ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜುಗಲ್ ಬಂಧಿ ಗಜಲ್

ಬಹುಕಾಫಿಯಾ ಗಜಲ್

ಮನವು ಕಂದಿದೆ ನನಸು ತೋರಿದ ಆತಿಥ್ಯದಿಂದ
ತನುವು ಬೆಂದಿದೆ ಕನಸು ಕನವರಿಸಿದ ಕುಹಕದಿಂದ

ಬಾಳ್ವೆ ಬೆಸೆದ ಉಸಿರಲಿ ಏನನರಸುತ ಸಾಗಲಿ ಇನ್ನು
ಕ್ಷಣವು ಕಾಡಿದೆ ಮನಸು ಮಿಡಿದ ಹಾರೈಕೆಯಿಂದ

ಹಸಿ ಮಾತು ಹುಸಿಯಾಗಿದೆ ಋತುಗಳ ಪರ್ವದಲ್ಲಿ
ಛಲವು ಸೊರಗಿದೆ ಯಶಸು ತೊರೆದ ಕಸುವಿನಿಂದ

ಚಿತ್ತ ವಿಕೋಪದ ಚಾಳಿಗೆ ಸರಹದ್ದು ಕಟ್ಟಿದವರಿಹರೇ
ಭೀತತ್ವವು ಮೇಳೈಸಿದೆ ಮುನಿಸು ಬಿತ್ತಿದ ಭಾವದಿಂದ

ಬಾಳ ಯಾನಕೆ ಸುಖೀಗೀತೆ ಹಾಡುವವರಿಲ್ಲ ನಯನ
ಲಯವು ತಪ್ಪಿದೆ ಹುಲುಸು ಹಡೆಯದ ಹೃನ್ಮನದಿಂದ.

——
ನಯನ. ಜಿ. ಎಸ್.

ಬಹುಕಾಫಿಯಾ ಗಜಲ್

ಜಗವು ನೊಂದಿದೆ ಮುಳಿಸು ಮರೆಸಿದ ಪ್ರೀತಿಯಿಂದ
ಇಹವು ದಹಿಸಿದೆ ಕಿನಿಸು ಹೊತ್ತಿಸಿದ ದ್ವೇಷಾಗ್ನಿಯಿಂದ

ಭಾವವು ಉಸಿರ ಚೆಲ್ಲಿದೆಡೆ ತ್ಯಜಿಸು ಕಾಳಜಿಯ ಬಯಕೆ
ಮಿಗವು ಇಣುಕಿದೆ ಸೊಗಸು ಮಾಸಿದ ಅಂತರಂಗದಿಂದ

ತೃಷೆಯು ಇಂಗಿದೆ ಭ್ರಮನಿರಸ ಬದುಕಿನ ಯಾತ್ರೆಯಲ್ಲಿ
ಮೋಹವು ಮರಣಿಸಿದೆ ಹೊಲಸು ತುಂಬಿದ ಜನರಿಂದ

ಭರವಸೆಯು ಬದಿಗೆ ಸರಿದಿರಲು ಬವಣೆಯು ಒಡನಾಡಿ
ಜಸವು ಬಡವಾಗಿದೆ ತ್ರಾಸ ನೀಗದ ಜೀವಂತಿಕೆಯಿಂದ

ವಿಜಯದಿ ಹರ್ಷಿಸಲೆಂತು ಏಕಾಂಗಿ ಜೀವ ಸಮರದಲ್ಲಿ
ಕಸುವು ಕುಗ್ಗಿದೆ ಕಲಸು ಹೃದಯದ ನಿರ್ಲಿಪ್ತತೆಯಿಂದ.

– ವಿಜಯಪ್ರಕಾಶ್ ಸುಳ್ಯ


About The Author

Leave a Reply

You cannot copy content of this page

Scroll to Top