ಅರಿತು ಮರೆತು

ಕಾವ್ಯಯಾನ

ಅರಿತು ಮರೆತು

ಲಕ್ಷ್ಮೀ ಮಾನಸ

ನೆರಳ ಬೆಳಕಿನ
ಕದನದಲ್ಲಿ,
ಪ್ರತಿಬಿಂಬ ಅರಿಯದ
ದರ್ಪಣವನ್ನು,
ನೆರಳು ಎಂದೋ ತೊರೆದರೂ,

ಬೆಳಕ ಗೈರುಹಾಜರಿಯಲ್ಲಿ,
ಮೋಡ ಕವಿದ
ಬಣ್ಣದ ಬಿಂಬವು
ಮರುಭೂಮಿಯಲ್ಲಿ ನೀರನ್ನರಸಿ
ಹಾಕುವ ಹೆಜ್ಜೆಗಳು
ಎದೆಗೂಡಲ್ಲಿ

ಪಿಸುಗುಟ್ಟುತ್ತಲಿವೆ..
ಕಣ್ರೆಪ್ಪೆಯ ಶಬ್ಬಕ್ಕೆ
ಎದುರುನಿಲ್ಲಲಾಗದೆ…..

ಭಾವನೆಯ ಬಳ್ಳಿಯಲ್ಲಿ
ಮುದುಡದ ಕುಸುಮಾಗಳಿಗೆ
ಕಪ್ಪು ವರ್ಣವ ಪೂಸಿದರೂ,

ಅರಿತು ಮರೆತು,
ಗೀಚಿದ ಗೆರೆಯ ದಾಟಿ,
ಕಾರ್ಮೋಡದ ಮಡಿಲಲ್ಲಿನ
ಸುಖ ನಿದ್ರೆಯ ತೊರೆದು,

ಬಯಸುತಲಿವೆ
ಮಾತನರಿಯದ ಮೌನವ
ಗೀತೆಯಾಗಿ ಬದಲಿಸಿ,
ವಸಂತ ಕೋಗಿಲೆಯೊಡಗೂಡಿ
ಮರೆತ ಹಾಡನ್ನು
ಮರಳಿ ಹಾಡಲು,
ಅರಿತ ರಾಗದಲ್ಲಿ
ಚಿರನಿದ್ರೆಗೆ ಜಾರಲು…

******

Leave a Reply

Back To Top