ಗೆಳೆಯನ ಮಕ್ಕಳು

ಗೆಳೆಯನ ಮಕ್ಕಳು

ಅಂಕಣ ಬರಹ

Little boy child kid playing smart mobile phone | Premium Photo

ಎಷ್ಟೊ ವರ್ಷಗಳ ಬಳಿಕ ಗೆಳೆಯನ ಮನೆಗೆ ಹೋಗಬೇಕಾಯಿತು. ಅವನೂ ಅವನ ಹೆಂಡತಿಯೂ ಪ್ರೀತಿಯಿಂದ ಬರಮಾಡಿಕೊಂಡರು. ನಾನು ಅವರ ಮನೆ ಹೊಕ್ಕಾಗ ಎಂಟು ವರ್ಷದ ಮಗಳು ಬೊಂಬೆಗೆ ಸೀರೆಯುಡಿಸುತ್ತಿದ್ದಳು. ಹನ್ನೆರಡು ವರುಷದ ಮಗ ಸೋಫಾದಲ್ಲಿ ಮೈಚೆಲ್ಲಿ ಕಾಲನ್ನು ಆಗಸಕ್ಕೆ ಚಾಚಿ ಲ್ಯಾಪ್‍ಟಾಪಿನಲ್ಲಿ ವಿಡಿಯೊ ಗೇಂ ಆಡುತ್ತಿದ್ದ. ಮನೆಗೆ ಬಂದು ಹೋದವರ ಬಗ್ಗೆ ಖಬರಿಲ್ಲದಷ್ಟು ತನ್ಮಯನಾಗಿದ್ದ. ನನ್ನ ಗೆಳೆಯ `ಅಪ್ಪಿ ನೋಡೊ. ನನ್ನ ಕ್ಲಾಸ್‍ಮೇಟ್ ಬಂದಾನ. ಅಂಕಲ್‍ಗೆ ನಮಸ್ಕಾರ ಮಾಡು’ ಎಂದರೂ ಕಣ್ಣೆತ್ತಿ ನೋಡಲಿಲ್ಲ. ನಾನೊಯ್ದ ತಿಂಡಿಯನ್ನು ಹದ್ದುಗಣ್ಣಿನಿಂದ ಗಮನಿಸಿದ್ದನೆಂದು ಕಾಣುತ್ತದೆ, ಲಕ್ಕನೆ ಎತ್ತಿಕೊಂಡು ಪ್ಯಾಕು ಹರಿದು ಮುಕ್ಕತೊಡಗಿದ. ಲ್ಯಾಪ್‍ಟಾಪ್ ಆಟ ಮುಗಿದ ಬಳಿಕ ಕಾರ್ಟೂನು ಸಿನಿಮಾ ಟಿವಿಯಲ್ಲಿ ಹಾಕಿಕೊಂಡು ಕುಳಿತ. ನನಗೆ ಅವನ ಜತೆಗೆ ಮಾತಾಡಲೇಬೇಕೆಂದು ಹಠ ಹುಟ್ಟಿತು. ಆತ ನನ್ನ ಪ್ರಶ್ನೆಗಳಿಗೆ ನನ್ನತ್ತ ನೋಡದೆ ಜವಾಬುಕೊಡುತ್ತಿದ್ದ. ಗಮನಿಸಿದೆ: ಅವನ ಕನ್ನಡದಲ್ಲಿ ಬಣ್ಣಕ್ಕೆ ಮತ್ತು ಅಂಕಿಗಳಿಗೆ ಮನೆಮಾತಿನಲ್ಲಿ ಗುರುತಿಸುವ ಶಬ್ದಗಳಿರಲಿಲ್ಲ. ಮಕ್ಕಳನ್ನು ನಮ್ಮಿಚ್ಛೆಯಂತೆ ರೂಪಿಸಬೇಕಾಗಿಲ್ಲ. ಅವು ತಮ್ಮಿಚ್ಛೆಯಂತೆಯೇ ರೂಪುಗೊಳ್ಳಲಿ. ಸಾಧ್ಯವಾದರೆ ನಾವು ಅವುಗಳಿಂದ ಕಲಿಯೋಣ ಎಂದ ಚಿಂತಕ ಖಲೀಲ್ ಗಿಬ್ರಾನನ ಹಿತನುಡಿ ಚರ್ಚಾಸ್ಪದ ಅನಿಸಿತು.


ನನ್ನ ಮುಖವನ್ನೇ ಗಮನಿಸುತ್ತಿದ್ದ ಗೆಳೆಯ ತುಸುನಗುತ್ತ ಹೇಳಿದ: `ದೋಸ್ತಾ, ನೋಡಿದೆಯಾ ಕಾಲ ಹೆಂಗ ಚೇಂಜಾಗದ? ನಾವು ಸಣ್ಣೋರಿದ್ದಾಗ ಗೋಲಿ ಚೆಂಡು ಚಿನ್ನಿದಾಂಡು ಆಡ್ತಿದ್ದೆವು. ಈಗಿನವಕ್ಕೆ ಆಡೋಕೆ ಲ್ಯಾಪ್‍ಟಾಪೇ ಬೇಕು’.ಅವನ ದನಿಯಲ್ಲಿ ಹೊಸ ತಲೆಮಾರಿನ ಮಕ್ಕಳ ಅಭಿರುಚಿ ಬದಲಾದ ಬಗ್ಗೆ ಸಣ್ಣಗಿನ ವಿಷಾದವಿತ್ತು. ಅದರೊಳಗೆ `ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಬೆಳೆಸಿದ್ದೇನೆ’ ಎಂಬ ಹಮ್ಮೂ ಕೂಡಿದಂತಿತ್ತು.


ಭಾರತದ ಬಹುತೇಕ ಪ್ರಜೆಗಳ ಕೈಗೀಗ ಮೊಬೈಲು ಬಂದಿವೆ. ಹಲವರಿಗೆ ಕಂಪ್ಯೂಟರ್ ಲ್ಯಾಪ್‍ಟಾಪು ಟ್ಯಾಬುಗಳೂ ಸಿಕ್ಕಿವೆ. ಈ ತಂತ್ರಜ್ಞಾನ ಚಾಲಿತ ಸರಕುಗಳ ಆಗಮನದಿಂದ ಬಾಳಿನ ಗತಿಯಲ್ಲಿ ವಿಚಿತ್ರ ವೇಗ ಬಂದಿದೆ. ಮನೆಗೆಲಸ ಮಾಡುವ ಮಹಿಳೆಯಿಂದ ಹಿಡಿದು ದಿನಗೂಲಿ ಹುಡುಕುವವರ ತನಕ, ವ್ಯಾಪಾರಿಯಿಂದ ರೈತರ ತನಕ ಅನೇಕರ ಕಸುಬಿನಲ್ಲಿ ಸಂಚಲನ ಮೂಡಿದೆ; ಬರೆಹಗಾರರ, ಅಧ್ಯಾಪಕರ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯವವರ ಹಾಗೂ ಪತ್ರಕರ್ತರ ಬದುಕಿನಲ್ಲಿ ಹೊಸ ನೆಗೆತ ಸಿಕ್ಕಿದೆ. ಇದೊಂದು ಕ್ರಾಂತಿಕಾರಿ ಪಲ್ಲಟವೇ ಸೈ.


ಆದರೆ ಈ ಸಂಚಲನೆ-ಪಲ್ಲಟಗಳ ಜತೆಗೆ ಈ ಸರಕು-ಸಲಕರಣೆಗಳಿಂದ, ಮಕ್ಕಳ ಮತ್ತು ತರುಣರ ವರ್ತನೆಯಲ್ಲಿ ಒಂದು ಬದಲಾವಣೆಯಾಗಿದೆ. ಅವರು ಮನುಷ್ಯ ಸಂಪರ್ಕವೇ ಇಲ್ಲದೆ ಅತಿದೀರ್ಘವಾದ ಕಾಲವನ್ನೂ ಏಕಾಂಗಿಯಾಗಿ ಕಳೆಯಬಲ್ಲವರಾಗಿದ್ದಾರೆ. ಪಕ್ಕದಲ್ಲಿ ಎದುರುಗಡೆ ಯಾರಿದ್ದಾರೆ ಎಂಬ ಖಬರಿಲ್ಲದೆ, ಮೈಕ್ರೊಫೋನ್ ಬೆಂಡೋಲೆಯನ್ನು ಕಿವಿಗೆ ತುರುಕಿಕೊಂಡು ಹಾಡುಕೇಳುತ್ತ ಧ್ಯಾನಸ್ಥರಾಗಿ ತಮ್ಮ ಜಗತ್ತನ್ನು ಸೃಷ್ಟಿಸಿಕೊಂಡು ಮುಳುಗಬಲ್ಲವರಾಗಿದ್ದಾರೆ; ಮೊಬೈಲ್ ಪರದೆಯ ಮೇಲೆ ಬೆರಳಾಡಲು ಬಿಟ್ಟು ಕಣ್ಣನ್ನು ಅಂಟಿಸಿ ಕಾಲಕಳೆವವರಾಗಿದ್ದಾರೆ; ಹೊರಗಿಂದ ಕರೆ ಬರಲಿ ಬಾರದಿರಲಿ, ಅಲ್ಲಾವುದ್ದೀನನು ಮಾಯಾದೀಪವನ್ನು ಕೈಸೆರೆ ಮಾಡಿಕೊಂಡಿರುವಂತೆ ಅವರ ಅಂಗೈಗಳು ಮೊಬೈಲುಧಾರಿಯಾಗಿವೆ. ಕೆಲವರ ಮನೆಯಲ್ಲಿ ಚಿಕ್ಕಮಕ್ಕಳು ಅತಿಥಿಗಳ ಮೇಲುಬಿದ್ದು ಸ್ನೇಹ ಮಾಡಿಕೊಂಡು, ಉಪಾಯವಾಗಿ ಮೊಬೈಲನ್ನೆಗರಿಸಿ ಗೇಮನ್ನಾಡಲು ಆರಂಭಿಸುವುದುಂಟು. ಆನೆ ಕೋತಿಯ ಬೊಂಬೆಗಳ ಜಾಗದಲ್ಲಿ ಗನ್ನುಹಿಡಿದ ಸೈನಿಕರು ಟ್ಯಾಂಕುಗಳು ಬಂದಿದ್ದವು-ಅಮೆರಿಕದ ಕೆಟ್ಟ ಯುದ್ಧಸಂಸ್ಕತಿಯ ಅನುಕರಣೆಯಾಗಿ. ಈಗ ಮೊಬೈಲಾಟಿಕೆ ಬಂದಿವೆ. ಎಳೆಕೂಸಿಗೂ ನಿಜವಾದ ಮತ್ತು ಆಟಿಕೆಯ ಮೊಬಲುಗಳ ವ್ಯತ್ಯಾಸ ಗೊತ್ತಿದೆ. ಇನ್ನೊಬ್ಬ ಮಿತ್ರ ಹೇಳುತ್ತಿದ್ದ: `ನನ್ನ ಮಗ ಎಷ್ಟೇ ಅಳುವಿನಲ್ಲಿರಲಿ, ಮೊಬೈಲು ಕೊಟ್ಟರೆ ಗಪ್‍ಆಗ್ತಾನ.’


ರೈಲಿನಲ್ಲೊ ಬಸ್ಸಿನಲ್ಲೊ ಅಕ್ಕಪಕ್ಕ ಕೂತವರು, ಹತ್ತು ನಿಮಿಷದಲ್ಲಿ ಮುಗುಳುನಗು ವಿನಿಮಯ ಮಾಡಿಕೊಂಡು ಎಲ್ಲಿಗೆ ಹೊರಟಿದ್ದೀರಿ ಯಾಕೆ ಎಂದು ಸುರುಮಾಡಿ, ತಮ್ಮ ಸ್ಟೇಶನ್ ಬರುವ ಹೊತ್ತಿಗೆ ಎಷ್ಟೆಲ್ಲ ಹಂಚಿಕೊಳ್ಳುವ ಪದ್ಧತಿ ಹಿಂದಿನಿಂದಿತ್ತು. ಇದು ಅನಗತ್ಯವಾಗಿ ಗುದ್ದಲಿ ಹಿಡಿದು ವೈಯಕ್ತಿಕ ವಿಷಯದ ಹೊಲವನ್ನು ಅಗೆಯುವ ಕುತೂಹಲಿಗಳ ಕಾಟಕ್ಕೂ ಕಾರಣವಾಗಿತ್ತು. ಆದರೆ ಮೊಬೈಲುಗಳಲ್ಲಿ ಮುಳುಗಿದ ಸಹಪಯಣಿಗರಿಂದ ಈಗ ಮಾತುಕತೆಯೇ ನಿಂತಿದೆ. ದೂರದಲ್ಲಿದ್ದ ಜನರನ್ನು ಪರಸ್ಪರ ಸಂಪರ್ಕಿಸಲು ಹುಟ್ಟಿದ ತಂತ್ರಜ್ಞಾನ, ಪರಸ್ಪರ ಜನರ ಸಂಪರ್ಕವನ್ನೇ ಕಡಿದುಹಾಕಿದೆ.
ಕೇಳುವ ಓದುವ ಕ್ರಿಯೆಗಿಂತ ನೋಡುವ ಮಾಧ್ಯಮದ ಶಕ್ತಿ ಪ್ರಚಂಡ. ಅದಕ್ಕೆ ತಂತ್ರಜ್ಞಾನ ಸೇರಿಕೊಂಡು ಮತ್ತಷ್ಟು ವಶೀಕರಣ ಮಾಡಿದೆ. ಹೊಸ ತಲೆಮಾರು ತಂತ್ರಜ್ಞಾನವನ್ನು ಬೇಗ ತನ್ನದಾಗಿಸಿಕೊಳ್ಳುತ್ತದೆ. ಪ್ರಶ್ನೆಯೆಂದರೆ, ಕೇಡು ಸಂಭವಿಸಿದರೆ ಕಾರಣ ತಂತ್ರಜ್ಞಾನವೊ, ತಂತ್ರಜ್ಞಾನ ಬಳಸುತ್ತಿರುವ ಮನೋಧರ್ಮವೊ? ತಂತ್ರಜ್ಞಾನ ಸಾಮಾನ್ಯವಾಗಿ ಮೌಲ್ಯನಿರ್ಲಿಪ್ತ. ಯಾರು ಯಾತಕ್ಕಾಗಿ ಬಳಸುತ್ತಿದ್ದಾರೆ ಎನ್ನುವುದರ ಮೇಲೆ ದೋಷಪೂರ್ಣವೊ ಉಪಯುಕ್ತವೊ ಅನಾಹುತಕಾರಿಯೊ ಆಗುತ್ತದೆ. ಅದೊಂದು ಇಬ್ಬಾಯ ಕತ್ತಿ. ಬುಲ್ಡೋಜರನ್ನು ದಿಬ್ಬಕಡಿದು ರಸ್ತೆ ಮಾಡಲು, ಕಬ್ಬಿಣದ ಅದಿರನ್ನು ಅಕ್ರಮವಾಗಿ ಅಗಿಯಲು, ಹೆಣಗಳ ಸಾಮೂಹಿಕ ಸಂಸ್ಕಾರ ಮಾಡಲು ಅಥವಾ ತಮ್ಮ ಭೂಮಿ ಬಿಟ್ಟುಕೊಡದ ರೈತರ ಮನೆಕೆಡವಿ ಒಕ್ಕಲೆಬ್ಬಿಸಲು ಬಳಸಬಹುದು. ಭಾಷೆ ವಿಷಯದಲ್ಲೂ ಅಷ್ಟೆ. ತನಗೆ ತಾನೇ ಇಂಗ್ಲೀಶು ಕೆಡುಕೂ ಅಲ್ಲ ಒಳಿತೂ ಅಲ್ಲ. ಸಮಾಜ ಬಳಸುವ ವಿಧಾನದಿಂದ ಅದರ ಪರಿಣಾಮ ನಿಶ್ಚಿತವಾಗುತ್ತದೆ. ಹೀಗಾಗಿ ಸಮಸ್ಯೆ ಇರುವುದು ತಂತ್ರಜ್ಞಾನದಲ್ಲಲ್ಲ. ಅದನ್ನೊಂದು ಬದುಕಿನ ಭಾಗ್ಯವೆಂದು ಭಾವಿಸಿ ಸಂಭ್ರಮಿಸುತ್ತಿರುವ, ಅದರಿಂದ ಫರಿಣಾಮ ಏನಾಗುತ್ತಿದೆ ಎಂದು ಪರೀಕ್ಷಿಸಿಕೊಳ್ಳದ ಸಾಮಾಜಿಕ ಮನೋಭಾವದಲ್ಲಿ.


ನಮ್ಮ ಮಕ್ಕಳು ಕಂಪ್ಯೂಟರ್‍ನಲ್ಲಿ ಆಟವಾಡುತ್ತವೆ, ಇಂಗ್ಲೀಶ್ ಮೀಡಿಯಂನಲ್ಲಿ ಓದುತ್ತಿವೆ, ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಹಿಡಿದಿವೆ, ವಿದೇಶದಲ್ಲಿವೆ, ನಾವು ನಿವೃತ್ತಿಯಾಗುವಾಗ ಪಡೆದ ಸಂಬಳವನ್ನು ಈಗಲೇ ಗಳಿಸುತ್ತಿವೆ-ಮುಂತಾದ ಗರಿಗಳನ್ನು ತಲೆಗೆ ಸಿಕ್ಕಿಸಿಕೊಂಡು ತಿರುಗಾಡುವ ಮಧ್ಯಮವರ್ಗದ ತಂದೆತಾಯಿಗಳಿದ್ದಾರೆ. ಈ ಸಾಧನೆಗಳ ಫಲವಾಗಿ ಏನೆಲ್ಲ ಕಳೆದುಹೋಗಿದೆ ಎಂಬುದರ ಲೆಕ್ಕವನ್ನೇ ಅವರು ಮಾಡಿದಂತಿಲ್ಲ ಅಥವಾ ಈಗ ಮಾಡಲಾರಂಭಿಸಿದ್ದಾರೆ. ಅವರು ಕಂಡ ಕನಸು ನಿಜವಾಗಿರಬಹುದು. ಅದಕ್ಕಾಗಿ ದೊಡ್ಡಮನೆಗಳಲ್ಲಿ ಒಂಟಿ ಬದುಕನ್ನು ದೂಡುವ ಬೆಲೆಯನ್ನೂ ಅವರು ತೆರಬೇಕಾಗಿದೆ. ಈ ಅನಾಥಪ್ರಜ್ಞೆಗೆ ಅವರು ಮಾತ್ರವಲ್ಲ, ಅವರನ್ನು ಸೆಳೆದಿರುವ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯೂ ಕಾರಣ. ಯಾರೋ ಹೇಳಿದ ಮಾತು ನೆನಪಾಗುತ್ತಿದೆ: `ಎಸೆಲ್ಸಿ ಫೇಲಾದ ದಡ್ಡಮಗ ಇದ್ದಿದ್ದರೆ ನಾವು ಬಹುಶಃ ಕೊನೆಗಾಲದಲ್ಲಿ ಒಂಟಿಯಾಗಿರುತ್ತಿರಲಿಲ್ಲ’. ದಡ್ಡಮಕ್ಕಳ ತಂದೆತಾಯಂದಿರೂ ಬೇರೆ ಕಾರಣದಿಂದ ಒಂಟಿಯಾಗಿರುವ ನಿದರ್ಶನಗಳಿವೆ. ಆದರೆ ಬೇಕೆಂದಾಗ ನೋಡಲು ಆಗದಷ್ಟು ಮಕ್ಕಳನ್ನು ಮತ್ತು ತಾಯ್ತಂದೆಯರನ್ನು ದೂರ ಮಾಡಿರುವ ಒಂಟಿತನದ ಸ್ವರೂಪವೇ ಬೇರೆ. ದೇಶಗಳ ದೂರವೀಗ ದೊಡ್ಡ ಸಮಸ್ಯೆಯಲ್ಲ. ಆದರೆ ಭೌತಿಕವಾದ ಅದು ಮಾನಸಿಕ ದೂರವೂ ಸಾಂಸ್ಕøತಿಕ ವಿಚ್ಛೇದನವೂ ಆಗುತ್ತಿರುವುದು ಸಮಸ್ಯೆಯಾಗಿದೆ.
ಹೊಸತಲೆಮಾರು ಅಪ್ಪಅಜ್ಜಂದಿರ ಹಾಗೆ ಬದುಕಬೇಕು ಎಂದು ಯಾರೂ ನಿರೀಕ್ಷಿಸಬಾರದು. ಹಾಗೆ ಬದುಕುವುದು ಯಾವ ತಲೆಮಾರಿಗೂ ಸಾಧ್ಯವಿಲ್ಲ. ಪ್ರತಿ ತಲೆಮಾರು ತನ್ನದೇ ಲೋಕದೃಷ್ಟಿಯನ್ನು ಜೀವನ ನಡೆಸುವ ಕ್ರಮವನ್ನೂ ವೈಯಕ್ತಿಕ ಅಭಿರುಚಿಯಿಂದಲೊ ಪರಿಸರದ ಒತ್ತಡದಿಂದಲೊ ಪಡೆದುಕೊಳ್ಳುತ್ತದೆ. ಅದು ಅದರ ಹಕ್ಕು ಕೂಡ. ಹಳೆಯ ಮತ್ತು ಹೊಸ ತಲೆಮಾರುಗಳ ನಡುವೆ ಮೌಲ್ಯಗಳ ತಿಕ್ಕಾಟವನ್ನೇ ಕನ್ನಡದ ಕತೆ ಕಾದಂಬರಿಗಳು ಚಿತ್ರಿಸುತ್ತ ಬಂದಿವೆ- `ಇಂದಿರಾಬಾಯಿ’ಯಿಂದ ಹಿಡಿದು `ತೇರು’ `ಗಾಂಧಿಬಂದ’ `ಹಳ್ಳಬಂತು ಹಳ್ಳ’ತನಕ.


ಸಮಸ್ಯೆಯೆಂದರೆ, ಹೊಸ ತಲೆಮಾರು ತನ್ನ ಬದುಕನ್ನು ಸ್ವಂತ ವಿವೇಚನೆ ಮತ್ತು ನಿರ್ಧಾರದಿಂದ ರೂಪಿಸಿಕೊಳ್ಳುತ್ತಿದೆಯೇ? ಬೇರೆ ಯಾವ್ಯಾವೊ ಬಲಾಢ್ಯ ಶಕ್ತಿಗಳು ಅದನ್ನು ರೂಪಿಸುತ್ತಿಲ್ಲವೇ? ಮಾರುಕಟ್ಟೆ ನಮ್ಮ ಶಿಕ್ಷಣವನ್ನು, ಅದರಿಬೇಕಾದ ಮಾಧ್ಯಮವನ್ನು, ನಾವಾಡುವ ಭಾಷೆಯನ್ನು, ಮಾಡುವ ಉದ್ಯೋಗವನ್ನು ಅಷ್ಟೇಕೆ ನಮ್ಮ ಆಲೋಚನೆ ವರ್ತನೆಗಳನ್ನು ಸಹ ಪ್ರಭಾವಿಸುತ್ತಿದೆ. ಇಲ್ಲಿ ಸ್ಪರ್ಧೆ, ಗೆಲುವು, ಯಶಸ್ಸು, ವ್ಯಕ್ತಿವಾದಗಳು ಹೊಸ ಮೌಲ್ಯಗಳಾಗುತ್ತಿವೆ; ಬೇರಿಲ್ಲದ ಹೊಸತಲೆಮಾರು ಮತ್ತು ಅನಾಥಪ್ರಜ್ಞೆಯ ಹಳೆಯ ತಲೆಮಾರು ನಿರ್ಮಾಣವಾಗುತ್ತಿವೆಯೇ? ವಿಚಾರ ಮಾಡಬೇಕು.


ವಿಜ್ಞಾನ ತಂತ್ರಜ್ಞಾನ ಪ್ರಧಾನವಾದ ಶಿಕ್ಷಣ ಪಡೆದು ದೇಶಾಂತರ ಚಲನೆ ಪಡೆದಿರುವ ಮಕ್ಕಳ ಸೀಮೋಲ್ಲಂಘನೆಯ ಬಗ್ಗೆ, ಸರೀಕರ ಎದುರು ಬಡಾಯಿ ಕೊಚ್ಚಿಕೊಳ್ಳುವ ತಂದೆತಾಯಿಗಳು, ಏಕಾಂತದಲ್ಲಿ ಚಡಪಡಿಸುತ್ತಿರುತ್ತಾರೆ. ಮಕ್ಕಳಿಗೆ ಲ್ಯಾಪ್‍ಟಾಪು ಕೊಡಿಸುವಾಗ, ಶಾಲೆಗೆ ಹೋಗಲು ಅಂಗಿಯಿಲ್ಲದ ಚಪ್ಪಲಿಯಿಲ್ಲದ ಮಕ್ಕಳು ಬೀದಿಯ ತುದಿಗಿವೆ ಎಂಬುದನ್ನು ಅವರು ಯೋಚಿಸಲಿಲ್ಲ; ನೀಲಿ ಯೂನಿಫಾರ್ಮ್ ಹಾಕಿಕೊಂಡು ಬರಿಗಾಲಲ್ಲಿ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ಹಾಗಿರಲು ವ್ಯವಸ್ಥೆ ಮಾತ್ರವಲ್ಲ, ಮಧ್ಯಮವರ್ಗದವರ ಸ್ವಕೇಂದ್ರಿತ ಆಲೋಚನ ಕ್ರಮವೂ ಕಾರಣವೆಂದು ಅವರಿಗೆ ಹೊಳೆಯಲಿಲ್ಲ; ಸುತ್ತಲಿನ ಪರಿಸರದ ಬಗ್ಗೆ ಮಕ್ಕಳನ್ನು ಸೆನ್ಸಿಟೈಜ್ ಮಾಡಲು ಯತ್ನಿಸಲಿಲ್ಲ. ಮಕ್ಕಳನ್ನು ಹೆರುವ ಜೈವಿಕ ಕ್ರಿಯೆ ಸುಲಭ. ಅವನ್ನು ಪರಿಸರದ ಬಗ್ಗೆ ಪ್ರೀತಿ ಕಾಳಜಿ ಕಲಿಸಿ ಸೂಕ್ಷ್ಮಸಂವೇದಿ ಮನುಷ್ಯರನ್ನಾಗಿ ಮಾಡುವುದು ಕಷ್ಟದ ಕೆಲಸ. ಸಮಸ್ಯೆ ಆಧುನಿಕತೆ ವಿಜ್ಞಾನ ತಂತ್ರಜ್ಞಾನಗಳಲ್ಲಿಲ್ಲ. ಅದರಲ್ಲಿ ಅಳವಟ್ಟಿರುವ ವ್ಯಕ್ತಿವಾದಿ ಲಾಭಕೋರ ಮೌಲ್ಯಪ್ರಜ್ಞೆಗಳಲ್ಲಿದೆ.


ಬದಲಾಗಿರುವ ಯುಗಧರ್ಮವನ್ನು ಅರ್ಥಮಾಡಿಕೊಳ್ಳುವಲ್ಲಿ ಅಥವಾ ಅದಕ್ಕೆ ಹೊಂದಿಕೊಳ್ಳುವಲ್ಲಿ ಸೋತಿರುವುದರಿಂದ ನನ್ನೊಳಗೆ ಈ ಭಾವುಕ ಗೊಣಗಾಟಗಳು ಹುಟ್ಟುತ್ತಿವೆಯೆ? ನನ್ನ ಗೆಳೆಯ ಮಗನನ್ನು ಇನ್ಸೆನ್ಸಿಟಿವ್ ಮಾಡುತ್ತ ಕೊನೆಗಾಲದಲ್ಲಿ ಅನಾಥನಾಗುವ ಹಾದಿಯಲ್ಲಿ ಹೊರಟಿರಬಹುದೇ? ನಿರ್ಣಯಕ್ಕೆ ಬರದೆ ಮನಸ್ಸು ಹೊಯ್ದಾಡಿತು.ಬೀಳ್ಕೊಡುವಾಗ ಮಂಕು ಕವಿದಂತಿದ್ದ ಗೆಳೆಯನ ಮುಖವನ್ನು ಮರುಕದಿಂದ ನಿಟ್ಟಿಸಿದೆ. ಅದು ನನ್ನ ಮುಖದಂತೆಯೇ ಕಂಡಿತು. ಅವನ ಕೈಯನ್ನು ಹಿಸುಕಿ ನನ್ನ ಅನುಭೂತಿಯನ್ನು ಬಿಸುಪಿನಲ್ಲಿ ದಾಟಿಸಲು ಯತ್ನಿಸಿದೆ. ನಾನೊಬ್ಬನೇ ಅಲ್ಲ ಪಯಣಿಗ ಎಂಬಂತೆ ಅವನ ತುಟಿಯ ಬಿರುಕಿನಲ್ಲಿ ನಗೆ ತುಳುಕಿತು.

************************

ಲೇಖಕರ ಬಗ್ಗೆ:

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

4 thoughts on “ಗೆಳೆಯನ ಮಕ್ಕಳು

  1. ನಮಸ್ತೆ ರಹಮತ್ ಸರ್ ನಿಮ್ಮ ಆಲೋಚನೆ, ಮಾತು, ಬರಹ ಯಾವತ್ತೂ ಮನನೀಯ…”.ಹೊಸ ತಲೆಮಾರು ತನ್ನ ಬದುಕನ್ನು ಸ್ವಂತ ವಿವೇಚನೆ ಮತ್ತು ನಿರ್ಧಾರದಿಂದ ರೂಪಿಸಿಕೊಳ್ಳುತ್ತಿದೆಯೆ..?..” ಈ ಪ್ರಶ್ನೆ ಎಲ್ಲವನ್ನು ಒಳಗೊಂಡಿದೆ. ಈ ಬೆಳಗ್ಗೆ ಒಂದು ಅರ್ಥಪೂರ್ಣ ಓದಿಗೆ ಕಾರಣರಾದ ನಿಮಗೆ ಮತ್ತು ಸಂಗಾತಿ ಬಳಗಕ್ಕೆ ಧನ್ಯವಾದಗಳು .

  2. ನಿಮ್ಮ‌ ಲೇಖನ ಓದಿದ ಮೇಲೆ‌ ಒಂದ್ ಸಮಾಧಾನ ಇದೆ‌ ಸರ್,‌ನನ್ನ ಮಗನನ್ನು ಸರ್ಕಾರಿ ‌ಕನ್ನಡ ಶಾಲಾಗೆ ಕಳುಹಕಳುಹಿಸಿದ ನಿರ್ಧಾರ ಸರಿಯಾಗಿದೆ‌ . ಅವ ಆರಾಮಾಗಿ ಸೃಜನಶೀಲವಾಗಿ ಯೋಚಿಸ್ತಾನೆ.‌ಕಾರ್ಮಿಕರ‌ , ಶ್ರಮಜೀವಿಗಳ ಜೊತೆ ಬೆರಿತಾನೆ.
    ಬಡತನ ಗೊತ್ತು. ಮಾನವೀಯ ಮನಸು ಇದೆ.‌

  3. ಒಳ್ಳೆ ಅರಿವನ್ನು ಓದುಗರಿಗೆ ನೀಡಿದ್ದೀರಿ ಸರ್

Leave a Reply

Back To Top