ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಮುಭಾವಜೀವಿ ಮುಸ್ಟೂರು

ಯುದ್ಧ ಮಾರಿ

ಯಾರದೋ ಪ್ರತಿಷ್ಠೆಗಾಗಿ
ಇನ್ಯಾರದೋ ಹಪಾಹಪಿಗಾಗಿ
ತನ್ನ ಕುಲದವರ ಕೊಂದು ಹಾಕಿ
ಗೆದ್ದು ಬೀಗುವ ದರ್ದು ನಿಮಗೇಕೆ

ನಿಮ್ಮ ಮನೆಯವರಾರು ಸತ್ತಿಲ್ಲ ನೋಡಿರಲ್ಲಿ
ಬೀದಿಯಲ್ಲಿ ದುಡಿದು ತಿನ್ನುವ ದಿನಗೂಲಿ
ದೇಶಾಭಿಮಾನದ ಗುಂಗಲ್ಲಿ ಪ್ರಾಣ ತೆತ್ತ ಸೈನಿಕರಲ್ಲಿ
ಮನೆಗೆ ಆಧಾರವಾದ ಯಜಮಾನನ ಕಳೆಬರಹಗಳೆ ಬಿದ್ದಿವೆಯಿಲ್ಲಿ

ಏನು ಅರಿಯದ ಕಂದಮ್ಮಗಳು
ರಕ್ತದ ನಡುವಿನಲ್ಲಿ ನೆಂದು ಬಿದ್ದಿವೆ
ಹೆತ್ತವರ ಕಳೆದುಕೊಂಡ ಮಕ್ಕಳು
ಭಯಭೀತಿಯಲಿ ಅನಾಥರಾಗಿ ಆಕ್ರಂದಿಸುತ್ತಿವೆ

ಧರ್ಮದ ಅರ್ಥ ತಿಳಿಯದ ಮತಾಂಧರ
ರಕ್ತ ಪಿಪಾಸು ಫಿರಂಗಿ ಗುಂಡಿಗೆ ಕನಿಕರವಿಲ್ಲ
ಅಧಿಕಾರ ಲಾಲಸೆಯ ಅಧ್ಯಕ್ಷ ಗಿರಿಗೆ
ಪ್ರಾಣತೆತ್ತ ಅಮಾಯಕ ದೇಹಗಳು ಕಾಣುತ್ತಿಲ್ಲ

ಶಾಂತಿ ಕದಡಿ ಕ್ರಾಂತಿಯ ಕಹಳೆಯೂದಿ
ಸಾರಿದ ಯುದ್ಧಕ್ಕೆ ಮುಗ್ಧ ಜೀವಿಗಳ ಬೆಲೆ ತಿಳಿದಿಲ್ಲ
ಕ್ರೌರ್ಯದ ಮದವೇರಿದ ನೌಕೆಗಳ ದಾಳಿಗೆ
ತತ್ತರಿಸಿದ ಸಾವು ನೋವುಗಳಿಗೆ ಮುಲಾಮ ಸಿಕ್ಕುತಿಲ್ಲ

ಹೆಣ್ಣುಗಳು ಹಣ್ಣು ಮುದಿ ಜೀವಗಳು
ಮೊಲೆ ಕಚ್ಚಿ ಮಲಗಿದ ಕಂದಗಳು
ಕತ್ತರಿಸಿ ಬಿದ್ದ ಅಂಗಾಂಗಗಳ ಕಳೆದುಕೊಂಡು
ನರಳುತ್ತಿರುವರ ಬದುಕು ಕಟ್ಟಿಕೊಡುವುದೇ ನಿಮ್ಮ ಅಧಿಪತ್ಯ

ಸಾಕು ನಿಲ್ಲಲಿ ಹಿಂಸೆಯ ಅಮಾನವೀಯತೆ
ಹೃದಯ ಹೃದಯಗಳ ಬೆಸೆಯಲಿ ಮಾನವಿಯತೆ
ವಸುದೈವ ಕುಟುಂಬಕಂ ಅದುವೇ ಜಾಗೃತೆ
ಯುದ್ದರಕ್ಕಸಿಗೆ ಕಲಿಸಬೇಕು ಚೂರು ಮಮತೆ


ಅಮುಭಾವಜೀವಿ ಮುಸ್ಟೂರು

6

About The Author

Leave a Reply

You cannot copy content of this page

Scroll to Top