ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ವಿಜಯದಶಮಿ…

ಬಂತು ನವರಾತ್ರಿ
ಕಳೆಯೆ ಕಾಳರಾತ್ರಿ…
ಬೆಳಗುತಿದೆ ಶಾಂತ ಹಣತೆ
ಉರಿಸುತಲಿ ದುಗುಡ ಚಿಂತೆ..

ಅಂದು…
ಮನೆ ಮನೆಯಲಿ ಹರುಷ
ನೆರೆಹೊರೆಯ ಸ್ನೇಹ-ಸರಸ
ಮತಭೇದವಿರದ ಮನಸು
ನಿರ್ಭೀತ ನಿರಾಳ ಬದುಕಿನ ನನಸು…

ಇಂದು…
ಬಾಗಿಲಿಕ್ಕಿದ ಮನೆಯೊಳಗೆ
ಅಳುಕಿ ಉರಿಯುತಿದೆ ದೀಪ
ಯಾವ ಚಣದಿ ಎಂಥ ರೂಪ
ನಂದಿಸಬಹುದೆಂಬ ಪರಿತಾಪ…

ಜಾತಿ ಅಂತಸ್ತುಗಳ ನಡುವೆ
ಕೃತಕ ನಗುವಿನ ಲೇಪ..
ಭಯದ ನೆರಳಲಿ ಬದುಕ
ನೂಕುವ ಅಂಧಕೂಪ…

ಎಂದು ಕಳೆಯುವುದೋ
ಭೂಮಿತಾಯೊಡಲಿನ ತಾಪ
ಎಂದು ತೊಳೆಯುವುದೋ
ಮಲಿನ ಮನಸುಗಳ ಪಾಪ…

ಎಂದು ಹತರಾಗುವರೋ
ನಯವಂಚಕ ರಕ್ಕಸರು..
ಎಂದು ದಹಿಸುವರೋ
ದೇಶದ್ರೋಹಿ ದಾನವರು…

ಎಂದು ಭಸ್ಮವಾಗುವರೋ
ಕಳ್ಳ ಭಸ್ಮಾಸುರರು ;
ಎಂದು ಬೆಳಗುವದೋ
ಮಾನವತೆಯ ಉಜ್ವಲ ದೀಪ…
….ಅಂದೇ ಮಹಾನವಮಿ
….ಅಂದೇ ವಿಜಯದಶಮಿ…!


ಹಮೀದಾ ಬೇಗಂ ದೇಸಾಯಿ

About The Author

Leave a Reply

You cannot copy content of this page

Scroll to Top