ಕವಿತೆ
ಅವಳು ಸತ್ಯವನ್ನು ಹೇಳಲಿಲ್ಲ
ವಿಶಾಲಾ ಆರಾಧ್ಯ

ನೀ ಏನೇ ಹೇಳು ಗೆಳತಿ
ಅವ ಅವಳನೆಂದೂ ನಂಬಲಿಲ್ಲ
ಅವಳ ಪ್ರೀತಿಯನ್ನೇಂದೂ
ಅರಿಯಲಿಲ್ಲಾ
ಕೋಮಲೆಗೆ ಆಗಿನ್ನೂ ಹನ್ನೆರಡಿರಬಹುದೇ
ಅಮ್ಮನ ಆರೈಕೆಯಲ್ಲೇ ಬಿಡಬಹುದಿತ್ತು
ಹತ್ತುನಾಲ್ಕು ವರ್ಷ ಒಡನಿದ್ದು
ಬೇಯಿಸಿ ಬಡಿಸಲೇನು
ಧಾನ್ಯಗಳ ಕಣಜವಿತ್ತೇ
ತಿಂದದ್ದು ಕಾಡಲ್ಲಿ ಗೆಡ್ಡೆ ಗೆಣಸು
ಎಲೆ ಕಾಯಿ ಹಣ್ಣು ತಾನೇ?
ಆತ ಆಕೆಯ ಒಳಗಣದ
ಕಷ್ಟ ಅರಿತನೇನೇ?
ತಿಂಗಳಲ್ಲಿ ಪೀಡಿಸುವ
ಕರ್ಮಕ್ಕೆ ಎಲ್ಲಿತ್ತು?
ಏನಿತ್ತು ಆಕೆಗೆ?
ಕೊರೆವ ಚಳಿಯಲ್ಲಿ ಗಾಳಿಯಲಿ
ಎಷ್ಟು ನಲುಗಿತ್ತು ಜೀವ
ಜಲವಿತ್ತೋ ಇಲ್ಲವೋ
ಒಲವೆಂದು ಬಂದುದಕೆ
ಬಲವೇನಾದರೂ
ಸಂದಿತೇನೇ?
ಕಾಯದಲಿ ಒಡನಿದ್ದು
ವಾಚದಲಿ ಸರಿಯಿದ್ದು
ಮನಸಿನೊಳು ಒಲವಿದ್ದಾಕೆಯ
ಅರಿಯದೆ ಬೆರಿದೆ
ಗಾಳಿಮಾತಿಗೆ ತೋಕ ಕಳೆದು
ತೂರಿ ಹೋದನಲ್ಲೇ
ರಾಮರಾಮ!
ಒಲವಿನ ಹೊಲದ ಬೆಳೆಯೆಲ್ಲಾ
ಬೇಲಿಗೇ ಬಲಿಯಾಯಿತಲ್ಲೇ
ಅವಳಿಗಿನ್ನಾರು ವೈರಿಯುಂಟೇ
ಜಗದೊಳಗೆ ಹೌದಲ್ಲವೇನೇ
ಅವನೆಂದೂ ಅವಳಿಗೆ
ಆದರ್ಶವಾಗಲಿಲ್ಲ
ಅವಳೆಂದೂ ಸತ್ಯವನ್ನು
ಹೇಳಲೇ ಇಲ್ಲ !!
********************************
ಸೀತೆಯ ಬಗ್ಗೆ ಹೀಗೂ ಒಂದು ಚಿಂತನೆ
ಧನ್ಯವಾದಗಳು ಪ್ರತಿಕ್ರಿಯೆಗೆ.
ಸೀತೆಯ ಒಡಲಾಳದ ಬೇಗುದಿ
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ
ಸೀತೆ ಸದಾ ಬಗೆಬಗೆಯಲ್ಲಿ ಕಾಡುವ ಕವಿತೆ ಅರ್ಥ ಆಗದೇ ಉಳಿದ ವನಿತೆ…. ಚೆಂದದ ಕವಿತೆ ಮೇಡಂ
ಸೀತೆ ಅವಳ ಬಾಳೇ ಶೋಕಗೀತೆ!
ವಿಧಿಯ ಹುನ್ನಾರದಲ್ಲಿ ಬದುಕು ಬೇಯಿತೇ?
ಅವಳು ಯಾರನ್ನೂ ದೂಷಿಸಲಿಲ್ಲ
ಆದರೂ ನೆಮ್ಮದಿಯ ಬದುಕು ಮರೀಚಿಕೆಯಾಯ್ತೇ?