ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಸಂಸಾರದ ನೊಗಭಾರವ ನನ್ನೊಬ್ಬಳಿಗೇ ಹೊರಿಸಿ
ಅಕ್ಷರ ಜಾತ್ರೆಗಳಲಿ ಜೋಳಿಗೆ ಹಿಡಿದು
ಊರೂರು ಸುತ್ತುವ ಅರೆಜೋಗಿಯೇ
ಬೆಚ್ಚಿಬೀಳಿಸುವ ನಿನ್ನ ಕವಿತೆಯ ಕೊನೆಯ ಸಾಲುಗಳ
ನೆನೆನೆನೆದು ಹಣ್ಣಾಗಿರುವೆ
ಈ ಹೆಣ್ಣಿಗಾಗಿ ಚೂರು ಸಮಯವಿದೆಯೆ?

ನೀನಿತ್ತ ಆ ಎರಡು ಮಕ್ಕಳೋ
ನಿನ್ನದೇ ಅಪರಾವತಾರ ಎಂಬಂತೆ
ಅರ್ಥವಾಗದ ಭಾಷೆಯಲ್ಲಿ ವ್ಯವಹರಿಸುತ್ತಿವೆ!
ನಿಭಾಯಿಸಲು ಹೊಸ ಭಾಷ್ಯ ಬರೆಯಬೇಕಿದೆ
 ಚೂರು ಸಮಯವಿದೆಯೆ? ನನ್ನ ದಾರಿ ಸುಗಮಗೊಳಿಸಲು?

ಕವಿಯ ಸ್ಪೂರ್ತಿಯ ಮೂಲ ‘ಕವಿಪತ್ನಿಯೇ ಇರಬೇಕೆಂದು’
ಹಾಲು,ತರಕಾರಿ.ದಿನಸಿ ತರಲೆಂದು ಹೊರಹೋದಾಗಲೆಲ್ಲ
ನಿಮ್ಮದೆ ಓದುಗರು ಕಣ್ಣಭಾಷೆಯಲಿ ಪ್ರತಿಕ್ರಿಯಿಸುತ್ತಿದ್ದಾರೆ!
ಅರ್ಥೈಸಿಕೊಳ್ಳಲಾಗುತ್ತಿಲ್ಲ
 ಚೂರೇ ಚೂರು ಸಮಯವಿದ್ದರೆ
ಬಂದು ಬಿಡಿ ಒಂದು ಬಾರಿ ನನ್ನೊಂದಿಗೆ.

ಅರಿಸಿನ ಕುಂಕುಮ ತೆಗೆದುಕೊಳ್ಳಲು
ಮನೆಗೆ ಬರುವ ಮುತ್ತೈದೆಯರು ಕೇಳುತಿಹರು ನಿಮ್ಮನ್ನು
ನಿಮ್ಮ ನಗು, ಹರಟೆಯ ಗಂಟು ಮೂಟೆ ಕಟ್ಟಿ
ಹೊರಟು ಬನ್ನಿ ಮನೆಗೆ
ನಿಮ್ಮೆಲ್ಲ ಕವಿತೆಯ ಪ್ರಸವಗಳು ಇಲ್ಲಿಯೇ ಆಗಲಿ!


About The Author

1 thought on “ಸಿ.ಎಚ್.ಮಧುಕುಮಾರ ಕವಿತೆ,”ಕವಿಪತ್ನಿಯ ಅಳಲು””

Leave a Reply

You cannot copy content of this page

Scroll to Top