ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಿತ್ತೂರು ಸಂಸ್ಥಾನ ಪೇಶ್ವೆ ಮರಾಠರು ಹೀಗೆ ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಸಾಂಸ್ಕೃತಿಕ ಸಂಬಂಧ ಹಲವು ಶತಮಾನಗಳಿಂದ ನಿರಂತರ ಸಾಗಿ ಬಂದಿವೆ. ಒಂದು ಅರ್ಥದಲ್ಲಿ ಮಹಾರಾಷ್ಟ್ರದ ಕುಲ ದೇವತೆ ಪಂಡರಾಪುರದ  ವಿಠ್ಠಲ ಹಂಪಿಯುವನು. ಹೀಗಾಗಿ ಮಹಾರಾಷ್ಟ್ರದ ಜನರು ಮತ್ತು  ವಾರಕರಿ ಪಂಥ ಈಗಲೂ ಕೂಡ ವಿಠಲನನ್ನು ಕಾನಡೋ ವಿಠ್ಠಲ.ಅಂದರೆ ಕನ್ನಡದ ವಿಠ್ಠಲ ಎನ್ನುತ್ತಾರೆ.

ಅನೇಕ ಕರ್ನಾಟಕದ  ಅರಸು ಮನೆತನಗಳು  ಮಹಾರಾಷ್ಟ್ರದಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿವೆ.  ರಾಷ್ಟ್ರಕೂಟರ  ದಂತಿದುರ್ಗ ಅಜಂತಾ ಎಲ್ಲೋರ ಕೈಲಾಸ ದೇವಾಲಯವನ್ನು.

ಮಹಾರಾಷ್ಟ್ರದಲ್ಲಿ ಸ್ಥಾಪಿಸಿದರು. ರಾಮದುರ್ಗ ನರಗುಂದ ಜಮಖಂಡಿ ಸಂಸ್ಥಾನಗಳನ್ನು ಮರಾಠಿ ಮೂಲದ ಕೊಂಕಣಿ ಬ್ರಾಹ್ಮಣರು ಸ್ಥಾಪಿಸಿದರು.ಮುಧೋಳ ಘೋರ್ಪಡೆ ಮನೆತನದ ಮರಾಠರು ಆಳಿದರು.

ಹೀಗೆ ಮುಂದುವರೆದ ಕನ್ನಡ ಮರಾಠಿ ಭಾಷೆಗಳ ಸಾಂಸ್ಕೃತಿಕ ಸಂಬಂಧ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಒಮ್ಮೆ ಕುತ್ತು ತರುವ ಹಾಗಾಯಿತು. ಇಂತಹ ಆಪತ್ತನ್ನು ಮುಕ್ತ ಗೊಳಿಸಿದ ದಿಟ್ಟ ಯೋಧ ಡೆಪ್ಯುಟಿ ಚೆನ್ನಬಸಪ್ಪನವರು.

19ನೆಯ ಶತಮಾನದ ಉತ್ತರಾರ್ಧವು ಮುಂಬೈ ಕರ್ನಾಟಕದಲ್ಲಿ ಮರಾಠಿಯ ಪ್ರಾಬಲ್ಯದ ಹಾಗೂ ಇಂಗ್ಲೀಷಿನ ಪ್ರಾರಂಭದ ಕಾಲ.  ಆಗ ಕನ್ನಡ ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮಹಾ ಕಾರ್ಯಕ್ಕೆ ನಾಂದಿ ಹಾಡಿದವರು ಡೆಪ್ಯುಟಿ ಚನ್ನಬಸಪ್ಪನವರು. 

ಜನನ 

ಚನ್ನಬಸಪ್ಪನವರು 1834 ವರ್ಷದ ನವೆಂಬರ್ 1ರಂದು ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಜನಿಸಿದರು.  ತಂದೆ ಬಸಲಿಂಗಪ್ಪನವರು ಮತ್ತು ತಾಯಿ ತಿಮ್ಮಮ್ಮನವರು (ತಿಪ್ಪವ್ವ). ಚೆನ್ನಬಸಪ್ಪನವರ ತಂದೆಯವರು ತಮ್ಮ ಮನೆತನದ ಮೂಲ ಕಾಯಕವಾದ ವ್ಯಾಪಾರಕ್ಕಾಗಿ 

ಧಾರವಾಡಕ್ಕೆ ಬಂದರು.

ಶಿಕ್ಷಣ

ಅವರ ಪ್ರಾರಂಭಿಕ ಶಿಕ್ಷಣ ನಡೆದಿದ್ದು ಧಾರವಾಡದಲ್ಲಿ.  ಕಲಿತದ್ದು ಕನ್ನಡ, ಮರಾಠಿ ಮತ್ತು ಗಣಿತ. 

ಬಾಲಕ ಚನ್ನಬಸಪ್ಪನವರು ಇಂಗ್ಲಿಷ್ ಕಲಿಯುವ ಹಂಬಲದಿಂದ ಯಾರಿಗೂ ಹೇಳದೆ ಕೇಳದೆ, ಧಾರವಾಡದಿಂದ ಗೋಕಾಕಕ್ಕೆ ಬರಿಗಾಲಿನಿಂದ ನಡೆದುಕೊಂಡು ಹೋಗಿ ಅಲ್ಲಿ ತಮ್ಮ ಸಂಬಂಧಿಗಳ ಹತ್ತಿರ ಐವತ್ತು ರೂಪಾಯಿ ಕೂಡಿಸಿಕೊಂಡು ಮತ್ತೆ ಕಾಲ್ನಡಿಗೆಯಲ್ಲಿ 

 ಪುಣೆ ತಲುಪಿದರು. ಪುಣೆಯಲ್ಲಿ ಅವರಿಗೆ ಆಶ್ರಯ ನೀಡಿದವರು ಗೋವಿಂದರಾವ್ ಮೆಹಂಡಳೇಕರ ಅವರು. ಓದಿನಲ್ಲಿ ಪಾರಂಗತರೆನಿಸಿದ ಡೆಪ್ಯುಟಿ ಚೆನ್ನಬಸಪ್ಪನವರು ಅವರಿಗೆ  ಪ್ರತಿ ತಿಂಗಳೂ ಹತ್ತು ರೂಪಾಯಿ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರಂತೆ.  ಅಂದಿನ ದಿನದಲ್ಲಿ ಕೆಲಸದಲ್ಲಿದ್ದವರಿಗೆ ಸಂಬಳ ಅಷ್ಟು ಬರುತಿದ್ದರೆ ಹೆಚ್ಚಿರುತ್ತಿದ್ದ ಕಾಲ.  ಈ ಸಮಯದಲ್ಲಿ ತಮ್ಮ  ತಾಯಿಯನ್ನು ತಮ್ಮ ಬಳಿ ವಾಸಕ್ಕೆ ಪುಣೆಗೆ ಕರೆಸಿಕೊಂಡಾಗ ತಿಪ್ಪಮ್ಮನಿಗೆ  ಅಪರಿಮಿತ ಸಂತೋಷ ಖುಷಿ ಆಗಿತ್ತು.

ಚನ್ನಬಸಪ್ಪನಾವರು ಇಂಗ್ಲೆಂಡಿನಲ್ಲಿ ಅದೇ ತಾನೇ ತೆರೆದ ಕೂಪರ್ಸ್‌ಹಿಲ್ ಇಂಜಿನಿಯರಿಂಗ್ ಕಾಲೇಜಿಗೆ ಸೇರಲು ಆಯ್ಕೆಯಾದ ಐವರು ಪ್ರತಿಭಾವಂತ ವಿದ್ಯಾರ್ಥಿಗಳಲ್ಲೊಬ್ಬರಾಗಿದ್ದರು.  ದಾದಾಬಾಯಿ ನವರೋಜಿಯವರ ಈ ಯೋಜನೆ ಅಯಶಸ್ವಿಯಾಗಿ ಇಂಗ್ಲೆಂಡ್ ಪ್ರಯಾಣ ರದ್ದುಗೊಂಡಿತು.  ಆಗ ಅವರು ವಿಧಿಯಿಲ್ಲದೆ  1855ರಲ್ಲಿ ಮತ್ತೆ ಧಾರವಾಡಕ್ಕೆ ವಾಪಸ್ಸು ಬಂದರು.  

ವೃತ್ತಿ ಜೀವನ

ಕೆಲಕಾಲ ಅಂಚೆ ಕಚೇರಿಯಲ್ಲಿ ಕೆಲಸ ಮಾಡಿದರು.  ಅಷ್ಟರಲ್ಲಿ ಧಾರವಾಡದಲ್ಲಿ ನೂತನವಾಗಿ ಆರಂಭಗೊಂಡ ನಾರ್ಮಲ್ ಶಾಲೆಯ ಮುಖ್ಯೋಪಾಧ್ಯಾಯರಾಗಿ ಆಯ್ಕೆಗೊಂಡರು.  ಶಿಕ್ಷಣ ಇಲಾಖೆಯನ್ನು ಪ್ರವೇಶಿಸಿ 1861ರಲ್ಲಿ  ಬೆಳಗಾಂ ಜಿಲ್ಲೆಯ ಡೆಪ್ಯೂಟಿ ಇನ್‌ಸ್ಪೆಕ್ಟರೆನಿಸಿದರು.  ಹೀಗಾಗಿ ಅವರ ಹೆಸರಿಗೆ  ಡೆಪ್ಯೂಟಿ  ವಿಶೇಷಣ ಅಂಟಿಕೊಂಡಿತು. 

ಚನ್ನಬಸಪ್ಪನವರು ಅಧಿಕಾರಕ್ಕೆ ಬರುವ ಮುನ್ನ ಧಾರವಾಡ, ಬೆಳಗಾವಿ, ಬಿಜಾಪುರ ಜಿಲ್ಲೆಯ ಕನ್ನಡ ಶಾಲೆಯ ಸಂಖ್ಯೆ ಕೇವಲ 34 ಇತ್ತು.  ಚನ್ನಬಸಪ್ಪನವರ ಹತ್ತು ವರುಷದ ಆಡಳಿತದಲ್ಲಿ ಕನ್ನಡ ಶಾಲೆಗಳ ಸಂಖ್ಯೆ 668ಕ್ಕೆ ಏರಿತು. 

ಚನ್ನಬಸಪ್ಪನವರು, ತಮ್ಮ ಸ್ನೇಹಿತರಾದ  ರಾಮಚಂದ್ರ ಚುರಮುರಿ, ಗಂಗಾಧರ ಮಡಿವಾಳೇಶ್ವರ ತುರಮರಿ ಮೊದಲಾದ ಕನ್ನಡ ಭಕ್ತರಿಗೆ ಕನ್ನಡದಲ್ಲಿ ಗ್ರಂಥ ರಚಿಸಲು  ಪ್ರೇರಣೆ, ಪ್ರೋತ್ಸಾಹ, ಬೆಂಬಲಗಳನ್ನು ಒದಗಿಸಿದರು. ಸ್ವಯಂ ತಾವೇ ಪಠ್ಯ ಪುಸ್ತಕಗಳನ್ನು ರಚಿಸಿದರು. 

ಉಚಿತ ವಿದ್ಯಾರ್ಥಿ ನಿಲಯದ ಸ್ಥಾಪನೆ

 ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಿತ್ರದುರ್ಗದ ನಿರಂಜನ ಜಗದ್ಗುರು ಬೃಹನ್ಮಠದ ಮಹಾಲಿಂಗ ಸ್ವಾಮಿಗಳ ( ಶಿರಸಂಗಿ) ಮನವೊಲಿಸಿ ಬೆಳಗಾವಿಯಲ್ಲಿ ವೀರಶೈವ ಉಚಿತ ವಿದ್ಯಾರ್ಥಿನಿಲಯವನ್ನು ತೆರೆದರು. ಸ್ವಾಮಿಗಳ ನಿಧನಾನಂತರ ತಾವೇ ಇದರ  ಆರ್ಥಿಕ ಹೊಣೆ ಹೊತ್ತರು.  ಹೆಂಡತಿ ಮೈಮೇಲಿನ ನಗ, ಆಭರಣ ಒಡವೆ ಮಾರಿದರು. ಸಾಲದ ಬಾಧೆಗೆ  ಮನೆ-ಮಠಮಾರಿ ವಿದ್ಯಾರ್ಥಿ ನಿಲಯದ ನಿರ್ವಹಣೆ ಮಾಡಿದರಂತೆ.

ಸಾಹಿತ್ಯ ಕೃತಿಗಳು

ಚನ್ನಬಸಪ್ಪನವರು ‘ಕಾಮೆಡಿ ಆಫ್ ಎರರ್ಸ್‌’ (ನಗದವರನ್ನು ನಗಿಸುವ ಕಥೆ) ಮತ್ತು ‘ಮ್ಯಾಕ್‌ಬೆತ್’ ಕೃತಿಗಳನ್ನು ಪ್ರಕಟಿಸಿದರು. ‘ಮ್ಯಾಕ್‍ಬೆತ್’ ಕೃತಿಯ ಮೂಲಕ ಶೇಕ್ಸಪಿಯರ್ ಅನ್ನು ಮೊದಲು ಕನ್ನಡಕ್ಕೆ ತಂದವರು ಚನ್ನಬಸಪ್ಪನವರು.

ಚನ್ನಬಸಪ್ಪಾ ಇವರು ಹುಟ್ಟು ಹಾಕಿದ ಮತ್ತು ಶತಮಾನೋತ್ಸವವನ್ನು ಆಚರಿಸಿದ ಕನ್ನಡದ ಏಕಮೇವ ಶೈಕ್ಷಣಿಕ ಮಾಸಿಕ “ಜೀವನ ಶಿಕ್ಷಣ” ಪತ್ರಿಕೆ.

ಈ ಪತ್ರಿಕೆ ಸ್ಥಾಪಕರಾಗಿ ಹಲವು ಆರ್ಥಿಕ ಸಂಕಷ್ಟಕೆ ಈಡಾದರೂ  ಮಕ್ಕಳ ಕಲಿಕೆಗೆ ತಮ್ಮ ಸರ್ವಸ್ವವನ್ನು ಮಾರಿದ ಸದಾ ಸ್ಮರಣೀಯರು.  ಮಕ್ಕಳ ಶಿಕ್ಷಣಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡಿದ್ದ ಚನ್ನಬಸಪ್ಪನವರಿಗೆ ಜೀವನವೇ ಶಿಕ್ಷಣ ಶಾಲೆಯಾಗಿದ್ದರಲ್ಲಿ ಅಚ್ಚರಿಯಿಲ್ಲ. ಡೆಪ್ಯುಟಿ ಚೆನ್ನಬಸಪ್ಪನವರು ಧಾರವಾಡ ಟಿಸಿಏಚ್ ಕಾಲೇಜನ್ನು ಸ್ಥಾಪಿಸಿ ಕನ್ನಡ ಶಾಲಾ ಶಿಕ್ಷಕರ ತರಬೇತಿ ಕೇಂದ್ರ ಸ್ಥಾಪಿಸಿ ಅದರ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ ಮಹಾನುಭಾವರು.

ಡೆಪ್ಯುಟಿ ಚನ್ನಬಸಪಪ್ನವರು 1881 ವರ್ಷದ ಜನವರಿ 4 ರಂದು ಈ ಲೋಕವನ್ನಗಲಿದರು.  1981 ವರ್ಷದಲ್ಲಿ ಚನ್ನಬಸಪ್ಪನವರು ನಿಧನರಾದ ನೂರು ವರ್ಷಗಳಾದ ಸಂದರ್ಭದಲ್ಲಿ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನವನ್ನು ಸ್ಥಾಪಿಸಲಾಯಿತು. ಇದು ಪ್ರಾಥಮಿಕ ಶಿಕ್ಷಣ ಹಾಗೂ ಶಿಕ್ಷಕ ತರಬೇತಿ ರಂಗದಲ್ಲಿ ಕಾರ್ಯನಿರ್ವಹಿಸುವ ಸೇವಾಸಂಸ್ಥೆಯಾಗಿದೆ.

ಕನ್ನಡದ ಪುನರುಜ್ಜೀವನ ಮತ್ತು ಶಿಕ್ಷಣ ಪ್ರಸಾರ ಕಾರ್ಯದ ಶಕಪುರುಷಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡ ಡೆಪ್ಯೂಟಿ ಚನ್ನಬಸಪ್ಪನವರ ನೆನಪು ಎಲ್ಲಕಾಲಕ್ಕೂ ಸ್ಪೂರ್ತಿದಾಯಕ.

ತಮ್ಮ ಬದುಕಿನ ಕೇವಲ 47 ನೆಯ  ವಯಸ್ಸಿನಲ್ಲಿ ಅಗಾಧವಾದ ಕಾರ್ಯ ಮಾಡಿ ಗಡಿ ನಾಡು ವಿಜಯಪುರ ಧಾರವಾಡ ಬೆಳಗಾವಿ ಕಾರವಾರ ಬೀದರ ಮುಂತಾದ ರಾಜ್ಯಗಳಲ್ಲಿ ಕನ್ನಡ ಶಾಲೆಗಳನ್ನು ತೆರೆದು ಕನ್ನಡವ ಉಳಿಸಿ ಬೆಳೆಸಿದ ಕನ್ನಡದ ಕಟ್ಟಾಳು ಮತ್ತು ಗಡಿ ರಕ್ಷಣೆಗೆ ನಿಂತ ದಿಟ್ಟ ಯೋಧರು. ಕರ್ನಾಟಕ ರಾಜ್ಯ ಸರ್ಕಾರ ಇವರ ಹೆಸರಿನಲ್ಲಿ ಪ್ರತಿಷ್ಠಾನ ಮಾಡಲಿ ಮತ್ತು ಕರ್ನಾಟಕ ವಿಶ್ವ ವಿದ್ಯಾಲಯದ ಆವರಣದಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರ ಅಧ್ಯಯನ ಪೀಠ ತೆರೆಯ ಬೇಕು.

ಅಪ್ಪಟ ಬಸವ ಭಕ್ತ ಲಿಂಗಾಯತ ಧರ್ಮದ ಅನುಯಾಯಿ ತಮ್ಮ ನಿಸ್ವಾರ್ಥ ಸೇವೆಗೆ ಕನ್ನಡಿಗರ ಮನದಲ್ಲಿ ಚಿರಾಯುವಾಗಿದ್ದಾರೆ.

ಇಂತಹ ಶರಣರಿಗೆ ನಮ್ಮ ಭಕ್ತಿ ಪೂರ್ವಕ ಶತ ಕೋಟಿ ನಮನಗಳು.

__________________________

About The Author

1 thought on “ಸಾವಿಲ್ಲದ ಶರಣರು ಮಾಲಿಕೆ,”ಕನ್ನಡದ ಕಟ್ಟಾಳು ಗಡಿ ಕಾಯ್ದ ಯೋಧ ಡೆಪ್ಯೂಟಿ  ಚನ್ನಬಸಪ್ಪನವರು”-ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ”

  1. ಡೆಪ್ಯೂಟಿ ಚನ್ನಬಸಪ್ಪ ಅವರ ಸಮಗ್ರ ಜೀವನ ಪರಿಚಯ ಮತ್ತು ವ್ಯಕ್ತಿತ್ವದ ಬಗ್ಗೆ ತಿಳಿಸಿರುವಿರಿ, ಅಪ್ಪಟ ಬಸವ ಭಕ್ತ,&ಲಿಂಗಾಯತ ಧರ್ಮದ ಅನುಯಾಯಿಗಳು, ನಿಸ್ವಾರ್ಥ ಸೇವೆ ಸಲ್ಲಿಸಿದ್ದು ಸ್ಮರಣೀಯ.ಅದ್ಭುತ ಲೇಖನ ಸರ್.
    Vijayalaxmi hangaragi

Leave a Reply

You cannot copy content of this page

Scroll to Top