ಕಾವ್ಯ ಸಂಗಾತಿ
ಅಜಗಜಾಂತರ
ಸವಿತಾ ಇನಾಮದಾರ್
ಹಿಂದೆ
ಯಾರು ಯಾರನ್ನೋ ಅಣ್ಣಾ ಎಂದು ಕರೆದು,
ನಂಬಿಕೆಯ
ಕಳಸವಿಟ್ಟು,
ಭಾವನೆಗಳ ಮಹಾಸಾಗರದಲ್ಲಿ ತೇಲುವ ಮೊದಲಿನ ಮಹಿಳಾ ಮಣಿಗಳಿಗೂ…
ಪ್ರತಿಯೊಬ್ಬರನ್ನೂ ಸಂದೇಹ ದಿಂದ ನೋಡುವ, ಭಾವನೆಗಳನ್ನು ಮನದಲ್ಲೇ ಮುಚ್ಚಿಡುವ,
ಪ್ರತಿ ಕ್ಷಣವೂ ತನಗಾಗಿ ಹೋರಾಡುವ ಈಗಿನ ಮಹಿಳೆಯರಿಗೂ ಅಜಗಜಾಂತರವಿದೆ.
ಹಳೆಯ ನೆನಪು ಕುಣಿಯುತ್ತಾ ಬರುತಿದೆ.
ಮನೆಗೆ ಬಂದವರನ್ನು,
ಹೊರಗೆ ಸಿಕ್ಕವರನ್ನು ಪ್ರೀತಿಯಿಂದ ಮಾತನಾಡಲು ಎಷ್ಟು ವಿಶ್ವಾಸದಿಂದ ಬಿಡುತ್ತಿದ್ದರು ನಮ್ಮ ಆ ಹಿರಿಯರು.
ಬಳೆಗಾರನಿಗೆ ಕೈಕೊಟ್ಟು,
ಕೈತುಂಬ
ಬಣ್ಣ ಬಣ್ಣದ ಬಳೆಗಳನ್ನು ತೊಟ್ಟು,
ರೇಷ್ಮೆ ಲಂಗವ ಧರಿಸಿ, ಉದ್ದದ ಜಡೆಯಲ್ಲಿ ಮಲ್ಲಿಗೆಯ ಮಾಲೆ ಸಿಗಿಸಿ,
ಗೆಜ್ಜೆಯ ನಾದ ಮಾಡುತ್ತಾ
ಕಿಲಕಿಲನೇ ನಗುತ್ತಾ
ಮುದ್ದು ಮಕ್ಕಳ ಸುಂದರ ಚಿತ್ರಗಳು ಕಣ್ಣುಗಳ ಮುಂದೆ ಮತ್ತೆ ಮತ್ತೆ ಬರುತ್ತಿದೆ.
ಆದರೆ ಈಗ…
ಈವಾಗ
ಸಮಯದ ಚಕ್ರ ವಿಚಿತ್ರವಾಗಿ ತಿರುಗುತಿದೆ..
ಚಿಕ್ಕ ಮಕ್ಕಳನ್ನು ಎಲ್ಲೂ ಕಳಿಸುವ ಹಾಗಿಲ್ಲ..
ಯಾರ ಮೇಲೆಯೂ ಭರವಸೆ ಇಡುವಂತಿಲ್ಲ..
ಎಲ್ಲೂ ಹೋಗುವ ಹಾಗಿಲ್ಲ..
ಆ ಹಕ್ಕಿಗಳಂತೆ ಮುಕ್ತ ಆಗಸದಲ್ಲಿ ಎಂದಾದರೂ ಮತ್ತೆ
ಹೇಳಿ ನಾವು ಹಾರ ಬಲ್ಲವೇ ?
ದಿಕ್ಕು ತಪ್ಪಿ
ಎತ್ತ ಸಾಗಿದ್ದೇವೆ ನಾವು ಹೇಳಬಲ್ಲಿರಾ ನೀವು?