ದಿವ್ಯಮಂತ್ರ

ಕಾವ್ಯಸಂಗಾತಿ

ದಿವ್ಯಮಂತ್ರ

ಹಂಸಪ್ರಿಯ

ದಿವ್ಯಮಂತ್ರ ಭಾಷೆ ನೂರು
ಸದ್ಭಾವವೊಂದೆ ವಸುಧೆಯೊಳಗೆ..!
ವಸುದೈವ ಕುಟುಂಬಕಂವೆಂಬ
ದಿವ್ಯಮಂತ್ರ  ಭಾರತೀಯರೆದೆಯೊಳಗೆ ..//ಪ//

ಸಪ್ತಖಂಡಗಳ
ಪೃಥ್ವಿಯ ಹೃದಯವು
ಭರತ ಭೂಶಿರವು…..

ಭರತ ಮಾತೆಗೆ
ಹಿಮಗಿರಿಗಳೆ ಮಣಿಮುಕುಟವು
ವಿಂಧ್ಯ- ಸಹ್ಯಾದ್ರಿ ಗಿರಿಶಿಖರಗಳು
ದಿವ್ಯಾಸ್ತ್ರಗಳು…
ತ್ರಿ-ಸಾಗರಗಳಲಿ
ತೇಲುವ ಭರತ ಭೂಮಿಯೂ
ಧರೆಯಮೇಲಿನ ಸ್ವರ್ಗವು……//1//.

ನರ- ನಾಡಿಗಳಲ್ಲಿ  ಹರಿವ ಧಮನಿಯಂತೆ
ಹರಿವವಿಲ್ಲಿ  ಜಲ- ಜೀವನದಿಗಳು…
ಗಂಗೆ-ತುಂಗೆ;ಕಾವೇರಿ-ಕೃಷ್ಣೆ,
ನರ್ಮದಾ-ಸಿಂಧೂ; ಗೋದಾವರಿ-ಭದ್ರೆ,
ನಾನಾ ನದಿಗಳ ಶರಧಿ ಸಮ್ಮಿಲವು…//2//

ಗಡಿಗಳೆಲ್ಲ  ಗುಡಿಗಳಂತೆ
ಹೊಳೆಯುವಂತೆ  ಕಳಸ
ಸೌಹಾರ್ದತೆಯ  ಬೆಳಕು
ಸಹೃದಯರ ಮನ – ಮಂದಿರಗಳಲಿ……//3//

ಬಂದರೆಷ್ಟೋ  ದಾಳಿಕೋರರು
ಬಂಧುಗಳಾಗಿ ಬಾಳುತಿಹರು
ವಿವಿಧ ಧರ್ಮ
ಉಡುಗೆ – ತೊಡುಗೆ
“ದಯ” ವೆಂಬ ಏಕತೆಯ
ದಿವ್ಯ  ಸೂತ್ರ ಮನ – ಮನೆಗಳೊಳಗೆ…..//4//


Leave a Reply

Back To Top