ನಿಮ್ಮೊಂದಿಗೆ

ಕಸಾಪ ಅದ್ಯಕ್ಷಸ್ಥಾನದ ಅಭ್ಯರ್ಥಿಗಳಿಗಷ್ಟು ಪ್ರಶ್ನೆಗಳು!

ಸಂಪಾದಕೀಯ ಕಸಾಪ ಅದ್ಯಕ್ಷಸ್ಥಾನದ ಅಭ್ಯರ್ಥಿಗಳಿಗಷ್ಟು ಪ್ರಶ್ನೆಗಳು! ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಸ್ಥಾನದ  ಅಭ್ಯರ್ಥಿಗ ಳಿಗೊಂದಿಷ್ಟು ಪ್ರಶ್ನೆಗಳು!              ಇನ್ನು ಕೆಲವೆ ತಿಂಗಳುಗಳಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ  ಅದ್ಯಕ್ಷ ಸ್ಥಾನಕ್ಕೆ ತಾವುಗಳು ಆಕಾಂಕ್ಷಿಗಳಾಗಿದ್ದು, ಖಾಸಗಿಯಾಗಿ ತಮ್ಮ ಆಪ್ತವಲಯದ ಮೂಲಕ ಸದ್ದಿರದೆ ಪ್ರಚಾರ ಕಾರ್ಯವನ್ನೂ ಶುರು ಮಾಡಿರುತ್ತೀರಿ. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ  ಈ ನೆಲದಲ್ಲಿ ಇಂತಹ ಆಕಾಂಕ್ಷೆಗಳು- ಸಂಬಂಧಿಸಿದ ಪೂರ್ವ ಸಿದ್ದತೆಗಳು ಸಹಜವೇ ಸರಿ! ಈ ಬಗ್ಗೆ ನಮ್ಮ ತಕರಾರೆನಿಲ್ಲ. ಆದರೆ ಹಲವು ವರ್ಷಗಳಿಂದ ಈ ಚುನಾವಣೆಗಳು ಹೇಗೆ ನಡೆಯುತ್ತವೆ ಅಥವಾ ನಡೆಸಲ್ಪಡುತ್ತವೆ ಎಂಬುದನ್ನು ಕಂಡಿರುವ ನಮ್ಮಲ್ಲಿ ಕೆಲವು ಪ್ರಶ್ನೆಗಳು ಹುಟ್ಟಿದ್ದು ತಾವು ಸದರಿ ಪ್ರಶ್ನೆಗಳಿಗೆ ಉತ್ತರಿಸುತ್ತೀರೆಂದು ನಂಬುತ್ತೇನೆ.ಕಸಾಪದ ಮತದಾರನಾಗಿ ಈ ಪ್ರಶ್ನೆಗಳನ್ನು ಕೇಳುವುದು ನಮ್ಮ ಹಕ್ಕಾಗಿದ್ದು-ಉತ್ತರಿಸುವುದು ನಿಮ್ಮ ಕರ್ತವ್ಯವೆಂದು ನಾನಂತೂ ನಂಬಿದ್ದೇನೆ 1.ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ವೆಚ್ಚ ಮಾಡುವ ಹಣದ ಮಿತಿಯೇನಾದರು ಇದೆಯೇ? 2.ಹೋಗಲಿ ನಾಮಪತ್ರ ಹಾಕುವ ಮುಂಚೆ ರಾಜಕಾರಣಿಗಳಂತೆ ತಮ್ಮ  ಸ್ಥಿರ-ಚರಾಸ್ತಿಗಳನ್ನು ತಾವುಗಳು ಘೋಷಿಸಿಕೊಳ್ಳಬೇಕೆಂಬ ನಿಯಮವಿದೆಯೇ? 3. ಹಾಗೊಂದು ನಿಯಮವಿರದಿದ್ದ ಪಕ್ಷದಲ್ಲಿ ತಾವು ಸ್ವಯಂಪ್ರೇರಿತರಾಗಿ ಘೋಷಿಸುವ ಮೂಲಕ  ಪಾರದರ್ಶಕತೆ ಮರೆಯಲು ಸಿದ್ದರಿದ್ದೀರಾ? 4. ಗೆದ್ದಮೇಲೆ ಲೋಕಾಯುಕ್ತಕ್ಕೂ ಆಸ್ತಿವಿವರ ಸಲ್ಲಿಸಬೇಕೇ? 5.ಇವ್ಯಾವು ಇಲ್ಲವೆಂದಾದರೆ ತಾವುಗಳು ಈ ವಿಚಾರದಲ್ಲಿ ಯಾರಿಗೆ ಹೊಣೆಗಾರರಾಗಿರುತ್ತೀರಿ? 6.ಇನ್ನು ಮತದಾರರ ಸಂಖ್ಯೆ ಕನಿಷ್ಠ ಒಂದು ಲಕ್ಷವಿದೆ ಎಂದುಕೊಂಡರೂ,ನೀವು ಅವರಿಗೆ ಪತ್ರ ಬರೆಯಲೇ ಸುಮಾರು ೫ ಲಕ್ಷ ರೂಪಾಯಿ ಬೇಕಾಗುತ್ತದೆ. ಅಷ್ಟು ಹಣವನ್ನು ಎಲ್ಲಿಂದ ತರುತ್ತೀರಿ? 7. ಪ್ರತಿತಾಲೂಕಿಗೂ ನಿಮ್ಮ ಕಾರಲ್ಲಿ ಬೇಟಿಕೊಡುವುದೇ ಆದಲ್ಲಿ ಕನಿಷ್ಠ  ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಬೇಕಾಗುತ್ತದೆ. ಈ ದುಡ್ಡಿಗೇನು ಮಾಡುತ್ತೀರಿ? 8.ಹೋಗಲಿ ಚುನಾವಣೆ ಖರ್ಚಿಗೆಂದು ನೀವುಗಳೇನಾದರು ಪಾರ್ಟಿಫಂಡ್ ರೀತಿಯಲ್ಲಿ ಹಣ ಸಂಗ್ರಹಿಸುತ್ತೀರಾ? 9.ಹಾಗೆ ಸಂಗ್ರಹಿಸಿದರೆ ಕೊಟ್ಟವರ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತೀರಾ? 10.ಯಾವುದಾದರು ರಾಜಕೀಯ ಪಕ್ಷಗಳ ಬೆಂಬಲ ನಿಮಗೆ ಇದೆಯಾ? ಇದ್ದರೆ ಯಾವ ಪಕ್ಷ (ಯಾವ ಕಾರಣ) ವಿವರಿಸುತ್ತೀರಾ? 11.ಚುನಾವಣಾ ಪ್ರಚಾರದ ಸಮಯದಲ್ಲಿ ಯಾವುದೇ ಜಾತಿ-ಧರ್ಮದ ಮಠ,ಮಂದಿರ,ಮಸೀಧಿ, ಚರ್ಚುಗಳಿಗೆ  ಹೋಗಿ ಜಾತಿ ಧರ್ಮದ ಹೆಸರಿನಲ್ಲಿ ಮತ ಕೇಳುವುದಿಲ್ಲವೆಂದು ಬಹಿರಂಗವಾಗಿ ಹೇಳಲು ನಿಮಗೆ ಸಾದ್ಯವಿದೆಯೆ? 12.ಇಷ್ಟು ವರ್ಷಗಳ ಕಾಲ ಪುರುಷ ಪುಂಗವರೇ ಕಸಾಪದ ಅದ್ಯಕ್ಷರಾಗಿದ್ದು ಸಾಕು, ಈಗಲಾದರು ಮಹಿಳೆಯೊಬ್ಬರು ಆ ಸ್ಥಾನಕ್ಕೇರಲೆಂದು ನಿಮಗೀವರೆಗೂ ಅನಿಸಲಿಲ್ಲವಾ?ಅನಿಸಿದ್ದರೆ ಈ ದಿಸೆಯಲ್ಲಿ ನೀವೇನಾದರು ದನಿಯೆತ್ತಿದ್ದೀರಾ? 13. ಇಷ್ಟೆಲ್ಲಾ ಖರ್ಚು ಮಾಡಿ ಗೆದ್ದ ಮೇಲೆ ಕಳೆದುಕೊಂಡ ಹಣವನ್ನು ಮರಳಿ ಗಳಿಸಲು ಏನೆಲ್ಲಾ ಮಾಡುತ್ತೀರಿ?  ಕೊನೆಯ ಪ್ರಶ್ನೆಗೆ ಕ್ಷಮೆಯಿರಲಿ: ಯಾಕೆಂದರೆ ನೀವು ಚುನಾವಣೆಗೆ ಖರ್ಚು ಮಾಡುತ್ತಿರುವು ಕಡಲೆಬೀಜಗಳಲ್ಲ ಲಕ್ಷಲಕ್ಷ ರೂಪಾಯಿಗಳು! ಉತ್ತರ ಕೊಡಲೇ ಬೇಕೆಂಬ ಕಡ್ಡಾಯವೇನಿಲ್ಲ.  ಇಂತಹ ಪ್ರಶ್ನೆಗಳನ್ನು ರಾಜಕಾರಣಿಗಳಿಗೆ ಕೇಳಿಕೇಳಿ ನಮಗೆ ಅಭ್ಯಾಸವಾಗಿ ಹೋಗಿದೆ……..ಆದರೆ ಕನ್ನಡ ಸಾಹಿತ್ಯ ಪರಿಷತ್ತಿನಂತಹ  ಸಂಸ್ಥೆಗೆ ಕಾಲಿಡಲು ಹೊರಟಿರುವ ತಮಗೆ  ಈ ಪ್ರಸ್ನೆಗಳ ಹಿಂದಿರುವ ಕಾಳಜಿಯನ್ನು ಅರ್ಥ ಮಾಡಕೊಳ್ಳುವ ಸೂಕ್ಷ್ಮತೆ ಇದೆಯೆಂದು ನಾವಂತೂ ನಂಬಿದ್ದೇವೆ ಇವೆಲ್ಲದರ ನಡುವೆಯೂ ಕನ್ನಡದ ಸೇವೆ ಮಾಡುವ  ತಮ್ಮ  ಉದ್ದೇಶಕ್ಕೆ ಶರಣು-ಶರಣು! ತಮ್ಮ ವಿಶ್ವಾಸಿಯಾದ ಕಸಾಪ ಮತದಾರ ******************************************** ಕು.ಸ.ಮಧುಸೂದನರಂಗೇನಹಳ್ಳಿ

ಕಸಾಪ ಅದ್ಯಕ್ಷಸ್ಥಾನದ ಅಭ್ಯರ್ಥಿಗಳಿಗಷ್ಟು ಪ್ರಶ್ನೆಗಳು! Read Post »