ತಿಮಿರ

ಕವಿತೆ

ತಿಮಿರ

ಡಾ. ಅಜಿತ್ ಹರೀಶಿ

Night, Light, The Fog, Park, Forest

ಸೂಡಿ ಹಿಡಿದು ಓಡಾಡುವ ಕಾಲದಲ್ಲಿ
ಕೊಳ್ಳಿ ದೆವ್ವಗಳು ಕಾಲಿಗೊಂದು ತಲೆಗೊಂದು
ಹರದಾರಿ ನಡೆದು ಸಾಗುವ ದಿನಗಳಲ್ಲಿ
ಅವುಗಳ ಜಾತ್ರೆ ರಸ್ತೆ ಪಕ್ಕದಲ್ಲಿ

ಕಳೆದ ಬಾಯಿ ಮುಚ್ಚದಂತೆ ಲಾಟೀನು
-ಬೆಳಕಿನಲ್ಲಿ ಕೇಳಿ ಸುದ್ದಿ ಹೆದರಿಕೆ ಬೇಜಾನು
ತಿರುಚಿದ ಪಾದ ಗುರುತರವಾದ ಗುರುತು
ದೆವ್ವ ಕಂಡವನಿಂದ ಇತರರಿಗೆ ತರಬೇತು!

ಕತ್ತಲಿನಲ್ಲಿ ಇಣುಕುವ ಬೆಳಕು, ಬರುವ ಶಬ್ದ
ಎಂತಹವರನ್ನೂ ಮಾಡುವುದು ಸ್ತಬ್ಧ
ಎಲ್ಲರೊಳಗೊಬ್ಬ ಕವಿ, ಆಗ ರವಿಯಿಲ್ಲ
ಕಲ್ಪನೆಗೆ ಕಾಲು ಬಾಲ

ಗಲ್ ಗಲ್, ಸರ ಪರ
ಚಿತ್ತದಲ್ಲಿ ಮೂಡುವ ಚಿತ್ರ
ಗುಂಡಿಗೆಯಲ್ಲಿ ನಡುಕ
ಆಕ್ರಮಿಸುವ ಆತಂಕ

ಅಕ್ರಮಕ್ಕೆ ಸೂಕ್ತ ಅಮಾವಾಸ್ಯೆ
ವಿದ್ಯುತ್ ಕಡಿತಗೊಳಿಸಿಯೂ
ಹುಟ್ಟಿಸುವರು ಅಮಾಸೆಯ ಸಮಸ್ಯೆ
ಚುನಾವಣೆಯ ಹಿಂದಿನ ದಿನ
ಗಂಧದ ಮರ ನಾಪತ್ತೆಯಾದ ಕ್ಷಣ

ಕತ್ತಲು ಬಗ್ಗೆ ಅಜ್ಜಿ ಹೆದರಿಸಿದ್ದು
ಹುಳ ಹುಪ್ಪಟೆ ತುಳಿಯದಿರಲೆಂದು
ಕೂರುತ್ತದೆ ಮಗುವಿನ ಮಿದುಳೆಂಬ
ಹಸಿ ಗೋಡೆಯಲ್ಲಿ ಮಣ್ಣಾಗಿ
ಕತ್ತಲು ಭಯಾನಕ

ಕಪ್ಪಾದಾಗ ನೆರಳು ಮಂದಬೆಳಕಿನಾಟ
ಆಕೃತಿಗಳಿಗೆ ಜೀವ, ಪಿಶಾಚಿ ಕಾಟ
ಆತ್ಮಸ್ಥೈರ್ಯದ ಅಗ್ನಿಪರೀಕ್ಷೆ
ಪಾಪ ಪ್ರಜ್ಞೆ ಭೂತವಾಗಿ ಶಿಕ್ಷೆ

ರಕ್ತ ಕಾರಿ, ಬೆನ್ನಮೇಲೆ ಮೂಡಿ ಬೆರಳು
ಮುರಿದು ಗೋಣು, ಧ್ವನಿಯಡಗಿ
ಸತ್ತವರ ಕತೆಯೆಲ್ಲ ಎದ್ದು ಬಂದು
ಅಂತರ್ಪಿಶಾಚಿಯಾಗಿ ಅಲೆದಾಡಿ

ಮುಗಿಯದ ಕತೆ; ಹೆದರಿ
ಮೂತ್ರ ವಿಸರ್ಜನೆ ಮಾಡಿದವರದು
ಅದನ್ನೇ ದಿಗ್ಬಂಧನದ ವೃತ್ತವಾಗಿಸಿದವರದು

ಕತ್ತಲು ಮಾತ್ರ ದಿಗಿಲು ಸೃಷ್ಟಿಸುವುದಾದರೆ
ಕುರುಡನ ಜೀವನ ಹೇಗೆ?

ಬೆಳಕ ಕಂಡವಗೆ ಕತ್ತಲ ಭಯ
ಬಾಳ ಅನುಭವಿಸಿದವಗೆ ಸಾವ ಭಯ
ಹಗ್ಗ ಹಾವಾಗಿ ಹತನಾಗುವ ಉಪಮೆ
ಅರಿವ ಹಣತೆ ಆರದಿರೆ ನಿತ್ಯ ಹುಣ್ಣಿಮೆ.
**************************************************************

2 thoughts on “ತಿಮಿರ

  1. ಅರಿವಿನ ಹಣತೆ ಹಚ್ಚುವ ಕವನ, ಚಂದವಿದೆ. ❤️

Leave a Reply

Back To Top