ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ಕವಿತೆ

ಅರುಣಾ ರಾವ್

ಅಳಿಲು ಭಕ್ತಿ

ರಾಮ ಸೀತೆಯನು
ಹುಡುಕುತ ಹೊರಟ
ಸಾಗರವೊಂದು
ಎದುರಾಯ್ತು

ಕಡಲನು ಹೇಗೆ
ದಾಟುವುದೆಂದು
ರಾಮಚಂದ್ರನಿಗೆ
ವ್ಯಥೆಯಾಯ್ತು

ವಾನರ ಸೇನೆಯು
ಉಪಾಯ ಹೂಡಿ
ಸೇತುವೆ ಕಟ್ಟಲು
ಒಂದಾಯ್ತು

ಬಂಡೆಗಲ್ಲುಗಳ
ಮೇಲ್ಗಡೆ ತಾವೇ
ರಾಮ ನಾಮವನು
ಬರೆದಾಯ್ತು

ನೀರಿಗೆ ಎಸೆದ
ಕಲ್ಗಳು ಮುಳುಗದೆ
ಹೂವಿನಂದದಿ
ತೇಲಾಯ್ತು

ಕಾರ್ಯ ವೈಖರಿ
ಕಂಡು ಅಳಿಲೊಂದು
ತಾನೂ ಕೆಲಸಕೆ
ಮುಂದಾಯ್ತು

ಹಸಿ ಮೈಯಲ್ಲಿ
ಮರಳ ಮೇಗಡೆ
ಆ ಕಡೆ ಈ ಕಡೆ
ಹೊರಳಾಯ್ತು

ಮೈಗೆ ಮೆತ್ತಿದ
ಮರಳ ಕಣಗಳ
ಸೇತುವೆ ಮೇಲೆ
ಒದರಾಯ್ತು

ದಶರಥ ಕುವರಗೆ
ಅಳಿಲಿನ ಸೇವೆ
ಕಾಣುತ ಅತೀವ
ಬೆರಗಾಯ್ತು

ಆದರದಿಂದಲಿ
ಅಳಿಲನು ಕರೆದು
ಬೆನ್ನ ಮೇಗಡೆ
ಸವರಾಯ್ತು

ಈಗಲೂ ಬೆನ್ನಲಿ
ರಾಮನ ಬೆರಳು
ಶಾಶ್ವತವಾಗಿ
ಉಳಿದಾಯ್ತು

ಮಳಲಿನ ಶಕ್ತಿ
ಅಳಿಲನ ಭಕ್ತಿ
ಕೀರ್ತಿ ಶಿಖರವನು
ಮುಟ್ಟಾಯ್ತು


ಅರುಣಾ ರಾವ್

About The Author

Leave a Reply

You cannot copy content of this page

Scroll to Top