ಅಂಕಣ ಸಂಗಾತಿ

ಸಕಾಲ

ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು

ಜ್ಞಾನ ಸಂಪತ್ತು ಎಂಬುದು ವಿಸ್ತಾರವಾದ ಸಾಗರವಿದ್ದಂತೆ. ಇಲ್ಲಿ ಕಲಿತಷ್ಟೂ ಮುಗಿಯುವುದಿಲ್ಲ ಮತ್ತು ಇನ್ನೂ ಕಲಿಯಬೇಕೆಂಬ ತುಡಿತ ನಮ್ಮದಾಗುತ್ತದೆ. ಪ್ರಪಂಚದಲ್ಲಿ ನಡೆಯುತ್ತಿರುವ ಆಗು ಹೋಗುಗಳು, ಅದ್ಭುತಗಳು ಹೀಗೆ ನಮ್ಮ ಜ್ಞಾನವನ್ನು ವೃದ್ಧಿಸುವ ಹಲವಾರು ಸೂತ್ರಗಳು ನಮ್ಮ ಮುಂದಿವೆ.

ಜ್ಞಾನದ ದಾಹ ಯಾರಲ್ಲಿ ಉತ್ಕಟವಾಗಿರುತ್ತದೆಯೋ ಅವರ ವಿಚಾರಗಳು ಸತ್ಕಾರ್ಯದತ್ತ ಸಾಗುತ್ತದೆ. ಹಾಗೆಯೇ ಸರ್ವಜ್ಞ ಸರ್ವಶ್ರೇಷ್ಠನಾಗಲು ಸಾಧ್ಯವಾಗಿದ್ದು ಹೇಗೆಂದರೆ,

ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳಗೊಂದು ನುಡಿಗಲಿತು

ವಿದ್ಯೆಯ ಪರ್ವತವೇ ಆದ ಸರ್ವಜ್ಞ

ಜ್ಞಾನವಿಲ್ಲದವನು ಹದ್ದಿಗಿಂತಲೂ ಕಡೆ ಎಂದು ಶಾಸ್ತ್ರ ಪುರಾಣಗಳು ಹೇಳುತ್ತವೆ.

ಈ ಜ್ಞಾನವನ್ನುಪಡೆಯಲು ವಿಪರೀತ ದುಡ್ಡು ಖರ್ಚು ಮಾಡಬೇಕಾಗಿಲ್ಲ. ಮಹಾನ್ ಪಂಡಿತರುಗಳನ್ನು ಹುಡುಕಬೇಕಾಗಿಲ್ಲ. ನಿಮಗೆ ಗೊತ್ತಿರುವ ಕೆಲವೊಂದು ಸಂಗತಿಗಳನ್ನು ಮತ್ತಷ್ಟು ಪಕ್ವಗೊಳಿಸುವ ವಿಧಾನ ಅರಿತರೆ ಸಾಕು. ವಿಶ್ವದಲ್ಲಿರುವ ಕೆಲವೊಂದು ಅದ್ಭುತಗಳು ನಮ್ಮ ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ನಮಗೆ ಅಪಾರ ಜ್ಞಾನವುಂಟಾಗುವಂತೆ ಮಾಡುತ್ತದೆ. ಅದಕೆ ಜ್ಞಾನಕ್ಕಿಂತ ಮಿಗಿಲಾಗಿ ಬೇರಾವುದು ಇಲ್ಲ.

ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|

ಜ್ಞಾನವಿಲ್ಲದಲೆ ಸಕಲವೂ ತನಗಿದ್ದು|

ಹಾನಿ ಕಾಣಯ್ಯ ಸರ್ವಜ್ಞ||

ಜ್ಞಾನದಿಂದಲೇ ಈ ಲೋಕದಲ್ಲಿ ಸುಖ ಹಾಗು ಪರಲೋಕದಲ್ಲಿ ಮುಕ್ತಿ ದೊರೆಯುವುದು. ಜ್ಞಾನವೇ ಇಲ್ಲದಿದ್ದರೆ ತನಗೆ ಸಿಕ್ಕಿರುವ ಸಕಲ ವಸ್ತುಗಳೂ ವ್ಯರ್ಥ!

ಅಲ್ಲದೆ ಕೆಲವೊಂದು ಆಶ್ಚರ್ಯಕರ ಸಂಪ್ರದಾಯಗಳು  ವಿಸ್ಮಯ ಸಂಗತಿಗಳಿದ್ದು ಅದನ್ನು ಹುಡುಕುವ ಪ್ರಯತ್ನ  ಹಾಗೂ ಅರಿವ ಮನಸ್ಸು ನಮ್ಮದಿರಬೇಕು. ಪುರಾಣ ಗ್ರಂಥಗಳೂ ಕೂಡ ವಿಶ್ವದಲ್ಲಿನ ಈ ವಿಸ್ಮಯಗಳನ್ನು ವಿಸ್ತಾರವಾಗಿ ತಿಳಿಸಿದ್ದು ಭೂಮಿಯ ಬಗೆಗೆ ಹೆಮ್ಮೆ ಉಂಟು ಮಾಡುವಂತೆ ಮಾಡಿದೆ.ಅದರಲ್ಲೂ ಕೆಲವೊಂದು ವಿಚಿತ್ರ ಸಂಪ್ರದಾಯಗಳು ಮತ್ತು ವಾಸ್ತವಾಂಶಗಳನ್ನು ತಿಳಿಯುತ್ತಾ ಹೋಗುತ್ತಿದ್ದಂತೆ ಇನ್ನಷ್ಟು ಚಕಿತತೆ ನಮ್ಮನ್ನು ಆವರಿಸಿಕೊಳ್ಳುತ್ತದೆ.

ಉದಾ.ನಮ್ಮ ದೇಶ ಆಚರಣೆ ಸಂಪ್ರದಾಯಕ್ಕೆ ಹೆಸರು ವಾಸಿ.ಗರ್ಭಾಂಕುರದಿಂದ,ಹುಟ್ಟಿನಿಂದ ಹಿಡಿದು ಸಾಯುವೊವರೆಗೂ ತನ್ನದೆ ಆದ ಆಚರಣೆಗೆ ಒಂದು ಮಾನದಂಡಗಳನ್ನು ನಿರ್ಧರಿಸಿದೆ.ಆಯಾ ಕಾಲಘಟ್ಟ ತನ್ನದೇ ಆದ ಛಾಪು ಮೂಡಿಸಿದೆ.ಪ್ರತಿ ಜಾತಿ,ಧರ್ಮದ ಆಚರಣೆಗಳು ಭಿನ್ನವಾಗಿಯೇ ಇರುತ್ತವೆ. ಅದರಲ್ಲೂ ಶವಸಂಸ್ಕಾರವೂ ಒಂದು.ಆಶ್ಚರ್ಯಕರ ಕೆಲವು ಆಚರಣೆಗಳು ಬುಡಕಟ್ಟುಗಳಲ್ಲಿ ಶವವನ್ನು ಕುಳ್ಳರಿಸಿ ತಮಟೆ ಬಾರಿಸುತ್ತಾ ಸ್ಮಶಾನಕ್ಕೆ ಕೊಂಡೊಯ್ದರೆ ಇನ್ನೊಂದೆಡೆ ಶವಕ್ಕೆ ಬೆಂಕಿ ತಗಲಿಸುವ ಮೊದಲು ಬೆತ್ತಗಳಿಂದ ರಪರಪನೇ ಬಾರಿಸಲಾಗುತ್ತದೆ. ಇದರಿಂದ ಭೂಮಿಯ ಪಾಪವೆಲ್ಲಾ ಕಳೆದು ಆತ್ಮ ಸ್ವರ್ಗ ಸೇರುತ್ತದೆಂಬ ನಂಬಿಕೆ.ಪಿರಮಿಡ್ಡಿನ ನೆನಪಾಗದೆ ಇರದು. ಸತ್ತ ಮೇಲೆ ಎಲ್ಲವೂ ಮೂಕರೋಧನೆ ಅದಕೂ ಕಟ್ಟು ನಿಟ್ಟು ಪುನಃ ಹುಟ್ಟುವ ಅಪಾರ ನಂಬಿಕೆ. ಜ್ಞಾನವೆನ್ನುವುದು ಅರಿವಿಗೆ ಒರೆಹಚ್ಚುವಷ್ಟು ಪ್ರಖರತೆಯ ಸಾರುವ ಗುಚ್ಛವೆಂದರೆ ತಪ್ಪಾಗದು.

ಎತ್ತ ಹೋದರೂ ಮನವ| ಹತ್ತಿಕೊಂಡೇ ಬಹುದು|

ಮತ್ತೊಬ್ಬ ಸೆಳೆದುಕೊಳಲರಿಯದಾ| ಜ್ಞಾನದಾ

ಬಿತ್ತು ಲೇಸೆಂದ ಸರ್ವಜ್ಞ||

ನಾವು ಎಲ್ಲೇ ಹೋದರು ಅಲ್ಲಿ ನಮ್ಮ ಮನಸ್ಸು ಬರುವುದು. ಅಂದರೆ ಜ್ಞಾನ. ಅದು ಯಾರಿಂದಲೂ ಕದಿಯಲಸಾಧ್ಯವಾದ ವಸ್ತು.ವಿದ್ಯೆಯಿದ್ದ ಕಡೆ ಅಂಧಕಾರ ಸುಳಿಯದು.ವಿದ್ಯೆಯಿಂದ ಸಕಲ ಆಸ್ತಿ ಪಾಸ್ತಿ ಗಳಿಸಲು ಸಾಧ್ಯ.ನಾವು ಬಳಸುವ ಗರಿಗರಿ ನೋಟುಗಳನ್ನು ತಯಾರಿಸಲು ಕಾಗದ ಬಳಸಲಾಗುವುದಿಲ್ಲ.ಬದಲಿಗೆ ಹತ್ತಿ ಬಳಸಲಾಗುತ್ತದೆ. 1950ಕ್ಕೂ ಮೊದಲು ನೋಟು ಗಳನ್ನು ಮಾದಕ ಎಲೆಗಳಾದ ಮಾರಿಯುವಾನಾ ಗಿಡದ ಎಲೆಗಳಿಂದ ತಯಾರಿಸಲಾಗುತ್ತಿತ್ತೆಂಬ ವಿಷಯ ತಿಳಿದಷ್ಟು ಕುತೂಹಲ ಬೆಟ್ಟದಷ್ಟಿದೆಂಬುದು ಗೋಚರವಾಗದೆ ಇರದು.

ನಮಗೆಲ್ಲ ಮೊನಾಲಿಸಾಳ ತೈಲ ವರ್ಣದ ಚಿತ್ರ ಇಂದಿಗೂ ಜಗತ್ತಿನೆಲ್ಲರ ಚಿತ್ತ ಸೆಳೆದಿದ್ದನ್ನು ಮರೆಯಲು‌ ಸಾಧ್ಯವಿಲ್ಲ.ಮೊನಾಲಿಸಾಳ ಚಿತ್ರದ ಬಗ್ಗೆ ಅನೇಕ ದಂತ ಕತೆಗಳಿದ್ದು ಆ ಚಿತ್ರದ ಬಗ್ಗೆ ಮತ್ತಷ್ಟು ತಿಳಿಯುವಂತೆ ಜನರಲ್ಲಿ ಕುತೂಹಲ ಮೂಡಿಸಿದೆ. ಈ ಮೊನಾಲಿಸಾ ಯಾರು?ಎಂಬ ರಹಸ್ಯವನ್ನು ಬೇಧಿಸಲು ಅನೇಕ ಶತಮಾನಗಳಿಂದ ಪ್ರಯತ್ನ ನಡೆಯುತ್ತಿದೆ.

ಈ ಪೇಂಟಿಂಗ್ ಲಿಯೋನಾರ್ಡೊ ಡಾ ವಿಂಚಿ ಮರಣ ಹೊಂದಿ 500 ವರ್ಷಗಳು ಕಳೆದರೂ ಇದರ ಜನಪ್ರಿಯತೆ ಹೆಚ್ಚಾಯಿತೇ ಹೊರತು ಕಮ್ಮಿಯಾಗಲಿಲ್ಲ ಆದರೆ ಈ ಪ್ರಖ್ಯಾತ ತೈಲವರ್ಣಚಿತ್ರದಲ್ಲಿಯ  ಮೊನಾಲಿಸಾಳ ತುಟಿಯನ್ನು ಬಿಡಿಸಲು ಲಿಯೋನಾರ್ಡೋಗೆ ಹತ್ತು ವರ್ಷ ತೆಗೆದುಕೊಂಡರಂತೆ.

ಹಾಗಿದ್ದ ಮೇಲೆಯೇ ಈ ಪೇಂಟಿಂಗ್ಗೆ ಹೆಚ್ಚು ಬೆಲೆ ಬಂದಿರಬಹುದು..

ಜಗತ್ತಿನಲ್ಲಿ ಅಂಟಾರ್ಕ್ಟಿಕ್‌ದಲ್ಲಿ ಮಾತ್ರ ಜೇಡ ಇಲ್ಲ ಅತ್ಯಂತ ಶೀತಲ ಪ್ರದೇಶವಾದ ಅಂಟಾರ್ಕ್ಟಿಕಾದಲ್ಲಿ ಮಾತ್ರ ಜೇಡವನ್ನು ವಿಜ್ಞಾನಿಗಳು ಕಂಡಿಲ್ಲ. ಆದರೆ ಸರಿಸುಮಾರು ಇಷ್ಟೇ ತಣ್ಣಗಿರುವ ಸೈಬೀರಿಯಾದಲ್ಲಿ ಜೇಡಗಳಿವೆ (siberian spider). ಅಂದರೆ ಇದುವರೆಗೆ ಯಾವುದೇ ಹಡಗಿನ ಮೂಲಕ ಜೇಡ ಅಲ್ಲಿ ತಲುಪಿಯೇ ಇಲ್ಲವೆಂದಾಯ್ತು, ಮುಂದಿನ ದಿನಗಳಲ್ಲಿ ಹೀಗಾಗಬಾರದು ಎಂದೇನಿಲ್ಲ.ಜೇಡ ತನ್ನ ಜೀವನ ಶೈಲಿಯನ್ನು ಬದಲಿಸಲುಬಹುದು.ಭೂಮಿಯ ತಾಪಮಾನದಲ್ಲಿನ ವೈಪರೀತ್ಯಗಳು ಜೀವಿಗಳ ಜೀವನ ಚರಿತ್ರೆ ಭಿನ್ನಗೊಳಿಸಬಹುದು.

ಮಹಾಯುದ್ಧದ ಕಾಲದಲ್ಲಿ ಹಲವಾರು ಸಂಶೋಧನೆಗಳಾಗಿವೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ಹಲವು ಔಷಧಿಗಳನ್ನು ಕಂಡುಹಿಡಿಯಲಾಗಿತ್ತು. ಯಾವುದೇ ವೈದ್ಯಕೀಯ ಸಂಶೋಧನೆಯನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಮುನ್ನ ಇಲಿ, ಹಂದಿ,ನಾಯಿ ಮೊದಲಾದವುಗಳ ಮೇಲೆ ಪ್ರಯೋಗ ನಡೆಸಿ,ಅಧ್ಯಯನದ ಬಳಿಕ ಮನುಷ್ಯರ ಮೇಲೆ ಪ್ರಯೋಗಿಸಲಾಗುತ್ತದೆ. ಆದರೆ ಎರಡನೇ ಮಹಾಯುದ್ಧದ ಕಾಲದಲ್ಲಿ ಹಿಟ್ಲರ್ ಮೂಡಿಸಿದ್ದ ಜ್ಯೂ ವಿರೋಧಿ ಅಲೆ ಜ್ಯೂಗಳನ್ನು ಹಂದಿಗಳಿಗಿಂತಲೂ ಕೀಳಾಗಿ ಕಾಣುವ ಮಟ್ಟಕ್ಕೆ ಕರೆದೊಯ್ದಿತ್ತು. ಉದಾಹರಣೆಗೆ ಎಕ್ಸ್ ರೇ ಕಿರಣಗಳನ್ನು ಜ್ಯೂ ಪುರುಷರ ಮೇಲೆ ಮತ್ತು ಮಹಿಳೆಯರ ಮೇಲೆ ಹಾಯಿಸಿ ಅವರ ಫಲವತ್ತತೆ ಬಗ್ಗೆ ಅಧ್ಯಯನ ನಡೆಸಲಾಯಿತು. ಕಿರಣ ಹಾಯಿಸಿದ ಕೈ ಕಾಲು, ಮಾಂಸಖಂಡಗಳನ್ನು ಯಾವುದೇ ಅರವಳಿಕೆಯಿಲ್ಲದೇ ಕತ್ತರಿಸಿ ತೆಗೆಯಲಾಯಿತು. ಜ್ಯೂಗಳು ಜೀವಂತವಿದ್ದಂತೆಯೇ ನರಕ ಅನುಭವಿಸಿದರೆಂಬುದು ಹೃದಯವಿದ್ರಾವಕ ಸಂಗತಿಗಳು.

ಹಿಂದೂ ಸಂಪ್ರದಾಯದಲ್ಲಿ ಅತಿ ಮಹತ್ವದ ಸ್ಥಾನ ಪಡೆದಿರುವ ಕುಂಭಮೇಳದ ಪ್ರಮುಖ ಆಕರ್ಷಣೆ ಎಂದರೆ ನಾಗಾ ಸಾಧುಗಳು ಅಥವಾ ನಾಗಾ ಬಾಬಾಗಳು. ಪ್ರಥಮ ನೋಟಕ್ಕೇ ಇವರ ಅಸಾಮಾನ್ಯ ವೇಷಭೂಷಣ ಕುತೂಹಲ ಮೂಡಿಸಿದರೆ ಇವರು ಅನುಸರಿಸುವ ಚಿತ್ರ ವಿಚಿತ್ರ ಸಂಪ್ರದಾಯಗಳು ಸಂಗತಿಗಳು ಇನ್ನಷ್ಟು ಬೆರಗು ಮೂಡಿಸುತ್ತವೆ.ನಮ್ಮ ದೇಶದಲ್ಲಿರುವ ಕೆಲವೊಂದು ವಿಲಕ್ಷಣ ಆಚರಣೆಗಳು

ಅದರಲ್ಲೂ ಶಿವನ ಆರಾಧಕರಿಗೆ ಪವಿತ್ರವಾದ ಈ ಮೇಳದಲ್ಲಿ ನದಿಯಲ್ಲಿ ಮುಳುಗು ಹಾಕುವುದು ಒಂದು ಮುಖ್ಯ ವಿಧಿಯಾಗಿದೆ. ಈ ಸಮಯದಲ್ಲಿ ಯಾವುದೇ ಅಳುಕಿಲ್ಲದೇ ನಗ್ನರೂಪದಲ್ಲಿ ಹಾಜರಾಗುವ ನಾಗಾಸಾಧುಗಳ ಸಂಪ್ರದಾಯಗಳು ವಿಚಿತ್ರವಾದರೂ ಅದನು ಪುಷ್ಠಿಕರಿಸುತ್ತ,ಅಘೋರಿಗಳು ಒಂದು ರೀತಿಯ ಸಂಚಲನ ಮೂಡಿಸುವತ್ತ ಸಾಗುವರು ಇದರ ಆಳ ಅಧ್ಯಯನ ಮಾಡಿದಷ್ಟು ಹೊಸ ಅಲೆಯ ಆಗಮನವಾಗುವುದು.

ಏನೇ ಹೇಳಿದರೂ ಪ್ರಕೃತಿಯನ್ನು ಬೇಧಿಸಲು ನಮ್ಮಿಂದ ಸಾಧ್ಯವಾಗದಿರುವುದು ವಿಸ್ಮಯವೆ.ಸಾಸಿವೆ ಕಾಳಿನಷ್ಟು ಕಲಿತು,ಸಂಶೋಧನೆ ಮಾಡಿ ನಾವೆ ಶ್ರೇಷ್ಠವೆಂದು ಬೀಗುವ ಮನಕೆ ಭೂಕಂಪನ,ಜಲಪ್ರಳಯ ತಡೆಯಲಾಗದ ಅಸಹಾಯಕತೆ ನಮ್ಮ ಕಾಡದಿರದು.ಅಂದಾಗ ಕಲಿಯುವುದು,ಜ್ಞಾನಾರ್ಜನೆ ಯಾವುದಕ್ಕೆ ಬಳಕೆಮಾಡಬೇಕು? ಎಷ್ಟು ಅವಶ್ಯಕತೆ ಇದೆಯೆಂಬುದರ ಮೇಲೆ ಬದುಕು ನೀರಮೇಲಿನ ಗುಳ್ಳೆಯೆಂಬ ಅರಿವು ಮೂಡದಿರದು.ಉಸಿರಾಡುವ ತನಕ ಕಲಿಕಾರ್ಥಿಗಳಾಗಿ ಬದುಕುವುದು ಸೂಕ್ತ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

9 thoughts on “

  1. ಜ್ಞಾನ ಎನ್ನುವುದು ಸಾಗರವಿದ್ದ ಹಾಗೇ,ಎಷ್ಟು ಕಲಿತರೂ ಕಲಿಯುವ ಅಗಾಧತೆಯ ಆಳವನ್ನ ಸಾಕಷ್ಟು ನಿದರ್ಶನಗಳೊಂದಿಗೆ ಮನಮುಟ್ಟುವ ಹಾಗೇ ತಿಳಿಸಿದ್ದೀರಿ.ಅಭಿನಂದನೆಗಳು ಸಹೋದರಿ.

  2. ಎಲ್ಲ ಪ್ರಶಸ್ತಿಯ ಜೇನು ಗೂಡಾಗಿ ಬೆಳೆ ಯ ಲಿ ಎಂದು ನನ್ನ ಬಯಕೆ . ನಮಸ್ಕಾರ ಗಳು

  3. V.good, sundar& artha purna lekhan. Nimminda ennu hechhin rasvatada,rasamay,rasagavaldanta swarsyapurna lekhan maalikegal hottige horhommuttirali. Aduve nammellarigu maadariyutavagirali. Joteyalle nimmalladigida e supta akshar modi horhommisalu prothsahisuttiruva nimma yajaman devarigu nanndondu aashirvadapurna Salam.abhinandnegalu tamage. Olledaagali

  4. ತುಂಬಾ ಸುಂದರ ಲೇಖನ ರೀ ಮೇಡಂ ಮತ್ತೆ ಮತ್ತೆ ಓದಬೇಕು ಎಂಬ ಭಾವ.

  5. ಜ್ಞಾನದ ಮಹತ್ವದ ಬಗ್ಗೆ ತಿಳಿಸುತ್ತಾ… ಅನೇಕ ಹೊಸ ಕುತೂಹಲಕಾರಿ ವಿಷಯಗಳ ಅರಿವನ್ನೂ ನೀಡಿರುವಿರಿ….ಅಭಿನಂದನೆಗಳು ಮೇಡಮ್

  6. ಉತ್ತಮ ಉದಾಹರಣೆ ಗಳೋಂದಿಗೆ ,ಮನುಷ್ಯ ಸಾಯುವ ವರೆಗೂ ಕಲಿಕಾರ್ಥಿಯಾಗಿರಬೇಕು,ಎಂಬ ಮಾತು ತುಂಬಾ ಅರ್ಥಗರ್ಭಿತವಾಗಿದೆ.
    *ನನ್ನ ತಂದೆ ಕೂಡಾ ಲೇಖನ ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.* great

Leave a Reply

Back To Top