ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಆಧುನಿಕ ವಚನ

ಯ.ಮಾ.ಯಾಕೊಳ್ಳಿ


ವೇದಿಕೆಯನೇರಿ‌ ಮಾತಾಡಿದ್ದು ಅಧಿಕ
ಸಾಧನೆಯ ಕುದುರೆಯನು ಹತ್ತಿದ್ದು ಕ್ಷಣಿಕವಯ್ಯ
ಆದರ್ಶದ ಮಾತಾಡಿದ್ದು ಅಧಿಕ, ನಿಜವಾಗಿ ನಡೆದದ್ದು ಕ್ಷಣಿಕವಯ್ಯ
ಬಿತ್ತರದ ಕನಸು ಕಂಡದ್ದು ಅಧಿಕ ಚಪ್ಪರವನೇರಿದ್ದೂ
ಕ್ಷಣಿಕವಯ್ಯ
ಆಗದ ಹೋಗದ ಮಾತಲೆ ಬದುಕು ಹೋಯಿತು, ನಿಜದ ನಡೆಯತ್ತ ಸಾಗಿಸಯ್ಯ ಸೌಗಂಧೀಪುರಾಧೀಶ್ವರಾ

ನನಗೆ ತೋರಿದಂತೆಬರೆದೆ
ವಚನವೆಂದು‌ ಕರೆದೆ
ನೀನು ಒಪ್ಪದೆ,ನಿನ್ನ‌ ನಿನ್ನವರ ತಕ್ಕಡಿಯಲ್ಲಿ ತೂಗಿ ಬೆಲೆಕಟ್ಟಿಸಯ್ಯ ಸೌಗಂಧಿಪುರಾಧೀಶ್ವರಾ

ಮನದ ಕಲ್ಮಷ ಮೀರದೆ ಮನೆಯ ಕಲ್ಮಷ ಹೋಗದಯ್ಯ
ತನುವಿನ ತೋಷ ಕಳೆಯದೆ ಹೊರಗನ ರೋಷ ಹೋಗದಯ್ಯ
ಬರಿ ಹೊರಹೊರಗನೆ ತೋರಿ ಬೆರಗುಗೊಳಿಸಿದೆನಯ್ಯ
ಒಳಗು ತಿಳಿಯುವ ಪರಿಯ ನೀನೇ ಬಲ್ಲೆಯಯ್ಯ ಸೌಗಂಧೀಪುರಾಧೀಶ್ವರಾ

ಒಲವಿನ‌ ಮಾತನಾಡುವದು ಸರಳ ಒಲವ‌ ನಿಭಾಯಿಸುವದು ಕಷ್ಟವಯ್ಯ.
ಸತ್ಯದ ಮಾತನಾಡುವದು ಸರಳ ಸತ್ಯದ ದಾರಿಯಲಿ ನಡೆವುದು ಕಠಿಣವಯ್ಯ
ಸರಳತೆಯ‌ಮಾತು ಸರಳ ,ಸರಳತೆಯ ದಾರಿ ಸುಲಭವಲ್ಲವಯ್ಯ
ನಡೆದಂತೆ ನುಡಿದಂತೆ,ಬದುಕಿದವರು ಶರಣರಾದರು.
ಉಳಿದವರಿಲ್ಲಿಯೆ ತಿರುಗುವ ಹುಳವಾದೆವಯ್ಯ ಸೌಗಂಧೀಪುರಾಧೀಶ್ವರಾ

ನಿತ್ಯವೂ ನಾನಿಡುವ ಹೆಜ್ಹೆಗಳು ನನ್ನ ಚುಚ್ಚುತಿವೆಯಯ್ಯ
ನಿತ್ಯವೂ ನಾನಾಡುವ ಮಾತುಗಳು ನನ್ನ ಚುಚ್ಚುತಿವೆಯಯ್ಯ
ಮಾತಿನಲಿ‌ ಮನಾರ ಕೆಲಸ ಸುಮಾರವಾದಂತೆ ಬದುಕಿದೆನಯ್ಯ
ನೀನಾದರೂ ಮಾತು ಮನದಲಿ ಏಕವಾದವರ ತೋರಿ ಸಲಹಯ್ಯ ಸೌಗಂಧೀಪುರಾಧೀಶ್ವರಾ


About The Author

Leave a Reply

You cannot copy content of this page

Scroll to Top