ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಸಮಯಪ್ರಜ್ಞೆ

ಪಕ್ಕದ ಮನೆಯ 10ನೇ ತರಗತಿಯ ರಮೇಶ 90%ಪ್ರತಿಶತ ಅಂಕಗಳನ್ನು ಪಡೆದು ತಾನು ಕಲಿಯುವ ಪ್ರೌಢಶಾಲೆಗೆ 2ನೇ ಸ್ಥಾನ ಪಡೆದ ಪ್ರಯುಕ್ತ ನಮ್ಮ ಮನೆಗೆ ಪೇಡಾ ಬಾಕ್ಸ ಹಿಡಿದು ಬಂದ.”ಆಂಟಿ ನಾನು ನಮ್ಮ ಪ್ರೌಢಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದೇನೆ ಅಪ್ಪ ಪೇಡಾ ತಂದು ಹಂಚಲು ಹೇಳಿದರು”ಎಂದು ಹೇಳಿ ಮುಗಿಸುವಷ್ಟರಲ್ಲಿ ಅವರ ತಾಯಿ ಬಂದು”ಇನ್ನೂ ಸ್ವಲ್ಪ ಪ್ರಯತ್ನಿಸಿದ್ದರೆ ಪ್ರಥಮ ಸ್ಥಾನ ಪಡೆಯುತ್ತಿದ್ದ, ಏನು ಮಾಡೋದು? ಅಭ್ಯಾಸ ಮಾಡು ಎಂದು ಮುಂಜಾನೆ ಬೇಗನೆ ಎಬ್ಬಿಸುವಾಗ ಆಮೇಲೆ ಮಾಡ್ತೇನೆ, ಇನ್ನೂ ಪರೀಕ್ಷೆ ಅಷ್ಟು ದಿನ ಇದೆ ಮಾಡ್ತೇನೆ ಎಂದು ಪರೀಕ್ಷೆ ಬಂದಾಗ ಅಭ್ಯಾಸ ಮಾಡುವ ಇವನಿಗೆ ಸಮಯದ ಉಪಯೋಗವೇ ಗೊತ್ತಿಲ್ಲ”ಎಂದು ಗೊಣಗಿದರು “ಇರಲಿ ಬಿಡಿ ಇನ್ಮುಂದೆ ಮಾಡ್ತಾನೆ”ಎಂದಾಗ ಮುದುಡಿದ ಅವನ ಮುಖ ಅರಳಿತು ‘ಥ್ಯಾಂಕ್ಯೂ ಆಂಟಿ ಮಾಡ್ತೇನೆ’ಎಂದು ಮುಂದಿನ ಮನೆಗಳಿಗೆ ಪೇಡಾ ಕೊಡಲು ಹೋದ.”ಮುತ್ತಿಗಿಂತ ಹೊತ್ತು ಉತ್ತಮ”ಎಂಬ ಮಾತಿನಂತೆ ಮುತ್ತು ಒಡೆದರೆ ಹಾಳಾದರೆ ಪೇಟೆಯಿಂದ ಕೊಂಡು ತರಬಹುದು ಆದರೆ ಹೊತ್ತು ಹೋದರೆ ತರಲು ಅಸಾಧ್ಯ.

ನಿಜ ಕಳೆದು ಹೋದ ಹೊತ್ತನ್ನು ಮರಳಿ ಪಡೆಯಲು ಸಾಧ್ಯವಿಲ್ಲ.

ಅದರಲ್ಲು’Student life is golden life’ಎಂಬಂತೆ ವಿದ್ಯಾರ್ಥಿ ಜೀವನ ಬಂಗಾರದಷ್ಟು ಬೆಲೆಬಾಳುವಂತದ್ದು.ಪ್ರತಿ ನಿಮಿಷವನ್ನು ವೃಥಾ ಹಾಳುಮಾಡದೇ ಸದುಪಯೋಗಪಡಿಸಿಕೊಳ್ಳಬೇಕು.

ಸಮಯಪ್ರಜ್ಞೆ ಅನಗತ್ಯ ಚಿಂತೆಯನ್ನು ದೂರ ಮಾಡಲು ನೆರವಾಗುತ್ತದೆ.ದೈನಂದಿನ ಚಟುವಟಿಕೆಗಳು ರೂಢಿಗತವಾದರೆ  ನಮ್ಮ ಬದುಕಿಗೆ ಕ್ರಮಬದ್ಧವಾದ ಶಿಸ್ತಿನ ನಡುವಳಿಕೆ ಬರುತ್ತದೆ.ಸಮಯಕ್ಕೆ ಸರಿಯಾಗಿ ಕೆಲಸ ಮಾಡುವ, ಮಾಡಲು ಬೇಕಾದ ಮುಂಜಾಗ್ರತೆ ಕೈಗೊಳ್ಳುವುದರ ಮೂಲಕ ಕೆಲಸ ಹೇಗಾದೀತು?ಎಂಬ ಭಯಕ್ಕೆಅವಕಾಶ ಕಡಿಮೆ.ಉದಾಹರಣೆಗಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಮುಂಚಿತವಾಗಿ ನೀಡಿದ್ದರೂ ಸರಿಯಾಗಿ ಅಭ್ಯಾಸ ಮಾಡದೇ ಇನ್ನೂ ಎರಡೇ ದಿನಗಳಲ್ಲಿ ಪರೀಕ್ಷೆ ಯಿದೆ.ತಾನು ಹೇಗೆ ಎದುರಿಸಲಿ?ಹೇಗೆ ಪ್ರಶ್ನೆಗೆ ಉತ್ತರ ಬರೆಯಲಿ?ಎಂಬ ಚಿಂತೆಯಿಂದಲೇ ಹೌಹಾರಿ ಹೋಗಿದ್ದಾನೆ.ಪರೀಕ್ಷೆಗಿಂತ ಒಂದು ತಿಂಗಳ ಮೊದಲು ಅದಕ್ಕೆ ಬೇಕಾದ ಸಿದ್ಧತೆ, ಅಭ್ಯಾಸ ಮಾಡಿದ್ದರೆ  ಮೂರುತಾಸಿನ ಪರೀಕ್ಷೆಯಲ್ಲಿ ಸುಲಭವಾಗಿ ಉತ್ತರ ಬರೆಯಬಹುದು.ಇಲ್ಲಿ ಚಿಂತೆಗಿಂತ ಮಾಡಿಕೊಳ್ಳುವ ಸಿದ್ಧತೆಯ ಭರವಸೆ,ಸಮಯ ಪ್ರಜ್ಞೆ ತುಂಬಾ ಮುಖ್ಯ.

ಒಂದು ಮನೆ ನಿರ್ಮಿಸುವಾಗ ಮೊದಲೇ ಅದರ ನಕ್ಷೆ ತಯಾರಿಸಿ ಅದರಂತೆ ಕಾರ್ಯ ಮುಂದುವರೆಸುತ್ತೇವೆ.ಅದರಂತೆಯೇ ನಮ್ಮ ಕೆಲಸ ಕಾರ್ಯ ಸಣ್ಣದಾಗಿರಲಿ ದೊಡ್ಡದಾಗಿರಲಿ ಅದಕ್ಕೊಂದು ರೂಪುರೇಷೆ ಇಷ್ಟು ಅವಧಿಯಲ್ಲಿ ಮುಗಿಯಲೇಬೇಕೆನ್ನುವ ಸಮಯಪ್ರಜ್ಞೆ ಅಗತ್ಯ.ತಮ್ಮ ಪಾಲಿನಕೆಲಸವನ್ನು ನಾಳೆ ಮಾಡಿದರಾಯಿತು ಎಂಬ ಆಲಸ್ಯ ನಾಳೆಯ ಹೊರೆಯನ್ನು ಹೆಚ್ಚಿಸುತ್ತದೆ.ನಾಳೆ ಮಾಡಲಿರುವ ಕಾರ್ಯ ಇಂದು ಮುಗಿಯಬೇಕು ಇಂದು ಮಾಡುವ ಕಾರ್ಯ ಈಗ ಮುಗಿಯಬೇಕು.ಅಲ್ಲಿ ಅವಸರ ಅನಗತ್ಯ,ಆದರೆ ನಿಧಾನ ಸಲ್ಲ.

ಕೆಲಸವಿಲ್ಲದವನ ಮನಸು ಸೈತಾನನ ಬೀಡು,ಅಲ್ಲಿ ಬೇಡದ ಆಲೋಚನೆ,ಕ್ರೋಧ,ಮತ್ಸರ,ಹಗೆತನ ಮುಂತಾದ ದುಷ್ಟ ಶಕ್ತಿಗಳ ಆವಾಸ.ಕೈಗೆತ್ತಿಕೊಳ್ಳುವ ಯಾವುದೇ ಕೆಲಸವಿರಲಿ,ಅದನ್ನು ಇಷ್ಟಪಟ್ಟು ಮಾಡುವುದರಿಂದ ಅದರಲ್ಲಿ ತನ್ಮಯತೆ ಬಂದು ತನ್ಮೂಲಕ ಉತ್ಸಾಹ,ಲವಲವಿಕೆ ಅಧಿಕಗೊಂಡು ಸರಿಯಾದ ಸಮಯದಲ್ಲಿ ಯಶಸ್ವಿಯಾಗಿ ಮುಗಿಸಬಹುದು.

ಧೀರರ ದಾರಿಯಲ್ಲಿ ಪ್ರಕೃತಿಯ ಅತ್ಯಂತ ಭೀಷಣ ತಡೆಗಳನ್ನಿಟ್ಟಿದ್ದರೂ ಅವುಗಳನ್ನು ಅವರು ಕೆಚ್ಚೆದೆಯಿಂದ ಸ್ವಸಾಮರ್ಥ್ಯದಿಂದ ಹೊತ್ತಿಗೆ ಒತ್ತು ಕೊಟ್ಟು ನಿರಂತರ ಪರಿಶ್ರಮದಿಂದ,ಅಪಾರ ಆತ್ಮವಿಶ್ವಾಸದಿಂದ,ಅನಂತ ತಾಳ್ಮೆಯಿಂದ ಎದುರಿಸಿ, ಶ್ರೇಯಸ್ಸಿನ ಶಿಖರವನ್ನೇರಿದುದನ್ನು ನಾವು ಕಾಣುತ್ತೇವೆ.

‘ಓ ದೇವರೇ! ಪ್ರಯತ್ನದ ಬೆಲೆಯನ್ನು ತೆತ್ತಾಗ ನೀನು ಪ್ರತಿಯೊಂದನ್ನೂ ಅನುಗ್ರಹಿಸುತ್ತಿ’*ಎಂದ ಲೀಯೋನಾರ್ಡೋ ಡಾ ವಿಂಚಿಯ ಮಾತು ಅಕ್ಷರಶಃ ಸತ್ಯ.

‘ನನ್ನ ಸಮಯ ಅಮೂಲ್ಯವಾಗಿದೆ’ಎಂದು ಬರೆದಿರಿಸಿಕೊಂಡ ಉದ್ಯಮಿಗಳು ದಿನದಲ್ಲಿ ಹದಿನಾರು ಗಂಟೆಗಳಿಗಿಂತಲೂ ಹೆಚ್ಚು ಹೊತ್ತು ದುಡಿಯಬಲ್ಲರು.

ದಿನದಲ್ಲಿ ಒಂದೆರಡು ಗಂಟೆಗಳ ಕಾಲ ವ್ಯರ್ಥಹರಟೆಯಲ್ಲಿ ಕಳೆದರೆ ಒಂದು ವರ್ಷದ ಅಮೂಲ್ಯ ಸಮಯದಲ್ಲಿ ಸಾಧಿಸಬಹುದಾಗಿದ್ದ ಅದ್ಭುತ ಹೇಗೆ ಮಾಯವಾಗುವುದೆಂಬುದನ್ನು ಯೋಚಿಸಿದಾಗ ,ಮತ್ತೆ ನೋಡೋಣವೆಂದು ಕೆಲಸವನ್ನು ಮುಂದಕ್ಕಿರಿಸಿಕೊಳ್ಳಲಾಗದು ಅದರಂತೆ ಕಳೆದು ಹೋದ ಸಮಯವನು ಮರಳಿ ತರಲಾಗದು.’ ಈ ದಿನ  ಎಂದಿಗೂ ಹಿಂದಿರುಗಿ ಬರಲಾರದೆಂಬುದನ್ನು ಯೋಚಿಸು’ಎಂದು ದಾಂತೆ ಸಾರಿದ್ದಾರೆ.

ಕೆಲವೊಮ್ಮೆ ಅಪಘಾತ, ತೀರ ಅಸಹಾಯಕ ಪರಿಸ್ಥಿತಿಯಲ್ಲಿ ಜೀವಗಳ ಉಳಿಸಲು ಸಮಯ ಪ್ರಜ್ಞೆಯಿಂದ ಮಾನವೀಯತೆಯಿಂದ ನೆರವಿಗೆ ಧಾವಿಸುವ ಅನಿವಾರ್ಯತೆ ಇರುತ್ತದೆ.

ನಿಜ ಜೀವನ ಬಹಳ ದೀರ್ಘವಾಗಿಲ್ಲ, ಸಮಯ ಅಮೂಲ್ಯ.ಈ ಕ್ಷಣವನ್ನು ಹಾಳುಮಾಡದೇ ಉಪಯೋಗಿಸಿ  ಈ ಕ್ಷಣವೇ ಮುಂದಾಗೋಣ ಅಲ್ಲವೇ?

ಮೋಜು ಮಸ್ತಿಗಳಲಿ ದಿನವ ಕಳೆಯದೆ ವಾಟ್ಸಪ್, ಫೇಸ್ಬುಕಗಳ ಅತಿಯಾಗಿ ಬಳಸದೇ  ಆತ್ಮಸ್ಥೈರ್ಯದಿಂದ ಭವಿತವ್ಯದ ಗುರಿಯ ತಲುಪಲು ಕಾಲಘಟ್ಟದಲ್ಲಿ ಸತ್ಕಾರ್ಯದಿ ಸರ್ವರ ಒಳಿತ ಬಯಸಿ ಪ್ರಾಮಾಣಿಕತೆಯಲಿ ಬದುಕ ಸವೆಸೋಣ


ಭಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

5 thoughts on “

  1. ವಂದನೆಗಳು ಟೀಚರ್
    ಲೇಕನ ಸಮಯದ ಬಗ್ಗೆ ತುಂಬಾ ಚೆನ್ನಾಗಿದೆ

Leave a Reply

Back To Top