ಕಾವ್ಯ ಸಂಗಾತಿ
ಜೆ.ಎಲ್. ಲೀಲಾಮಹೇಶ್ವರ
ವಸಂತನಾಗಮನ

ಋತುಗಳ ರಾಜ ವಸಂತ ಬಂದ,
ಬುವಿಗೆ ಹೊಸ ಕಳೆಯನು ತಂದ.
ಎಲ್ಲೆಡೆ ಧರೆಯಲಿ ಹೊಸ ಚಿಗುರು ಅತೀ ಸುಂದರ,
ಹಾಡುತಿಹ ಕೋಗಿಲೆಯ ದನಿಯು ಅತೀ ಮಧುರ.
ಏರುತಿದೆ ಈ ಧರೆಯಲಿ ದಿನೇ ದಿನೇ ಕಾವು,
ಕೈ ಬೀಸಿ ಘಮವೀವುತಿವೆ ಹಲಸು, ಮಾವು.

ಬೇಸಿಗೆ ಸಂಜೆಯಲು ಬೀಸುತಿದೆ ತಂಗಾಳಿ,
ಕಣ್ಮನ ಸೆಳೆಯುತಿವೆ ವಿವಿಧ ಹೂಗಳು ಅರಳಿ.
ವಲಸೆ ಬರುತಿವೆ ಹೊರಗಿಂದ ಖಗಗಳ ಹಿಂಡು,
ಮಕರಂದ ಹೀರುತಿವೆ ದುಂಬಿಗಳ ದಂಡು.
ಎಲ್ಲೆಡೆ ಜಾತ್ರೆ, ಉತ್ಸವಗಳ ಆಚರಣಾ ಸಂಭ್ರಮ,
ಸವಿಯಲು ಸಿಹಿ, ಖಾರ ಭೋಜನದ ಸಮಾಗಮ.
ಚಿಲಿಪಿಲಿಯೆನ್ನುವ ಕಲರವ ಕಿವಿಗೆ
ಬಲು ಚಂದ,
ಹಸಿರು ಹೊದ್ದ ಪರಿಸರದಿ ತುಂಬಿದೆ ಬಹು ಅಂದ.
ಹೊಂಗೆಯ ತೊಂಗಲಲಿ ಬೃಂಗಗಳ ಸಂಗೀತದ ಇಂಪು,
ದಿನಗಳದಂತೆ ಕಾವು ಕುಸಿದು ಏರುತಿದೆ ಇಳೆಯಲಿ ತಂಪು.
ಅರಳಿದ ಹೂಗಳಲಿ ತುಂಬಿದೆ ವರ್ಣಗಳ ನಾವಿನ್ಯ.
ತರುಲತೆಗಳಲಿ ತುಂಬಿ ಬರುತಿದೆ ಹೊಸ ಚೈತನ್ಯ.




1 thought on “ವಸಂತನಾಗಮನ-ಜೆ.ಎಲ್. ಲೀಲಾಮಹೇಶ್ವರ”