ನಾಗರಾಜ ಬಿ.ನಾಯ್ಕರವರ ಕವಿತೆ ‘ಕಾದು ಕುಳಿತವರು’

ಕಾವ್ಯಸಂಗಾತಿ

ನಾಗರಾಜ ಬಿ.ನಾಯ್ಕ

‘ಕಾದು ಕುಳಿತವರು’

ಹಳ್ಳಿ ಊರ ದಾರಿ ನಡುವೆ
ಕಾದು ಕುಳಿತವರು
ಮಾತ ನಡುವೆ ಕಥೆಯ ಹರಡಿ
ನೋವ ಮರೆತವರು…..

ಎಲ್ಲೋ ಏನೋ ಕೆಲಸ ಮಾಡಿ
ಹೊಟ್ಟೆ ಬಟ್ಟೆ ನೆಪವ ಮಾಡಿ
ದಾರಿ ಹಿಡಿದವರು ಅವರು
ಎಲ್ಲೋ ಹೊರಟವರು……

ಅಣ್ಣನಲ್ಲ ತಮ್ಮನಲ್ಲ ಮಾತಿಗೆ
ಆದರೂ ಆಡುವರು ಮಾತು ಪ್ರೀತಿಗೆ
ಅಕ್ಕನಲ್ಲ ತಂಗಿಯಲ್ಲ ಅಕ್ಕರೆಗೆ
ಆದರೂ ನೀಡುವರು ಹೊಟ್ಟೆ ಹಸಿವೆಗೆ……

ಸಿರಿಯಿಲ್ಲ ಸಂಪದವಿಲ್ಲ ಅವರ ಬದುಕಿಗೆ
ಕುಡಿವ ನೀರು ಬೀಸೋ ಗಾಳಿ
ಸಾಕು ಅವರ ಉಸಿರಿಗೆ
ನಾಳೆ ಬಾಳೋ ಕಸುವಿಗೆ……

ಸೂರ್ಯ ಚಂದ್ರ ಚುಕ್ಕಿಗಳು
ಬಾನ ತುಂಬಾ ನಕ್ಕಿರಲು
ಮಣ್ಣ ನೆಲವು ಜೀವ ಜಲವು
ಅವರ ಸ್ವರ್ಗ ಸದೃಶವು……

ಹಸಿವೆಗನ್ನ ಹೊಟ್ಟೆ ತುಂಬಿ
ಉಸಿರ ತುಂಬಾ ಗಾಳಿ ನಂಬಿ
ಜಗವು ನಡೆಯಲು
ಜೀವ ಸಂತಸದಿ ಸಾಗಲು…….


ನಾಗರಾಜ ಬಿ.ನಾಯ್ಕ

One thought on “ನಾಗರಾಜ ಬಿ.ನಾಯ್ಕರವರ ಕವಿತೆ ‘ಕಾದು ಕುಳಿತವರು’

  1. Super…. ನಿಮ್ಮೊಳಗೆ ಇಷ್ಟು ಒಳ್ಳೇ ಕವಿ ಇದ್ರೂ ಇಷ್ಟು ದಿನ ಎಲೆ ಮರೆಯ ಕಾಯಿಯಂತೆ ಯಾಕಿದ್ರಿ

Leave a Reply

Back To Top