ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೋಡಗಳ ನೆರಳಾಟದಲ್ಲಿ
ಮರೆಯಾದನು ಮೋಹನ
ಕತ್ತಲ ಕೋಲಾಹಲದಲಿ
ಕನವರಿಸುತ್ತಿದೆ ಅವನಿಗಾಗಿ ಮನ..!!

ತಡೆಬಡೆಯಿರಲಿಲ್ಲಾ ರಾಧೆಯಲಿ
ಶ್ಯಾಮನ ಎದೆಗೊರಗಿ ಹೂವಾದಾಗ
ಸಂಜೆಯಾಗಸದಿ ಹೊಳಪಿಲ್ಲಾ
ಅವನ ಬಳಲಿಕೆಯಲಿ ಕಲ್ಲಾದಾಗ..!!

ಮನದ ಮೂಸೆಯಲಿ ಬಚ್ಚಿಟ್ಟ
ಅಳಿಸಲಾಗದ ನೆನಪುಗಳ ಝೇಂಕಾರ..
ಉಸಿರ ಬಸಿರಲಿ ಕೂಡಿಟ್ಟ
ಕಾಡಿಸಿ ಕೊಲ್ಲುವ ವಿರಹದ ಚೀತ್ಕಾರ!!

ಜೋಲುವುದೇಕೆ ಮನವು
ಅವನಿದ್ದ ನಂದನದ ತುಣುಕಿಗೆ
ಅರಳುವಾಸೆಯೇಕೆ ರಾಧೆಗೆ
ಶ್ಯಾಮನ ಮೖಸಿರಿಯ ಲಾಸ್ಯಕೆ..!!

ನೆಲಕೆ ಹರೆಯ ತುಂಬಿ ಶ್ಯಾಮ
ದೂರವಾದನು ವಸಂತಕೆ
ಅವನ ಲಲ್ಲೆಯಲ್ಲೇ ಎಲ್ಲೆ ಮೀರಿದ
ಮನಕೆ ನೋವು ಹೀಗೇಕೆ..??

ಮತ್ತೆ ಮೊಳಗಬಾರದೇ ವೇಣುಗಾನವು
ಪ್ರೇಮಕ್ಕಿದುವೇ ಕಳಶವು..
ಮತ್ತೆ ಚಿಗುರಬಾರದೇ ಒಲವು ಬೃಂದಾವನವು…
ಬಿಗಿಯೆ ತನ್ನ ಬಾಹುಪಾಶವು..!!


About The Author

Leave a Reply

You cannot copy content of this page

Scroll to Top