ಜಯಶ್ರೀ ಎಸ್ ಪಾಟೀಲ-“ಮತ್ತೆ ಮರಳಿ ಬನ್ನಿ”

ಕಾವ್ಯ ಸಂಗಾತಿ

ಜಯಶ್ರೀ ಎಸ್ ಪಾಟೀಲ

“ಮತ್ತೆ ಮರಳಿ ಬನ್ನಿ”

ಫೋಟೊ ಕೃಪೆ: ಗೂಗಲ್

ಬಸವ ಬುದ್ಧ ಅಂಬೇಡ್ಕರ
ಕಟ್ಟಿದ ಸುಂದರ ನಾಡು ಮಾಯವಾಗಿದೆ
ನಿತ್ಯ ಹಿಂಸಾಚಾರ ಅತ್ಯಾಚಾರ
ನಿಲ್ಲದೆ ನಿರ್ಭಯದಲಿ ಸಾಗಿದೆ

ಚರ್ಚು ಮಂದಿರ ಮಸೀದಿಗಳು
ಚಿನ್ನದ ಲೇಪನದಲಿ ನಿಂತಿವೆ
ದೇವರ ಹೆಸರಿನಲಿ ವಸೂಲಿಗಳು
ನಿರಂತರ ನಿರ್ಭೀತಿಯಲಿ ಸಾಗಿವೆ

ಗಾಂಧೀಜಿಯ ಸತ್ಯ ಅಹಿಂಸೆ ತತ್ವ
ಇಲ್ಲವಾಗಿದೆ ಬಸವ ಅಲ್ಲಮರ ಮಹತ್ವ
ಜಾತಿ ಮತ ಪಂಥದ ಅಸ್ತಿತ್ವ
ಕಾಣದಾಗಿದೆ ಸರಿ ಸಮಾನತ್ವ

ಅನುಮಾನ ಆತಂಕ ದೂರವಾಗಲು
ಸಮ ಸಮಾಜ ನಿರ್ಮಾಣವಾಗಲು
ಅನುಭವದ ಜ್ಞಾನದ ಅರಿವು ಹರಿಯಲು
ಮತ್ತೊಂದು ಅನುಭವ ಮಂಟಪ ಕಟ್ಟಲು

ಸಮಾಜದ ಕೊಳಕುಗಳ ಹೋಗಲಾಡಿಸಲು
ದಲಿತರ ದಮನವ ಕೊನೆಗೊಳಿಸಲು
ಸರ್ವೋದಯ ದೇಶ ನಿರ್ಮಿಸಲು
ನಾಡಿಗೆ ಹೊಸ ರೂಪ ಕೊಡಲು

ಮತ್ತೆ ಮರಳಿ ಬನ್ನಿ ಬಸವಾದಿ ಶರಣರೆ
ದೇಶಕ್ಕಾಗಿ ಜೀವ ತೊರೆದ ಯೋಧರೆ
ಹಗಲಿರುಳು ಹೋರಾಡಿದ ನಾಯಕರೆ
ದೇಶಸೇವೆ ಈಶ ಸೇವೆ ಎಂದ ವೀರರೆ


ಜಯಶ್ರೀ ಎಸ್ ಪಾಟೀಲ

Leave a Reply

Back To Top