ಕಾವ್ಯ ಸಂಗಾತಿ
ಡಾ.ಕೆ.ಎಸ್.ಗಂಗಾಧರ
ದೇವರು ಮೇಲಿದ್ದಾನಂತೆ
ದೇವರು ಮೇಲಿದ್ದಾನಂತೆ;
ನೋಡುತ್ತಾನಂತೆ ಎಲ್ಲಾ ಅಲ್ಲಿಂದಲೇ.
ಕುರಾನ್ ಶಾಂತಿ ಬೋಧಿಸಿದರೂ
ಸೈತಾನರಂತೆ ಸಿಡಿ ಮದ್ದುಗಳ ಸಿಡಿಸಿ
ದೇಶ ಸುಡುವುದು ನೋಡಿಲ್ಲವೆ.
ಧರ್ಮದ ಅಫೀಮು ಕುಡಿಸಿ
ವಿವೇಚನೆ ನಾಶ ಮಾಡಿದ್ದು ಕಾಣಲಿಲ್ಲವೆ.
ಅಹಿಂಸೆ ಪ್ರವಹಿಸಿದ ನೆಲದಲ್ಲಿ
ಗೀತೆಯ ಸಾರವನ್ನು ಮೂಲೆಗಟ್ಟಿ
ನೆತ್ತರ ಹರಿಸಿದ್ದು ಅಗೋಚರವಾಯಿತೆ.
ಶಿಲುಬೆಗೇರುವಾಗಲೂ ನಗುತ್ತಾ ಹರಸಿದ
ಸಂತನ ಹೆಸರ ಪಠಿಸುತ್ತಾ
ಸನ್ಯಾಸಿನಿಯರನ್ನೂ ಬಿಡದೆ ಕಾಡಿದ್ದು
ಅರಿವಿಗೆ ಬರಲೇ ಇಲ್ಲವೆ.
ಅಮರಗುರುವಿನ ಪವಿತ್ರತೆಯನ್ನು ಪಾಲಿಸುತ್ತಲೇ
ಖಲಿಸ್ತಾನದ ಹೆಸರಲ್ಲಿ
ಧ್ವಂಸ ಮಾಡಿದ್ದು ನೋಡಿಲ್ಲವೆ.
ಯಾವ ಧರ್ಮವೂ ಪ್ರವಚಿಸದ
ದೇಶ ನಾಶ ಮಾಡುವ ಹಿಂಸೆಯನ್ನು
ನರ ನಾಡಿಗಳಲ್ಲಿ ಹರಿಸಿಕೊಂಡು
ದುಗುಡ ದುಮ್ಮಾನಗಳಿಗೆ ನಿಮಿತ್ತವಾಗಿರುವುದು
ದಿವ್ಯ ದೃಷ್ಟಿಯ ವ್ಯಾಪ್ತಿಗೆ ಬರಲಿಲ್ಲವೆ.
ದೇವರು ಮೇಲಿದ್ದಾನಂತೆ;
ನೋಡುತ್ತಾನಂತೆ ಎಲ್ಲಾ ಅಲ್ಲಿಂದಲೇ!
ಎಲ್ಲಾ ಸುಳ್ಳಿನ ಸರಮಾಲೆ.
ಈ ಪರಿಯ ದೇವರೇ ಇಲ್ಲ.
ದೇವರು ಮೇಲಿದ್ದು ನೋಡುತ್ತಾನೆಂದರೆ,
ಇಷ್ಟೆಲ್ಲಾ ನೋಡಿಯೂ ಸುಮ್ಮನಿರುತ್ತಾನೆಂದರೆ
ನಂಬಲು ತುಸು ಕಷ್ಟ.
ಕಹಿಸತ್ಯವನ್ನು ಚನ್ನಾಗಿ ಎತ್ತಿ ತೋರಿಸಿದ ಸಾಲುಗಳು. ಚಿಂತನೆಯ ಬಡಿದೆಬ್ಬಿಸುವ ಕವನ.
ಮನುಷ್ಯನೇ ಅನ್ವೇಷಿಸಿಕೊಂಡಿರುವ ದೇವರು ಅವನ ಆಂತರ್ಯದಲ್ಲಿರುವ ಕ್ರೌರ್ಯವನ್ನು ಹಿಂಗಿಸಲು ಯಾಕೆ ಸಾಧ್ಯವಾಗಲಿಲ್ಲ ಅನ್ನುವುದೇ ಅವನ ಮುಂದಿರುವ ಪ್ರಶ್ನೆಯೂ ಹೌದು, ಸವಾಲು ಹೌದು…ಈ ಪ್ರಶ್ನೆಯನ್ನೇ ಡಾ. ಗಂಗಾಧರ ಅವರ ಕವಿತೆ ಕಾವ್ಯಾತ್ಮಕವಾಗಿ ಕೇಳುತ್ತಿದೆ…
Superb