ಕಾವ್ಯ ಸಂಗಾತಿ
ಶಂಕರ್ ಪಡಂಗ ಕಿಲ್ಪಾಡಿ
“ಮುಟ್ಟಿದರೆ ಮುನಿ”


ಮುಟ್ಟಿದರೆ ಮುನಿ
ಯಾರು ಹೆಸರ ಇಟ್ಟರು
ನಿನಗೆ ,
ಲಜ್ಜಾವತಿಯಲ್ಲವೆ ನೀನು?
ಹೆಜ್ಜೆ ಸಪ್ಪಳಕೆ ನಾಚುತ್ತಾ
ಮುದುಡುವ ನೀನು
ಲಜ್ಜಾವತಿ ಎಂದರೆ
ತಪ್ಪೇನು…?
ಮುಂಜಾನೆಯ ರವಿ
ಕಿರಣಕ್ಕೆ ಹೊಳೆಯುವ
ನಿನ್ನ ಹೂವಿನಂದವ
ನೋಡುವುದೇ ಸೊಗಸು ,
ಸುಗಂಧ ಇಲ್ಲದಿದ್ದರೂ
ಚೆಲುವಿಗಿಲ್ಲ ಬರ ,
ಆದರೂ ದೇವರ
ಮುಡಿಗೇರಲಿಲ್ಲ ,
ಮಾನಿನಿಯರೂ ದೂರ
ಬಲು ದೂರ ,
ಯಾಕಿಷ್ಟು ಕೋಪ ನಿನ್ನಲ್ಲಿ ?
ನೀರು,ಗೊಬ್ಬರ ನೀಡದಿದ್ದರೂ
ನೀ ಬೆಳೆವೆ ಹುಲುಸಾಗಿ
ಯಾರ ಹಂಗಿಲ್ಲದೆ ,
ಮದ್ದಿನರಮನೆ ನೀನು
ಕಿತ್ತೊಗೆಯುವರು
ಉಪಕಾರ ಸ್ಮರಣೆ
ಇಲ್ಲದ ಜನರು,
ನಿನ್ನ ನಿಜಗುಣವ
ಮರೆತಿಹರು ಎಪ್ಟಾದರೂ
ತಾಮಸಿಗರಲ್ಲವೇ..?
ಶಂಕರ್ ಪಡಂಗ ಕಿಲ್ಪಾಡಿ



