ಕಾವ್ಯಯಾನ

ಅಡುಗೆ ಮನೆಯೆಂದರೆ

Image result for images of vegetabls in indian middle class kitchen

ಸ್ಮಿತಾ ರಾಘವೇಂದ್ರ

ಅಡುಗೆ ಮನೆಯೆಂದರೆ

ಯುದ್ಧಕ್ಕೆ ಮೊದಲು ಎಲ್ಲವೂ ಶಾಂತವೇ
ಯುದ್ದ ಮುಗಿದ ಮೆಲೂ…
ಅನಿವಾರ್ಯ ಮತ್ತು ಅವಶ್ಯಕತೆ-
ಸಂಭವಿಸುವ ಮುಂಚಿನ ಸಮಜಾಯಿಶಿ.

ಅಣಿಗೊಳ್ಳಲು ಹೆಚ್ಚಿನ ತಯಾರಿ ಏನಿಲ್ಲ
ಅತ್ತಿಂದಿತ್ತ ತಿರುಗಾಡುತ್ತಲೇ
ಮಾತು ಒಗೆದಂತೆ-
-ಅಣಿಮಾಡುವ ರಣರಂಗ.

ನುಗ್ಗೆಕಾಯಿ ಸಪೂರ ದಂತವರು,
ಹೊಟ್ಟೆ ಭಾರದ ದೊಣ್ಣ ಮೆಣಸಿನಂತವರು
ಕೆಂಪು ಗಲ್ಲದ ಟೊಮೆಟೊ ಅಂತವರು,
ಸೊಪ್ಪಿನಂತೆ ಉದ್ದ ಕೂದಲಿನವರು,
ನಾ ನಾ ವಿಧದ ಸೈನಿಕರ ಗುಂಪು,

ರಾಜನ ಆಗಮನವನ್ನೇ ಎದುರು ನೋಡುತ್ತ..
ಯಾರು ಮೊದಲು ಮಡಿಯಬಹುದು!?
ಇಂದು ನಿನ್ನದೇ ಪಾಳಿ
ಮೂಲೆಯಲ್ಲಿ ಕೂತ ಈರುಳ್ಳಿ.
ಬಿಡುವೆನೇ ಕಣ್ಣ ಹನಿ ಉದುರಿಸದೇ
ಸಣ್ಣ ಹೊಟ್ಟೆ ಉರಿ-
ಇವಳು ಇಷ್ಟಾದರೂ ಘಟ್ಟಿ;

ಅಡಗಿ ಕೂತವರನ್ನೆಲ್ಲ ಎಳೆದು ತಂದು
ಸಿಪ್ಪೆ ಸುಲಿದು.
ಕಚ ಕಚನೇ ಕೊಚ್ಚಿ ಬೇಯಿಸಿ
ಬಾಡಿಸಿ, ಉಪ್ಪು ಹುಳಿ ಖಾರ,
ಉರಿ ಉರಿ ಕೂಗಿದರೂ ಬಿಡದ ಘೋರ
ಹಳೆಯ ದ್ವೇಶವೆಲ್ಲ ತೀರಿಸಿಕೊಂಡ ಹಗುರ
ಅಮರಿಕೊಂಡ ಅಸಹಾಯಕತೆಯ ಅಸಹನೆ
ಕೊಡವಿಕೊಂಡ ನಿರಾಳ

ಎಲ್ಲ ಮುಗಿದ ಮೇಲೂ ಏನೂ ಆಗದಂತೆ
ಕಣ್ತುದಿಯ ಹನಿಯೊಂದು ಇಂಗಿದಂತೆ
ಅಗಲ ನಗೆಯಲಿ ಎಲ್ಲವೂ ಖಾಲಿ ಖಾಲಿ
ಕುರುಹೂ ಇಲ್ಲದ ರಣರಂಗದಲಿ
ಖಿಲ ಕಿಲನೇ ನಗುವ ಅವಳ ಖಯಾಲಿ..

******

One thought on “ಕಾವ್ಯಯಾನ

Leave a Reply

Back To Top