ರೈತ ಗಜಲ್

ತೊಗಲಂಗಿ ಸಾಕೆನಗೆ ಬೇಡ ಗತ್ತು ಗೈರತ್ತೆನುವ ರೈತ
ಹಗಲಿರುಳು ಬೆವರಿಳಿಸಿ ದೇಶಕಾಗಿ ಹೊತ್ತು ಕಳೆವ ರೈತ

ಮಣ್ಣಿನೊಳಗಡಗಿರುವ ಚಿನ್ನವದು ಸದಾ ನ್ಯೂನ
ಬಣ್ಣ ಬದಲಿಸದಿರುವ ಹೊನ್ನಂತೆ ಬದುಕುವ ರೈತ

ಕಾಲವೆಂಬುದು ಬೆರಳಿನ ಚಲನೆಗೆ ನಿಲುಕಲೆಂತು ಸಾಧ್ಯ
ರವಿಯುದಯ ಅಸ್ತಮಾನವ ಲೆಕ್ಕಿಸದವ ರೈತ

ಜನಮಾನಸದಲ್ಲಿ ಸದಾ ಕುಣಿದಾಡಲು ಯೋಗ ಬೇಕಲ್ಲ
ಉಸಿರಡಗುವಾಗ ಸರ್ವಮಾನ್ಯನಾಗಿ ಮಿನುಗುವ ರೈತ

ನಿರ್ವಾಣ ಭಾವ ದೇಹದಲ್ಲಿರದೆ ಮನದಲ್ಲಿದ್ದರೆ ಸಾಲದೇನು
ಪರರೇಳಿಗೆಯಷ್ಟೇ ಸಾಕು ಜೊತೆಗಿರುವೆ ತಾನೆನುವ ರೈತ

ಸಜ್ಜನರಿಗಿದು ಕಾಲವಲ್ಲ ಎಂಬ ಭಾವ ಯಾಕೆ ಹೇಳಿ
ಸಿರಿಯನಳೆಯಲು ನಾಣ್ಯವೇಕೆ ಫಸಲು ಸಾಕೆನುವ ರೈತ

ಬೆನ್ನಿಗಿರದಿರೆ ಮೂಳೆ ಶಾರೀರವಿದ್ದರೂ ಶರೀರವೆಲ್ಲಿ ಈಶಾ
ದೇಶದ ಎಲುಬಾಗಿ ಕಿಲುಬಿರದ ಸತ್ಪಾತ್ರದವ ರೈತ

***************************

ಡಾ ಸುರೇಶ ನೆಗಳಗುಳಿ

2 thoughts on “

Leave a Reply

Back To Top