ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸರಸಾಕಾಂಕ್ಷೆ

ಡಾ ಸುರೇಶ ನೆಗಳಗುಳಿ

ಯಾಕೆ ಜಾಣೆ ಕೋಪವೇನು
ನಾನು ನಿನಗೆ ಬೇಡವೇನು
ಸರಸವಾಡಿ ನಲಿಯುತಿದ್ದ
ಕಾಲ ಮರೆತೆಯಾ

ಸಾಕೆ ನನ್ನ ಜೊತೆಯ ವಾಸ
ಬೇರೆ ಯಾರು ಇಹರು ಸನಿಹ
ಕದವ ಮುಚ್ಚಿದಂತೆ ನನ್ನ
ಮನಸ ತೊರೆದೆಯಾ

ನಿಮಿಷ ನಿಮಿಷ ಕಣ್ಣ ರೆಪ್ಪೆ
ಮುಚ್ಚಿ ತೆರೆವ ತರಹದಲ್ಲಿ
ನೆನಪಿಸುತ್ತ ಕರೆಯುತಿದ್ದ
ಭಾವ ಅಳಿಯಿತೇ

ಗಮಿಸುತಿದ್ದ ಗಮನಗಳನು
ಮೀಸಲಾಗಿ ಇಡುತಲಿದ್ದ
ನನ್ನ ನಿನ್ನ ಜೊತೆಯ ಸಂಗ
ಬೇಡವಾಯಿತೇ

ಮೆಚ್ಚುತಿದ್ದ ಬಣ್ಣಗಳನು
ಮನಕೆ ಹಚ್ಚಿ ಧರಿಸಿ ವಸನ
ಎದುರು ಬಂದು ಮುದವ ಕೊಟ್ಡ
ಚಣವು ಬೇಡವೇ

ಕಚ್ಚಿ ಕೊಟ್ಟ ಹಣ್ಣುಗಳನು
ತುಟಿಗೆ ಇರಿಸಿ ಅಧರಕಧರ
ಬೀಗ ಹಾಕಿ ಆಡಿದಾಟ
ತೊರೆದ ಪ್ರಣಯವೇ

ನಿನಗೆ ನಾನು ನನಗೆ ನೀನು
ಅದನು ಬಿಟ್ಟು ಬೇರೆ ಏನು
ಎನ್ನುತಿದ್ದ ಮುಖದ ವಾಣಿ
ಮರೆತೆಯೇತಕೆ

ಹನಿಸಯೊಲವ ಮನದ ಮನೆಯ
ಹಸನು ಮಾಡಲಾರೆಯೇನು
ಬಿಸಿಲು ಕುದುರೆಯಂತೆ ಈಗ
ಇರುವುದೇತಕೆ

ಬೆಸುಗೆ ಹಾಕಿದಂಥ ರೀತಿ
ಬಿಡದು ಬಂಧ ಮತ್ತು ಪ್ರೀತಿ
ಎನ್ನುತಿದ್ದ ಮಾತುಗಳನು
ನೆನಪು ಮಾಡಿಕೋ

ಒಸಗೆ ಇಹುದು ಸದಾ ನಿನಗೆ
ಶುಭವ ಕೋರುವಂಥ ಮತಿಗೆ
ಎಂಬ ನಿಜವ ತಿಳಿದು ಬೇಗ
ನನ್ನ ಸೇರಿಕೋ


About The Author

Leave a Reply

You cannot copy content of this page

Scroll to Top