ಕಾವ್ಯ ಸಂಗಾತಿ
ಡಾ ತಾರಾ ಬಿ ಎನ್ ಧಾರವಾಡ
“ಆತ್ಮ ಸಾಕ್ಷಿ”


ಅಂತರಾಳದಲ್ಲಿ
ಮೃದು ಧ್ವನಿ ಮಿಡಿಯುತ್ತ
ಅದು ಶಬ್ದವಲ್ಲ,
ಆದರೂ
ಎಲ್ಲ ಶಬ್ದಗಳಿಗಿಂತ ಗಟ್ಟಿಯಾದ ಸತ್ಯ.
ಕತ್ತಲೆಯೊಳಗೆ ದೀಪವಾಗಿ
ದಾರಿತಪ್ಪಿದ ಹೆಜ್ಜೆಗಳಿಗೆ ದಿಕ್ಕು
ತೋರಿಸುವದ
ಲೋಕದ ಕಣ್ಣಿಗೆ ಕಾಣದಿದ್ದರೂ
ಒಳಗಿನ ಕಣ್ಣಿಗೆ ಸ್ಪಷ್ಟವಾಗಿ
ಗೋಚರಿಸುವ ಶಕ್ತಿ
ನಟನೆಯ ಮುಖವಾಡಗಳ ಮಧ್ಯೆ
ನಗುವಿನ ಹಿಂದೆ ಅಡಗಿದ ನೋವನ್ನು
ಮೌನವಾಗಿ ಓದುವ ಆತ್ಮಸಾಕ್ಷಿ,
ಸುಳ್ಳಿನ ಹೊಳಪವಿನೊಳಗಿನ
ಖಾಲಿತನವನ್ನು
ನೋಟದಲ್ಲೇ ಗುರುತಿಸುತ್ತ
ಯಶಸ್ಸಿನ ಶಿಖರದಲ್ಲಿದ್ದಾಗ
ಮೃದುವಾಗಿ ಪ್ರಶ್ನಿಸುತ್ತ
“ಈ ಗೆಲುವು ನಿನ್ನದೇ
ನಿನ್ನ ಮೌಲ್ಯಗಳನ್ನು
ಸೋಲಿಸಿದ ಬೆಲೆಯಾ?
ಸೋಲಿನ ನೆಲದಲ್ಲಿ ಕುಳಿತಾಗ
ತಾಯಿ ಹಸ್ತದಂತೆ
ತಲೆಯ ಮೇಲೆ ಕೈ ಇಟ್ಟು
“ನೀನು ತಪ್ಪಲಿಲ್ಲ,
ನಿನ್ನ ಉದ್ದೇಶ ಪವಿತ್ರವಾಗಿತ್ತು”
ಆಶ್ವಾಸನೆ ನೀಡುವದು.
ಸಮಯದ ಹೊಡೆತಗಳಿಗೆ
ಅದು ಎಂದೂ ಜರಿಯುವುದಿಲ್ಲ,
ಪರಿಸ್ಥಿತಿಗಳ ಒತ್ತಡಕ್ಕೆ
ಅದು ಮೌನವಾಗುವುದಿಲ್ಲ.
ತಾಳ ತಪ್ಪಿದಾಗ
ನಿದ್ರೆಯಲ್ಲೂ ಕಾಡುವದು
ಸರಿ ಮಾಡಿದಾಗ
ನಿಶ್ಚಿಂತೆ ಎಂಬ ಹೂವನ್ನಿಟ್ಟು
ಹೃದಯವನ್ನು ಹಗುರಗೊಳಿಸುವದು.
ಲೋಕದ ನ್ಯಾಯಾಲಯಗಳು
ಸಾಕ್ಷ್ಯ ಕೇಳಬಹುದು,
ಆದರೆ
ಆತ್ಮಸಾಕ್ಷಿ
ಉದ್ದೇಶವನ್ನ ತೂಕ ಹಾಕುತ್ತದೆ.
ಅದಕ್ಕೆ ಅಲಂಕಾರ ಬೇಡ,
ಪ್ರಶಂಸೆಯ ಅಗತ್ಯವಿಲ್ಲ,
ಸತ್ಯವೇ ಅದರ ಉಸಿರು,
ನೈತಿಕತೆಯೇ ಅದರ ಆಭರಣ.
ಎಲ್ಲವೂ ಮೌನವಾದಾಗ,
ಹೆಸರು, ಹುದ್ದೆ, ಗುರುತುಗಳೆಲ್ಲ
ಕರಗಿದಾಗ
ನಮ್ಮ ಜೊತೆಯಲ್ಲಿ ಉಳಿಯುವದು
ಈ ಮೌನದ ಸ್ನೇಹಿತ
ಆತ್ಮಸಾಕ್ಷಿ.
_______________________
ಡಾ ತಾರಾ ಬಿ ಎನ್ ಧಾರವಾಡ



