ಪೂರ್ವಕಾಲದಲ್ಲಿ…-ರೂಪ ಮಂಜುನಾಥ್

ಲಹರಿ

ಪೂರ್ವಕಾಲದಲ್ಲಿ

ರೂಪ ಮಂಜುನಾಥ್

..

ಪೂರ್ವಕಾಲದಲ್ಲಿ, ಸಂಜೆಯಾದರೆ, ಮನೆಮಂದಿಗೆ ಬಾಯಾಡಿಸಲು ಬೇಕೆಂದರೆ,

ಮನೆಹೆಂಗಸರು, ಕೋಸಂಬರಿಯೋ, ಕುಟ್ಟಿದ ಅವಲಕ್ಕಿಯೋ, ಎಳ್ಳುಂಡೆಯೋ,

ಕಷಾಯವೋ, ಪಾನಕವೋ, ಸಜ್ಜೆರೊಟ್ಟಿಯೋ, ಗುಳಪಾವಟೆಯೋ ಮಾಡಿ ಕೊಡುತ್ತಿದ್ದರು. ನಾಗರೀಕತೆಯ ಓಟದಲ್ಲಿ, ಆರೋಗ್ಯಪೂರಕ ತಿಂಡಿಗಳೆಲ್ಲಾ ಹಿಂದೆ ಉಳಿದು, ಆರೋಗ್ಯಮಾರಕ ತಿಂಡಿಗಳು ಗೆದ್ದು ಬೀಗುತ್ತಿವೆ. ಅಂಥ ಹಾಳು ಪುಡ್ಡುಗಳ ಅಡ್ಡಾದಿಡ್ಡಿ ತಿಂದು, ವಯಸ್ಸಿಗೆ ಮುಂಚೆಯೇ ಬೆಡ್ಡು ಸೇರುವ ಕಾಲ ಈಗಿದೆ..”ಕಾಲಾಯ ತಸ್ಮೈ ನಮಃ” ಜನರಿಗೆ ಮತ್ತೆ ಸತ್ವಯುತ ಆಹಾರದ ಬಗ್ಗೆ ಅರಿವು ಮೂಡುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆಯ ಲಕ್ಷಣ.ಇಂತಹ ಒಂದು ಒಳ್ಳೆಯ ಆಹಾರವೀ ಸವತೆ ಕಾಯಿ..ಈ ಸವತೆಯನ್ನ ನಿತ್ಯ ಸೇವಿಸಿ ನಿಮ್ಮ ಆಯುರಾರೋಗ್ಯ ಐಶ್ವರ್ಯಾದಿಗಳನ್ನು ಕಾಪಾಡಿಕೊಳ್ಳಿರೆಂದು ಹೇಳುತ್ತಾ

ಈ ಸವತೆ ಚರಿತ್ರೆಯನ್ನ ಪ್ರಾರಂಭಿಸುತ್ತಿದ್ದೇನೆ. ಮೊದಲಿಗೆ ನಿಮ್ಮ ಜ್ಞಾನದೀಪವನ್ನ ಬೆಳಗಿಸಿ, ಶುದ್ದ ಮನಸ್ಸಿನಿಂದ ಹಾಗೂ ಏಕಾಗ್ರಚಿತ್ತದಿಂದ ಈ ಸವತೆಯ ಕತೆಯನ್ನ ಕೇಳುವವರಾಗಿ.

ಸವತೆ ಪುರಾಣ¡

ಅಧ್ಯಾಯ -೧

ಏಟೊಂದು ದಿನವಾಯ್‌ತಲ್ಲಾ ನಾ

ಬರೆಯಲು ಶುರುಮಾಡಿ ಕವಿತೆ¡

ಅದ್ಯಕೋ ಕಾಣೆ ಮರ್‌ತೊದೇ

ಸವತೆ ಮೇಲೆ ಬರೆಯಲು ಕವಿತೆ¡

ಹೋಗ್‌ಲಿ ಬಿಡಿ, ಸವತೆ ಈಗಲಾಗದ್ರೂ

ಥಟ್‌ಅಂತ. ನೆನೆಪಾಯಿತೇ¡

ಮುಂದಕ್‌ ಹಾಕದ್ ಬ್ಯಾಡಾಂತ,

 ಈಗ್ಲೇ ಬರಕೊಂತ್‌ ಕುಂತೆ¡

ಗೊತ್ತೇನ್ರೀ ನಮ್ ಊರಿನ ಸವತೆ¡

ನಾಡಿನ್  ತುಂಬಾ ಹೆಸರು ಮಾಡಿದ ಸವತೆ¡

ದಿನವೂ ಲೋಡುಲೋಡುಗಟ್ಟಲೆ,

ರಾಜಧಾನಿಯ ಸೇರುತ್ತೆ¡

ಕಚ್ ತಿನ್ನೀ, ಹೆಚ್‌ ತಿನ್ನಿ,

ಸಿಪ್ಪೆ ಸಹಿತ ತಿನ್ನಿ,

ಸಿಪ್ಪೆ ರಹಿತ ತಿನ್ನಿ,

ಹೆಂಗೇ ತಿನ್ರೀ,

ಚೆಂದವಲ್ಲ, ನಮ್ಮೂರಿನ ಸವತೆ¡

ನೋಡೋಕೆ ಭಾಳ ನಯ ಕಾಣುತ್ತೆ¡

ತಿನ್ನಕ್ಕಂತೂ ಅಷ್ಟು ರುಚಿ ಇರತ್ತೆ¡

ಯಾರೇ ನಮ್ಮರಿಗೆ ಬಂದು ಹೊರಟರೂ,

ತಾಂಬೂಲದ ಜತೀಗೆ ಸೌತೆ ಇರುತ್ತೆ¡

ಅವರ ಜೊತೆಗೆ ಸವತೆ ಸಾಥ್ ಕೊಡುತ್ತೆ¡

ಎಂಬಲ್ಲಿಗೆ ಹೊಳೆನರಸೀಪುರ ಕ್ಷೇತ್ರದ ರೂಪಾ ಕಾವ್ಯಕಾಂಡದ ಸವತೆ ಪುರಾಣದ ಒಂದನೆಯ ಅಧ್ಯಾಯವು ಮುಗಿದಿದೆ.ಈಗ ಎರಡ್ ತುಪ್ಪದ ಬತ್ತಿ ಹಚ್ಚಿ ಸವತೆ ಮಾತೆಗೆ ಆರತಿ ಬೆಳಗಿ.ಎರಡು ಹೊಳೆನರಸೀಪುರ ಸೌತೆಕಾಯಿಗಳನ್ನ ನೇವೇದ್ಯಕ್ಕಿಟ್ಟು, ತಾಯಿಗೆ ನಿವೇದಿಸಿ.

ಎಲ್ಲರೂ ಇಂದು ಸವತೆ ಹೆಸರುಬೇಳೆಯ ಕೋಸಂಬರಿ ಮಾಡಿ ಸ್ವೀಕರಿಸಿ

ನಿಮ್ಮ ತನುಮನವನ್ನು ತಂಪು ಮಾಡಿಕೊಳ್ಳೀ¡


ರೂಪ ಮಂಜುನಾಥ

2 thoughts on “ಪೂರ್ವಕಾಲದಲ್ಲಿ…-ರೂಪ ಮಂಜುನಾಥ್

Leave a Reply

Back To Top