ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ನನ್ನೊಳಗಿನ ನಾದವದು,
ನನ್ನ ನಿಲುವಿನ ನೆರಳದು,
ಬಾಗದ ತಲೆಗೂ ಮುರಿಯದ ಮನಕೂ
ಹೆಸರು ಕೊಟ್ಟ ಶಕ್ತಿಯದು
 ಆತ್ಮಾಭಿಮಾನ.

ಬಿರುಗಾಳಿಯ ನಡುವೆ ನಿಂತು
ಬೇರು ಬಿಟ್ಟ ಮರದಂತೆ,
ಎಷ್ಟು ಹೊಡೆತ ತಿಂದರೂ
ನೆಲ ಬಿಟ್ಟು ಸರಿಯದ ನಂಬಿಕೆಯಂತೆ.
ಅದು ಗರ್ವವಲ್ಲ, ಅಹಂಕಾರವೂ ಅಲ್ಲ.
ಇತರರನ್ನು ಕುಗ್ಗಿಸುವ ದುರಹಂಕಾರವಲ್ಲ,

ತನ್ನ ಮೌಲ್ಯವನ್ನು ಅರಿತು
ತಾನೇ ತಾನಾಗಿರುವ ಧೈರ್ಯವದು.
ಕಟ್ಟಿದ ಕನಸುಗಳು ನುಚ್ಚುನೂರಾದಾಗಲೂ
ಕಣ್ಣೀರ ಮಧ್ಯೆ ನಗು ಉಳಿಸಿದಂತೆ,
“ನಾನು ಸೋಲಿಲ್ಲ” ಎನ್ನುವ
ನಿಶ್ಶಬ್ದ ಘೋಷಣೆಯೇ ಆತ್ಮಾಭಿಮಾನ.

ಸತ್ಯದ ದಾರಿಯಲ್ಲಿ ನಡೆಯುವಾಗ
ಒಂಟಿತನ ಬಂದರೂ ಭಯವಿಲ್ಲ,
ನನ್ನ ನಡೆ ನನ್ನದೆ ಎನ್ನುವ
ಸ್ಥೈರ್ಯ ತುಂಬುವ ದೀಪವದು.

ಬಡತನದ ಬಟ್ಟೆ ಧರಿಸಿದರೂ
ಮನಸ್ಸು ರಾಜಸವಾಗಿರಬಹುದು,
ಅಭಿಮಾನವಿಲ್ಲದೆ ಶ್ರೀಮಂತಿಕೆ
ಖಾಲಿ ಮಂಟಪವಾಗಿರಬಹುದು.
ತಲೆಯೆತ್ತಿ ನಡೆಯಲು ಕಲಿಸುವುದು,

ನ್ಯಾಯದ ಪರ ನಿಲ್ಲಲು ಪ್ರೇರೇಪಿಸುವುದು,
ಯಾರ ಹಂಗೂ ಇಲ್ಲದ
ಬೇರೆ ಯಾರ ಅನುಮತಿಯಿಲ್ಲದೆ
ನನ್ನ ಮೌಲ್ಯವನ್ನು ಘೋಷಿಸುವುದು.
ಆತ್ಮಾಭಿಮಾನ

ನನ್ನ ಶಿರಸ್ಸಿನ ಕಿರೀಟವದು,
ನನ್ನ ಜೀವನದ ದೀಪವದು,
ಬಿದ್ದಾಗಲೂ ಏಳುವಂತೆ ಮಾಡುವ
ನನ್ನೊಳಗಿನ ಶಾಶ್ವತ ಶಕ್ತಿ.
ಅನುಪಮ ಅವ್ಯಕ್ತ   ಶಕ್ತಿಯ
ಮೌಲ್ಯಾದರ್ಶದ ಜ್ಞಾನಶಿಸ್ತು
ನನ್ನೊಳಗಿನ ಶಾಶ್ವತ ಶಕ್ತಿ.


About The Author

Leave a Reply

You cannot copy content of this page

Scroll to Top