ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಬುದ್ಧನಾಗಲೂ ಕಷ್ಟವೀಗ

 ಹೇಮಚಂದ್ರ ದಾಳಗೌಡನಹಳ್ಳಿ

ಈಗಲೀಗ ಎದ್ದು ಹೊರಡಬೇಕೆನಿಸುತಿದೆ
ನಿನ್ನಂತೆ ತೊರೆದು ಎಲ್ಲವ
ಕಂಡೊಂದು ಸಾವಿಗೇ; ಶರಣಾದೆ ಮುಕ್ತಿಗೆ
ಭಾಜನ ನೀನೀಗಲೂ ಜನಭಕ್ತಿಗೆ
ತಮಗೇ ಸಾವು ಬಂದಡರಿ ನಿಂತರೂ
ನಿಂತ ಕಟ್ಟಡ ಕಾಮಗಾರಿಗೆ ಬಳಲಿ
ಅಳಲುಗೊಂಡಳುತ ನರಳುವರ ಕಂಡು(ಈಗಲೀಗ)

ತರಿದು‌ ಹಸುರ; ತೋಡಿ ನೆಲಬಸುರ
ಮೀರಿದಂಕೆಗೆ ಮುತ್ತಿ ಮಾರಿ ಶಂಕೆ
ಸುಳಿವ ಉಳಿದ ಗಾಳಿಯನೂ ಮುಕ್ತ ಮೂಸದಂತೆ
ಮೂಗು ಬಾಯಿ ಬಂಧಿಸಿ; ಮನೆಯೊಳಗೇ ಸಂಧಿಸಿ
ಕೊರೆದ ಕೊಳವೆ ಬಾವಿ ಕೆಲಸವರ್ಧಕೆ ನಿಂತುದಕೆ
ಅವಲತ್ತುಕೊಂಡಳಲುತಿರುವ ತಿರುಕರ ಕಂಡು(ಈಗಲೀಗ)

ಬಿರುಕು ಗೋಡೆ; ತೂತು ಮಾಡುಳ್ಳ
ಮನೆಯೊಳಗೆ ಬರಲು ಮಳೆನೀರು
ಮಳೆಗೆ ಶಾಪ ಹಾಕುವ ಅಂಧರು
ಹುತ್ತಗಳ ಕೆಡವಿ ಮನೆಯ ಮಾಡಿ
ತಮ್ಮನೆಯ ಸುತ್ತ ಹಾವುಗಳ ಹುತ್ತವೆಂದು
ಹಾವಿಗೆ ದೂರುವ ಮೂಳರ ಕಂಡು(ಈಗಲೀಗ)

ಹೊರಟೂ ತೊರೆದು ಎಲ್ಲವ ಬುದ್ಧನಾಗಲು
ಗುಮಾನಿ ಬೆನ್ಹತ್ತಿ ಅಪರಾಧಿ ಮಾಡುತದೆ
ನೆಲೆನಿಂತರೆ ಎಲ್ಲಾದರೊಂದು ಕಡೆ
ಯಾರದೋ ಹೆಸರಿಗೆ ನೋಂದಣಿಯಾಗಿ ಪಾಳಬಿದ್ದ ನೆಲ
ಮೂಲವ ಕೆಣಕಿ ಅಣಕಿಸುತದೆ
ಇದ್ದರೂ ಮರೆತು ಹೊಂಟರೂ ಅರಿತು
ಕಷ್ಟವೀಗೀಗ ಸುಲಭವಲ್ಲ
ಕಾಣುವ ಕಣ್ಣುಗಳಿಗೆ ಸಾವಿರದ ಭಾವ
ತೆಗೆವುತವೆ ಜೀವಂತ ಜೀವ…

**************

About The Author

Leave a Reply

You cannot copy content of this page