ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೈತ ಗಜಲ್

A Farmer Painting by Abin Raj

ಹೊಳೆಯ ಸಾಲಿನಲ್ಲಿ ಹೊನ್ನ ಬಿತ್ತಿ ಬೆಳೆದವನ ಮನದಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ
ಕಳೆ ಕಸ ತೆಗೆದು ಹೊಲ ಹಸನು ಮಾಡಿ ಹಸಿರುಕ್ಕುವ ಎದೆಯಲ್ಲಿ ಬೆಂಕಿ ಹತ್ತಿ ಉರಿದಿದೆ

ಕೂರಿಗೆ ತಾಳು ಬಾರುಕೋಲು ನೊಗದ ಮುಖ ಬಾಡಿದೆ ಮನೆಗಳಲ್ಲಿ ಜಾಗ ಹುಡುಕುತ್ತಾ
ಹಿಂಡಿ ಹತ್ತಿಕಾಳು ತಿಂದು ದುಂಡಗಾಗಿದ್ದ ಎತ್ತುಗಳಿಗೆ ಗತಕಾಲ ನೆನಪಾಗಿ ಉಳಿದಿದೆ

ಕೋಟಿ ವಿದ್ಯೆಯ ಬಿಟ್ಟು ಮೇಟಿ ಹಿಡಿಯಲು ಬಂದ ಮಗನ ಭವಿಷ್ಯ ಗಾಳಿಗಿಟ್ಟ ಹಣತೆ
ಮನೆ ಮಂದಿಯಲ್ಲ ಬೆವರು ಬಸಿದರೂ ಹಸಿರಾಗದ ಅಕ್ಕಡಿ ಸಾಲು ಈಟಿಯಾಗಿ ತಿವಿದಿದೆ

ನಾಡಿಗೆ ಅನ್ನ ಕೊಡುವ ಕೈಗಳಿವು ಬೊಗಸೆ ಒಡ್ಡುವಾಗ ವಿಲವಿಲನೆ ಒದ್ದಾಡುತ್ತದೆ ಜೀವ
ಬೆಳೆಗೆ ಬೆಲೆ ಇರದೆ ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆ ಗತಿಯಾಗಿ ಕಣ್ಣೀರ ಕೋಡಿ ಹರಿದಿದೆ

ಹಳ್ಳಿಯ ರೈತನ ಗೋಳು ದಿಲ್ಲಿಯ ದೊರೆಗಳಿಗೆ ಯಾವಾಗ ತಿಳಿಯುತ್ತದೆ ಅರುಣಾ
ಯುಗ ಯುಗಗಳಳಿದರೂ ಈ ಮಣ್ಣ ನಂಟು ಬಿಡಲಾಗದು ತೀರದ ಸಾಲ ಶೂಲವಾಗಿ ಎದೆಗೆ ಇರಿದಿದೆ

**********************

ಅರುಣಾ ನರೇಂದ್ರ

About The Author

Leave a Reply

You cannot copy content of this page