ಬಸವ ಜಯಂತಿ ವಿಶೇಷ

ಅಭಿಜ್ಞಾ ಪಿ.ಎಮ್ ಗೌಡ

ಮತ್ತೊಮ್ಮೆ ಹುಟ್ಟಿ ಬಾ ಅಣ್ಣ ಬಸವಣ್ಣ….

ಮತ್ತೊಮ್ಮೆ ಹುಟ್ಟಿ ಬಾ ಅಣ್ಣ
ಬಸವಣ್ಣ…
ನೀ ಮತ್ತೆ ಹುಟ್ಟಿ ಬಂದರೆ ನೋಡು
ಜಗವೆ ಬೆಳಗುವುದು
ಅದು ಸುಜ್ಞಾನದ ಬೆಳಕಾಗಿ
ಹೊಂಗಿರಣದ ತೇಜಸ್ಸಾಗಿ…

ದಿನೆ ದಿನೆ ಕಗ್ಗತ್ತಲೆಂಬ
ಅಂಧಕಾರದ
ಜ್ಞಾಲೆಯೊಳಗೆ ಬೇಯುತಿರೊ
ಧರೆಯೊಡಲನು ರಕ್ಷಿಸಲು
ಸುಜ್ಞಾನಿಯಾಗಿ
ವಿಜ್ಞಾನಿಯಾಗಿ
ವಿಶ್ವಗುರುವಾಗಿ
ಮತ್ತೊಮ್ಮೆ ಹುಟ್ಟಿ ಬಾ ಅಣ್ಣ ಬಸವಣ್ಣ…

ಸಮಾನತೆ ಬೀಜಬಿತ್ತಿ
ಸಾಮರಸ್ಯದ ಬೆಳೆ ಬೆಳಿಸಿದ
ಈ ನಾಡಲ್ಲೀಗ
ಜಾತಿ ಧರ್ಮಗಳ ನಡುವೆ
ದ್ವೇಷದ ಕಿಡಿಯಚ್ಚಿ
ಸ್ವಾರ್ಥಪರತೆಯ
ಹಾದಿಯಲಿ ಮೇಲುಗೈ
ಸಾಧಿಸೊ ನೀಚರದ್ದೆ ಕಾರುಬಾರು
ಈಗೇನಿದ್ದರು ತಾರತಮ್ಯದ ಕಳೆ
ವಿಫುಲವಾಗಿ ಬೆಳೆದಿರುವುದನು
ಶಮನಗೊಳಿಸಲಾದರು
ಮತ್ತೊಮ್ಮೆ ಹುಟ್ಟಿ ಬಾ ಅಣ್ಣ ಬಸವಣ್ಣ..

ಜಾತಿ ಮತ ವ್ಯಕ್ತಿ ನೋಡದೆ
ಸಾಹ್ಯ ಮಾಡಿದೆಯಂದು
ಮೇಲು ಕೀಳೆಂಬ
ತಾರತಮ್ಯದ ದಳ್ಳುರಿ
ಎಲ್ಲೆಲ್ಲೂ ಧಗಧಗಿಸುತಿಯಿಂದು..!

ದೌರ್ಜನ್ಯ ದಬ್ಬಾಳಿಕೆಗಳಿಗೆ
ಮಂದಿ ಪ್ರತಿಕ್ಷಣವಾಗುತ್ತಿದ್ದಾರೆ ದಹ್ಯ
ನೊಂದು ಬೆಂದು
ನೆಮ್ಮದಿಗಾಗಿ ಹಪಹಪಿಸೊ
ಮಂದಿಗಾಗುತ್ತಿಲ್ಲ ಇವೆಲ್ಲ ಸಹ್ಯ…!
ಅರಿವಿನ ಬೋಧನೆಗಾದರು
ಮತ್ತೊಮ್ಮೆ ಹುಟ್ಟಿ ಬಾ ಅಣ್ಣ ಬಸವಣ್ಣ..

ಧರ್ಮದ ಹೆಸರಲಿ
ದೊಂಬಿಯೇಳಿಸುತ
ಜಾತಿ ಧರ್ಮಗಳಲಿ ಅನಾವಶ್ಯಕ
ಅಸೃಗ್ಜಲಕೆ ಕಾರಣವಾಗಿಹರು..!
ಪ್ರಚಾರ ಪ್ರಿಯರಾಗಲು
ತತ್ವಾದೇಶಗಳನ್ನೆ ಗಾಳಿಗೆ ತೂರಿ
ಉದ್ದುದ್ದ ಭಾಷಣ ಬಿಗಿದು
ನಡೆನುಡಿಗೆ ತಕ್ಕಂತಿರದ ವ್ಯಕ್ತಿತ್ವಗಳ
ಮುಖಗಳೇ ಹೆಚ್ಚಾಗುತಿವೆಯಣ್ಣ…

ಆ ಮುಖವಾಡಗಳ ಕಳಚಿ
ಭ್ರಷ್ಟತೆಯ ಅಳಿಸಿ
ದುಶ್ಚಟಗಳ ತೊಳೆಸಿ
ಸನ್ಮಾರ್ಗದೊಂದಿಗೆ
ಸುಭಿಕ್ಷೆ ಸಮಾಧಾನಗೊಳಿಸಿ
ಅರಿವಿನ ಬೋಧನೆ ಮಾಡಲಾದರು
ಮತ್ತೊಮ್ಮೆ ಹುಟ್ಟಿ ಬಾ ಅಣ್ಣ ಬಸವಣ್ಣ..!

ಇಂದಿನ ದಿನಕ್ಕಷ್ಟೆ
ಸೀಮಿತ ಮಾಡಿಹರು
ನಿನ್ನೆಲ್ಲ ವಚನಾಮೃತಗಳ ಸಂದೇಶವ
ನಿನ್ನ ಆಚಾರ ವಿಚಾರಗಳನ್ನೆ
ಬಿಂಬಿಸಿ ನಾವು ನಿನ್ನ ನಡೆಯಲ್ಲೆ
ಸಾಗಿಹೆವು ಎಂದಿಹರಣ್ಣ
ಅಂತರಂಗ ಶುದ್ಧಿ ಇಲ್ಲದಿರುವವರಣ್ಣ…

ತಮ್ಮ ವಾಗ್ವೈಖರಿಯನು
ಬಂಡವಾಳವಾಗಿಸಿ
ವಾಗ್ವಿಭವಗೊಳಿಸಿದ ತಕ್ಷಣವೇ
ತಮ್ಮ ವಾಗ್ವೃತ್ತಿಗೆ ತಿಲಾಂಜಲಿ ಹಾಕಿ
ನುಡಿದಂತಿರದೆ ಮುನ್ನಡೆವರು
ಮತ್ತದೆ ಸ್ಥಿತಿಯ ವೈಭವೀಕರಣ
ಸಮಾಜದಲಿ ಮೇಳೈಸಿದೆಯಣ್ಣ
ಇದರ ಸರಿ ತಪ್ಪುಗಳ
ತುಲನೆಗಾದರು
ಮತ್ತೊಮ್ಮೆ ಹುಟ್ಟಿ ಬಾ ಅಣ್ಣ ಬಸವಣ್ಣ…


Leave a Reply

Back To Top