ಸಂಕ್ರಾಂತಿ ಕಾವ್ಯ ಸುಗ್ಗಿ

ಸಂಕ್ರಾಂತಿಗೊಂದು ಪ್ರಶ್ನೆ 

 ಸುಜಾತಾ ರವೀಶ್

forest trees marked with question marks

ದುಗುಡದ ಛಾಯೆ ಆವರಿಸಿದ 
ಚಿಂತೆಯ ಕಾವಳ ಹೊದ್ದ ಮನಕೆ 
ತರಬಹುದೇ ಸಂಕ್ರಾಂತಿ ನಿನ್ನಾಗಮನ 
ಹೊಸ ಚೈತನ್ಯದ ಶಾಖದ ಕಾವನು?

ಜಡ್ಡು ಕಟ್ಟಿರುವ ಜೀವನ ಜಾಡ್ಯಕೆ
ಋತು ಪರಿವರ್ತನೆಯ ಔಷಧಿಯೇ? 
ಹೇಮಂತನ ಮಬ್ಬು ಆಲಸ್ಯಕೆ 
ಮಾಗಿಯ ರೋಗಕೆ ನೀ ಮದ್ದೇ?

ಪ್ರಕೃತಿಗಂತೂ ಈ ಭೂಮಿ ಪರಿಭ್ರಮಣೆ
ನಿತ್ಯ ನೂತನ ಸಂಭ್ರಮ ತರುವ ಆವರ್ತನೆ 
ಏಕತಾನತೆಯ ಬೇಸರದ ಬದುಕಿಗೆ 
ನೀ ತರಬಹುದೇನು ಹೊಸ ಬದಲಾವಣೆ?


 
ಬದುಕಿನಿಡೀ ನಡೆಯುತಿದೆ ಬವಣೆ ಕೃಷಿ 
ಬರಬಹುದೆ ಈಗ ಸಫಲತೆಯ ಸುಗ್ಗಿ? 
ಸಿಗುವುದೇ ಪರಿಶ್ರಮಕ್ಕೊಂದು ಬೆಲೆ 
ಬಾಳಪಯಣಕೊಂದು ಗಮ್ಯ ನೆಲೆ?

ಕಾಯುತಲಿದೆ ಹೃದಯ ನೊಂದು ನಲುಗಿ 
ಮುದುಡಿ ಸೊರಗಿ ಬಳಲಿ ಬೆಂಡಾಗಿ 
ಮೊಗ್ಗಾದ ಭಾವಗಳ ಅರಳಿಸಬಹುದೇ ಎಂದು 
ಜರುಗಿ ನಿರೀಕ್ಷಿಸುತಲಿರುವ some ಕ್ರಾಂತಿ? 


 

2 thoughts on “

  1. ಸಂತಸದಲಿ ಅರಳಲಿ ಭವಿಷ್ಯ ಎಂದೂ ಆಶಿಸುವ ಆಶಾವಾದ ಸಂಕ್ರಾತಿ ಸುಗ್ಗಿಯ ಸವಿ ಕವನ ತುಂಬಾ ಚೆನ್ನಾಗಿದೆ

Leave a Reply

Back To Top