ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕಾಪಿಟ್ಟು ಕಾಯುತ್ತಾಳೆ

ಶ್ರೀವಲ್ಲಿ ಶೇಷಾದ್ರಿ

ಋತು ಋತುವಿಗೊಂದೊಂದು ಹೊಸತು
ಹೆಚ್ಚುಗಾರಿಕೆಯ ಬಿಚ್ಚಿಡುತ್ತಾಳೆ,
ಅಚ್ಚರಿ ಹುಟ್ಟಿಸಿಬೆಚ್ಚಿಸುವ ಈಹುಚ್ಚಿ
ಪೆಚ್ಚಾಗಿಸುತ್ತಾಳೆ ಹುಚ್ಚುಗಳ ಹೆಚ್ಚಿಸಿ
ಮನದಿಚ್ಚೆಗಳ ಅಚ್ಚು ಹಾಕಿಸಿಟ್ಟು
ರಚ್ಚೆ ಹಿಡಿದು ಅಚ್ಚು ಮೆಚ್ಚಾಗಿ
ಕೊಚ್ಚಿ ಹೋಗದ ಹಾಗೆ ಬಚ್ಚಿಟ್ಟು
ಕಾಪಿಟ್ಟು ಕಾಯುತ್ತಾಳೆ ಬೆಚ್ಚಗೆ

ಕಳಚಿಟ್ಟ ಪೊರೆ ಮತ್ತೆ ಹಸಿರು ಕೊನರಿ
ಹಸಿ ಕರಗ ಮಣ ಭಾರ ಹೊತ್ತು
ಚೀರಿ ಹಾರಿ ಮೇಲೆರಗೊ ಹನಿಯ
ರಭಸ ಭರಿಸಿ ಝಾಡಿಸಿ ತೂರಿ
ಎಲ್ಲೆ ಇರದೆಡೆ ಹರಿದು ಬರಿಯ
ರಾಡಿಯನ್ನಪ್ಪಿ ಒಪ್ಪಿ ಮುತ್ತಿಕ್ಕಿ ದಿನ ರಾತ್ರಿಯಾಟಕ್ಕೆ ಅದರಿ ಬೆದರಿ
ಗರಿ ಕೆದರಿ ಮತ್ತೊಮ್ಮೆ ಹೂವಾಗುತ್ತಾಳೆ

ಬಟ್ಟ ಬಯಲಿನಲಿ ದೃಷ್ಟಿ ತಾಗುವ ಹಾಗೆ
ಪರಿಪರಿಯ ನಿಲುವಾಭರಣ ಪೇರಿಸಿ
ಹೆಜ್ಜೆಗೊಂದು ಗೆಜ್ಜೆ ಎದೆ ಛಲ್ಲೆನ್ನಿಸಿ
ಬೆಳಕು ಬೆಳದಿಂಗಳ ಕಲಕಿ ಕುಲುಕಿ
ತಿಂಗಳ ತಿಳಿಗೊಳವ ಮುಳುಗಿ ತೇಲಿಸಿ
ಅಳುವ ಕಡಲಿಗೆ ನಗೆ ದೋಣಿ ಹಾಯಿಸಿ
ಏನೂ ಅರಿಯದೆ ಮಂಜು ಮುಸುಕಿನಲಿ
ಎಲ್ಲೊ ದಿಟ್ಟೆ ನೆಟ್ಟು ನಿಲ್ಲುವ ಈ ಹುಚ್ಚಿ.

*******************************

About The Author

Leave a Reply

You cannot copy content of this page

Scroll to Top