ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಕರಿ ಎತ್ತು ಕಾಳಿಂಗ ಬಿಳಿ ಎತ್ತು ಮಾಲಿಂಗ ಹಸಿವಾದಾಗ ಮಾತ್ರ ಮಾತನಾಡುತ್ತವೆ
ಹಗಲಲ್ಲ ಇರುಳಲ್ಲ ಕಾಯಕದೊರೆಗಳು ನಮಗಾಗಿ ಅನುಗಾಲ ದುಡಿಯುತ್ತವೆ

ಅಪ್ಪ ಹೂಡಿದ ರೆಂಟೆಗೆ ಬಸವ ಹೆಗಲಾದ ಅದಕ್ಕೆ ಒಮ್ಮೊಮ್ಮೆ ಅಮ್ಮನೂ ಹೊರತಲ್ಲ
ಕೆಸರಾದ ಕೈಗಳು ಬೆವರಿಳಿಸಿದ ಮೈಗಳು ಬರಿದಾದ ಪಾತ್ರೆ ತುಂಬಿಸುತ್ತವೆ

ಕೋಟಿ ವಿದ್ಯೆ ಕಲಿತರೇನು ಹೊಟ್ಟೆಗೆ ತಿನ್ನುವುದು ಮೇಟಿ ವಿದ್ಯೆಯ ವರದಿಂದಲೇ
ಮೆರೆಯದಿರು ಪಟ್ಟಣದ ದಣಿಯೇ ಒಂದುದಿನ ಕಾಲಗಳೇ ಪಾಠ ಕಲಿಸುತ್ತವೆ

ಇಲ್ಲದವರಿಗೆ ಕೊಟ್ಟ ನೂರು ಭರವಸೆಗಳು ಹುಸಿಯಾಗಿ ಹೋದವು ಸುಳಿವಿಲ್ಲದೆ
ಅನ್ನದಾತನ ಮನೆಯಲ್ಲಿ ಅಗುಳನ್ನವೂ ಸಹ ಕೊಪ್ಪರಿಗೆ ಹೊನ್ನಾಗಿ ಕಾಣಿಸುತ್ತವೆ

ಒಕ್ಕಲಿಗರ ಮನೆಯಲ್ಲಿ ಹುಟ್ಟಿ ಬಂದಿರುವುದೇ ಪೂರ್ವಜನ್ಮದ ಪುಣ್ಯವೆನ್ನುವಳು ಮಧು
ಸಿರಿಧಾನ್ಯ ಕಣಜದ ವೈಭವ ನೋಡಲು ಎರೆಡು ಕಣ್ಣುಗಳೇ ಸಾಲದಾಗುತ್ತವೆ

*********************************************

ಮಧು ಕಾರಗಿ

About The Author

Leave a Reply

You cannot copy content of this page

Scroll to Top