ಕಾವ್ಯಸಂಗಾತಿ
ಗಜ಼ಲ್
ಡಾ.ತನುಶ್ರೀ ಹೆಗಡೆ
ದೂರ ದೂಡಿದರೂ ನೆನಪಲಿ ಕಾಡುವುದು ಗೊತ್ತಿಲ್ಲವೇನು ನನಗೆ
ಮುನಿಸು ತೋರಿದರೂ ಪ್ರೀತಿ ಮಾಡುವುದು ಗೊತ್ತಿಲ್ಲವೇನು ನನಗೆ
ಎಲ್ಲಿ ಉದುರಿದೆ ಹೇಳು ಆಯುವ ಅರಳು ಮಲ್ಲಿಗೆಯ ಒನಪು
ಮೌನ ಮುಡಿಗೇರಿದರೆ ಮೊಗ ಬಾಡುವುದು ಗೊತ್ತಿಲ್ಲವೇನು ನನಗೆ
ಈ ಸರಸ ವಿರಸಗಳ ಕಣ್ಣುಮುಚ್ಚಾಲೆ ಇರುವಂತೆ ಇರಲಿ ಬಿಡು
ನಿನ್ನೆದೆಯ ಕವಾಟಗಳ ಜಾಲಾಡುವುದು ಗೊತ್ತಿಲ್ಲವೇನು ನನಗೆ
ನೀ ಮರೆತು ಬಿಡು ಎಂದೊಡನೆ ನಾ ಮರೆತು ಬಿಡುವೆನು ಹೇಗೆ
ಬಾಗಿಲೆಳೆದರೂ ಕದ ತಟ್ಟಿ ಹಾಡುವುದು ಗೊತ್ತಿಲ್ಲವೇನು ನನಗೆ
ನನ್ನ – ನಿನ್ನ ‘ತನು’- ಮನ ಕಲೆಯಲು ಕಾರಣವೇ ಬೇಕೆ ಹೇಳು
ಕಟ್ಟು ಕಟ್ಟಳೆಯಿಡದೆ ಆಟ ಆಡುವುದು ಗೊತ್ತಿಲ್ಲವೇನು ನನಗೆ