ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನೀನಿತ್ತ ಹುಟ್ಟು

ಬೆಂಶ್ರೀ ರವೀಂದ್ರ

ಅಪ್ಪ ನಿನಗಾಗಿ ಎಂದೂ ಕವನ ಬರೆಯಲಿಲ್ಲ
ಯಾಕೆಂದರೆ ನನ್ನ ಕಣ್ಣ ಪಾಪೆಯಲ್ಲಿ ಮೂಡಿರಲಿಲ್ಲ ನಿನ್ನ ಚಿತ್ರ ; ಇಂದು
ನೆನಪುಗಳ ಗುತ್ತಿಗೆ ಕೈಯಿಟ್ಟು ಜಾಲಾಡಿಬಿಟ್ಟೆ
ಅದು ತಂಪಾದ ಶುದ್ಧ ನೀರು ; ಗಂಗೆ

ಚುಕುಬುಕು ರೈಲಿಗೆ ತೋರುತ್ತಲಿದೆ
ನಿತ್ಯ ಹಸಿರು ಬಾವುಟ
ಥಟ್ಟನೇಕೆ ತೋರಿದೆ ಬದುಕೆಂಬ
ರೈಲಿಗೆ ಕೆಂಪು ಬಾವುಟ

ಏನು ಅವಸರವಿತ್ತು ತೋಟದ ಸಸಿಗಳು
ಹೂ ಬಿಡುವ ಮುನ್ನ ನಡೆದುಬಿಟ್ಟೆಯಲ್ಲ
ನಿನಗಾದ ಅನುಭವವು ನಮಗಾಗಲೆಂದೆ

ಆದರೆ
ನಮಗಾಗಿ ಬಿಟ್ಟಿದ್ದೆ ಗಟ್ಟಿಗಿತ್ತಿ
ನಿನ್ನ ಹುಡುಗಿಯನಿಲ್ಲಿ
ಎಂದೂ ಉಡುಗಲಿಲ್ಲ ಅವಳ ಧೀಶಕ್ತಿ
ನಿನ್ನ ತೋಟಕೆ ಗಟ್ಟಿ ಬೇಲಿಯ ಕಟ್ಟಿ
ಸಸಿಗಳಿಗೆ ಪಾತಿಯಲಿ ನೀರುಣಿಸಿ
ಗೊಬ್ಬರವನಿತ್ತು ಹಣ್ಣುಗಳು ತೂಗಾಡಿದ್ದು
ನೋಡಿದಳು ಕಣ್ಣು ತುಂಬಾ
ಅವಳ ಕಣ್ಣ ಪಾಪೆಯಲ್ಲಿ ನೀನೇ ಇದ್ದೆ.

ನಿನ್ನೂರಲ್ಲಿ ನಿನ್ನಪ್ಪ ಅಮ್ಮ ಬೆಳೆಸಿದ್ದ
ಆಲವೇ ಆಶ್ರಯ
ನೀನಿಲ್ಲದಿದ್ದರೂ ಚಾಚಿತ್ತು ನಿನ್ನ ಸೂರು

ಅರಿತೆ ನಿನ್ನ
ಹೇಳು ಕೇಳುಗಳ ಹಾಡಿಗೆ ಕಿವಿಯನೊಡ್ಡಿ
ಗಾಂಧಿಯನ್ನು ಮೆಚ್ಚಿದವನ, ಕೃಷ್ಣನ
ಅವಾಹಿಸಿದವನ, ಗೀತೆಯೇ ಆದವನ
ಸಂಸಾರದ ಸಾರ ಹೀರಿ
ಸಿರಿಮುಡಿಯ ಸಂತನಾದವನ
ಸದಾ ಪುಟಿವ ಚೈತನ್ಯವಾಗಿದ್ದ ಸತ್ಯ
ಕಾಯಕ ನಿಷ್ಠನ ಗುರು ಹಿರಿಯರಲಿ ಶಿಷ್ಟನ

ಪ್ರೇಮ ತುಂಬಿದ ಮನದಲಿ ಜಗವ ತಬ್ಬಿದ
ಹೊಂಬಣ್ಣದ ಗುಂಡು ಮೊಗದಲಿ
ಹೊಳೆದಿತ್ತು ಕಂಗಳು
ಮನದಲ್ಲಿ ಹರಿದಿತ್ತು ತಿಂಗಳೂರಿನ ತೇರು

ನಿನ್ನ ಹೆಸರು ಹೆಗಲಲ್ಲಿ, ಅಮ್ಮ ಬಗಲಲ್ಲಿ
ಸಾಗಿರುವ ದೂರ ತಿಳಿಯಲಿಲ್ಲ
ದೋಣಿಸಾಗಲಿ ಜೀವನ ಸಾಗರದಲ್ಲಿ
ನೀನಿತ್ತ ಹುಟ್ಟು ಕೈಬಿಡುವುದಿಲ್ಲ


About The Author

4 thoughts on “ಅಪ್ಪನ ದಿನದ ವಿಶೇಷ”

  1. ಮಾಲತಿಶ್ರೀನಿವಾಸನ್

    “ನೀನಿತ್ತ ಹುಟ್ಟು ಕೈ ಬಿಡುವುದಿಲ್ಲ”ಅಪ್ಪನ ಬಗ್ಗೆ ಇಂತಹ ಮನ
    ಬೆಚ್ಚಗಾಗಿಸುವ ಅನುಭೂತಿ, ಸೊಗಸಾದ ನುಡಿನಮನ.
    ಮಾಲತಿಶ್ರೀನಿವಾಸನ್

Leave a Reply

You cannot copy content of this page

Scroll to Top