ರೈತ ಗಜಲ್

Rain, storm forecast worries farmers

ತುಳಿದುಬಿಡು ಬಿರುಕಿನಲ್ಲಿ ಬದುಕು ಇರಬಹುದೇನೋ ನೋಡಿ ಬರುವೆ
ಬಿತ್ತಿದ ಬೀಜಗಳು ಅರೆಜೀವ ಹಿಡಿದಿರಬಹುದೇನೋ ನೋಡಿ ಬರುವೆ

ಉಲ್ಲಾಸದಿ ಹಿರಿಹಿರಿ ಹಿಗ್ಗಿಸಿದ ಅದೇ ನೆಲ ಬಾಯ್ಬಿರಿದು ಎದೆ ಕೊರೆದಿದೆ
ಬೇರುಗಳ ಮುನಿಸಿಗೆ ಕಾರಣ ಏನಿರಬಹುದೇನೋ ನೋಡಿ ಬರುವೆ

ಆಸೆಯ ಮೇಲೆ ತಣ್ಣೀರು ಎರಚಬೇಡ ವಿಧಿಯೇ ಸುಕ್ಕುಗಟ್ಟಿದ ಜೀವವಿದು
ಕಣ್ಣೀರ ಹನಿ ಹನಿಸಿದರೆ ಹಸಿರು ಮರುಹುಟ್ಟಬಹುದೇನೋ ನೋಡಿ ಬರುವೆ

ಬಾಯ್ಬಿಟ ವಂಸುಧರೆಯ ಕಂಡ ಸೂರ್ಯ ಸಂಭ್ರಮಿಸುತಿಹನು ಒಳಗೊಳಗೆ
ಬೆವರು ಬತ್ತುವ ಮುನ್ನ ಆಸೆ ಚಿಗುರೊಡೆಯಬಹುದೇನೋ ನೋಡಿ ಬರುವೆ

ಕಾಯುವವನೇ ಕೊಲ್ಲಬೇಕೆಂದು ನಿಂತರೆ ಹುಲ್ಲುಕಡ್ಡಿಗೂ ಉಳಿವಿಲ್ಲ ‘ಅಮರ’
ಕುಳಿತು ಮೋಜು ನೋಡುವ ಕೊಲೆಗಾರ ಹೇಗಿದ್ದಾನೇನೋ ನೋಡಿ ಬರುವೆ

********************************

ಅಮರೇಶ ಎಂಕೆ

Leave a Reply

Back To Top