ತಂತ್ರ ಹೂಡಿ
ಸೋತು ಸುಣ್ಣವಾದರು
ನಮ್ಮ ಪಟ್ಟು ಹಿಡಿಯೆ ಬಿಗಿ
ದೇಶ ಬಿಟ್ಟು ಹೋದರು

ಕೇಳು ನೀನು ಭಾರತೀಯ
ಸ್ವಾತಂತ್ರ್ಯವು ಸಿರಿಯಿದು
ಬಗೆಯದಿರು ಕೇಡು ಇದಕೆ
ಈ ಮಣ್ಣೆಂದೂ ಕ್ಷಮಿಸದು


Leave a Reply

Back To Top