ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎತ್ತರ ಮುಗಿಲ ಕಣ್ಣು
ಹಾರಿದವನಿಗೂ ಎತ್ತರ
ಬಾನೆತ್ತರ ಬಾನೇರುವ ಬಾನಾಡಿಗೂ ಎತ್ತರ
ಸೊಲ್ಲಿನ ಪದ ಗಲ್ಲುಗಲ್ಲೆಂದ ಮನಸಿನ ಹದ
ಮಾತಿಗಿಂತಲು ಎತ್ತರ

ನಾನು ಹಳ್ಳ ನೀನು ದಡ ಅವನೆ ಎಲ್ಲಾ ಎನ್ನು
ಪ್ರಶಾಂತವಾದ ಕಣ್ಣಿಗೆ ಮುದ
ನನ್ನದೇನು ಇಲ್ಲ ನಾನು ಕಣ ಎನ್ನು
ನೀನು ಧ್ಯಾನಕಿಂತ ಎತ್ತರ

ಕೊಡುವ ಕೈ ಹಸಿದವನ ಕಾಣುವ ಕಣ್ಣು
ಸಂತೈಸುವ ನಾಲಗೆ
ಬಿದ್ದವನ ಎತ್ತುವ ಕೈಗಳು
ಕಷ್ಟಕೆ ಹೆಗಲುಕೊಡುವ ಮನಸ್ಸುಗಳು
ಪೂಜಿಸುವ ದೇವರಿಗಿಂತಲು ಎತ್ತರ

ತನ್ನ ಸುತ್ತಲ ಸಮೂಹದ ನಗುವೆ ಸಂಪತ್ತು
ಎನ್ನುವವನ ಹೃದಯ
ಕೋಟಿ ಪುಣ್ಯಕಿಂತಲು ಎತ್ತರ

ಬಡವನ ಗುಡಿಸಲಲ್ಲಿ ಮಿನುಗುವ ದೀಪ
ಕಣ್ಣಿಗೆ ಬೆಳಕು ಮತಿಗೆ ತಿಳಿವು
ಕಂಡವನು ದಾರ್ಶನಿಕ
ಬಾಳಿದವನು ಅವನಿಗಿಂತಲೂ ಎತ್ತರ

ಗ್ರಂಥ – ಕಜಾನೆಗಳು ಅಮೂಲ್ಯವೇ
ಹೌದೆನ್ನುತ್ತವೆ ನಿದರ್ಶನಗಳು
ಕಂಡವನು ಜ್ಞಾನಿ ಅನುಭವಿಸಿದವನು ವಿದ್ವಾಂಸ
ಬೆವರಲಿ ಬದುಕಿನ ಅರ್ಥ ಕಂಡವನು
ಇವರೆಲ್ಲರಿಗಿಂತ ಎತ್ತರ

ಹೆಣ್ಣು ಗಂಡು ಜೀವ ಜೀವದ ನೆರಳು ಬೆಳಕು
ಖಗ, ಮೃಗ, ಗಿಡ, ಮರ, ಜಂತು – ಸಂತುಗಳಲ್ಲಿ
ಆತ್ಮದ ನಡೆಗೆ ಡಿಂಭದ ವೇಷ
ನುಡಿಸಿದವನು ಮಾಂತ್ರಿಕ, ನಡೆಸುವವನ ಕಂಡವರಿಲ್ಲ
ಬದುಕಿನ ನಾಟಕದ ಈ ಎಲ್ಲಾ ಅವತಾರಗಳಿಗೆ
ಎಡೆಗೊಡದೆ ಕಾಯಕದಲಿ ನಿಂತವನು
ಅನಂತ ಶಕ್ತನಿಗೂ ಮಾದರಿಯಲಿ ಎತ್ತರ

ಪರಾತ್ಪರತೆಯಲಿ ಪವಡಿಸುವವನು
ಕವಿಯ ನಡೆಗೂ ನುಡಿಗೂ ಹತ್ತಿರ
ಅನುಭವಿಸಿ ನುಡಿಯುವವನು ಅನುಭಾವಿಗೂ ಎತ್ತರ

ಮರೆತರೆ ಕೆಸರು ಅರಿತರೆ ಮತ್ತೆ ಅಲ್ಲೇ ಕಮಲ
ಪಾಡಿಗೆ ತಕ್ಕ ಹಾಡು.,
ಹರಿಯುವ ನದಿಯಲಿ ನಗುವ ಮೀನಿನಂತೆ.
ಎತ್ತರವೆಂದರೆ ಸ್ವಚ್ಚನೀರಲಿ ಕಂಡ ಮುಖ


About The Author

2 thoughts on “ಸತ್ಯಮಂಗಲ ಮಹಾದೇವ ಅವರ ಕವಿತೆ,”ಎತ್ತರವಾಗುವುದೆಂದರೆ””

Leave a Reply

You cannot copy content of this page

Scroll to Top