ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಅನಸೂಯ ಜಹಗೀರದಾರ

ದುಡುಕುವ ಮುನ್ನ ಆ ಆರ್ದ್ರತೆಯ ಮಾತುಗಳನು ಕೇಳಬೇಕಿತ್ತು ಮನಸೇ
ಬಾಳು ಮುಳುಗುವ ಮುನ್ನ ರವಿಯ ರಶ್ಮಿಗಳನು ನೆನೆಪಿಸಬೇಕಿತ್ತು ಮನಸೇ

ಅಹಂಕಾರದಿ ಕೈ ಬಿಡುವ ಮುನ್ನ ಕಳೆದ ದಿನಗಳನು ಸ್ಮರಿಸಬೇಕಿತ್ತು ಮನಸೇ
ತಿರುವು ಪಡೆವ ಮುನ್ನ ಗತದ ದಾರಿಗಳನು ಗಮನಿಸಬೇಕಿತ್ತು ಮನಸೇ

ನುಡಿವ ಮುನ್ನ ಆ ಕಟು ಪದಗಳನು ನಿನ್ನಲ್ಲೇ ಹೇಳಿಕೊಳ್ಳಬೇಕಿತ್ತು ಮನಸೇ
ಬೆನ್ನು ತಿರುಗಿಸುವ ಮುನ್ನ ಆ ಭಾರದ ಹೆಜ್ಜೆಗಳನು ತಡೆಯಬೇಕಿತ್ತು ಮನಸೇ

ಕಾಲ ಮೀರುವ ಮುನ್ನ ಸಂದೇಹಗಳನು ವಿಶ್ಲೇಷಿಸಬೇಕಿತ್ತು ಮನಸೇ
ಮರವ ಕತ್ತರಿಸುವ ಮುನ್ನ ಚಿಗುರುಗಳನು ನೋಡಬೇಕಿತ್ತು ಮನಸೇ

ನಿರ್ಣಯಿಸುವ ಮುನ್ನ ವಿಚಾರಗಳನು ಹಂಚಿಕೊಳ್ಳಬೇಕಿತ್ತು ಮನಸೇ
ಅನು ಹೊಸೆದ ಬತ್ತಿಯಲಿ ಪ್ರೇಮ ಜ್ಯೋತಿಗಳನು ಬೆಳಗಿಸಬೇಕಿತ್ತು ಮನಸೇ


ಅನಸೂಯ ಜಹಗೀರದಾರ

About The Author

Leave a Reply

You cannot copy content of this page

Scroll to Top