ಮೇ-ದಿನದ ವಿಶೇಷ

ಶಂಕರಾನಂದ ಹೆಬ್ಬಾಳ

ಕಾರ್ಮಿಕರ ದಿ‌‌ನಕ್ಕಾಗಿ ಗಝಲ್

ಪುಡಿಗಾಸಿಗಾಗಿ ಬಿಸಿಲಲ್ಲಿ ಜೀವವಿದು ಬೆಂದು
ಹೋಗುತ್ತಿದೆ ನೋಡು
ಹಡೆದ ಮಕ್ಕಳ ಭವಿಷ್ಯಕ್ಕಾಗಿ ಬೆವರು ಹರಿಸಿ
ಬೀಗುತ್ತಿದೆ ನೋಡು

ಕಮರಿದ ಕನಸಿನಲಿ ನಿತ್ಯವೂ ಜೀವನವನು
ಕಳೆಯುತ್ತಿರುವರು ಏಕೆ
ಒಪ್ಪತ್ತಿನ ಗಂಜಿಗೂ ಹೆಣಗಾಡಿ ಮನವಿದು
ಏಗುತ್ತಿದೆ ನೋಡು

ಸಿರಿವಂತಿಕೆ ಆಸೆಯನ್ನು ತೊರೆದು ಯೋಗಿಯ
ತೆರದಿ ಬದುಕುವರಲ್ಲ
ಮರಣದಲ್ಲೂ ಸುಖಕಾಣದ ಬಿಸಿಯ ಉಸಿರು
ತಾಗುತ್ತಿದೆ ನೋಡು

ಕೊಂಚ ಸಾಲಕ್ಕಾಗಿ ಶಕ್ತಿಮುಗಿಯುವ ತನಕ
ದುಡಿಯುವದಾಯಿತೇ
ಹೆಂಚಿನ ಸೋರುವ ಮನೆಯಲ್ಲಿ ಬಳಲುತ್ತ
ತೇಗುತ್ತಿದೆ ನೋಡು

ಬಯಕೆಗಳ ಬೆಂಗಾಡಿನಲಿ ಸುಟ್ಟು ಬೂದಿಯಾಗಿದೆ
ಅಭಿನವನ ಬಾಳು
ದಯನೀಯ ಸ್ಥಿತಿಯಲ್ಲೂ ಕಾದಹಂಚಿನ ಬದುಕು
ಸಾಗುತ್ತಿದೆ ನೋಡು


ಶಂಕರಾನಂದ ಹೆಬ್ಬಾಳ

Leave a Reply

Back To Top