ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅರುಣಾ ನರೇಂದ್ರ ಕವಿತೆ

ಮೊಗ್ಗು ಹೂವಾದ ಗಳಿಗೆ

ಬಾಳ ಬೆಂಗಾಡಿನಲಿ
ಕಲ್ಲು ಮುಳ್ಳುಗಳ ತುಳಿದು
ಸುಸ್ತಾಗಿ ಕುಳಿತಾಗ
ಮುಳ್ಳ ಕಂಟಿಯಲ್ಲೊಂದು
ಹೂ ಬಿರಿದು ನಗುತ್ತಿತ್ತು
ನಿರಾಸೆಗೊಂಡ ಬಾಳಿಗೆ
ಕೈಯಾಸರೆ ನೀಡಿತ್ತು

ಕೈಚೆಲ್ಲಿ ಕುಳಿತವಳಿಗೆ
ಅದೇನೊ ಹೊಸ ಹುಮ್ಮಸ್ಸು
ಮತ್ತೆ ಮುನ್ನಡೆವ ಉತ್ಸಾಹ !
ಬಾಳ ಬಳ್ಳಿಯಲಿ
ಈಟೀಟೇ ಚಿಗುರು
ಹೊಸ ಹೂವ ಕನಸು

ಕದ ತೆರೆದು ಕತ್ತು ಹಿಡಿದು
ಹೊರನೂಕಿದ ಕನಸುಗಳೆಲ್ಲ
ಮತ್ತೆ ಮತ್ತೆ ಬರಬರನೆ ಬಂದು
ಎದೆಯೇರಿ
ನವ ದಾರಿಯಲಿ ಲಂಘನ!

ಕಾಡುತ್ತವೆ ಬೇಡುತ್ತವೆ
ರಂಗೇರಲು ಹವಣಿಸುತ್ತವೆ
ಇನ್ನೊಮ್ಮೆ ಇಡಿಯಾಗಿ
ಹೊಸತಾಗಿ ಬಾಳು
ಕಟ್ಟುವ ಆಸೆ ಚಿಗುರಿಸುತ್ತವೆ

ಬಣ್ಣದಿಂದ ಬದುಕಲ್ಲ
ಬದುಕು ಬಣ್ಣವಾಗಲು
ಕೊಟ್ಟಿರುವ ಭರವಸೆ
ಬೆನ್ನ ಹಿಂದಿರಲಿ ಸಖಾ
ಹೊಳೆಯನ್ನೇನು?
ಸಾಗರವ ಈಜಿಯೇನು!

ನೋವ ಕುಲುಮೆಯಲಿ
ಇನ್ನೆಷ್ಟು ಕುದಿಸುವೆ
ನಿನ್ನೆದೆಯ ಪ್ರೀತಿಯ ಕಡಲಲ್ಲಿ
ಮೀಯಿಸು ತೋಯಿಸು
ಬೇಡವೆಂದರೆ
ನಿನ್ನ ಕಣ್ಣ ಕಿಡಿಯಲ್ಲೇ
ನನ್ನ ಸಾಯಿಸು


ಅರುಣಾ ನರೇಂದ್ರ

About The Author

Leave a Reply

You cannot copy content of this page

Scroll to Top