ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶ್ರಾವಣ

ಪ್ರೊ ರಾಜನಂದಾ ಘಾರ್ಗಿ ಕವಿತೆ

ವರುಷ ವರುಷ ಕಳೆದು
ಮರಳಿ ಶ್ರಾವಣ ಬರುತ್ತಿದೆ
ಆಷಾಡದ ಮಳೆಯ ಸರಿಸಿ
ಭೂಮಿಗೆ ಹಸಿರು ಉಡಿಸಿದೆ

ರಂಗುರಂಗಿನ ರಂಗೋಲಿ
ಅಂಗಳದಲ್ಲೆಲ್ಲ ಹರಡಿದೆ
ಕರ್ಪೂರದ ನಸುಗಂಪು
ಸುತ್ತಮುತ್ತ ಸುಳಿದಾಡಿದೆ

ತುಪ್ಪದ ನಂದಾದೀಪಗಳು
ದೇಗುಲಗಳಲಿ ಬೆಳಗುತಿವೆ
ಮನಗಳಲ್ಲಿ ಕಟ್ಟಿದ ಜಿಡ್ಡು
ಕರಗಿ ಹರಿದು ತಿಳಿಯಾಗಿದೆ

ಚಂದದ ಅಂಗನೆಯರು
ಅಂಗಳದಲ್ಲಿ ಓಡಾಡುತ್ತಾ
ಮಂಗಳಗೌರಿ ಪೂಜೆಯ
ಸಡಗರದಿ ತೊಡಗಿಹರು

ಶುಕ್ರವಾರದ ಸಂಜೆ ಹೊತ್ತು
ಮೂಗುತಿ ಹೊತ್ತ ಮುತ್ತೈದೆಯರ
ಲಕ್ಷ್ಮಿ ಪೂಜೆಯ ಸಂಭ್ರಮ
ಮುಗಿಲೆತ್ತರಕೆ ಏರುತಿಹುದು

ಪಂಚಮಿ ಹಬ್ಬ ಬಂದಾಗ
ಮಿಂಚುಗಣ್ಣಿನ ತರುಣಿಯರ
ಹೊತ್ತು ಜೋಕಾಲಿಗಳು
ಸಡಗರದಿ ಜೀಕುತಿವೆ

ವರುಷ ವರುಷ ಕಳೆದು
ಮರಳಿ ಶ್ರಾವಣ ಬರುತ್ತಿದೆ
ಮನದಿ ಕವಿದ ಮೋಡ ಸರಿಸಿ
ಹೆಂಗಳೆಯರಲ್ಲಿ ಹರುಷ ತುಂಬಿದೆ


About The Author

Leave a Reply

You cannot copy content of this page

Scroll to Top